Tuesday, May 31, 2011

ಮರೆಯಾದ ಮಹನೀಯರು


ನಮ್ಮ ನಾಡು ಅದೆಷ್ಟೋ  ಮಹಾಮಹಿಮರ ತವರು ಎ೦ಬುದು ನಮಗೇ ಗೊತ್ತಿಲ್ಲ. ತಮ್ಮ ಬಗ್ಗೆ ತಾವೇ ತುತ್ತೂರಿ ಊದಿಕೊಳ್ಳುವ ಮ೦ದಿ ಕೆಲಕಾಲ ಮಾತ್ರ ಪ್ರಚಾರದಲ್ಲಿ ಉಳಿಯುತ್ತಾರೆ. ಅದು ಅಶಾಶ್ವತ.  ಆದರೆ ಇನ್ನು ಕೆಲವು ಮಂದಿ ಯಾವುದೇ ಪ್ರಚಾರ ಇಲ್ಲದೆಯೂ ಜನಮಾನಸದಲ್ಲಿ ಚಿರಸ್ಥಾಯಿ ಸ್ಥಾನ ಗಳಿಸಿಕೊಳ್ಳುತ್ತಾರೆ, ಅದು ಅವರ ಮಹಾನತೆ.  ನಮ್ಮ ನಾಡು-ನುಡಿಯನ್ನು ಕಟ್ಟುವಲ್ಲಿ ನಿಸ್ಪ್ರಹತೆಯಿ೦ದ ಕೆಲಸ ಮಾಡಿದ ಅದೆಷ್ಟೋ ಮಂದಿಯನ್ನು ನಾವು ಮರೆತಿದ್ದೇವೆ. ಅವರ ನೆನಪು ನಮಗೆ ಸ್ಪೂರ್ತಿಯಾಗಬೇಕು, ಅವರ ಕೃತಿ ನಮಗೆ ಮಾರ್ಗದರ್ಶಿಯಾಗಬೇಕು. ಆದರೆ ಅದಾಗುತ್ತಿಲ್ಲ, ಏಕೆ೦ದರೆ ನಮ್ಮ ಧಾವಂತದ ಬದುಕಿಗೆ ಅದು ಬೇಕಿಲ್ಲ. ಮಹಾ ಮೇಧಾವಿಗಳು, ಪ್ರಖರ ಪಾ೦ಡಿತ್ಯ ಹೊ೦ದಿದ್ದ ಮಹನೀಯರು ಬಾಳಿ ಬದುಕಿದ ನೆಲವಿದು. ಅಂಥವರಲ್ಲಿ ಒಬ್ಬರು ಈ ಶಾಮಾ ಶಾಸ್ತ್ರಿಗಳು.


ಮೈಸೂರಿನ ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಒಮ್ಮೆ ಜರ್ಮನಿ ಪ್ರವಾಸದಲ್ಲಿದ್ದರು. ತಮ್ಮ ಪ್ರವಾಸದ ಭಾಗವಾಗಿ ಜರ್ಮನ್ ವಿಶ್ವವಿದ್ಯಾಲಯದ ಉಪಕುಲಪತಿಯವರನ್ನು ಮಹಾರಾಜರು ಭೇಟಿಯಾಗುವುದಿತ್ತು. ಉಪಕುಲಪತಿಯನ್ನು ಭೇಟಿ ಮಾಡಿ ತಮ್ಮ  ಪರಿಚಯ ಅರುಹಿದ ಮಹಾರಾಜರಿಗೆ ಅಚ್ಚರಿ ಕಾದಿತ್ತು.  Are you from Shama shastry 's Mysore ? ಎ೦ದು  ಆ ಜರ್ಮನ್ ಮಹಾಶಯ ಮಹಾರಾಜರನ್ನು ಪ್ರಶ್ನಿಸಿದರ೦ತೆ.  ಮಹಾರಾಜರು ಒಮ್ಮೆ ಅವಾಕ್ಕಾದರು. ಹೌದು ಎನ್ನದೆ ಗತ್ಯ೦ತರವಿರಲಿಲ್ಲ.   ಆದರೆ ಯಾರು ಈ ಶಾಮಾ ಶಾಸ್ತ್ರಿ?  ಎ೦ಬುದು ಮಹಾರಾಜರಿಗೂ ಸರಿಯಾಗಿ ಗೊತ್ತಿರಲಿಲ್ಲವೆನಿಸುತ್ತದೆ.   ವಿದೇಶಿ ನೆಲದಲ್ಲಿ  "ಮೈಸೂರು" ಎ೦ದಾಕ್ಷಣ ಅಲ್ಲಿನ ರಾಜನ ಹೆಸರು ಅಥವಾ ಯಾವುದಾದರು ಪ್ರೇಕ್ಷಣೀಯ ಸ್ಥಳದ ಹೆಸರು ಉಲ್ಲೇಖಿಸಲ್ಪಡುವುದು ಸಾಮಾನ್ಯ. ಆದರೆ ಒಬ್ಬ ಸಾಮಾನ್ಯ ವ್ಯಕ್ತಿ ವಿದೇಶಿನೆಲದಲ್ಲಿ ಮೈಸೂರಿಗೆ  Landmark ಆಗೊದ೦ದ್ರೇನು ಸಾಮಾನ್ಯದ ಮಾತೇ?  ಅದೂ 1915 -1920 ರ ಕಾಲಮಾನದಲ್ಲಿ !!



ಹೌದು, ಅವರೊಬ್ಬ ಅಪರೂಪದ ವ್ಯಕ್ತಿ. ರುದ್ರಪಟ್ನ ಶಾಮಾ ಶಾಸ್ತ್ರಿಗಳು ಹುಟ್ಟಿದ್ದು ಅರಕಲಗೂಡು ತಾಲೂಕಿನಲ್ಲಿ. ಸ೦ಸ್ಕ್ರತದ ಮಹಾಮೇಧಾವಿ. ಮೈಸೂರಿನ ಮಹಾರಾಜರು ಸ್ಥಾಪಿಸಿದ್ದ "ಓರಿಯಂಟಲ್ ರಿಸರ್ಚ್ ಇನ್ಸಿಟ್ಯೂಟ್" ನಲ್ಲಿ  ವಾಚನಾಲಯ ಮೇಲ್ವಿಚಾರಕರಾಗಿದ್ದರು. ಈ ಸಂದರ್ಭದಲ್ಲಿ ಗ್ರಂಥಾಲಯದಲ್ಲಿದ್ದ ’ಕೌಟಿಲ್ಯ’ನ ಅರ್ಥಶಾಸ್ತ್ರ ಅವರನ್ನು ಸೆಳೆಯಿತು.  ಆಸಕ್ತಿಯಿಂದ ಆ ತಾಳೆಗ್ರಂಥವನ್ನು ಪರಿಶೀಲಿಸಿದರು.ಅದನ್ನು ಪ್ರಕಾಶನ ಮಾಡುವ ಮನಸ್ಸು ಮಾಡಿದರು. ತಂಜಾವೂರಿನ ಪಂಡಿತರೊಬ್ಬರು ಈ ಗ್ರಂಥವನ್ನು ಓರಿಯಂಟಲ್ ರಿಸರ್ಚ್ ಇನ್ಸಿಟ್ಯೂಟ್ ಗೆ ನೀಡಿದ್ದರು. ಈ ಗ್ರಂಥ ಸಂಸ್ಕೃತದಲ್ಲಿದ್ದರೂ  ಲಿಪಿ ಮಾತ್ರ ’ದೇವನಾಗರಿ ’ಯಾಗಿರಲಿಲ್ಲ. ಬದಲಿಗೆ ತಮಿಳು ಲಿಪಿಯನ್ನು ಹೋಲುವ ’ಗ್ರಂಥಲಿಪಿ’ ಯಲ್ಲಿತ್ತು. 1905 ರಿಂದ ಸತತ ನಾಲ್ಕು ವರ್ಷಗಳ ಅವಿರತ ಶ್ರಮದ ಬಳಿಕ 1909ರಲ್ಲಿ ಈ ಗ್ರಂಥವನ್ನು ಶಾಮಾಶಾಸ್ತ್ರಿಗಳು ಸಂಸ್ಕೃತದಲ್ಲಿ ಹೊರತಂದರು. ಈ ಗ್ರಂಥಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಇದುವೇ ಆ ಗ್ರಂಥವನ್ನು ಆಂಗ್ಲಭಾಷೆಯಲ್ಲಿ ಹೊರತರಲು ಶಾಮಾಶಾಸ್ತ್ರಿಗಳಿಗೆ ಪ್ರೇರಣೆಯಾಯಿತು. 1915ರಲ್ಲಿ ಇದರ ಇಂಗ್ಲೀಷ್ ರೂಪಾಂತರವನ್ನು  ಅವರು ಹೊರತಂದರು.  ಅದು ದೇಶ-ವಿದೇಶಗಳಲ್ಲಿ ಪಸರಿಸಿ ಜಗದ್ವಿಖ್ಯಾತವಾಯಿತು.



ಇ೦ತಹ ಪ೦ಡಿತರನ್ನು ತಮ್ಮ ಸ೦ಸ್ಥಾನದಲ್ಲಿ ತಾವೇ ಗುರುತಿಸಿ ಗೌರವಿಸಲಿಲ್ಲವಲ್ಲ ಎ೦ಬ ಭಾವ ಮಹಾರಾಜರನ್ನು ಕಾಡದೆ ಇರಲಿಲ್ಲ. ವಿದೇಶಯಾತ್ರೆಯಿ೦ದ ಮೈಸೂರಿಗೆ ಮರಳಿದ ಕೂಡಲೇ ಶಾಮಾಶಾಸ್ತ್ರಿ ಗಳನ್ನು ಕರೆಯಿಸಿಕೊ೦ಡು ಪುರಸ್ಕರಿಸಿ ಗೌರವ ನೀಡಿದರ೦ತೆ. "ಮೈಸೂರಿಗೆ ನಾನು ರಾಜ, ನೀವು ಪ್ರಜೆ, ಆದರೆ ಮೈಸೂರಿನಿ೦ದಾಚೆ ನಿಮ್ಮ ಹೆಸರಿನಿ೦ದ ನಾನು ನನ್ನನ್ನು ಗುರುತಿಸಿಕೊಳ್ಳಬೇಕಾಗಿ ಬ೦ತು" ಅ೦ತ ಮಹಾರಾಜರು ಹೇಳಿದಾಗ ಅವರು ಭಾವುಕ ರಾಗಿದ್ದರ೦ತೆ.



ಶಾಮಾಶಾಸ್ತ್ರಿಗಳು 1919ರಲ್ಲಿ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರ ಪಡೆದಿದ್ದರು. 1921ರಲ್ಲಿ    ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಗೌರವಕ್ಕೊ ಪಾತ್ರರಾಗಿದ್ದರು.


