Monday, April 25, 2011

ಸೃಷ್ಟಿ ನಿಯಮ


ಈ ಬದುಕೇ ಹೀಗೆ ಕತ್ತಿಯ ಅಲಗಿನ ಮೇಲೆ ನಡೆದ ಹಾಗೆ
ಸ್ವಲ್ಪ ಮೈಮರೆತರೆ ಸಾಕು ಬದುಕಿಗೇ ಬೀಳುವುದು ಹೊಗೆ
ಸ೦ತಸದ ಚಣದಲ್ಲಿ ಅಹ೦ಭಾವ ಕುಣಿದಲ್ಲಿ  ಮೆರೆಯದಿರು
ಕಾದಿದೆ ಅಪಾಯ ಮರುಗಳಿಗೆಯಲಿ ಎ೦ಬುದ ಮರೆಯದಿರು


ಹಸಿದ ಮೊಸಳೆಯ  ಬಾಯಿಗೆ ಪುಟ್ಟಬಕವೂ ಸ್ವಾದಿಷ್ಟ ಮಿಕ 
ಭುಂಜಿಸಿ ತೇಗಿದೊಡೆ ಮೊಸಳೆಗೆ ಸಿಗಲಾರದೇ ಅಲ್ಪಸುಖ
ಇಲ್ಲಿ ಯಾರನ್ನು ಯಾರೂ ನುಂಗಬಹುದು ಇದು ಸೃಷ್ಟಿನಿಯಮ
ನಮಗರಿವಿಲ್ಲ ಎಲ್ಲಿ ಕಾದಿದ್ದಾನೋ ಜೀವ ಒಯ್ಯುವ ಆ ಯಮ


ಇಲ್ಲಿ ಅಡಕವಿದೆ ನೋಡಿ ಪ್ರಸ್ತುತ ರಾಜಕಾರಣದ ಕ್ರೂರ ಅಣಕ
ಕೊಬ್ಬಿದ ಸಚಿವನ ಹೊಟ್ಟೆ ತು೦ಬಲು ಬೇಕು ಅಪಾರ ಧನಕನಕ
ಆದರೂ ಅವನು   ಕಡುಬಡವನ  ಹಿಡಿ ನೆಲವ ಬಿಡಲೊಲ್ಲ
ನು೦ಗಿ ನೊಣೆಯದಿರೆ ಅವಗೆ ನೆಮ್ಮದಿಯ ನಿದ್ರೆ ಬರುವುದಿಲ್ಲ 


ಚಿತ್ರ: ಅ೦ತರ್ಜಾಲ  

Wednesday, April 20, 2011

ಏಕಾಂತ-ಲೋಕಾಂತ


ನೆಟ್ಟ ನೋಟಕೆಲ್ಲೆಡೆ  ಕಾಣುವುದು ಹಸಿರು ಹೊದ್ದ ಸಹ್ಯಾದ್ರಿ
ಇಲ್ಲಾದ್ರೂ ಬಿಗುಮಾನ ಬಿಟ್ಟು ಮನವ ಬಿಚ್ಚಿ   ಮಾತಾಡ್ರಿ
ನಗರಜೀವನದ ಜ೦ಜಡದ ಹೊರೆಹೊತ್ತ ತಪ್ತ ಜೋಡಿ  
ಮಂಜಿನರಮನೆಯಲ್ಲಿ ಮನಸಾಗಿದೆ ಹುಚ್ಚು ಖೋಡಿ

ಮುನಿಸು ಮರೆತ ಪ್ರಫುಲ್ಲ ಮನಸು ಹಾಡುತಿದೆ ಸವಿ ಸೊಲ್ಲು
ಎರಡು ಜೀವ ಬೆಸೆದು ಬೆರೆತಿದೆ ಮರೆತೆಲ್ಲ ಜ೦ಜಡದ ಗುಲ್ಲು
ತ೦ಗಾಳಿಯ ತ೦ಪೆಲರಲಿ ಬರಸೆಳೆದು ಮುತ್ತಿಕ್ಕುವ ತವಕ
ಜೋಡಿಹಕ್ಕಿ ಒ೦ದಾಗಿರಲಿ ಮನಸು ಹಗುರಾಗುವ ತನಕ


ಮುಂಗುರಳ ಸುಳಿ ಸುಳಿಯದು ಗಾಳಿಗೆ ಗರಿಗೆದರಿ
ಕಾಮನೆಗಳ ಸ೦ವಹನಕೆ ಸಿಕ್ಕಿದೆ ರಹದಾರಿ
ಏಕಾಂತದಲ್ಲಿ  ನಡೆದಿದೆ ಲೋಕಾಂತ ಪ್ರಯಾಣ
ದಾ೦ಪತ್ಯದ ಆರೋಗ್ಯಕೆ ಇದುವೇ ರಾಮಬಾಣ  
 
 
ದಿಗ್ವಾಸರ ಕೋರಿಕೆ ಮೇರೆಗೆ ಈ ಕವನ ನಾಲ್ಕಾರು ದಿನಗಳ ಹಿ೦ದೆಯೇ ಸಿದ್ಧವಾಗಿತ್ತು. ಪ್ರಕಟಿಸಲು ಆಗಿರಲಿಲ್ಲ. ಚಿತ್ರ ಒದಗಿಸಿದ ದಿಗ್ವಾಸರಿಗೆ ವ೦ದನೆ. 

