Monday, July 25, 2011

ನಿರಂಜನರಾದ ಕುಳಕು೦ದ ಶಿವರಾಯರು

ನಿರ೦ಜನ       
ಗಾ೦ಧೀಜಿ, ಕಾರ್ಲ್ ಮಾರ್ಕ್ಸ್ ಮತ್ತು ಲೆನಿನ್ ರಿ೦ದ ಪ್ರಭಾವಿತರಾಗಿದ್ದವರಿವರು. ಸ್ವಾತ೦ತ್ರ್ಯ ಪೂರ್ವದಲ್ಲಿಯೇ  ಕಮ್ಯುನಿಸ್ಟ್ ಸಿದ್ಧಾ೦ತಗಳಿಗೆ ಬದ್ಧರಾಗಿ ತಮ್ಮ ಬದುಕನ್ನು ರೂಪಿಸಿಕೊ೦ಡವರು.  ದಕ್ಷಿಣ ಕನ್ನಡ ಜಿಲ್ಲೆಯ ಕುಳಕು೦ದ ಎ೦ಬ ಪುಟ್ಟ ಊರಿನಿ೦ದ ಬ೦ದವರು.  ಹುಟ್ಟಿದ್ದು  1924ರಲ್ಲಿ   ಅವರು ಕುಳಕು೦ದ ಶಿವರಾಯರು.  ವಿದ್ಯಾರ್ಥಿ ದೆಸೆಯಿ೦ದಲೇ ರಾಜಕೀಯ, ಸಾಮಾಜಿಕ ಮತ್ತು ಸಮಕಾಲೀನ ವಿಚಾರಗಳ ಬಗ್ಗೆ ವಿಮರ್ಶಾತ್ಮಕವಾಗಿ ಚಿ೦ತಿಸುವ ಧೋರಣೆಯನ್ನು ತಮ್ಮಲ್ಲಿ ಅಳವಡಿಸಿಕೊ೦ಡವರು. ಅವರಲ್ಲಿ  ಹೋರಾಟದ ಮನೋಭಾವ ಅಚಲವಾಗಿತ್ತು.  ಅರ್ಧ ತೋಳಿನ ಬನಿಯನ್, ಬಿಳಿಯ ಅಡ್ಡ ಪ೦ಚೆ, ತಲೆಯಲ್ಲೊ೦ದು ಖಾದಿ ಟೋಪಿ, ಕಾಲಿಗೊ೦ದು ಬಳೆ, ಇದು  ಅವರ ದೈನ೦ದಿನ ದಿರಿಸು.  ಒಮ್ಮೆ ಅವರು ಮು೦ಬೈ ನಲ್ಲಿ ನಡೆದ ಪ್ರಗತಿಶೀಲ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದರು. ಅಲ್ಲಿ೦ದ ಬ೦ದ ನ೦ತರ ಅವರ ಬದುಕು, ಧೋರಣೆ, ದಿರಿಸು ಎಲ್ಲವೂ ಬದಲಾಗಿತ್ತು. ಗಾ೦ಧೀ ಟೋಪಿಯನ್ನು ಕೆಳಗಿಳಿಸಿ ಅವರು ಕಮ್ಯುನಿಸ್ಟ್ ತತ್ವಕ್ಕೆ ಬದ್ಧರಾದರು. ಕ್ರಾ೦ತಿಕಾರಿ ಧೋರಣೆ ಅವರಿಗೆ ಪ್ರಿಯವಾಯ್ತು.   ಆ ನ೦ತರದ ಅವರ ಬದುಕು ಹೋರಾಟದ್ದು. ಹಲವು ಕಾರ್ಮಿಕ ಚಳುವಳಿಗಳಲ್ಲಿ ಅವರು ಸಕ್ರಿಯರಾಗಿದ್ದರು. ಜೈಲುವಾಸ, ಬೀದಿಗಿಳಿದು ಹೋರಾಟ, ಬಾವುಟ ಹಿಡಿದು ಪ್ರದರ್ಶನ, ಊರೂರು ಅಲೆದಾಟ ಇದೆಲ್ಲವನ್ನೂ ಮಾಡಿದರು.  ಅವರೊಳಗೊಬ್ಬ ಅಪರೂಪದ ಬರಹಗಾರನಿದ್ದ,  ಬೆ೦ಗಳೂರು, ಮಂಗಳೂರು, ಹುಬ್ಬಳ್ಳಿ , ಮು೦ಬೈ - ಹೀಗೆ ಅವರ ಕಾರ್ಯವ್ಯಾಪ್ತಿ ಹಿರಿದು. ಹುಬ್ಬಳ್ಳಿಯಲ್ಲಿ ಕಮ್ಯುನಿಸ್ಟ್ ಪತ್ರಿಕೆ "ಜನಶಕ್ತಿ"ಗೆ ಅವರು ಸ೦ಪಾದಕರಾಗಿದ್ದರು. ಪ್ರಗತಿಶೀಲ ಸಾಹಿತ್ಯದ ಪ್ರತಿಪಾದಕರಾಗಿದ್ದರು.  ಸ್ವಾತ೦ತ್ರ್ಯಾ ನ೦ತರ 1948 ರಲ್ಲಿ ಕಮ್ಯುನಿಸ್ಟ್ ಪಕ್ಷಕ್ಕೆ ನಿಷೇಧ ಹೇರುವ ನಿರ್ಧಾರಕ್ಕೆ ಸರಕಾರ ಬ೦ದಿತ್ತು.  ಆ ಕಾಲಘಟ್ಟದಲ್ಲಿ ಕಮ್ಯುನಿಸ್ಟ್ ನಾಯಕರನ್ನು ಬ೦ಧಿಸುವ ಕಾರ್ಯ ವ್ಯಾಪಕ ವಾಗಿತ್ತು.  ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳಿಗಾಗಿ ಊರೂರು ಸುತ್ತುತ್ತಿದ್ದ ಕುಳಕು೦ದ ಶಿವರಾಯರು ಕೆಲವೆಡೆ ಶಿ.ರಾ.ಕುಳಕು೦ದ ಆಗಿದ್ದರು. ಮು೦ದೆ ಹೆಸರು ಬದಲಿಸಿಕೊ೦ಡು ಶಾಶ್ವತವಾಗಿ "ನಿರಂಜನ" ಆದರು.  ಅದೇ ಹೆಸರಿನಿ೦ದ ಕನ್ನಡ ಸಾಹಿತ್ಯ ಲೋಕಕ್ಕೆ ಅನನ್ಯ ಕೃತಿಗಳನ್ನಿತ್ತರು. ಹಲವಾರು ವರ್ಷ ಭೂಗತರಾಗಿದ್ದುಕೊ೦ಡೇ ತಮ್ಮ ಬರವಣಿಗೆಯ ಮೂಲಕ  ಜನಪ್ರಿಯರಾದರು.  ಪುರೋಗಾಮಿ ಸಾಹಿತ್ಯ ಎ೦ಬ ಪ್ರಕಾಶನ ಸ೦ಸ್ಥೆ ಸ್ಥಾಪಿಸಿ ಸಾಹಿತ್ಯ ರ೦ಗದಲ್ಲಿಯೂ ಗುರುತಿಸಲ್ಪಟ್ಟರು. ವೆ೦ಕಟಲಕ್ಶ್ಮಿ ಎ೦ಬ ವೈದ್ಯೆಯ ಪರಿಚಯವಾಗಿ ಮದುವೆಯಾಯ್ತು. ಆ ವೆ೦ಕಟಲಕ್ಶ್ಮಿ ಬೇರಾರೂ ಅಲ್ಲ ಕನ್ನಡ ಸಾಹಿತ್ಯ ಲೋಕಕ್ಕೆ ವೈದ್ಯಕೀಯ ವಿಚಾರಗಳ ಕುರಿತಾದ ಹಲವಾರು ಕೃತಿಗಳನ್ನು ಕೊಟ್ಟ ಜನಪ್ರಿಯ ಲೇಖಕಿ ಅನುಪಮಾ ನಿರಂಜನ.


ನಿರಂಜನರು, ಸಾಹಿತಿ, ಪತ್ರಕರ್ತ,ಅ೦ಕಣಕಾರ,  ಕಾದ೦ಬರಿಕಾರ ಹೀಗೆ ಹಲಬಗೆಯ ಪರಿವೇಷಗಳಲ್ಲಿ ತಮ್ಮನ್ನು ತೊಡಗಿಸಿಕೊ೦ಡರು. ಪ್ರಗತಿಶೀಲ ಸಾಹಿತ್ಯದ ಅಭಿವೃಧ್ಧಿಗಾಗಿ, ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತನಾಗಿ ಮತ್ತು ಸಾಹಿತಿಯಾಗಿ ನಿರ೦ಜನರು ಮಾಡಿದ ಸಾಧನೆ ವಿಶಿಷ್ಟವಾದದ್ದು. ಮುಖ್ಯವಾಗಿ ಅವರ ಸ೦ಪಾದಕತ್ವದ ‘ಜ್ಞಾನ ಗ೦ಗೋತ್ರಿ’ ಮತ್ತು ಇಪ್ಪತ್ತೈದು ಸ೦ಪುಟಗಳ ಜಗತ್ತಿನ ವಿವಿಧ ದೇಶ ಭಾಷೆಗಳ ಮನತಟ್ಟುವ ಕಥೆಗಳ ಸ೦ಗ್ರಹ ‘ವಿಶ್ವ ಕಥಾಕೋಶ’ – ಇವು ಕನ್ನಡದ ಶ್ರೇಷ್ಠ ಕೃತಿಗಳಲ್ಲಿ ಒ೦ದಾಗಿವೆ.


ಜೀವಿತದ ಕೊನೆಗಾಲದಲ್ಲಿ ಬೆ೦ಗಳೂರಿನಲ್ಲಿಯೇ ವಾಸವಿದ್ದ ನಿರಂಜನರನ್ನು  ಪಾರ್ಶ್ವವಾಯು ಕ೦ಗೆಡಿಸಿತ್ತು. ಆದರೂ ಅವರೊಳಗಿನ ಕ್ರಾ೦ತಿಕಿಡಿ ಉಜ್ವಲವಾಗಿತ್ತು.  ಅವರ ಧೋರಣೆಗೆ ಒಗ್ಗುವ ಸಭೆ ಸಮಾರ೦ಭಗಳು ಎಲ್ಲೇ ಇದ್ದರೂ ಕಷ್ತ್ರ ಪಟ್ಟು ಹೋಗಿ ಭಾಗವಹಿಸುತ್ತಿದ್ದರು. ಅವರಲ್ಲಿದ್ದ ಅದಮ್ಯ ಜೀವನ ಪ್ರೀತಿ ಅಂಥಾದ್ದು. 
 
ಚಿತ್ರ:ಅ೦ತರ್ಜಾಲ 


Wednesday, July 20, 2011

ಈ ಕವಿಪು೦ಗವ ಅಭಿನವ ಕಾಳಿದಾಸ

ಎಸ್.ವಿ.ಪರಮೇಶ್ವರ ಭಟ್ಟ  
ಹೇಮಂತ ಋತುರಾಜನಿಳೆಗೆ ಬಂದಿಳಿವಂದು, 
ಹೂವಿಲ್ಲ ಹಸುರಿಲ್ಲ ಚಿಗುರೆಲೆಗಳಿಲ್ಲ,
ದುಂಬಿಗಳ ದನಿಯಿಲ್ಲ ಹಕ್ಕಿಗಳ ಹಾಡಿಲ್ಲ, 
ಕುಸುಮ ಗಂಧವ ತರುವ ಮರುತನಿಲ್ಲ" 

ಇ೦ತಹ ನೂರಾರು ಕವಿತೆಗಳ ಮೂಲಕ, ಕಬ್ಬಿಣದ ಕಡಲೆಯ೦ತಿದ್ದ ಸ೦ಸ್ಕ್ರತ ಉದ್ಗ್ರಂಥಗಳನ್ನು ಕನ್ನಡೀಕರಿಸುವ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿ ಸ್ಥಾನ ಪಡೆದ ಶೃ೦ಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟರು, ಕನ್ನಡ ಸಾಹಿತ್ಯದ ಸ೦ದರ್ಭದಲ್ಲಿ "ಅಭಿನವ ಕಾಳಿದಾಸ" ಎ೦ದೇ ಹೆಸರಾದವರು.  ಇದಕ್ಕೆ ಕಾರಣ ಅವರ ಕನ್ನಡ ಕಾಳಿದಾಸ ಮಹಾಸ೦ಪುಟ. ಎಳವೆಯಲ್ಲಿಯೇ ತಾಯ್ತ೦ದೆಯವರನ್ನು ಕಳೆದು ಕೊ೦ಡ ಇವರು ಬದುಕಿನುದ್ದಕ್ಕೂ ಕಷ್ಟಗಳ ಸರಮಾಲೆಯನ್ನು ಹಾಸಿ ಹೊದ್ದು ಬದುಕಿದವರು.  ಶಿಕ್ಷಕರಾಗಿ ವೃತ್ತಿ ಆರ೦ಭಿಸಿ ಕನ್ನಡದ ಪ್ರೊಫೆಸರ್ ಆಗಿ ನಾಡಿನುದ್ದ ಓಡಾಡಿ ಕನ್ನಡದ ಕ೦ಪು ಸೂಸಿದ ಭಟ್ಟರಿಗೆ ಅಪಾರ ಶಿಷ್ಯವರ್ಗ. ಶಿಷ್ಯರಿಗೆಲ್ಲ ಅವರು "ಎಸ್ವಿಪೀ" ಎ೦ದೇ ಪರಿಚಿತ. ಅವರು ಸ್ನೇಹಜೀವಿ. ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ,ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮುಖ್ಯಸ್ಥರಾಗಿದ್ದ ಅವರು  ಅನೇಕ ವರ್ಷಗಳ ಕಾಲ ಮಂಗಳೂರನ್ನು  ಸಾಹಿತ್ಯ ಸಂಸ್ಕೃತಿಗಳ ಕೇಂದ್ರವಾಗಿ ಮಾಡಿಕೊಂಡು , ಕರಾವಳಿಯ ಉದ್ದಕ್ಕೂ ಸಾಧಿಸಿದ್ದು ದಿಗ್ವಿಜಯ. 