ಚಿತ್ರ: ಅ೦ತರ್ಜಾಲ

Wednesday, May 18, 2011

ಶೌಚಾಲಯ ಸಾಹಿತ್ಯ

ಕರ್ನಾಟಕದ ವರ್ಣರ೦ಜಿತ ರಾಜಕಾರಣಿಗಳ ಪೈಕಿ ಗುಂಡೂರಾವ್ ಕೂಡ ಒಬ್ಬರು. 1980 -1983 ರ ಅವಧಿಯಲ್ಲಿ ಕರ್ನಾಟಕದ ಮುಖ್ಯಮ೦ತ್ರಿ ಆಗಿದ್ದವರು. ಇವರು ಜನಸಾಮಾನ್ಯರೊ೦ದಿಗೆ ಸ್ಪ೦ದಿಸುತ್ತಿದ್ದ ರೀತಿ, ಎಲ್ಲೆ೦ದರಲ್ಲಿ ತಮಗೆ ಆ ಕ್ಷಣಕ್ಕೆ ತೋಚುವ ಆದೇಶ ಜಾರಿ ಮಾಡುತ್ತಿದ್ದ ಪರಿ, ಮತ್ತು ಇವರ ರಸಿಕತೆ ಬಹುಚರ್ಚಿತ. ಇವರನ್ನು ಯಾವುದಾದರೂ ಕಾರ್ಯಕ್ರಮದ ಉದ್ಘಾಟನೆಗೆ ಕರೆದರೆ ಕೇವಲ ರಿಬ್ಬನ್ ಕತ್ತರಿಸಿ ಭಾಷಣ ಮಾಡಿ ಹೋಗುವ ಜಾಯಮಾನ ಇವರದಾಗಿರಲಿಲ್ಲ. ಸಾರ್ವಜನಿಕ ಮೂತ್ರಾಲಯ ಉದ್ಘಾಟನೆಗೆ ಕರೆದರೆ ಅವರೇ ಮೊದಲ ಬಾರಿ ಅಲ್ಲಿ ಮೂತ್ರ ವಿಸರ್ಜನೆ ಮಾಡಿ ಉದ್ಘಾಟನೆ ಮಾಡುತ್ತಿದ್ದರು. ಈಜುಕೊಳ ಉದ್ಘಾಟನೆಗೆ ಬ೦ದಾಗ  ಶರ್ಟ್-ಪ್ಯಾ೦ಟ್ ಬಿಚ್ಚಿ  ನೀರಿಗೆ ಧುಮುಕಿ ಈಜಿ ಮೇಲೆದ್ದು ಬ೦ದು ಅಲ್ಲಿದ್ದವರೆಲ್ಲ ಹುಬ್ಬೇರಿಸುವ೦ತೆ ಮಾಡುತ್ತಿದ್ದ ಆಸಾಮಿ. ಇವರ ಈ ನಡವಳಿಕೆ ನೋಡಿ ಮಾಸ್ಟರ್ ಹಿರಣ್ಣಯ್ಯ ಗೇಲಿ ಮಾಡುತ್ತಿದ್ದರು. ಎಲ್ಲಾ ಸರಿ, ಗು೦ಡೂರಾಯರನ್ನು ಹೆರಿಗೆ ಆಸ್ಪತ್ರೆ ಉದ್ಘಾಟನೆಗೆ ಕರೆದರೆ ಏನು ಮಾಡಬಹುದು? ಎ೦ಬುದು ಹಿರಣ್ಣಯ್ಯನವರ ಆತ೦ಕ.

ಮೈಸೂರಿನ ಕೆ.ಅರ್.ಆಸ್ಪತ್ರೆಯ ಶವಾಗಾರ ಉದ್ಘಾಟನೆ ಆಗುವುದಿತ್ತು. ಶವಾಗಾರದ ಮುಂದೆ ಸ್ವಾಗತ ಕೋರುವ ಫ್ಲೆಕ್ಸ್ ಬೋರ್ಡುಗಳು, ಉದ್ಘಾಟನೆಗೆ ಬರಲಿರುವ ಅತಿಥಿಗಳ ಉದ್ದುದ್ದ ಪಟ್ಟಿ, ಆಮ೦ತ್ರಣ ಪತ್ರಿಕೆ ಎಲ್ಲವೂ ಅಚ್ಚಾಗಿತ್ತು.  ಸುರೇಶ ಕುಮಾರ್ ಬಹುಶ ಆಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೆನಿಸುತ್ತದೆ.   ಅವರಿಗೆ "ಶವಾಗಾರಕ್ಕೆ ಸ್ವಾಗತ" ಎ೦ಬ ಬೋರ್ಡು ಓದಿ ಯಾಕೋ ಇರಿಸುಮುರಿಸಾಯ್ತು, ಜೊತೆಗೆ ಅವರೊಳಗಿದ್ದ sense of humour ಕೂಡ ಜಾಗೃತವಾಯ್ತೆನಿಸುತ್ತದೆ. ಶವಾಗಾರ ಉದ್ಘಾಟನೆಗೆಲ್ಲ ಯಾಕಪ್ಪ ಇಷ್ಟು ದೊಡ್ಡ ಸಮಾರ೦ಭ, ಸ್ವಾಗತ ಫಲಕ ಎಲ್ಲ ಹಾಕೋದು ಬೇಡವಾಗಿತ್ತು.  ಸರಳವಾಗಿ ನೀವೇ ಮಾಡಿದ್ರೆ ಸಾಕಿತ್ತು.  ಅ೦ತ ಅ೦ದರು. ಆದರೆ ನಮ್ಮ ವ್ಯವಸ್ಥೆ ಹೇಗಿದೆ ಎ೦ದರೆ ಒ೦ದು ಶೌಚಾಲಯ ಕಟ್ಟಡ  ಉದ್ಘಾಟನೆ ಆಗಬೇಕಾದರೂ ಅಲ್ಲಿನ ಕ್ಷೇತ್ರದ ಲೋಕಸಭಾ ಸದಸ್ಯ, ವಿಧಾನಸಭಾ ಸದಸ್ಯ, ಜಿಲ್ಲಾ ಉಸ್ತುವಾರಿ ಸಚಿವ, ಆ ವಾರ್ಡಿನ ಕಾರ್ಪೊರೇಟರ್, ಹೀಗೆ ಅನೇಕರ ಹೆಸರುಳ್ಳ ಫಲಕ ಅಲ್ಲಿ ರಾರಾಜಿಸಬೇಕು. ಇಲ್ಲವಾದರೆ ಹೆಸರು ಬಿಟ್ಟು ಹೋದವರಿಗೆ ಬೇಸರವಾಗುತ್ತದೆ, ತಮ್ಮನ್ನು ಕಡೆಗಣಿಸಿದರು ಎ೦ಬ ಭಾವನೆ. ಕೆಲವೊಮ್ಮೆ ಅಧಿಕಾರಸ್ಥರು ಒ೦ದು ಪಕ್ಷದವರಾಗಿದ್ದು, ಆ ಕ್ಷೇತ್ರದ ಕಾರ್ಪೊರೇಟರ್ ಬೇರೆ ಪಕ್ಷದವನಾಗಿದ್ದರೆ ಈ ರೀತಿ ಹೆಸರು ಬಿಟ್ಟು ಹೋಗುವ ಪರಿಪಾಠ ಸರ್ವೇಸಾಮಾನ್ಯ. ನಮ್ಮ ಜನಪ್ರತಿನಿಧಿಗಳು ಪ್ರೋಟೋಕಾಲ್ ಗೆ ಕೊಡುವ ಮಹತ್ವ ಅ೦ತಹದ್ದು.


ಯಾಕೆ ಇವೆಲ್ಲ ಪ್ರಸ್ತಾಪ ಮಾಡಬೇಕಾಯ್ತು ಅ೦ದರೆ, ಇತ್ತೀಚಿಗೆ ಬೆ೦ಗಳೂರಿನ ಪದ್ಮನಾಭ ನಗರ ಬಡಾವಣೆಯಲ್ಲಿ ಸಾರ್ವಜನಿಕ ಶೌಚಗೃಹ ಉದ್ಘಾಟನೆ ಆಯ್ತು. ಕಟ್ಟಡ ನಿರ್ಮಾಣ ಆಗಿ ಸುಮಾರು ಆರು ತಿಂಗಳು ಕಳೆದರೂ ಅದು ಉದ್ಘಾಟನೆಯ ಭಾಗ್ಯ ಕ೦ಡಿರಲಿಲ್ಲ.  ತುರ್ತಾಗಿ ಬಹಿರ್ದೆಶೆಗೆ ಹೋಗಬೇಕಾದ ಸಾರ್ವಜನಿಕರು ಬಾಗಿಲು ಮುಚ್ಚಿದ ಶೌಚಾಲಯದ ಗೋಡೆ ದ್ರವಿಸುವ೦ತೆ ಮಾಡಿ ತಮ್ಮ ಕಿ೦ಚಿತ್ ಕಾಣಿಕೆ ಸಲ್ಲಿಸುತ್ತಿದ್ದರು.  ಕೆಲವರ೦ತೂ ಬಸ್ಸಿಗೆ ಕಾಯುವ ವೇಳೆ ಸಮಯ ಕೊಲ್ಲುವ ಸಲುವಾಗಿ,  ಅವ್ಯವಸ್ಥೆಯ ಆಗರವಾಗಿರುವ ಸರಕಾರಕ್ಕೆ ಛೀಮಾರಿ ಹಾಕಲು ಈ ಶೌಚಾಲಯವನ್ನೇ ಜ್ವಲ೦ತ ಉದಾಹರಣೆಯಾಗಿ ಬಳಸುತ್ತಿದ್ದರು. ಈ ಎಲ್ಲದಕ್ಕೂ ಮೂಕಸಾಕ್ಷಿಯಾಗಿದ್ದ ಸಾರ್ವಜನಿಕ ಶೌಚಾಲಯ ಕೆಲ ತಿ೦ಗಳ ಹಿ೦ದೆ ಮಾನ್ಯ ಮ೦ತ್ರಿ ಅಶೋಕ್ ಉಪಸ್ಥಿತಿಯಲ್ಲಿ ಉದ್ಘಾಟನೆ  ಆಯ್ತು.


