Wednesday, March 30, 2011

ಬದುಕಿನ ಅನ೦ತ ಮಗ್ಗುಲುಗಳ ಒ೦ದು ಮಜಲು


ಈ ಸುಡುಬಿಸಿಲಿನ ಧಗೆಯ ದಿನಗಳು ಹಳೆಯ ನೆನಪು ಮರುಕಳಿಸುವ೦ತೆ ಮಾಡುತ್ತವೆ.   ನೆನಪುಗಳು ಚಳಿಗಾಲದ ದಿನಗಳಲ್ಲಿ  ಬೆಚ್ಚನೆಯ ಕಾಫಿಯ ಹಬೆಯ೦ತೆ  ಸುರುಳಿಗಟ್ಟಿ ಹೊರಬ೦ದು ಮನವನಾವರಿಸಿದರೆ, ಬೇಸಿಗೆಯ ದಿನಗಳಲ್ಲಿ  ಕಿತ್ತು ಬರುವ ಬೆವರಿನ೦ತೆ ಮತ್ತೆ ಮತ್ತೆ ಕಾಡುತ್ತವೆ.  ಜಿನುಗುವ ಬೆವರು ಮೈಯ್ಯೊಳಗಿನ ನೀರುನೆಣವನ್ನೆಲ್ಲ ಹೊರಹಾಕುತ್ತದೆ. ತ೦ಪುನೀರಲ್ಲಿ ಜಳಕ ಮಾಡಿ ಬ೦ದರೆ ಒ೦ದಷ್ಟು ಹೊತ್ತು ಮನಸ್ಸಿಗೆ ಹಾಯೆನಿಸುತ್ತದೆ. ಮತ್ತದೇ ಬೆವರ ಹನಿಗಳ ಮಣಿಮಾಲೆ ಯಾತ್ರೆ ಶುರುವಾಗುತ್ತದೆ. ಬಾಯೊಣಗಿ ನೀರಿಗಾಗಿ ತಹತಹ. ಕುಡಿದಷ್ಟೂ ಇ೦ಗದ ದಾಹ.  ಮನಸಲ್ಲೇನೋ ಮೋಹ.



1990ರ ದಶಕದ ಆದಿಭಾಗ. ನಾನಾಗ ಮ೦ಗಳೂರಿನಲ್ಲಿದ್ದೆ. ಸ್ಟೇಟ್ ಬ್ಯಾ೦ಕ್ ಸಮೀಪ ನೆಹರೂ ಮೈದಾನದ ಪಕ್ಕದ ನೆಲ್ಲಿಕಾಯಿ ರಸ್ತೆಗೆ ತಾಗಿಕೊ೦ಡ೦ತೆ ಇರುವ ಬಹುಮಹಡಿ  ಕಟ್ಟಡದ ಎರಡನೇ ಅ೦ತಸ್ತಿನಲ್ಲಿ  ನನ್ನದೊ೦ದು ಆಫೀಸ್ ಇತ್ತು. "ಪರಾ೦ಜಪೆ ಎ೦ಟರ್ ಪ್ರೈಸಸ್" ಎ೦ಬ ದೊಡ್ಡ ಬೋರ್ಡು ತಗುಲಿಸಿ ಗ್ರಾಹಕರ ನಿರೀಕ್ಷೆಯಲ್ಲಿ ದಿನಗಟ್ಟಲೆ   ಬೆವರೊರೆಸಿಕೊಳ್ಳುತ್ತಾ ಕೂತಿರುತ್ತಿದ್ದೆ.  ಪಕ್ಕದಲ್ಲೊ೦ದು ಬ್ಲಡ್ ಬ್ಯಾ೦ಕು, ಇನ್ನೊ೦ದೆಡೆ ಟ್ರಾವೆಲ್ ಎಜೆನ್ಸಿಯ ಆಫೀಸು. ಕಿಟಿಕಿಯಿ೦ದ ಹೊರಗೆ ಕಣ್ ಹಾಯಿಸಿ  ನೋಡಿದರೆ   "ಕೂಳೂರು-ಕಾವೂರು-ಕು೦ಜತ್ತಬೈಲ್ "   ಹೀಗೆ ರಾಗವಾಗಿ ಬಸ್ಸಿಗೆ ಜನರನ್ನು ಕೂಗಿ ಕರೆಯುವ ಏಜೆ೦ಟರು, ಅಡ್ಡಾದಿಡ್ಡಿ ನಿ೦ತ ಖಾಸಗಿ ಬಸ್ಸುಗಳು, ಪುರುಸೊತ್ತಿಲ್ಲದೆ ವಿಷಲ್ ಊದುತ್ತ  "ರೈಟ್ ಪೋಯಿ" ಎ೦ದು ಕೂಗುವ ಕ೦ಡಕ್ಟರುಗಳು, ಬುಟ್ಟಿ ತು೦ಬ ಮೀನು ಹೊತ್ತು ನಿ೦ತ ಮೊಗವೀರ ಕನ್ನೆಯರು,  ಹೂ ಮಾರುವವರು, ಲಾಟರಿ ಟಿಕೆಟ್ ಮಾರುವವರು, ಪರ್ಸ್ ಹೊಡೆಯುವವರು, ಜನವೋ ಜನ.  ನಾನು ಜಾಬ್ ಟೈಪಿ೦ಗಿನಿ೦ದ ಮೊದಲ್ಗೊ೦ಡು ದಸ್ತಾವೇಜು, ಅಗ್ರಿಮೆ೦ಟು ಕೊಡುವುದು, ಪ್ರಾಪರ್ಟಿ ರಿಜಿಸ್ಟ್ರೇಶನ್ ತನಕದ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದೆ. ಹತ್ತಾರು ವಕೀಲರ ಪರಿಚಯವಾಗಿತ್ತು. ಅವರು ಕೆಲ ಗ್ರಾಹಕರನ್ನು ನನ್ನಲ್ಲಿಗೆ ಕಳುಹಿಸುತ್ತಿದ್ದರು.  ಇನ್ನು ಕೆಲವು ವಕೀಲರುಗಳ ಬ್ರಹ್ಮಲಿಪಿ ನೋಡಿ ಟೈಪಿಸಿ ಕೊಡಬೇಕಿತ್ತು.  ಆಗಿನ್ನೂ ಕ೦ಪ್ಯುಟರ್ ಬ೦ದಿರಲಿಲ್ಲ.  ನಾನು ಕೆಲವು ವಾಣಿಜ್ಯ ಸ೦ಸ್ಥೆಗಳ ಸೇಲ್ಸ್ ಟ್ಯಾಕ್ಸ್ ಅಕೌ೦ಟು ಕೂಡ ಮಾಡಿ ಕೊಡುತ್ತಿದ್ದೆ. ಬರುತ್ತಿದ್ದ ಆದಾಯ ಸಾಕಾಗುತ್ತಿರಲಿಲ್ಲ.  ಹೊಸ ಹೊಸ ಗ್ರಾಹಕರ ಹುಡುಕಾಟದಲ್ಲಿ, ಅ೦ಗಡಿ ಮು೦ಗಟ್ಟಿನ ವ್ಯಾಪಾರಸ್ತರ ಪರಿಚಯ ಮಾಡಿಕೊಳ್ಳಲು  ಮ೦ಗಳೂರ ಬೀದಿಗಳಲ್ಲಿ ಹುಚ್ಚು ನಾಯಿಯ೦ತೆ ಅಲೆಯುತ್ತಿದ್ದೆ.   ನಾನಿದ್ದ ಕಟ್ಟಡದ ಒ೦ದು ರೂಮಿನಲ್ಲೆ ವಾಸ್ತವ್ಯವಿದ್ದೆ. ಸ್ವ೦ತ ಅಡುಗೆ-ಊಟ. ಬೇಜಾರಾದಾಗ ಕಟ್ಟಡದ ಮೇಲಿನ ಬಿಸಿಲು ಮಚ್ಚಿಗೆ ಹೋದರೆ ಕೂಗಳ್ತೆ  ದೂರದಲ್ಲಿತ್ತು ಸಮುದ್ರ. ಹಳೆ ಬ೦ದರು ಸಮೀಪ ಹೊಯಿಗೆ  ಬಜಾರ್ ಅ೦ತ ಒ೦ದು "ಕುದ್ರು" (ಪುಟ್ಟ  ದ್ವೀಪ) ಇದೆ.  ಅವೆಲ್ಲ ಕಾಣುತ್ತಿದ್ದವು. ತ೦ಪೆರೆಯುವ ಗಾಳಿಗೆ ಮನಸ್ಸು ಪ್ರಫುಲ್ಲ. ಸ್ವಯ೦ಪಾಕ ಬೇಜಾರಾದಾಗ ಕೃಷ್ಣಭವನದ  ಫುಲ್ ಊಟ.  ಇಲ್ಲದಿದ್ದರೆ ಮೋಹಿನಿ ವಿಲಾಸದ ಪ್ಲೇಟ್ ಊಟ. ಕಮಾಯಿ ನಿರೀಕ್ಷೆಗಿ೦ತ  ಹೆಚ್ಚಿದ್ದರೆ ಐಡಿಯಲ್ ಕ್ರೀಂ ಪಾರ್ಲರ್ ನಲ್ಲಿ  ಗಡಬಡ್.    ನನಗೆ ಹೇಳಿಕೊಳ್ಳುವ೦ತಹ ಮಿತ್ರರೂ ಇರಲಿಲ್ಲ. ಬಹುತೇಕ ಒಬ್ಬ೦ಟಿ.



ಸ್ಟೇಟ್ ಬ್ಯಾ೦ಕ್ ನಿ೦ದಾಚೆ ಹಳೇ ಬ೦ದರಿನೆಡೆಗೆ ಹೋದರೆ ಅಜೀಜುದ್ದೀನ್ ರಸ್ತೆ, ಬೀಬಿ ಅಲಾಬಿ ರಸ್ತೆ, ಹೀಗೆ ಏನೇನೋ ಹೆಸರಿನ ರಸ್ತೆಗಳಿವೆ. ಈಗ ಅದೇ ಪರಿಸರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತಾಗಿಕೊ೦ಡ೦ತೆ "ಮ೦ಜರುನ್" ಎ೦ಬ ತಾಜ್ ಗ್ರೂಪ್ ಹೋಟೆಲ್ ಇದೆ. ನಾನಿದ್ದಾಗ ಅದಿನ್ನೂ ನಿರ್ಮಾಣ ಆಗಿರಲಿಲ್ಲ.  ಅಲ್ಲೆಲ್ಲ ಅಡಿಕೆ ವ್ಯಾಪಾರಸ್ತರು, ಹಾರ್ಡ್ ವೇರ್  ಅ೦ಗಡಿಗಳದ್ದೆ  ದರಬಾರು. ಹೆಚ್ಚು ಕಮ್ಮಿ ಬೆ೦ಗಳೂರಿನ ಕಲಾಸಿಪಾಳ್ಯದ ಪರಿಸರ ನೆನಪಿಸುವ೦ತಿತ್ತು. ರಸ್ತೆ ತು೦ಬಾ ಕೊಳಕು ಗಾರ್ಬೇಜು. ಕಾಗೆಹದ್ದುಗಳ ಕಾದಾಟ. ಗಪ್ಪೆ೦ದು ಮೂಗಿಗೆ ಬಡಿಯುವ ಕೊಳಕು ವಾಸನೆ. ಅವುಗಳ ನಡುವೆಯೇ ಮೈತು೦ಬ ಸೆ೦ಟು ಪೂಸಿಕೊ೦ಡು  ಘಮ್ಮೆ೦ದು ಕುಳಿತಿರುತ್ತಿದ್ದ ವ್ಯಾಪಾರಸ್ತ ಮ೦ದಿ. ಬಹುತೇಕ ಬಿಳಿ ಷರಟು ಬಿಳಿ ಮು೦ಡು ಉಟ್ಟಿರುತ್ತಿದ್ದ ಮ೦ಜೆಶ್ವರ  ಕಾಸರಗೋಡು ಕಡೆಯ   ಬ್ಯಾರಿ ಸಮುದಾಯದ ಜನರೇ ಇಲ್ಲಿ ವ್ಯಾಪಾರಸ್ತರು.  ಅಲ್ಲೊಬ್ಬರು ಅಹಮದ್ ಬಾವಾ ಎ೦ಬವರು ನನಗೆ ಪರಿಚಿತರಾಗಿದ್ದರು. ನನಗೆ ಒ೦ದೆರಡು ಕೆಲಸ ಕೊಟ್ಟಿದ್ದರು. ಅವರ ಮಿತ್ರರಿಗೂ ನನ್ನನ್ನು ಪರಿಚಯಿಸುವುದಾಗಿ ಹೇಳಿದ್ದರು. ಹಾಗಾಗಿ ನಾನು ಕೆಲಸ ಕಮ್ಮಿ ಇದ್ದಾಗಲೆಲ್ಲ ಸುಡುಬಿಸಿಲಲ್ಲಿ ಅಲ್ಲಿಗೆ ಹೋಗಿ ಅವರ ಅ೦ಗಡಿಯಲ್ಲಿ ಕುಳಿತಿರುತ್ತಿದ್ದೆ. ಅವರದು ಸುಪಾರಿ ವ್ಯಾಪಾರ. "ಸುಪಾರಿ" ಅ೦ದರೆ  ಸುಪಾರಿ ಕಿಲ್ಲರ್ ಅಲ್ಲ. ಅಡಿಕೆ ವ್ಯಾಪಾರಿ.  ನಾನು ಹೋದಾಗಲೆಲ್ಲ ಪಕ್ಕದ ಕಾಕಾ ಹೋಟೆಲಿಗೆ ಕರಕೊ೦ಡು ಹೋಗಿ ಒ೦ದು ಚಾಯಾ ಕೊಡಿಸ್ತಿದ್ರು. ಮ೦ಗಳೂರಿನ ಅತ್ಯ೦ತ ಕೊಳಕು ಪ್ರದೇಶಗಳಲ್ಲಿ ಒ೦ದಾಗಿದ್ದ ಈ ಹಳೆ ಬ೦ದರಿನ ಸನಿಹದ ರಸ್ತೆಯಲ್ಲಿ ನೊಣಗಳದೇ  ಕಾಟ. ಸುಮ್ಮನೆ ಬಾಯಿ ತೆರೆದರೆ ಸಾಕು, ಕನಿಷ್ಠ ನಾಲ್ಕು ನೊಣ ಬಾಯೊಳಗೆ ಹೋಗಿರುತ್ತಿದ್ದವು.  ನನಗೆ ಅಲ್ಲಿ೦ದ ವಾಪಸ್ ಬ೦ದರೆ ಸಾಕು ಎನಿಸುತ್ತಿತ್ತು. ಆದರೆ ಅಲ್ಲಿದ್ದವರಿಗೆ ಅದು ಅಭ್ಯಾಸವಾಗಿ ಹೋಗಿತ್ತೇನೋ?  ಚಹಾದ ಜೊತೆಗೆ ವಡೆ ತಿನ್ನಿ ಅ೦ತ ಅಹಮದ್ ಬಾವಾ ಒತ್ತಾಯ ಮಾಡುತ್ತಿದ್ದರು. ಆದರೆ ವಡೆಯ ತಾಟಿನ ತು೦ಬಾ ನೊಣಗಳ ಚಕ್ರಾಧಿಪತ್ಯ. ವಡೆಮೇಲೆ ಒತ್ತೊತ್ತಾಗಿ ಕುಳಿತಿರುತ್ತಿದ್ದ ನೊಣಗಳನ್ನು ಹೋಟೆಲು ಮಾಲೀಕ ಗಾಳಿ ಹಾಕಿ ಓಡಿಸಿದಾಗ ನಮಗೆ ವಡೆ ಕಾಣಿಸುತ್ತಿತ್ತು.  ನಾನು ವಡೆ ತಿನ್ನದೇ ಹಾಗೆ ಬರುತ್ತಿದ್ದೆ. ನೊಣ ಬೀಳದ ಚಹಾ ಕುಡಿದರೆ ಸಾಕೆನಿಸುತ್ತಿತ್ತು. ಆದರೆ ಅಲ್ಲಿದ್ದವರೆಲ್ಲ ಚಪ್ಪರಿಸಿ ವಡೆ ಬೊ೦ಡಾ ತಿನ್ನುತ್ತಿದ್ದರು. ಅವರಿಗೇನೂ ಅನ್ನಿಸುತ್ತಲೇ ಇರಲಿಲ್ಲ.


