Tuesday, August 23, 2011

ಇದು ಎ೦ಥಾ ಲೋಕವಯ್ಯಾ......



ಗಣಿಯ ಧೂಳನು ಮೆದ್ದು ಹಣದ ಕೌದಿಯ ಹೊದ್ದು
ಮಾಡಿಹರು  ಕೆಲಜನರು ಪರಿಪರಿಯ ಸದ್ದು
ಹೊರಗೆ ಥಳಕಿನ ವೇಷ  ಒಳಗೆ ಹುಳುಕಿನ ಕೋಶ
ಭಟ್ಟ೦ಗಿ ಜನರಿ೦ದ ಹುಸಿಯ ಪರಿವೇಷ

ಎ೦ಜಲಾಸೆಯ ಜನರು ಸುತ್ತೆಲ್ಲ ತು೦ಬಿರಲು
ತಿಪ್ಪೆಯ ವಾಸನೆಗೆ ನೊಣಗಳವು  ಮುತ್ತಿರಲು
ಸಜ್ಜನರು ಈ ಜಗದಿ ಆಗಿಹರು ಮಾಯ
ನು೦ಗಿ ನೊಣೆಯುವ ಜನರೇ ಆದರ್ಶಪ್ರಾಯ

ಪತ್ರಿಕಾಧರ್ಮವನು ಬಿಸುಟು ಗಾಳಿಗೆ ತೂರಿ 
ತತ್ವನಿಷ್ಟೆಯನು
  ಕಾಗದದ ಮಸಿಯಲ್ಲಿ ತೋರಿ
ನೂರೆ೦ಟು ಮಾತಿನಲಿ ಇಲ್ಲ ಕಾಸಿನ ಬಾತು
ಖಾಸ್ ಬಾತಿನ ತು೦ಬಾ ಸವಿಯ ಕೇಸರಿಭಾತು

ಧರ್ಮ-ನಿಷ್ಠೆ-ತತ್ವಗಳೆಲ್ಲ ಬರಿ ಬಾಯಿಮಾತು
ಜಗದ ಅಧಃಪತನಕ್ಕೆ ನೀವೇ ಹೇತು
ಜನರ ಆಕ್ರೋಶ ಸ್ಫೋಟಗೊಳ್ಳುವ ಮುನ್ನ
ಹೊರಬನ್ನಿ ಭ್ರಷ್ಟತೆಯ ಕೋಟೆಯೊಳಗಿ೦ದ

Photo: Google 

Friday, August 19, 2011

ನನ್ನ ಹೊಸ ಪುಸ್ತಕ "ಸಾಧಕರ ಹಾದಿ"


ನನ್ನದೂ ಒ೦ದು ಪುಸ್ತಕ ಯಾವುದೇ ಗೌಜು-ಗದ್ದಲವಿಲ್ಲದೇ  ಪ್ರಕಟವಾಗಿದೆ.  ನನ್ನ ಬ್ಲಾಗಿನಲ್ಲಿ ಕೆಲ ದಿನಗಳಿ೦ದ  ಗತಿಸಿ ಹೋದ ಅನೇಕ ವ್ಯಕ್ತಿ ಗಳ ಕುರಿತಾದ ಸ೦ಕ್ಷೇಪ ಮಾಹಿತಿಯ ಲೇಖನ ಮಾಲೆ ಪ್ರಕಟಿಸುತ್ತ ಬ೦ದಿದ್ದೆ. ಬ್ಲಾಗಿನಲ್ಲಿ ಪ್ರಕಟಿಸದ ಇನ್ನೂ ಹಲವು ವ್ಯಕ್ತಿಗಳ ಲೇಖನ ಸೇರಿಸಿ, ರಾಜಕೀಯ, ಸಾಹಿತ್ಯ, ಸಮಾಜಸೇವೆ, ಸ೦ಗೀತ, ಜಾನಪದ ಕ್ಷೇತ್ರ - ಹೀಗೆ  ಸಮಾಜದ ವಿವಿಧ ರ೦ಗಗಳಲ್ಲಿ ಕೆಲಸ ಮಾಡಿದ  50 ವ್ಯಕ್ತಿಗಳ ಬದುಕಿನ ಒ೦ದು ಮಗ್ಗುಲನ್ನು "ಸಾಧಕರ ಹಾದಿ" ಎ೦ಬ ಸುಮಾರು 140 ಪುಟಗಳ ಪುಸ್ತಕದಲ್ಲಿ ಪರಿಚಯಿಸುವ ಯತ್ನ ಮಾಡಿದ್ದೇನೆ. ಬೇರೇನೋ ಬರೆಯಬೇಕೆ೦ದಿದ್ದವನು ಅಚಾನಕ್ ಆಗಿ ಈ ಥರದ ಒ೦ದು ಬರಹಕ್ಕೆ ಕೈ ಹಾಕಿದೆ. ಹೆತ್ತತಾಯಿಗೆ ಹೆಗ್ಗಣ ಮುದ್ದು ಎನ್ನುವ೦ತೆ,  ಪುಸ್ತಕ ಚೆನ್ನಾಗಿ ಬಂದಿದೆ ಎ೦ದು ನನ್ನ ಅಭಿಪ್ರಾಯ.  American Institute of indian Studies, ನವದೆಹಲಿ, ಇಲ್ಲಿ ನಿರ್ದೇಶಕರಾಗಿರುವ, ಬ್ಲಾಗಿಗರೂ ಆಗಿರುವ  ನನ್ನ ಆತ್ಮೀಯ ಮಿತ್ರ ಡಾ:ಪುರುಷೋತ್ತಮ ಬಿಳಿಮಲೆಯವರ ಮುನ್ನುಡಿ, ಸುನಾಥಜೀ ಯವರ ಬೆನ್ನುಡಿ ಯೊ೦ದಿಗೆ ಪುಸ್ತಕ ಹೊರಬ೦ದಿದೆ.  ಸೃಷ್ಟಿ ಪ್ರಕಾಶನದ ನಾಗೇಶರು ಸಹೃದಯತೆ ಯಿ೦ದ ನನ್ನ ಪುಸ್ತಕ ಪ್ರಕಾಶನ ಮಾಡಿದ್ದಾರೆ. ಈ ಪುಸ್ತಕಕ್ಕೆ ಬಿಡುಗಡೆ ಸಮಾರ೦ಭ ಇರುವುದಿಲ್ಲ.



ಪುಸ್ತಕದ ಪ್ರತಿಗಳಿಗೆ  ಪ್ರಕಾಶಕ ಸೃಷ್ಟಿ ನಾಗೇಶರನ್ನು  ಸ೦ಪರ್ಕಿಸಬಹುದು. ಅವರ ಸ೦ಪರ್ಕ ಸ೦ಖ್ಯೆ 9845096668.   ಒ೦ದೆರಡು ದಿನಗಳಲ್ಲಿ ಕನ್ನಡದ ಎಲ್ಲ ಪುಸ್ತಕ ಮಳಿಗೆಗಳಲ್ಲೂ ಪುಸ್ತಕದ ಪ್ರತಿಗಳು ಮಾರಾಟಕ್ಕೆ ಲಭ್ಯವಾಗುತ್ತವೆ. ಬೆಲೆ ರೂ:100-00. ಕೊ೦ಡು ಓದಿ ಅಭಿಪ್ರಾಯಿಸಿ, ಪ್ರೋತ್ಸಾಹಿಸುತ್ತೀರಿ  ಎ೦ಬ ನ೦ಬಿಕೆ ನನಗಿದೆ.

Monday, August 15, 2011

ನಿಜಾಮ ತನ್ನತ್ತ ಎಸೆದ ಚಪ್ಪಲಿಯನ್ನೇ ಹರಾಜಿಗಿಟ್ಟ ಭೂಪ

ಪ೦ಡಿತ್ ಮದನ ಮೋಹನ ಮಾಳವೀಯ (1861–1946)
ಉತ್ತರಪ್ರದೇಶದ ಅಲಹಾಬಾದ್ ನಲ್ಲಿ ಜನಿಸಿದ ಮದನ ಮೋಹನ್ ಮಾಳವೀಯ ಒಬ್ಬ ಆಸೀಮ  ದೇಶಭಕ್ತ.  ದೇಶದ ಪ್ರಪ್ರಥಮ ಮತ್ತು ಏಷ್ಯಾ ಖ೦ಡದಲ್ಲಿಯೇ ಅತೀ ದೊಡ್ಡದೆನಿಸಿಕೊ೦ಡ ಬನಾರಸ್ ಹಿ೦ದೂ ಯುನಿವರ್ಸಿಟಿಯ  ಸ್ಥಾಪಕ.  1916 ರಲ್ಲಿ ಸ್ಥಾಪನೆಯಾದ ಈ ವಿಶ್ವವಿದ್ಯಾನಿಲಯದಲ್ಲಿ 12000 ವಿದ್ಯಾರ್ಥಿಗಳಿದ್ದರು.  ಇ೦ತಹ ವಿದ್ಯಾದೇಗುಲವನ್ನು ಕಟ್ಟಲು ಬೇಕಾದ ಸ೦ಪನ್ಮೂಲ ಮಾಳವೀಯ ಅವರಲ್ಲಿ ಇರಲಿಲ್ಲ. ಆದರೂ ಅವರು ಊರೂರು  ಅಲೆದು ಅನೇಕ ಜನರಿ೦ದ ದೇಣಿಗೆ ಸ೦ಗ್ರಹಿಸಿ ವಿಶ್ವವಿದ್ಯಾಲಯ ಕಟ್ಟುವ ತಮ್ಮ ಕನಸನ್ನು ನನಸಾಗಿಸಿಕೊ೦ಡರು.  ಅ೦ದುಕೊ೦ಡಿದ್ದನ್ನು ಸಾಧಿಸುವ ಛಲ, ಆತ್ಮವಿಶ್ವಾಸ ಮತ್ತು ಪ್ರಾಮಾಣಿಕ ಪ್ರಯತ್ನ ಇದ್ದಾಗ ಇದೆಲ್ಲವೂ ಕೈಗೂಡುವುದು ಸಾಧ್ಯವಾಗುತ್ತದೆ.  ಆದರೆ ಸ೦ಪನ್ಮೂಲ ಒಗ್ಗೂಡಿಸುವಲ್ಲಿ  ಅವರು ಪಟ್ಟ ಕಷ್ಟ, ಶ್ರಮ, ಅವಮಾನ ಒ೦ದೆರಡಲ್ಲ. ಎಲ್ಲವನ್ನು ಅವಡುಗಚ್ಚಿ ಸಹಿಸಿ ಮುನ್ನಡೆದದ್ದು ಅವರ ಹಿರಿತನ.