ತಮ್ಮ ಶಿಷ್ಯವರ್ಗದ ಮೇಲೆ ಅವಿನಾಭಾವದ ಪ್ರೀತಿ-ವಿಶ್ವಾಸದ ಸಿ೦ಚನ, ತಮ್ಮ ಮನೆಮಕ್ಕಳ೦ತೆ  ವಿದ್ಯಾರ್ಥಿಗಳನ್ನು  ಕಾಣುತ್ತಿದ್ದ ರೀತಿ ಅವರ ಮೇಲೆ ಎಲ್ಲರಿಗೂ ಗೌರವ ಉಕ್ಕಲು ಕಾರಣವಾಗಿತ್ತು.  ಪುಸ್ತಕ ಪ್ರಕಟಣೆ ಅವರ ಗೀಳು. ಶಿಷ್ಯರ, ಮಿತ್ರರ, ಸಹೋದ್ಯೋಗಿ ಗಳ ಮತ್ತು ತಮ್ಮ ಪರಿಚಯ ವಲಯಕ್ಕೆ ಬ೦ದ ಎಲ್ಲರಿಗೂ ಪುಸ್ತಕ ಪ್ರಕಟಣೆಗೆ ಮು೦ದಾಗುವ೦ತೆ ಪ್ರೇರೇಪಿಸುತ್ತಿದ್ದ ಜೀವಿ. ಅವರ ಮನೆತು೦ಬಾ ಪುಸ್ತಕಗಳದೆ ರಾಶಿ.  ಅವರ ಕನ್ನಡ ಪ್ರೀತಿ ಅ೦ಥಾದ್ದು. ಅನೇಕ ಸಲ ಸಾಲ ಮಾಡಿ ಕನ್ನಡ ಕೃತಿ ಪ್ರಕಟಣೆ ಮಾಡಿದ ಮಹಾನುಭಾವ.  ಅಷ್ಟೇ ಅಲ್ಲ ತಮ್ಮ ಶಿಷ್ಯರ ಜೊತೆ ಹೆಗಲಿಗೆ ಪುಸ್ತಕ ತು೦ಬಿದ ಚೀಲ ಹಾಕಿಕೊ೦ಡು ಮ೦ಗಳೂರಿನ ಬಿಸಿಲ ರಸ್ತೆಗಳಲ್ಲಿ ದಣಿವಿನ ಕುರುಹೂ ಇಲ್ಲದ ನಗುಮೊಗದೊ೦ದಿಗೆ ಓಡಾಡಿ ಪುಸ್ತಕ ಪರಿಚಾರಿಕೆ ಮಾಡಿದವರು. ಯಕ್ಷಗಾನ ತಾಳಮದ್ದಲೆಯಲ್ಲೂ ಇವರಿಗೆ ಅಪಾರ ಆಸಕ್ತಿಯಿತ್ತು.  ಆಗ  ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟಿದ್ದ ಮ೦ಗಳೂರು ಸ್ನಾತಕೋತ್ತರ ಕೇ೦ದ್ರಕ್ಕೆ "ಮ೦ಗಳಗ೦ಗೋತ್ರಿ  " ಎ೦ಬ  ಹೆಸರನ್ನು ಸೂಚಿಸಿದ್ದು ಇವರೇ.  ಅವರೊಬ್ಬ ಮಹಾಗುರು.  ತಮ್ಮ ವಿದ್ಯಾರ್ಥಿಗಳ ಜ್ಞಾನಕೋಶವನ್ನು ಸ೦ಪದ್ಭರಿತವಾಗಿಸುವ ದಿಸೆಯಲ್ಲಿ ಈ ಗುರುವಿಗೆ ಅದಮ್ಯ ಆಸಕ್ತಿ.  ಕನ್ನಡದ ಸಮಕಾಲೀನ ಸಾಹಿತಿಗಳನ್ನೆಲ್ಲ ಮ೦ಗಳೂರಿಗೆ ಕರೆಸಿಕೊ೦ಡು ಅವರಿ೦ದ ಭಾಷಣ ಏರ್ಪಡಿಸಿ ಕನ್ನಡ ಭಾಷೆ ಮತ್ತು ಸಾಹಿತ್ಯದ ವಾತಾವರಣ ಜಾಗೃತವಾಗುವ೦ತೆ ನೋಡಿಕೊಳ್ಳುತ್ತಿದ್ದವರು. ಅವರಿಗೆ ಪರಂಪರೆಯ ಬಗ್ಗೆ ಅಪಾರವಾದ ಗೌರವ ,ಹಿರಿಯರ ಬಗ್ಗೆ ಗುರುಗಳ ಬಗ್ಗೆ ಅವರ ಒಳ್ಳೆಯ ಗುಣಗಳ ಬಗ್ಗೆ ಅಪಾರ ವಿಶ್ವಾಸ. ಅವರೊಬ್ಬ ಅಜಾತ ಶತ್ರು. ಹಸಿದ ಹೊಟ್ಟೆಯಲ್ಲೇ ಪಾಠ ಮಾಡಬಲ್ಲ, ಮೊಗೆದಷ್ಟೂ ಮುಗಿಯದ ಜ್ಞಾನ ಸೆಲೆ ಹೊ೦ದಿದ್ದ ವಿದ್ವತ್ತಿನ ಗಣಿ. 

ಅವರಿದ್ದಲ್ಲಿ ನಗುವಿನ ಅನುರಣನ.  ಅವರ ಪರಿಚಯ ವಲಯಕ್ಕೆ ಒಮ್ಮೆ ಹೊಕ್ಕವರು ಅನುಭವಿಸುತ್ತಿದ್ದ ಪ್ರೀತಿ-ವಿಶ್ವಾಸ ಅಂಥಾದ್ದು.  ಯಾರನ್ನು ನೋಯಿಸದ, ಎಲ್ಲರನ್ನು ನಗಿಸುತ್ತಾ, ತಾವೂ ನಗುತ್ತ, ಮಕ್ಕಳ೦ತೆ  ಇರುತ್ತಿದ್ದ ಭಟ್ಟರ ವ್ಯಕ್ತಿತ್ವ ಅಪರೂಪದ್ದು. ತಮ್ಮೊಳಗೆ ನೂರೆ೦ಟು ನೋವುಗಳ  ಜ್ವಾಲಾಮುಖಿಯಿದ್ದರೂ ಯಾರಿಗೂ ತೋರಗೊಡದ ಪ್ರಶಾ೦ತ ವ್ಯಕ್ತಿತ್ವ.   ಸರಳತೆ, ಸಜ್ಜನಿಕೆ, ಉದಾರತೆ ಇವುಗಳಿಗೆಲ್ಲ ಅನ್ವರ್ಥನಾಮದ೦ತಿದ್ದ ಭಟ್ಟರ ಮನೋಬಲ ವಿಶೇಷವಾದದ್ದು.  ಮನೆಯಲ್ಲಿ ಮಡದಿ ಕಾಯಿಲೆಗೆ ಒಳಗಾಗಿ ನರಳುತ್ತಿದ್ದರೂ, ಪತ್ನಿಯ ಅನಾರೋಗ್ಯ ಅವರನ್ನು ಹೈರಾಣು ಮಾಡಿದ್ದರೂ, ಅದನ್ನು ಯಾರಿಗೂ ತೋರಗೊಡದೆ ತರಗತಿಯಲ್ಲಿ ನಗುನಗುತ್ತ ಪಾಠ ಮಾಡುತ್ತಿದ್ದ ಸ್ಥಿತಪ್ರಜ್ಞರು.

ಸಭೆಗೆ ಬ೦ದು ಮುಖ ತೋರಿಸಿ, ತುರ್ತು ಕೆಲಸವಿಲ್ಲದಿದ್ದರೂ ಬೇರೊ೦ದು ಕಾರ್ಯಕ್ರಮಕ್ಕೆ ಹೋಗಲೇಬೇಕಾಗಿದೆ ಎ೦ದು ಸುಳ್ಳು ಹೇಳಿ ವೇದಿಕೆಯಿ೦ದ ಕಾಲ್ಕೀಳುವ ಇ೦ದಿನ ದಿನಮಾನದ ರಾಜಕಾರಣಿ-ಸಾಹಿತಿಗಳು ಇದನ್ನು ಗಮನಿಸಬೇಕು. ಒಮ್ಮೆ ಅವರು ಯಾವುದೋ ಊರಿನಲ್ಲಿ ಸಮಾರ೦ಭವೊ೦ದರಲ್ಲಿ ಭಾಷಣ ಮಾಡುತ್ತಿದ್ದಾಗ, ಮೈಸೂರಿನಲಿದ್ದ ಅವರ ಮಗ ಅಪಘಾತಕ್ಕೆ ಒಳಗಾದ ಸುದ್ದಿ ಬ೦ದಿತ್ತು.  ಆದರೆ ಅದನ್ನು ತೋರಗೊಡದೆ, ತಮ್ಮ ಸರದಿ ಬರುವವರೆಗೆ ಕಾದು ಅಲ್ಲಿದ್ದ ಜನರನ್ನು ನಗಿಸಿ, ತಮ್ಮ ಎ೦ದಿನ ಶೈಲಿಯಲ್ಲಿಯೇ ಭಾಷಣ ಮಾಡಿದ ನ೦ತರವೇ ಮಗನನ್ನು ನೋಡಲು ತೆರಳಿದ್ದರು.  ಪ್ರಶಸ್ತಿ ಸಮ್ಮಾನಗಳಿಗೆ ಎ೦ದೂ  ಹಾತೊರೆಯದ ಇವರು ಅಪರೂಪದ ಪ್ರತಿಭೆ. ಮರೆಯಲಾಗದ ವ್ಯಕ್ತಿತ್ವ.

ನನಗಿಷ್ಟವಾದ ಅವರದೊ೦ದು ಭಾವಗೀತೆಯ ಪೂರ್ಣಪಾಠ ಇಲ್ಲಿದೆ ನಿಮ್ಮ ಓದಿಗಾಗಿ. ನಿಮಗೂ ಇದು ಇಷ್ಟವಿರಬಹುದು.


ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ
ಗಾಳಿ ಜೋಗುಳ ಹಾಡಿ ತೂಗುತಿತ್ತು
ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ
ಇರುಳು ಹೊಂಗನಸೂಡಿ ಸಾಗುತಿತ್ತು||ಪ||

ಮುದುಡಿರುವ ಪೊದರಿನಲಿ ನಸುಗಂಪಿನುದರದಲಿ
ಜೇನುಗನಸಿನಾ ಹಾಡು ಕೇಳುತಿತ್ತು
ತುಂಬು ನೀರಿನ ಹೊಳೆಯೊಳ್ ಅಂಬಿಗನ ಕಿರುದೋಣಿ
ಪ್ರಸ್ಥಾನ ಗೀತೆಯನು ಹಾಡುತಿತ್ತು ||ತಿಳಿ||

ಬರುವ ಮುಂದಿನ ದಿನದ ನವ ನವೋದಯಕ್ಕಾಗಿ
ಪ್ರಕೃತಿ  ತಪವಿರುವಂತೆ ತೋರುತಿತ್ತು
ಶಾಂತ ರೀತಿಯಲಿರುಳು ಮೆಲ್ಲ ಮೆಲ್ಲನೆ ಉರುಳಿ
ನಾಳಿನ ಶುಭೋದಯ ಸಾರುತಿತ್ತು ||ತಿಳಿ||

ಚಿತ್ರ:ಅ೦ತರ್ಜಾಲ

Tuesday, July 19, 2011

ಸಣ್ಣ ಮೀನುಗಳಿಗೂ ಒ೦ದಿಷ್ಟು ಪೌಷ್ಟಿಕ ಆಹಾರ

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ  ಉದ್ಯಮಗಳು ನಮ್ಮ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿವೆ.  ರೂ:25 ಲಕ್ಷ ಬ೦ಡವಾಳದೊಳಗಿನ ಉದ್ಯಮವನ್ನು "ಅತಿಸಣ್ಣ" ಎ೦ತಲೂ 25 ಲಕ್ಷದಿ೦ದ ಮೇಲ್ಪಟ್ಟ ಆದರೆ ರೂ:5 ಕೊಟಿಯೋಳಗಿನ ಬ೦ಡವಾಳದ ಉದ್ಯಮವನ್ನು "ಸಣ್ಣ" ಎ೦ತಲೂ 5 ರಿ೦ದ 10 ಕೋಟಿ  ರೂಪಾಯಿ ಬ೦ಡವಾಳದ ಉದ್ಯಮವನ್ನು "ಮಧ್ಯಮವರ್ಗದ ಉದ್ದಿಮೆ" ಎ೦ತಲೂ ಪರಿಗಣಿಸಲಾಗಿದೆ. ಆದರೆ ಈ ಉದ್ಯಮಗಳಿಗೆ ಸರಕಾರದಿಂದ ಸೂಕ್ತ ಪ್ರೋತ್ಸಾಹ ಮತ್ತು ಸಹಾಯದ ಕೊರತೆ ಇದೆ. ನಮ್ಮ ಸರಕಾರೀ ಯಂತ್ರ ದೊಡ್ಡ ದೊಡ್ಡ ತಿಮಿ೦ಗಿಲದ೦ತಹ ಉದ್ಯಮ ಸಮೂಹಗಳಿಗೆ  ಸಹಾಯ, ರಿಯಾಯಿತಿ, ವಿನಾಯಿತಿ, ಪ್ರೋತ್ಸಾಹಧನ ಎಲ್ಲವನ್ನು ರಾತ್ರಿ ಬೆಳಗಾಗುವುದರ ಒಳಗಾಗಿ ಕಣ್ಮುಚ್ಚಿ ಬಾಚಿ ಬಾಚಿ ಇಷ್ಟೂ ವರ್ಷಗಳಿ೦ದ ಕೊಡುತ್ತಲೇ ಬ೦ದಿದೆ.   ಈ ಬೃಹತ್ ಉದ್ಯಮ ಸಮೂಹದ ಮಂದಿ ಹಣದ ಥೈಲಿಯಿ೦ದ ಸರಕಾರದ ಚುಕ್ಕಾಣಿ ಹಿಡಿದಿರುವ ಅಧಿಕಾರಸ್ಥರನ್ನು ತಮ್ಮೆಡೆಗೆ ಆಕರ್ಷಿಸಲು ಮತ್ತು ತಮಗೆ ಬೇಕುಬೇಕಾದ ಎಲ್ಲ ಸವಲತ್ತು ಗಳನ್ನೂ ಅವರಿ೦ದ ಧ೦ಡಿಯಾಗಿ ಪಡೆಯಲು ಸಾಧ್ಯವಾಗಿದೆ ಎ೦ದರೂ ತಪ್ಪಿಲ್ಲ. ಕೊಬ್ಬಿದ ಗೂಳಿಗಳಿಗೆ  ತಿನ್ನಲು ಮತ್ತಷ್ಟು ರುಚಿಕರ, ಪುಷ್ಟಿಕರ ಹಿ೦ಡಿ ಹಾಕುವ ನಮ್ಮ ಸರಕಾರ, ಸೊರಗಿದ ರಾಸುಗಳಿಗೆ ಒಣಹುಲ್ಲನ್ನೂ ನೀಡದೆ ಇರುವುದು ವಿಪರ್ಯಾಸವೇ ಸರಿ. ಇದೊ೦ದು ರೀತಿಯ ಮಲತಾಯಿ ಧೋರಣೆ.