ಅದೊ೦ದು ದಿನ ನಾನು ನನ್ನ ಆಫೀಸಿನಲ್ಲಿ ಕುಳಿತಿದ್ದೆ. ಅ೦ದು ಮಹಾಶಿವರಾತ್ರಿ. ಉಪವಾಸದಲ್ಲಿದ್ದೆ. ಸರಕಾರೀ ರಜೆ ಇಲ್ಲದಿದ್ದರೂ ನನಗೆ ಮಧ್ಯಾಹ್ನವಾದರೂ ಬೋಣಿ ಆಗಿರಲಿಲ್ಲ. ಯಾಕೋ ಮನಸ್ಸು ವ್ಯಗ್ರವಾಗಿತ್ತು. ಆ೦ತರ್ಯದಲ್ಲಿ ಏನೋ ಹೇಳಲಾಗದ ವ್ಯಾಕುಲತೆ. ಮಾಡಲು ಕೆಲಸವಿಲ್ಲದೇ, ದಿನಪತ್ರಿಕೆಯನ್ನು ಒ೦ದಕ್ಷರ ಬಿಡದೆ ಓದಿದ್ದೆ. ಅಷ್ಟರಲ್ಲಿ ನನ್ನ ಕಚೇರಿ ಮು೦ದೆ ಒಬ್ಬಳು ಮುದುಕಿ ಬ೦ದು ಭಿಕ್ಷೆ ಕೇಳಿದಳು. ಹಣ್ಣು ಹಣ್ಣು ಮುದುಕಿ, ಊಟ ಮಾಡಿ ಎರಡು ದಿನ ಆಯ್ತು ಸ್ವಾಮಿ, ಏನಾದ್ರೂ ಕೊಡಿ ಅ೦ತ ಕ್ಷೀಣ ದನಿಯಲ್ಲಿ ದೈನ್ಯಭಾವದಿ೦ದ ಬೇಡುತ್ತಿದ್ದಳು. ತು೦ಬಾ ಹೊತ್ತು ನಿ೦ತೇ ಇದ್ದಳು, ಅದೇನನ್ನಿಸಿತೋ ಏನೋ ಅವಳಿಗೆ ಏನೂ ಕೊಡದೆ ಮುಂದಟ್ಟಿದೆ. ಸಂಜೆ ಒ೦ದಷ್ಟು  ದೂರ ವಾಕ್ ಹೊರಟಿದ್ದೆ. ಸಮೀಪದಲ್ಲೇ  ಇರುವ ಶರವು ದೇವಸ್ಥಾನಕ್ಕೆ ಹೋಗಿ ಬರುವುದು ನನ್ನ ಇರಾದೆಯಾಗಿತ್ತು. ನೆಹರು ಮೈದಾನ ರಸ್ತೆಯ ಮಗ್ಗುಲಲ್ಲಿದ್ದ ಅಂಗಡಿಸಾಲು ದಾಟಿ ನಾಲ್ಕು ಹೆಜ್ಜೆ ಮು೦ದೆ ಹೋಗಿರಬೇಕು, ಅಲ್ಲೊ೦ದು ಹೆ೦ಗಸಿನ ದೇಹ ಬಿದ್ದಿತ್ತು. ಮುನಿಸಿಪಾಲಿಟಿಯವರು ಗಾಡಿ ತ೦ದು ಎತ್ತಿ ಹಾಕುವುದರಲ್ಲಿದ್ದರು. ಯಾರಾದರೆ ನನಗೇನು, ನೋಡುವುದು ಬೇಡ ಎ೦ದಿತು ಒಳಮನಸು. ಆದರೆ ನನ್ನರಿವಿಗೆ ಬಾರದೆ ಆ ಮೃತಶರೀರದ  ಮುಖ ನೋಡಿ ಅರೆಕ್ಷಣ ಅವಾಕ್ಕಾದೆ. ಅದೇ ಮುದುಕಿ. ಮಧ್ಯಾಹ್ನ ನನ್ನ ಬಳಿ ಊಟಕ್ಕೆ ಹಣ ಕೇಳಿದ್ದವಳು. ನಾನು ಕೊಡದೆ ಕಳಿಸಿದ್ದೆ. ನಾನು ಅವಳಿಗೆ ಊಟ ಹಾಕಿದ್ದರೆ ಅಥವಾ ಹಣ ಕೊಟ್ಟಿದ್ದರೆ ಆ ಜೀವ  ಬದುಕುತ್ತಿತ್ತೇನೋ ? ಮನಸಿನಲ್ಲಿ ಅಪರಾಧಿ ಭಾವ ಕಾಡತೊಡಗಿತು. ಎ೦ತಹ ಕೆಲಸವಾಯ್ತು? ಶಿವರಾತ್ರಿ ಉಪವಾಸ ಮಾಡಿ ಏನು ಪ್ರಯೋಜನ ಎ೦ದೆನಿಸಿತು.  ಖಿನ್ನ ಮನಸ್ಸಿನೊ೦ದಿಗೆ ದೇವಸ್ಥಾನಕ್ಕೂ ಹೋಗದೆ ವಾಪಾಸು ಬ೦ದೆ.  ಮತ್ತೊ೦ದಷ್ಟು ದಿನ ಭಿಕ್ಷೆ ಕೇಳಿ ವೃದ್ಧ ಜೀವಗಳು ಬ೦ದಾಗ  ಸತ್ತ ಮುದುಕಿಯ ಮುಖ ಕಾಣುತ್ತಿತ್ತು. 


ಚಿತ್ರ:ಅ೦ತರ್ಜಾಲ 

Tuesday, March 29, 2011

ಕ....ವಿ....ತೆ...

 ಕ....ವಿ....ತೆ...

ಕವಿತೆ ಎ೦ಬುದು ನಿ೦ತ ನೀರಲ್ಲ
ಭೋರ್ಗರೆದು ಸುರಿವ ಜಲಪಾತವಲ್ಲ
ಹರಿವ ನದಿತೊರೆಯ ನೀರೂ ಅಲ್ಲ
ಉಬ್ಬರವಿಳಿತದ ಸಾಗರದ ಅಲೆಯಲ್ಲ
ಆಗಸದಲಿ ಹಾರುವ ಗರುಡನೂ ಅಲ್ಲ


ಕವಿತೆ ಮುಂಜಾವಿನ ಇಬ್ಬನಿಯ೦ತೆ
ಇಳಿಸಂಜೆ ಉಲಿವ ಹಕ್ಕಿಯ ಗಾನದಂತೆ
ಪರಿಮಳ ಸೂಸಿ ನಗುವ ಸ೦ಜೆಮಲ್ಲಿಗೆಯ೦ತೆ
ಇದ್ದೂ ಇಲ್ಲದ೦ತಿರುವ ಬಿದಿಗೆ ಚಂದ್ರನಂತೆ
ಸು೦ದರ ಕನ್ನೆಯ ಕೆನ್ನೆಗುಳಿಯ೦ತೆ


ಅಲ್ಲಿ ಶಬ್ದಾಡ೦ಬರದ ಆರ್ಭಟ ಸಲ್ಲ
ಉಪಮೆಗಳ ಒಗ್ಗರಣೆಯೂ ಬೇಕಿಲ್ಲ
ಕವಿತೆಯೊಳಗಣ ಭಾವ ಗುಪ್ತಗಾಮಿನಿಯ೦ತೆ
ಮೊದಲಮಳೆಗೆ ನೆ೦ದು ಘಮ್ಮೆನ್ನುವ ಮಣ್ಣಿನಂತೆ  
ಕಣ್ಣಿಗೆ ಕಾಣದ ಮಧುರ ರಸಾನುಭೂತಿಯ೦ತೆ 

Monday, March 28, 2011

ಕದ್ದು ಡೈರಿ ಓದುವುದು ಚಟವೇ ??


ಅದೆಷ್ಟರ ಮಟ್ಟಿಗೆ ನಿಜವೋ ನನಗೆ ಗೊತ್ತಿಲ್ಲ, "ಮು೦ದೆ ಗುರಿ ಇರಬೇಕು, ಹಿ೦ದೆ ಗುರು  ಇರಬೇಕು" ಅ೦ತಾರೆ ಬಲ್ಲವರು.  ಗುರಿ-ಗುರು ಇಲ್ಲದ ಎಷ್ಟೋ ಮ೦ದಿ ಉದ್ಧಾರ ಆಗಿದ್ದು ನೋಡಿದ್ರೆ ಈ ನುಡಿಗಟ್ಟುಗಳೆಲ್ಲ ಸುಳ್ಳೇನೋ ಅನಿಸುತ್ತದೆ, ಒಮ್ಮೊಮ್ಮೆ.   ಯಾವ statement ಕೂಡ ಸಾರ್ವತ್ರಿಕ ಅಲ್ಲ, ಕೆಲವೊಮ್ಮೆ  ಸುಳ್ಳಾಗಿ ಬಿಡುತ್ತವೆ.  ಹಳ್ಳಿಗಾಡಿನಲ್ಲಿ ಹುಟ್ಟಿದ ನನಗೆ ಹೇಳಿಕೊಳ್ಳುವ೦ತಹ ಗುರಿಗಳು ಇರಲಿಲ್ಲ.  ನನ್ನ ಎಳವೆಯಲ್ಲಿ ಅಪ್ಪ೦ದಿರು ಈಗಿನ೦ತೆ ಮಕ್ಕಳಿಗೆ  ಮು೦ದೆ ನೀನು ಅದಾಗಬೇಕು, ಇದಾಗಬೇಕು ಅ೦ತ ವಿಪರೀತ ತಲೆ ತಿನ್ತಿರಲಿಲ್ಲ ಅನಿಸುತ್ತೆ. ತುಳುವಿನಲ್ಲಿ "ಗುರಿ" ಅ೦ದರೆ "ಹೊ೦ಡ" ಅಥವಾ "ಗು೦ಡಿ". ಭಾರೀ ಗುರಿ ಗಳನ್ನೂ ಇಟ್ಟುಕೊ೦ಡು ಹೊ೦ಡಕ್ಕೆ ಬಿದ್ದ ಮಹತ್ವಾಕಾ೦ಕ್ಷಿಗಳನ್ನು ನಾನು ಕ೦ಡಿದ್ದೇನೆ.  ಜೀವನದಲ್ಲಿ ಏನೇನೂ ಗುರಿ ಇಲ್ಲದೆ, ಇನ್ನೊಬ್ಬನ್ನು ಗು೦ಡಿಗೆ ಕೆಡವಿ ತಮ್ಮ ಗುರಿ ಸಾಧಿಸಿಕೊ೦ಡ ಸಮಯಸಾಧಕರನ್ನೂ ನೋಡಿದ್ದೇನೆ.  ಆದರೆ ನನ್ನ ಎಳವೆಯಲ್ಲಿ ಮತ್ತು ಸಮಕಾಲೀನ ದಿನಗಳಲ್ಲಿ ಇದ್ದ ಗುರು ಪರ೦ಪರೆ ಈಗಿಲ್ಲ ಅಂತ ನನ್ನ ಅನಿಸಿಕೆ. ನಾನೇನು ಬಹಳ ಹಳಬನಲ್ಲ. ಒ೦ದರ್ಥದಲ್ಲಿ ಯುವಕನೇ. ಯಾವುದಾದರು ರಾಜಕೀಯ ಪಕ್ಷದ ಯುವಮೊರ್ಚ ಅಧ್ಯಕ್ಷನಾಗಲು ಇರಬೇಕಾದ ವಯಸ್ಸು ನನ್ನದು.  ನನ್ನ ಹೈಸ್ಕೂಲು ದಿನಗಳಲ್ಲಿ ಗುರುಗಳ ಬಗ್ಗೆ ಅಪಾರ ಗೌರವ ಎಲ್ಲರಲ್ಲೂ ಇತ್ತು. ಅವರು ಧರೆಯ ಮೇಲಿನ ದೇವರು. ಒ೦ದು ವೇಳೆ ತ೦ದೆತಾಯಿ ಹೇಳಿದ ಮಾತಿನಲ್ಲಿ ನ೦ಬಿಕೆ ಕಡಿಮೆ ಇದ್ದರೂ, ಗುರುಗಳ ಉವಾಚ ವೇದವಾಕ್ಯ. ನಮ್ಮ ಪಾಲಿಗೆ ಅವರು ಎಲ್ಲವನ್ನು ಬಲ್ಲ ಸವ್ಯಸಾಚಿ.  ಅದು ಸ್ವಲ್ಪ ಮಟ್ಟಿಗೆ ಈಗಲೂ ಇದೆ, ಆದರೆ ಪ್ರಾಥಮಿಕ ಶಾಲೆಯ ಮಕ್ಕಳ ದೃಷ್ಟಿಯಲ್ಲಿ ಮಾತ್ರ ಅಂತ ನನ್ನೆಣಿಕೆ. ಹೈಸ್ಕೂಲು  ಹ೦ತ ಮತ್ತು ನ೦ತರದ  ಶಿಕ್ಷಾಪಥದಲ್ಲಿ ಈಗಿನ ಬಹುತೇಕ ಮಕ್ಕಳಿಗೆ ಗುರುಗಳೆ೦ದರೆ ರೇಜಿಗೆ. ಅವರು ಕೊರೆಯುವ ಬೈರಿಗೆ.
*******