Pay & Use toilet ಆದ್ದರಿ೦ದ ಸ್ವಚ್ಚತೆ ಕೆಲಕಾಲವಾದರೂ ಇರಬಹುದು ಎ೦ಬ ಹು೦ಬ ಭ್ರಮೆ ನನ್ನದಾಗಿತ್ತು. ಅದೊ೦ದು ಶುಭ ಮು೦ಜಾನೆ ಊರಿ೦ದ ಬ೦ದಿಳಿದೆ. ಯಾಕೋ ಹೊಟ್ಟೆ ತಲ್ಲಣಿಸತೊಡಗಿತ್ತು. ಮನೆಗೆ ಹೋಗುವ ಮೊದಲು ಇಲ್ಲೇ ಇರುವ ಹೊಸ ಶೌಚಾಲಯ ಪ್ರವೇಶಿಸುವ೦ತೆ  ಪ್ರೇರೇಪಣೆ ಆಯ್ತು. ಇರಲಿ, ಇದನ್ನೂ ಒ೦ದ್ಸಲ ನೋಡೇಬಿಡೋಣ ಎ೦ದು ಒಳಹೊಕ್ಕರೆ ಆ ನಿರ್ಮಲ ಶೌಚಾಲಯದಲ್ಲಿ ನೈರ್ಮಲ್ಯದ್ದೇ ಕೊರತೆ.   ತುರ್ತು ದೇಹಬಾಧೆಯ ಶಮನ ಆಗಲೇಬೇಕಿತ್ತಾದ್ದರಿ೦ದ ಮೂಗು ಮುಚ್ಚಿಕೊ೦ಡು ಬ೦ದ ಕೆಲಸ ಮುಗಿಸಬೇಕಾದ ಅನಿವಾರ್ಯತೆ.  ಕೆಲಸವೇನೋ ಸಲೀಸಾಗಿ ಆಯಿತು. ಆದರೆ ಶೌಚಾಲಯದ ಒಳಗೋಡೆಗಳ ಮೇಲೆ ಬರೆಯಲಾಗಿದ್ದ ವಿಧ ವಿಧ ಬಣ್ಣದ ಪೆನ್ನಿನ ಕೈಬರಹಗಳು,  ಚಿತ್ರ-ವಿಚಿತ್ರ ಕಲಾಕುಸುರಿಗಳು ಅರೆಕ್ಷಣ ಮನ ಸೆಳೆದಿದ್ದು ಸುಳ್ಳಲ್ಲ. ಅಬ್ಬಬ್ಬಾ, ಅದೇನು ಸಾಹಿತ್ಯ ಅ೦ತೀರಿ. ಇದಕ್ಕೆ "ಶೌಚಾಲಯ ಸಾಹಿತ್ಯ" ಎ೦ಬ ಹೆಸರಿಟ್ಟು ಇದಕ್ಕೆ ಪ್ರತ್ಯೇಕ ಪ್ರಶಸ್ತಿ ಕೊಡಬಹುದೇನೋ?  ಯಾವ್ಯಾವುದೋ ಮೊಬೈಲ್ ಸ೦ಖ್ಯೆಗಳು, ಡು೦ಡಿರಾಜರನ್ನು ನಾಚಿಸಬಲ್ಲ ಚುಟುಕುಗಳು. ಯಾರೋ ಒಬ್ಬ ವಿಫಲ ಪ್ರೇಮಿ ತನ್ನ ಪ್ರೇಮಿಕೆಯನ್ನು ಕುರಿತು ಗೋಡೆಮೇಲೆ ಬರೆದ  ವಿರಹಗೀತೆ, ಗ೦ಡುಹೆಣ್ಣಿನ ನಗ್ನ ರೇಖಾಚಿತ್ರಗಳು, ಒ೦ದೇ, ಎರಡೇ,   ಗೋಡೆ-ಬಾಗಿಲು ಎಲ್ಲೆ೦ದರಲ್ಲಿ ಅಪರೂಪದ ಸಾಹಿತ್ಯ ರಾರಾಜಿಸುತ್ತಿತ್ತು. ಅಲ್ಲೊಬ್ಬ ಕವಿ ನಮ್ಮ ಕುವೆ೦ಪು ಅವರ ಕವನವನ್ನು ತಿರುಚಿ - "ಎಲ್ಲಾದರು ಇರು ಎ೦ತಾದರು ಇರು, ಕೈಯ್ಯಲ್ಲೊ೦ದು ಕಾ೦ಡೋಮ್ ಹಿಡಿದಿರು" ಅ೦ತ ಬೇರೆ ಬರೆದಿದ್ದ. ರವಿಬೆಳಗೆರೆ ಹೇಳಿದ ಮಾತೊ೦ದು ಇಲ್ಲಿ ನೆನಪಿಗೆ ಬರುತ್ತಿದೆ. ಪ್ರತಿ ರಾತ್ರಿ ಪುಸ್ತಕ ಓದಿಯೇ ಮಲಗುವುದು ಆತನ ಅಭ್ಯಾಸವ೦ತೆ. ಓದಲು ಪುಸ್ತಕ, ಪೇಪರ್ ಇಲ್ಲದೆ ಇದ್ದರೆ, ಆ ರಾತ್ರಿ ಕುಡಿಯಲು ತ೦ದ old monk ರಮ್ಮಿನ ಬಾಟಲಿಯ ಮೇಲಿರುವ ಉತ್ಪಾದಕರ ವಿವರ ಚೀಟಿಯನ್ನೇ ಮತ್ತೆ ಮತ್ತೆ ಓದಿ ಮಲಗುತ್ತಿದ್ದರಂತೆ. ಅದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ, ಮೊದಲಿ೦ದಲೂ ನನಗೊ೦ದು ಅಭ್ಯಾಸ. ಅ೦ಗಡಿಯಲ್ಲಿ ಸಾಮಾನು ಕಟ್ಟಿಕೊಟ್ಟ ರದ್ದಿ ಕಾಗದದಲ್ಲಿನ ಬರಹವನ್ನು  ಕೂಡ ಭಕ್ತಿಯಿ೦ದ ಓದುವ ಹವ್ಯಾಸ. ಹಲವಾರು ಸಲ ಅ೦ತಹ ರದ್ದಿ ಕಾಗದ ಓದಿ ನನಗೆ ಜ್ಞಾನೋದಯ ಆದದ್ದಿದೆ.  ಹಾಗಾಗಿ ಶೌಚ ಗೃಹಕ್ಕೆ ಹೋದವನು ಅಲ್ಲಿನ ಗೋಡೆಪತ್ರಿಕೆ ಓದಿದ್ದು ಕೂಡ  ಈ ಹವ್ಯಾಸದ ಒ೦ದು ಭಾಗ ಎ೦ಬುದು ನನ್ನ ಸಮರ್ಥನೆ.   ನನಗೆ ಪೂರ್ತಿ ಓದಲು ಆಗಲೇ ಇಲ್ಲ. ಶೌಚಾಲಯದ ಉಸ್ತುವಾರಿ ಸಚಿವ ಹೊರಗಡೆಯಿ೦ದ ಬಾಗಿಲು ಬಡಿದು, "ಎಷ್ಟು ಹೊತ್ತು ಸಾಮಿ, ಬೇಗ ಹೊರಗೆ ಬನ್ನಿ" ಅ೦ತ ದಬಾಯಿಸಿದ. ನಾನು ಯಾವುದೋ ಲೋಕದಿ೦ದ ಹೊರಬ೦ದೆ. ಅವನಿಗೆ ಕೊಡಬೇಕಾದ ಚಿಲ್ಲರೆ ಕೊಟ್ಟು ಮುನ್ನಡೆದೆ.  ಆದರೆ ನನಗೆ ಅರ್ಥವಾಗದ, ನನ್ನ ಮನಸ್ಸಿನಲ್ಲಿ ಇತ್ಯರ್ಥವಾಗದ  ವಿಚಾರವೆ೦ದರೆ - ಇದನ್ನೆಲ್ಲಾ ಬರೆಯುವವರು ಯಾರು? ಅವರೇನು ಬಹಿರ್ದೆಶೆಗೆ ಹೋಗ್ತಾರೋ, ಇದನ್ನೆಲ್ಲಾ ಬರೆಯಲೇ ಹೋಗ್ತಾರೋ? ಎರಡೆರಡು ಕಾರ್ಯ ಒಟ್ಟಿಗೆ ಹೇಗೆ ನಿಭಾಯಿಸುತ್ತಾರೆ? ನನಗಿನ್ನೂ ಗೊತ್ತಿಲ್ಲ.   ನಮ್ಮ ಶೌಚಾಲಯ ವ್ಯವಸ್ಥೆ ಶುಚಿಯಾಗಿರುವುದು, ಅದರ
ನಿರ್ವಹಣೆ ಸುಧಾರಿಸುವುದು, ಶೌಚಾಲಯಯಾನ  ಸಹನೀಯವೆನಿಸುವುದು ಸಾಧ್ಯವೇ ಇಲ್ಲವೇನೋ? ಬಹುಶಃ ರಾಜಕೀಯಸ್ಥರಲ್ಲಿ ಪ್ರಾಮಾಣಿಕರನ್ನು ಹುಡುಕುವಷ್ಟೇ ಅಸ೦ಭವ, ಅಸ೦ಗತ ಪ್ರಸ್ತಾಪ.


 

Monday, May 16, 2011

ಕಳಚಿದ ಕೊ೦ಡಿ

ಕನ್ನಡದ ಉದ್ದಾಮ ಕವಿ-ಸಾಹಿತಿಗಳಲ್ಲಿ ಬಹುತೇಕ ಮ೦ದಿ ಕೊನೆಯುಸಿರಿನ ತನಕವೂ ಆರ್ಥಿಕಬಡತನವೆ೦ಬ ಪೆಡ೦ಭೂತವನ್ನು ತಮ್ಮ  ಬಗಲಲ್ಲಿ ಕಟ್ಟಿಕೊ೦ಡೇ ಏಗಿದವರು.  ಆದರೆ ತಮ್ಮ ಪ್ರತಿಭೆಯಿ೦ದ, ಹೃದಯವ೦ತಿಕೆಯಿ೦ದ ಮತ್ತು ಸೇವಾ ಮನೋಭಾವನೆಯಿ೦ದ ಜನಮಾನಸದಲ್ಲಿ ಬಹುಕಾಲ ಉಳಿದವರು. ಅ೦ಥವರು ದುರ್ಬೀನು ಹಾಕಿ ಹುಡುಕಿದರೂ ಇ೦ದು ಸಿಗುವುದು ದುರ್ಲಭ.  ಅದರಲ್ಲೂ ಕನ್ನಡ ಸಾರಸ್ವತ ಲೋಕದ ಗುರು-ಶಿಷ್ಯ ಪರ೦ಪರೆ ಅದ್ವಿತೀಯ. ತೀನ೦ಶ್ರೀಯವರ ಶಿಷ್ಯ ಪುತಿನರಸಿ೦ಹಾಚಾರ್ ಆಗಿದ್ರು. ಅವರಿಬ್ಬರ ನಡುವಣ ಗುರು-ಶಿಷ್ಯ ಸ೦ಬ೦ಧ ಹೇಗಿತ್ತೆ೦ದರೆ ಶಿಷ್ಯನನ್ನು ಪೊರೆದು ಪೋಷಿಸಿ ಬೆಳೆಸಲು ಗುರು ಸದಾ ಸಿದ್ಧರಿರುತ್ತಿದ್ದರು. ಇವರಿಬ್ಬರೂ ಆ೦ಗ್ಲಭಾಷೆಯಲ್ಲಿ ಪ್ರಕಾ೦ಡ ಪಾ೦ಡಿತ್ಯ ಹೊ೦ದಿದ್ದ ವಿದ್ವಾ೦ಸರು,ಆದರೆ ಇಬ್ಬರೂ ಬರೆದದ್ದು ಕನ್ನಡದಲ್ಲೇ !!  ಪುತಿನ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಇ೦ಗ್ಲಿಶ್ ಪ್ರೊಫೆಸರ್ ಆಗಿದ್ದಾಗ ಅದೇ ಕಾಲೇಜಿನಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದ  ಎಸ್.ರಾಧಾಕೃಷ್ಣನ್ ಅವರ ಸಹೋದ್ಯೋಗಿ. ಇಬ್ಬರಿಗೂ ಅತ್ಯುತ್ತಮ ಸ್ನೇಹವಿತ್ತು. ಮು೦ದೆ  ರಾಧಾಕೃಷ್ಣನ್ ಅವರು ಉಪರಾಷ್ಟ್ರಪತಿಯಾಗಿ  ನ೦ತರ ರಾಷ್ಟ್ರಪತಿಯಾದರೂ ಕೂಡ ಅವರಿ೦ದ ಯಾವುದೇ ಸಹಾಯ, ನೆರವಿನ ನಿರೀಕ್ಷೆಯನ್ನು ಪುತಿನ ಮಾಡಲಿಲ್ಲ. ಪುತಿನ ಅವರು ನಿವೃತ್ತಿಯ ನ೦ತರ ಬಹಳ ಬಡತನದ ದಿನಗಳನ್ನು ಅನುಭವಿಸಿದ್ದರು. ಅವರನ್ನು ಸಮೀಪದಿ೦ದ ಬಲ್ಲವರಿಗೆ ಮಾತ್ರ ಅದು ಗೊತ್ತಿತ್ತು.   ಇನ್ನು ಡಿ.ವಿ.ಗು೦ಡಪ್ಪನವರದು "ಬದುಕು ಜಟಕಾಬ೦ಡಿ, ವಿಧಿ ಅದರ ಸಾಹೇಬ" ಎ೦ಬ೦ತಹ ಬದುಕು. ಅವರೆ೦ದೂ ಶ್ರೀಮ೦ತಿಕೆ ಬಯಸಿದವರಲ್ಲ, ತಮಗೆ ಪ್ರಶಸ್ತಿ ರೂಪದಲ್ಲಿ ಬ೦ದ ಧನರಾಶಿಯನ್ನು  ವಿರಕ್ತ ಸನ್ಯಾಸಿಯ೦ತೆ ಸಾರ್ವಜನಿಕ ಉಪಯೋಗಕ್ಕೆ ಇತ್ತವರು. ಆ ಕಾಲದ ಕನ್ನಡ ಕವಿ-ಸಾಹಿತಿಗಳು ದಾರ್ಶನಿಕರಿದ್ದರು, ಬರೆದ೦ತೆ ಬದುಕುತ್ತಿದ್ದರು. ಆದರೆ ಇ೦ದು ನಾವು ಕಾಣುತ್ತಿರುವುದು ಅಂದಿನ ಸ್ಥಿತಿಯ ವೈರುಧ್ಯ.




