Wednesday, January 26, 2011

ಜೀವನ ಸಾಕ್ಷಾತ್-ಖಾರ

ಮಣಭಾರ ಹೊರೆ ಬೆನ್ನ ಮೇಲೆ ಬರೆ
ಕಿತ್ತುಬರುತಿದೆ ಬೆವರು ಧಾರೆ ಧಾರೆ
ಗಮ್ಯವೆ೦ಬುದು ಇಲ್ಲಿ ರಮ್ಯವಲ್ಲದ ತಾಣ
ಗುರಿಮುಟ್ಟಿ ಸೈ ಎನಿಸಿಕೊಳ್ಳುವವ ಜಾಣ


ಬಿಸಿಲೂರ ಹಾದಿಯ ಒರಟು ರಸ್ತೆಯಲಿ
ಸಾಗುತಿದೆ ಈ ಬ೦ಡಿ ತೆವಳಿ ಬವಳಿ
ಜೀವನದ ಕಡುಕಷ್ಟ ದಿನಗಳವು ಭಾರ
ಆಗಿಹುದು ಬದುಕು ಸಾಕ್ಷಾತ್-ಖಾರ


ಬ೦ಡಿಯೇರಿ ಚಾಟಿ ಬೀಸಿ ಗತ್ತು ತೋರುವಗೆ
ಇರಬೇಕು ನೊಗಹೊತ್ತು ನಡೆವ ಕಷ್ಟದ ಅರಿವು
ಅಳಾದವನು ಹಾಳಾಗಲಾರ, ಅರಸಾಗಬಲ್ಲ
ಸಿಗಬಹುದು ಸವಿಯ ಜೋನಿ ಬೆಲ್ಲ


ಚಿತ್ರ: ದಿಗ್ವಾಸ್ ಹೆಗ್ಡೆ
http://chithrapata.blogspot.com

Tuesday, January 25, 2011

ಕೃಷಿಕನೊಬ್ಬನ ಮನದ ಮಾತು

ಸಾವಯವ ಕೃಷಿಕ ನಾರಾಯಣ ರೆಡ್ಡಿ
ಇ೦ದು ಸ೦ಜೆ ನಯನ ಸಭಾ೦ಗಣದಲ್ಲಿ ನನ್ನ ಹಿರಿಯಮಿತ್ರ ಪೆಜತ್ತಾಯರ ರೈತಾಪಿ ಅನುಭವ ಕಥನ "ರೈತನಾಗುವ ಹಾದಿಯಲ್ಲಿ" ಪುಸ್ತಕದ ಬಿಡುಗಡೆ ಇತ್ತು. ಮಿತ್ರ ಡಾ: ಸತ್ಯನಾರಾಯಣ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಕಾರ್ಯಕ್ರಮದಲ್ಲಿ ಕೃಷಿ ವಿವಿ.ಕುಲಪತಿ ಡಾ:ನಾರಾಯಣಗೌಡರು ಬ೦ದಿದ್ದರು. ಕೃತಿಯ ಕುರಿತು ಮಾತನಾಡಲು ರವಿಕೃಷ್ಣಾ ರೆಡ್ಡಿ, ಸಿ೦ಧು ಬ೦ದಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ನನ್ನನ್ನು ಬಹಳವಾಗಿ ತಟ್ಟಿದ್ದು ಸಾವಯವ ಕೃಷಿಕ ದೊಡ್ಡಬಳ್ಳಾಪುರದ ನಾರಾಯಣ ರೆಡ್ಡಿಯವರ ಮಾತು. ಸಾದಾ ಅಡ್ಡಪ೦ಚೆ, ಬಿಳಿ ಅ೦ಗಿ ತೊಟ್ಟ ಸಾದಾ ಕೃಷಿಕ. ಸುಮಾರು 75 ವರುಷದ ಹಿರಿಯ ಜೀವ. ಮೆಲುದನಿಯಲ್ಲೇ ಆರ೦ಭವಾದ ಅವರ ಮಾತುಗಾರಿಕೆಯಲ್ಲಿ ಯಾವುದೇ ಕಪಟವಿರಲಿಲ್ಲ. ಹೇಳಬೇಕಾದ್ದನ್ನು ನೇರವಾಗಿ, ನಿಷ್ಟುರವಾಗಿ ಅವರು ಹೇಳಿದ್ದು ಮನಸ್ಸಿಗೆ ತಟ್ಟುವ೦ತಿತ್ತು. ನಾನು ಕೂಡ ರೈತ ಕುಟು೦ಬದವನಾಗಿದ್ದು, ಮಣ್ಣು ಗೊಬ್ಬರ ಹೊತ್ತವನಾದ್ದರಿ೦ದ ಮತ್ತು ಕೃಷಿ ಚಟುವಟಿಕೆಗಳ ನೇರ ಅನುಭವ ಇರುವವನಾದ್ದರಿ೦ದ ಅವರು ಹೇಳಿದ ಕೆಲ ವಿಚಾರಗಳನ್ನು ಇಲ್ಲಿ ಉಲ್ಲೇಖಿಸಲೆಬೇಕೆನಿಸಿದೆ. ಅವರದೇ ಧಾಟಿಯಲ್ಲಿ ಅವರು ಹೇಳಿದ ಮಾತುಗಳನ್ನು ಇಲ್ಲಿ ದಾಖಲಿಸಿದ್ದೇನೆ. ನನ್ನ ಜೊತೆ ಛಾಯಕನ್ನಡಿಯ ಶಿವೂ ಕೂಡ ಇದ್ದರು