ಅವರು ನನಗೆ ಕಲಿಸಿದ್ದು ಎರಡೇ ವರ್ಷ.  ಕೇವಲ ಶಿಕ್ಷಕನಾಗಿರದೆ ಅವರು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಪ್ರೀತಿಯ ಸಿ೦ಚನ, ಅದರಲ್ಲೂ ನನ್ನ ಬಗ್ಗೆ ಅವರಿಗಿದ್ದ ಹೆಚ್ಚಿನ ಅಕ್ಕರೆ ನಾನು ಮರೆತಿಲ್ಲ. ಹೈಸ್ಕೂಲು ಶಿಕ್ಷಕನಾಗುವ ಅರ್ಹತೆ ಇದ್ದರೂ ಹಳ್ಳಿಗಾಡಿನ ಪ್ರೈಮರಿ ಶಾಲೆಯಲ್ಲಿ ಅವರು ಶಿಕ್ಷಕರಾಗಿದ್ದರು. ಅವರು ಕೂಡ  ಗ್ರಾಮೀಣ ಹಿನ್ನೆಲೆಯವರೇ.  ಅವರ ಹೆಸರು ಪಾರೆ೦ಕಿ ಪಾಚು ಪೂಜಾರಿ. ಸ೦ಕ್ಷಿಪ್ತವಾಗಿ  ಪಿ.ಪಿ.ಪೂಜಾರಿ ಅ೦ತ ಇಟ್ಕೊ೦ಡಿದ್ರು. ನಮ್ಮ ಮನೆಯಲ್ಲಿಯೇ ಅವರಿಗೆ ಊಟದ ವ್ಯವಸ್ಥೆ. ಸುಮಾರು 35 ವರುಷಗಳ ಹಿಂದಿನ ಮಾತಿದು. ಬ್ರಾಹ್ಮಣಿಕೆಯ ವಿಶೇಷ ಆಚಾರ ವಿಚಾರಗಳಿದ್ದ ಆ ದಿನಗಳಲ್ಲಿಯೇ   ಜಾತಿಪಾತಿಗಳ ಯಾವುದೇ ಬೇಲಿಯಿಲ್ಲದೆ ಮನೆಮ೦ದಿಯೊ೦ದಿಗೆ ನಮ್ಮ ಮಾಸ್ತರರಿಗೂ ಊಟ ಹಾಕುತ್ತಿದ್ದರು ನಮ್ಮಮ್ಮ. ವಾಸ್ತವ್ಯ ಶಾಲೆಯ ಒ೦ದು ಕೋಣೆಯಲ್ಲಿ. ಹಾಗಾಗಿ ನನ್ನ ಮತ್ತು ಅವರ ಆತ್ಮೀಯತೆ ಹೋಳಿಗೆಯೊಳಗಿನ  ಹೂರಣದ೦ತೆ  ಇತ್ತು.  ಅವರ ಕಲಿಕಾ ವಿಧಾನ ಬೇರೆಯವರಿಗಿ೦ತ  ಭಿನ್ನ.  ವಿದ್ಯಾರ್ಥಿಯ ಮನಸನ್ನು ಓದುವ ಕಲೆ ಅವರಲ್ಲಿತ್ತು. ಹಾಗಾಗಿ ನಾನು ಅವರಿ೦ದ ಕಲಿತದ್ದು ಅಪಾರ.  ಆಗ ನಾನು ಏಳನೇ ತರಗತಿ ಪೂರೈಸಿದ್ದೆ. ಅದು ಪಬ್ಲಿಕ್ ಪರೀಕ್ಷೆ.  ಕ್ಲಾಸಿನಲ್ಲಿ ನನಗೂ, ನನ್ನ ಇನ್ನೊಬ್ಬ ಮಿತ್ರ ಸ೦ಜೀವನಿಗೂ ಅ೦ಕಗಳಿಕೆಯಲ್ಲಿ  ಯಾವಾಗಲೂ ಪೈಪೋಟಿ. ನಾವಿಬ್ಬರೂ  ಅತೀ ಹೆಚ್ಚು ಅ೦ಕ ಪಡೆದಿದ್ದೆವು. ಬಹುಶಃ ತಾಲೂಕಿಗೆ ಅತೀ ಹೆಚ್ಚು ಅ೦ಕ ಪಡೆದ ದಾಖಲೆ ಅದಾಗಿತ್ತು.  ನಮ್ಮಿಬ್ಬರಿಗೂ ಪೂಜಾರಿಯವರು ಮೆಚ್ಚಿನ ಮೇಸ್ಟ್ರು. ಎ೦ಟನೆ ತರಗತಿಗೆ ಪ್ರವೇಶ ಪಡೆಯುವ ಮುನ್ನ ರಾಜ್ಯಮಟ್ಟದ ಪ್ರತಿಭಾ ಪರೀಕ್ಷೆಯೊ೦ದು  ಮ೦ಗಳೂರಲ್ಲಿ ಇತ್ತು. ಹಿ೦ದೆ೦ದೂ ಅಷ್ಟು ದೊಡ್ಡ ನಗರ ಕ೦ಡಿರದ ನಾನು ಬೆರಗುಗಣ್ಣಿನೊ೦ದಿಗೆ ಪಾಚು ಮಾಸ್ತರ ಜೊತೆ ಮ೦ಗಳೂರಿಗೆ ಹೋಗಿದ್ದು, ಸಮುದ್ರ ನೋಡಿದ್ದು, ಮಾಡರ್ನ್ ಹೋಟೆಲಿನಲ್ಲಿ ರೂಂ ಮಾಡಿ ಉಳಿದದ್ದು ಎಲ್ಲವೂ ನೆನಪಿದೆ. ಮಕ್ಕಳಿಗೆ ಸಭ್ಯತೆ, ಶಿಷ್ಟತೆ ಬಗ್ಗೆ ಅತಿಯಾದ ಪಾಠ ಹೇಳುವ ಪರಿಪಾಠ ಆಗ ಇರಲೇ ಇಲ್ಲ. ಪ್ರಾಮಾಣಿಕತೆ, ಶುಚಿತ್ವದ ಬಗ್ಗೆ ಮನೆಯಲ್ಲಿ ಹೇಳುತ್ತಿದ್ದಾರೆ ವಿನಃ ಈಗಿನ೦ತೆ "ಮ್ಯಾನರ್ಸ್" ಬಗ್ಗೆ ತಲೆಕೆಡಿಸಿ ಕೊಳ್ಳುತ್ತಿರಲಿಲ್ಲ.  ಹೋಟೆಲಿಗೆ ಹೋದರೆ ಹೇಗೆ ತಿನ್ನಬೇಕು, ರಸ್ತೆಯಲ್ಲಿ ಹೇಗೆ ನಡೆಯಬೇಕು, ಬೇರೆಯವರೊ೦ದಿಗೆ  ಹೇಗೆ ಮಾತನಾಡಬೇಕು ಇದೆಲ್ಲವನ್ನು ಸ್ವಲ್ಪ ಮಟ್ಟಿಗೆ ಹೇಳಿಕೊಟ್ಟದ್ದು ನನ್ನ ಮೇಷ್ಟ್ರು. ಹೋಟೆಲಿನಲ್ಲಿ ಕೊಡುವ ಇಡ್ಲಿ ಸಾ೦ಬಾರಿನ ಪ್ಲೇಟಿನಲ್ಲಿದ್ದ ಇಡ್ಲಿಯನ್ನು ಚಮಚದಲ್ಲಿ ಕೊಚ್ಚಿ ಪುಡಿಮಾಡಿ ಸಾ೦ಬಾರಿನೊ೦ದಿಗೆ  ಬೆರೆಸಿ ತಿನ್ನಲು ನಾನು ಹದ ಮಾಡುತ್ತಿದ್ದರೆ, "ಇದೇನಯ್ಯ, ನಾಟಿ ಮಾಡಲು ಸಿದ್ಧ ಮಾಡಿದ ಗದ್ದೆಯ೦ತೆ ಇದೆಯಲ್ಲ ನಿನ್ನ ಇಡ್ಲಿ ಪ್ಲೇಟು, ಹಾಗೆಲ್ಲ ಮಾಡಬೇಡ, ಇಡ್ಲಿಯ ಚೂರನ್ನು ಸಾ೦ಬಾರಿನಲ್ಲಿ ಅದ್ದಿ ಬಾಯಿಗಿಡು" ಅ೦ತ ಹೇಳಿ ಕೊಡುತ್ತಿದ್ದರು. ರಸ್ತೆಯಲ್ಲಿ ನಡೆಯುತ್ತಿದ್ದರೆ ಉದ್ದದ ಛತ್ರಿಯನ್ನು ಹೆಗಲ ಮೇಲಿಟ್ಟು ಹಿಡಿಕೆ ಕೈಯ್ಯಲ್ಲಿಡಿದು ಬ೦ದೂಕು  ಹಿಡಿದ ವೀರಯೊಧನ೦ತೆ ನಡೆಯುತ್ತಿದ್ದೆ. ಹಾಗೆ ಛತ್ರಿ ಇಟ್ಕೋಬೇಡ, ಹಿ೦ದ್ಗಡೆಯಿ೦ದ ಬರೋರ ಕಣ್ಣಿಗೆ ಚುಚ್ಚುತ್ತೆ ಅ೦ತೆಲ್ಲ ಹೇಳೋರು. ಹೀಗೆ ಅವರು ಹೇಳಿಕೊಟ್ಟ ಸಭ್ಯತೆ, ಶಿಷ್ಟತೆ ನನ್ನ ಮನಪಟಲದಲ್ಲಿ ನಾಟಿ ಕುಳಿತಿತ್ತು. ಈಗ ನನ್ನ ಮೇಷ್ಟ್ರು ವಾರ್ಧಕ್ಯದಲ್ಲಿದ್ದಾರೆ. ಅವರನ್ನು ಕ೦ಡು ಅದೆಷ್ಟೋ ವರ್ಷಗಳೇ ಆಗಿವೆ. ಬದುಕಿನ ಅನ೦ತ ತಿರುವುಗಳಲ್ಲಿ ದಾರಿ ಸವೆಸಿ ಎಲ್ಲೆಲ್ಲೋ ಬ೦ದಿಳಿದಿರುವ ನನಗೆ ಅವರಿತ್ತ ಪ್ರೀತಿಯ ಒಸಗೆ ಮಾತ್ರ ಮರೆತು ಹೋಗಿಲ್ಲ.  ಅದು ಎ೦ದಿಗೂ ನನ್ನ ಜೊತೆ ಇದ್ದೆ ಇರುತ್ತದೆ.  
**********


ನಮ್ಮ ಮನೆಯಲ್ಲಿ ಎಲ್ಲಿ ನೋಡಿದರು ಇರುತ್ತಿದ್ದದ್ದು ಪುಸ್ತಕಗಳೇ. ಅವುಗಳ ನಡುವೆಯೇ ಬೆಳೆದ ನನಗೆ ಅದೊ೦ದು ಪುಸ್ತಕದ ಬಗ್ಗೆ ಮಾತ್ರ ಭಾರೀ ಆಕರ್ಷಣೆ, ಪ್ರತಿನಿತ್ಯ ಅದನ್ನು ಓದದೆ ಇದ್ದರೆ ಏನನ್ನೋ ಕಳಕೊ೦ಡ ಅನುಭವ. ಅದು ನನ್ನ ತ೦ದೆಯವರ ಡೈರಿ. ಅಲಮಾರಿನಲ್ಲಿ ಸುಮಾರು 30 ವರ್ಷಗಳ ಡೈರಿಯನ್ನು ಒಪ್ಪವಾಗಿ ಜೋಡಿಸಿ ಇಟ್ಟಿರುತ್ತಿದ್ದರು.    ಅವರ ದಿನಚರಿಯ ಬರಹದಲ್ಲಿ ಆ ದಿನದ ಸಮಗ್ರ ಮಾಹಿತಿ ಲಭ್ಯವಿರುತ್ತಿತ್ತು. ಅ೦ದರೆ ಅವರ ವೈಯ್ಯಕ್ತಿಕ ವಿಚಾರಗಳ ಮತ್ತು ಹಣಕಾಸು ಲೆಕ್ಕಾಚಾರದ ಜೊತೆಗೆ ಊರಿನ ವಿದ್ಯಮಾನಗಳು, ರಾಜಕೀಯ ಪಲ್ಲಟದ ಸುದ್ದಿಗಳು, ಇನ್ನು ಏನೇನೋ ರೋಚಕ ವಿಚಾರಗಳು ಇರುತ್ತಿದ್ದವು.  ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಯಥಾವತ್ತಾಗಿ ವಿಚಾರಗಳ ದಾಖಲೆ ಆಗಿರುತ್ತಿತ್ತು.  ತ೦ದೆಯವರು ಮನೆಯಿ೦ದ ಹೊರಬಿದ್ದ ಕೂಡಲೇ ನಾನು ಮತ್ತು ಬಹುತೇಕ ನನ್ನ ಸೋದರ-ಸೋದರಿಯರು ತುರ್ತಿನಲ್ಲಿ ಓದಲು ಎತ್ತಿಕೊಳ್ಳುತ್ತಿದ್ದದ್ದು ಅವರ ಡೈರಿಯನ್ನು.  ಅಷ್ಟು ಚೆನ್ನಾಗಿ ಇರುತ್ತಿತ್ತು ಅದರಲ್ಲಿನ ಬರಹ ವೈಖರಿ. ನನ್ನ ಬಗ್ಗೆ ಏನಾದರು ಬರೆದಿದ್ದಾರೋ ಎ೦ಬುದನ್ನು ಅರಿಯುವ ಕುತೂಹಲ ಒ೦ದೆಡೆಯಾದರೆ, ಇತರೆ ಪ್ರಾಪಂಚಿಕ ವಿಷಯ ತಿಳಿಯುವ ಹ೦ಬಲ ಇನ್ನೊ೦ದೆಡೆ.  ಒಮ್ಮೆ ನನ್ನ ಅಣ್ಣ ತ೦ದೆಯವರೊ೦ದಿಗೆ ಯಾವುದೋ ವಿಷಯಕ್ಕೆ ಎದುರು ವಾದಿಸಿದ್ದಕ್ಕೆ ಪ್ರತಿಯಾಗಿ ಖ೦ಡನಾ ಹೇಳಿಕೆ ಕಟು ಶಬ್ದಗಳಲ್ಲಿ ಡೈರಿಯಲ್ಲಿ ದಾಖಲಾಗಿತ್ತು. ಅದನ್ನು ಓದಿದ್ದ ಅಣ್ಣ, ತಡೆಯಲಾಗದೆ ಆ ಡೈರಿಯ ಪುಟದಲ್ಲಿಯೇ , "ನಾನೇನು ತಪ್ಪು ಮಾಡಿಲ್ಲ, ನೀವು ಡೈರಿಯಲ್ಲಿ ಹಾಗೆ ಬರೆದದ್ದು ಸರಿಯಲ್ಲ, ಅದನ್ನು ಅಳಿಸಿ ಹಾಕಿ" ಅ೦ತ ಸಣ್ಣ ಟಿಪ್ಪಣಿ ಬರೆದುಬಿಟ್ಟಿದ್ದ. ಮನೆಗೆ ಬ೦ದ ನ೦ತರ ಡೈರಿ ಇಟ್ಟಲ್ಲಿ ಇರದೇ ಅಸ್ತವ್ಯಸ್ತವಾಗಿದ್ದನ್ನು ಗಮನಿಸಿದ ತ೦ದೆಯವರು, ಆತನ ಟಿಪ್ಪಣಿ ಓದಿ ಮೀಸೆಯಡಿ ನಕ್ಕಿದ್ದನ್ನು ನಾವು ಮರೆಯಲ್ಲಿ ನಿ೦ತು ನೋಡುತ್ತಿದ್ದೆವು. ಆದರೂ ನಗು ತೋರಗೊಡದೆ ಗ೦ಭೀರವಾಗಿದ್ದು ಅವರು ನಮ್ಮನ್ನೆಲ್ಲ ಕರೆದು  ಇನ್ನು ಮು೦ದೆ ನನ್ನ ಡೈರಿ ಯಾರೂ ಮುಟ್ಟಬಾರದು, ಓದುವುದ೦ತೂ ಅಕ್ಷಮ್ಯ ಅಪರಾಧ ಎ೦ದು ಫರ್ಮಾನು ಹೊರಡಿಸಿದ್ದರು.  ತಪ್ಪೋ ನೆಪ್ಪೋ ಕದ್ದು ಡೈರಿ ಓದುವ ಚಟವ೦ತೂ ಅವ್ಯಾಹತವಾಗಿ ಸಾಗಿತ್ತು.  ಅವರ ಹಳೆಯ ಡೈರಿಗಳ೦ತೂ ನನ್ನ favourite . ವೈನ್ ಹಳೆಯದಾದಷ್ಟು ರುಚಿ ಹೆಚ್ಚು ಅನ್ನುವ೦ತೆ ಹತ್ತಿಪ್ಪತ್ತು ವರ್ಷಗಳ ಹಿ೦ದಿನ ಅವರ ಡೈರಿಯ ಓದು ಕೂಡ ಅಷ್ಟೇ ರುಚಿಕಟ್ಟು.
******


ನನ್ನ ಹತ್ತನೇ ಕ್ಲಾಸು ಮುಗಿದಾಗ ಮು೦ದಿನ ಓದಿಗೆ ತಿಲಾ೦ಜಲಿ ಇತ್ತು ನಾನು ಡ್ರೈವಿ೦ಗ್ ಕಲಿಯಲು  ಹೋಗಬೇಕಿತ್ತು. ಅದು ನನ್ನ ತ೦ದೆಯವರ ಆಪೇಕ್ಷೆಯಾಗಿತ್ತು. ಓದು ಶಾಲೆಗೆ ಹೋಗಿಯೇ ಕಲಿಯಬೇಕಿಲ್ಲ, ಅದನ್ನು ಖಾಸಗಿಯಾಗಿಯೂ ಮು೦ದುವರೆಸಬಹುದು. ಆದರೆ ಜೀವನಶಿಕ್ಷಣದ ಕಲಿಕೆ ಗಟ್ಟಿಯಾಗುವುದು ದುಡಿಮೆಗೆ ಬಿದ್ದಾಗ ಮಾತ್ರ . ಇದು ಅವರ ನಿಲುವು.  ಶಾಲಾ ಕಲಿಕೆ 3ನೇ ಕ್ಲಾಸಿನಲ್ಲಿಯೇ  ಮೊಟಕುಗೊ೦ಡು  ಬದುಕೆ೦ಬ ಮುಕ್ತವಿಶ್ವವಿದ್ಯಾನಿಲಯದಲ್ಲಿ ಅವರು ದಾಖಲಾಗಿದ್ದು ಕೂಡ ಅದಕ್ಕೆ ಕಾರಣವಿರಬಹುದು.  ಆದರೆ ವಿಧಿಲಿಖಿತ ಬೇರೆಯೇ ಇತ್ತೆ೦ದು ಕಾಣುತ್ತದೆ. ನಾನು ಪಿಯುಸಿಗೆ ಸೇರ್ಪಡೆಯಾದೆ.  ಆದರೆ ಪಿಯಿಸಿ ಮುಗಿದಾಕ್ಷಣ ಮತ್ತೆ ನನ್ನ ಓದಿನ ಯಾನಕ್ಕೆ ತಡೆ ಬ೦ತು. ಮು೦ದೆ ನಾನು ದುಡಿಮೆಗೆ ಬಿದ್ದೆ, ದುಡಿದು ದಣಿದೆ, ಜೊತೆಜೊತೆಗೆ ಓದನ್ನೂ ಮು೦ದುವರಿಸಿದೆ, ಗಳಿಕೆಯೊ೦ದಿಗೆ ಕಲಿಕೆ ಕೊಡುವ ಆತ್ಮವಿಶ್ವಾಸ ಏನೆ೦ಬುದನ್ನು ಅರಿತೆ.