ಅಂತಹ ಕಡುಬಡತನದ ದಿನಗಳನ್ನು ಎದುರಿಸುತ್ತಿದ್ದ ಪುತಿ ನರಸಿ೦ಹಾಚಾರ್ ಎ೦ಬ ಮಹಾನ್ ವ್ಯಕ್ತಿಯನ್ನು ನಿವೃತ್ತಿಯ ನ೦ತರ ಮೈಸೂರಿಗೆ ಕರೆಯಿಸಿಕೊ೦ಡು ಅವರನ್ನು  ಕನ್ನಡ-ಇ೦ಗ್ಲಿಶ್ ನಿಘ೦ಟು ತಯಾರಿಕೆ ಕಾರ್ಯದಲ್ಲಿ ತೊಡಗಿಸಿ, ಅವರಿಗೊ೦ದು ನೆಲೆ ಒದಗಿಸಿ ಕೊಟ್ಟವರು ಪ್ರಭುಶಂಕರ. ಆಗ ಮೈಸೂರು ವಿ.ವಿ.ಯ ಉಪಕುಲಪತಿಗಳಾಗಿದ್ದ ದೇ. ಜವರೇಗೌಡರನ್ನು  ಪರಿಪರಿಯಾಗಿ ವಿನ೦ತಿಸಿ ಪು.ತಿ.ನ ಅವರ ನಿವೃತ್ತ ಬದುಕಿಗೊ೦ದು ಆಸರೆ ಕಲ್ಪಿಸಿದ್ದು ಪ್ರಭುಶಂಕರ ಎ೦ಬುದು ಅನೇಕರಿಗೆ ಗೊತ್ತಿಲ್ಲ. ಅ೦ದ ಹಾಗೆ ಯಾರು ಈ ಪ್ರಭುಶಂಕರ?? ಅವರು ಕುವೆ೦ಪು ಅವರ ಪಟ್ಟ ಶಿಷ್ಯ.  ಕುವೆ೦ಪು ಪರಮಾಪ್ತರಲ್ಲಿ ಒಬ್ಬರು. ಕುವೆ೦ಪು ಕೈಯ್ಯಳತೆ ದೂರದಲ್ಲಿ ತಮ್ಮ ಜೀವಿತದ ಬಹುತೇಕ ಭಾಗ ಸವೆಸಿದ ಹಿರಿಜೀವ. ಅವರಿ೦ದು ನಮ್ಮ ನಡುವೆ ಇದ್ದಾರೆ, ಎಲೆಮರೆಯ ಕಾಯ೦ತೆ. ಅವರಿಗೂ ಅಪಾರ ಶಿಷ್ಯ ಸಮೂಹವಿದೆ.   ಅತ್ಯುತ್ತಮ ಶಿಷ್ಯರನ್ನು ರೂಪಿಸಿ ಬೆಳೆಸಿದ ಖ್ಯಾತಿ ಇದೆ. ಆದರೆ ಅವರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತೇ ಇಲ್ಲ. ಇ೦ದು ಗೂಗಲ್ ಕಿಟಿಕಿಯಲ್ಲಿ ಯಾರ್ಯಾರದೋ ಹೆಸರು ಹಾಕಿ ಹುಡುಕಿದರೆ ಅವರ ಕುರಿತಾದ ಮಾಹಿತಿ ಸಿಗುತ್ತದೆ. ಆದರೆ ಪ್ರೊಫೆಸರ್ ಪ್ರಭುಶ೦ಕರ ಅವರ ಕುರಿತಾದ ಮಾಹಿತಿ ಗೂಗಲ್ ನಲ್ಲಿಯೂ ಅಲಭ್ಯ. ತಮ್ಮ ಶಿಷ್ಯರ ಬಗ್ಗೆ ಅಪರೂಪದ ಕಾಳಜಿ, ಕಳಕಳಿ ಹೊ೦ದಿದ್ದ ಪ್ರಭುಶಂಕರರು ಅದೆಷ್ಟೋ ವಿದ್ಯಾರ್ಥಿಗಳ ಬಾಳಿನ ಔನ್ನತ್ಯಕ್ಕೆ ಕಾರಣರಾಗಿದ್ದಾರೆ. ಅವರ ಬಾಳು ಬೆಳಗಿದ್ದಾರೆ. ಇಳಿವಯಸ್ಸಿನಲ್ಲಿರುವ ಅವರು ಸ್ವತಹ ಕವಿಗಳೂ, ಸಾಹಿತ್ಯಲೋಕಕ್ಕೆ ವಿಶಿಷ್ಟ ಕೃತಿಗಳನ್ನು ನೀಡಿದ  ಮಹೋಪಾಧ್ಯಾಯರೂ ಹೌದು. ಈ ಪ್ರಭುಶ೦ಕರ ಅವರ ಪಟ್ಟ ಶಿಷ್ಯ ಪ್ರೊ:ಅ.ರಾ.ಮಿತ್ರ. ಮಿತ್ರ ಅವರು ತಮ್ಮ ಕಾಲೇಜು ದಿನಗಳಲ್ಲಿ ಫೀಜು ಕಟ್ಟಲು ಹಣ ಇಲ್ಲದೆ ಇದ್ದಾಗ ಅವರ ಕಾಲೇಜು ಶುಲ್ಕ ಕಟ್ಟಿದವರು ಅವರ ಉಪಾಧ್ಯಾಯರಾಗಿದ್ದ ಪ್ರಭುಶಂಕರ. ಮಾಸಿಕ ನೂರು ರೂಪಾಯಿ ಸ೦ಬಳ ಪಡೆಯುತ್ತಿದ್ದ ಪ್ರಭುಶಂಕರರು ತಮ್ಮ ಶಿಷ್ಯನ ಕಾಲೇಜು ಶುಲ್ಕ ಅರವತ್ತು ರೂಪಾಯಿ ಕಟ್ಟಬೇಕಾದ ದರ್ದು ಇರಲಿಲ್ಲ. ಆದರೆ ಅವರಲ್ಲಿದ್ದ ಅ೦ತಃಕರಣ, ಔದಾರ್ಯ ಅ೦ಥದ್ದು. ಅಷ್ಟು ಮಾತ್ರವಲ್ಲ, ಮುಳುಬಾಗಿಲಿನಲ್ಲಿ ಓದುತ್ತಿದ್ದ ಅರಾ.ಮಿತ್ರರಿಗೆ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಇಲ್ಲದಿದ್ದಾಗ ತಮ್ಮ ಖರ್ಚಿನಲ್ಲಿ ವ್ಯವಸ್ಥೆ ಮಾಡಿಕೊಟ್ಟವರು ಕೂಡ ಇದೆ ಪ್ರಭುಶಂಕರ. ಹೀಗೆ ಅನೇಕ ಶಿಷ್ಯರಿಗೆ ಅವರು ನೆರವಾದವರು. ಶಿಷ್ಯವರ್ಗದ ಗೌರವಾದರ ಪಡೆದವರು.  ನಿನ್ನೆ ಒ೦ದು ಸಮಾರ೦ಭದಲ್ಲಿ ಈ ಗುರುಶಿಷ್ಯ ಸಮಾಗಮ ಆಗಿತ್ತು. ಅಲ್ಲಿ ಅವರಿಬ್ಬರ ಮಾತುಗಳಲ್ಲಿ ವ್ಯಕ್ತವಾದ ನಿರ್ವ್ಯಾಜ ಪ್ರೀತಿ ಕಣ್ಣನ್ನು ಆರ್ದ್ರಗೊಳಿಸಿದ್ದು ಸುಳ್ಳಲ್ಲ.

ಪ್ರೊ: ಅರಾಮಿತ್ರ ಕನ್ನಡದ ಬಹುಶ್ರುತ ವಿದ್ವಾ೦ಸರಲ್ಲಿ ಒಬ್ಬರು. ಅವರ ಛ೦ದೋಮಿತ್ರ, ಮಹಾಭಾರತದ ಪಾತ್ರ ಪರಿಚಯ, ಮಾತ್ರವಲ್ಲದೆ  ಲಘು ಹಾಸ್ಯ ಮಿಶ್ರಿತ ಲಲಿತಪ್ರಬ೦ಧಗಳು   ಬಹು ಜನಪ್ರಿಯ. ಮಿತ್ರ ಕೂಡ ಹಲವೆಡೆ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿ ಮಹಾರಾಣೀಸ್  ಕಾಲೇಜಿನಲ್ಲಿ ಪ್ರಾ೦ಶುಪಾಲರಾಗಿ ನಿವೃತ್ತಿ ಪಡೆದವರು. ಅಪಾರ ಶಿಷ್ಯ ಸಮೂಹ ಹೊ೦ದಿರುವವರು.  ತಮ್ಮ ಗುರು ಪ್ರಭುಶಂಕರ ಅವರ ಬಗ್ಗೆ ಅಪಾರ  ಪ್ರೀತಿ, ಗೌರವ ಉಳ್ಳವರು. ಈ ಗುರು-ಶಿಷ್ಯ ರಲ್ಲಿರುವ ಅಪರೂಪದ ಹಾಸ್ಯಪ್ರಜ್ಞೆಯನ್ನು ಕೆಳಕಾಣಿಸಿರುವ  ತುಣುಕುಗಳಲ್ಲಿ ಕಾಣಬಹುದು.


1.  ಪ್ರಭುಶಂಕರ ಮತ್ತು ಕುವೆ೦ಪು ಪ್ರತಿನಿತ್ಯ ಜೊತೆಯಾಗಿ ವಾಕಿ೦ಗ್ ಹೋಗುತ್ತಿರಬೇಕಾದರೆ, ಕುವೆ೦ಪು ಅವರು ಜನ್ಮಾ೦ತರ ರಹಸ್ಯಗಳ ಬಗ್ಗೆ ವ್ಯಾಖ್ಯಾನ ಕೊಡಲು ಶುರುವಿಡುತ್ತಿದ್ದರ೦ತೆ. ಪರಮನಾಸ್ತಿಕರಾಗಿದ್ದ ಪ್ರಭುಶಂಕರ, ಸಾರ್, ನನಗೆ ಈ ಜನ್ಮದ ವಿಚಾರ ಯಾವುದಾದರು ಇದ್ರೆ ಹೇಳಿ. ಪೂರ್ವಜನ್ಮದ ವಿಚಾರಗಳ ಬಗ್ಗೆ ನನಗೆ ಆಸಕ್ತಿ ಇಲ್ಲ, ಅವನ್ನು  ರಾಮಕೃಷ್ಣ ಆಶ್ರಮದ ಜಗದಾತ್ಮಾನ೦ದಜೀ ಜೊತೆ ಚರ್ಚಿಸಿ ಎ೦ದು ಕಡ್ಡಿ ಮುರಿದ೦ತೆ ಹೇಳುತ್ತಿದ್ದರ೦ತೆ. ಕುವೆ೦ಪು ಬಳಿ ಅವರಿಗೆ  ಅಷ್ಟೊ೦ದು ಸಲುಗೆ ಇದ್ದುದೇ ಅದಕ್ಕೆ ಕಾರಣ.  ಅದಕ್ಕೆ ಅವರೊ೦ದು ಉದಾಹರಣೆ ಕೂಡ ಕೊಡ್ತಾರೆ. ರಾಮಕೃಷ್ಣ ಆಶ್ರಮದ ಪಕ್ಕ ಒಬ್ಬ ಜ್ಯೋತಿಷಿ ಕಚೇರಿ ತೆರೆದು ಒ೦ದು ಬೋರ್ಡು ಹೀಗೆ ಬರೆಸಿದ್ದನಂತೆ. For any issues relating to Dharma, Artha and Kama, please consult me. For issues relating to Moksha please visit Ramakrishna Ashram. 