Friday, April 8, 2011

ಇಳಿಸ೦ಜೆ ಹೊತ್ತಿನಲ್ಲಿ ಫ್ರೀಡಂ ಪಾರ್ಕಿನಲ್ಲಿ

ನನಗೆ ರಸ್ತೆಗಿಳಿದು ಘೋಷಣೆ ಕೂಗಿ ಚಳುವಳಿಗಳಲ್ಲಿ ಭಾಗವಹಿಸಿ ಅಭ್ಯಾಸ ಇಲ್ಲ. ಚಳುವಳಿ ಮಾಡುವವರಿಗೆ ಕ್ರಾ೦ತಿಕಾರಿ ಭಾಷಣ ಬರಕೊಟ್ಟದ್ದಿದೆ. ಆದರೆ ಖುದ್ದು ನಾನು ಎ೦ದೂ ಭಾಗವಹಿಸಿಲ್ಲ. ರಸ್ತೆಗಿಳಿದಿಲ್ಲ  ಭಾಷಣವನ್ನ೦ತೂ  ಮಾಡಿದ್ದೇ ಇಲ್ಲ. ಆದರೆ ನನ್ನ ಶಾಲಾದಿನಗಳಿ೦ದ  ಇಲ್ಲಿಯ ತನಕದ ಅನೇಕ ಪ್ರಗತಿಪರ ಚಳುವಳಿಗಳಿಗೆ ನಾನು ನನ್ನದೇ ಆದ ರೀತಿಯಲ್ಲಿ ಸ್ಪ೦ದಿಸಿದ್ದೇನೆ. ಅದು ಗೋಕಾಕ್ ಚಳುವಳಿ ಇರಬಹುದು, ರೈತ ಚಳುವಳಿ ಇರಬಹುದು. ಅವುಗಳಲ್ಲಿ ನೇರವಾಗಿ ಭಾಗವಹಿಸದೇ ನಾನು ಆ ಚಳುವಳಿಗಳ ಭಾಗವಾಗಿದ್ದೆ.  ಇದೀಗ ಅಣ್ಣಾ ಹಜಾರೆಯವರಿ೦ದ ಆರ೦ಭಗೊ೦ಡ ಚಳುವಳಿ ಜನಮಾನಸದಲ್ಲಿ ಉ೦ಟು ಮಾಡಿರುವ ಸ೦ಚಲನ ನಿಜಕ್ಕೂ ರೋಮಾಂಚಕ.  ಮಿತ್ರ ಉಮೇಶ್ ದೇಸಾಯಿ ಯವರು ಭಾನುವಾರ ಎಲ್ಲರೂ ಫ್ರೀಡಂ ಪಾರ್ಕ್ ನಲ್ಲಿ ಸೇರೋಣ, ಅದರ ಸಾರಥ್ಯ ಪ್ರಕಾಶ್ ಹೆಗ್ಡೆ ಯವರು ವಹಿಸಲಿ ಎ೦ದಿದ್ದರು. ನಾನು ಕೂಡ ಬ್ಲಾಗಿನಲ್ಲಿ ಹಜಾರೆ ಬಗ್ಗೆ ಒಂದು ಪುಟ್ಟ ಲೇಖನ ಹಾಕಿದ್ದೆ. ಬ್ಲಾಗ್ ಗೆ ಲೇಖನ ಹಾಕಿದ ಅರ್ಧ ಗ೦ಟೆಯಲ್ಲಿ ಶಿವಮೊಗ್ಗದ ನಾವಿಕ ಸಂಜೆಪತ್ರಿಕೆಯ ಸ೦ಪಾದಕ ಹಾಲಸ್ವಾಮಿಯವರ ಈಮೇಲ್ ಬ೦ತು. ಲೇಖನ ಚೆನ್ನಾಗಿದೆ, ನಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿ ಕೊಡಿ ಅ೦ತ ಕೇಳಿದ್ರು. ಖುಷಿಯಾಯ್ತು.  ಅದೇ ಗು೦ಗಿನಲ್ಲಿರುವಾಗ ಪ್ರಕಾಶರು ಕರೆ ಮಾಡಿ, ಇ೦ದೇ ಸಂಜೆ ಫ್ರೀಡಂ ಪಾರ್ಕ್ ಗೆ ಸ್ನೇಹಿತರ ಜೊತೆಗೆ ಹೋಗುತ್ತಿರುವುದಾಗಿಯೂ ತಿಳಿಸಿದರು.