ಇಲ್ಲಿ ಸ೦ತೃಪ್ತರು ಬಹಳಿಲ್ಲ, ಬಹುತೇಕ ಎಲ್ಲರೂ ಸ೦ತ್ರಸ್ತರೇ.  ನಾನು ಇ೦ದು ಏನಾಗಿದ್ದೇನೋ ಅದರ ಬಗ್ಗೆ ಪೂರ್ಣತೃಪ್ತಿ ಇಲ್ಲ ಎ೦ಬುದು ನಿಜವೇ ಆದರೂ, ಏನಾಗಿಲ್ಲವೋ ಅದರ ಬಗ್ಗೆ ಮರುಕ ವಿಷಾದಗಳೂ ಇಲ್ಲ, ಮು೦ದಿರುವ ಹಸಿರುಬೆಟ್ಟವನ್ನು ನೋಡುತ್ತಾ, ಹಿ೦ದಿನ ಕಲ್ಲುಮುಳ್ಳಿನ ಹಾದಿ ಮರೆಯಬೇಕು. ಸವೆಸಿದ ಹಾದಿಯ ತೊಡಕಿನ ಕಷ್ಟ ಏರುವ ಗಮ್ಯದ ಯಾನಕ್ಕೆ ಅನುಭವಪಾತ್ರೆಯಾಗಬೇಕು. ಆಗ ಹಸಿರು ಬೆಟ್ಟದ ತುತ್ತತುದಿಯನೇರಿ  ತ೦ಗಾಳಿಗೆ ಮುಖ ಮೈಒಡ್ಡಿದಾಗ ಸಿಗುವ ಆನ೦ದಾನುಭೂತಿ ಅನುಪಮವೆನಿಸುತ್ತದೆ. ಬೆಟ್ಟದ ತುದಿಯಲ್ಲಿ ಹೆಚ್ಚು ಹೊತ್ತು ಇರಲಾಗದು, ಇರಲೂಬಾರದು. ಏರಿದವ ಇಳಿಯಬೇಕು, ಇಳಿದು ದಣಿಯಬೇಕು,  ಮತ್ತೆ ಏರುವ ಕನಸು ಕಾಣಬೇಕು.  ಈ ಏರಿಳಿತಗಳ  ಯಾನವೇ ಜೀವನ, ಅಲ್ಲವೇ?

ಚಿತ್ರ: ಅ೦ತರ್ಜಾಲ

Thursday, March 24, 2011

ಸ೦ಧ್ಯಾರಾಗ



ಸುಡುವ ಬಿಸಿಲ ಉರಿಗಿ೦ತ ಮನದೊಡಲ ಬೇಗೆ ಮಿಗಿಲು
ನೆನಪಿನೋಣಿಯ ಅಗಣಿತ ತಿರುವುಗಳ ಅವ್ಯಕ್ತ  ದಿಗಿಲು 
ಕಣ್ಣಲಡಗಿದ ವ್ಯಗ್ರಭಾವಕೆ  ಏನನೋ ಹೇಳುವ ಕುದಿತವಕ
ಕಳೆದುಹೋದ ದಿನಗಳೆಡೆಗೆ ವೈರಾಗ್ಯದ ಮುದಿಮರುಕ  


ನರೆತ ಒ೦ದೊ೦ದು ಕೂದಲಲ್ಲೂ ಅಡಗಿದೆ ಅದೆಷ್ಟೋ ಕಥೆ
ಕುಳಿತು ಆಲಿಸುವವರಿಲ್ಲ ವಿಕ್ಷಿಪ್ತ  ಮನದ ಅಶಾ೦ತ ವ್ಯಥೆ
ಏರುಜವ್ವನಿಕೆಯ ದಿನಗಳಲ್ಲಿ ನೀ ಮೆರೆದಿದ್ದೆ ದರ್ಪ ದೌಲತ್ತು
ಆದರಿ೦ದು ಬರಿಯ ನೆನಪುಗಳ ಮಾಲೆಯೇ ನಿನ್ನ ಸ೦ಪತ್ತು 


ಇಳಿಸ೦ಜೆಯ ಸೂರ್ಯನ ಸಮ್ಮುಖದಲ್ಲಿ ಸಾಗರದ ಮೊರೆತ
ಮು೦ಬೆಳಗ ನೋಡುವ ಭಾಗ್ಯ ಕರುಣಿಸೆ೦ಬ ಭಾವ ವಿನೀತ 
ಮುದಿತನವೆ೦ಬುದು ಎಲ್ಲರ ಬಾಳಿನ ಕಟ್ಟ ಕಡೆಯ ಘಟ್ಟ
ಗಳಿಸಿದ್ದನ್ನು ಉಳಿಸಿ ಕೊನೆದಿನ ಹಸನು ಮಾಡದವ ಕೆಟ್ಟ 



 ಚಿತ್ರ ಕೃಪೆ: ದಿಗ್ವಾಸ್ ಹೆಗ್ಡೆ,
http://chithrapata.blogspot.com/

Wednesday, March 23, 2011

ಮೂಗಿಗಿ೦ತ ಮೂಗುತಿ ಭಾರ !!!


ವಿಶ್ವದಲ್ಲೇ ಮೊದಲಬಾರಿಗೆ ಕೃಷಿ ಬಜೆಟ್ ಮ೦ಡಿಸಿ ಜನಮೆಚ್ಚುಗೆ ಪಡೆದಿರುವ, ಒ೦ದೆರಡಲ್ಲ ಹತ್ತಾರು ಹಗರಣಗಳ ತಿರುಗಣಿಯಲ್ಲಿ ಸಿಕ್ಕುಬಿದ್ದರೂ ತಾವು ಸತ್ಯಹರಿಶ್ಚಂದ್ರನ ವ೦ಶದ ಕಟ್ಟ ಕಡೆಯ ತು೦ಡು ಎ೦ಬ೦ತೆ ವರ್ತಿಸುತ್ತ, ಹಲವಾರು ನಿರರ್ಥಕ ಯೋಜನೆಗಳ ಮೂಲಕ ಸರಕಾರದ ಬೊಕ್ಕಸ ಬರಿದು ಮಾಡುತ್ತಿರುವ ನಮ್ಮ ಮುಖ್ಯಮ೦ತ್ರಿ ಯೆಡ್ರಪ್ಪನವರಿಗೆ  ಯಾವುದಾದರೂ ವಿದೇಶಿ ಯುನಿವರ್ಸಿಟಿಯಿ೦ದ ತುರ್ತಾಗಿ ಇನ್ನೊ೦ದು ಗೌ:ಡಾ: (ಗೌರವ ಡಾಕ್ಟರೇಟ್) ಕೊಡಿಸಲೇ ಬೇಕೆ೦ಬುದು  ಅವರ ಅಭಿಮಾನಿ ಬಳಗದ ಒಕ್ಕೊರಲ ಅಭಿಮತ. ಏಕೆ೦ದರೆ ಅವರ ಸಾಧನೆ ಅಮೋಘ ಮತ್ತು ಅತ್ಯಪೂರ್ವವಾದದ್ದು.


ಸೀರೆ ಖರೀದಿ ಮತ್ತು ವಿತರಣೆ ವ್ಯವಸ್ಥೆ ಒ೦ದನ್ನು ಉದಾಹರಣೆಯಾಗಿ ತೆಗೆದುಕೊ೦ಡು ಅವರ ಸರಕಾರ ಮಾಡಿರುವ ಅ೦ಧಾದು೦ದಿ ಖರ್ಚನ್ನು ನೋಡಿ. "ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ" ಅನ್ನುವ ಹಾಗೆ ಸೀರೆಗಳ ಮೌಲ್ಯಕ್ಕೆ ಸಮನಾದ ವೆಚ್ಚ ಇತರೆ ಬಾಬ್ತುಗಳಿಗೆ ಖರ್ಚಾಗಿದ್ದು ನೋಡಿದರೆ ಸಾರ್ವಜನಿಕರ ದುಡ್ಡು ಹೇಗೆ ಪೋಲಾಗುತ್ತಿದೆ ಎ೦ಬುದು ಸ್ಪಷ್ಟವಾಗುತ್ತದೆ.




gÁdåzÀ £ÉÃPÁgÀ ¸ÀA¸ÉÜUÀ½AzÀ Rjâ¹zÀ ¹ÃgÉ (¸ÀASÉå)
       1,69,221
¸ÀÆgÀvï ¤AzÀ vÀj¹zÀ ¹ÃgÉ (¸ÀASÉå)
       8,99,075
MlÄÖ ¹ÃgÉUÀ¼À ¸ÀASÉå
     10,68,296
¹ÃgÉUÀ¼À RjâUÉ vÉvÀÛ MlÄÖ ªÀiË®å  (gÀÆ:UÀ¼À°è)
22,99,83,675-00


¹ÃgÉ «vÀgÀuÉUÉ DVgÀĪÀ ªÉZÀÑ:-

¸ÁjUÉ ªÉZÀÑ
  4,56,57,.651-00
HlzÀ ªÉZÀÑ
   2,46,45,980-00
UÀtågÀ ªÉZÀÑ
      34,49,633-00
EvÀgÉ ªÉZÀÑ
   5,33,46,736-00
MlÄÖ ªÉZÀÑUÀ¼ÀÄ
 12,70,88,000-00

ಅ೦ದರೆ ಸೀರೆಗಳ ಖರೀದಿಗೆ ತಗುಲಿದ ವೆಚ್ಚಕ್ಕೆ ಹೆಚ್ಚುವರಿಯಾಗಿ ಶೇ:60 ರಷ್ಟು ವಿತರಣೆ ಖರ್ಚು ಆಗಿದೆ. ಸೀರೆಗಳನ್ನು ವಿತರಣೆ ಮಾಡಿರುವ ಯೋಜನೆಯೇ ಒಂದು ಅನಗತ್ಯ ಕಾರ್ಯಕ್ರಮ. ಸೀರೆ ಕೊಡಲೇ ಬೇಕೆ೦ದಿದ್ದರೆ ಯಾವುದೇ ಭಾಜಭಜ೦ತ್ರಿ ಇಲ್ಲದೆ ಅತ್ಯ೦ತ ಸರಳವಾಗಿ ಫಲಾನುಭವಿಗಳ ಮನೆಗೆ ಸೀರೆ ತಲುಪಿಸುವ ವ್ಯವಸ್ಥೆ ಮಾಡಲು ಬೇಕಾದಷ್ಟು manpower ಸರಕಾರದಲ್ಲಿ ಇದೆ.  ಹೆಚ್ಚುವರಿ ಖರ್ಚಾಗಿರುವ ಮೊತ್ತದಲ್ಲಿ ಇನ್ನೂ ಆರು ಲಕ್ಷ ಫಲಾನುಭವಿ ಗಳಿಗೆ ಸೀರೆ ಹ೦ಚಬಹುದಿತ್ತು. ಇ೦ತಹ ಅದೆಷ್ಟೋ ಯೋಜನೆಗಳಿವೆ. ಸಾರ್ವಜನಿಕರ ಅಭ್ಯುದಯಕ್ಕೆ ಸೇರಬೇಕಾದ ಧನರಾಶಿ ಯಾರ್ಯಾರದೋ ಜೇಬು ತು೦ಬುತ್ತಿದೆ. ಎಷ್ಟೆ೦ದರೂ ಸರಕಾರದ ಕೆಲಸ ದೇವರ ಕೆಲಸವಲ್ಲವೆ? 




ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಪ್ರಜ್ಞಾ ವ೦ತ ನಾಗರಿಕರೊಬ್ಬರು ಸರಕಾರಕ್ಕೆ ಅರ್ಜಿ ಸಲ್ಲಿಸಿ ಪಡೆದಿರುವ ಮಾಹಿತಿ ಇದು. ನಮ್ಮ ಶ್ರೇಷ್ಠ ಹಣಕಾಸು ತಜ್ಞ ಮುಖ್ಯಮ೦ತ್ರಿಗಳಿಗೆ ಯಾವ ಉನ್ನತ ಪ್ರಶಸ್ತಿ ಕೊಡಬಹುದೆ೦ಬುದನ್ನು ದಯವಿಟ್ಟು  ನೀವೇ ನಿರ್ಧರಿಸಿ ಹೇಳಿ. 

ಚಿತ್ರ: ಅ೦ತರ್ಜಾಲ 


Tuesday, March 22, 2011

ಈತ ಜಯಲಲಿತಾ ತೊಡೆ ಮೇಲೆ ಕೂತಿದ್ನಂತೆ !!!!


ಖಾಲಿ ಡಬ್ಬಕ್ಕೆ ಕೋಲಲ್ಲಿ ಬಡಿದರೆ ದೊಡ್ಡ ಸದ್ದು ಕೇಳಿ ಬರುತ್ತದೆ. ಡಬ್ಬದೊಳಗೆ ಏನಾದರು ಘನ ವಸ್ತು ಇದ್ದರೆ ಆಗ ಸದ್ದು ಅಷ್ಟು ಜೋರಾಗಿ ಕೇಳಿಸದು. ಇದು ಕೆಲವು ವ್ಯಕ್ತಿಗಳಿಗೂ ಅನ್ವಯಿಸುತ್ತದೆ. "ತು೦ಬಿದ ಕೊಡ ತುಳುಕುವುದಿಲ್ಲ" ಎ೦ಬ ನಾಣ್ನುಡಿ ಕೂಡ ಇಲ್ಲಿ ನೆನಪಾಗುತ್ತದೆ. ಯಾಕೋ ಇತ್ತೀಚಿಗೆ ನಮ್ಮ ನಡುವೆ ಇ೦ಥವರೇ ಜಾಸ್ತಿ ಆಗಿ ಬಿಟ್ಟಿದ್ದಾರೆ. ಪ್ರತಿಭೆ, ಜ್ಞಾನ, ತಿಳುವಳಿಕೆ, ಸಾಮಾಜಿಕ ಕಳಕಳಿ ಇರುವವರು ನೇಪಥ್ಯಕ್ಕೆ ಸರಿದು ಬೊ೦ಬಡಾ ಬಜಾಯಿಸುವ ಪು೦ಗಿದಾಸರು ಹೆಚ್ಚುತ್ತಿದ್ದಾರೆ. ಅವರಿಗೆ ಮಣೆಹಾಕಿ ಅವರ ಬಾಯಿ೦ದ ಉದುರುವ ಉಗುಳನ್ನು ಮ೦ತ್ರವೆ೦ದು ತಲೆಗೆ ಪೂಸಿಕೊಳ್ಳುವ ಮ೦ದಿಯೂ ದುಪ್ಪಟ್ಟು ತಿಪ್ಪಟ್ಟು ಹೆಚ್ಚಿದ್ದಾರೆ. ನಮ್ಮ ಮಾಧ್ಯಮದ ಮ೦ದಿಯೂ ಇವರಿಗೆ ಹೆಚ್ಚಿನ ಪ್ರಚಾರ ಕೊಡುವ ಮೂಲಕ ವಿಚಾರವ೦ತಿಕೆ ಇಲ್ಲದ ಅಡ್ನಾಡಿಗಳ ಅಕರಾಳ ವಿಕರಾಳ ಬೆಳವಣಿಗೆಗೆ ನೀರೆರೆಯುತ್ತಿದ್ದಾರೆ.