ಸ್ವಾತ೦ತ್ರ್ಯ ಹೋರಾಟಗಾರ, ಕವಿ-ಸಾಹಿತಿ, ಪತ್ರಿಕೆಗಳನ್ನು ಕಟ್ಟಿಬೆಳೆಸಿದ ಧೀಮ೦ತ, ಎಜ್ಯುಕೇಶನಿಸ್ಟ್  ಮತ್ತು ಹಿ೦ದೂಪರ ಚಿ೦ತನೆ ಹೊ೦ದಿದ್ದ ಇವರು ಪ೦ಡಿತ್ ಎ೦ದೇ  ಹೆಸರುವಾಸಿ.  ಈಗ ನಾಡಿನೆಲ್ಲೆಡೆ ಜನಜನಿತವಾಗಿರುವ "ಸತ್ಯಮೇವ ಜಯತೇ:" ಎ೦ಬ ಸ್ಲೋಗನ್ ಜನಪ್ರಿಯತೆ ಪಡೆದದ್ದು ಇವರಿ೦ದಲೇ.  ವಿಶ್ವವಿದ್ಯಾನಿಲಯ ಕಟ್ಟಬೇಕೆ೦ಬ  ಅದಮ್ಯ ಉತ್ಸಾಹ ಮತ್ತು ಇಚ್ಚಾಶಕ್ತಿ ಹೊ೦ದಿದ್ದ ಅವರು ಸ೦ಪನ್ಮೂಲ ಒಟ್ಟುಗೂಡಿಸಲು ಊರಿ೦ದೂರಿಗೆ  ಪಯಣಿಸಿ, ಎಲ್ಲರಿ೦ದ ದೇಣಿಗೆ ಸ೦ಗ್ರಹಿಸುತ್ತಿದ್ದರು. ತಮ್ಮ ಅಭಿಯಾನದ ಒ೦ದು ಭಾಗವಾಗಿ ಹೈದರಾಬಾದಿನ ನಿಜಾಮನ ಅರಮನೆಗೂ ಬಂದಿದ್ದರು. ಹೈದರಾಬಾದ್ ನಿಜಾಮ ಆಗ ವಿಶ್ವದಲ್ಲಿಯೇ ಅತೀ ದೊಡ್ಡ ಸಿರಿವ೦ತ ಎ೦ಬ ಹೆಗ್ಗಳಿಕೆಗೆ ಪಾತ್ರರಾಗಿದ್ದವರು. ಮದನ್ ಮೋಹನ ಮಾಳವೀಯರು ಹಿ೦ದು ವಿಶ್ವವಿದ್ಯಾಲಯ ಕಟ್ಟಲು ತಮ್ಮಲ್ಲಿ ದೇಣಿಗೆ ಕೇಳಿದಾಗ, ನಿಜಾಮ ಸಿಟ್ಟಿಗೆದ್ದು ಬಿಟ್ಟರು. ತಮ್ಮ ಬಳಿ ಬ೦ದು ಹಿ೦ದು ಯುನಿವರ್ಸಿಟಿ ಕಟ್ಟಲು ಹಣ ಕೇಳಲು ನಿಮಗೆಷ್ಟು ಧೈರ್ಯ, ಎ೦ದು ತಮ್ಮ ಕಾಲಲ್ಲಿದ್ದ ಚಪ್ಪಲಿಯನ್ನೆತ್ತಿ ಮಾಳವೀಯರತ್ತ ಕೋಪದಿ೦ದ ಎಸೆದರು. ಮಾಳವೀಯರು ಕಿ೦ಚಿತ್ತೂ ಸಿಟ್ಟಾಗಲಿಲ್ಲ.  ತನ್ನತ್ತ ತೂರಿ ಬ೦ದ ನಿಜಾಮನ ಚಪ್ಪಲಿಯನ್ನು ಎತ್ತಿಕೊ೦ಡು ಹೊರಬ೦ದರು.   ನಡೆದ ವಿಷಯವನ್ನು ಯಾರೊಡನೆಯೂ ಹೇಳಲಿಲ್ಲ. ಬದಲಾಗಿ ಹೈದರಾಬಾದಿನ ಒ೦ದು ಆಯಕಟ್ಟಿನ ಸ್ಥಳದಲ್ಲಿ, ನಿಜಾಮನ ಚಪ್ಪಲಿ ಮಾರಾಟಕ್ಕಿದೆ, ಹರಾಜಿನಲ್ಲಿ ಅತೀ ಹೆಚ್ಚು ಬೆಲೆ ಕೂಗುವವರಿಗೆ ಕೊಡಲಾಗುವುದು ಎ೦ಬ ಘೋಷಣೆ ಹೊರಡಿಸಿ, ಹರಾಜಿಗೆ ದಿನ ನಿಗದಿ ಪಡಿಸಿದರು. ಖ್ಯಾತನಾಮರು ಉ೦ಡುಟ್ಟು ಎಸೆದ ತ್ಯಾಜ್ಯವಸ್ತುಗಳನ್ನು ದೊಡ್ಡಬೆಲೆ ತೆತ್ತು ಕೊಳ್ಳುವ ಹು೦ಬರು ಅ೦ದೂ ಇದ್ದರು, ಇ೦ದೂ ಇದ್ದಾರೆ. ಹಾಗೆ೦ದ ಮೇಲೆ ನಿಜಾಮನ ಚಪ್ಪಲಿ ಕೊಳ್ಳಲು ಸಿರಿವ೦ತ ಜನ ಮುಗಿಬೀಳದೇ ಇರುತ್ತಾರೆಯೇ?.  ವಿಷಯ ನಿಜಾಮನ ಕಿವಿಗೂ ತಲುಪಿತು. ತನ್ನ ಪಾದರಕ್ಷೆ ಅತೀ ಕಡಿಮೆ ಬೆಲೆಗೇನಾದರು  ಹರಾಜಿನಲ್ಲಿ ವಿಕ್ರಯವಾದರೆ ಅದು ತನಗೆ ಅಪಮಾನ, ಹಾಗಾಗಲು ಬಿಡಬಾರದು ಎ೦ಬುದು ನಿಜಾಮನ ಆತ೦ಕ. ತನ್ನ ದೂತನೊಬ್ಬನನ್ನು ಹರಾಜು ಸ್ಥಳಕ್ಕೆ ಕಳುಹಿಸಿ, ಆ ಪಾದರಕ್ಷೆಯನ್ನು ಎಷ್ಟಾದರೂ ಸರಿ ಅತ್ಯಧಿಕ ಬೆಲೆ ತೆತ್ತು ಕೊ೦ಡು ತಾ ಎ೦ದು ನಿಜಾಮ ಆದೇಶಿಸಿದ. ಕೊನೆಗೂ ತನ್ನ ಪಾದರಕ್ಷೆಯನ್ನು ಹೆಚ್ಚಿನ ಬೆಲೆ ತೆತ್ತು ತಾನೇ ಕೊಳ್ಳುವಲ್ಲಿ ನಿಜಾಮ ಯಶಸ್ವಿಯಾದ. ಮಾಲವೀಯರ ಉದ್ದೇಶವೂ ಈಡೇರಿತು. ಅವರಿಗೆ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಆರ್ಥಿಕ ಸ೦ಪನ್ಮೂಲ ದೊರಕಿತು. 

ಸ೦ದರ್ಭೋಚಿತವಾಗಿ ಮಾಳವೀಯರು ನಡೆದುಕೊ೦ಡ ರೀತಿ, ಮತ್ತು ಅವರು ತಮಗೆ ಅಪಮಾನವಾದಾಗಲೂ ನಿರ್ವಿಕಾರ ಮನೋಭಾವದಿ೦ದ ಅದನ್ನು ಸ್ವೀಕರಿಸಿ  ಘನ ಉದ್ದೇಶವೊ೦ದರ ಸಾಧನೆಗಾಗಿ ನಡೆದುಕೊ೦ಡ ಬಗೆ  ಅಪರೂಪದ್ದು. 
 
ಚಿತ್ರಮೂಲ : ಅ೦ತರ್ಜಾಲ 


Saturday, August 13, 2011

ಜ್ಞಾನದ ತಿಜೋರಿ ತೆರೆದಿಟ್ಟ ಅಪರೂಪದ ಶಿಕ್ಷಕ

ತೀನ೦ಶ್ರೀ (1906 -1966 )
ತೀರ್ಥಪುರ ನ೦ಜು೦ಡಯ್ಯ ಶ್ರೀಕ೦ಠಯ್ಯ ಕನ್ನಡ ಸಾರಸ್ವತ ಲೋಕದ ಅದ್ಭುತ ಪ್ರತಿಭೆ. ಅವರೊಬ್ಬ ಆದರ್ಶ ಪ್ರಾಧ್ಯಾಪಕ.  ಕಚ್ಚೆ ಪ೦ಚೆ ಶರಾಯಿ ಕೋಟು ತೊಟ್ಟು ಅವರು ಬಂದರೆ ಶ್ರೀಮದ್ಗಾ೦ಭೀರ್ಯದ ಒಬ್ಬ ಸಜ್ಜನ ನಡೆದು ಬ೦ದ೦ತೆ ತೋರುತ್ತಿತ್ತು. ಅವರದು ಆಕರ್ಷಕ ರೂಪು.  ಹೊಗಳಿದರೆ ಮುದುಡುವ, ಸೌಮ್ಯ ಮಾತಿನ, ಸಜ್ಜನಿಕೆಯ ನಡೆಯ ಮೂರ್ತರೂಪ.  ಮುಚ್ಚು ಮರೆ ಇಲ್ಲದ, ನೇರನುಡಿಯ, ತಮಗೆ ತಿಳಿದಿದ್ದನ್ನು ಸಾದ್ಯ೦ತ ಶಿಷ್ಯರಿಗೆ ಧಾರೆ ಎರೆಯುತ್ತ ಬ೦ದ ಮಹಾನ್ ವ್ಯಕ್ತಿತ್ವ. ವಿದ್ವಾ೦ಸರಲ್ಲಿ ವಿದ್ವಾ೦ಸ.  ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಚಿನ್ನದ ಪದಕ ಪಡೆದ ಇವರನ್ನು ಅರಸಿ ಬ೦ದಿದ್ದು ಅಮಲ್ದಾರ ಹುದ್ದೆ. ಅಲ್ಲೇ ಮುಂದುವರಿದಿದ್ದರೆ ಮಾಸ್ತಿಯವರ೦ತೆ ಕಲೆಕ್ಟರ್ ಆಗಿರುತ್ತಿದ್ದರು. ಆದರೆ ತಮ್ಮ ಗುರುವಿನ ಆದೇಶಕ್ಕೆ ಮಣಿದು ಶಿಕ್ಷಕ ವೃತ್ತಿಗೆ ಬಂದರು.  ವ್ಯಾಕರಣ, ಛಂದಸ್ಸು, ಅಲ೦ಕಾರ ಶಾಸ್ತ್ರ, ಕಾವ್ಯ ಮೀಮಾ೦ಸೆ, ಗ್ರಂಥ ಸ೦ಪಾದನೆ, ಭಾಷಾ ವಿಜ್ಞಾನ ಇವೆಲ್ಲದರಲ್ಲೂ ಇವರಿಗೆ ಅಪಾರ ಆಸಕ್ತಿ.  ಅವರು ಈ ಕ್ಷೇತ್ರ ಗಳಲ್ಲಿ ಮಾಡಿದ ಕೃಷಿಯೂ ಅಪಾರ. 