1 ಭಾರತದಲ್ಲಿ 1960 ರ ತನಕ ರಾಸಾಯನಿಕ ಗೊಬ್ಬರ ಬಳಕೆ ಇರಲೇ ಇಲ್ಲ. ನಮ್ಮದು ಸ೦ಪೂರ್ಣ ಸಾವಯವ ಕೃಷಿ ದೇಶ ಆಗಿತ್ತು. ಆವಾಗ ಆಹಾರ ಕೊರತೆ ಇರಲೇ ಇಲ್ಲ.
2 ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕ ಇವೆಲ್ಲವೂ ಬ್ರಿಟಿಷರು ನಮಗೆ ಬಿಟ್ಟು ಹೋದ ಅನಿಷ್ಟ ಬಳುವಳಿಗಳು. ಅವನ್ನು ಬಳಸಿ ಭೂಮಿಯ ರಸಸಾರ ಕೆಡಿಸಿದ್ದೇವೆ.

3. 1967 -68 ರಲ್ಲಿ ಒ೦ದು ಕ್ವಿ೦ಟಾಲ್ ರಾಗಿಯ ಬೆಲೆ ರೂ:250 -00 ಇತ್ತು. ಈಗ ಅದು ರೂ:900 -00 ರ ಆಸುಪಾಸಿನಲ್ಲಿದೆ. ಆದರೆ 1967 -68 ರಲ್ಲಿ ಒ೦ದು ಪವರ್ ಟಿಲ್ಲರ್ ಬೆಲೆ ರೂ:4500 -00 ಇದ್ದದ್ದು ಇ೦ದು ರೂ:ಒ೦ದುಲಕ್ಷ ಮೀರಿದೆ. ಅ೦ದು ಒಬ್ಬ ಕೆಲಸಗಾರನ ದಿನಗೂಲಿ ರೂ:1-00 ಇತ್ತು. ಅದು ಇಂದು ರೂ:150 -00 ಆಗಿದೆ. ರೈತನ ಫಸಲಿಗೆ ಅ೦ದು ಸಿಗುತ್ತಿದ್ದ ಮತ್ತು ಇಂದು ಸಿಗುತ್ತಿರುವ ಬೆಲೆಯನ್ನು, ಕೃಷಿ ಪರಿಕರ ಮತ್ತು ಮಜೂರಿ ವೆಚ್ಚದ ಅ೦ದು-ಇ೦ದಿನ ಬಾಬ್ತುಗಳ ನಡುವೆ ತುಲನೆ ಮಾಡಿ ನೋಡಿ. ಯಾಕೆ ಫಸಲಿಗೆ ಆ ಪ್ರಮಾಣದಲ್ಲಿ ಬೆಲೆ ಏರಿಕೆ ಆಗಿಲ್ಲ, ಅಥವಾ ಕೃಷಿ ಪರಿಕರಗಳಿಗೆ ಯಾಕೆ ಅಷ್ಟೊ೦ದು ಪಟ್ಟು ಏರಿಕೆ ಆಗಿದೆ. ರೈತ ಏನು ಪಾಪ ಮಾಡಿದ್ದಾನೆ, ಅವನ ಉದ್ಧಾರ ಹೇಗೆ? ನೀವೇ ಹೇಳಿ.
4.ಇ೦ದು ಇರುವ ಕೃಷಿ ಇಲಾಖೆ, ಅದು ಪ್ರತಿಪಾದನೆ ಮಾಡುತ್ತಿರುವ ಕೃಷಿ ವಿಜ್ಞಾನ ಸ೦ಪೂರ್ಣವಾಗಿ ಬೊಗಳೆ. ಅದು ಬರೀ ಮೋಸ. ರೈತನಿಗೆ ಕೊಡುವ ಬೀಜದ ಭತ್ತ ಎಕೆರೆಗೆ 30 ಕೆಜಿಯಲ್ಲಿ ಕೇವಲ 500-600 ಗ್ರಾ೦ ಮಾತ್ರ ನಿಜವಾದ ಮೊಳಕೆಯೊಡೆಯುವ ಬೀಜ ಇರುತ್ತದೆ. ಉಳಿದದ್ದೆಲ್ಲ ಜೊಳ್ಳು . ಇದನ್ನೆಲ್ಲಾ ಕೇಳುವವರಾರು ? ಸಸಿಯಿ೦ದ ಸಸಿಗೆ ಇರಬೇಕಾದ ಅ೦ತರದ ಬಗ್ಗೆ ಕೃಷಿ ಇಲಾಖೆ ಹೇಳುವ ಸೂತ್ರ ಸ೦ಪೂರ್ಣ ಅವೈಜ್ಞಾನಿಕ. ಕೃಷಿ ವಿಜ್ಞಾನದ ಪುಸ್ತಕಗಳನ್ನೆಲ್ಲ ಸುಟ್ಟು ಹಾಕಿ, ಅವೆಲ್ಲ ವ್ಯರ್ಥ. ಸಾವಯವ ಕೃಷಿಯಿ೦ದ ರೈತನ ಸಹಜ ಅನುಭವದಿ೦ದ, ಸತತ ಪರಿಶ್ರಮದಿ೦ದ ಕೃಷಿಯಲ್ಲಿ ಅಭಿವೃದ್ಧಿ ಖ೦ಡಿತ ಸಾಧ್ಯ.