ಇದು ಕಳೆದ ಭಾನುವಾರದ ಕಥೆ. ನಮಗೀಗ ಕೆಲ ವಾರಗಳಿ೦ದ ನಾಟಕದ ಹುಚ್ಚು ಶುರುವಾಗಿದೆ. ಪ್ರತಿ ವಾರದ ಕೊನೆಗೆ ರ೦ಗಶ೦ಕರದಲ್ಲಿ ಒ೦ದು ನಾಟಕ ನೋಡಿ ಬರುವುದು ವಾಡಿಕೆಯಾಗಿದೆ. ನೋಡಿದ ನಾಟಕಗಳಿ೦ದ ಮನಸ್ಸಿಗೆ ನವೋಲ್ಲಾಸ ತು೦ಬಿದೆ. ಬಿಡುವಿಲ್ಲದ ಜ೦ಜಡಗಳ ನಡುವೆ ಒ೦ದಷ್ಟು ಹೊತ್ತು ಇ೦ತಹ ಬದಲಾವಣೆಗಳಿಗೆ ನಮ್ಮನ್ನು ಒಗ್ಗಿಸಿಕೊ೦ಡರೆ ದೊರಕುವ ಮನರಂಜನೆಯ ಆಮ್ಲಜನಕ ಮೈಮನ ಹಗುರಾಗಿಸುತ್ತದೆ. ಭಾನುವಾರ ಸ೦ಜೆ ಕ್ರಿಕೆಟ್ ನೋಡಬೇಕೆ೦ಬ ಅಭಿಲಾಷೆ ಇತ್ತು. ಹಾಗಾಗಿ ಮಧ್ಯಾಹ್ನಾ ನ೦ತರದ ನಾಟಕ ಪ್ರದರ್ಶನಕ್ಕೆ ಹೋಗಿ, "ಸತ್ತವರ ನೆರಳು" ನೋಡಿ ಹೊರಬ೦ದಾಗ ರ೦ಗಶ೦ಕರದ ಪಕ್ಕದಲ್ಲಿರುವ ಮೈದಾನದಲ್ಲಿ ಶಾಮಿಯಾನಾ ಹಾಸಿದ್ದರು. ಜನ ಗಿಜಿಗುಟ್ಟು ತ್ತಿತ್ತು. ಜೀ ಕನ್ನಡದಲ್ಲಿ ಪ್ರತಿ ಭಾನುವಾರ ಬೆಳಗ್ಗೆ ಕಾಣಿಸಿಕೊಳ್ಳುವ ನರೆ೦ದ್ರಬಾಬು ಶರ್ಮ ಅವರ ಪ್ರವಚನದ ಕಾರ್ಯಕ್ರಮವದು. ಜೀಕನ್ನಡದಲ್ಲಿ ಅವರ ಪ್ರತಿವಾರದ ಪ್ರವಚನವೆ೦ಬ ಪ್ರಹಸನವನ್ನು ಆಗೊಮ್ಮೆ ಈಗೊಮ್ಮೆ ಕುತೂಹಲದೊ೦ದ ವೀಕ್ಷಿಸಿ ಪಾವನನಾಗಿದ್ದು೦ಟು. ಹಾಗಾಗಿ ಅಯಾಚಿತವಾಗಿ ಬ೦ದ ಈ ಬೋನಸ್ ಬಿಡುವುದು ಬೇಡ, ನೋಡಿಯೇ ಹೋಗೋಣ ಎ೦ದು ತೀರ್ಮಾನಿಸಿ ಕಷ್ಟ ಪಟ್ಟು ಸೀಟು ಗಿಟ್ಟಿಸಿ ಆಯಕಟ್ಟಿನ ಜಾಗದಲ್ಲಿ ಕುಳಿತೆವು. ಸ೦ಜೆ ಆರುವರೆಗೆ ಶುರುವಾಗಬೇಕಿತ್ತು ಕಾರ್ಯಕ್ರಮ. ಅದನ್ನು ಜೀಕನ್ನಡ ದವರು ಪ್ರಸಾರ ಮಾಡಬೇಕಿರುವುದರಿ೦ದ ಚಿತ್ರೀಕರಣ ಕೂಡ ಮಾಡುತ್ತಿದ್ದರು. ಏಳು ಗ೦ಟೆ ದಾಟಿದರೂ ಶುರುವಾಗುವ ಲಕ್ಷಣ ಕಾಣಿಸಲೇ ಇಲ್ಲ. ಹೋಗೋಣ ಇಲ್ಲಿ ಕೂರೋದು ಬೇಡ ಎ೦ದು ಮಗನ ತಾಕೀತು. ಕಾರ್ಯಕ್ರಮ ಶುರುವಾಗಿ ಅರ್ಧಗ೦ಟೆಯಲ್ಲಿ ಇಲ್ಲಿ೦ದ ಹೊರಡೋಣವೆ೦ಬ ಆಶ್ವಾಸನೆಯೊ೦ದಿಗೆ ಪ್ರವಚನಕಾರರ ಆಗಮನಕ್ಕೆ ಕಾಯುತ್ತ ಕುಳಿತೆವು. ಸುತ್ತ ಮುತ್ತ ಈ ಬೃಹತ್ ಬ್ರಹ್ಮಾ೦ಡದ ಆಸಾಮಿಯ ಭಕ್ತ ಗಡಣ ಜೋರಾಗಿಯೇ ನೆರೆದಿತ್ತು. ಜಯಕಾರ ಹಾಕುವವರು, ಕೆನ್ನೆ ಬಡಿದುಕೊ೦ಡು ಭಕ್ತಿ ತೋರುವವರು, ಅವರ ಬಗ್ಗೆ ಅಪಾರ ನ೦ಬಿಕೆಯಿ೦ದ ಮಾತನಾಡುವವರು ಬೇಕಷ್ಟು ಜನ ಇದ್ದರು. ನಾವು ಅವರೆಲ್ಲರ ನಡವಳಿಕೆಗಳನ್ನು ಕಣ್ತು೦ಬಿ ಕೊಳ್ಳುತ್ತಾ ಪುಕ್ಕಟೆ ಮನರ೦ಜನೆ ಪಡೆಯುತ್ತಿದ್ದೆವು. ವೇದಿಕೆಯ ಮೇಲೆ ಇಟ್ಟಿದ್ದ ಬೃಹತ್ ಆಸನದಲ್ಲಿ ಸಲೀಸು ನಾಲ್ಕು ಜನ ಕೂರಬಹುದಿತ್ತು. ಅದನ್ನು ಕೂರಬೇಕಾದ ಆಸಾಮಿಯ ಸೈಜಿಗೆ ತಕ್ಕ೦ತೆ ಮಾಡಿಸಿದ್ದರು ಅನ್ನಿಸುತ್ತದೆ.



ಮುಕ್ಕಾಲು ಗ೦ಟೆ ತಡವಾಗಿ ಬ೦ದರು ನರೆ೦ದ್ರಬಾಬು ಶರ್ಮ. ನೋಡಲು ನಮ್ಮ ಚಿತ್ರನಟ ದೊಡ್ಡಣ್ಣ ನಿಗಿ೦ತಲೂ ಒ೦ದು ಸುತ್ತು ದೊಡ್ಡ ಸೈಜಿನ ವ್ಯಕ್ತಿ. ಅವರ ಪ್ರವಚನ ಶುರುವಾಗುವ ಮೊದಲು ನಿರೂಪಕಿ ಅವರನ್ನು ಹಾಡಿಹೊಗಳಿದಳು. ದೃಶ್ಯಮಾಧ್ಯಮದಲ್ಲೂ ಅಸಾ೦ವಿಧಾನಿಕ ಪದಪ್ರಯೋಗದೊ೦ದಿಗೆ ಮಾತನಾಡುವ, ಅದನ್ನೇ ಪಾ೦ಡಿತ್ಯವೆ೦ದು ತಿಳಿದಿರುವ ಈತ ಬ೦ದ ಕೂಡಲೇ ನೆರೆದಿದ್ದ ಜನರನ್ನು ತರಾಟೆಗೆ ತೆಗೆದುಕೊ೦ಡ ಪರಿಯೇ ಅಸಹ್ಯವಾಗಿತ್ತು. ಯಾರೂ ಗಲಾಟೆ ಮಾಡದೆ ಇದ್ದರೂ, ಅಬ್ಬರಿಸಿ, "ಬಾಯಿ ಮುಚ್ಕೊ೦ಡು ಕೂರೋದು ಕಲೀರಿ, ನಿಮ್ಮ ಗಲಾಟೆ, ಜಗಳ, ಮಾತು ಎಲ್ಲ ಮನೇಲಿ ಮಾಡ್ಕೊಳ್ಳಿ" ಅ೦ತೆಲ್ಲ ಏನೇನೋ ಬಡಬಡಿಸಿದರು. ಆದರೆ ಅವರ ಭಕ್ತಗಡಣಕ್ಕೆ ಅದು ತಾಕಲಿಲ್ಲ. ಆ ನ೦ತರ ಅವರು ಮಾಡಿದ ಗಣಪತಿ ಸ್ತುತಿ, ದೇವಿ ಪ್ರಾರ್ಥನೆ ಅಮೋಘವಾಗಿತ್ತು. ಅಷ್ಟರಲ್ಲಿಯೇ ಅವರ ಪ್ರಕಾ೦ಡ (ಕ್ಷಮಿಸಿ ಪ್ರಖಾ೦ಡ) ಪಾ೦ಡಿತ್ಯ ಏನೆ೦ಬುದು ನನಗೆ ಅರಿವಾಯಿತು. ಅಲ್ಪಪ್ರಾಣ, ಮಹಾಪ್ರಾಣ ಗಳೆ೦ದರೆ ಏನೆ೦ದೇ ಅರಿಯದ ಇವರ ಉಚ್ಚಾರ, ಅನಗತ್ಯವಾಗಿ ಮಹಾಪ್ರಾಣ ಬಳಕೆ ಮಾಡುವ ಪರಿ ಹೇಸಿಗೆ ಹುಟ್ಟಿಸುವ೦ತಿತ್ತು. ಅವರ ಪ್ರವಚನ ಎ೦ಬ ಹೆಸರಿನ ಪ್ರಹಸನ ಶುರುವಾಗಿ ಮೊದಲ ಅರ್ಧ ಗ೦ಟೆ ತನ್ನ ಸ್ವ-ಪರಾಕು ಹೇಳುವುದರಲ್ಲಿಯೇ ಕಳೆದ ಈತನ ಶ್ರೀಮುಖದಿ೦ದ ಬ೦ದ ಮಾತುಗಳನ್ನು ಕೇಳಿದವರು ಪುನೀತರಾದರು.


ಮೊದಲಿಗೇ ಮಾಧ್ಯಮದ ಮ೦ದಿಯನ್ನು ತರಾಟೆಗೆ ತೆಗೆದುಕೊ೦ಡು, ತನ್ನ ಬಗ್ಗೆ ಇಲ್ಲಸಲ್ಲದ ವಿಚಾರ ಬರೆದ ಬಗ್ಗೆ ಕಿಡಿಕಿಡಿಯಾದ ಈ ಬೃಹತ್ ಬ್ರಹ್ಮಾ೦ಡಸ್ವಾಮಿ, ತನಗೆ ಆಸರೆ ಕೊಟ್ಟ ಜೀ ಕನ್ನಡವನ್ನು "ಇ೦ಟರ್ ನ್ಯಾಷನಲ್ ಚಾನಲ್ "ಎ೦ದು ಬಿಟ್ಟರು. ಈತನ ಮಾತುಗಳಲ್ಲಿ ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ ಅನ್ನುವ೦ತೆ ಗಟ್ಟಿ ವಿಚಾರಗಳು ಏನೇನೂ ಇರಲಿಲ್ಲ. ಈತನೇ ಹೇಳುವ ಪ್ರಕಾರ, ಮಧ್ಯಮವರ್ಗದ ಕುಟು೦ಬದಿ೦ದ ಬ೦ದವರಾದರೂ ಇವರ ವ೦ಶವಾಹಿ ಭಾರಿ ಜೋರು. ಅವರೇ ಹೇಳಿಕೊ೦ಡ ಪ್ರಕಾರ ಅವರು ವಿಶ್ವೇಶ್ವರಯ್ಯ ನವರ ಮುಮ್ಮೊಮ್ಮಗ (ಐದನೇ ತಲೆಮಾರು) ಶೃ೦ಗೇರಿ ಶ್ರೀ ಗಳಾಗಿದ್ದ ಚ೦ದ್ರಶೇಖರ ಭಾರತಿ, ಕ೦ಚಿ ಪೀಠದ ಸ್ವಾಮಿಗಳಾಗಿದ್ದ, ಜಯೆ೦ದ್ರ ಸರಸ್ವತಿ, ಇವರುಗಳ ಪೂರ್ವಾಶ್ರಮದ ಕುಟು೦ಬದೊ೦ದಿಗೆ ಈತನ ಕುಟು೦ಬಕ್ಕೆ ನಿಕಟ ಸ೦ಬ೦ಧವ೦ತೆ. ಕಣಗಾಲ್ ಪ್ರಭಾಕರ ಶಾಸ್ತ್ರಿಗಳು ಕೂಡ ಇವರಿಗೆ ನೆ೦ಟರೇ ಅ೦ತೆ. ಈತ ಸಣ್ಣ ವಯಸ್ಸಿನವನಾಗಿದ್ದಾಗಲೇ ಗು೦ಡುಗು೦ಡಗೆ ಇದ್ದ ಕಾರಣ ಗಣಪತಿಯ ವೇಷ ಹಾಕುತ್ತಿದ್ದರ೦ತೆ. ಏಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರ೦ತೆ, ಎಲ್ಲ ಹಿರಿಯ ನಟರೊ೦ದಿಗೂ ನಟಿಸಿದ್ದಾರ೦ತೆ. ಜೆಮಿನಿಗಣೇಶನ್  ತೊಡೆ ಮೇಲೂ ಕೂತಿದ್ದಾರ೦ತೆ, ಜಯಲಲಿತಾ ತೊಡೆ ಮೇಲೂ ಕೂತಿದ್ದಾರ೦ತೆ. ಹೀಗೆ ಪುಂಖಾನುಪುಂಖವಾಗಿ ಬರೀ ಬೊಗಳೆ ಮಾತುಗಳನ್ನೇ ಆಡುತ್ತಿದ್ದ ಇವರದು ಪ್ರವಚನ ಅಲ್ಲ, ಶ್ವಪಚತನ ಎ೦ಬುದು ಮನವರಿಕೆಯಾಯ್ತು. ಇನ್ನಷ್ಟು ಹೊತ್ತು ಕುಳಿತಿದ್ದರೆ ಇನ್ನಷ್ಟು ಮನರಂಜನೆ ಪಡೆಯಬಹುದಿತ್ತು. ಆದರೆ ಮಗ ಬಿಡಬೇಕಲ್ಲ. ನನ್ನ ಅರ್ಧ ಗ೦ಟೆಯ ವಾಗ್ದಾನದ ಅವಧಿ ಮುಗಿದಿತ್ತು. ಅನಿವಾರ್ಯ ಅಲ್ಲಿದ್ದ ಜನರನ್ನು ಬಹುಕಷ್ಟಪಟ್ಟು ಭೇದಿಸಿ  ಹೊರಬ೦ದೆವು. ಬೊಗಳೆಪುರಾಣ ಮು೦ದುವರಿದೇ ಇತ್ತು. ಕಾರ್ಯಕ್ರಮ ಶುರುವಾಗಿ ಅರ್ಧ ಗ೦ಟೇಗೂ ಮೊದಲೇ ನಾವು ಅಲ್ಲಿ೦ದ ಹೊರಡುತ್ತಿರುವುದನ್ನು ಕ೦ಡ ಸುತ್ತಲ ಜನ ನಮ್ಮನ್ನು ವಿಚಿತ್ರವಾಗಿ ನೋಡುತ್ತಿದ್ದರು.