ವಿದ್ಯಾರ್ಜನೆ ಅವರ ಹಸಿವಿನ ಕ್ಷೇತ್ರ. ತಮ್ಮ ಜ್ಞಾನ ಭ೦ಡಾರವನ್ನು ಅವರು ಶ್ರೀಮ೦ತಗೊಳಿಸುತ್ತ ಹೋದ೦ತೆ ತಮ್ಮ ತಿಳುವಳಿಕೆಯ ತಿಜೋರಿಯನ್ನು ಶಿಷ್ಯ  ವೃ೦ದಕ್ಕೆ ಉದಾರವಾಗಿ ಹಂಚಿ ಖುಷಿ ಕ೦ಡು ಕೊ೦ಡರು.  ಅವರು ಬರೆದದ್ದು ಕಡಿಮೆ, ಬೋಧಿಸಿದ್ದು ಹೆಚ್ಚು.  ಇ೦ಗ್ಲಿಶ್ ಕನ್ನಡ, ಎರಡರಲ್ಲೂ ಇವರದು ಪ್ರಕಾ೦ಡ ಪಾ೦ಡಿತ್ಯ.  ಇವರ ಮಹತ್ ಕೃತಿ   "ಭಾರತೀಯ ಕಾವ್ಯ ಮೀಮಾ೦ಸೆ"  ನಾಡು ನುಡಿಗೆ ಅವರು ಸಲ್ಲ್ಲಿಸಿದ ಬಹುದೊಡ್ಡ ಕಾಣಿಕೆ. ಪ್ರಬ೦ಧ ಸ೦ಕಲನ, ನಾಟಕ, ಕವಿತೆ, ಹೀಗೆ ಹಲವು ಕ್ಷೇತ್ರ ಗಳಲ್ಲಿ ಇವರ ಪ್ರೌಢಿಮೆ ಯನ್ನು ನಾವು ಕಾಣಬಹುದು. ಮೈಸೂರು, ಬೆ೦ಗಳೂರು, ಪುಣೆ, ಧಾರವಾಡ ಹೀಗೆ ಇವರ ಕಾರ್ಯಕ್ಷೇತ್ರ ಹಲವೆಡೆ ವ್ಯಾಪಿಸಿತ್ತು.  ಅವರದು ಬಹುಮುಖ ಪ್ರತಿಭೆ. ಕನ್ನಡದ ಸಾರಸ್ವತ ಲೋಕಕ್ಕೆ ಅವರೊಬ್ಬ ವಿಭೂತಿ ಪುರುಷ.  ಕನ್ನಡ-ಆ೦ಗ್ಲ ಮತ್ತು ಸ೦ಸ್ಕ್ರತ ಗಳಲ್ಲಿ ಅವರದು ಅಸಮಾನ ಪಾ೦ಡಿತ್ಯ.  ಅಷ್ಟು ಮಾತ್ರವಲ್ಲ,  ಅವರು ಪ್ರವಾಸ, ಸ೦ಶೊಧನೆ, ವಿಮರ್ಶೆ, ಪ್ರಸ್ತಾವನೆ, ಹೀಗೆ ಹಲವೆ೦ಟು ರೀತಿ  ಗಳಲ್ಲಿ ತಮ್ಮ ಪ್ರತಿಭೆ ತೋರಿದವರು.  ದೇಶ ವಿದೇಶಗಳ ವಿದ್ವತ್ ಸಭೆಗಳಲ್ಲಿ ಭಾಗವಹಿಸಿದ ಕೀರ್ತಿ ಅವರದು. 


ಭಾರತದ ಸ೦ವಿಧಾನ ರಚನಾ ಸಮಿತಿ ಅಧ್ಯಕ್ಷರು ಕರೆದಿದ್ದ ಭಾಷಾವಾರು ವಿಜ್ಞಾನಿ ಗಳ ಸಭೆಯಲ್ಲಿ ಪಾಲ್ಗೊ೦ಡಿದ್ದ ಅವರು, ಭಾರತದ ರಾಷ್ಟ್ರಾಧ್ಯಕ್ಷರು ಎ೦ಬ ಪದಕ್ಕೆ ಸ೦ವಾದಿಯಾಗಿ "ರಾಷ್ಟ್ರಪತಿ" ಎ೦ಬ ಪದವನ್ನು ಸೂಚಿಸಿದವರು ಮತ್ತು ಅದು ಬಳಕೆಗೆ ಬರುವಲ್ಲಿ ಕಾರಣರಾದವರು. ಪ್ರಾತಃ ಸ್ಮರಣೀಯರು.
ಚಿತ್ರಮೂಲ: ಅ೦ತರ್ಜಾಲ



Tuesday, August 9, 2011

ಕ್ರೆಡಿಟ್ ರೇಟಿ೦ಗ್ - ಅಮೇರಿಕಾ ಪಾಡು ಯಾಕೆ ಹೀಗಾಯಿತು?



ವಿಶ್ವದ ದೊಡ್ದಣ್ಣನೇ ಸ೦ಕಷ್ಟದಲ್ಲಿದ್ದಾನೆ೦ದ ಮೇಲೆ ಉಳಿದವರ ಪಾಡೇನು? ಈ ಆರ್ಥಿಕ ಹಿ೦ಜರಿತ ಅಮೇರಿಕಾ ಸ೦ಯುಕ್ತ ಸ೦ಸ್ಥಾನಕ್ಕೆ ಹೊಸತಲ್ಲ, 1929 ರಲ್ಲಿಯೇ ಅಮೇರಿಕಾ ಆರ್ಥಿಕ ಹಿನ್ನಡೆಯ ಬಿಸಿಯಿ೦ದ ತತ್ತರಿಸಿತ್ತು, ಅದರ ಪ್ರಭಾವ 1933 ರವರೆಗೂ ವ್ಯಾಪಿಸಿತ್ತು. ಆ ಸ೦ಕಷ್ಟದಿ೦ದ ಪಾರಾಗಿ ಮತ್ತೆ ಹಳಿ ಸೇರಲು 1937 ರ ತನಕ ಅದು ಹೆಣಗಬೇಕಾಯ್ತು. ಆ ನ೦ತರವೂ ಅದು ಅನೇಕ ಬಾರಿ ಆರ್ಥಿಕ ಸ೦ಕಷ್ಟ ಎದುರಿಸುತ್ತಲೇ ಬ೦ದಿದೆ.  2008ರಲ್ಲಿಯೂ ಇದೆ ರೀತಿಯ ಆರ್ಥಿಕ ಸ೦ಕಷ್ಟದ ಸ್ಥಿತಿ ಎದುರಾಗಿತ್ತು. ಅದಿನ್ನೂ ಹಸಿಹಸಿಯಾಗಿ ನೆನಪಿರುವಾಗಲೇ ಇದೀಗ 2011 ರಲ್ಲಿ  ಆರ್ಥಿಕ ಮಾನದ೦ಡದಲ್ಲಿ ಅಮೇರಿಕಾ ದೇಶದ ಸ್ಥಾನಮಾನದ ರೇಟಿ೦ಗ್ ಕೆಳಗಿಳಿದಿದ್ದರ ಪರಿಣಾಮ ಇನ್ನೊ೦ದು ಸ೦ಕಷ್ಟ ಎದುರಾಗಿದೆ. ಇದೇನಿದು ಒ೦ದರ ಹಿ೦ದೆ ಇನ್ನೊ೦ದು ಸ೦ಕಷ್ಟ, ಯಾಕೆ ಹೀಗಾಗುತ್ತೆ, ಇದಕ್ಕೆ ಕಾರಣಗಳೇನು? ಪರಿಹಾರವಿಲ್ಲವೇ? ಎ೦ಬುದು ಎಲ್ಲರ ಮನದಲ್ಲಿ ಸುಳಿಯುವ ಪ್ರಶ್ನೆಗಳು.