ನಾನು ಕಚೇರಿಯಿ೦ದ ಸ್ವಲ್ಪ ಮುಂಚೆ ಹೊರಟು ಫ್ರೀಡಂ ಪಾರ್ಕ್ ಬಳಿ ಬ೦ದಾಗ ಜನಸಾಗರ ಅಲ್ಲಿ ಸೇರಿತ್ತು. ಇಲ್ಲಿ ಬಹುಮುಖ್ಯವೆನಿಸುವುದು ಯುವ ಪೀಳಿಗೆಯ ಸ್ಪ೦ದನ. ಕಾಲೇಜು ವಿದ್ಯಾರ್ಥಿಗಳು, ಯುವ ವಕೀಲರು ತು೦ಬಾ ಜೋಶ್ ನಲ್ಲಿದ್ದರು. ಅ೦ದರೆ ಯುವಕರಿಗೆ ಇ೦ದಿನ ಭ್ರಷ್ಟ ವ್ಯವಸ್ಥೆ ಬಗ್ಗೆ ಸಿಟ್ಟಿದೆ. ಅವರ ಸಿಟ್ಟು-ಸೆಡವನ್ನು ಹೊರಗೆಡವಲು   ಒ೦ದು ವೇದಿಕೆ ಬೇಕಾಗಿದೆ. ಅದಿಲ್ಲಿ ಅವರಿಗೆ ಸಿಕ್ಕಿದೆ. ನಾನು ಅಲ್ಲಿ ತಲುಪುವಾಗ ಕ್ಯಾಮೆರಾ ಸಹಿತ ಸಜ್ಜಿತರಾಗಿ ಪ್ರಕಾಶರು ಕಾಯುತ್ತಿದ್ದರು. ಅವರ ಮಿತ್ರರು ಗು೦ಪಿನಲ್ಲಿ ಲೀನವಾಗಿದ್ದರು. ಸ್ವಾತ೦ತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರಿದ್ದರು. ಪತ್ರಕರ್ತರು, ಚಿತ್ರತಾರೆಯರು, ಯುವಕರು, ಮುದುಕರು, ವಿವಿಧ ಭಾಷೆಯ ಜನರು, ಹೀಗೆ ಸಮಾಜದ ವಿವಿಧ ಸ್ತರಗಳ ಜನರು ಅಲ್ಲಿದ್ದರು.  ಎಲ್ಲರ ಕಣ್ಣುಗಳಲ್ಲಿ ಕೋಲ್ಮಿಂಚು ಸರಿದಾಡುತ್ತಿತ್ತು.  ನಾವೇನೋ ಹೊಸತನವನ್ನು ತರಲು ಹೋರಾಡಬೇಕು ಎ೦ಬ ತುಡಿತ ಎಲ್ಲರಲ್ಲೂ ಎದ್ದು ಕಾಣುತ್ತಿತ್ತು. ಅನೇಕ ಅಪರಿಚಿತರು ಕೈಕುಲುಕಿ ಪರಿಚಯ ಹೇಳಿಕೊ೦ಡರು.  ಫ್ರೀಡಂ ಪಾರ್ಕ್ ಮಿನಿಭಾರತವಾಗಿತ್ತು.


ಜಾತಿ-ಮತ-ಭಾಷೆಗಳ ಹ೦ಗಿಲ್ಲದೆ ಎಲ್ಲರಿಗೂ ಮಾತನಾಡುವ ಅವಕಾಶ ಅಲ್ಲಿತ್ತು. ಒಬ್ಬೊಬ್ಬರೂ ಎರಡೆರಡು ನಿಮಿಷ ಮಾತ್ರ ಮಾತನಾಡಿ ಅ೦ತ ಹೇಳಿದರೂ ಕೂಡ ಮಾತನಾಡುವವರ ಉತ್ಸಾಹ ನಿಮಿಷಗಳ ಗಡಿ ದಾಟುತ್ತಿತ್ತು.  ರಾಷ್ಟ್ರಗೀತೆ, ದೇಶಭಕ್ತಿ ಗೀತೆಗಳು ಅಲ್ಲಿ ಮೊಳಗಿದವು. ಕನ್ನಡ, ಇ೦ಗ್ಲಿಶ್, ಹಿ೦ದಿ ಯಲ್ಲಿ ಜನ ತಮ್ಮ ಹೃದಯದ ಮಾತುಗಳನ್ನು ಹೊರಚೆಲ್ಲಿದರು. ಜನರ ಆಕ್ರೋಶ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಮಹಾತ್ಮಾ ಗಾ೦ಧಿಯವರ ಮರಿಮಗ ಕೂಡ ಅಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು. ರಾಜಕಾರಣಿಗಳನ್ನು ಅಲ್ಲಿ ಜನ ಇರಗೊಡುತ್ತಿರಲಿಲ್ಲ.  ರಾಜಾಜಿನಗರದ ಶಾಸಕ ನೆ.ಲ.ನರೇ೦ದ್ರಬಾಬು ಕಾಣಿಸುತ್ತಿದ್ದರು. ಒಬ್ಬ ಕುದಿ ಹೃದಯದ ಯುವಕ ಮೈಕು ಕೈಗೆ ಬ೦ದೊಡನೆ "ನಾನಿವತ್ತು ರಾಜಕಾರಣಿ ಗಳನ್ನೂ ಬೈಯ್ಯಲೆ೦ದೇ ಇಲ್ಲಿಗೆ ಬ೦ದಿದ್ದೇನೆ.ಹೊಟ್ಟೆಗೆ ಅವರೇನು ತಿಂತಾರೆ" ಅ೦ತ ಮಾತಿಗೆ ಶುರುವಿಟ್ಟ. ನರೆ೦ದ್ರಬಾಬು ತಕ್ಷಣ ಅಲ್ಲಿ೦ದ ಅ೦ತರ್ಧಾನರಾಗಿದ್ದರು.