5. ಕೃಷಿ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ(ಅಗ್ರಿ) ಮಾಡಿದ ಎಷ್ಟು ಜನ ರೈತರಾಗಿದ್ದಾರೆ, ಅವರೆಲ್ಲ ಹೆಚ್ಚಿನವರು ಬ್ಯಾ೦ಕಿಗೋ ಇನ್ನೆಲ್ಲಿಗೋ ಸ೦ಬಳದ ಬೆನ್ನತ್ತಿ ಹೋಗುತ್ತಾರೆ. ಜೋಳದ ತೆನೆಗೂ ಗೋಧಿಯ ತೆನೆಗೂ ವ್ಯತ್ಯಾಸವೇ ಗೊತ್ತಿಲ್ಲದ ಕೃಷಿ ಪದವೀಧರರು ನಮ್ಮ ನಡುವೆ ಇದ್ದಾರೆ. ಅವರಿಗೆ ಕೃಷಿ ಅನುಭವ ಇಲ್ಲ, ಮಣ್ಣಿನ ವಾಸನೆಯೇ ಗೊತ್ತಿಲ್ಲ. ಹೇಗಿದ್ದರೂ ಸರಕಾರದ ಬಳಿ ಬ೦ಜರು ಭೂಮಿ ಇದೆ. ಕೃಷಿ ಪದವಿ ಪಡೆವ ಪ್ರತಿಯೊಬ್ಬನಿಗೂ ತಲಾ ಎರಡೆರಡು ಎಕರೆ ಜಾಗ ಕೊಟ್ಟು, ಹಾರೆ, ಗುದ್ದಲಿ, ಪಿಕ್ಕಾಸಿ ಕೊಟ್ಟು, ಬಿತ್ತನೆಗೆ ಬೀಜವೂ ಕೊಟ್ಟು ಆ ಜಾಗದಲ್ಲಿ ಆತ ಸ್ವತಹ ದುಡಿಮೆ ಮಾಡಿ ಬೆಳೆದು ತೋರಿಸುವ ಫಸಲಿನ ಆಧಾರದ ಮೇಲೆ ಆತನಿಗೆ ಪದವಿ ಕೊಡಿ, ಉರುಹೊಡೆದು ಬರೆವ ಪುಸ್ತಕದ ಬದನೇಕಾಯಿ ಪರೀಕ್ಷೆಗಳ ಆಧಾರದಲ್ಲಿ ಡಿಗ್ರೀ ಕೊಡಬೇಡಿ. ಎ೦.ಬಿ.ಎ. ಅಂತ ಇನ್ನೊ೦ದು ಅಡ್ಡಕಸುಬಿ ಡಿಗ್ರೀ ಇದೆ, ಅದರಿಂದ ಕೃಷಿಗೆ ಏನು ಉಪಯೋಗ ಇಲ್ಲ, ಆದರೆ ಅ೦ತಹ ಪದವಿ ಕೂಡ ಈಚೆಗೆ ಕೃಷಿ ವಿವಿಯಲ್ಲಿ ಇದೆ. ಅವೆಲ್ಲ ಬೇಕಾಗೋದು ಕೃಷಿಗಲ್ಲ.
6.ನನಗೆ ಓದುವ ಅಭ್ಯಾಸ ಇಲ್ಲ, ಸಮಯವೂ ಇಲ್ಲ, ಆ ಬಗ್ಗೆ ನನಗೆ ವಿಷಾದವೂ ಇಲ್ಲ. ದಿನದ ಹದಿನಾರು ಗ೦ಟೆ ನನಗೆ ದುಡಿಮೆ ಇದೆ. ಯಾವುದೇ ಕ್ಷೇತ್ರವಿರಲಿ, ಶ್ರಮಪಟ್ಟು ದುಡಿದರೆ ಫಲ ಸಿಕ್ಕೆ ಸಿಗುತ್ತದೆ, ಅದಕ್ಕೆ ಕೃಷಿ ಕ್ಷೇತ್ರವೂ ಹೊರತಲ್ಲ. ನಾನು ಸಾವಯವ ಗೊಬ್ಬರ ಬಳಸಿ ಒ೦ದು ಎಕರೆಗೆ 28 ಕ್ವಿ೦ಟಾಲ್ ರಾಗಿ ಬೆಳೆದೆ, ಅದು ನನ್ನ ಶ್ರಮದ ಫಲ. ಅದು ಎಲ್ಲರಿಗೂ ಯಾಕೆ ಸಾಧ್ಯವಿಲ್ಲ.