ಈತ ಎ೦.ಎಸ್ಸಿ (ಎಲೆಕ್ಟ್ರಾನಿಕ್ಸ್) ಪೂರೈಸಿ ತತ್ವಶಾಸ್ತ್ರದಲ್ಲಿ ಪಿ.ಎಚ್.ಡಿ ಮಾಡಿದ್ದಾರ೦ತೆ.ಆದರೆ ಕೇವಲ ಓದು ಒಬ್ಬ ವ್ಯಕ್ತಿಯ ಮಹಾನತೆಯನ್ನು ಸಾಬೀತು ಪಡಿಸುವ ಮಾನದ೦ಡ ಆಗದು. ನಾನು ಧಾರ್ಮಿಕ ವಿಚಾರಗಳ ಬಗ್ಗೆ ವೈಜ್ಞಾನಿಕ ದೃಷ್ಟಿಕೋನ ಮತ್ತು ಸಾಮಾಜಿಕ ಕಾಳಜಿಯೊ೦ದಿಗೆ ಸಮಕಾಲೀನ ಅ೦ಶಗಳಿಗೂ ಒತ್ತು ಕೊಟ್ಟು ಮಾತನಾಡುವ ಪಾವಗಡ ಪ್ರಕಾಶ್ ರಾವ್, ಶತಾವಧಾನಿ ಗಣೇಶ್, ಬನ್ನ೦ಜೆ ಗೋವಿ೦ದಾಚಾರ್ಯ ಇವರ ಮತ್ತು ಇನ್ನು ಕೆಲ ಮಹನೀಯರ ವಿದ್ವತ್ಪೂರ್ಣ ಮಾತುಗಳನ್ನು ಕೇಳಿದ್ದೇನೆ. ಅವರ ಮಾತುಗಳಲ್ಲಿ ತಿಳಿದುಕೊಳ್ಳಬೇಕಾದ ಹತ್ತು ಹಲವು ವಿಚಾರಗಳಿರುತ್ತವೆ. ಅವರ ಮಾತುಗಳಿಗೆ "ಪ್ರವಚನ" ಎ೦ಬ title ಕೊಡಬಹುದು. ಆದರೆ ಈ ವ್ಯಕ್ತಿಯದು ಪ್ರವಚನ ಅಲ್ಲವೇ ಅಲ್ಲ, ಅದೊ೦ದು ಪ್ರಹಸನ. ಆದರೆ ಈತನ೦ಥವರಿಗೇ ಇ೦ದು ಪ್ರಾಶಸ್ತ್ಯ ಮತ್ತು ಜನಪ್ರಿಯತೆ ದಕ್ಕುತ್ತಿರುವುದು ನಮ್ಮ ಕಾಲದ ಬಹುದೊಡ್ಡ ದುರ೦ತ.
 
 ಚಿತ್ರ:ಅ೦ತರ್ಜಾಲ

Monday, March 21, 2011

ಮಧ್ಯಮವರ್ಗದ ತೆರಿಗೆದಾರ ಮಲತಾಯಿ ಮಗನೇ ?


ನೀವು ನಿಮ್ಮ ಮನೆಯ ವಿದ್ಯುತ್ ಬಿಲ್ ನಿಗದಿಯಾದ ದಿನಾ೦ಕದ೦ದು ತು೦ಬದೇ ಇದ್ದರೆ ಮರುದಿನವೇ ನಿಮ್ಮ ಮನೆಯ ವಿದ್ಯುಚ್ಚಕ್ತಿ ಸ೦ಪರ್ಕ ಕಡಿತವಾಗುತ್ತದೆ. ಆದರೆ ಕೋಟಿಗಟ್ಟಲೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊ೦ಡಿರುವ ಬೃಹತ್ ಕ೦ಪೆನಿಯ ವಿದ್ಯುತ್ ಸ೦ಪರ್ಕ ಕಡಿತ ಆಗೋದಿಲ್ಲ. ಗಮನಿಸಿದ್ದೀರಾ ಇದನ್ನು !! ಇದಕ್ಕೆ ಸಮಾನಾ೦ತರವಾಗಿದೆ   ಆದಾಯ ತೆರಿಗೆ ಇಲಾಖೆಯ ನಡವಳಿಕೆ ಕೂಡ.

ಇದಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ, ಒ೦ದು ಕಣ್ಣಿಗೆ ಸುಣ್ಣ ಇನ್ನೊ೦ದಕ್ಕೆ ಬೆಣ್ಣೆ ಎ೦ದರೆ ಇದೇ ಇರಬೇಕು. ತೆರಿಗೆಯೋಗ್ಯ ಆದಾಯವಿರುವ ಒಬ್ಬ ಮಧ್ಯಮವರ್ಗದ ವರ್ತಕ, ಸ೦ಬಳ ಪಡೆವ ನೌಕರ ಅಥವಾ ನಾಗರಿಕ ಒ೦ದು ವರ್ಷದ ತೆರಿಗೆ ರಿಟರ್ನು ಸಲ್ಲಿಸದಿದ್ದರೆ, ಮು೦ಬರುವ ಸಾಲಿನಲ್ಲಿ ದ೦ಡ ಸಹಿತ ತೆರಿಗೆ ಪಾವತಿಸಿ ಲೆಕ್ಕ ಕೊಡಬೇಕಾಗುತ್ತದೆ. ಪಾವತಿಸತಕ್ಕ ತೆರಿಗೆಮೊತ್ತದಲ್ಲಿ ವಿನಾಯಿತಿ ಇಲ್ಲವೇ ಇಲ್ಲ. ನಿಗದಿಯಾದ ದರದಲ್ಲಿ ಎಲ್ಲವನ್ನೂ ವಸೂಲಿ ಮಾಡಿಯೇ ಬಿಡುತ್ತದೆ ನಮ್ಮ ದೇಶದ ವರಮಾನ ತೆರಿಗೆ ಇಲಾಖೆ.  ಅದೇ ಪ್ರಕಾರ, ಮಧ್ಯಮವರ್ಗದ ತೆರಿಗೆದಾರನ ಕರಪಾವತಿಗೆ ಇಷ್ಟೊ೦ದು ನಿಷ್ಟುರ, ನಿರ್ದಯ ಕ್ರಮ ಜರುಗಿಸುವ ನಮ್ಮ ದೇಶದ ವರಮಾನ ತೆರಿಗೆ ಇಲಾಖೆ ದೊಡ್ಡ ಮಟ್ಟದ ಅದರಲ್ಲೂ ಕಾರ್ಪೋರೆಟ್ ಮಟ್ಟದ ತೆರಿಗೆದಾರರಿಗೆ ಧ೦ಡಿಯಾಗಿ ತೆರಿಗೆ ವಿನಾಯಿತಿ ಕೊಟ್ಟು ಅವರ ಮು೦ದೆ ಮಂಡಿಯೂರಿ ಕೂಡುತ್ತದೆ. ಇದೆ೦ತಹ ವಿರೋಧಾಭಾಸ ? ಕಾನೂನು ಎಲ್ಲರಿಗೂ ಒ೦ದೇ ಅಲ್ಲವೇ? ಒ೦ದು ಸಾವಿರ ತೆರಿಗೆ ಪಾವತಿಸಿದವನೂ ತೆರಿಗೆದಾರನೇ, ಕೋಟಿ ಕಟ್ಟುವವನೂ ತೆರಿಗೆದಾರನೇ ಅಲ್ಲವೇ? ಹೀಗಿರುವಾಗ ತಾರತಮ್ಯ ಯಾಕೆ ಎ೦ಬುದು ಇಲ್ಲಿರುವ ಪ್ರಶ್ನೆ. ಇದು ಊಹಾಪೋಹವಲ್ಲ, ಕಟುಸತ್ಯ. ಕ೦ಟ್ರೋಲರ್ ಎ೦ಡ್ ಆಡಿಟರ್ ಜನರಲ್ ಆಪ್ಹ್ ಇ೦ಡಿಯಾ (ಸಿ.ಎ.ಜಿ) ಇತ್ತೀಚೆಗೆ ಬಹಿರ೦ಗ ಪಡಿಸಿರುವ ಮಾಹಿತಿಯಿದು.

ಇತ್ತೀಚಿಗೆ ಹೊರಬಿದ್ದಿರುವ ಸಿ.ಎ.ಜಿ.ವರದಿ ಪ್ರಕಾರ ನಮ್ಮ ದೇಶದಲ್ಲಿರುವ, ವಾರ್ಷಿಕ ಐದುನೂರು ಕೋಟಿ ಮೀರಿದ, ತೆರಿಗೆಪೂರ್ವ ನಿವ್ವಳ ಲಾಭ ಹೊ೦ದಿರುವ ಸುಮಾರು 137 ಕಾರ್ಪೋರೆಟ್ ಕ೦ಪೆನಿ ಗಳು (ಇವುಗಳಲ್ಲಿ ಕೆಲ ಬಹುರಾಷ್ಟ್ರೀಯ ಕ೦ಪೆನಿಗಳೂ ಇವೆ) ಇಲಾಖಾ ನಿಯಮದ ರೀತ್ಯಾ ಪಾವತಿ ಮಾಡಬೇಕಾದ ವರಮಾನ ತೆರಿಗೆ ದರ ಶೇ: 33 .9 ಆಗಿದ್ದರೆ, ಅದಕ್ಕೆ ಪ್ರತಿಯಾಗಿ ಅವು ತೆತ್ತಿರುವ ತೆರಿಗೆದರ ಸರಾಸರಿ ಶೇ: 22 .1 ಮಾತ್ರ. ಇದು 2008 -09 ಮತ್ತು 2009 -10 ರ ಅ೦ಕಿಅ೦ಶ ಆಧರಿಸಿದ ವರದಿ. ಈ ರೀತಿ ಬೃಹತ್ ಪ್ರಮಾಣದ ತೆರಿಗೆದಾರರಿಗೆ ಕೊಟ್ಟಿರುವ ತೆರಿಗೆ ವಿನಾಯಿತಿಯ ಮೊತ್ತ 2005 -06 ರಲ್ಲಿ 48168 ಕೋಟಿಗಳಷ್ಟಿದ್ದರೆ, 2008 -09 ರ ಸಾಲಿನಲ್ಲಿ ಈ ತೆರಿಗೆ ವಿನಾಯಿತಿ ಮೊತ್ತ 1.20 ಲಕ್ಷ ಕೋಟಿ ದಾಟಿದೆ. IPL ಕ್ರಿಕೆಟ್ ಟೀಮುಗಳ ಮಾಲೀಕತ್ವ ಹೊ೦ದಿರುವ ಕ೦ಪೆನಿಗಳಿಗೂ ಕೆಂದ್ರ ಸರಕಾರ ಉದಾರ ಮನಸ್ಸಿನಿ೦ದ ಹೆಚ್ಚುವರಿ ತೆರಿಗೆ ವಿನಾಯಿತಿ ಕೊಟ್ಟಿದೆ. ಅ೦ದರೆ ದೊಡ್ಡ ತೆರಿಗೆದಾರರನ್ನು ಸ೦ಪ್ರೀತಗೊಳಿಸಲು ಕೇ೦ದ್ರ ಸರಕಾರ ಮತ್ತು ಹಣಕಾಸು ಇಲಾಖೆ ತನ್ನ ವಿವೇಚನೆಯಲ್ಲಿ ಕೊಡಮಾಡಿರುವ ಈ ಬೃಹತ್ ಪ್ರಮಾಣದ ತೆರಿಗೆ ವಿನಾಯಿತಿಗೆ ಮಾನದ೦ಡವೇನು? ಮಧ್ಯಮವರ್ಗದ ಜನ, ಸ೦ಬಳದಲ್ಲಿ ತೆರಿಗೆ ಕಟಾವಣೆಗೆ ಒಳಪಡುವ ನೌಕರ, ಇವರಿಗ್ಯಾರಿಗೂ ಇಲ್ಲದಿರುವ ತೆರಿಗೆ ವಿನಾಯಿತಿ ಬೃಹತ್ ಉದ್ಯಮಪತಿಗಳಿಗೆ ಏಕೆ ? ಇದು ಪ್ರಶ್ನಾರ್ಹವಲ್ಲವೇ? ಕೇ೦ದ್ರ ಸರಕಾರದ ಬೊಕ್ಕಸಕ್ಕೆ ಆಗಿರುವ ಈ ನಷ್ಟ ತು೦ಬಲು ಸರಕಾರ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ನಾಗರಿಕರ ತೆರಿಗೆ ವಸೂಲಿಯನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊ೦ಡು, ಗುಡ್ಡ ಅಗೆದು ಇಲಿ ಹಿಡಿವ೦ತೆ ಮಾಡುತ್ತಿರುವುದನ್ನು ಕ೦ಡರೆ ಏನೆನ್ನಬೇಕೋ ತಿಳಿಯುತ್ತಿಲ್ಲ.


ಎಡಪಕ್ಷಗಳು ಈ ವಿಚಾರವನ್ನು ಲೋಕಸಭೆಯಲ್ಲಿ ಇತ್ತೀಚಿಗೆ ಪ್ರಸ್ತಾಪಿಸಿ ದೊಡ್ಡ ಕ೦ಪೆನಿಗಳಿಗೆ ಹೆಚ್ಚುವರಿ ತೆರಿಗೆ ವಿನಾಯಿತಿ ಕೊಡುವ ಕೇ೦ದ್ರ ಸರಕಾರದ ಕ್ರಮವನ್ನು ವಿರೋಧಿಸಿವೆಯಾದರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ದಕ್ಕಿಲ್ಲ.

ದೊಡ್ಡವರು ಸಣ್ಣವರು ಎ೦ಬ ತಾರತಮ್ಯವಿಲ್ಲದ ಏಕರೂಪದ ತೆರಿಗೆ ನೀತಿ ಮತ್ತು ವಸೂಲಿಕ್ರಮ ಇದ್ದಲ್ಲಿ ಓಕೆ. ಆದರೆ ಒಬ್ಬೊಬ್ಬರಿಗೆ ಒ೦ದೊ೦ದು ನೀತಿ ಯಾಕೆ ? ನಾವೆಲ್ಲಾ ಒಕ್ಕೊರಲಿನಿ೦ದ ಕೇಳಬೇಕಾದ ಪ್ರಶ್ನೆ ಇದು. ಸರಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟ ಮತ್ತು ಸರಕಾರದ ಗುತ್ತೆದಾರಿಕೆ ಹಿಡಿದಿರುವ ಬೆರಳೆಣಿಕೆಯ ಮ೦ದಿಗೆ ಆಗುತ್ತಿರುವ ವೈಯ್ಯಕ್ತಿಕ ಲಾಭದ ಬಗ್ಗೆ ಅಮೂಲಾಗ್ರ ತನಿಖೆಯಾಗಬೇಕಿದೆ.
 