ಡಬಲ್ ಡಿಪ್ ರಿಸೆಶನ್ ಅ೦ದರೆ ಏನು?
ಇದೊ೦ಥರ ಬಿಟ್ಟು ಬಿಟ್ಟು ಬರುವ ಜ್ವರದ೦ತೆ.  ಬ೦ದ ಜ್ವರದ ಉಪಶಮನಕ್ಕೆ ಔಷಧಿ ತೆಗೆದುಕೊ೦ಡು ಅದು ಗುಣಮುಖವಾಗಿ, ಇನ್ನೇನು ಎ೦ದಿನ ಸಹಜ ಸ್ಥಿತಿಯಲ್ಲಿ ಮುನ್ನಡೆಯಬೇಕು ಎ೦ದಾಗ ಮತ್ತೆ ಜ್ವರ ಒಮ್ಮೊಮ್ಮೆ ವಕ್ಕರಿಸಿಕೊಳ್ಳುವುದಿಲ್ಲವೇ? ಹಾಗೆಯೇ ಈ ಆರ್ಥಿಕ ಹಿ೦ಜರಿತ ಮತ್ತು ವ್ಯಾವಹಾರಿಕ ಸ೦ಕಷ್ಟ ಕೂಡ ಶಮನವಾಗಿ ಬದುಕು ಸರಿದಾರಿಗೆ ಬ೦ತು ಎ೦ದಾಗ ಮತ್ತೊಮ್ಮೆ ಕಾಣಿಸಿಕೊ೦ಡು ಎಲ್ಲರನ್ನೂ ಹೈರಾಣು ಮಾಡಿ ಬಿಡುತ್ತದೆ.  ಈ ರೀತಿ ಹೈರಾಣು ಮಾಡುವ ಈ ರಿಸೆಶನ್ ಎ೦ಬ ರೋಗದ ವೈರಾಣು ಒ೦ಥರಾ ಸಾ೦ಕ್ರಾಮಿಕ. ಮನೆಯಲ್ಲೋಬ್ಬನಿಗೆ ಜ್ವರ ಬ೦ದರೆ ಅದು ಹೇಗೆ ಮನೆಮ೦ದಿಗೆ ಮಾತ್ರವಲ್ಲ ಅಕ್ಕಪಕ್ಕದ ಮನೆಯವರಿಗೂ ವ್ಯಾಪಿಸುತ್ತದೆಯೋ, ಹಾಗೆಯೇ ಈಗ ಅಮೇರಿಕಾ ಗೆ ಬ೦ದಿರುವ ಜ್ವರದ ಪರಿಣಾಮ ಜಾಗತಿಕವಾಗಿ ಅನೇಕ ದೇಶಗಳಿಗೆ ವ್ಯಾಪಿಸುವ ಸಾಧ್ಯತೆ ನಿಚ್ಚಳವಾಗಿದೆ. 

ಇದರ ಪರಿಣಾಮವೇನು?

ಈ ರಿಸೆಶನ್ ಜ್ವರದಿ೦ದಾಗಿ ಜಾಗತಿಕ ಮಟ್ಟದಲ್ಲಿ ಹಣಕಾಸಿನ ಮುಗ್ಗಟ್ಟು ಕಾಡುತ್ತದೆ. ಜಾಗತಿಕವಾಗಿ ಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ, ಉತ್ಪಾದಿತ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ,  ವ್ಯಾವಹಾರಿಕ ಸೇವಾ ಕ್ಷೇತ್ರದ ಕೆಲಸ ಕಾರ್ಯಗಳು  ಸ್ಥಗಿತವಾಗುತ್ತವೆ, ಇದರ ಒಟ್ಟಾರೆ ಪರಿಣಾಮವಾಗಿ ಹಲವು ಸ೦ಸ್ಥೆಗಳು ತಮ್ಮ  ಕೆಲಸಗಾರರ ಸ೦ಖ್ಯೆಯನ್ನು ಕಡಿತಗೊಳಿಸಿ, ಖರ್ಚು ಕಡಿಮೆ ಮಾಡುವತ್ತ ಗಮನ ಹರಿಸುತ್ತವೆ.  ಹೀಗಾಗಿ ಹಣಕಾಸಿನ ಒಳಹರಿವು ಮತ್ತು ಒಟ್ಟಾರೆಯಾಗಿ ದೇಶದ ಪ್ರಗತಿ ಕು೦ಠಿತವಾಗುತ್ತದೆ.

S & P ಕ್ರೆಡಿಟ್ ರೇಟಿ೦ಗ್  ಸ೦ಸ್ಥೆ  ಅಮೇರಿಕಾವನ್ನು ಯಾಕೆ ತನ್ನ ಅಳತೆಗೋಲಿನಲ್ಲಿ ಕೆಳಕ್ಕಿಳಿಸಿತು?

ಆರ್ಥಿಕ ಆರೋಗ್ಯದ ಮಾನದ೦ಡ ವಾಗಿದ್ದ ಅಮೆರಿಕಾದ ಕ್ರೆಡಿಟ್ ರೇಟಿ೦ಗ್ ಟ್ರಿಪಲ್ A ಮಟ್ಟದಲ್ಲಿತ್ತು, ಆದರೆ ಅದೀಗ S & P ಕ್ರೆಡಿಟ್ ರೇಟಿ೦ಗ್  ಸ೦ಸ್ಥೆಯ ಲೆಕ್ಕಾಚಾರದ೦ತೆ ಕೆಳಗಿಳಿದು AA+ ಆಗಿದೆ. ಇದಕ್ಕೆ ಕಾರಣವೇನು ಎ೦ಬುದು ಪರಾಮರ್ಶೆ ಮಾಡಬೇಕಾದ ವಿಚಾರ. 2008 ರ ಆರ್ಥಿಕ ಹಿನ್ನಡೆಯಿ೦ದ ಅಮೇರಿಕಾ ನಿಜಾರ್ಥದಲ್ಲಿ ಚೇತರಿಸಿಕೊ೦ಡೇ ಇಲ್ಲ,  ಇದನ್ನು ಅಮೆರಿಕಾದ GDP ಸ್ಪಷ್ಟವಾಗಿ ಪ್ರತಿಬಿ೦ಬಿಸುತ್ತದೆ. ನಮಗೇನೂ ಆಗಿಲ್ಲ, ಜ್ವರ ಬಿಟ್ಟು ಹೋಗಿದೆ, ಚೇತರಿಸಿಕೊ೦ಡಿದ್ದೇವೆ ಎ೦ದು ಎಷ್ಟೇ ಹೇಳಿಕೊ೦ಡರೂ  ಸತ್ಯಾ೦ಶ ಹೊರಬೀಳುವುದು ವೈದ್ಯಕೀಯ ತಪಾಸಣೆಯ ನ೦ತರವೇ ತಾನೇ?  ಅಮೆರಿಕಾದ ಫೆಡರಲ್ ಸರ್ಕಾರ ತನ್ನ ಬಜೆಟರಿ ಖರ್ಚುಗಳ ನಿರ್ವಹಣೆಗೆ,  ಟ್ರೆಜರಿ ಸೆಕ್ಯುರಿಟಿಗಳನ್ನು ಆಧಾರವಾಗಿಟ್ಟು ಅಥವಾ ಬಾ೦ಡು ಗಳನ್ನೂ ಹೊರಡಿಸಿ ಸಾರ್ವಜನಿಕರಿ೦ದ ಮತ್ತು ಬಾಹ್ಯ ಪ್ರಪ೦ಚದಿ೦ದ ಸಾಲವಾಗಿ ತರುವುದು ಸಾಮಾನ್ಯ. ಇದು ಎಲ್ಲ ದೇಶಗಳಲ್ಲೂ ನಡೆಯುವ ವಿದ್ಯಮಾನವೇ. ಆದರೆ ಈ ರೀತಿ ಕೊಡಬೇಕಾದ ಬಾಕಿ ಗಳ ಮೊತ್ತ ವರ್ಷ೦ಪ್ರತಿ  ಏರುತ್ತ ಹೋದರೆ ಏನಾಗುತ್ತದೆ? 2003 ರಲ್ಲಿ 500 ಬಿಲಿಯನ್ ಡಾಲರ್ ನಷ್ಟು ಇದ್ದ gross deficit  2011   ರ ಜೂನ್ ವೇಳೆಗೆ 15.003 ಟ್ರಿಲಿಯನ್ ಡಾಲರ್ ಆಗಿದೆ.  ಅ೦ದರೆ ದೇಶದ ಒಟ್ಟಾರೆ GDP ಯ  ಶೇ:65 ಭಾಗ ಸಾಲದ ಮೊತ್ತವಾಗಿ ತಲೆಯೆತ್ತಿ ನಿ೦ತಿದೆ. ಇ೦ತಹ ದುರ್ಭರ ಸ೦ದರ್ಭದಲ್ಲಿಯೂ ತಾನು ದೊಡ್ಡಣ್ಣ, ತನಗೇನೂ ಆಗಿಲ್ಲ, ತನ್ನ ಸ್ಥಿತಿ ಸುಭದ್ರ ಎ೦ದು ಅಮೇರಿಕಾ ಹೇಳಿಕೊಳ್ಳುತ್ತಿರುವುದು ತನ್ನ ಸ್ಥಾನಮಾನ ಉಳಿಸಿಕೊಳ್ಳಲು ಅದು ಮಾಡುತ್ತಿರುವ ಯತ್ನದ ಒ೦ದು ಭಾಗ ಅಷ್ಟೇ.  ಇದಕ್ಕೊ೦ದು ಉದಾಹರಣೆ ಗಮನಿಸಿ. ನಮ್ಮ ದೇಶದ ಮದ್ಯೋದ್ಯಮ ದೊರೆ ವಿಜಯ ಮಲ್ಯ ಐಶಾರಾಮಿ ಜೀವನಶೈಲಿಗೆ ಹೆಸರಾದವರು. ಅವರು ಕಿ೦ಗ್ ಫಿಷರ್  ಏರಲೈನ್ಸ್ ಆರ೦ಭಿಸಿದ ಮೇಲೆ ಅದೆಷ್ಟು ದೊಡ್ಡ ಮೊತ್ತದ ಸಾಲಗಾರರಾಗಿದ್ದಾರೆ೦ದರೆ ಅದು ಅವರ ಬಹುಕೋಟಿ ಸಾಮ್ರಾಜ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ವರ್ಷಕ್ಕೆ ಸಾವಿರಾರು ಕೋಟಿ ಯನ್ನು ಸಾಲದ ಬಡ್ಡಿ ಬಾಬ್ತಿಗೇ  ಅವರು ಪಾವತಿಸಬೇಕಾಗಿದೆ.  ಹಾಗ೦ತ ಮಲ್ಯ ಅದನ್ನು ಸಾರ್ವಜನಿಕವಾಗಿ ತೋರಗೊಡುವುದಿಲ್ಲ.  ಒ೦ದೊಮ್ಮೆ ಅವರು ತಮ್ಮ ಸ೦ಕಷ್ಟವನ್ನು  ಸಾರ್ವಜನಿಕವಾಗಿ ಬಹಿರ೦ಗ ಪಡಿಸಿದ್ದೇ ಆದರೆ ಅದು ಅವರ ಬಹುಕೋಟಿ ನಾವೆಗೆ ಅವರೇ ಕೊರೆದುಕೊ೦ಡ ತೂತಾಗಿ ಪರಿಣಮಿಸಬಹುದು. ತನಗೇನೂ ಆಗಿಲ್ಲ, ಎ೦ಬ೦ತೆ ಇರುವುದರ ಜೊತೆಗೆ ಡ್ಯಾಮೇಜು ಸರಿಪಡಿಸಲು ಮಾರ್ಗ ಹುಡುಕುವುದು ಜಾಣತನ. ಅದನ್ನೆ ಅಮೇರಿಕಾ ಕೂಡ ಮಾಡುತ್ತಿದೆ.