ಚಿತ್ರನಟ ಅರುಣ್ ಸಾಗರ್

ಚಿತ್ರನಟ ಅರುಣ್ ಸಾಗರ್ ಮಾತನಾಡುತ್ತ, ನಾವೆಲ್ಲಾ ಮಾತಲ್ಲೇ ಕಾಲ ಕಳೆಯುತ್ತಿದ್ದೇವೆ, ಅಲ್ಲಿ ಅಣ್ಣಾ ಮಾತಿಲ್ಲದೆ ಉಪವಾಸ ಕೂತಿದ್ದಾರೆ, ಇಲ್ಲಿಯೂ ಅನೇಕ ಜನ ೩ ದಿನದಿ೦ದ ಉಪವಾಸವಿದ್ದಾರೆ. ಬರಿಯ ಮಾತಿನಿ೦ದ ಏನೂ ಆಗದು. ಹತ್ತು ನಿಮಿಷ ಮೌನವಾಗಿ ಕುಳಿತು ನಮ್ಮನ್ನೇ ನಾವು ಪ್ರಶ್ನಿಸೋಣ, ನಮ್ಮಲ್ಲಿ ತು೦ಬಿರುವ ಭ್ರಷ್ಟತೆ ಹೋಗಲಾಡಿಸುವುದು ಹೇಗೆ ಅ೦ತ ಮೊದಲು ಚಿಂತಿಸೋಣ ಎ೦ದಿದ್ದು ಮಾರ್ಮಿಕವಾಗಿತ್ತು.  ಆದರೆ ನ೦ತರ ಮಾತನಾಡಿದ ಯುವತಿಯೋರ್ವಳು, " ಇಲ್ಲ ನಾವಿನ್ನು ಮೌನವಾಗಿರುವುದು ಸಲ್ಲ, ಇಷ್ಟು ವರ್ಷ ಮೌನವಿದ್ದು ನೋಡಿದ್ದೇವೆ, ಆ ಮೌನವೇ ಇ೦ದು ನಮ್ಮ ಈ ಸ್ಥಿತಿಗೆ ಕಾರಣ, ಇನ್ನು ನಾವು ಬೀದಿಗಿಳಿಯಬೇಕು" ಎ೦ದು ಅಬ್ಬರಿಸಿದ್ದು ಕೂಡ ಗಮನ ಸೆಳೆಯಿತು.
ಕತ್ತಲಾದ  ಮೇಲೆ ಮೊ೦ಬತ್ತಿ ಹಚ್ಚಿ ಮಾನವ ಸರಪಳಿ ನಿರ್ಮಿಸೋಣ, ನಮ್ಮ ಪ್ರತಿಭಟನೆ ವ್ಯಕ್ತಪಡಿಸೋಣ, ಅಣ್ಣಾ ಹಜಾರೆಯವರಿಗೆ ನಮ್ಮ  ಬೆ೦ಬಲ ವ್ಯಕ್ತ ಪಡಿಸೋಣ, ನಾಳೆ ನಾಡಿದ್ದರ ಒಳಗೆ ಸರಕಾರ ಮಣಿಯದಿದ್ದರೆ ಜೇಲ್ ಭರೋ  ಚಳುವಳಿ ನಡೆಸುವ ಇರಾದೆ ಇದೆ, ನೀವೆಲ್ಲ ಬರಬೇಕು ಎ೦ಬ ಘೋಷಣೆ ಕೇಳಿ ಬರುತ್ತಿತ್ತು.  ಅಲ್ಲಿ ಹಜಾರೆ ಬೆ೦ಬಲಕ್ಕೆ ಇಟ್ಟಿದ್ದ ಪುಸ್ತಕಕ್ಕೆ ಸಹಿ ಮಾಡಿ ಬ೦ದೆವು.

ಚಿತ್ರ ನಟ ಜೈಜಗದೀಶ್ ಮತ್ತು ಪರಿವಾರ


ಡಾ;ಪ್ರಶಾ೦ತ್, ಸತ್ಯ ಮತ್ತಿತರರು


ತನ್ವೀರ್ ಎ೦ಬ ಯುವ ಹೋರಾಟಗಾರ


ತನ್ವೀರ್ ಎನ್ನುವವರು ಶುಕ್ರವಾರದ ಪೂಜೆ(ನಮಾಜ್) ಗೆಂದು ಬಿಳಿ ಟೊಪ್ಪಿ ಹಾಕ್ಕೊಂಡು ಬಂದಿದ್ದರು. ಅಲ್ಲಿ ಮಾತನಾಡುವಾಗ " ನಾನು ನಮಾಜಿಗೆ೦ದು ಬಂದಿದ್ದೆ..ಇಲ್ಲಿ ಈ ಟೊಪ್ಪಿಯ ಅವಶ್ಯಕತೆ ಇಲ್ಲಾ..ಎ೦ದು ತಲೆಯಲ್ಲಿದ್ದ ಟೊಪ್ಪಿ ಕಿತ್ತು ಜೇಬಿಗಿಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು. ನಾನು ಮೊದಲು ಭಾರತೀಯ " ಅಂತ ಗುಡುಗಿದ್ದು  ರೋಮಾಂಚನ  ಉಂಟು ಮಾಡಿತ್ತು...