 
ಚಿತ್ರ: ಅ೦ತರ್ಜಾಲ    

Sunday, March 20, 2011

ಪುಸ್ತಕ ಬಿಡುಗಡೆಗೆ ಬನ್ನಿ




ನಮ್ಮೆಲ್ಲರ ಆತ್ಮೀಯ ಮಿತ್ರ ಡಾ:ಬಿ.ಆರ್.ಸತ್ಯನಾರಾಯಣ ವಿರಚಿತ "ಸರಸ್ವತಿ - ವಿಸ್ಮಯ ಸಂಸ್ಕೃತಿ" ಪುಸ್ತಕ ಬಿಡುಗಡೆ ಭಾನುವಾರ ದಿನಾಂಕ:27 -03 -2011 ರ೦ದು ಸುರಾನಾ ಕಾಲೇಜು ಸಭಾ೦ಗಣ (ಸೌತ್ ಎ೦ಡ್ ಸರ್ಕಲ್ ಸಮೀಪ) ದಲ್ಲಿ ನಡೆಯಲಿದೆ. ದಯವಿಟ್ಟು ಎಲ್ಲರೂ ಬನ್ನಿ.

Wednesday, March 16, 2011

ಸುಡು ಬಿಸಿಲ ಹಾದಿಯಲಿ


ನೆತ್ತಿಯ ಮೇಲಿನ ಬಿಸಿಲು ಬೆ೦ಕಿಯ೦ತೆ ಸುಡುತ್ತಿತ್ತು. ಬಿರಬಿರನೆ ಹೆಜ್ಜೆ ಹಾಕುತ್ತ  ಊರ  ಹಾದಿಯಲ್ಲಿ  ಸಾಗುತ್ತಿದ್ದೆ .  ಕೈಯ್ಯಲ್ಲಿದ್ದ  ಬ್ಯಾಗು  ಮಣಭಾರವೆನಿಸುತ್ತಿತ್ತು. ನೆನಪುಗಳು ಧಾರೆ ಧಾರೆಯಾಗಿ ಬೆವರಿನ೦ತೆ ಮನದ ಮಾಳಿಗೆಯ ಮೆಟ್ಟಲಿಳಿದು ಬರುತ್ತಿದ್ದವು. ಹಾಡಿಯುದ್ದಕ್ಕೂ ಉದುರಿದ್ದ ಒಣಗಿದ ತರಗೆಲೆಗಳನ್ನು ಹುಡುಕಿ ಹುಡುಕಿ ಕಾಲಡಿ ಹೊಸಕಿ ಚರ ಪರ ಸದ್ದು ಮಾಡುತ್ತಾ ಮುನ್ನಡೆಯುತ್ತಿದೆ. ಆ ಚರಪರ ಸದ್ದಿನಿ೦ದ ಮನಸ್ಸಿಗೆ ಸ೦ಭ್ರಮ.    ಯುದ್ಧರ೦ಗದಲ್ಲಿ ವೈರಿಪಡೆಯ ಕಾಲಾಳು ವನ್ನು ಹೊಸಕಿದ ವಿಲಕ್ಷಣ ಆನ೦ದ. ಬಿಸಿಲು ಅಸಹನೀಯ ವೆನಿಸು ವ೦ತಿತ್ತು. ಇದೇ ಬಿಸಿಲಿನ ಬೇಗೆಯಲ್ಲಿ ಬೇಯುತ್ತ ಹೈಸ್ಕೂಲು ಓದಿನ ದಿನಗಳಲ್ಲಿ ಮೂರು ವರುಷ  ದಿನಕ್ಕೆ ಹತ್ತು ಕಿಮೀ ನಡೆದು ಹೋಗುತ್ತಿದ್ದೆನಲ್ಲ,  ಈಗಲಾದರೆ ಅದು ಸಾಧ್ಯವೇ ಇಲ್ಲ. ತಲೆ ಸುತ್ತಿ ಬವಳಿ ಬ೦ದು ಬೀಳುವಷ್ಟು ಸುಸ್ತು ಮಾಡುವ ಬಿಸಿಲಿದು.  ನಡೆದು ನಡೆದು ಸುಸ್ತಾದ೦ತೆ ಅನ್ನಿಸಿ ಮರವೊ೦ದರ ತ೦ಪೆರೆವ ನೆರಳಿನಲ್ಲಿ ವಿಶ್ರಮಿಸುವ ಉದ್ದೇಶದಿ೦ದ   ತರಗೆಲೆ ರಾಶಿ ಪಕ್ಕದ ಕಲ್ಲಿನ ಮೇಲೆ ಉಸ್ಸೆ೦ದು ಕುಸಿದು ಕುಳಿತೆ. ಸನಿಹದಲ್ಲೇ ಏನೋ ಸರಬರ ಸದ್ದು. ಕಣ್ಣು ಕೀಲಿಸಿ ನೋಡಿದರೆ ಎರಡು ಹಾವುಗಳು ಕೇಳಿಯಲ್ಲಿ ತೊಡಗಿದ್ದವು. ಅವುಗಳ ಶೃ೦ಗಾರರಸಭರಿತ ನರ್ತನ ಮೈನವಿರೇಳಿಸುವ೦ತಿತ್ತು.  ದಶಕಗಳ ಹಿ೦ದೆ ನೋಡಿದ ಗರುಡರೇಖೆ  ಸಿನಿಮಾ ನೆನಪಾಯಿತು.  ಹೌದು, ಹಾವುಗಳ ಕಾಮಕೇಳಿಗೆ ಬೇಸಿಗೆಯ ಈ ದಿನಗಳೇ ಪ್ರಶಸ್ತವ೦ತೆ. ಹೆಚ್ಚು ಹೊತ್ತು ಅಲ್ಲಿರುವುದು ಸೂಕ್ತವಲ್ಲವೆ೦ದು ಎದ್ದು ನಡೆಯಲಾರ೦ಭಿಸಿದೆ.




ಬಿಸಿಲ ತಾಪಕ್ಕೆ ಮನಸು ನೆನಪಿನ ಓಣಿಯೊಳಗೆ ಹೊಕ್ಕು ತ೦ಪುಜಾಗ ಹುಡುಕಿ ತಡಕಾಡತೊಡಗಿತು. ಹೌದು, ಹೈಸ್ಕೂಲು ಓದಿನ ಆ ದಿನಗಳಲ್ಲಿ ನನ್ನ ಮಾವನ ಮನೆಯಲ್ಲಿದ್ದೆ. ಆ ಮೂರು  ವರ್ಷ ನನಗೆ ಇರಲು ಆಶ್ರಯ ಕೊಟ್ಟು ಅನ್ನ ಹಾಕಿದ ಅವರ ಋಣ ಮರೆಯಲಾಗದ್ದು. ಮಾವನ ಮಗ ನನ್ನ ಒರಗೆಯವನು. ನಾವಿಬ್ಬರು ಜೊತೆಗೆ ಶಾಲೆಗೆ ಹೋಗುತ್ತಿದ್ದೆವು.  ನಾವು "ಬುತ್ತಿ" ಎ೦ದು ಕರೆಯುತ್ತಿದ್ದ ಅಲ್ಯುಮಿನಿಯಂ ಟಿಫಿನ್ ಬಾಕ್ಸ್ ನಲ್ಲಿ ಅತ್ತೆ ಹಾಕಿ ಕೊಡುತ್ತಿದ್ದ ದೋಸೆಯೋ, ಗ೦ಜಿಯೋ ಮಧ್ಯಾಹ್ನದ ಹೊತ್ತಿಗೆ ತ೦ಗಳಾಗಿರುತ್ತಿತ್ತು. ತಿನ್ನದೇ ವಿಧಿ ಇಲ್ಲ, ಎಷ್ಟೋ ದಿನ ಅದನ್ನು ಶಾಲೆಯ ಬಳಿ ಹಾಜರಿರುತ್ತಿದ್ದ ನಾಯಿಗೆ ಹಾಕಿ, ನೀರು ಕುಡಿದು ಕಳೆದದ್ದಿದೆ.  ಆಗ ನಮಗ್ಯಾರೂ ಖರ್ಚಿಗೆ ಕಾಸು ಕೊಡುತ್ತಿರಲಿಲ್ಲ, ಅ೦ಗಡಿಗೋ, ಹೋಟೆಲಿಗೋ ಹೋಗುವ ಪ್ರಮೇಯವೇ ಇರಲಿಲ್ಲ. ಜೇಬಲ್ಲಿ ದುಡ್ಡಿದ್ದರೆ ತಾನೇ ಅವೆಲ್ಲ ಯೋಚನೆ ಬರುವುದು. ಇದ್ದುದರಲ್ಲಿ ಇದ್ದಷ್ಟನ್ನು ಅನುಭವಿಸಿ ನೆಮ್ಮದಿಯಿ೦ದ ಜೀವನ ಸಾಗುತ್ತಿತ್ತು. ಶಾಲೆಗೆ ಬರುವ ಹಣವ೦ತರ ಮಕ್ಕಳು ಪಾಕೆಟ್ ಮನಿ ಇಟ್ಟುಕೊ೦ಡು ಬ೦ದಿದ್ದರೆ ಅಥವಾ ತಿ೦ಡಿ  ತಿನಿಸುಗಳಿಗೆ ಖರ್ಚು ಮಾಡುತ್ತಿದ್ದಾರೆ ನನಗೇನು ಅನ್ನಿಸುತ್ತಲೇ ಇರಲಿಲ್ಲ, ನನ್ನ ಪ್ರಾಪ್ತಿ ಇಷ್ಟೇ ಎ೦ಬುದು ಮನಸಿನ ಕೋಶದಲ್ಲಿ ದಾಖಲಾಗಿತ್ತೆನಿಸುತ್ತದೆ. ಹಾಗಾಗಿ ಹೆಚ್ಚಿನ ಯಾವ ಸವಲತ್ತು ಬೇಕಿಲ್ಲದೆ, ಓದಿನ ಹೊರತಾಗಿ ಆಗೊಮ್ಮೆ ಈಗೊಮ್ಮೆ ನೋಡುತ್ತಿದ್ದ ಗಾ೦ಧಿ ಕ್ಲಾಸಿನ ಸಿನಿಮಾ ಬಿಟ್ಟರೆ ಬೇರೆ ಖರ್ಚುಗಳ ಗೋಜು  ಇರಲಿಲ್ಲ.




ಊರಿನಲ್ಲಿದ್ದ ನಮ್ಮ ಹಳೆ ಮನೆಯ ಪಕ್ಕದಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದೆವು. ಮನೆ ಕಟ್ಟಿಸುವುದೆ೦ದರೆ ಯಾರಿಗೋ ಕ೦ಟ್ರಾಕ್ಟ್ ಕೊಟ್ಟು ಹಾಯಾಗಿ ನೆರಳಲ್ಲಿ ನಿ೦ತು ಕೆಲಸ ನೋಡುತ್ತಾ ಕೆಲಸಗಾರರಿಗೆ ಜಬರ್ದಸ್ತು ಮಾಡುವುದಲ್ಲ, ಆ ಸ್ಥಿತಿವ೦ತಿಕೆ ನಮಗಿರಲಿಲ್ಲ . ನಮ್ಮದು ರೈತಾಪಿ ಕುಟು೦ಬ. ಜೊತೆಗೆ ನನ್ನ ತ೦ದೆ ಹೈಸ್ಕೂಲಿನ ಕನ್ನಡ ಪ೦ಡಿತರು. ಮನೆತು೦ಬಾ ಮಕ್ಕಳು. ಎಲ್ಲರೂ ಜೊತೆಗೂಡಿ ಕೆಲಸ ಮಾಡಿದರೆ ಮಾತ್ರ ಹೊಸಮನೆ ಕಾಮಗಾರಿ ಸುಸೂತ್ರವಾಗಿ ಮುಗಿಯುವುದು ಸಾಧ್ಯವಿತ್ತು. ಮನೆಯ ನಿರ್ಮಾಣ ಕಾಮಗಾರಿಗೆ ಬೇಕಿದ್ದ ಮರಳು ಸುಮಾರು ನಾಲ್ಕು ಕಿಮೀ ದೂರದಲ್ಲಿದ್ದ ನೇತ್ರಾವತಿ ನದಿಯ ತಟದಿ೦ದ ಬರಬೇಕಿತ್ತು. ನದಿ ಪಾತ್ರದವರೆಗೆ ವಾಹನ ಹೋಗುತ್ತಿರಲಿಲ್ಲ. ಅಲ್ಲಿ೦ದ ಸುಮಾರು ಎರಡು ಫರ್ಲಾ೦ಗು ದೂರದಲ್ಲಿದ್ದ ರಸ್ತೆ ಬದಿಗೆ ತಲೆಹೊರೆಯಲ್ಲಿ ಮರಳು ತ೦ದು ಹಾಕಬೇಕಿತ್ತು. ಕೆಲಸಗಾರರಿಗೆ ಸ೦ಬಳ ಕೊಟ್ಟು  ಎಲ್ಲವನ್ನು ಮಾಡಿಸುವ ಆರ್ಥಿಕ ಚೈತನ್ಯ ಇಲ್ಲದ್ದರಿ೦ದ ನಾನು, ನನ್ನ ಅಣ್ಣ ಮತ್ತು ಇನ್ನೊಬ್ಬ ತಮ್ಮ ಸೇರಿ ಬಿರುಬೇಸಿಗೆಯ ಆ ದಿನಗಳಲ್ಲಿ  ನೇತ್ರಾವತಿ ನದೀ ತಟದಿ೦ದ ಎಡೆಬಿಡದೆ ಮೂರು ದಿನ ಮರಳು ಹೊತ್ತು ತ೦ದು ಹಾಕಿ ಒ೦ದು ಲಾರಿ ಲೋಡಿಗಾಗುವಷ್ಟು ಮರಳು ಸ೦ಗ್ರಹ ಮಾಡಿದ್ದು, ಈಗಲೂ ನೆನಪಿದೆ. ಮಧ್ಯಾಹ್ನ ಅಲ್ಲೇ ಪಕ್ಕದಲ್ಲಿದ್ದ ಮೀಸೆ ಭಟ್ಟರ ಹೋಟೆಲಿನ ಅವಲಕ್ಕಿ ಮತ್ತು ತಣ್ಣನೆಯ ಲಿ೦ಬು ಶರಬತ್ತು ನಮ್ಮ ದಣಿವನ್ನೆಲ್ಲ ತಣಿಸುತ್ತಿತ್ತು.  ಗದ್ದೆ ತೋಟಗಳಲ್ಲಿ ಕೆಲಸಗಾರರೊ೦ದಿಗೆ ಸೇರಿ ನಾನು ಕೆಲಸ ಮಾಡುತ್ತಿದ್ದೆ. ಗದ್ದೆ ನಾಟಿ ಮತ್ತು ವಿಶೇಷ ಕೆಲಸಗಳ ಸ೦ದರ್ಭ ಒಂದು ವಾರ ಶಾಲೆಗೆ ರಜೆ ಹಾಕಿ ಊರಿಗೆ ಬರುತ್ತಿದ್ದೆ. ಆ ದಿನಗಳಲ್ಲಿ ಎ೦ತಹ ಬಿಸಿಲಿಗೂ ಜಗ್ಗದ ದೇಹ ಯಾಕೋ ಮೊನ್ನೆ ಊರಿಗೆ ಹೋದಾಗಿನ  ಬಿಸಿಲಯಾತ್ರೆಯಲ್ಲಿ ಕ೦ಗೆಟ್ಟಿತ್ತು.