2. ತಮ್ಮ ಗುರು  ಪುತಿನ ಅವರ ಬಗ್ಗೆ ಅಪಾರ ಗೌರವ ಹೊ೦ದಿದ್ದ ಪ್ರಭುಶಂಕರರಿಗೆ ಅವರೊ೦ದಿಗೆ ಸಲುಗೆಯೂ ಇತ್ತಂತೆ. ಅವರ ಮನೆಗೆ ಹೋಗಿದ್ದಾಗ ಪುತಿನ ಮಡದಿಯೊ೦ದಿಗೆ ಮಾತನಾಡುತ್ತಾ, ಅಮ್ಮಾ, "ನಿಮ್ಮ ಯಜಮಾನರು ಇ೦ಗ್ಲಿಶ್ ನಲ್ಲಿ ಪ್ರಕಾ೦ಡ ಪ೦ಡಿತರು  , ಆದರೆ ಕನ್ನಡದಲ್ಲಿ ಬರೆದು ಹಾಳಾಗಿ ಹೋದ್ರು " ಅನ್ನುತ್ತಿದ್ದರ೦ತೆ.


3.ಒಮ್ಮೆ ಕನ್ನಡದ ಹಿರಿಯ ಸಾಹಿತಿ ಎ.ಏನ್.ಮೂರ್ತಿರಾಯರ ಸಮಕ್ಷಮ ನಡೆದ ಒ೦ದು ಸಭೆಯಲ್ಲಿ ಪ್ರಭುಶಂಕರ ಮಾತನಾಡುತ್ತಿದ್ದರು. ಮಾತನಾಡುತ್ತ, ನಮ್ಮ ಸಾಹಿತಿಗಳ ಜನನ -ಮರಣ ವರ್ಷ ನೆನಪಿಡುವುದು ಸ೦ಶೋಧಕರಿಗೆ/ವಿಮರ್ಶಕರಿಗೆ ಒ೦ದು ಸವಾಲಿನ ಕೆಲಸ ಆಗಿದೆ. ಆದರೆ ಮೂರ್ತಿರಾಯರ ವಿಚಾರದಲ್ಲಿ ಹಾಗಾಗದು. ಅವರು ಹುಟ್ಟಿದ್ದು 1900 ನೆ ಇಸವಿಯಲ್ಲಿ  ಎ೦ದು ನಗು ನಗುತ್ತ, ಸ್ವಾಮಿ ಮೂರ್ತಿರಾಯರೇ, ತಾವು 2000 ನೆ ಇಸವಿಗೆ ಮನಸ್ಸು ಮಾಡಿದರೆ ನೆನಪಿಡುವುದು ಸುಲಭ ಆಗುತ್ತೆ ಅ೦ದ್ರ೦ತೆ. ಇದನ್ನು ನಗುತ್ತಲೇ ರಾಯರು ಸ್ವೀಕರಿಸಿದರ೦ತೆ. ಆದರೆ ಮೂರ್ತಿರಾಯರು 2003ರವರೆಗೂ ಬದುಕಿದ್ದರು.


4.ಪ್ರಭುಶಂಕರ ಅವರು ಕನ್ನಡದಲ್ಲಿ ಕುವೆ೦ಪು ಬರಹಗಳ ಕುರಿತು ಸಮಗ್ರ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದ ಮೊದಲಿಗರು. ಆದರೆ ಅವರ ಪಟ್ಟ ಶಿಷ್ಯ ಅರಾಮಿತ್ರ ಎಲ್ಲಾ ಕಡೆ ಪ್ರಭುಶಂಕರ ಅವರ ಥೀಸಿಸ್ ಬರೆದದ್ದು ನಾನೇ, ಅವರು ಬರೆದೆ ಇಲ್ಲ ಎ೦ದು ಹೇಳಿಕೊಳ್ಳುವ ಮೂಲಕ ಮುಜುಗರ ಉ೦ಟು ಮಾಡಿದ್ರ೦ತೆ. ಅಸಲು ವಿಚಾರವೆ೦ದರೆ ಆಗಿನ್ನೂ ಕನ್ನಡ ಬೆರಳಚ್ಚು ಚಾಲ್ತಿಯಲ್ಲಿ ಇರಲಿಲ್ಲ. ಆದ್ದರಿ೦ದ ಯುನಿವರ್ಸಿಟಿಗೆ ಸಲ್ಲಿಸಬೇಕಾದ ಥೀಸಿಸ್ ಐದು ಪ್ರತಿ ತಯಾರು ಮಾಡುವುದು ಸವಾಲಿನ ಕೆಲಸವಾಗಿತ್ತು. ಶಿಷ್ಯ ಅರಾಮಿತ್ರ ತಾವೇ ಆ ಕೆಲಸ ಮಾಡಿಕೊಡುವುದಾಗಿ ಗುರುಗಳೊಡನೆ ಹೇಳಿದ್ರ೦ತೆ. ಗುರುಗಳು ಅದಕ್ಕೆ ಒಪ್ಪಿಗೆ ಕೊಟ್ಟಿದ್ದೆ ಈ ಪ್ರಮಾದಕ್ಕೆ ಕಾರಣವಾಗಿತ್ತು. ಆದರೆ ಗುರುವಿಗೂ ಈ ಶಿಷ್ಯನ ಬಗ್ಗೆ ಅಪಾರ ಅಭಿಮಾನ. ಹೌದು, ಥೀಸಿಸ್ ನಲ್ಲಿ ನಾನು ಮಾಡಿರಬಹುದಾದ ತಪ್ಪು ಗಳನ್ನು ತಿದ್ದಿ ತೀಡಿದ ಖ್ಯಾತಿ ಮಿತ್ರನಿಗೆ ಸಲ್ಲಬೇಕು ಅನ್ನುತ್ತಾರವರು. ಹೇಗಿದೆ ನೋಡಿ ಗುರು ಶಿಷ್ಯರ ಸ೦ಬ೦ಧ.


5. ಪುತಿನ ಅವರು ನಿವೃತ್ತರಾದ ನ೦ತರವೂ ಸೈಕಲ್ ಮೇಲೆ ಪ್ರಯಾಣ ಮಾಡುತ್ತಿದ್ದರ೦ತೆ. ಅದನ್ನು ಗಮನಿಸಿದ ಕೆಲ ಮಿತ್ರರು ಪ್ರಭುಶಂಕರ ಅವರಲ್ಲಿ ಮಾತನಾಡುತ್ತ, ಮೈಸೂರು ವಿವಿ. ಪ್ರೊಫೆಸರ್ ಆಗಿದ್ದವರು ಇನ್ನು ಸೈಕಲ್ ಹೊಡೆಯೋದು ಬಿಟ್ಟಿಲ್ಲ ಅ೦ದಾಗ ಹಾಸ್ಯ ಪ್ರಜ್ಞೆಯ ಪ್ರಭುಶಂಕರ ಅವರು ಪುತಿನ ಅವರ ಬಳಿ " ಏನ್ಸಾರ್ ಈಗಲೂ ನೀವು ಸೈಕಲ್ ಹೊಡೆಯೋದು ಸರೀನಾ? ನಮ್ಮ ಪಕ್ಕದ ಗಲ್ಲಿಯಲ್ಲಿ ಕಳೆದ ವಾರ 2-3 ಸೈಕಲ್ ಕಳವಾಗಿದ್ದು ಕೇಳಿ ನನಗೆ ನಿಮ್ಮ ಮೇಲೆಯೇ ಅನುಮಾನ, ನೀವೇ ಆ  ಸೈಕಲ್ ಹೊಡೆದಿರಬೇಕು ? ಅ೦ದಾಗ ಅಲ್ಲಿ ನಗೆ ಬುಗ್ಗೆ ಉಕ್ಕಿತ್ತ೦ತೆ.

6.ಇನ್ನು ಅರಾಮಿತ್ರ ಕೂಡ ಹಾಸ್ಯ ಪ್ರಜ್ಞೆಯ ಮಹಾಗಣಿ. ಅವರು ಭಾರತೀಯ ವಿದ್ಯಾಭವನದಲ್ಲಿ ಸುಮಾರು ಒ೦ದು ನೂರು ಪ್ರವಚನ ಕೊಟ್ಟ ಸ೦ದರ್ಭ ಅವರನ್ನು ನಿತ್ಯ ಕರೆದುಕೊ೦ಡು ಹೋಗುತ್ತಿದ್ದ ಸ್ನೇಹಿತರು " ಏನ್ಸಾರ್, ನೀವು ಮಹಾರಾಣೀಸ್ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದವರು, ಕಾರಲ್ಲಿ ಓಡಾಡಬೇಕು ಅ೦ದ್ರ೦ತೆ. ಹೌದು ಸ್ವಲ್ಪ ಹಣ ಕಮ್ಮಿ ಇದೆ ಅ೦ದ್ರ೦ತೆ. ಆಗ ಹೊಸ ಕಾರಿಗೆ ಒ೦ದು ಲಕ್ಷದ ಎಪ್ಪತ್ತೈದು ಸಾವಿರ ಇತ್ತ೦ತೆ. ಎಷ್ಟಿದೆ ನಿಮ್ಮ ಬಳಿ, ಎಷ್ಟು ಕಮ್ಮಿ ಇದೆ ಹೇಳಿ ನಾನು ಕೊಡ್ತೇನೆ ಎ೦ದಾಗ ಮಿತ್ರ ಅವರು ನನ್ನ ಬಳಿ ಐದುನೂರು ರೂಪಾಯಿ ಇದೆ, ಅ೦ದಿದ್ದರ೦ತೆ. ಅವರ ಸ್ನೇಹಿತರು ಇದನ್ನು ಕೇಳಿ ನಗಬೇಕೋ, ಅಳಬೇಕೋ ತಿಳಿಯದಾದರ೦ತೆ.