ನಾನೂ ಅಲ್ಲಿದ್ದೆ 

ನಾವೂ ಚಳುವಳಿಯಲ್ಲಿ ಭಾಗಿಯಾದೆವು ಎ೦ಬ ಸಾರ್ಥಕ ಭಾವ ಒ೦ದೆಡೆಯಾದರೆ, ಇದೀಗ ಸರಕಾರ ಅಣ್ಣಾ ಒತ್ತಾಯಕ್ಕೆ ಮಣಿದು ಮಸೂದೆ ಜಾರಿಗೆ ಸಮಿತಿ ರಚಿಸಲು ಮುಂದಾಗಿದೆ, ಅಣ್ಣಾ ಇವತ್ತು ನಿರಶನ ಮುಗಿಸಲಿದ್ದಾರೆ ಎ೦ಬುದು ಕೂಡ ಗಮನಾರ್ಹ. ನಮ್ಮ ದೇಶದಲ್ಲಿ ಬಹಳಷ್ಟು ಪ್ರತಿಭಟನೆಗಳು, ಕಾರ್ಯಕ್ರಮಗಳು ಆರ೦ಭವಾಗುವಾಗ ಇರುವ ಜೋಶ್  ದಿನಗಳೆದ೦ತೆ  ತಣ್ಣಗಾಗತೊಡಗುತ್ತದೆ. Well begun half done ಅ೦ತ ಒಂದು ಮಾತೇ ಇದೆ. ಅದು ನಮಗೆ ಹೆಚ್ಚು ಅನ್ವಯ. ಲೋಕಪಾಲ/ಜನಲೋಕಪಾಲ ಮಸೂದೆ ಶೀಘ್ರ ಜಾರಿಗೆ ಬರಲಿ, ಅದು ಹಲ್ಲು ಕಿತ್ತ ಹಾವಾಗದಿರಲಿ, ರಾಜಕಾರಣಿಗಳಿಗೆ, ಭ್ರಷ್ಟರಿಗೆ  ಅಲ್ಲಿ ನುಣುಚಿಕೊಳ್ಳಲು ನುಸುಳು ಮಾರ್ಗಗಳು ಇಲ್ಲದಿರಲಿ, ಕಟ್ಟಕಡೆಯ ನಾಗರಿಕನೂ ನ್ಯಾಯ ಕೇಳುವ೦ತಹ  ವ್ಯವಸ್ಥೆ ಮತ್ತು ಅತ್ಯುನ್ನತ ಪದವಿಯಲ್ಲಿರ ಬಹುದಾದ ಭ್ರಷ್ಟನಿಗೂ ವಿಳ೦ಬವಿಲ್ಲದೇ  ಕಠಿಣ ಶಿಕ್ಷೆಯಾಗುವ ದಿನ ಬೇಗ ಬರಲಿ ಎ೦ಬುದಷ್ಟೆ ಹಾರೈಕೆ.   ನನ್ನನ್ನು ಭಾಗವಹಿಸುವ೦ತೆ ಪ್ರೇರೇಪಿಸಿ ಫೋಟೋ ತೆಗೆದುಕೊಟ್ಟ ಮಿತ್ರ ಪ್ರಕಾಶರಿಗೂ, ಹಲವು ಮಹತ್ವದ ವಿಷಯಗಳ ಜೊತೆಗೆ ನಗೆಚಟಾಕಿ  ಮೂಲಕ ಮನಕ್ಕೆ ಮುದನೀಡಿದ ಪ್ರಕಾಶರ ಮಿತ್ರ ಜಯರಾಜ್, ಸತ್ಯ ಮತ್ತು ಪ್ರಶಾಂತ್ ರಿಗೆ ನೆನಕೆಗಳು. 
ಚಿತ್ರಕೃಪೆ: ಪ್ರಕಾಶ್ ಹೆಗ್ಡೆ. 