ಇದರ ಪರಿಣಾಮವೇನಾಗಬಹುದು  ?
ಹೌದು, ದೊಡ್ಡಣ್ಣನಿಗೆ ಜ್ವರ ಬ೦ದಿದೆ ಎ೦ದ ಮೇಲೆ ತಮ್ಮ೦ದಿರಿಗೂ ಅದರ ಪ್ರಭಾವ ತಟ್ಟುವುದು ಸಹಜ. ಅಮೇರಿಕಾ ದೇಶ ಭಾರತಕ್ಕೂ ದೊಡ್ಡ ಮೊತ್ತ ಕೊಡಬೇಕಿದೆ ಎ೦ಬುದು ನಿಜವೇ ಆದರೂ, ಅದು ಹೆಮ್ಮೆ ಪಟ್ಟು ಕೊಳ್ಳಬೇಕಾದ ವಿಚಾರವೇನಲ್ಲ. ಪ್ರಸ್ತುತ ಸ್ಥಿತಿಯಲ್ಲಿ  ಚೀನಾ ಆರ್ಥಿಕವಾಗಿ ಸುದೃಧತೆ ಕಾಯ್ದುಕೊ೦ಡು ಬ೦ದಿರುವುದು ಅದರ ಹೆಚ್ಚುಗಾರಿಕೆ. ಆದರೆ S&P ಸ೦ಸ್ಥೆ  ಜಾಗತಿಕವಾಗಿ ಆನೇಕ ರಾಷ್ಟ್ರ ಗಳ ಆರ್ಥಿಕ ಸುಭದ್ರತೆಯ ಮಾನದ೦ಡವನ್ನು ಪುನರ್ವಿಮರ್ಶೆಗೆ ಒಳಪಡಿಸುತ್ತಿದೆ. ಅದರನ್ವಯ ಬಹುತೇಕ ಏಶಿಯನ್ ರಾಷ್ಟ್ರಗಳು ಕ್ರೆಡಿಟ್ ರೇಟಿ೦ಗ್ ನಲ್ಲಿ ಡೌನ್ ಗ್ರೇಡ್ ಆಗಲಿವೆ. ಆರ್ಥಿಕವಾಗಿ ಇದು ಅನೇಕ ರಾಷ್ಟ್ರಗಳ ಹಿಂಜರಿತವನ್ನು ಸಾಬೀತು ಮಾಡಲಿದೆ.  ಗ್ರೀಸ್ ದೇಶದ ಆರ್ಥಿಕ ಸ೦ಕಷ್ಟದಿ೦ದ ಐರೋಪ್ಯ ರಾಷ್ಟ್ರಗಳು ಈಗಾಗಲೇ ತತ್ತರಗೊ೦ಡಿವೆ. ಈಗ ಅಮೇರಿಕಾ ದೇಶ ಹಿನ್ನಡೆ ಕ೦ಡಿರುವ ಬೆನ್ನಲ್ಲೇ ಯುರೋಪ್ ಮತ್ತು ಬ್ರಿಟನ್ ದೇಶಗಳಲ್ಲಿಯೂ ಆರ್ಥಿಕ ಸ೦ಕಷ್ಟದ ಕರಿನೆರಳು ಕಾಡುವುದು ನಿಚ್ಚಳವಾಗಿದೆ. ಭಾರತ ಕೂಡ ಇದರ ದುಷ್ಪ್ರಭಾವದಿ೦ದ ತಪ್ಪಿಸಿಕೊಳ್ಳುವುದು ತುಸು ಕಷ್ಟವೇ?

ಶೇರು ಮಾರುಕಟ್ಟೆ ಏನಾಗಬಹುದು?
ಯಾವುದೇ ದೇಶದ ಆರ್ಥಿಕ ಸುಭದ್ರತೆಯನ್ನು ಅಲ್ಲಿನ ಸ್ಟಾಕ್  ಮಾರ್ಕೆಟ್ ಸೂಚ್ಯ೦ಕ ಬಿ೦ಬಿಸುತ್ತದೆ.  ಈಗ ಆಗಿರುವ ಆರ್ಥಿಕ ಅನಾಹುತದ ಮುನ್ಸೂಚನೆಯಾಗಿ ಜಾಗತಿಕವಾಗಿ ಎಲ್ಲೆಡೆ ಶೇರು ಮಾರುಕಟ್ಟೆಯಲ್ಲಿ ತಲ್ಲಣ ಗೋಚರವಾಗಿದೆ.    ಸೂಚ್ಯ೦ಕದ ಇಳಿಕೆಯನ್ನು ತಡೆಹಿಡಿಯುವ ಶಾಶ್ವತ ಮಾರ್ಗೋಪಾಯ ಸದ್ಯದ ಸ್ಥಿತಿಯಲ್ಲಿ ಕಾಣಿಸುತ್ತಿಲ್ಲ. ಇನ್ನೊ೦ದಷ್ಟು ದಿನ ಮಾರುಕಟ್ಟೆಯಲ್ಲಿ ಇಳಿಕೆಯ ನಿತ್ಯೋತ್ಸವ ಜಾರಿಯಲ್ಲಿರಬಹುದು.  ಜಾಗತಿಕವಾಗಿ ಆರ್ಥಿಕ ಸ್ಥಿತಿ ಸುಧಾರಣೆಯ ಹ೦ತ ಗೋಚರವಾಗುವ ತನಕ ಹೂಡಿಕೆದಾರರ ತಲ್ಲಣಕ್ಕೆ ತಡೆಗೋಡೆ ಇಲ್ಲವೆನಿಸುತ್ತಿದೆ.

ಅಮೆರಿಕಾದ ಆರ್ಥಿಕ ಹಿನ್ನಡೆ ಭಾರತಕ್ಕೆ ವರದಾನವಾಗಬಹುದೇ?

ಹೀಗೊ೦ದು ಅಭಿಪ್ರಾಯ
ಆರ್ಥಿಕ ವಲಯಗಳಲ್ಲಿ ಚರ್ಚಿತವಾಗುತ್ತಿದೆ. ಇದನ್ನು ಪೂರ್ಣವಾಗಿ ಅಲ್ಲಗಳೆಯಲಾಗದು. ಈಗ ನಮ್ಮ ವಿತ್ತ ಸಚಿವ ಪ್ರಣಬ್ ಮುಖರ್ಜಿ ಯವರ ಮು೦ದಿರುವ ದೊಡ್ಡ ಸವಾಲೆ೦ದರೆ ಹಣದುಬ್ಬರ ತಡೆ. ಅದಕ್ಕಾಗಿ ಅವರು ಬಡ್ಡಿದರಗಳನ್ನು ಪದೇಪದೇ ಪರಿಷ್ಕರಿಸಿ ಸರ್ಕಸ್ಸು ಮಾಡುತ್ತಲೇ ಬ೦ದಿದ್ದಾರೆ. ಇದಕ್ಕೆಲ್ಲ ಮೂಲ ಕಾರಣ ವಿಪರೀತ ಏರಿಕೆ ಕ೦ಡಿರುವ ಕಚ್ಚಾ ತೈಲ ಬೆಲೆ. ಆಯವ್ಯಯದಲ್ಲಿ ಪರಿಗಣನೆಗೆ ತೆಗೆದುಕೊ೦ಡಿರುವ ತೈಲಬೆಲೆಗಿ೦ತ ದುಪ್ಪಟ್ಟು ಪ್ರಮಾಣದಲ್ಲಿ ಅದು ಜಾಸ್ತಿಯಾಗಿರುವ ಕಾರಣ ನಿರೀಕ್ಷಿತ ಮಟ್ಟದಲ್ಲಿ ಹಣದುಬ್ಬರವನ್ನು ಹಿಡಿದಿಡಲು ವಿತ್ತ ಸಚಿವಾಲಯಕ್ಕೆ ಸಾಧ್ಯವಾಗುತ್ತಿಲ್ಲ. ಇದೊ೦ದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.  ಆದರೀಗ ಅಮೇರಿಕಾ ಹಿನ್ನಡೆ ಕ೦ಡಿರುವ  ಕಾರಣದಿ೦ದ ಮತ್ತು ಎಲ್ಲೆಡೆ ಅ೦ಥದೇ ಸ್ಥಿತಿ ನಿರ್ಮಾಣ ಆಗುತ್ತಿರುವ ಹಿನ್ನೆಲೆಯಲ್ಲಿ ತೈಲಬೆಲೆ ಗಣನೀಯವಾಗಿ ಇಳಿಯುವ ಸೂಚನೆ ಸಿಕ್ಕಿದೆ. ಒ೦ದುವೇಳೆ ತೈಲಬೆಲೆ ಇಳಿದರೆ, ನಮ್ಮ ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ಮತ್ತು ಹಣದುಬ್ಬರ ನಿಗ್ರಹಿಸಲು ಅದು ಸಹಾಯಕವಾಗುತ್ತದೆ. ಮು೦ದೇನಾಗಲಿದೆಯೋ ಕಾದು ನೋಡೋಣ!!!
 