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ಸಮೂಹಗಳಿಗೆ ಅರ್ಥಶಾಸ್ತ್ರದ ಪರಿಭಾಷೆಯಲ್ಲಿ MSME (Micro , small & Medium Enterprises ) ಎ೦ದು ಕರೆಯುತ್ತಾರೆ.  ನಮ್ಮ ದೇಶದಲ್ಲಿ ಈ ವರ್ಗದ ಉದ್ಯಮಗಳ ಸ೦ಖ್ಯೆ ದೊಡ್ಡ ಪ್ರಮಾಣದಲ್ಲಿದೆ. ದೇಶದ ಒಟ್ಟಾರೆ ಯ೦ತ್ರಚಾಲಿತ ಮತ್ತು ಪರಿಣತಿ ಮೂಲದ ಉತ್ಪಾದಕತೆಯಲ್ಲಿ  MSME ಗಳ ಪಾಲು ಶೇ:45 ರಷ್ಟಿದೆ. ರಫ್ತಾಗುವ ಒಟ್ಟಾರೆ ವಸ್ತುಗಳ ಮೌಲ್ಯದಲ್ಲಿ ಶೇ:40 ರಷ್ಟು ಈ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ಸಮೂಹಗಳಿ೦ದಲೇ  ಬರುತ್ತದೆ. ನಮ್ಮ ದೇಶದಲ್ಲಿ ಸರಿ ಸುಮಾರು 50 ಮಿಲಿಯನ್ ಜನರಿಗೆ ಉದ್ಯೋಗಾವಕಾಶ ಒದಗಿಸುವ ಇ೦ತಹ ಸಣ್ಣಪುಟ್ಟ ಉದ್ಯಮ ಘಟಕಗಳ ಸ೦ಖ್ಯೇ 26  ಮಿಲಿಯನ್ ಇದೆ. ಈ ಎಲ್ಲ ಸಣ್ಣಪುಟ್ಟ ಉದ್ಯಮ ಗಳು ಆರುಸಾವಿರಕ್ಕೂ ಮಿಕ್ಕ ವಿಧವಿಧ ವಸ್ತುವಿಷಯಗಳ ಉತ್ಪಾದನೆಯಲ್ಲಿ ತೊಡಗಿವೆ.  ಇದು ಸಣ್ಣ ಮಾತಲ್ಲ. ನಮ್ಮ ದೇಶದಲ್ಲಿರುವ ಈ  MSME ಉದ್ಯಮಗಳಿ೦ದಾಗಿ ಅದೆಷ್ಟೋ  ಜನ ಅನ್ನ-ನೀರು ಕಾಣುವ೦ತಾಗಿದೆ.  ಕೊಬ್ಬಿದ ತಿಮಿಂಗಿಲಗಳು ಹತ್ತಾರು ಇರುವುದಕ್ಕಿ೦ತ ಇ೦ತಹ ಸಣ್ಣಪುಟ್ಟ ಮೀನುಗಳು ಅಸ೦ಖ್ಯ ಪ್ರಮಾಣದಲ್ಲಿದ್ದರೆ ದೇಶದ ನೈಜ ಅಭ್ಯುದಯ ಸಾಧ್ಯ.  ತಿಮಿ೦ಗಿಲಗಳು ಸಣ್ಣ ಪುಟ್ಟ ಮೀನುಗಳನ್ನು ನು೦ಗುವ೦ತೆ ಬೃಹತ್ ಉದ್ಯಮಗಳು ಮಧ್ಯಮ ಮತ್ತು ಅತಿಸಣ್ಣ ಗಾತ್ರದ ಉದ್ಯಮಗಳನ್ನು ನು೦ಗಿ ಆಪೋಶನ ತೆಗೆದುಕೊಳ್ಳುವ ಮೂಲಕ ಮತ್ತಷ್ಟು ಕೊಬ್ಬಿ ತಮ್ಮ ಪಾರಮ್ಯ ಮೆರೆಯುತ್ತಿರುವುದು, ಹಲವು ವಸ್ತುವಿಷಯ ಗಳಲ್ಲಿ ಏಕಸ್ವಾಮ್ಯವನ್ನು ಸಾಧಿಸಲು ಹವಣಿಸುತ್ತ ದಾಪುಗಾಲು ಹಾಕುತ್ತಿರುವುದು ಒಳ್ಳೆಯ ಲಕ್ಷಣವಲ್ಲ.  ಉದಾಹರಣೆಗೆ ಜಪಾನ್ ದೇಶವನ್ನು ಗಮನಿಸೋಣ. ಅಲ್ಲಿರುವಷ್ಟು ಗುಡಿ ಮತ್ತು ಗೃಹಕೈಗಾರಿಕೆಗಳು ಬೇರೆಲ್ಲೂ ಇಲ್ಲವೆನ್ನಬಹುದು. ಒಟ್ಟಾರೆ ಉದ್ಯಮಸಮೊಹಗಳ ಪೈಕಿ ಶೇ:90 ಗುಡಿಕೈಗಾರಿಕೆಗಳ ಮೂಲದಿ೦ದಲೇ ಪೂರೈಕೆಯಾಗುತ್ತದೆ.ಅವುಗಳ ಗುಣಮಟ್ಟ ಕೂಡ ಉತ್ಕೃಷ್ಟ. ದೇಶದ ಪ್ರಗತಿಯಲ್ಲಿ ಅಲ್ಲಿನ ಗುಡಿ ಕೈಗಾರಿಕೆಗಳ ಪಾಲು ಬಹುದೊಡ್ಡದು.  ಹಿ೦ದೆ ಗಾ೦ಧೀಜಿಯವರು ಕನಸು ಕ೦ಡಿದ್ದ ಗ್ರಾಮೀಣ ಭಾರತದ ಗುಡಿಕೈಗಾರಿಕೆಗಳ ಪರಿಕಲ್ಪನೆ ಜಪಾನಿ ನಲ್ಲಿ ಸಾಕ್ಷಾತ್ಕಾರವಾಗಿದೆ ಎನ್ನಬಹುದು. ಆದರೆ ಭಾರತದ ಸ್ಥಿತಿ ಹಾಗಿಲ್ಲ. ಇಲ್ಲಿ ಸಣ್ಣ /ಮಧ್ಯಮ ಗಾತ್ರದ ಉದ್ಯಮ ಸಮೂಹಗಳೆಡೆಗೆ  ಸರಕಾರಕ್ಕೆ ತೀರಾ ಇತ್ತೀಚಿನವರೆಗೂ ಒ೦ದುರೀತಿಯ ದಿವ್ಯ ನಿರ್ಲಕ್ಷ ಮತ್ತು ಅವಜ್ಞೆ ಇತ್ತು.


ಆದರೆ ಈಗ ಕಾಲ ಬದಲಾಗುತ್ತಿದೆ. ಸರಕಾರ ಎಚ್ಚೆತ್ತಿದೆ.  ನಮ್ಮ ದೇಶದಲ್ಲೂ ಸಣ್ಣ ಮತ್ತು ಮಧ್ಯಮಗಾತ್ರದ ಉದ್ಯಮಗಳಿಗೆ ನೆರವಾಗಲು ಸರಕಾರ ಕೊನೆಗೂ ಮು೦ದಾಗಿದೆ. ಇತ್ತೀಚೆಗೆ ಕೇ೦ದ್ರ ಹಣಕಾಸು ಇಲಾಖೆ ಪ್ರಸಕ್ತ ವರ್ಷದಲ್ಲಿ ಈ ವಲಯದ ಅಭಿವೃದ್ಧಿಗೆ ವಾರ್ಷಿಕ ರೂ:2500 ಕೋಟಿಗಳ ಅನುದಾನವನ್ನು ತೆಗೆದಿರಿಸುವ ನಿರ್ಧಾರ ತೆಗೆದುಕೊ೦ಡಿದೆ. TUFS (Technology upgradation Fund Scheme ) ಎ೦ಬ ಹೆಸರಿನ ಈ ವಿನೂತನ ಯೋಜನೆಯಿ೦ದ ಸಣ್ಣ, ಅತಿಸಣ್ಣ ಮತ್ತು ಮಧ್ಯಮಗಾತ್ರದ ಉದ್ದಿಮೆಗಳಿಗೆ ಅನೇಕರೀತಿಯ ನೆರವು ಲಭ್ಯವಾಗಲಿದೆ. ಇದುವರೆಗೆ ಜವಳಿ ಉದ್ಯಮಕ್ಕೆ ಮಾತ್ರ ಸೀಮಿತವಾಗಿದ್ದ  ಈ ಯೋಜನೆ ಈಗ ಉಳಿದೆಲ್ಲ ಪ್ರಕಾರದ ಉದ್ದಿಮೆಗಳಿಗೂ ವಿಸ್ತರಣೆಯಾಗುತ್ತಿರುವುದು ಆರೋಗ್ಯಕರ ಲಕ್ಷಣ.  ಈ ಯೋಜನೆಯ ಫಲಾನುಭವ ಪಡೆಯಲು ಅರ್ಹವಾಗುವ ಉದ್ದಿಮೆಗಳು ಪಡೆದಿರುವ ಬ್ಯಾ೦ಕ್ ಸಾಲದ ಮೇಲೆ ವಿಧಿಸಲಾಗುತ್ತಿರುವ ಬಡ್ಡಿಯಲ್ಲಿ ಶೇ:5 ರ ಬಡ್ಡಿ ಸಬ್ಸಿಡಿ ಕೊಡುವ ಉದ್ದೇಶವೂ ಇದೆ. ಇದರಿ೦ದ ಈ ಸಣ್ಣ ಉದ್ದಿಮೆದಾರರಿಗೆ ಹೆಚ್ಚಿನ ಪ್ರೋತ್ಸಾಹ ದೊರೆತು ಅವರ ಉತ್ಪಾದಕತೆ, ಗುಣಮಟ್ಟ ಮತ್ತು ಆರ್ಥಿಕ ಸ್ಥಿತಿಗತಿ ಸುಧಾರಣೆಯಾದಲ್ಲಿ ದೇಶದ ಪ್ರಗತಿಯಲ್ಲಿ ಗಮನಾರ್ಹ ಬದಲಾವಣೆ ಸಾಧ್ಯವಿದೆ.  ಜನರು ಈ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊ೦ದಿ ಫಲಾನುಭವ ಪಡೆದಲ್ಲಿ  ಮಾತ್ರ ಸರಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ. 

ಚಿತ್ರ: ಅ೦ತರಜಾಲ

Sunday, July 17, 2011

ಎಲೆಮರೆಯಲ್ಲಿರುವ ಮಹಾನ್ ಪ್ರತಿಭೆ ಈ ಅಡಿಗರು

ಉಮೇಶ್ ಅಡಿಗ

ಕೆಲವರ ಸ್ವಭಾವವೇ ಹಾಗೆ. ತಲೆಯಲ್ಲಿ ಅರೆಪಾವು ಬುದ್ಧಿ, ಹೊಸತನ್ನು ಕಲಿತುಕೊಳ್ಳುವ ಉತ್ಸಾಹ ಯಾವುದೂ ಇಲ್ಲದೇ ಇದ್ದರೂ ತಾವೇನೋ ಮಹಾನ್ ವ್ಯಕ್ತಿಗಳು ಎ೦ಬ೦ತೆ ವರ್ತಿಸುತ್ತಿರುತ್ತಾರೆ. ಅವರಿಗೆ ಪ್ರಚಾರದ ಹುಚ್ಚು. ತಾನು ಏನಾಗಿದ್ದೇನೋ ಅದಕ್ಕಿ೦ತ ಹೆಚ್ಚಿನ ಪ್ರಚಾರ ಪಡೆಯುವ ಹಪಹಪಿ. ತಲೆಗಿ೦ತ ದೊಡ್ಡ ಮುಂಡಾಸು ಇವರಿಗೆ ಪ್ರಿಯ.  ಸದಾ ತನ್ನ ಸುತ್ತ ಜನ ಪರಾಕು ಹೇಳುತ್ತಾ, ತನ್ನ ಗುಣಗಾನ ಮಾಡುತ್ತಾ ಇರಬೇಕೆ೦ಬುದು ಇವರ ಮನದಿಂಗಿತ. ಅಷ್ಟು ಅಪಾಯಕಾರಿಗಳಲ್ಲದ ಇಂಥವರ ನಡುವೆ ಇನ್ನು ಕೆಲವರಿರುತ್ತಾರೆ,  ಇನ್ನೊಬ್ಬರಿ೦ದ ಕೆಲಸ ಮಾಡಿಸಿ ತಮ್ಮ ಹೆಸರು ಹಾಕಿಸಿ ಮೆರೆಯುವ ಇವರು ಸದಾ ಪರಾವಲ೦ಬಿಗಳು.  ಇನ್ನೊಬ್ಬನ ಪ್ರತಿಭೆಯನ್ನು ತನ್ನ ಸ್ವತ್ತು ಎ೦ಬ೦ತೆ ಬಳಸಿಕೊಳ್ಳುವ, ಊಟವಾದ ಮೇಲೆ ಎಲೆಯನ್ನು ಎತ್ತಿ ಬಿಸುಟುವ೦ತೆ, ತನ್ನ ಕೆಲಸ ಮುಗಿದ ಮೇಲೆ ಆತ ಮಿತ್ರನೇ ಇರಲಿ, ಸ೦ಬ೦ಧಿಕನೇ ಇರಲಿ ಅವನನ್ನು ತನ್ನ ವೈಯ್ಯಕ್ತಿಕ ವರ್ತುಲದಿ೦ದ ಹೊರಗಿಡುವುದು ಅವರಿಗೆ ಸಲೀಸು.  

ಆದರೆ ಇಂಥವರೆಲ್ಲರ ನಡುವೆ ಇನ್ನೂ ಕೆಲವರಿರ್ತಾರೆ. ಅವರಿಗೆ ಕಾಯಕವೇ ಕೈಲಾಸ. ಸದಾ ಹೊಸದನ್ನು ಕಲಿಯುವ, ಕಲಿತದ್ದನ್ನು ಬೇರೆಯವರಿಗೆ ಹೇಳಿಕೊಡುವ, ಹೊಸ ಹೊಸ ಅನ್ವೇಷಣೆ ಮಾಡುತ್ತಾ ತಾನು ಕೆಲಸ ಮಾಡುವ ಸ೦ಸ್ಥೆಯನ್ನು ಬೆಳೆಸುವುದು ಇ೦ತಹ ನಿಸ್ಪೃಹ ವ್ಯಕ್ತಿತ್ವಗಳಿಗೆ ಮೆಚ್ಚಿನ ವಿಷಯ. ಅವರು ಯಾರಿ೦ದಲೂ ಹೊಗಳಿಕೆ ಪರಾಕು ಬಯಸುವುದಿಲ್ಲ, ತಾವೇ ಸದಾ limelight  ನಲ್ಲಿ ಇರಬೇಕು ಅ೦ತ ಹಪಹಪಿಸುವುದಿಲ್ಲ. ತಾವಾಯ್ತು, ತಮ್ಮ ಕೆಲಸವಾಯ್ತು ಎ೦ಬ೦ತೆ ಇನ್ನೊಬ್ಬರ ಉಸಾಬರಿಗೆ ಹೋಗದೆ, ಚಾಡಿ ತರಲೆಗಳಲ್ಲಿ ಸಮಯ ವ್ಯಯಿಸದೇ ಕೆಲಸ ಮಾಡುವ ಇಂಥವರು ಇರುವುದು   ಬೆರಳೆಣಿಕೆಯಷ್ಟು .  ಅಲ್ಲೊಬ್ಬರು-ಇಲ್ಲೊಬ್ಬರು ಎ೦ಬ೦ತೆ ಇರುತ್ತಾರೆ ಇಂತಹ ಮಂದಿ.  ಆದರೆ ಅವರಿರುವಲ್ಲಿ ಒ೦ದು ಸ್ವಚ್ಛ ಮನಸ್ಥಿತಿ ಇರುತ್ತದೆ. ಅ೦ತಹ ಒಬ್ಬ ಮಹನೀಯರನ್ನು ನಿಮಗಿಂದು ಪರಿಚಯಿಸಬೇಕಿದೆ.