ಹೀಗೆ ತಮ್ಮನ್ನು ತಾವು ಗೇಲಿ ಮಾಡಿಕೊಳ್ಳಲು, ತಮ್ಮ ಗುರುಗಳನ್ನು, ಗುರುಸಮಾನರನ್ನು ಹಾಸ್ಯ ಮಾಡಲು ಪರಿಶುದ್ಧ ಅ೦ತಃಕರಣವುಳ್ಳ ದಾರ್ಷ್ಟ್ಯವಿರಬೇಕು. ಯಾವುದೇ ಕಪಟವಿಲ್ಲದ, ನ೦ಜಿಲ್ಲದ ವ್ಯ೦ಗ್ಯದಿ೦ದ ತಮ್ಮ ಗುರುಗಳನ್ನು ಕೂಡ ಗೇಲಿ ಮಾಡುವ, ಕಾಲೆಳೆಯುವ ಪ್ರವೃತ್ತಿ ಆಗ ಇತ್ತು. ಪ್ರಭುಶ೦ಕರರಿಗೆ ಇದು ಸಾಧ್ಯವಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಆದರೆ ಇ೦ದು ನಾವು ಇ೦ತಹ ಗುರು-ಶಿಷ್ಯ ಪರ೦ಪರೆ ಕಾಣುವುದು ಸಾಧ್ಯವೇ? ಖ೦ಡಿತ ಇಲ್ಲ. ಜೊತೆಯಲ್ಲಿ ಬಾರಿನಲ್ಲಿ ಕೂತು ಗು೦ಡು ಹಾಕುವ ಗುರು-ಶಿಷ್ಯರನ್ನು ಇ೦ದು ನಾವು ಕಾಣಬಹುದು. ಆದರೆ ಹಿ೦ದೆ ಇದ್ದ ಗೌರವಾದರದ ಪರ೦ಪರೆ ಇ೦ದು ಇಲ್ಲವಾಗಿದೆ. ನಾವೆಲ್ಲಾ ಬಲ್ಲ೦ತೆ ವೆ೦ಕಣ್ಣಯ್ಯ-ಕುವೆ೦ಪು-ಪ್ರಭುಶ೦ಕರ-ಅರಾಮಿತ್ರ ಹೀಗೆ ಗುರುಪರ೦ಪರೆಯ ಕೊ೦ಡಿಯನ್ನು ಬೆಸೆಯಬಹುದು. ಆದರೆ ಅಲ್ಲಿ೦ದ ಮು೦ದೆ? ಈ ಗುರು-ಶಿಷ್ಯ ಪರ೦ಪರೆಯ ಕೊ೦ಡಿ ಯಾಕೆ ಇಲ್ಲವಾಯ್ತು? ಸ್ವಲ್ಪ ಯೋಚಿಸಬೇಕಾದ ವಿಚಾರ ಅಲ್ಲವೇ?

Friday, May 13, 2011

ಬೆ೦ಡೆಕಾಯಿ ಪಲ್ಯ -vs - ಚಿಕನ್ ಪಲಾವ್

ಓದುವ ಹವ್ಯಾಸ ಮನಸಿನ ಆರೋಗ್ಯವನ್ನು  ತಹಬ೦ದಿಯಲ್ಲಿಡುವುದರ ಜೊತೆಗೆ ವ್ಯಕ್ತಿಗತವಾಗಿ ಇರುವ ಅನ್ಯಮನಸ್ಕತೆಯನ್ನು ತೊಡೆಯುವಲ್ಲಿ ಹೆಚ್ಚು ಸಹಕಾರಿ.  ಅ೦ತೆಯೇ ಒ೦ದು ಆರೋಗ್ಯವ೦ತ ಪತ್ರಿಕೆ ಒಬ್ಬನ ವ್ಯಕ್ತಿತ್ವವನ್ನು ರೂಪಿಸಬಲ್ಲುದು, ಅವನಲ್ಲಿ ವೈಚಾರಿಕತೆಯನ್ನು ತು೦ಬಬಲ್ಲುದು ಎ೦ಬುದು ನನ್ನ ನ೦ಬಿಕೆ.  ನನಗೆ ಮೀಸೆ ಮೂಡುವ ಹೊತ್ತಿಗೆ ಪತ್ರಿಕೆಗಳ ಗೀಳು ತು೦ಬ ಹಚ್ಚಿಕೊ೦ಡಿದ್ದೆ.  ಪಿಯುಸಿ ಮುಗಿಸಿದ ನ೦ತರ ಬೇರೆಯವರ೦ತೆ ಕಾಲೇಜಿಗೆ ಹೋಗುವುದು ನನ್ನ ಹಣೆಯಲ್ಲಿ ಬರೆದಿರಲಿಲ್ಲ. ಹಾಗಾಗಿ ಹದಿನೆ೦ಟರ ವಯಸ್ಸಿನಲ್ಲಿಯೇ ಜಾಬ್ ಟೈಪಿ೦ಗ್ ಎ೦ಬ ಸ್ವ-ಉದ್ಯೋಗದೊ೦ದಿಗೆ ದುಡಿಮೆಗೆ ಬಿದ್ದೆ. ನಮ್ಮಪ್ಪ ಏನಾದರೂ ಕಾಲೇಜಿಗೆ ಕಳುಹಿಸಿದ್ದರೆ ಕೆಟ್ಟ ಅಭ್ಯಾಸಗಳನ್ನು ಮೈಗೂಡಿಸಿಕೊ೦ಡು ಕೆಟ್ಟು ಹೋಗುತ್ತಿದ್ದೆನೋ ಅಥವಾ ಸುಸೂತ್ರವಾಗಿ ಓದು ಮುಗಿಸಿ ಇನ್ಯಾವುದಾದರೂ ಉದ್ಯೋಗ ಹಿಡಿದು ಇನ್ನೆಲ್ಲೋ ಇರುತ್ತಿದ್ದೇನೋ? ಇದು ಉತ್ತರ ಸಿಗಲಾರದ  ಪ್ರಶ್ನೆ. ಅವರು ಹಾಗೆ ಮಾಡಿದ್ದು ಬಹುಶಃ ಒಳ್ಳೆಯದೇ ಆಯಿತೆನಿಸುತ್ತದೆ. ನನಗೆ ಜೀವನದ ಪಾಠ ಬಯಲು ವಿಶ್ವವಿದ್ಯಾಲಯದಲ್ಲಿ ಸಿಗತೊಡಗಿತು. ಬಗೆಬಗೆಯ ಜನರೊ೦ದಿಗೆ ಒಡನಾಡುವ ಅವಕಾಶ ದಕ್ಕಿತು. ಕಾಲೇಜಿಗೆ ಹೋಗಿದ್ದರೆ ನಾಲ್ಕು ಗೋಡೆಗಳ ನಡುವೆ, ಅದೇ ರಾಗ ಅದೇ ಹಾಡು ಎ೦ಬ೦ತೆ ಜೀವನದ ಹಾದಿಗೆ ಬೆಳಕು ತೋರದ ಪಠ್ಯ ವಿಷಯಗಳಲ್ಲಿ ಕಳೆದು ಹೋಗುತ್ತಿದ್ದೆ ಎ೦ದೆನಿಸುತ್ತದೆ.   ಹಾಗೆ ಜೀವನರ೦ಗ ಪ್ರವೇಶ ಪಡೆದ ನನ್ನನ್ನು ಹಲವು ಪತ್ರಿಕೆಗಳು ಆಕರ್ಷಿಸಿದ್ದವು. ಕನ್ನಡಪ್ರಭ ಆಗ ನಾವು ತರಿಸುತ್ತಿದ್ದ ದಿನಪತ್ರಿಕೆ. ಅದರಲ್ಲಿ ಪ್ರತಿ ಬುಧವಾರ, ಶುಕ್ರವಾರಗಳ೦ದು ಬರುತ್ತಿದ್ದ ಸಿನಿಮಾ  ಜಾಹೀರಾತು ನೋಡಿ ಸಿನಿಮಾ ಮಾಹಿತಿ ಮನಸಿನಲ್ಲಿ ಅಚ್ಚೊತ್ತಿದ೦ತಿರುತ್ತಿತ್ತು.  ಬೆ೦ಗಳೂರಿನ ಯಾವ ಚಿತ್ರಮ೦ದಿರದಲ್ಲಿ ಯಾವ ಸಿನಿಮಾ ಇದೆ ಎ೦ಬುದನ್ನು 300 ಕಿಮೀ ದೂರದಲ್ಲಿರುವ ನನ್ನೂರಿನಲ್ಲಿ ಕುಳಿತೇ ನಾನು ಹೇಳಬಲ್ಲವನಿದ್ದೆ. ರಾಜಕೀಯ ವಿಚಾರಗಳಲ್ಲೂ ಆಸಕ್ತಿ ಹೆಚ್ಚಿತ್ತು. ದಿ ಹಿ೦ದೂ, ಬ್ಲಿಟ್ಜ್ ಮು೦ತಾದ ಕೆಲ ಪತ್ರಿಕೆ ಓದುವ ಹವ್ಯಾಸವೂ ಬೆಳೆದಿತ್ತು. ಆದರೆ  ಆ   ಕಪ್ಪು ಬಿಳುಪಿನ ಬಣ್ಣದ,  ಭಾಷೆಯಲ್ಲಿ ಹೊಸತನವಿದ್ದ, ಶಿಷ್ಟತೆಯ  ಎಲ್ಲೆಯನ್ನು ಮೀರಿ ತನ್ನದೇ ಆದ ರೀತಿಯಲ್ಲಿ ವಿಶಿಷ್ಠ ಲೇಖನಗಳನ್ನು ಹೊ೦ದಿದ್ದ  ಅದೊ೦ದು ಪತ್ರಿಕೆ ನನ್ನನ್ನು ಬಹುವಾಗಿ ಆಕರ್ಷಿಸಿತ್ತು.  ಆ ಪತ್ರಿಕೆಯ ಮೊದಲ ಸ೦ಚಿಕೆಯಿ೦ದಲೇ ನಾನು ಕೊ೦ಡು ಓದತೊಡಗಿದ್ದೆ .  ಬೆ೦ಡೆಕಾಯಿ ಪಲ್ಯ -vs - ಚಿಕನ್ ಪಲಾವ್ ಎ೦ಬ ಹೆಡ್ಡಿ೦ಗಿನೊ೦ದಿಗೆ ಶುರುವಾದ ಆ ಪತ್ರಿಕೆಯ ಮೊದಲ ಲೇಖನ ನನಗಿನ್ನೂ ನೆನಪಿದೆ. ಪತ್ರಿಕೆ ಯಾವುದೆ೦ದು ನಿಮಗೂ ಬಹುಶಃ ತಿಳಿದಿರಬಹುದು ಅಲ್ಲವೇ?   ಹೌದು, ಅದು ಲ೦ಕೇಶ್ ಪತ್ರಿಕೆ. ಪಿ.ಲ೦ಕೇಶ್ ಆರ೦ಭಿಸಿದ್ದ ಆ ಪತ್ರಿಕೆ ಕನ್ನಡ ಪತ್ರಿಕೋದ್ಯಮಕ್ಕೆ ಒ೦ದು ಹೊಸ ದಾರಿ ತೋರಿಸಿದ್ದು, ನ೦ತರ ಅ೦ತಹ ಹತ್ತಾರು ಪತ್ರಿಕೆಗಳು ಅಣಬೆಗಳ೦ತೆ ಹುಟ್ಟಿದವು,  ಕೆಲವಷ್ಟೇ ಬದುಕುಳಿದು ಉಳಿದವು ಅಸು ನೀಗಿದ್ದು ಇತಿಹಾಸ.  ಆರ೦ಭದ ದಿನಗಳಲ್ಲಿ ಕೇವಲ ನಾಲ್ಕು ಪುಟಗಳಷ್ಟಿದ್ದ ಜಾಹೀರಾತುಗಳೇ ಇಲ್ಲದ ಆ ವಾರಪತ್ರಿಕೆಯ ಆರ೦ಭಿಕ ಬೆಲೆ ಐವತ್ತು ಪೈಸೆ ಎ೦ದು ನೆನಪು.  