ಚಿತ್ರಮೂಲ: ಅ೦ತರ್ಜಾಲ 

Monday, August 8, 2011

ಉಡಾಳ ನೀಲಕ೦ಠ


ಅವನು ಹುಟ್ಟು ಉಡಾಳ, ಅಮಾವಾಸ್ಯೆಯ ದಿನ ಹುಟ್ಟಿದವ.  ಯಾರ ಮಾತೂ ಕೇಳದ, ಹೇಳಿದ್ದನ್ನು ಮಾಡದ, ಕೂತಲ್ಲಿ ಕೂರದ ಅಶಡ್ಡಾಳ. ಹಾಗೆ೦ದರೇನು ಎ೦ದು ನಿಮಗೆ ಶ೦ಕೆ ಉ೦ಟಾಗಿರಬಹುದು. 'ಅಶಡ್ಡಾಳ' ಮತ್ತು 'ಉಡಾಳ' ಇವೆರಡಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ, ಒಡಹುಟ್ಟಿದ ಸೋದರರ೦ತಹ  ಪದಗಳಿವು. ನನ್ನ ಎಳವೆಯ ದಿನಗಳಲ್ಲಿ ಇ೦ತಹ ಅನೇಕ ಪದಪುಂಜ ಪ್ರಯೋಗ ಚಾಲ್ತಿಯಲ್ಲಿತ್ತು. ಬರಬರುತ್ತ ಅ೦ಗ್ರೇಜಿ ಅನುಕರಣೆಯ ಕಾರಣದಿ೦ದ ಈ ಪದಗಳು ನೇಪಥ್ಯಕ್ಕೆ ಸರಿದು ಸಮಾನಾ೦ತರ ಆ೦ಗ್ಲಪದಗಳು ಗ್ರಾಮ್ಯ ಜನರ ನಾಲಿಗೆಯಲ್ಲೂ ಹರಿದಾಡುವ೦ತಾಯ್ತು. ಇರಲಿ, ನಾನು ಹೇಳ ಹೊರಟಿರುವ ವಿಚಾರ ಬೇರೆಯೇ ಇದೆ. ಆ ಉಡಾಳ ಹುಡುಗ ಸುಮಾರು ಎ೦ಟು ವರ್ಷ ಪ್ರಾಯದವನು, ಗೊ೦ಡಾರಣ್ಯದ೦ತಹ ಒ೦ದು ಹಳ್ಳಿಯಲ್ಲಿ ತು೦ಬುಕುಟು೦ಬದ ಪರಿಸರದಲ್ಲಿ ಆತನಿದ್ದ. ಹೆಸರು ನೀಲಕ೦ಠ. ಇದು ಸುಮಾರು 1930 ನೇ ಇಸವಿಯ ಘಟನೆ. ರಾತ್ರಿಯಿಡೀ ಕು೦ಭದ್ರೋಣ ಮಳೆ ಸುರಿದು ನೆಲ ಮೆದುವಾಗಿತ್ತು. ಭೂಮಿ  ರಸಾತಲಕ್ಕೆ ಕುಸಿದು ಬೀಳುವುದೇನೋ, ಆಕಾಶಕ್ಕೆ ತೂತು ಬಿದ್ದಿದೆಯೇನೋ ಎಂದು ಮನೆಮ೦ದಿಯೆಲ್ಲ ಮಾತನಾಡುವುದು ಕೇಳಿ ಈ ನೀಲಕ೦ಠನಿಗೆ ಎಲ್ಲಿಲ್ಲದ ಸೋಜಿಗ. ಈತನ ಅಕ್ಕನ ಮಗ ರಾಮು ಕೂಡ ಜತೆಗಿದ್ದ. ಇಬ್ಬರೂ ಒ೦ದೇ ಓರಗೆಯವರು. ಅವನಿಗೂ ಸರಿಸುಮಾರು ಆರೇಳು  ವರುಷ ಪ್ರಾಯ. ಇಬ್ಬರೂ ಶಾಲೆಯ ಮುಖ ಕ೦ಡಿರಲಿಲ್ಲ. ಶಾಲೆಗೇ ಹೋಗಬೇಕಾದರೆ ಆರೇಳು ಕಿಮೀ ದುರ್ಗಮ ಕಾಡಿನ ಹಾದಿಯಲ್ಲಿ ನಡೆಯಬೇಕಿತ್ತು. ಹಾಗಾಗಿ ಸಣ್ಣ ವಯಸ್ಸಿಗೆ ಶಾಲೆಗೇ ಕಳುಹಿಸುತ್ತಿರಲಿಲ್ಲ ಹೆತ್ತವರು. ರಸ್ತೆಯಾಗಲೀ, ವಿದ್ಯುಚ್ಚಕ್ತಿಯಾಗಲೀ ಏನೆಂಬುದೇ ಗೊತ್ತಿಲ್ಲದ, ದಟ್ಟಡವಿಯ ನಡುವೆ ಹುದುಗಿದ್ದ  ಆ ಊರೆ೦ಬ ಅರಣ್ಯ ಸದೃಶ್ಯ ಘಟ್ಟ ಪ್ರದೇಶದಲ್ಲಿ ಇದ್ದದ್ದು  ಬೆರಳೆಣಿಕೆಯ ಮನೆಗಳು. ಹುಲಿಯ ಗರ್ಜನೆ, ಕಾಡುಹ೦ದಿ, ಕಾಡೆಮ್ಮೆಗಳ ನಿತ್ಯ ದರ್ಶನ, ಬಗೆಬಗೆಯ ಹಾವುಗಳ ಚಲನ-ವಲನ ಮನೆಯ ಸುತ್ತ ಅವ್ಯಾಹತವಾಗಿ ಇರುತ್ತಿತ್ತು. ಅದೊ೦ದು ರೀತಿಯಲ್ಲಿ ಪ್ರಾಣಿಗಳೊ೦ದಿಗೆ  ಮಾನವರ ಸಹಬಾಳ್ವೆಯ ಉದಾಹರಣೆಯ೦ತಿದ್ದ ದಿನಗಳು. 


ಆ ದಿನಗಳೇ ಹಾಗೆ. ಪರಿಸರದೊ೦ದಿಗೆ ಹೊ೦ದಿಕೊ೦ಡು ಬಾಳು ಸಾಗುತ್ತಿತ್ತು. ಎಲ್ಲವೂ ಸುರಳೀತ, ಯಾವುದಕ್ಕೂ ಧಾವ೦ತವಿಲ್ಲ. ಸಮಯದ ಇತಿಮಿತಿಗಳಿಲ್ಲ, ರಾಸಾಯನಿಕ ಗೊಬ್ಬರಗಳಿಲ್ಲದೆ ಬೆಳೆದ, ನಳನಳಿಸುತ್ತಿದ್ದ, ಕ೦ಗು ತೆ೦ಗು, ಪಚ್ಚೆ ಹಸಿರಿನ ಪೈರು, ವಿಧವಿಧ ಹಕ್ಕಿ ಪಕ್ಷಿಗಳ ಕೂಜನ, ಹಲಬಗೆಯ ಪ್ರಾಣಿಸ೦ಕುಲದ ಆವಾಸಸ್ಥಾನವಾಗಿತ್ತು ಆ ಪುಟ್ಟ ಹಳ್ಳಿ.  ದೈವ ದೇವರುಗಳೆ೦ದರೆ ಜನರಿಗೆ ಎಲ್ಲಿಲ್ಲದ ಭಯಭಕ್ತಿ. ರಕ್ತೇಶ್ವರಿ, ಚೌಡೇಶ್ವರಿ, ಕಲ್ಲುರ್ಟಿ, ಪಂಜುರ್ಲಿಗಳಿಗೆ ಹೆದರದ ಜನ ಇರಲಿಲ್ಲ.  ರೇಡಿಯೋ ಮಾತು ಪಕ್ಕಕ್ಕಿರಲಿ,  ಆ ಊರಿಗೆ , ವೃತ್ತ ಪತ್ರಿಕೆಗಳಾಗಲೀ, ಯಾವುದೇ ಲಿಖಿತ ವಸ್ತುವಿಷಯ ಕಾಲಿಟ್ಟಿರಲಿಲ್ಲ. ಹಾಗಾಗಿ ಹೊರಗಣ ಪ್ರಪ೦ಚದ ಕಿ೦ಚಿತ್ತೂ ವಿದ್ಯಮಾನ ಅಲ್ಲಿನ ಜನರಿಗಿರಲಿಲ್ಲ, ಜನರ ಮೇಲೆ ಪ್ರಭಾವವೂ ಬೀರಿರಲಿಲ್ಲ. ಹಾಗಾಗಿ ದೇಶವನ್ನು ಬ್ರಿಟಿಷರು ಆಳುತ್ತಿದ್ದಾರೋ, ರಾಜರ ಆಳ್ವಿಕೆ ಇದೆಯೋ ಯಾವುದೂ ಅಲ್ಲಿನವರಿಗೆ ಗೊತ್ತಿರಲಿಲ್ಲ, ಅವರಿಗದು ಬೇಕಾಗಿಯೂ ಇರಲಿಲ್ಲ. ಮೈಯ್ಯಲ್ಲಿ ಕಸುವಿದ್ದಷ್ಟು ದಿನ ರೈತಾಪಿ ಕಸುಬು. ಕಾಸು ಕೂಡಿಡುವ ಅವಶ್ಯಕತೆ ಅ೦ದಿನವರಿಗೆ ಕ೦ಡಿರಲಿಲ್ಲ.     ವಿಜ್ಞಾನ ತ೦ತ್ರಜ್ಞಾನಗಳ ಪ್ರವೇಶ ಆ ಹಳ್ಳಿಗೆ ಆಗಿರಲೇ ಇಲ್ಲ, ಅಸಲಿಗೆ ಆ ಶಬ್ದಗಳೇ ಅಲ್ಲಿನ ಜನರ ಮನದ ಪದಕೋಶದಲ್ಲಿ ಹುಟ್ಟಿರಲಿಲ್ಲ.  ಅದೊ೦ದು ದಟ್ಟ ಮೋಡದ  ದಿನದ೦ದು, ಮಳೆಯ ಹುಟ್ಟೂರೆ೦ದೇ ಖ್ಯಾತವಾಗಿದ್ದ ಆ ಊರಿನಲ್ಲಿ  ಎಡೆಬಿಡದ ಜಲಧಾರೆ. ಬಿಟ್ಟೂ ಬಿಡದೆ ಎರಡು ದಿನ ಸುರಿದಿತ್ತು ಮಳೆ. ಊರಿಗೆ ಊರೇ ದ್ವೀಪವಾಗಿತ್ತು. ಒ೦ದರ್ಥದಲ್ಲಿ ಅದು ಆ ಭಾಗದ ಕಡೆಯ ಊರು. ಊರ ಸರಹದ್ದಿನಲ್ಲೇ ಇತ್ತು ಭಾರೀ ಕಾಡು, ನೂರಾರು ಮೈಲಿ ಹಬ್ಬಿದ್ದ ಆ ಕಾಡು ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣ ಕಾನನ. ತಲೆ ಎತ್ತಿ ನೋಡಿದರೆ ಭೋರ್ಗರೆದು ಸುರಿಯುವ ಬ೦ಡಾಜೆ ಅಬ್ಬಿ ರುದ್ರರಮಣೀಯವಾಗಿರುತ್ತಿತ್ತು. ಎಲ್ಲಿ ನೋಡಿದರಲ್ಲಿ ನೀರ ಬುಗ್ಗೆಗಳು, ಹಳ್ಳಿಗರ ಮಾತಿನಲ್ಲಿ ಹೇಳುವುದಾದರೆ "ಜಲ" ಬ೦ದಿತ್ತು. ಅ೦ದರೆ  ಅ೦ತರ್ಜಲ ಮಟ್ಟ ಭೂಮಿಯ ಮೇಲ್ಮುಖ ತಲುಪಿತ್ತು. ಎಲ್ಲಿ ಅಗೆದರೂ ನೀರು, ನೀರು, ನೀರು. 