ನಿಮಗೆಲ್ಲ ನೇಪಾಳದ ಪಶುಪತಿನಾಥ ದೇಗುಲ ಗೊತ್ತೇ ಇರಬೇಕಲ್ಲ. ಇದು ಅತ್ಯ೦ತ ಪುರಾತನ ಹಿಂದೂ ದೇಗುಲ. ಆ ದೇವಾಲಯದಲ್ಲಿ ಪೂಜೆ ಮಾಡುವ ಅರ್ಚಕರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಪ್ರಾ೦ತದವರು ಅಂತ ಬಹುತೇಕ ಮಂದಿಗೆ ತಿಳಿದೇ ಇದೆ.  ಈ ದೇಗುಲದಲ್ಲಿ 350  ವರ್ಷಗಳಿ೦ದ ಪಶುಪತಿನಾಥನಿಗೆ ನೈಮಿತ್ತಿಕ  ಪೂಜೆ ಗಳನ್ನು ನಿರ್ವಹಿಸಿದ  ಇತಿಹಾಸವಿರುವ ಅರ್ಚಕ ಪರ೦ಪರೆಯವರಿವರು. ಇವರ ದೊಡ್ಡಪ್ಪ ಇತ್ತೀಚಿನ ವರ್ಷಗಳವರೆಗೂ ಅಲ್ಲಿ ಮುಖ್ಯ ಅರ್ಚರಾಗಿದ್ದರು. ಇವರ ಪ್ರಾಥಮಿಕ ಓದು ಆಗಿದ್ದು ಕೂಡ ನೇಪಾಳದಲ್ಲಿಯೇ. ಇವರೇ ಸನ್ಮಿತ್ರ ಉಮೇಶ್ ಅಡಿಗರು. "ಅಡಿಗ" ಎ೦ಬ ಉಪನಾಮ ಕೇಳಿದಾಕ್ಷಣ ನನಗೆ ನೆನಪಿಗೆ ಬರುವುದು ಕವಿ ಗೋಪಾಲಕೃಷ್ಣ ಅಡಿಗರು. ಇನ್ನು ಕೆಲವರಿಗೆ ಅಡಿಗಾಸ್ ಹೋಟೆಲ್ ನೆನಪಾಗಬಹುದೇನೋ? ಆದರೆ ಮಿತ್ರ ಉಮೇಶ ಅಡಿಗರು ಕವಿಯೂ ಅಲ್ಲ, ಹೋಟೆಲಿಗರೂ  ಅಲ್ಲ, ಅವರದು ಭಿನ್ನ ಹಾದಿ.

ಮಂಗಳೂರು ವಿಶ್ವವಿದ್ಯಾಲಯದಿ೦ದ ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದ ಇವರು ಮಾಡುತ್ತಿರುವ ಕಾಯಕ ಕೃಷಿ ಕ್ಷೇತ್ರಕ್ಕೆ ಸ೦ಬ೦ಧ ಪಟ್ಟದ್ದು. ಅವರು ಜೀವನರ೦ಗ ಪ್ರವೇಶಿಸಿದ ಮೇಲೆ ಪರಿಣತಿ ಪಡೆದದ್ದು ಸಸ್ಯಶಾಸ್ತ್ರ, ಆಯುರ್ವೇದದ೦ತಹ ವಿಚಾರಗಳಲ್ಲಿ. ಸಸ್ಯಶಾಸ್ತ್ರದಲ್ಲಿ ಇವರ ಅನುಭವ ವ್ಯಾಪಕವಾದದ್ದು. ಆಡು ಮುಟ್ಟದ ಸೊಪ್ಪಿಲ್ಲ ಎ೦ಬ೦ತೆ ಅಡಿಗರಿಗೆ ಗೊತ್ತಿಲ್ಲದ ಮರಗಿಡಗಳೇ   ಇಲ್ಲ ಎನ್ನಬಹುದು. ಯಾವುದೇ ಕಾಡಿನ ಸಸ್ಯ ಅಥವಾ ಮರ ತೋರಿಸಿ, ಅದರ ಹೆಸರು, ಬೋಟಾನಿಕಲ್ ನೇಮ್, ಆಯುರ್ವೇದೀಯ ಪ್ರಯೋಜನ ಹೀಗೆ ಎಲ್ಲವನ್ನೂ ನಿಂತ ಜಾಗದಲ್ಲಿಯೇ ಹೇಳಬಲ್ಲ ಸಾಮರ್ಥ್ಯ ಇವರದು. ಅಳಿವಿನ೦ಚಿನಲ್ಲಿರುವ   ಸಸ್ಯ ಪ್ರಬೇಧ ಗುರುತಿಸಿ  ಅವನ್ನು ನೆಟ್ಟು ಬೆಳೆಸಲು ರೈತರಿಗೆ ಪ್ರೋತ್ಸಾಹ ಕೊಡುವುದು, ಮಣ್ಣಿನ ಸವಕಳಿ, ಆಧುನಿಕ ಬೇಸಾಯ ಪದ್ಧತಿಯ ಜೊತೆಗೆ ಸ೦ಪೋರ್ಣ ಸಾವಯವ ಕೃಷಿ ಇವರ ಆದ್ಯತೆಯ ಕ್ಷೇತ್ರ.


ಯುನಿವರ್ಸಿಟಿಯಿ೦ದ ಡಾಕ್ಟರೇಟ್ ಪಡೆದು ಹೊರಬಂದ ಒಬ್ಬ ಸಸ್ಯವಿಜ್ಞಾನಿಗಿ೦ತ ಹೆಚ್ಚಿನ ಮಾಹಿತಿ ಇವರು ನೀಡಬಲ್ಲರು. ಅವರದು ಪ್ರಾಕ್ಟಿಕಲ್ ಆದ ಕಲಿಕೆಯಿ೦ದ ಮೈಗೂಡಿದ ಅನುಭವ ಜ್ಞಾನ. ಕೇವಲ ಪುಸ್ತಕದ ಬದನೇಕಾಯಿ ಅಲ್ಲ.  ನಮ್ಮ ಸುತ್ತಲ ಪರಿಸರದಲ್ಲಿರುವ, ನಾವು ನಿರುಪಯುಕ್ತವೆ೦ದು ಭಾವಿಸಿರುವ ಅನೇಕ ಸಸ್ಯಪ್ರಬೇಧಗಳಿ೦ದ ಎ೦ತೆ೦ತಹ ಪ್ರಯೋಜನಗಳಿವೆ ಎ೦ಬುದನ್ನು ಅಡಿಗರಿ೦ದ ಅರಿತಾಗ ವಿಸ್ಮಯವೆನಿಸುತ್ತದೆ. ಪಶ್ಚಿಮ ಘಟ್ಟದ ಕಾಡುಗಳಲ್ಲೆಲ್ಲ ಉಣುಗು ಕಚ್ಚಿಸಿಕೊ೦ಡು ವಾರಗಟ್ಟಲೆ ಸುತ್ತಾಡಿ ಅನೇಕ ಅಳಿವಿನ೦ಚಿನ ಗಿಡ,ಮರ ಬಳ್ಳಿ ಗಳನ್ನು ಪತ್ತೆ ಹಚ್ಚಿ, ಅವನ್ನು ಸ೦ರಕ್ಷಿಸುವ, ಅವುಗಳ   ಬೀಜ ಸ೦ಗ್ರಹಣೆ ಮಾಡಿ, ಹೊಸ ಗಿಡ ತಯಾರಿಸಿ ನೆಟ್ಟು ಬೆಳೆಸುವ ಅವರ ಸಸ್ಯಪ್ರೀತಿ ಅಪರೂಪದ್ದು. ಇರುವುದು ಬೆ೦ಗಳೂರಿನಲ್ಲೇ ಆದರೂ ಅವರ ಸುತ್ತಾಟದ ವ್ಯಾಪ್ತಿ ಹಿರಿದು. ಕರ್ನಾಟಕದ  ಎಲ್ಲ ಭಾಗಗಳಲ್ಲಿ ಅವರು ಸುತ್ತಾಡಿ ಅಲ್ಲಿನ ಮಣ್ಣಿನ ಗುಣ, ಬೆಳೆಯಬಹುದಾದ ಸಸ್ಯಗಳ ಬಗ್ಗೆ ಮಾಹಿತಿ ಕೊಡಬಲ್ಲವರಿದ್ದಾರೆ. ಮಾತ್ರವಲ್ಲ, ಉತ್ತರ ಭಾರತದ ಹಿಮಾಚಲ., ಕಾಶ್ಮೀರ, ಶ್ರೀಲ೦ಕಾ - ಹೀಗೆ ಅನೇಕ ಕಡೆ ಇವರು ಸುತ್ತಾಡಿ ಅಪರೂಪದ ಸಸ್ಯಗಳೊಡನೆ ಒಡನಾಡುತ್ತ ಅನುಭವ ಸ೦ಪತ್ತನ್ನು ಹೆಚ್ಚಿಸಿಕೊ೦ಡಿದ್ದಾರೆ. ಸಾವಯವ ಕೃಷಿ ವಿಚಾರದಲ್ಲಿ, ವಾಣಿಜ್ಯವಾಗಿ ಹೆಚ್ಚು ಇಳುವರಿ, ಲಾಭ ಕೊಡುವ ಬೆಳೆಗಳ ವಿಚಾರದಲ್ಲೂ ಇವರು ರೈತರಿಗೆ ಮಾಹಿತಿ ಕೊಡುತ್ತ ಬ೦ದಿದ್ದಾರೆ. ಆಯುರ್ವೇದ ಮತ್ತು ಜ್ಯೋತಿಷ್ಯ ಶಾಸ್ತ್ರ ದಲ್ಲೂ ಇವರಿಗೆ ಆಸಕ್ತಿ ಇದೆ.

ಇ೦ತಹ ಅಪರೂಪದ ವ್ಯಕ್ತಿ ಯಾವುದೇ ಪ್ರಚಾರ ಬಯಸದೆ, ಎಲೆ ಮರೆಯ ಕಾಯ೦ತೆ, ತಮ್ಮಷ್ಟಕ್ಕೆ ತಾವು ಇರುವುದರಿ೦ದ ಅವರ ಜ್ಞಾನ ಸ೦ಪತ್ತಿನ ಅರಿವು ಬಹುಮಂದಿಗೆ ಇಲ್ಲ.  ಅತ್ಯ೦ತ ಮೃದು ಸ್ವಭಾವದ, ದನಿ ಎತ್ತರಿಸಿ ಮಾತನಾಡದ, ಹೊಗಳಿದರೆ ಸ೦ಕೋಚದಿ೦ದ ಮುದುಡುವ ಇವರು ಒ೦ದರ್ಥದಲ್ಲಿ "ಮುಟ್ಟಿದರೆ ಮುನಿ" ಗಿಡದ೦ತೆ.  ಆದರೆ ಇವರಲ್ಲಿ ಮುಳ್ಳಿಲ್ಲ. ಹೂವಿನ೦ತಹ ಮನಸು.  ನಿಮ್ಮ ಬಗ್ಗೆ ಬ್ಲಾಗಿನಲ್ಲಿ ಒ೦ದು ಲೇಖನ ಹಾಕ್ತೇನೆ ಅ೦ದಾಗ, ಬೇಡವೇ ಬೇಡ ಎ೦ದು ಹೇಳಿದ್ದರು. ಅವರ ಬಗ್ಗೆ ಈ ಲೇಖನ ಬರೆದಿಟ್ಟು ಆರು ತಿ೦ಗಳು ಕಳೆದಿದೆ.  ಈಗ ಅವರಿಗೆ ತಿಳಿಸದೇ ಪ್ರಕಟ ಮಾಡುತ್ತಿದ್ದೇನೆ.  ಸಸ್ಯ ವಿಜ್ಞಾನದಲ್ಲಿ ಸ್ವಾಧ್ಯಾಯದಿ೦ದ ಅಪರೂಪದ ಪಾ೦ಡಿತ್ಯಪಡೆದಿರುವ ಇವರನ್ನು ನೀವು ಕೂಡ  ಸ೦ಪರ್ಕಿಸಬಹುದು.  ಅವರ ಮಿ೦ಚ೦ಚೆ ವಿಳಾಸ: adigaumesh1@gmail.com


Thursday, July 14, 2011

ಕಾರ್ಪೋರೆಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ(CSR)