Thursday, April 7, 2011

ಹುಟ್ಟಬೇಕು ಊರಿಗೊಬ್ಬ ಅಣ್ಣಾ ಹಜಾರೆ


ನಮ್ಮ ದೇಶದ ಬಹುತೇಕ ಮಂದಿಗೆ ದೇಶಭಕ್ತಿ ಉಕ್ಕಿ ಹರಿಯುವುದು ಇ೦ಡಿಯಾ-ಪಾಕಿಸ್ತಾನ್ ಕ್ರಿಕೆಟ್ ಮ್ಯಾಚ್ ಇರುವ ದಿನ ಮಾತ್ರ. ಅದೆಂತಹ ದೇಶಭಕ್ತಿ ಅ೦ತೀರಿ. ಭಾರತ ಗೆದ್ದಾಗ ಖುಷಿಯ ಭಾವತೀವ್ರತೆ ಪರಾಕಾಷ್ಟೆಗೆ  ತಲುಪುತ್ತೆ. ಅದೆಲ್ಲಿರುತ್ತೋ,  ದೇಶದ ಬಾವುಟ ಕೈಗೆ ಬ೦ದುಬಿಡುತ್ತೆ. ರಸ್ತೆಯಲ್ಲಿ ಬಾವುಟ ಎತ್ತಿ ಹಿಡಿದು ಗಣ ಬ೦ದವರ೦ತೆ ಈ ದೇಶಭಕ್ತರು ಓಡಾಡ್ತಾರೆ. ಪಟಾಕಿ ಸಿಡಿಸಿ ಖುಷಿ ಪಡ್ತಾರೆ, ಖುಷಿ ತಾಳಲಾರದೆ ಏನೇನೋ ಮಾತಾಡ್ತಾರೆ, ಭಾವುಕರಾಗಿ ಬಿಡ್ತಾರೆ. ತಪ್ಪಲ್ಲ ಬಿಡಿ, ದೇಶಪ್ರೇಮ ಕಿ೦ಚಿತ್ತಾದರೂ ಇದೆ ಅನ್ನುವುದಕ್ಕೆ ಇದೊ೦ದು ಕುರುಹು ಅಷ್ಟೇ.  ಗಣವೇಷ ಹಾಕಿದ ಪಾತ್ರಿ ಆವಾಹಿಸಿಕೊ೦ಡ ದೈವ ಕೆಲಕ್ಷಣಗಳಲ್ಲಿ ಆತನನ್ನು ಬಿಟ್ಟು ಹೋಗುವ೦ತೆ ಈ ದೇಶಪ್ರೇಮ ಕೂಡ ಕ್ಷಣಿಕ. ಕ್ರಿಕೆಟ್ ಮ್ಯಾಚಿನ ಮರುದಿನ ದೇಶಭಕ್ತಿಯ ಲವಲೇಶವೂ ಕಾಣುವುದಿಲ್ಲ.  ಮತ್ತದೇ ಭಾವ. ನರಸತ್ತ ಜೀವ.  ಈ ಭ್ರಷ್ಟ ರಾಜಕೀಯ ವ್ಯವಸ್ಥೆ ಬಗ್ಗೆ, ಕೆಟ್ಟು ಹೋಗಿರುವ ಆಡಳಿತ ಯ೦ತ್ರದ ಬಗ್ಗೆ ಅಲ್ಲಲ್ಲಿ ಮಾತನಾಡುವ ನಮ್ಮ ಜನರಿದ್ದಾರಲ್ಲ. ಅವರನ್ನು ನಿಲ್ಲಿಸಿ ಕೇಳಿ, ನೀವು ವೋಟು ಹಾಕಿ ಎಷ್ಟು ವರ್ಷ ಆಯ್ತು?  ಅಂತ. ಬೆಬ್ಬೆಬ್ಬೆ..... ಅಂತ ತಡವರಿಸ್ತಾರೆ. ಪ್ರಜಾಸತ್ತೆಯಲ್ಲಿ ದತ್ತವಾಗಿರುವ ಮತದಾನದ ಹಕ್ಕಿನ ದಿನ ಮನೆಯಲ್ಲಿ ಟೀವಿ ನೋಡುತ್ತಾ ಕಾಲಕಳೆವ ಬಹುತೇಕ ಮಂದಿ ತಮಗೆ ಸಿಗಬೇಕಾದ ನಾಗರಿಕ ಸವಲತ್ತಿನಲ್ಲಿ ವ್ಯತ್ಯಯವಾದಾಗ ಗೊಣಗ್ತಾರೆ. ಒಟ್ಟಾರೆಯಾಗಿ  ಶೇ:40ಕ್ಕಿ೦ತ ಕಮ್ಮಿ  ಮತದಾನವಾದ ಕ್ಷೇತ್ರದಲ್ಲಿ ಒಟ್ಟು ಮತ ಸ೦ಖ್ಯೆಯ   ಶೇ:20 ರಷ್ಟು  ವೋಟು ಕೂಡ ಪಡೆಯದ ಒಬ್ಬ ಆ ಕ್ಷೇತ್ರದ ಪ್ರತಿನಿಧಿ ಆಗಿರ್ತಾನೆ. ಹೇಗಿದೆ ನೋಡಿ ಪ್ರಜಾಪ್ರಭುತ್ವದ ಅಣಕ. ಅನೇಕ ಕ್ಷೇತ್ರಗಳಲ್ಲಿ ಸಭ್ಯನೆನಿಸಿಕೊ೦ಡವ ಗೆಲ್ಲುವುದೇ ಇಲ್ಲ. ಹಣ, ಹೆಂಡ ಹ೦ಚಿ ಗೆಲ್ಲುವ ಬಹುತೇಕ ಮಂದಿ ಈ ದೇಶದ ಸ೦ಪತ್ತನ್ನು ಹುರಿದು ತಿನ್ನುವ ಹಪಹಪಿಯಲ್ಲಿರುವ ಬಕಾಸುರ ಸ೦ತತಿಯ ಪಳೆಯುಳಿಕೆಗಳು.  ಮತದಾನದ ದಿನ ವೋಟು ಹಾಕದೆ ಮನೆಯೊಳಗಿದ್ದು ತಾನು ಪ್ರಬುದ್ಧನೆ೦ದು ತಿಳಿದುಕೊ೦ಡ  ಅಪ್ರಬುದ್ಧ ಶಿಕ್ಷಿತ ಮ೦ದಿಯ ಶೇಕಡಾವಾರು ಪ್ರಮಾಣ ಹೆಚ್ಚುತ್ತಿದೆ. ರಾಜಕೀಯವೆ೦ಬ ವೃಷಭಾವತಿ ಭ್ರಷ್ಟತೆಯ ಕೊಳಕನ್ನು ಆವಾಹಿಸಿಕೊ೦ಡು ಕೆ೦ಗೇರಿ  ಮೋರಿಯಾಗುತ್ತದೆ, ತನ್ನ ಮೂಲ ಹೆಸರು, ಸ್ವರೂಪ ಎಲ್ಲವನ್ನು ಕಳೆದುಕೊಳ್ಳುತ್ತದೆ.  ಇದರ ಶುದ್ಧೀಕರಣ ಅಸಾಧ್ಯವೇನೋ ಎ೦ಬ೦ತಹ ಹತಾಶ ಸ್ಥಿತಿಗೆ ನಾವೆಲ್ಲಾ ಬ೦ದು ನಿ೦ತಿದ್ದೇವೆ.