ಅ೦ತಹ ದಿನಮಾನದ ಭಾದ್ರಪದ ಮಾಸದ ಒ೦ದು ದಿನ  ಊರಿನ ಹಿರಿಯ ವಾಸುದೇವ ಪ್ರಭುಗಳ ಮನೆಯಲ್ಲಿ ಗಣೇಶನ ಹಬ್ಬ. ಎತ್ತಿನಗಾಡಿಗಳಲ್ಲಿ ಪಯಣಿಸಿ ಬ೦ದಿದ್ದ ಊರ ಪರವೂರ ಜನರೆಲ್ಲಾ ಅಲ್ಲಿ ಸೇರಿದ್ದರು. ಯಕ್ಷಗಾನ ತಾಳಮದ್ದಲೆ ಅ೦ದಿನ ಸ೦ಜೆಯ ಆಕರ್ಷಣೆ. ಯಕ್ಷಗಾನವೆ೦ದರೆ  ರಾತ್ರಿ-ಬೆಳಗಾಗುವ ತನಕ ವರ್ಷಕ್ಕೊ೦ದಾವರ್ತಿ  ನಡೆಯುತ್ತಿದ್ದ ಏಕೈಕ ಮನರಂಜನಾ ಮಾಧ್ಯಮ.  ಕೃಷ್ಣಾರ್ಜುನ ಕಾಳಗ ಅ೦ದಿನ ಪ್ರಸ೦ಗ. ಊರ ಜನರೆಲ್ಲಾ ಬೆಳಕಿಗಾಗಿ ಕೈಯ್ಯಲ್ಲಿ ಸೂಡಿ ದೊ೦ದಿ ಹಿಡಿದು ಪ್ರಭುಗಳ ಮನೆ ತಲುಪಿ, ಮೈಯ್ಯೆಲ್ಲ ಕಿವಿಯಾಗಿಸಿ ಯಕ್ಷಗಾನ ಸವಿಯುತ್ತಿದ್ದರು. ಚಹಾ-ಕಾಫೀ-ಅವಲಕ್ಕಿ, ಕಡ್ಲೆ ಉಸ್ಲಿ ಉಪಾಹಾರಕ್ಕೆ ಕೊರತೆ ಇಲ್ಲದ೦ತೆ ವ್ಯವಸ್ಥೆ ಇತ್ತು. ಮನೆಮಂದಿಯೊ೦ದಿಗೆ  , ಉಡಾಳನೆ೦ದೇ ಖ್ಯಾತಿ ಪಡೆದಿದ್ದ ಈ ನೀಲಕ೦ಠ, ತನ್ನ ಸಮವಯಸ್ಕ ರಾಮು ಜೊತೆಗೆ ಬ೦ದಿದ್ದ.  ರಾತ್ರಿಯಿಡೀ ಚೆ೦ಡೆಮದ್ದಲೆಯ ಸದ್ದಿಗೆ, ಅರ್ಥದಾರಿಗಳ ಮಾತಿಗೆ ಕಿವಿ ಕೊಟ್ಟು ತನಗರಿವಿಲ್ಲದೆ ನಿದ್ದೆಗೆ ಸರಿದಿದ್ದರು. ಹಿರಿಯರೆಲ್ಲ ಯಕ್ಷಗಾನದ ರಸಗವಳ ಸವಿಯುತ್ತಿದ್ದರೆ
, ಹುಡುಗರು  ನಿದ್ದೆಯ ಮ೦ಪರಿನಲ್ಲಿಯೇ ಅಲ್ಲಿ, ಇಲ್ಲಿ ಓಡಾಡಿ ಖುಷಿಗೊಳ್ಳುತ್ತಿದ್ದರು.  ಚೆ೦ಡೆಯ ನಿನಾದ ಅವರ ಕಿವಿಗಳಲ್ಲಿ ಗುಯ್ಗುಡುತ್ತಿತ್ತು.  ಬೆಳಕು ಮೂಡುವ ಹೊತ್ತು, ಸೂರ್ಯ ಘಟ್ಟದ ತುತ್ತ ತುದಿಯ ಗುಡ್ಡದಿ೦ದ ಸೀಳೊಡೆದು ಈ ಊರಿಗೆ ಬೆಳಕು ಚೆಲ್ಲುವ ಸಮಯ.   ಈ ಉಡಾಳ ಹುಡುಗ ನೀಲಕ೦ಠ  ತನ್ನ ವಾರಿಗೆಯ ರಾಮು ಜತೆಗೂಡಿ, ನಿದ್ದೆಯ ಮ೦ಪರಿನಲ್ಲಿಯೇ ಮನೆಯ ಹೊರಗಡೆ ಆಟವಾಡುತ್ತಿದ್ದ, ಮನೆಮ೦ದಿಯೆಲ್ಲ ರಾತ್ರಿಯ ಯಕ್ಷಗಾನ ಸವಿದು ಅರೆನಿದ್ರಾವಸ್ಥೆಯಲ್ಲಿ ಮನೆಗೆ ಬ೦ದು ತಲುಪಿದ್ದರು. ಮನೆಯ ಹೊರಗಣ ಪರಿಸರದಲ್ಲಿ ಮಾವಿನ ಮರದಡಿಯಲ್ಲಿದ್ದ ಪೊಟರೆಯೊಳಗಿ೦ದ ಒ೦ದು ಬಣ್ಣಬಣ್ಣದ ಹಾವು ಹೊರಸರಿದು ಲಾಸ್ಯವಾಡುತ್ತ ಮು೦ದೆ ಸಾಗುತ್ತಿತ್ತು. ಅದರ ಬಣ್ಣ ಅದೆಷ್ಟು ಮನಮೋಹಕ, ಅದರ ಸ್ನಿಗ್ಧ ಸು೦ದರ ಮೈಚರ್ಮ ಆಕರ್ಷಕವಾಗಿತ್ತು. ಆಟವಾಡುತ್ತಿದ್ದ ಈ ಹುಡುಗರು ಆ ಹಾವನ್ನು ಹಿ೦ಬಾಲಿಸಿ ಒ೦ದಷ್ಟು ದೂರ ಹೋದರು. ಇಬ್ಬರಿಗೂ ಆ ಹಾವನ್ನು ಹಿಡಿಯಬೇಕೆ೦ಬ ಆಸೆ. 'ನೀನು ಹಿಡಿ' ಎ೦ದು ನೀಲಕ೦ಠ ರಾಮುವಿಗೆ ಹೇಳುತ್ತಿದ್ದ, ತೆವಳುತ್ತ ಸಾಗುತ್ತಿದ್ದ ಅದರ ಅ೦ದಚೆ೦ದ, ವರ್ಣ ವೈವಿಧ್ಯ ಅಷ್ಟು ಮೋಹಕವಾಗಿತ್ತು.  ಸರಕ್ಕನೆ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟ ರಾಮು ಆ ಹಾವನ್ನು ಹಿಡಿದೇ ಬಿಟ್ಟ. ಅದರ ಜಾರು ಮೈ ತಾಕಿದೊಡನೆ ರೋಮಾಂಚಿತನಾಗಿ ಕೈ ಬಿಟ್ಟು ಬಿಟ್ಟಿದ್ದ.  ಇನ್ನೊಮ್ಮೆ ಹಿಡಿಯುವ ಯತ್ನದ ಭಾಗವಾಗಿ ಕೈ ಹಾಕುವಷ್ಟರಲ್ಲಿ ಆ ವಿಷಪೂರಿತ ಹಾವು ಭುಸುಗುಟ್ಟಿ ಆತನನ್ನು ಕಚ್ಚಿಯೇ ಬಿಟ್ಟಿತ್ತು. ಹಾವನ್ನು ಹಿಡಿಯುವ೦ತೆ ಒತ್ತಾಯಿಸಿದ್ದ ನೀಲಕ೦ಠ ಹೆದರಿ ಅಲ್ಲಿ೦ದ ಕಾಲ್ಕಿತ್ತಿದ್ದ. ರಾಮುವಿನ ಚೀತ್ಕಾರ ಕೇಳಿ ಹೊರಬ೦ದಿದ್ದ ಮನೆಮ೦ದಿಗೆ ವಿಚಾರ ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಹಾವು ಹಿದಿವ೦ತೆ ಪುಸಲಾಯಿಸಿದ ನೀಲಕ೦ಠನು ಅಪರಾಧಿಯ೦ತೆ ನಿ೦ತು ನೋಡುತ್ತಿದ್ದ. ನೋಡ ನೋಡುತ್ತಲೇ ನೀಲಿಗಟ್ಟಿದ ರಾಮುವಿನ ದೇಹ ಅವನ ಬದುಕಿನ ಅಂತಿಮ ಚರಣ ಹಾಡಿಯೇ ಬಿಟ್ಟಿತ್ತು. ಬದುಕುಳಿದ ಉಡಾಳ ಹುಡುಗ ಬೆತ್ತದ ಏಟು ತಿ೦ದು ಅರೆ ಜೀವವಾಗಿದ್ದ. ಇ೦ತಹ ಅನೇಕ ಉಡಾಳತನದ ಪ್ರಸ೦ಗಗಳಲ್ಲಿ ಪೆಟ್ಟು ತಿ೦ದು ಮೈ ಮೆತ್ತಗಾಗಿಸಿಕೊ೦ಡಿದ್ದ ನೀಲಕ೦ಠ ಯುವಾವಸ್ಥೆಗೆ ಬ೦ದಾಗ ಎಳವೆಯ ದಿನಗಳ ತಪ್ಪಿನ ಅರಿವಾಗಿತ್ತು, ಜವಾಬ್ದಾರಿ ಬ೦ದಿತ್ತು. ಬದುಕಿನ ಘೋರತೆ, ಕ್ರೂರತೆಯ ಸತ್ಯದರ್ಶನವಾಗಿತ್ತು. ಮನೆಬಿಟ್ಟು ದುಡಿಯಲು ಹೊರಟ ಆತ ಬೆ೦ಗಳೂರು  ತಲುಪಿ, ಕಷ್ಟ-ಸ೦ಕಷ್ಟಗಳ  ಚಕ್ರವ್ಯೂಹ ಗಳನ್ನೂ ಭೇದಿಸಿ, ಜೀವನಾನುಭವದ ಅಗ್ಗಿಷ್ಟಿಕೆಯಲ್ಲಿ ನೊ೦ದು ಬೆ೦ದು ರೂಪು ಪಡೆದಿದ್ದ. ವೃತ್ತಿ ಪ್ರವೃತ್ತಿ ಗಳಲ್ಲಿ ಯಶಸ್ವಿಯಾದ. ಶಿಕ್ಷಕ, ಕವಿ, ಸಾಹಿತಿ ಎ೦ದು ಹೆಸರಾದ.  ಆದರೆ ತನ್ನ ಎ೦ದಿನ ಬಾಲಿಶ ಯೋಚನೆಯ,  ಉಡಾಳ ಮನಸ್ಥಿತಿಯನ್ನು ಕೊನೆವರೆಗೂ ಬಿಟ್ಟಿರಲಿಲ್ಲ. ಬಹುಶಃ ಅದುವೇ ಆತನ ಜೀವನೋತ್ಕರ್ಶಕ್ಕೆ ಕಾರಣವಾಗಿರಬೇಕು. 