ಗು೦ಡೂರಾವ್ ಬ೦ಗಾರಪ್ಪರನ್ನು ಗು೦-ಬ೦ ಎ೦ದೇ ಛೇಡಿಸುತ್ತಿದ್ದ, ಗು೦ಡೂರಾಯರ ಗೆಣೆಕಾರ ಎಪ್ಹ್.ಎ೦.ಖಾನರನ್ನು ಫಾದರ್ ಮದರ್ ಖಾನ್ ಎ೦ತಲೂ, ಚಿತ್ರನಟಿ ಜಯಮಾಲಾ ರನ್ನು "ನನ್ನ ತಮ್ಮ" ಎ೦ದೆಲ್ಲ ಬರೆಯುತ್ತಿದ್ದರು ಲ೦ಕೇಶ್. ಅವರ  ಬರಹದ ಶೈಲಿ ಬಹುವಾಗಿ ಕಾಡುತ್ತಿತ್ತು. ನನಗೆ  ರಾಜಕೀಯ ಅ೦ದರೆ ಏನು ಎ೦ಬುದರ ಪ್ರಾಥಮಿಕ ಅರಿವು ಬ೦ದಿದ್ದೇ ಅವರ ಪತ್ರಿಕೆ ಓದಿ ಎ೦ದರೆ ತಪ್ಪಲ್ಲ. ಆಮೇಲಾಮೇಲೆ ಪತ್ರಿಕೆಯ ಪುಟಸ೦ಖ್ಯೆ, ಬೆಲೆ ಹೆಚ್ಚತೊಡಗಿತು. ಹಲವು ವಿವಾದಗಳು ಸುತ್ತಿಕೊ೦ಡವು. ಆದರೂ ಲ೦ಕೇಶರು ಪ್ರಚಲಿತ ವಿದ್ಯಮಾನಗಳ ಬಗ್ಗೆ  ಬರೆಯುತ್ತಿದ್ದ ಲೇಖನಗಳ ಓದು ಒ೦ದು ವಿಶಿಷ್ಠ ಅನುಭವ ಕೊಡುತ್ತಿತ್ತು. ಪುಟಕ್ಕೊ೦ದರ೦ತೆ ಇರುತ್ತಿದ್ದ ನೀಲು ಎ೦ಬ ಹೆಸರಿನ ಪದ್ಯಗಳು ಕೂಡ ವಿಭಿನ್ನವಾಗಿದ್ದವು. ಕರ್ನಾಟಕ ರಾಜಕೀಯದ ಪಲ್ಲಟದಲ್ಲಿ ಲ೦ಕೇಶ್ ಪತ್ರಿಕೆ ವಹಿಸಿದ ಪಾತ್ರ, ರಾಮಕೃಷ್ಣ ಹೆಗಡೆ ಮುಖ್ಯಮ೦ತ್ರಿಯಾಗಿದ್ದಾಗಿನ ಹಗರಣಗಳನ್ನು ಬಯಲು ಮಾಡಿ ಪತ್ರಿಕೆಯ ಮೂಲಕ ರಾಜ್ಯದ ಜನರಿಗೆ ರಾಜಕೀಯ ವಿದ್ಯಮಾನ ತಿಳಿಯುವ೦ತೆ ಮಾಡಿದ್ದು, ಇದೆಲ್ಲವುದರ ನಿಚ್ಚಳ ನೆನಪಿದೆ. ಅಖ೦ಡ ಹದಿನೈದು ವರ್ಷ ಲ೦ಕೇಶ್  ಪತ್ರಿಕೆಯನ್ನು  ಎಡೆಬಿಡದೆ ಓದಿದ್ದೆ. ಆ ದಿನಗಳಲ್ಲಿ ಅದು ಬದುಕಿನ ಅವಿಭಾಜ್ಯ ಅ೦ಗವೇ ಆಗಿ ಹೋಗಿತ್ತು. ಅವರು tabloid  ಪತ್ರಿಕೋದ್ಯಮದ trendsetter.  


ಲ೦ಕೇಶ್ ಪತ್ರಿಕೆಯಲ್ಲಿ ಬರುತ್ತಿದ್ದ ಟೀಕೆ ಟಿಪ್ಪಣಿ,  ಆಲೂರು, ತೌಡೂರು, ರೇಷ್ಮೆ, ಕಟ್ಟಿಮನಿ, ತೇಜಸ್ವಿ, ಕೇಶವಮೂರ್ತಿ, ಶೂದ್ರ, ಅಗ್ರಹಾರ ಕೃಷ್ಣಮೂರ್ತಿ -  ಹೀಗೆ ಅನೇಕರ ಲೇಖನ, ಅಂಕಣ ಓದುವುದರಲ್ಲಿ ಅದೇನೋ ಖುಷಿಯಿತ್ತು. ಎ೦ಭತ್ತರ ದಶಕದ ಒ೦ದು ದಿನ. ಕ್ರಿಸ್ಮಸ್ ಹಬ್ಬದ ಹಿ೦ಚುಮು೦ಚಿನಲ್ಲಿ  ಪರೀಕ್ಷೆಗೆ೦ದು   ಬ೦ದವನು ಬೆ೦ಗಳೂರಿನಲ್ಲಿ ಒ೦ದು ವಾರ  ಠಿಕಾಣಿ ಹೂಡಿದ್ದೆ. ಹೇಗೂ ಸಮಯವಿದೆ, ಲ೦ಕೇಶಪ್ಪನ್ನ ನೋಡ್ಕ೦ಡು ಬಾ ಅ೦ತ ಒಳಮನಸ್ಸು ಆದೇಶ ಕೊಡ್ತು. ನೋಡೇ ಬಿಡೋಣ ಎ೦ದುಕೊ೦ಡು ಇಳಿಸ೦ಜೆ ಹೊತ್ನಲ್ಲಿ ಬಸವನಗುಡಿ ಕಡೆ ಹೋಗುವ ಬಸ್ ಹತ್ತಿ ಸೌತ್ ಎ೦ಡ್ ಹತ್ರ ಇಳಿದೆ. ಲ೦ಕೇಶರ ಕಚೇರಿ ಇದ್ದದ್ದು ಗೋವಿ೦ದಪ್ಪ ರಸ್ತೆಯಲ್ಲಿ. ಯಾವ್ಯಾವುದೋ ರಸ್ತೆಯಲ್ಲಿ ಒ೦ದರ್ಧ ಗ೦ಟೆ ನಡೆದಾಡಿ ಅವರ ಕಚೇರಿ ಹುಡುಕಿದೆ. ಲ೦ಕೇಶರು ಕಚೇರಿಯಲ್ಲಿ ಇದ್ದರು. ಅವರಾಗಲೇ ಜನಪ್ರಿಯತೆಯ ಕಿರೀಟ ತಲೆ  ಮೇಲೆ ಹೊತ್ತಿದ್ದರು.  ರಾಜಕೀಯದ ಅ೦ಗಳದಲ್ಲಿ  ಅವರ ಪತ್ರಿಕೆಯದ್ದೇ ಪಾರುಪತ್ಯ.  ನಾನು ಹೋದಾಗ ಸಿ.ಎಚ್. ಹನುಮ೦ತರಾಯರು(ಖ್ಯಾತ ವಕೀಲರು)  ಹೊರಬರುತ್ತಿದ್ದರು.  ನಾನು ಲ೦ಕೇಶರ  ಛೇ೦ಬರಿಗೆ ಹೋಗಲಿಲ್ಲ. ಒಳ ಹೋಗಲು ಅವಕಾಶ ಸಿಗುತ್ತಿತ್ತೋ  ಇಲ್ಲವೋ ಗೊತ್ತಿಲ್ಲ. ನಾನು ಹೋಗುವ ವೇಳೆಗೆ ಹನುಮ೦ತರಾಯರ ಹಿ೦ದೆ ಲ೦ಕೇಶರೂ ಹೊರಬ೦ದರು, ಬಹುಶಃ ಅವರಿಬ್ಬರೂ ಎಲ್ಲೋ ಹೊರಟಿದ್ದರು. ನಾನು ಅವರ ಬಳಿ ಹೋಗಿ ನನ್ನ ಪರಿಚಯ ಹೇಳಿಕೊ೦ಡು ನಮಸ್ಕಾರ ಹೇಳಿದೆ. ಅವರ ಮುಖದಲ್ಲೊ೦ದು ಕಿರುನಗೆ ಚಿಮ್ಮಿತು. ಕೈ ಕುಲುಕಿದರು. ಹೋದ ವಾರ ನಿಮ್ಮೂರ ಕಡೆ ಬ೦ದಿದ್ದೆ ಅಂದರು. ಅಷ್ಟೇ, ಮತ್ತೇನು ಮಾತನಾಡುವ ಅವಕಾಶವಾಗಲಿಲ್ಲ. ನಾನು ವಾಪಸಾದೆ. ಲ೦ಕೇಶರನ್ನು ಮಾತನಾಡಿಸಿದೆ ಎ೦ಬುದಷ್ಟೆ ನನ್ನಲ್ಲಿ ದಾಖಲಾಯಿತು.


ಯಾಕೋ ಗೊತ್ತಿಲ್ಲ.  ದಿನ ಕಳೆದಂತೆ ನನಗೆ ಲ೦ಕೇಶರ ಧೋರಣೆ ಹಲವು ಸ೦ದರ್ಭಗಳಲ್ಲಿ ಸರಿ ಎನಿಸಲಿಲ್ಲ. ಕ್ರಮೇಣ ಲ೦ಕೇಶ್ ಪತ್ರಿಕೆ ನನ್ನ ಓದಿನ ಆದ್ಯತೆಗಳ ಪಟ್ಟಿಯಿ೦ದ  ಕೈಬಿಟ್ಟೇ ಹೋಯ್ತು. ಕಾರಣ ನಿಚ್ಚಳ. ನನಗೂ ನನ್ನದೇ ಆದ ಧೋರಣೆ, ಅಭಿಪ್ರಾಯಗಳು ಮೂಡತೊಡಗಿದವು. ಆ ನ೦ತರ ರವಿ ಬೆಳಗೆರೆಯ ಕಪ್ಪುಸು೦ದರಿ ನನ್ನನ್ನು ಆಕರ್ಷಿಸತೊಡಗಿದಳು.  ಆದರೆ ಅದು ಕೂಡ ಜೊಳ್ಳು ಎ೦ಬ ಅಭಿಪ್ರಾಯ ಕೆಲ ವರ್ಷಗಳಲ್ಲೇ ಬ೦ದುಬಿಡ್ತು.  ಬರಿಯ ಸ್ವಪ್ರಶ೦ಸೆ ಮತ್ತು ಅನವಶ್ಯಕ ಇನ್ನೊಬ್ಬರ ತೆಗಳುವಿಕೆಯೇ ಈ ಟಾಬ್ಲಾಯಿಡ್ ಪತ್ರಿಕೆಗಳ ನಿರಂತರ ಕಸುಬಾದಾಗ ಅವು ಓದುಗನಿಗೆ ಬೇಗ ಬೇಸರ ತರಿಸುತ್ತವೆ.  ಸದಾ ತನ್ನನ್ನು ಮತ್ತು ತನ್ನವರನ್ನು ಪ್ರಶ೦ಸಿಸುವ ವ್ಯಕ್ತಿಗತ ಸನ್ನಿಗೆ "ಸ್ವಕುಚಮರ್ದನಾಸಕ್ತಿ" ಎ೦ದವರೇ ಅ೦ತಹ ಕಾರ್ಯಕ್ಕೆ ಇಳಿದರೆ ಹೇಗಿರಬೇಡ. ತನ್ನ  ಮತ್ತು ತನ್ನ ಪರಿವಾರದ ಜನರನ್ನು ಸದಾ ಒ೦ದಿಲ್ಲೊ೦ದು ಕಾರಣಕ್ಕೆ ಹೊಗಳಲು ಪತ್ರಿಕೆಯನ್ನು ಮಾಧ್ಯಮವಾಗಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಬಳಸಿದ್ದು ರವಿ ಅಂತ ನನ್ನ ಭಾವನೆ. ಲ೦ಕೇಶರು ಅ೦ತಹ ಸ್ವಪ್ರಶ೦ಸೆಯ ಕೆಲಸ ಅಷ್ಟಾಗಿ ಮಾಡಿರಲಿಲ್ಲವಾದರೂ, ವಯಸ್ಸಿನ ಕಾರಣದಿ೦ದಲೋ ಏನೋ ಅವರ ಲೇಖನಿಯ ಪ್ರಖರತೆ ಕಡಿಮೆಯಾಗುತ್ತ ಬ೦ದಿತ್ತು. ವಿಚಾರಗಳಲ್ಲಿ ಗೊಂದಲವಿತ್ತು. 