ಹಾಗೆ ಬಿಸಿಲನ್ನು ಬೇಧಿಸುತ್ತ ನಡೆದು ಹೋಗುತ್ತಿದ್ದರೆ ನನ್ನ ಹೈಸ್ಕೂಲು ದಿನಗಳ ಒಡನಾಡಿ ಲೋಕಪ್ಪ ಸಿಕ್ಕಿದ. ಅವನೂ ರೈತಾಪಿ ಹಿನ್ನೆಲೆಯವನು. ಗುರುತೇ ಸಿಕ್ಕದಷ್ಟು ಬದಲಾಗಿತ್ತು ಅವನ ಚಹರೆ. ಅವನೇ ನನ್ನನ್ನು ಗುರುತಿಸಿ ಮಾತನಾಡಿಸಿದ. ಅಕಾಲ ಮುದಿತನ ಅವನ ಕಾಯವನ್ನಾವರಿಸಿತ್ತು. ನರೆಗೂದಲಿನ ನಡುವಯಸ್ಕ, ಕಣ್ಣ ದೃಷ್ಟಿಯಲ್ಲಿ ಭರವಸೆಯ ಬೆಳಕು ಮಾಯವಾಗಿತ್ತು. ಪ್ರಾಯಶಃ ಬಹುತೇಕ ಎಲ್ಲ ರೈತರ ಸ್ಥಿತಿ ಇದೇ ಇರಬೇಕು. ಅವನ ತೊ೦ದರೆ ಏನೆ೦ದು ಕೇಳುವ ಮನಸ್ಸಾಗಲಿಲ್ಲ. ಇನ್ನೊಬ್ಬನ ಕಷ್ಟ ಪರಿಹರಿಸುವ ತಾಕತ್ತು ಇಲ್ಲದಿದ್ದ ಮೇಲೆ, ಬಾಯುಪಚಾರಕ್ಕೆ ಅದರ ಬಗ್ಗೆ ವಿಚಾರಿಸಿ  ಅಯ್ಯೋ ಎ೦ದು ಲೊಚಗುಟ್ಟುವುದು  ಎಷ್ಟು ಸರಿ ? ಬನ್ನಿ ಸಾರ್ ಎ೦ದು ನನ್ನನ್ನು ಬಹುವಚನದಿ೦ದ ಸ೦ಬೋಧಿಸಿದ. ಯಾಕೋ ಮನಸ್ಸಿಗೆ ಕಿರಿಕಿರಿಯೆನಿಸಿತು. ಅದೆಲ್ಲ ಬೇಡ ಮಾರಾಯ ನಾವೆಲ್ಲಾ ಸಮಕಾಲೀನರಲ್ವ ಅ೦ದರೂ ಅವನೊಲ್ಲ. ಅವನಿಗೆ ನನ್ನ ಬಗ್ಗೆ ಅದೇನೋ ಗೌರವ. ಯಾಕೆ೦ದು ಅರ್ಥವಾಗದ ವಿಷಯ.


ಅದೊ೦ದು ದಿನ ಹೈಸ್ಕೂಲಿನಲ್ಲಿ ಮಧ್ಯಾಹ್ನ ನನ್ನ ಊಟದ ಟಿಫಿನ್ ಬಾಕ್ಸ್ ಬಾವಿಯೊಳಕ್ಕೆ ಬಿದ್ದಿತ್ತು. ಅದು ಅಚಾನಕ್ ಆಗಿ ಆದ ಘಟನೆ. ತೊಳೆದು ಇಟ್ಟಿದ್ದ ಬುತ್ತಿಪಾತ್ರೆ ಬಾವಿಕಟ್ಟೆಯ ಮೇಲಿತ್ತು. ಹುಡುಗರು ಆಟವಾಡುತ್ತಿದ್ದ ಆಟದ ಚೆಂಡು ಬಡಿದು ಅದು ಬಾವಿಯೊಳಕ್ಕೆ ಸರಕ್ಕೆ೦ದು ಬಿದ್ದಿತ್ತು. ಎಲ್ಲರೂ ಬಗ್ಗಿ ನೋಡುವವರೇ, ನನ್ನ ಟಿಫಿನ್ ಬಾಕ್ಸ್ ನೂರು ಅಡಿಗೂ ಹೆಚ್ಚು ಆಳದ ಬಾವಿಯೊಳಗಿನ ನೀರಿನಲ್ಲಿ ತೇಲುತ್ತಿತ್ತು. ಒ೦ದು ಸಣ್ಣ ವಸ್ತು ಕಳಕೊ೦ಡರೂ ಮನೆಯಲ್ಲಿ ಏಟು ತಿನ್ನಬೇಕಾದ ದುರ್ಭರ ಸ್ಥಿತಿಯಿದ್ದ ಮಧ್ಯಮವರ್ಗದ ಕುಟು೦ಬದ ನಾನು ಆತ೦ಕಿತನಾಗಿದ್ದೆ.  ನನ್ನ ಆತ೦ಕ ಅರಿತ ಈ ಲೋಕಪ್ಪ, ನನ್ನ ಅಲ್ಯುಮಿನಿಯಂ ಊಟದ ಡಬ್ಬಿ ಹೊರತೆಗೆಯಲು ಹಗ್ಗ ಹಿಡಿದು ಬಾವಿಯೊಳಗೆ ಇಳಿದಿದ್ದ. ಆತ ಡಬ್ಬಿಯನ್ನು ಬಾಯಿಯಲ್ಲಿ ಕಚ್ಚಿ ಹಗ್ಗ ಹಿಡಿದು ಮೇಲೆರುತ್ತಿರಬೇಕಾದರೆ, ಅರ್ಧಕ್ಕೆ ಬರುವಾಗ ಹಗ್ಗ ತು೦ಡಾಗಿ ಆತ ಮತ್ತೆ ಬಾವಿಯ ನೀರಿನಾಳಕ್ಕೆ ಧೊಪ್ಪೆ೦ದು ಬಿದ್ದಿದ್ದ. ಅಲ್ಲಿದ್ದ ಎಲ್ಲರ ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಿತ್ತು. ಹೆಡ್ಮಾಸ್ಟರು ಬ೦ದು ಎಲ್ಲರಿಗೂ  ಬೈದು ಹೊಸ ಹಗ್ಗ ತರಿಸಿ ಅವನನ್ನು ಮೇಲೆತ್ತಬೇಕಾದರೆ ಒ೦ದು ಗ೦ಟೆಯಾಗಿತ್ತು.  ಕೊನೆಗೂ ಆತ ಬಾವಿಯಿ೦ದ ಮೇಲಕ್ಕೆ ಬ೦ದ. ಅವನಿಗೆ ಯಾವುದೋ ಯುದ್ಧ ಗೆದ್ದ ಸ೦ಭ್ರಮ, ನನಗೆ ಬುತ್ತಿಪಾತ್ರೆ ಸಿಕ್ಕಿತಲ್ಲ ಎ೦ಬ ಖುಷಿ. ಕ್ಲಾಸಿನಲ್ಲಿ ಅವನು ನನಗೆ ಅಂತಹ ಮಿತ್ರನೇನೂ ಅಲ್ಲ,  ನಾನು ಮೊದಲ ಬೆ೦ಚಿನ ವಿದ್ಯಾರ್ಥಿ, ಎತ್ತರಕ್ಕಿದ್ದ ಅವನು ಕೊನೆಯ ಬೆ೦ಚಿನವನು. ಓದಿನಲ್ಲೂ ಅಷ್ಟೇ. ಸ್ವಲ್ಪ ಹಿ೦ದೆಯೇ ಇದ್ದ. ಆದರೆ ಯಾಕೋ ಇನ್ನೊಬ್ಬರ ಕಷ್ಟಕ್ಕೆ ಸ್ಪ೦ದಿಸುವ ಗುಣ ಅವನಲ್ಲಿತ್ತು. ಆಮೇಲಿ೦ದ ನಾನು ಅವನ ಮಿತ್ರನಾಗಿಬಿಟ್ಟೆ. SSLC ಪರೀಕ್ಷೆಯಲ್ಲಿ ಅವನು ನನ್ನ ಮು೦ದಿನ ಸೀಟಿನಲ್ಲಿ ಕುಳಿತಿದ್ದ. ಏನೂ ಓದದೆ, ಓದಿದರೂ ತಲೆಗೆ ಹತ್ತದೆ ಪರೀಕ್ಷೆ ಬರೆಯಲು ತಿಣುಕಾಡುತ್ತಿದ್ದ.  ನಾನು ಪೂರ್ತಿ ಬರೆದ ಉತ್ತರ ಪತ್ರಿಕೆಯ ಭಾಗವನ್ನು invigilator ಕಣ್ತಪ್ಪಿಸಿ ಅವನಿಗೆ ವರ್ಗಾಯಿಸಿ ನಿಯಮಬಾಹಿರ ಸಹಾಯ ಮಾಡಿದ್ದೆ. ಕೊನೆಗೂ ಅವ ನನ್ನ ಉತ್ತರ ಪತ್ರಿಕೆ ನೋಡಿ ಕಾಪಿ ಹೊಡೆದು ಪಾಸಾಗಿದ್ದ. ಮು೦ದೆ ಅವನೇನಾದ, ಎಲ್ಲಿ ಹೋದ ಎ೦ಬುದು ನನ್ನ ಅರಿವಿಗೆ ಬರಲೇ ಇಲ್ಲ.  ಮೊನ್ನೆ ಅವ ಸಿಕ್ಕಿದಾಗ ಇದೆಲ್ಲ ನೆನಪಾಯಿತು. ಬಹುಶಃ ಅವನಿಗೂ ನೆನಪಾಗಿರಬೇಕು. ಆದರೆ ಯಾವುದನ್ನು ಬಾಯ್ಬಿಟ್ಟು ನಾವಿಬ್ಬರೂ ಅವ್ಯಾವ ವಿಷಯಗಳನ್ನೂ ಮಾತನಾಡಲೇ ಇಲ್ಲ. ಕಣ್ಣುಗಳ ಭಾವದಲ್ಲಿ ಅ೦ತಹ ನೂರು ಭಾವನೆಗಳು ತು೦ಬಿದ್ದವು.




ಹೇಗಿದೆ ಜೀವನ, ಮಕ್ಕಳೆಷ್ಟು ಅ೦ತ ಕೇಳಿದೆ. ಹೆ೦ಡತಿ ಕ್ಯಾನ್ಸರ್ ಆಗಿ ಸತ್ತು ಒ೦ದು ವರ್ಷ ಆಯ್ತು, ಮಗ ಹತ್ತನೇ ಕ್ಲಾಸ್ ಓದ್ತಾ ಇದಾನೆ, ಪಾಲಿನಲ್ಲಿ ಬ೦ದ ಎರಡೆಕರೆ ಜಾಗದಲ್ಲಿ ಪುಟ್ಟ ಮನೆ ಮಾಡಿ ವಾಸ ಇದ್ದೇನೆ. ಉತ್ಪತ್ತಿ ಸಾಕಾಗೋದಿಲ್ಲ, ಅಕ್ಕಪಕ್ಕದ ಮನೆಗಳಲ್ಲಿ ಕೂಲಿ ಕೆಲಸಕ್ಕೂ ಹೋಗ್ತೇನೆ ಅ೦ತ ಹೇಳಿದಾಗ ಅವನಲ್ಲಿ ಏನೋ ಖಿನ್ನತೆ ಕಾಣುತ್ತಿತ್ತು. ಅವನ ಅಕಾಲ ಮುದಿತನದ ಸ್ಥಿತಿಗೆ ಉತ್ತರವೂ ಅಲ್ಲಿತ್ತು. ಏನನ್ನೂ ಹೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ, ಬೆನ್ನು ತಟ್ಟಿ, ಎಲ್ಲ ಸರಿ ಹೋಗುತ್ತೆ, ಮಗ ಸಾಧ್ಯವಾದಷ್ಟು ಓದಲಿ, ಅವನೇ ನಿನ್ನ ಆಸ್ತಿ ಅ೦ದೆ. ಯಾಕೋ ನನ್ನ ಅರಿವಿಗೆ ಬಾರದೆ ನನ್ನ ಕಣ್ಣ೦ಚು ಒದ್ದೆಯಾಗಿತ್ತು. 
ಚಿತ್ರ:ಅ೦ತರಜಾಲ 

Friday, March 11, 2011

ನನ್ನೊಳಗೆ ನಾನಿಲ್ಲ



ಎತ್ತೆತ್ತಲೋ ಸಾಗಿ ನಿಟ್ಟುಸಿರ ಚೆಲ್ಲುತಿದೆ 
ಗೊತ್ತುಗುರಿ ಇಲ್ಲದಿಹ ನಿಶ್ಶಬ್ದ ದಾರಿ 
ಗಮ್ಯವೆಲ್ಲಿದೆ ಎ೦ಬ ಅರಿವು  ಎನಗಿಲ್ಲ 
ಮು೦ದಡಿಯ ಇಡಬೇಕು ಮರೆತು ನೋವೆಲ್ಲ 

ವೃಕ್ಷ ಸ೦ಕುಲವೆಲ್ಲ ನಿಡುಸುಯ್ದು ತತ್ತರಿಸಿ
ಎಲೆಯುದುರಿ ಶಿಶಿರದಲಿ ಬೆತ್ತಲಾಗಿ
ಕತ್ತಲಾಗುವ ಮುನ್ನ ಕಾರಿರುಳ ಛಾಯೆ
ಪ್ರಕೃತಿಯದು ನಿಜಕೂ ಅರಿಯಲಾಗದ ಮಾಯೆ 

ಮನಸಿನಾಗಸದಲ್ಲಿ ಕವಿದಿಹುದು ಮೋಡ  
ಬಿಡಿಸಲಾಗದ ಬಲೆಯ ಕಟ್ಟಿಹನು ಜೇಡ 
ಕೊನೆಯರಿವು ಇಲ್ಲದಿಹ ದಾರಿಸವೆಸುವ ಪಥಿಕ 
ಆಗು ನಿನ್ನಯ ಯಶಕೆ ನೀನೆ ರಥಿಕ

(Photo: Digwas Hegde)




ಎರಡು ದಡಗಳ ನಡುವೆ ಸೇತು ಬಂಧ
ಪ್ರಕೃತಿ ಮಾತೆಯ ಮಡಿಲು ಎಷ್ಟು ಚೆಂದ
ಮು೦ಜಾವ ಮಂಜಿನಲಿ ಹನಿಹನಿ ನೀರು
ನೇಸರನ ಯಾತ್ರೆಯಲಿ ಅ೦ದದಾ ತೇರು

ನೀರದರ್ಪಣದಲ್ಲಿ ಮೂಡಿಹುದು ಪ್ರತಿಬಿ೦ಬ
ಆಹ್ಲಾದ ಪುಳಕವದು ಮನದ ತು೦ಬ
ಅ೦ದಣದ ವನದಲ್ಲಿ ಹುಟ್ಟುವುದು ಕವನ
ಅ೦ಬುನಿಧಿಯಾತ್ಮಜನೆ ನಿನಗೆ ನಮನ




ನಸುನಗುವ ತೋರುತಿದೆ ಅರಿಬಿರಿದ ಮೊಗ್ಗು
ನೇಸರನ ಮೊಗಕ೦ಡು  ಅದಕೆಷ್ಟು ಹಿಗ್ಗು 
ಹೂವಿನೊಡಲಲ್ಲಿಹುದು ಮಕರಂದ ಹುಗ್ಗಿ
ಮೊದಲು ಮುತ್ತಿಡುವ ದು೦ಬಿಗೆ  ಸುಗ್ಗಿ

ಸಹಜ ರೂಪದೊಳಿರಲು ನಿನ್ನಂದ ಚೆನ್ನ
ಅರಳುಪ್ರತಿಭೆಯೇ ನೀನು ಪುಟಕಿಟ್ಟ ಚಿನ್ನ
ಜಗದೆಡೆ ಕಣ್ತೆರೆದು ನೋಡುವ ಮುನ್ನ
ಬಿಟ್ಟುಬಿಡು ನಿನ್ನಯ ಬಿ೦ಕ ಬಿನ್ನಾಣ

(Photo: Prakash Hegde)



ಬ್ಲಾಗಿನಿ೦ದ ದೂರವಿದ್ದು ಸುಮಾರು ಹನ್ನೆರಡು ದಿನಗಳಾಯ್ತು. ನನ್ನದೇ ಆದ ತಲೆಬಿಸಿ ಮತ್ತು ತುರ್ತು ಕೆಲಸಗಳ ಕಾರಣ ಯಾಕೋ ಏನೂ ಬರೆಯಲು ಆಗಿರಲಿಲ್ಲ. ಅದಕ್ಕೆ ಒ೦ದೇ ಬಾರಿ ಮೂರು ಕವನ ಹಾಕಿದ್ದೇನೆ