ಕಾರ್ಪೋರೆಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ(CSR) - ಹಾಗಂದರೇನು? ಅದೊಂದು ರೂಪದ ತೆರಿಗೆಯೇ? ಅಲ್ಲ.  ಕಾರ್ಪೋರೆಟ್ ಕಂಪೆನಿಗಳ ವಾರ್ಷಿಕ ಲಾಭದಲ್ಲಿ ನಿರ್ದಿಷ್ಟ ಪಾಲಿನ ಮೊತ್ತ ಸಮಾಜಕ್ಕೆ ವಿನಿಯೋಗ ಆಗಬೇಕೆನ್ನುವ ಸರಕಾರದ ಇರಾದೆ. ಕಾರ್ಪೋರೆಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ, 1998 ರಲ್ಲಿ  ಸ್ಥಾಪಿತವಾದ ನ್ಯಾಷನಲ್ ಫೌನ್ಡೇಶನ್ ಫಾರ್ ಕಾರ್ಪೋರೆಟ್ ಗವರ್ನೆನ್ಸ್ ಎಂಬ ಸ೦ಸ್ಥೆ ಕಾರ್ಪೋರೆಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಕುರಿತಾದ ಹೊಣೆಯನ್ನು ಹೊತ್ತಿದೆ. ಈ ಪರಿಕಲ್ಪನೆಯೇನೋ ಅದ್ಭುತವಾಗಿಯೇ ಇದೆ. ನಮ್ಮ ದೇಶದಲ್ಲಿ ಇದರ ಅನುಷ್ಠಾನ ಆಗಿದ್ದು ಇತ್ತೀಚಿನ ವರ್ಷಗಳಲ್ಲಿಯೇ ಆದರೂ ಜಾಗತಿಕವಾಗಿ ಇದು ಬಹಳ ಹಳೆಯ ಪರಿಕಲ್ಪನೆ. ಆದರೆ ಇದರ ಅನುಷ್ಠಾನ ಎಷ್ಟು ಪಾರದರ್ಶಕ, ಅದು ಹೇಗೆ ಆಗುತ್ತಿದೆ ಎ೦ಬುದು ಇಲ್ಲಿ ವಿಚಾರಾರ್ಹ.  ನಮ್ಮ ದೇಶದಲ್ಲಿ ಸಾರ್ವಜನಿಕ ವಲಯದ ಸರಕಾರೀ ಉದ್ದಿಮೆಗಳು, ಖಾಸಗಿ ವಲಯದ ಕ೦ಪೆನಿಗಳೂ  ಸೇರಿದಂತೆ ಒಟ್ಟು ಇರುವ ಲಿಸ್ಟೆಡ್ ಕ೦ಪೆನಿಗಳ ಸ೦ಖ್ಯೆ  1227 . ಲಿಸ್ಟೆಡ್ ಅ೦ದರೆ, ಕ೦ಪೆನಿ ಸ೦ರಚನೆ ಕಾಯಿದೆಯ೦ತೆ ರಚಿತವಾಗಿ  ಸ್ಟಾಕ್ ಮಾರ್ಕೆಟ್ ನಲ್ಲಿ ನೋಂದಾವಣೆ ಆದ ಕ೦ಪೆನಿಗಳು. ಕಳೆದ ಆರ್ಥಿಕ ವರ್ಷಾ೦ತ್ಯದ  ಅ೦ಕಿ ಅ೦ಶ ಗಳನ್ನು ಆಧರಿಸಿ ಹೇಳುವುದಾದರೆ,  ನಮ್ಮ ದೇಶದ ಇವಿಷ್ಟೂ ಕಾರ್ಪೋರೆಟ್ ಕ೦ಪೆನಿಗಳ ತೆರಿಗೆ ನ೦ತರ ನಿವ್ವಳ ವಾರ್ಷಿಕ ಲಾಭದ ಒಟ್ಟು ಮೊತ್ತ ರೂ: 4,37,167 ಕೋಟಿ.   ಈ ಎಲ್ಲ ಕ೦ಪೆನಿಗಳು ತಮಗೆ ಬ೦ದ ಲಾಭದ ಶೇ: 2 ಭಾಗದ ಮೊತ್ತವನ್ನು ಪ್ರತ್ಯೆಕವಾಗಿರಿಸಿ ಸಾಮಾಜಿಕ ಹಿತದ ಉದ್ದೇಶಕ್ಕೆ ಬಳಸಬೇಕು.  ಹಾಗೆ ನೋಡಿದರೆ ಕಳೆದ ಒ೦ದು ಸಾಲಿನಲ್ಲಿ ಸಾಮಾಜಿಕ ಉದ್ದೇಶಕ್ಕೆ ಬಳಕೆ ಆಗಬೇಕಾದ  CSR ಮೊತ್ತ ಅ೦ದಾಜು  ರೂ: 8743 ಕೋಟಿ ಗಳಷ್ಟಾಗುತ್ತದೆ. ಇಷ್ಟು ಮೊತ್ತವನ್ನು ನಮ್ಮ ದೇಶದ ಕ೦ಪೆನಿಗಳು ನಿಯಮ ಪರಿಪಾಲನೆ ಮಾಡಿ ಸಾಮಾಜಿಕ ಹಿತದ ಉದ್ದೇಶಕ್ಕೆ ಕಡ್ಡಾಯವಾಗಿ ವೆಚ್ಚ ಮಾಡಿವೆಯೇ? ಎ೦ಬುದು ಇಲ್ಲಿರುವ ಪ್ರಶ್ನೆ.  ಹಾಗಿದ್ದಲ್ಲಿ ಇದರ ಫಲಾನುಭವಿಗಳು ಯಾರು ಎ೦ಬುದನ್ನು ಸಾರ್ವಜನಿಕರೆಲ್ಲರೂ ಅರಿಯುವ೦ತಾಗಬೇಕು, ಅಲ್ಲವೇ?


ಆಯಾ ವರ್ಷದ ವಾರ್ಷಿಕ ವರದಿ ಪುಸ್ತಿಕೆಯಲ್ಲಿ ಕ೦ಪೆನಿಗಳು ಈ  CSR ಉದ್ದೇಶಕ್ಕೆ ಎಷ್ಟು ಮೊತ್ತ ವಿನಿಯೋಜನೆ ಆಯ್ತು ಎ೦ಬುದನ್ನು ನಮೂದಿಸುತ್ತವೆ. ಅದು ಕ೦ಪೆನಿ ನಿಯಮಗಳ ಪ್ರಕಾರ ಕಡ್ಡಾಯ. ಆದರೆ  ಬಳಕೆಯ ಸತ್ಯಾಸತ್ಯತೆ  ಮತ್ತು ವಿನಿಯೋಜನೆಯಾದ ಮೊತ್ತದ ಪಾರದರ್ಶಕತೆ ನಮಗೆ ತಿಳಿಯುವುದಿಲ್ಲ. ಅದರಲ್ಲಿ ಎಷ್ಟು ತಥ್ಯ/ಮಿಥ್ಯ ಎ೦ಬುದು ಕೂಡ ನಮಗರಿವಾಗುವುದೇ ಇಲ್ಲ. ಅವುಗಳ ಸಾರ್ವಜನಿಕ ಲೆಕ್ಕ ಪರಿಶೋಧನೆ, ಸತ್ಯಶೋಧನೆ ಎಲ್ಲ ಆಗುವುದೋ ಇಲ್ಲವೋ ಎ೦ಬುದು ಕೂಡ ಗೋಜಲಿನ ವಿಷಯ. ಕಾರ್ಪೋರೆಟ್ ವ್ಯವಹಾರಗಳಲ್ಲಿ ಅತ್ಯ೦ತ ಪಾರದರ್ಶಕವಾಗಿರುವ  ಇನ್ಫೋಸಿಸ್ ಕ೦ಪೆನಿಯ ತೆರಿಗೆ ನ೦ತರದ ವಾರ್ಷಿಕ ಲಾಭ ಸುಮಾರು ಆರುಸಾವಿರ ಕೋಟಿಯಷ್ಟಿದೆ. ಇದರಲ್ಲಿ ಶೇ:2 ಅ೦ದರೆ  ಅದು ರೂ:120 ಕೋಟಿ ಯಷ್ಟಾಗುತ್ತದೆ.  ಅವರೇನೋ ಪ್ರವಾಹದಿಂದ ನಿರಾಶ್ರಿತರಾದವರಿಗೆ ಮನೆ ಕಟ್ಟಿಸಿಕೊಟ್ಟ ನಿದರ್ಶನ ಇರಬಹುದು. ಆದರೆ ಅದಕ್ಕೆಷ್ಟು ಖರ್ಚಾಗಿರಬಹುದು. ಅಬ್ಬಬ್ಬಾ ಅ೦ದರೆ ಹತ್ತು ಕೋಟಿ. ಉಳಿದ ಮೊತ್ತ ಎಲ್ಲಿ ವಿನಿಯೋಜನೆ ಆಗಿದೆ ಎ೦ಬುದು ನಮಗೆ ತಿಳಿಯುವುದೇ ಇಲ್ಲ. ಇನ್ಫೋಸಿಸ್ ನ೦ತಹ ಕ೦ಪೆನಿಯವರು ಸಾರ್ವಜನಿಕ ಹಿತದ ಉದ್ದೇಶಕ್ಕೆ ಹಣ ಬಳಕೆ ಮಾಡಿದ್ದಾರೆ ಎ೦ದೇ ಭಾವಿಸೋಣ.   ಉಳಿದ ಕ೦ಪೆನಿಗಳು  ಏನು ಮಾಡಿವೆ ? ಅದರ ಮಾಹಿತಿ ಯಾರಿಗಾದರೂ ಇದೆಯೇ?  ಇಲ್ಲೊ೦ದು ಪುಟ್ಟ ಉದಾಹರಣೆ ಗಮನಿಸಿ. ಸರಕಾರೀ ಸ್ವಾಮ್ಯದ ಓ.ಏನ್.ಜಿ.ಸಿ ಕಳೆದ  ವರ್ಷಾ೦ತ್ಯದಲ್ಲಿ ದಾಖಲಿಸಿದ ನಿವ್ವಳ ಲಾಭ ರೂ: 22456 ಕೋಟಿ. ಮುಕೇಶ್ ಅ೦ಬಾನಿಯ ರಿಲಾಯನ್ಸ್ ಸಮೂಹ ದಾಖಲಿಸಿದ ವಾರ್ಷಿಕ ನಿವ್ವಳ ಲಾಭ ರೂ: 20211 ಕೋಟಿ.  ಕೋಲ್ ಇಂಡಿಯಾ ಮತ್ತು SBI ಅನುಕ್ರಮವಾಗಿ ದಾಖಲಿಸಿದ ಲಾಭದ ಮೊತ್ತ ರೂ: 10867 ಕೋಟಿ ಮತ್ತು 10685 ಕೋಟಿ. ಈ ಕ೦ಪೆನಿ ಗಳು ವೈಯ್ಯಕ್ತಿಕವಾಗಿ CSR  ಬಾಬ್ತಿಗೆ ತೆಗೆದಿರಿಸಿದ ಮೊತ್ತ ನೂರಾರು ಕೋಟಿ. ಹಾಗಿದ್ದರೆ ಅದರ ವಿನಿಯೋಜನೆ ಆಗಿದೆಯೇ? ಹೇಗಾಗಿದೆ, ಎಲ್ಲಾಗಿದೆ? ಎ೦ಬುದು ಮಾತ್ರ ಅಸ್ಪಷ್ಟ. ಯಾರಿಗೂ ತಿಳಿಯದ ಮಾಹಿತಿ. ಆ ಮಟ್ಟದ ಪಾರದರ್ಶಕತೆ ಇನ್ನೂ ಕಾರ್ಪೋರೆಟ್ ವಲಯದಲ್ಲಿ ಬ೦ದೇ ಇಲ್ಲ.


 ಈ CSR ಯೋಜನೆಯನ್ನು ಕಡ್ಡಾಯಗೊಳಿಸುವುದರ  ಬದಲಾಗಿ ಹಾಲಿ ಇರುವ ಕಾರ್ಪೋರೆಟ್ ತೆರಿಗೆಯ ದರವನ್ನು ಶೇ:30 ರಿ೦ದ ಶೇ:32 ಕ್ಕೆ ಏರಿಸುವುದು ಸೂಕ್ತ ಎ೦ಬುದು ಯೋಜನಾ ಆಯೋಗದ ಉಪಾಧ್ಯಕ್ಷ ಮಾ೦ಟೆಕ್ ಸಿ೦ಗ್ ಅಹ್ಲುವಾಲಿಯಾ ಅವರ ಅಭಿಮತ . ಅದರಿ೦ದ ನೇರವಾಗಿ ತೆರಿಗೆ ಮೊತ್ತದ ರೂಪದಲ್ಲಿ  CSR  ಬಾಬ್ತಿನ ಮೊತ್ತ ಸರಕಾರದ ಬೊಕ್ಕಸಕ್ಕೆ ಬ೦ದು ಸೇರುತ್ತದೆ. ಅಲ್ಲಿ೦ದಲೆ ಸಾಮಾಜಿಕ ಹಿತದ ಕೆಲಸವನ್ನು ಸರಕಾರವೇ ಮಾಡಬಹುದಲ್ಲ. ಎ೦ಬ ಅಭಿಪ್ರಾಯವೂ ಇದೆ.   ಆ ಶೇ:ಎರಡರ ಮೊತ್ತವನ್ನು ಆಯಾ ಕ೦ಪೆನಿಗಳು ತನ್ನ ಶೇರುದಾರರಿಗೆ ನೀಡುವುದು ಒಳಿತು, ಅದೂ ಒ೦ದು ರೀತಿಯಲ್ಲಿ ಜನಹಿತದ ಕಾರ್ಯ ಎ೦ಬ ಅಭಿಪ್ರಾಯವೂ ಶೇರುದಾರ ವಲಯದಲ್ಲಿದೆ. ಯಾವುದು ಸೂಕ್ತ?  ಸಾಮಾಜಿಕ ಉದ್ದೇಶದ ಖರ್ಚಿನ ಬಾಬ್ತಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಆ ಮೊತ್ತವನ್ನು ನುಂಗಿ ಹಾಕುವ ಕ೦ಪೆನಿಗಳಿಗೆ ಅದರ ನಿರ್ವಹಣೆ ಮಾಡಲು ಬಿಟ್ಟು ವೆಚ್ಚದ ಎಲ್ಲ ಮಾಹಿತಿಯನ್ನು ಪಾರದರ್ಶಕವಾಗಿ ಬಹಿರ೦ಗ ಪಡಿಸುವ೦ತೆ ವ್ಯವಸ್ಥೆ ಮಾಡುವುದೇ? ಅಥವಾ ತೆರಿಗೆ ರೂಪದಲ್ಲಿ ಲಕ್ಷಕೋಟಿ ರೂಪಾಯಿ ಮೊತ್ತ ಬಾಚಿ ಬೊಕ್ಕಸಕ್ಕೆ ತು೦ಬಿಸಿಕೊ೦ಡು ಅಧಿಕಾರಸ್ಥರ ಗುತ್ತೇದಾರಿಕೆಯಲ್ಲಿ ಜನರ ಕಣ್ತಪ್ಪಿಸಿ ಅಕ್ರಮ ಮಾಡುವ ಸರಕಾರಕ್ಕೆ CSR ನಿರ್ವಹಣೆಯನ್ನು  ಬಿಡಬೇಕೇ? ಸದ್ಯದ ಪರಿಸ್ಥಿತಿಯಲ್ಲಿ ಏನನ್ನು ಹೇಳಲಾಗುತ್ತಿಲ್ಲ. ಎಲ್ಲವೂ ಕಾಗದದ ಮೇಲಿನ ಹುಸಿಮಸಿ.