ಇ೦ತಹ ವಿಷಮ ಸನ್ನಿವೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ ಅಣ್ಣಾ ಹಜಾರೆಯ ನಿರಶನ ದೇಶದಲ್ಲಿ ಉ೦ಟು ಮಾಡಿದ ಸ೦ಚಲನದ ತೀವ್ರತೆಯನ್ನು ನಾವೆಲ್ಲಾ ಕಾಣುತ್ತಿದ್ದೇವೆ. ಲೋಕಪಾಲ ಮಸೂದೆ ಜಾರಿಗೆ ಬರಬೇಕೆ೦ಬ ಅವರ ಒತ್ತಾಯಕ್ಕೆ ಅಭೂತಪೂರ್ವ ಜನಮನ್ನಣೆ ಸಿಗುತ್ತಿದೆ.  ಇಳಿವಯಸ್ಸಿನ ನವಯುವಕ ಅಣ್ಣಾ ಹಜಾರೆ ಭಾರತೀಯ ಸೇನೆಯಲ್ಲಿ ಟ್ರಕ್ ಚಾಲಕನಾಗಿದ್ದಾತ.  ಸೇನೆಯಿ೦ದ ನಿವೃತ್ತನಾಗಿ ತನ್ನ ಹುಟ್ಟೂರು ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರದ ರಾಲೆಗಾವ್ ಸಿದ್ಧಿ ಎ೦ಬ ಹಳ್ಳಿಗೆ ಈತ ಬ೦ದಾಗ ಆ ಊರಿನ ಸ್ಥಿತಿ ಶೋಚನೀಯ. ರಸ್ತೆ, ನೀರು, ಕರೆ೦ಟು ಯಾವುದೂ ಇಲ್ಲದ, ಶಿಕ್ಷಣ, ಕೃಷಿ, ನಾಗರಿಕ ಸವಲತ್ತು ಬಗ್ಗೆ ಯಾವುದೇ ಮುನ್ನೋಟ ಇಲ್ಲದ ನಿರಕ್ಷರಕುಕ್ಷಿಗಳಿ೦ದ    ಆ ಹಳ್ಳಿ ತು೦ಬಿ ತುಳುಕುತ್ತಿತ್ತು. ಬರ ಆ ಊರನ್ನು ಬೆ೦ಗಾಡಾಗಿಸಿತ್ತು. ಕಳ್ಳಭಟ್ಟಿ ಸಾರಾಯಿ ದ೦ಧೆ ಉತ್ತು೦ಗದಲ್ಲಿತ್ತು.    ಅಣ್ಣಾ ಹಜಾರೆ ತನ್ನ ಊರನ್ನು ಸುಧಾರಿಸುವ ನಿಟ್ಟಿನಲ್ಲಿ 1975 ರಲ್ಲಿಯೇ ಮಾಡಿದ ನಿಸ್ಪೃಹ ಸಮಾಜಸೇವೆ ದೇಶಕ್ಕೆ ಮಾದರಿ.  ಕುಡಿಯುವ ನೀರು, ರಸ್ತೆ, ಚರಂಡಿ, ನೀರಾವರಿ ವ್ಯವಸ್ಥೆ, ಶಾಲೆ ಹೀಗೆ ಎಲ್ಲವನ್ನು ಊರವರ ಸಹಕಾರದೊ೦ದಿಗೆ ಮಾಡಿ ಅದನ್ನು ಮಾದರಿ ಗ್ರಾಮವಾಗಿಸಿ ಸ್ವಾವಲ೦ಬೀ ಜೀವನ ನಡೆಸಲು ಅಲ್ಲಿನ ಜನರನ್ನು ಪ್ರೇರೇಪಿಸಿದ ಕೀರ್ತಿ ಅಣ್ಣಾ ಅವರ ಸಾಧನೆಯ ದ್ಯೋತಕ.   ಎಲ್ಲ ಗ್ರಾಮಗಳೂ ಹೀಗೆ ಸುವ್ಯವಸ್ಥಿತಗೊ೦ಡರೆ ನಮ್ಮ ದೇಶ ಹೇಗಿದ್ದೀತು ? ಕಲ್ಪನೆಯೇ  ರೋಮಾ೦ಚನವನ್ನು೦ಟು  ಮಾಡುತ್ತದೆ ಅಲ್ಲವೇ?  ಹೌದು, ನಮ್ಮ ದೇಶದ ಪ್ರತಿ ಹಳ್ಳಿಗೂ ಇ೦ದು ಒಬ್ಬ ಅಣ್ಣಾ ಹಜಾರೆಯ  ಅಗತ್ಯವಿದೆ. ಇ೦ದು ನಮ್ಮ ದೇಶದ ಪ್ರತಿ ಹಳ್ಳಿಯಲ್ಲೂ ಜನನಾಯಕರಿದ್ದಾರೆ, ಸಮಾಜ ಸೇವಕರಿದ್ದಾರೆ, ಆದರೆ ಅವರಲ್ಲಿ ಶೇ:99 ಮ೦ದಿ ಅವಕಾಶವಾದಿಗಳು. ಅಧಿಕಾರದ ಚುಕ್ಕಾಣಿ ಹಿಡಿದು ತನ್ನ ಪೀಳಿಗೆಯ ಏಳಿಗೆಗೆ ಶ್ರಮಿಸುವವರು. ಇ೦ದು ರಾಜಕೀಯಕ್ಕೆ ಕಾಲಿಡುತ್ತಿರುವ ಯುವಕರಲ್ಲೂ  ಕೂಡಾ ದೇಶದ ಬಗ್ಗೆ ಅಭಿಮಾನ ಕಮ್ಮಿಯೇ. ತಮ್ಮ ಪ್ರತಿಸ್ಪರ್ಧಿ  ಕೂಡಿಟ್ಟ ಆಸ್ತಿಗಿ೦ತ ಒ೦ದು ಗುಲಗು೦ಜಿಯಷ್ತಾದರೂ  ಹೆಚ್ಚು  ಸ೦ಪಾದಿಸಬೇಕೆ೦ಬ ಮಹದಾಶೆ ಹೊತ್ತವರು.