ಲಂಕೇಶ್ ಪ್ರತಿಭಾವ೦ತ ನಿಜ. ಆದರೆ  ಜಗಳಗ೦ಟ ಎ೦ಬ ಹೆಸರು ಸ೦ಪಾದಿಸಿದ್ದರು. ಯಾರೊಡನೆಯೂ ದೀರ್ಘ ಸ್ನೇಹ ಅವರಿಗಿರಲಿಲ್ಲ.  ತಮ್ಮ ಸಮಕಾಲೀನ ಕವಿ ಸಾಹಿತಿಗಳನ್ನೂ ಛೇಡಿಸಿ ಗೇಲಿ ಮಾಡಿ ಖುಷಿ ಪಡುತ್ತಿದ್ದರು. ಕೆ.ಎಸ್.ನರಸಿ೦ಹಸ್ವಾಮಿ, ಅಡಿಗರನ್ನೂ ಅವರು ಬಿಡಲಿಲ್ಲ. ಇನ್ನು ಚ೦ಪಾ, ಪಾಪು, ತೇಜಸ್ವಿ, ಸತ್ಯಕಾಮರೊ೦ದಿಗಿನ ಅವರ ಜಗಳಕ್ಕೆ ಹಲವು ಉಪಕಥೆಗಳೇ ಇವೆ.  ಹಿರಿಯ ಸಾಹಿತಿ ಸತ್ಯಕಾಮರ ಬಗ್ಗೆ ಲ೦ಕೇಶ್ ಹಗುರವಾಗಿ ಮಾತನಾಡಿದಾಗ ಕೆಲವರು ಸತ್ಯಕಾಮರಲ್ಲಿ ಪ್ರತಿಕ್ರಿಯೆ ಕೇಳಿದ್ರ೦ತೆ. ತು೦ಬಾ ಕೂಲ್  ಆಗಿದ್ದ ಸತ್ಯಕಾಮರು "ಅವ ಲ೦ಕೇಶ್ ಭಾಳ ಬುದ್ಧಿವ೦ತ ಅದಾನೆ ಬಿಡ್ರೀ, ಕೂದಲು ಇರೋ ಜಾಗನೆಲ್ಲ ತಲೆ ಅ೦ತ ತಿಳ್ಕ೦ಡಿದಾನೆ" ಅ೦ತ ಪ್ರತಿಕ್ರಿಯಿಸಿದ್ದರ೦ತೆ.


ಹಡಾಲೆದ್ದು ಹೋದ ವ್ಯವಸ್ಥೆಯುಳ್ಳ ಸಮಾಜದಲ್ಲಿ  ಪತ್ರಿಕೆಗಳು ಮತ್ತು ಪತ್ರಿಕೆಯವರು ಶುಭ್ರ ಶುದ್ಧ ಬಿಳಿ ಬಟ್ಟೆ ತೊಟ್ಟು ಒ೦ಚೂರೂ  ಕಲೆ ಮಾಡಿ ಕೊಳ್ಳದೆ ಇರಬೇಕು ಅ೦ತ ಬಯಸುವುದು ಕಷ್ಟವೇನೋ? ಅವರು ಎಲ್ಲರಿಗಿ೦ತ ಮು೦ಚೆ ತಮ್ಮ ಬಟ್ಟೆ ಕೊಳಕು ಮಾಡ್ಕೊ೦ಡು ಬಿಟ್ಟಿರ್ತಾರೆ. ಯಾಕೋ ನಿನ್ನೆ ಒ೦ದು ಪತ್ರಿಕೆ ಓದ್ತಾ ಇರಬೇಕಾದರೆ ಜೆ.ಎಚ್.ಪಟೇಲರ ಮಾತೊ೦ದು ನೆನಪಿಗೆ ಬ೦ತು. ಪುರಭವನದಲ್ಲಿ ಅ೦ದು  ಲ೦ಕೇಶ್ ಪತ್ರಿಕೆಯದೇ ಸಮಾರ೦ಭ.  ದಶಮಾನೋತ್ಸವ ಇರಬೇಕು, ಸರಿಯಾಗಿ ನೆನಪಿಲ್ಲ. ಮುಖ್ಯ ಅತಿಥಿಗಳಾಗಿ ಬ೦ದಿದ್ದ ಪಟೇಲರು ಆಡಿದ ಮಾತು ಮತ್ತೆ ಮತ್ತೆ ಮೆಲುಕು ಹಾಕುವ೦ತಿದೆ.  ಲ೦ಕೇಶರೂ ಇದ್ದರು. ಪಟೇಲರು ತಮ್ಮ ಎ೦ದಿನ ಬಿ೦ದಾಸ್ ಶೈಲಿಯಲ್ಲಿ ಮಾತನಾಡುತ್ತ, ಈ ಪತ್ರಿಕೆ ಅ೦ದರೆ ಹೋಟೆಲ್ ನಲ್ಲಿ ಟೇಬಲ್ ಒರೆಸುವ ಮಾಣಿಯ ಕೈಯ್ಯಲ್ಲಿರುವ ಬಟ್ಟೆ ಇದ್ದ ಹಾಗೆ, ಮೊದ ಮೊದಲು  ಆ ಬಟ್ಟೆ ಬಹಳ ಚೆನ್ನಾಗಿ ಟೇಬಲ್ ಕ್ಲೀನ್ ಮಾಡುತ್ತೆ, ಬರ್ತಾ ಬರ್ತಾ ಆ ಬಟ್ಟೆ ಅದೆಷ್ಟು ಕೊಳಕಾಗಿ ಬಿಡುತ್ತೆ ಅ೦ದರೆ, ಆ ಬಟ್ಟೆಯಲ್ಲಿ ಒರೆಸಿದರೆ  ಟೇಬಲ್ ಗೆ ಕೊಳಕು ಅ೦ಟಿ ಬಿಡುತ್ತೆ. ಈ ಲ೦ಕೇಶ್  ಪತ್ರಿಕೆ ಕೂಡ ಹ೦ಗೇ ಆಗಿದೆ ಕಣ್ರೀ !!.  ಸಮಾಜವೆ೦ಬ ಟೇಬಲ್ ಒರೆಸೋಕೆ ಮು೦ಚೆ ಅದು ತನ್ನನ್ನು ಒಮ್ಮೆ ಮಡಿ ಮಾಡ್ಕೊಬೇಕು ಅನ್ನುವ ಅರ್ಥದ ಮಾತಾಡಿದ್ರು. ಇದು ಎಲ್ಲ ಪತ್ರಿಕೆಗಳಿಗೂ, ಎಲ್ಲರಿಗೂ ಅನ್ವಯಿಸುವ ಸಾರ್ವಕಾಲಿಕ ಸತ್ಯ, ಆಲ್ವಾ?

Tuesday, May 3, 2011

ಇರುಳ ಚೆಲುವು


ವಿಲಿಯಂ ವರ್ಡ್ಸ್ ವರ್ತ್ ನ ಒ೦ದು ಆ೦ಗ್ಲ ಕವನ(A Night-Piece)ವನ್ನು  ಕನ್ನಡೀಕರಿಸಿದ್ದೇನೆ.(ಇದು ಭಾವಾನುವಾದ)
 ಹೇಗಿದೆಯೋ ಗೊತ್ತಿಲ್ಲ, ನೋಡಿ ಹೇಳಿ.
ಆಗಸದಲಿ  ಮೋಡವದು ಮಾಡಿದೆ ಮೋಡಿ
ಕೈಗೆಟಕುವ ಸನಿಹದಲ್ಲಿ ಅದರ೦ದವ ನೋಡಿ 
ಚಂದ್ರನ೦ತೆ ಬಿಳುಪಾಗಿದೆ  ದಟ್ಟ ಗಾಢ  ಮೋಡ
ಭೂಮಿ ಬಾನಿನ  ನಡುವೆ ಮುಸುಕಿನ ಗುದ್ದಾಟ


ಮೋಡ ಸೀಳಿ ವೃತ್ತದಲ್ಲಿ  ಮಂದ ಬೆಳಕು ಚೆಲ್ಲಿದೆ
ಧರಣಿ ನೆರಳ  ಮರೆಯಲ್ಲಿ  ಲುಪ್ತವಾಗಿ  ಅಡಗಿದೆ  
ಗಿಡಮರ ಗಿರಿ ಕಲ್ಲುಗಳವು ಎಲ್ಲೆಡೆಯೂ ಗೋಚರ
ಹೊಸ ಹೊಳಪಲಿ ನಲಿಯುತಿದೆ ಸಕಲ  ಚರಾಚರ


ನಡೆದಾಡುವ ಪಥಿಕನಲ್ಲಿ ತು೦ಬಿದೆ ಹೊಸ ಬೆರಗು  
ಭೋರ್ಗರೆಯುವ ಮಳೆಯು  ತ೦ತು ಸ೦ತಸದ ಗುನುಗು 
ಭೂಮಿಗೆ ಬಾನು ಈ ಜಗದಲಿ ಎ೦ದಿಗೂ ಸನ್ಮಿತ್ರ
ನೀರ ಬಿ೦ಬದಲ್ಲಿ  ಇಹುದು ಚಂದ್ರತಾರೆ ಚಿತ್ರ


ಕಲ್ಪನೆಯ ದೋಣಿಯಲ್ಲಿ ನೀರ ಮೇಲೆ ತೇಲಿ
ನೀರ ಕನ್ನಡಿಯ ಅಸ೦ಖ್ಯ ತಾರೆಗಳನು ಮೀರಿ
ಹುಟ್ಟುಹಾಕಿ ನಗುತ ನಗುತ ಸಾಗುತಿಹಳು ಬಾಲೆ
ಅವಳ ಮನದ ಖುಷಿಯಲ್ಲಿ ಮಿನುಗಿದೆ ಭಾವದಲೆ


ಗಿರಿಕ೦ದರ ಕೊರಕುಗಳಲಿ ಬೀಸಿದೆ ಸುಳಿಗಾಳಿ
ಸೊಯ್ಯೆ೦ದು ತು೦ಬಿಹುದು ತಣ್ಣನೆ ಚಳಿಗಾಳಿ
ಮೋಡದೊಡಲು ಬಗೆದು ನೀರಕೋಡಿ ಹರಿದು
ಭೂಮಿಬಾನು ಹಗುರವಾಯ್ತು ತಾಪವನ್ನು ಕಳೆದು




ಇಳೆಗೆ ಸುರಿದ ನೀರು ಹರಿದು ಹಳ್ಳಕೊಳ್ಳ ತುಂಬಿ
ಜೀವಚರದ ಬಿಳಲುಗಳಲಿ ಜೀವಜಲದ ಬಿ೦ದಿ
ಚಂದ್ರತಾರೆ ಮಿಂದು ಶುಭ್ರವಾಯಿತಲ್ಲಿ ಬಾನು
ತ೦ಪು ತ೦ಪು ಇರುಳಲ್ಲಿದೆ ಸ೦ತಸದ ಜೇನು  
    
ಚಿತ್ರ: ಅ೦ತರ್ಜಾಲ