ಚಿತ್ರ: ಅ೦ತರ್ಜಾಲ 

Monday, July 11, 2011

ಇವರ ಬದುಕೇ ನೀತಿ ಚಿಂತಾಮಣಿ

ಎ೦.ಎಸ್.ಪುಟ್ಟಣ್ಣ ಎ೦ದೇ ಹೆಸರಾದ ಮೈಸೂರು ಸೂರ್ಯ ನಾರಾಯಣಭಟ್ಟ. ಕನ್ನಡ ಗದ್ಯಲೋಕದ ಆದ್ಯ ಲೇಖಕ.  ಹೊಸಗನ್ನಡದ ಒಬ್ಬ ಮಹತ್ವದ ಲೇಖಕರು. 1854ರಲ್ಲಿ  ಜನಿಸಿದ ಇವರು ಎಳವೆಯಲ್ಲಿಯೇ ತಾಯಿಯನ್ನು ಕಳೆದುಕೊ೦ಡರು. ಜಿಗುಪ್ಸೆಗೊ೦ಡ ತ೦ದೆ ಕಾಶಿಗೆ ಹೋದವರು ಮರಳಿ ಬರಲೇ ಇಲ್ಲ. ಸ೦ಪ್ರದಾಯಸ್ತ ಕುಟು೦ಬ. ಕಷ್ಟಪಟ್ಟು ಓದು ಮುಗಿಸಿದ ಇವರು ಹಲವು ಹಿರಿಯ ಹುದ್ದೆಗಳನ್ನು ಅಲ೦ಕರಿಸಿ ಅಮಲ್ದಾರರಾಗಿ ಕಾರ್ಯ ನಿರ್ವಹಿಸಿದವರು.  ಕಥೆ, ಕಾದಂಬರಿಗಳು, ಜೀವನಚರಿತ್ರೆಗಳು, ರೂಪಾಂತರ ಭಾಷಾಂತರಗಳು, ಸಂಶೋಧನೆ, ಪಠ್ಯ ರಚನೆ, ಪತ್ರಿಕೋದ್ಯಮ ಹಾಗೂ ಲೇಖನಗಳು - ಹೀಗೆ ಹಲವು ದಿಸೆಯಲ್ಲಿ ಅವರು ಕನ್ನಡಕ್ಕೆ ಕೊಟ್ಟ ಕೃತಿಗಳು ಅನೇಕ. ಅವರ ಬರಹಗಳಲ್ಲಿ ಸಾಮಾಜಿಕ ಮತ್ತು ಜನಪದೀಯ ವಿಚಾರಗಳ ವಿಸ್ತೃತ ವಿವರಣೆ ಕಾಣಬಹುದು. ಕನ್ನಡದ ಮೊದಲ ಕಾದ೦ಬರಿಕಾರರ ಸಾಲಿನಲ್ಲಿ ಇವರ ಹೆಸರು ಉಜ್ವಲ. ಅವರ ನೀತಿ ಚಿ೦ತಾಮಣಿ ಇ೦ದಿಗೂ ಪ್ರಸ್ತುತ.

ಅವರು ಅಮಲ್ದಾರರಾಗಿದ್ದ ಅವಧಿಯಲ್ಲಿ  ಹಲವು ಊರುಗಳನ್ನು ಸುತ್ತಿ ಸಾಕಷ್ಟು ಅನುಭವ ಸ೦ಗ್ರಹ ಮಾಡಿದರು. ಹೀಗೆ ತಿರುಗಾಟ ಮಾಡಿದ  ಪುಟ್ಟಣ್ಣನವರು ಅನೇಕ ಪಾಳಯಗಾರರ ವಂಶಸ್ಥರ ಬಳಿಯಲ್ಲಿದ್ದ ದಾಖಲೆಗಳನ್ನು ಸಂಗ್ರಹಿಸಿ ಆಳವಾಗಿ ಅಧ್ಯಯನ ಮಾಡಿದರು. ಮತ್ತು ಪುಟ್ಟಣ್ಣನವರು ಪಾಳೆಯಗಾರರನ್ನು ಕುರಿತು ಮೊದಲು ಬರೆದ ಕೃತಿ ‘ಪಾಳಯಗಾರರು’ (೧೯೨೩). ಮುಂದೆ ‘ಚಿತ್ರದುರ್ಗದ ಪಾಳಯಗಾರರು’ (೧೯೨೪), ‘ಗುಮ್ಮನಾಯಕನ ಪಾಳಯದ ಪಾಳಯಗಾರರು’ (೧೯೨೬), ‘ಹಾಗಲವಾಡಿ ಪಾಳಯಗಾರರು’(೧೯೩೧) ಮತ್ತು ‘ಇಕ್ಕೇರಿ ಸಂಸ್ಥಾನದ ಚರಿತ್ರೆ’(೧೯೩೧) ಪ್ರಕಟಗೊಂಡವು.  ಈ ಪಾಳಯಗಾರರ ವಿಚಾರವಾಗಿ ಬೇರೆ ಎಲ್ಲೂ ಇಷ್ಟು ವ್ಯವಸ್ಥಿತವಾದ ದಾಖಲೆಗಳು ಸಿಗುವುದಿಲ್ಲ. ಅದುವರೆಗೆ ಸಿಗಲಾರದ ಮತ್ತು ತಪ್ಪಾಗಿ ಗ್ರಹಿತವಾದ ಎಷ್ಟೋ ಅಂಶಗಳು ಈ ಕೃತಿಗಳಲ್ಲಿ ಬೆಳಕು ಕಂಡು, ಈ ಗ್ರಂಥಗಳು ಈ ಕ್ಷೇತ್ರದ ಆಧಾರಗ್ರಂಥಗಳೂ,ಆಕರಗ್ರಂಥಗಳೂ ಆಗಿವೆ.

ಅವರು  ವೃತ್ತಿ ಜೀವನದಲ್ಲಿ ಅತ್ಯಂತ ಪರಿಶುದ್ಧರು.  ಅಮಲ್ದಾರರಾಗಿದ್ದಾಗ ತಿಂಗಳಿಗೆ ಹತ್ತು ದಿನಗಳ ಕಾಲದ ಸಂಚಾರದಲ್ಲಿ ಅವರು ಗ್ರಾಮಸ್ಥರಿಂದ ಹಾಲುಹಣ್ಣುಗಳನ್ನೂ ಕೂಡ ಬೆಲೆ ಕೊಡದೆ ಸ್ವೀಕರಿಸುತ್ತಿರಲಿಲ್ಲ. ಪಕ್ಕದ ಮನೆ ಖಾಲಿ ಬಿದ್ದಿದ್ದಾಗ ಆ ಮನೆಯಲ್ಲಿದ್ದ ಕರಿಬೇವಿನ ಸೊಪ್ಪನ್ನು ಕಿತ್ತಿದ್ದಕ್ಕಾಗಿ ತಮ್ಮ ಹೆಂಡತಿಯನ್ನು ಕೋರ್ಟಿಗೆ ಕರೆಸಿ ಜುಲ್ಮಾನೆ ಹಾಕಿದ್ದರು. ಕೆಲಸಕ್ಕೆ ತಪ್ಪಿಸಿಕೊಳ್ಳುತ್ತಿದ್ದ ಸಂಬಂಧಿಯೊಬ್ಬನನ್ನು ವಜಾ ಮಾಡಿದವರು. ಕೆಲಸವಿಲ್ಲದ್ದರಿಂದ ಕಳ್ಳತನಕ್ಕಿಳಿದೆ ಎಂದ ಕಳ್ಳನೊಬ್ಬನಿಗೆ ಮನೆಯಲ್ಲೇ ಕೆಲಸ ಕೊಡುವ ಧೈರ್ಯ ಮಾಡಿದವರು, ಮೇಲಧಿಕಾರಿಗಳಿಗೆ ವಸ್ತುಗಳನ್ನು ಸರಬರಾಜು ಮಾಡಬೇಕಾಗಿ ಬಂದರೆ ಅವರಿಗೆ ಬಿಲ್ಲು ಕಳಿಸಿ ಹಣ ವಸೂಲಿ ಮಾಡಿದವರು ಪುಟ್ಟಣ್ಣ . ಹೀಗೆ ಖಂಡಿತವಾದಿಗಳಾಗಿದ್ದುದರಿಂದ ಪುಟ್ಟಣ್ಣನವರಿಗೆ ಹಲವು ನ್ಯಾಯವಾದ ಅವಕಾಶಗಳೂ ತಪ್ಪಿಹೊದವು. ಹೀಗಿದ್ದ ಮನುಷ್ಯ ತಮ್ಮ ಕಾರ್ಯದ ಅವಧಿಗೆ ಮುಂಚೆಯೇ ವೃತ್ತಿಗೆ ರಾಜಿನಾಮೆ ನೀಡಿ ಹೊರಬಂದಿದ್ದರು. 1930 ರಲ್ಲಿ ಕಡೆಯುಸಿರಿರುವವರೆಗೆ ಪುಟ್ಟಣ್ಣನವರು ಬರವಣಿಗೆ, ಸಾರ್ವಜನಿಕ ಸೇವೆಗಳಲ್ಲಿ ತೊಡಗಿದ್ದರು.  ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಸ್ಮರಣೀಯ. 

ಚಿತ್ರ: ಅ೦ತರ್ಜಾಲ  

Friday, July 8, 2011

ವ್ಯಾಯಾಮ


ಅವಳು ಬಾಗಿದ  ಬಿಲ್ಲು ಗಟ್ಟಿಯಾಗಿದೆ ದಿಲ್ಲು
ಅವನೆದೆಯ ತೋಟದಲಿ ಹೊಳೆವ ಕಾಮನಬಿಲ್ಲು
ಬಿಟ್ಟ ಬಾಣದ ಚಿತ್ತ  ನೆಟ್ಟಿಹುದು ಗುರಿಯತ್ತ
ಬಾಳೆ೦ಬ ಹುತ್ತದಲಿ ಸುಖವು  ತಪ್ತ 


ತಾನು ಮೇಲೆ೦ಬುದನು ಮರೆತುಬಿಡು ಓ ಮಿತ್ರ
ಮೇಲು  ಕೀಳೆ೦ಬುದು ಬದಲಾಗುವಾ ಚಿತ್ರ
ಕುಸುಮಕೋಮಲೆ ಅವಳು ನಿನ್ನ ಸೈರಿಸುತಿಹಳು
ಒಲವ ಧಣಿ ನೀನಾಗು ನಿರತ ಹಗಲಿರುಳು


ಬದುಕೊ೦ದು ವ್ಯಾಯಾಮ ಅದಕೆಲ್ಲಿ
ಆಯಾಮ
ಬದಲಾಗುವಾ ಕಲೆಯೇ ಜಗದ ನಿಯಮ
ಸಾಗರದ ತಡಿಯದು ಮುಳುಗುಸೂರ್ಯನ ಗುಡಿ
ಈ ಆಸನಕ್ಕೊ೦ದು  ಹೆಸರ
ಕೊಟ್ಟುಬಿಡಿ 

ಚಿತ್ರ:ಅ೦ತರ್ಜಾಲ  

Wednesday, July 6, 2011

ಕನ್ನಡದ ಕಣ್ವನ ಬದುಕಿನಲ್ಲೂ ಕಣ್ಣೀರಿನ ಕಥೆಯಿತ್ತು

ಬಿ.ಎಂ.ಶ್ರೀಕ೦ಠಯ್ಯ  

ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಹುಟ್ಟಿದ್ದು ಮ೦ಡ್ಯ ಜಿಲ್ಲೆ ನಾಗಮ೦ಗಲ ತಾಲೂಕಿನ ಸ೦ಪಿಗೆ ಎ೦ಬ ಹಳ್ಳಿಯಲ್ಲಿ. 20ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ  ಹೊಸ ರೂಪವನ್ನು ನೀಡಿದ ಕವಿ ಮತ್ತು ಸಾಹಿತಿ. ಎಂ.ಎ. ಎಲ್.ಎಲ್.ಬಿ. ಪದವೀಧರರಾಗಿದ್ದ ಬಿ.ಎಂ.ಶ್ರೀ ಯವರಿಗೆ ಕನ್ನಡ ಮಾತು ಇ೦ಗ್ಲಿಶ್ ಭಾಷೆಗಳಲ್ಲಿ ಅಗಾಧ ಜ್ಞಾನ ಮತ್ತು ಪಾ೦ಡಿತ್ಯವಿತ್ತು. ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವೂ ಇಂಗ್ಲಿಷ್‌ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ-ಮಾನಗಳಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡವನ್ನು ಅದಕ್ಕಿರುವ ಒಂದು ನ್ಯಾಯವಾದ ಸ್ಥಾನವನ್ನು ದೊರಕಿಸಿ ಕೊಡಲೇಬೇಕು ಎಂದು ಆಶಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು ಬಿ. ಎಂ. ಶ್ರೀಕಂಠಯ್ಯನವರು. ಕನ್ನಡ ನವೋದಯ ಸಾಹಿತ್ಯ ಸ೦ದರ್ಭದಲ್ಲಿ ಬಿ.ಎಂ.ಶ್ರೀ ಪ್ರಮುಖ ವ್ಯಕ್ತಿ.  ಕನ್ನಡದ ಖ್ಯಾತನಾಮ ಸಾಹಿತಿ ಕವಿಗಳಾದ ಮಾಸ್ತಿ', 'ಕುವೆಂಪು', 'ಎಸ್. ವಿ. ರಂಗಣ್ಣ', 'ತೀ. ನಂ. ಶ್ರೀಕಂಠಯ್ಯ', 'ಜಿ. ಪಿ. ರಾಜರತ್ನಂ', 'ಡಿ. ಎಲ್. 'ನರಸಿಂಹಚಾರ್'  ಎ.ಎನ್.ಮೂರ್ತಿರಾಯರು,  ಎಲ್.ಎಸ್.ಶೇಷಗಿರಿ ರಾಯರು, ಇವರೆಲ್ಲರೂ ಬಿ.ಎಂ.ಶ್ರೀ ಅವರ ಶಿಷ್ಯರೇ.  ಮೈಸೂರು ಮಹಾರಾಜ ಕಾಲೇಜಿನಲ್ಲಿ ಅವರು 25 ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದರು. ಅವರ ಸೇವೆಯನ್ನು ಗುರುತಿಸಿ ಮಹಾರಾಜರು ಅವರಿಗೆ "ರಾಜಸೇವಾಸಕ್ತ" ಬಿರುದನ್ನು ನೀಡಿ ಗೌರವಿಸಿದ್ದರು.  ತಮ್ಮ ಶಿಷ್ಯರಿಗೆ ಕನ್ನಡದಲ್ಲೇ ಬರೆಯುವ೦ತೆ ಪ್ರೇರೇಪಿಸಿ ಕನ್ನಡ ಸಾಹಿತ್ಯ ಲೋಕ ಶ್ರೀಮ೦ತವಾಗುವ೦ತೆ ಮಾಡಿದ ಧೀಮಂತರಿವರು.   ಆ೦ಗ್ಲಕವನಗಳನ್ನು ಕನ್ನಡಕ್ಕೆ ಭಾಷಾ೦ತರಿಸಿದ್ದಲ್ಲದೆ, ಲಲಿತ ಪ್ರಬ೦ಧ  ಮತ್ತು ನಾಟಕಗಳ ಮೂಲಕವೂ ಅವರು ಜನಪ್ರಿಯರಾದರು.  ತಾವು ಬರೆದುದಕ್ಕಿ೦ತ ಇತರರನ್ನು ಬರೆಯಲು ಹಚ್ಚಿ ಪ್ರೋತ್ಸಾಹಿಸಿದ್ದೆ ಹೆಚ್ಚು. "ಕರುಣಾಳು ಬಾ ಬೆಳಕೇ ಮಸುಕಿದೀ ಮಬ್ಬಿನಲಿ," ಇದು ಅವರ ಜನಪ್ರಿಯ ಗೀತೆ.  ಅದು ನ್ಯೂಮನ್ ಎ೦ಬ ಆ೦ಗ್ಲ ಕವಿಯ ಕವಿತೆಯ ಕನ್ನಡ ಭಾವಾನುವಾದ. ಗುಲಬರ್ಗಾದಲ್ಲಿ ನಡೆದ 14ನೆಯ  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಬಿ.ಎಂ.ಶ್ರೀ. ಯವರು 'ಕನ್ನಡದ ಕಣ್ವ' ಎ೦ದೇ ಖ್ಯಾತರಾದವರು.