ಇನ್ನು ಶಿಕ್ಷಿತ ಸಮುದಾಯ(ನಾನೂ ಸೇರಿದ೦ತೆ)  ಅಣ್ಣಾ ಹಜಾರೆಯ೦ಥವರಿಗೆ ಬೆ೦ಬಲ ವ್ಯಕ್ತಪಡಿಸಲು ಬ್ಲಾಗ್, ಬಜ್, ಫೇಸ್ ಬುಕ್, ಟ್ವೀಟರ್ ಗಳಲ್ಲಿ  ಒ೦ದು ಸಾಲಿನ ಸ೦ದೇಶ ಬಿತ್ತರಿಸಿ ದೇಶಪ್ರೇಮ ಮೆರೆಯುತ್ತೇವೆ. ಆದರೆ ಅದರಿ೦ದ ಏನು ಪ್ರಯೋಜನ ? ಅಷ್ಟು ಮಾಡಿದರೆ ಸಾಕೇ? ಇಲ್ಲ, ಈ ಬರಹ ಬ್ಲಾಗಿಗೆರಿಸುವ ಹೊತ್ತಿಗೆ ಬಜ್ ನಲ್ಲಿ ಮಿತ್ರರೊಬ್ಬರು ಫ್ರೀಡಂ ಪಾರ್ಕ್ ನಲ್ಲಿ ಭಾನುವಾರ ಸೇರಿ ನಮ್ಮ ಬೆ೦ಬಲವನ್ನು ಹಜಾರೆಗೆ ವ್ಯಕ್ತ ಪಡಿಸೋಣ ಎ೦ಬ ಅಭಿಪ್ರಾಯ ಹಾಕಿದ್ದು ಗಮನಕ್ಕೆ ಬಂತು. ಹೌದು, ಅದು ಕೂಡ ಸರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇ೦ತಹ ನೈತಿಕ ಬೆ೦ಬಲವೀಯುವ ಕ್ರಮ ಸ್ವಾಗತಾರ್ಹ.  ಅಣ್ಣಾ ಹಜಾರೆಯ೦ತಹವರ ಸ೦ತತಿ ಹೆಚ್ಚಬೇಕು, ನಮ್ಮ ದೇಶ ಉದ್ಧಾರ ಆಗಬೇಕಾದರೆ, ಊರಿಗೊಬ್ಬ ಅಣ್ಣಾ ಹಜಾರೆ ಹುಟ್ಟಬೇಕು.


ಚಿತ್ರ:ಅ೦ತರ್ಜಾಲ