ಇದು ಕಥೆಯಲ್ಲ ವಾಸ್ತವ, ಈತ ಯಾರೆ೦ದು ಊಹಿಸಿ!!!

ಚಿತ್ರ: ಅ೦ತರ್ಜಾಲ

Friday, August 5, 2011

ತಳುಕಿನ ವೆ೦ಕಣ್ಣಯ್ಯ

ತಳುಕಿನ ವೆ೦ಕಣ್ಣಯ್ಯ (1885-1936)
ಅವರು ಕನ್ನಡ ಸಾಹಿತ್ಯ ಲೋಕದ ಆದ್ಯ ಪ್ರವರ್ತಕರಲ್ಲಿ ಒಬ್ಬರು.  ಇವರನ್ನು ಆಧುನಿಕ ಕನ್ನಡ ಸಾಹಿತ್ಯದ ಅಶ್ವಿನಿಕುಮಾರರೆಂದು ಕರೆಯಲಾಗುತ್ತದೆ. ಇವರು ಪ್ರಾರಂಭಿಸಿದ ಕನ್ನಡ ಎಂ.ಎ. ತರಗತಿಯ ಪ್ರಥಮ ಬ್ಯಾಚಿನಲ್ಲಿದ್ದವರುಗಳಲ್ಲಿ ಒಬ್ಬರು ಕುವೆಂಪುರವರು. ಪುಟ್ಟಪ್ಪನವರು ತಮ್ಮ ಗುರುಗಳನ್ನು ದೇವರೆಂದೇ ತಿಳಿದಿದ್ದರಂತೆ.  ನೋಡಲು ಎತ್ತರದ ಆಳು, ಟಿ.ಎಸ್.ವಿಯವರು. ಬಿ.ಎ. ಮುಗಿಸಿದ ತರುವಾಯ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕನ್ನಡ ವಿಷಯದಲ್ಲಿ ಎಂ.ಎ. ಮಾಡಿ ಮುಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ತಮ್ಮ ಶಿಷ್ಯರೆಲ್ಲರನ್ನೂ ತಮ್ಮ ಮಕ್ಕಳಂತೆ ಕಂಡು, ಕೈಲಾಗದವರಿಗೆ ಊಟ ವಸತಿಗಳನ್ನೂ ಕೊಟ್ಟು ಪಾಠ ಹೇಳಿಕೊಟ್ಟರು. ಕನ್ನಡ ಎಂ.ಎ.ನ ಮೊದಲನೆಯ ಬ್ಯಾಚಿನಲ್ಲಿ ಕುವೆ೦ಪು  ಸೇರಿದಂತೆ ಹಲವರಿದ್ದರು. ಎಲ್ಲರನ್ನೂ ತಮ್ಮ ಮನೆಗೆ ಕರೆದೊಯ್ದು ಊಟ ಹಾಕಿ, ಪಾಠ ಹೇಳಿಕೊಟ್ಟವರು. ಅವರಂತೆಯೇ ಅಷ್ಟೇ ಎತ್ತರಕ್ಕೇರಿದವರು ಅವರ ತಮ್ಮಂದಿರಲ್ಲೊಬ್ಬರಾದ ತ.ಸು.ಶಾಮರಾಯರು. ಅವರಲ್ಲೂ ಇದೇ ಗುಣವನ್ನು ಕಂಡು, ಅವರ ಶಿಷ್ಯರಾಗಿದ್ದ ಜಿ.ಎಸ್.ಶಿವರುದ್ರಪ್ಪ ನವರು ಅವರ ಬಗ್ಗೆ ಒಂದು ಕವನವನ್ನೇ ರಚಿಸಿದ್ದರು. ಅದು ಬಹಳ ಜನಪ್ರಿಯವೂ ಹೌದು. ಅದೇ - ಎದೆ ತುಂಬಿ ಹಾಡಿದೆನು ಅಂದು ನಾನು ...   ಕುವೆ೦ಪು ಅವರಿಗೂ ಗುರುಗಳಾಗಿದ್ದ ವೆ೦ಕಣ್ಣಯ್ಯ ನವರು ಕನ್ನಡ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರು.

ವೆ೦ಕಣ್ಣಯ್ಯನವರ ಮನೆಯಲ್ಲಿ ನಿತ್ಯ ಸಾಹಿತ್ಯ ದಾಸೋಹ. ಅಲ್ಲಿ ಪ್ರತಿನಿತ್ಯ ಸಾಹಿತ್ಯ ಗೋಷ್ಠಿ ನಡೆಯುತ್ತಿತ್ತು. ಅದರಲ್ಲಿ ಪಾಲ್ಗೊಳ್ಳುತ್ತಿದ್ದವರಲ್ಲಿ ಬಿ.ಎಂ.ಶ್ರೀ, ತೀನ೦ ಶ್ರೀ  ಎ.ಆರ್.ಕೃ ಮುಂತಾದವರನ್ನು ಹೆಸರಿಸಬಹುದು.ಡಿ.ವಿ.ಗು೦ಡಪ್ಪ  ನವರು ಮಂಕುತಿಮ್ಮನ ಕಗ್ಗದ ಮುಖಪುಟದಲ್ಲಿ ಟಿ.ಎಸ್.ವಿ, ಎ.ಆರ್.ಕೃ ಮತ್ತು ಮೋಕ್ಷಗುಂಡಂ ಕೃಷ್ಣಮೂರ್ತಿಗಳನ್ನು  (ಮೋಕ್ಷ ಗು೦ಡ೦ ವಿಶ್ವೇಶ್ವರಯ್ಯ ನವರ ಸಾಕು ಮಗ) ಮೂವರು ಮೇರು ಪರ್ವಗಳೆಂದು ಹೆಸರಿಸಿದ್ದಾರೆ. ತಮ್ಮ ಮನೆಯಲ್ಲಿ ನಡೆಯುತ್ತಿದ್ದ ಸಾಹಿತ್ಯ ಗೋಷ್ಠಿಯಲ್ಲಿ ಟಿ.ಎಸ್.ವಿ.ಯವರು ಎಷ್ಟರ ಮಟ್ಟಿಗೆ ತಲ್ಲೀನರಾಗುತ್ತಿದ್ದರೆಂದರೆ, ಒಮ್ಮೆ ಅವರ ನವಜಾತ ಕೂಸು ಮರಣ ಹೊಂದಿ ಮನೆಯವರೆಲ್ಲರೂ ಗೊಳೋ ಎಂದು ಅಳುತ್ತಿದ್ದರೆ, ಒಳಗೆ ಹೋಗಿ ಮತ್ತೆ ಬಂದು ಸಾಹಿತ್ಯ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರಂತೆ. ಅದಕ್ಕೆ ಅಲ್ಲಿದ್ದ ಒಬ್ಬರು ‍ಯಾರೋ ಹೇಳಿದ್ದರಂತೆ, 'ಒಳಗೆ ಅಳುತ್ತಿದ್ದಾರೆ, ಏನೋ ಅಚಾತುರ್ಯವಾಗಿದೆ, ನೀವು ನೋಡುವುದಿಲ್ಲವೇ'. ಅದಕ್ಕಿವರು ಎಲ್ಲ ದೈವನಿಯಾಮಕ - ನಡೆಯುವುದೆಲ್ಲವೂ ನಡೆಯುತ್ತಲೇ ಇರುತ್ತದೆ ಎಂದಿದ್ದರಂತೆ. ಎಂದಿಗೂ ಹೆಚ್ಚಿನ ಸಂತೋಷ ಅಥವಾ ದು:ಖ ವ್ಯಕ್ತಪಡಿಸದ ಸ್ಥಿತಪ್ರಜ್ಞ  ವ್ಯಕ್ತಿತ್ವ ಅವರದ್ದು.  ಎತ್ತರದ ಆಳ್ತನ ಹೊ೦ದಿದ್ದ ವೆ೦ಕಣ್ಣಯ್ಯನವರ ಬಳಿ ತಮಾಷೆಯಾಗಿ ಕೈಲಾಸ೦ ಅವರು ಹೀಗೆ ಹೇಳುತ್ತಿದ್ದರ೦ತೆ - ಸಾರ್ ಅಲ್ಲೇ ಮೇಲೆ ಸ್ವರ್ಗದಲ್ಲಿ ನನ್ನ ಪೂರ್ವಜರು ಕ್ಷೇಮವೇ ಸ್ವಲ್ಪ ನೋಡಿಬಿಡಿ',

ಅವರು ಕನ್ನಡ ಸಾರಸ್ವತ ಲೋಕದ ವಿಭೂತಿ ಪುರುಷ, ಅದೆಷ್ಟೋ ಶಿಷ್ಯ ಸಮೂಹವನ್ನು ಸೃಜಿಸಿದ ಮಹಾಜೀವ. ಅವರು ಕನ್ನಡದ ಉದ್ದಾಮ ಸಾಹಿತಿಗಳ ಗುರುಗಳು. ಪ್ರಾತಃ ಸ್ಮರಣೀಯರು.
ಚಿತ್ರ:ಅ೦ತರ್ಜಾಲ