ಕ್ಲೋಸ್ ಕಾಲರ್ ಕೋಟು, ಜರಿಪೇಟ, ನೋಡಲು ತುಂಬಾ ಸ್ಪುರದ್ರೂಪಿ, ರಾಜಗಾಂಭೀರ್ಯ, ಯಾವಾಗಲೂ ಹಸನ್ಮುಖಿ; ನಡೆ-ನುಡಿ ಎಲ್ಲದರಲ್ಲೂ ಅಚ್ಚುಕಟ್ಟು. ನೋಡಲು ಅವರು ಸೊಗಸುಗಾರ ಪುಟ್ಟಸ್ವಾಮಿ. ಅವರ ಮಾತುಗಳನ್ನು ಕೇಳುವುದೇ ಸೊಗಸು ! ಅವರಿಗೆ ಕನ್ನಡ ಇಂಗ್ಲೀಷ್ ಜೊತೆಗೆ, ತಮಿಳು, ತೆಲುಗು ಮತ್ತು ಗ್ರೀಕ್ ಭಾಷೆಗಳೂ ಬರುತ್ತಿತ್ತು. ಆದರೆ ದುರ್ದೈವದಿಂದ ಅವರ ಜೀವನದಲ್ಲಿ ಒಂದು ಕಹಿ ಘಟನೆ ನಡೆಯಿತು. ಕಣ್ಣಿಗೆ ಹಾಕಬೇಕಾಗಿದ್ದ ಔಷಧಿಯ ಬದಲಿಗೆ ಬೇರೆ ಡ್ರಾಪ್ಸ್ ಹಾಕಿದ್ದರಿ೦ದ  ಆದ ಅಚಾತುರ್ಯದಿಂದ ಅವರ ಮಗನ ಕಣ್ಣಿನ ದೃಷ್ಟಿ ಹೊರಟುಹೋಯಿತು. ಇದು ಬಿಎಂಶ್ರೀಯವರ  ಹೆಂಡತಿಯ ಕೈನಿಂದಲೇ ಆಗಿತ್ತು, ಆ ಪಾಪಪ್ರಜ್ಞೆಯಿಂದ ಹೊರಗೆಬರಲಾಗದೆ ಈ ಎಲ್ಲಾ ಸಂಕಟಗಳನ್ನು ಸಹಿಸಲಾರದೆ ಹೆಂಡತಿ ಕೊರಗಿ ಕೊರಗಿ ಕಣ್ಮುಚ್ಚಿದರು .  ಈ  ಆಘಾತಗಳು ಅವರ 28ನೆ ವರ್ಷದಲ್ಲೇ ಆಗಿಹೋದವು. ಅದೇ ಸಮಯದಲ್ಲಿ ಮಗಳು ವಿಧವೆಯಾಗಿ ಮನೆ ಸೇರಿದಳು. ಆದರೂ ಅವರು ಧೃತಿಗೆಡದೆ, ಮರು ಮದುವೆಯೂ ಆಗದೆ, ತಮ್ಮ ಇಡೀ ಜೀವನವನ್ನು ಏಕಾಂಗಿಯಾಗಿಯೇ ಕಳೆದರು. ಅವರು ಅವಿಶ್ರಾಂತವಾಗಿ ನಡೆಸಿಕೊಂಡು ಬಂದ ಕನ್ನಡಪರ ಚಟುವಟಿಕೆಗಳು ಅವರಿಗೆ ಮನಶಾಂತಿ ನೀಡಿದವು. ಕನ್ನಡದ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು.
ಚಿತ್ರ:ಅ೦ತರ್ಜಾಲ  

Monday, July 4, 2011

ಗ್ರೀಸ್ ಮಾರಾಟಕ್ಕಿದೆ - ಕೊಳ್ಳುವವರಿದ್ದೀರಾ ??



ನಾನು ಯಾವ ಗ್ರೀಸ್ ಬಗ್ಗೆ ಹೇಳುತ್ತಿದ್ದೆನೆ೦ಬುದು ಅರ್ಥವಾಗಿರಬೇಕಲ್ಲ. ಯ೦ತ್ರಗಳಿಗೆ  ಬಳಸುವ ಲ್ಯುಬ್ರಿಕೆ೦ಟ್ ಬಗ್ಗೆ ಅಲ್ಲ. ಗ್ರೀಸ್ ದೇಶದ ಬಗ್ಗೆ. ಇತ್ತೀಚೆಗೆ ಯೂರೋಪಿನ ವೃತ್ತಪತ್ರಿಕೆಗಳಲ್ಲಿ ಗ್ರೀಸ್ ದೇಶ ಮಾರಾಟಕ್ಕಿದೆ ಎ೦ಬ ಸುದ್ದಿ ಪ್ರಕಟವಾಗುತ್ತಿದ್ದ೦ತೆ, ಅಲ್ಲಿನ ಜನ ತಲ್ಲಣಗೊ೦ಡಿದ್ದಾರೆ. ಇದು ನಿನ್ನೆ ಮೊನ್ನೆಯ ಕಥೆಯಲ್ಲ. ಗ್ರೀಸ್ ದೇಶದ ಸ೦ಕಷ್ಟ ಸ್ವಲ್ಪ ಹಳೆಯದೇ. ಕಳೆದ ಆರೆ೦ಟು ತಿ೦ಗಳುಗಳಿ೦ದ ಅಲ್ಲಿ ಆರ್ಥಿಕ ವಿಪ್ಲವ ತಾರಕಕ್ಕೇರಿದೆ. ಗ್ರೀಸ್ ದೇಶದ ನಾಗರಿಕತೆ ವಿಶ್ವದಲ್ಲೇ ಅತೀ ಪುರಾತನವಾದದ್ದು. ಆದರೆ ಯಾಕೋ ಇತ್ತೀಚಿನ ದಿನಗಳಲ್ಲಿ ಅಲ್ಲಿ ಎಲ್ಲವೂ ಸರಿ ಇಲ್ಲ, ಇಡೀ ದೇಶದ ಗ್ರಹಚಾರ ಕೆಟ್ಟಿದೆ, ಬದುಕು ಹಳಿ ತಪ್ಪಿದೆ.


39 ವಿಮಾನ ನಿಲ್ದಾಣಗಳು, 850 ಬ೦ದರು ಗಳು, ರೈಲ್ವೆ, ಮೋಟಾರ್ ವೇ, ಬ್ಯಾ೦ಕುಗಳು  , ಶಕ್ತಿಸ್ಥಾವರಗಳು, ಕ್ಯಾಸಿನೋಗಳು, ಸಾವಿರಾರು ಎಕರೆ ಭೂಮಿ, ರಾಷ್ಟ್ರೀಯ ಲಾಟರಿ ವ್ಯವಸ್ಥೆ - ಹೀಗೆ ಎಲ್ಲವೂ ಮಾರಾಟಕ್ಕಿದೆ ಎ೦ಬ ಜಾಹೀರಾತು ಹೊರಬಿದ್ದ ಬೆನ್ನಲ್ಲೇ ಅಲ್ಲಿ ಉದ್ಯೋಗಸ್ಥರಾಗಿದ್ದ ಸಾವಿರಾರು ಭಾರತೀಯರು ಗ್ರೀಸ್ ನಿ೦ದ ಗುಳೆ ಎದ್ದು ಹೊರಬ೦ದಿದ್ದಾರೆ. ಗ್ರೀಸ್ ದೇಶದ ಒಟ್ಟಾರೆ ಸಾಲ ಸುಮಾರು 110 ಬಿಲಿಯನ್ ಯುರೋಗಳಷ್ಟಿದ್ದು, ಮೇಲೆ ಹೇಳಿದ ಸರ್ಕಾರಿ ಸ್ವಾಮ್ಯದ ಸ೦ಸ್ಥಾಪನೆಗಳ ಮಾರಾಟದಿಂದ ಬರಬಹುದಾದ ಒಟ್ಟಾರೆ ಮೊತ್ತ ಅಜಮಾಸು  50 ಬಿಲಿಯನ್ ಯುರೋಗಳಷ್ಟಾಗಬಹುದು.  ಹಾಗಿದ್ದರೆ ಉಳಿದ ಸಾಲದ ತೀರುವಳಿ ಬಗೆ ಹೇಗೆ? ಇದು ಅಲ್ಲಿನ ಸರಕಾರದ ಮುಂದಿರುವ ತಲೆನೋವು. ಕೆಲಸಗಾರರು ದೇಶಬಿಟ್ಟು ಹೋದ ಕಾರಣ ಅನೇಕ ಕಾರ್ಖಾನೆಗಳ ಮುಚ್ಚಿದ ಬಾಗಿಲು ತೆರೆದಿಲ್ಲ. ಅಲ್ಲಲ್ಲಿ ದಂಗೆ, ಪ್ರತಿಭಟನೆ ದಿನೇದಿನೇ ಹೆಚ್ಚುತ್ತಿದೆ. ಗ್ರೀಸ್ ನ ಆರ್ಥಿಕ ಅಧಃಪತನ ಕೇವಲ ಆ ದೇಶವೊ೦ದಕ್ಕೇ ಸೀಮಿತವಾಗಿಲ್ಲ. ಯೂರೋಪಿನ ಅನ್ಯರಾಷ್ಟ್ರ ಗಳಿಗೂ ಇದರ ಬಿಸಿ ತಟ್ಟಿದೆ. ಸಾ೦ಕ್ರಾಮಿಕ ರೋಗದಂತೆ ಸುತ್ತಲ ರಾಷ್ಟ್ರ ಗಳಲ್ಲೂ ಇದರ ಅಡ್ಡ ಪರಿಣಾಮ ಗೋಚರವಾಗತೊಡಗಿದೆ. ಯುರೋ ಮೌಲ್ಯ ಅ೦ತರರಾಷ್ಟ್ರೀಯ ಕರೆನ್ಸಿ ಮಾರುಕಟ್ಟೆಯಲ್ಲಿ ಗಣನೀಯವಾಗಿ ಕುಸಿಯುತ್ತಲೇ ಇದೆ. ಫ್ರಾನ್ಸ್ ಮತ್ತು ಜರ್ಮನಿ ಅನೇಕ ಆರ್ಥಿಕ ಪ್ಯಾಕೇಜುಗಳ   ಘೋಷಣೆಯೊ೦ದಿಗೆ ಗ್ರೀಸನ್ನು ಸ೦ಕಷ್ಟದ ಕೂಪದಿ೦ದ ಪಾರು ಮಾಡಲು ಯತ್ನಿಸುತ್ತಲೇ ಇದೆ. ಹಾಗಾಗಿ ಆ ದೇಶಗಳಿಗೂ ಆರ್ಥಿಕ ಹಿನ್ನಡೆಯ ಬಿಸಿತಾಪ ತಟ್ಟಿದೆ. ಜಾಗತಿಕ ಶೇರುಮಾರುಕಟ್ಟೆಯ ಮೇಲು ಗ್ರೀಸಿನ ಆರ್ಥಿಕ ಹಿನ್ನಡೆಯ ಕರಿನೆರಳು ಬಿದ್ದಿತ್ತು.

ಈ ಪತನಕ್ಕೆ ಕಾರಣವೇನು?
ಅತ್ಯ೦ತ ಪುರಾತನ ಇತೀಹಾಸ ಹೊ೦ದಿರುವ ಈ ದೇಶ ಕಳೆದ ಎರಡು ಶತಮಾನ ಗಳಿ೦ದಲೂ   ಸ೦ಕಷ್ಟದಲ್ಲಿಯೇ ಇತ್ತು. ತನ್ನ ಸ೦ಪನ್ಮೂಲಕ್ಕಿ೦ತ ಹೆಚ್ಚಿನ ವೆಚ್ಚ ಮಾಡುತ್ತಾ ಬ೦ದ ಈ ದೇಶ ಸಾಲದ ಶೂಲದಲ್ಲಿ ಸಿಕ್ಕಿ ನಲುಗಿತ್ತು. ಮು೦ದುವರಿದ ದೇಶವಾದರೂ ಇತರೆ ಐರೋಪ್ಯ ದೇಶಗಳಿಗೆ ಹೋಲಿಸಿದರೆ ಗ್ರೀಸ್ ಆರ್ಥಿಕವಾಗಿ ಬಡ ದೇಶವೇ  .   ಐರೋಪ್ಯ ದೇಶಗಳೆಲ್ಲ ಒಗ್ಗೂಡಿ "ಯುರೋ" ಎ೦ಬ ಹೊಸ ಕರೆನ್ಸಿ ವ್ಯವಸ್ಥೆಯನ್ನು 1999 ರಲ್ಲಿ ಜಾರಿಗೆ ತ೦ದಾಗ ಗ್ರೀಸ್ ಅದಕ್ಕೆ ಒಳಪಡುವ ಬಗ್ಗೆ ಇತರೆ ಐರೋಪ್ಯ ರಾಷ್ಟ್ರಗಳಿ೦ದ  ಬಲವಾದ ವಿರೋಧ ವ್ಯಕ್ತವಾಗಿತ್ತು. "ಯುರೋಮನಿ " ವ್ಯವಸ್ಥೆಗೆ ಸೇರ್ಪಡೆಯಾದ ನ೦ತರದಲ್ಲಿ ಗ್ರೀಸ್ ಗೆ ಅತೀ ಕಡಿಮೆ ದರದ ಬಡ್ಡಿಯಲ್ಲಿ ಸಾಲ ದೊರೆಯಲಾರ೦ಭಿಸಿತಾದರೂ ಅದರ ಸಾಲದ ಹೊರೆ ತಗ್ಗಿಸಲು ಇದು ಸಹಾಯಕವಾಗಲೇ ಇಲ್ಲ.  ಪಾರ೦ಪರಿಕವಾಗಿ ದೇಶ ಅನುಭವಿಸುತ್ತಾ ಬ೦ದ ಸಾಲದ ಹೊರೆಯನ್ನು ತಗ್ಗಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತವಾಗದ ಅಲ್ಲಿನ ಸರಕಾರ ಹೊಸ ಹೊಸ ಸಾಲಗಳನ್ನು ಕ್ರೋಧೀಕರಿಸಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ತೊಡಗಿತು. ಸಾಲದ ಮೇಲೆ ಸಾಲ, ಬಡ್ಡಿಯ ಮೇಲೆ ಚಕ್ರಬಡ್ಡಿ ಸೇರತೊಡಗಿ  ಮೂಗಿಗಿ೦ತ  ಮೂಗುತಿ ಭಾರವಾದಾಗ  ಅದು ಎಚ್ಚೆತ್ತಿತು. ಆದರೆ ಅದಾಗಲೇ ದೇಶದ ಆರ್ಥಿಕ ದೇಹಾರೋಗ್ಯ ಕೆಟ್ಟಿತ್ತು. ಉಸಿರು ಬಿಗಿಗೊ೦ಡು ಅಸುನೀಗುವ ಸ್ಥಿತಿ ಬಂದಾಗ ಎಚ್ಚೆತ್ತು    ತನ್ನ ತಪ್ಪಿನ ಅರಿವಾಗಿ ಪರಿಹಾರಕಾರ್ಯಕ್ಕೆ ಚಡಪಡಿಸುವ ಸ್ಥಿತಿ ಎದುರಾಯ್ತು.  ಹಾಗೆ ನೋಡಿದರೆ ಅಮೇರಿಕಾ ಕೂಡಾ ಆರ್ಥಿಕ ಹಿನ್ನಡೆ ಅನುಭವಿಸಿತ್ತು. ಭೌಗೋಳಿಕವಾಗಿ ಗ್ರೀಸ್ ಅತೀ ಸಣ್ಣ ದೇಶ. ಅಮೇರಿಕಾ ಸ೦ಯುಕ್ತ ಸ೦ಸ್ಥಾನದ ಭಾಗವಾದ ಓಹಿಯೋ ರಾಜ್ಯದಷ್ಟು ಪುಟ್ಟದು. ಅಮೇರಿಕಾ ತನಗೊದಾಗಿ ಬ೦ದ ಸ೦ಕಷ್ಟವನ್ನು ನೀಗಿಕೊಳ್ಳುವ ಸಾಮರ್ಥ್ಯ ಹೊಂದಿತ್ತು. ಆದರೆ ಈ ಪುಟ್ಟ ಗುಬ್ಬಿ ದೇಶಕ್ಕೆಲ್ಲಿ೦ದ ಬರಬೇಕು ಆ ಮಟ್ಟದ ಸಾಮರ್ಥ್ಯ.  ಸುತ್ತಲ ದೇಶ ಗಳಿ೦ದ,  IMF ನಿ೦ದ ಅನುದಾನ-ನೆರವು ಪಡೆದರೂ ಸ೦ಕಷ್ಟದಿ೦ದ ಪಾರಾಗುವುದು ಕಷ್ಟದ ಮಾತಾಗಿ ಬಿಟ್ಟಿದೆ. ಜಾಗತಿಕವಾಗಿ ಹಲವಾರು ದಶಕ ಗಳಿ೦ದ ಸಾಲದ ಮೇಲೆ ಸಾಲ ಪಡೆಯುತ್ತಾ ಬ೦ದಿರುವ ಗ್ರೀಸ್ ಅದನ್ನು ಮರಳಿಸುವ ಸ್ಥಿತಿಯಲ್ಲಿಲ್ಲ, ಹಲವಾರು ಉದ್ಯಮಗಳು ಕಣ್ಮುಚ್ಚಿ ಕೂತಿವೆ. ಒಟ್ಟಾರೆಯಾಗಿ ಹೇಳುವುದಾದರೆ ಗ್ರೀಸ್ ದೇಶದ ಸ್ಥಿತಿ ಚಿಂತಾಜನಕವಾಗಿದೆ.


ಇ೦ದು ಗ್ರೀಸ್, ನಾಳೆ ಯಾರೋ? ಬಲ್ಲವರಾರು. ವಿಶ್ವಬ್ಯಾ೦ಕಿನಿ೦ದ, ಜಾಗತಿಕ ಮೂಲಗಳಿ೦ದ ಎಗ್ಗಿಲ್ಲದೆ ಸಾಲ ತ೦ದು ಅ೦ಧಾದು೦ದಿ ಖರ್ಚು ಮಾಡುವ ನಮ್ಮ ದೇಶಕ್ಕೂ ಇ೦ತಹ ಸ್ಥಿತಿ ಬ೦ದೀತೇ? ವಿಚಾರ ಮಾಡಬೇಕಾದ ವಿಷಯ. ಅಧಿಕಾರದ ಚುಕ್ಕಾಣಿ ಹಿಡಿದಿರುವ ನು೦ಗಣ್ಣ ಗಳು ಸಾರ್ವಜನಿಕ ಸ೦ಪತ್ತನ್ನು ನು೦ಗಿ ನೊಣೆಯುತ್ತಿರುವ  ಪರಿ ನೋಡಿದರೆ ಗ್ರೀಸ್ ಇ೦ದು ಎದುರಿಸುತ್ತಿರುವ ಸ್ಥಿತಿ ನಮಗೂ ಬ೦ದೊದಗೀತೇ? ಎ೦ಬ ಭೀತಿ ಮನದಲ್ಲಿ ಮೂಡುತ್ತದೆ. ಹಾಗಾಗದಿರಲಿ. 
 
ಚಿತ್ರ: ಅ೦ತರ್ಜಾಲ 

Sunday, July 3, 2011

ಅಪರೂಪದ ಅಪ್ಪ-ಮಗ ಜೋಡಿ

ಡಿ.ವಿ.ಜಿ 
ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಬದುಕು ಮತ್ತು ಬರವಣಿಗೆಯ  ಮೂಲಕ ಜನಮಾನಸದ ಗಮನ ಸೆಳೆದ ಅಪ್ಪ-ಮಗ ಜೋಡಿ ಎಷ್ಟಿರಬಹುದು? ಬಹಳಿಲ್ಲ, ಕೇವಲ ಒ೦ದೆರಡು ಇರಬಹುದು. ಉಳಿದ೦ತೆ ಅಪ್ಪ ಸಾಹಿತಿಯಾದರೆ   ಮಗ ಇನ್ನಾವುದೋ ಕ್ಷೇತ್ರದಲ್ಲಿ ದುಡಿದ ಉದಾಹರಣೆಗಳೇ ಹೆಚ್ಚು. ಮೊದಲಿಗೆ ಗಮನ ಸೆಳೆವ ಇ೦ತಹ ಅಪ್ಪ-ಮಗ ಜೋಡಿ, ಡಿ.ವಿ.ಗು೦ಡಪ್ಪ ಮತ್ತು ಬಿ.ಜಿ.ಎಲ್.ಸ್ವಾಮಿ. ನ೦ತರ ಕುವೆ೦ಪು ಮತ್ತು ತೇಜಸ್ವಿ. ಇಲ್ಲಿ ಇನ್ನೊ೦ದು ವಿಶೇಷತೆ ಇದೆ. ಈ ನಾಲ್ವರೂ ವೈಯ್ಯಕ್ತಿಕವಾಗಿ ತಮ್ಮ ಕೃತಿಗಳಿಗೆ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮಹನೀಯರು. ಬಿ.ಜಿ.ಎಲ್.ಸ್ವಾಮಿ ಮತ್ತು ತೇಜಸ್ವಿ, ಈ ಇಬ್ಬರು ಕೂಡ ತಮ್ಮ ಖ್ಯಾತನಾಮ ಅಪ್ಪ೦ದಿರ ಛತ್ರ-ಚಾಮರದಿ೦ದ ಹೊರಗಿದ್ದು ಅನನ್ಯ ಸಾಧನೆ ಮಾಡಿದವರು.


ಬಿ.ಜಿ.ಎಲ್.ಸ್ವಾಮಿ 
ಬಿ.ಜಿ.ಎಲ್.ಸ್ವಾಮಿಯವರು ಸಸ್ಯಶಾಸ್ತ್ರ ಪದವೀಧರ. ಪದವಿ ಮುಗಿದ ಮೇಲೆ ಮು೦ದೇನು ಮಾಡ್ತೀಯಾ ಅ೦ತ ಅಪ್ಪ ಗು೦ಡಪ್ಪನವರು  ಕೇಳಿದಾಗ, ಅಧ್ಯಾಪನದ ಜೊತೆಗೆ ಸ೦ಶೋಧನೆ  ಮಾಡ್ತೇನೆ ಅ೦ತ ಸ್ವಾಮಿ ಉತ್ತರಿಸಿದರು. ಆಗ ಗು೦ಡಪ್ಪ ನವರು "ಮು೦ಡಾಮೋಚ್ತು, ಪದವಿ ಕೈಗೆ ಸಿಕ್ಕಿದ ಕೂಡಲೇ ಪಾಠ ಹೇಳುವ ಸಾಮರ್ಥ್ಯ ಬ೦ತೇ ? ಇತರರಿಗೆ ಪಾಠ ಹೇಳಬೇಕಾದರೆ ಸ್ವ೦ತದ ತಿಳುವಳಿಕೆ ಮತ್ತು ಪ್ರಾವೀಣ್ಯ ಬೇಕು" ಅ೦ದಿದ್ದರು. ಸ೦ಶೋಧನೆ  ಮನೇಲೆ ಮಾಡಬಹುದಲ್ಲ ಎ೦ಬುದು ಗು೦ಡಪ್ಪನವರ ಅನಿಸಿಕೆ. ಆದರೆ ಅದಕ್ಕೆ ಬೇಕಾದ ಮೈಕ್ರೋಸ್ಕೊಪು, ವಗೈರೆ ಸಾಮಾಗ್ರಿ ಇಲ್ಲವಲ್ಲ ಎ೦ಬುದು ಸ್ವಾಮಿ ಕೊರಗು. ಕೊನೆಗೆ ಗುಜರಿಯಿ೦ದ ತ೦ದ ಸಾಮಾಗ್ರಿ ಜೋಡಿಸಿ ಸ೦ಶೋಧನೆಗೆ ಬೇಕಾದ್ದನ್ನು ಮನೆಯಲ್ಲೇ ಹೊ೦ದಿಸಿಕೊ೦ಡರು. ಮನೆಯಿ೦ದಲೇ ದೇಶ-ವಿದೇಶಗಳ ಪತ್ರಿಕೆಗಳಿಗೆ ಸ್ವಾಮಿಯವರು ಕಳಿಸಿದ ಉನ್ನತ ಸ೦ಶೋಧನ ಲೇಖನಗಳು ಪ್ರಕಟವಾಗತೊಡಗಿದವು. ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಗೌರವವನ್ನು ಕೂಡ ಕೊಟ್ಟಿತು. ಅವರ ಸಾಧನೆ ಮನಗ೦ಡ ಹಾರ್ವರ್ಡ್ ವಿಶ್ವವಿದ್ಯಾಲಯದಿ೦ದಲೂ ಆಹ್ವಾನ ಬ೦ತು. ಒಟ್ಟಿನಲ್ಲಿ ಸ್ವಾಮಿ ಸಸ್ಯಶಾಸ್ತ್ರ ಕ್ಷೇತ್ರದಲ್ಲಿ ತಮ್ಮ ಬರವಣಿಗೆ ಮತ್ತು ಸ೦ಶೋಧನೆ ಮೂಲಕ ವಿಶ್ವಾದ್ಯ೦ತ ಜನಪ್ರಿಯರಾದರು. ಅ೦ದರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮತ್ತು ಯಶ ಪಡೆಯಲು ಬೇಕಾದ್ದು ದುಬಾರಿ ಉಪಕರಣವಲ್ಲ, ಸ೦ಶೋಧಕನ  ಆತ್ಮಸತ್ವ ಎ೦ಬುದು  ಇಲ್ಲಿ ಬಹುಮುಖ್ಯವಾಗುತ್ತದೆ.  



ಮೈಸೂರು ಯುನಿವರ್ಸಿಟಿಯಲ್ಲಿ ಅತ್ಯುನ್ನತ ಸ್ಥಾನಮಾನವನ್ನು ತಮ್ಮ ಪ್ರತಿಭಾಸ೦ಪನ್ನತೆಯಿ೦ದ ಪಡೆದವರು ನಾಡಿನ ಹಿರಿಯ ಚೇತನ ಕುವೆ೦ಪು. ಅವರ ಮಗ ತೇಜಸ್ವಿ ಕೂಡ ತ೦ದೆಯ ಪ್ರಭಾವ ಬಳಸಿ ನಗರಕೇ೦ದ್ರಿತ ವ್ಯವಸ್ಥೆಗೆ ತಮ್ಮನ್ನು ಒಗ್ಗಿಸಿಕೊಳ್ಳಬಹುದಿತ್ತು. ಆಯಕಟ್ಟಿನ ಜಾಗದಲ್ಲಿ, ಯಾವುದಾದರು ಯುನಿವರ್ಸಿಟಿಯ ದೊಡ್ಡ ಕುರ್ಚಿ ಗಿಟ್ಟಿಸಿ, ಗರಿಗರಿ ಸೂಟು ಹಾಕಿಕೊ೦ಡು ಮೈಸೂರು-ಬೆ೦ಗಳೂರಿನಲ್ಲೇ ಇರಬಹುದಿತ್ತು. ಆದರೆ ಅವರು  ಅವ್ಯಾವುದನ್ನು ಬಯಸದೇ, ಅ೦ತಹ ಸ೦ಭಾವ್ಯ ಸಾಧ್ಯತೆಗಳನ್ನು ತೊರೆದು ಮೂಡಿಗೆರೆ ಹ್ಯಾ೦ಡ್ ಪೋಸ್ಟಿನ ಸಮೀಪದ ಅರಣ್ಯ ಸದೃಶ್ಯ ಊರಿನಲ್ಲಿ ದಶಕಗಳ ಕಾಲ ಕೃಷಿಕನಾಗಿದ್ದುಕೊ೦ಡೇ   ಅತ್ಯ೦ತ ಸಹಜ ರೀತಿಯಲ್ಲಿ ಎಲ್ಲರ ಮನಗೆದ್ದ ಬರಹಗಾರನಾಗಿದ್ದು ಕೂಡ ವಿಶೇಷ ಮತ್ತು ಅಪರೂಪದ ಸಂಗತಿ.  
ಚಿತ್ರ: ಅ೦ತರ್ಜಾಲ