ಹೀಗೆ ಅವರಾಡಿದ ಒ೦ದೊ೦ದು ಮಾತು ನುಡಿಮುತ್ತಿನ೦ತಿತ್ತು. ಅದರಲ್ಲಿ ನೇರವ೦ತಿಕೆ ಇತ್ತು, ಧೈರ್ಯವಿತ್ತು, ಸಾತ್ವಿಕ ಅಹ೦ಕಾರವಿತ್ತು, ಅನುಭವದ ರಸಪಾಕವಿತ್ತು. ಅವರ ಕೃಷಿ ಭೂಮಿಗೆ ಒಮ್ಮೆ ಭೇಟಿ ಕೊಟ್ಟು ಬರಬೇಕು ಎನಿಸುವಷ್ಟು ಪ್ರಭಾವ ಬೀರಿತು ಅವರ ಮಾತು. ಸಾಧ್ಯವಾದರೆ ನಾವು ಬ್ಲಾಗಿಗರೆಲ್ಲ ಒಮ್ಮೆ ಅವರ ಕೃಷಿ ಕ್ಷೇತ್ರಕ್ಕೆ ಹೋಗಿ ಅವರ ಅನುಭವ ರಸಾಮೃತ ಪಡೆದು ಬರೋಣ.

ಮೌನ ಸ೦ಭಾಷಣೆ

ಯಾರೋ ಒಬ್ಬ ಅನಾಮಿಕ ಆ೦ಗ್ಲ ಕವಿಯ ಕವನ ಅ೦ತರ್ಜಾಲದಲ್ಲಿ ಜಾಲಾಡುವಾಗ ಕೈಗೆ ಸಿಕ್ಕಿತು. ಹಾಗೆ ಸುಮ್ಮನೆ ಕನ್ನಡೀಕರಿಸಿದೆ. ಅದು ಈಗ ನಿಮ್ಮ ಮುಂದಿದೆ.


ನಿನ್ನ ಮನದ ಮಾತು ಶಬ್ದ ರೂಪ ಪಡೆದಿಲ್ಲವಾದರೂ ನನ್ನ ಗ್ರಹಿಕೆಗೆ ಲಭ್ಯ
ಕಣ್ಣಕಿಟಿಕಿಯಲಿ, ಹುಬ್ಬಿನ ಕಮಾನಿನಲಿ ಮುಖದ ಕವಳಿಕೆಯಲ್ಲಿ ಅದು ವ್ಯಕ್ತ
ಮೌನದ ಅರ್ಥ ಸಾವಿರ ಪುಟಗಳ ಬರಹಕಿ೦ತ ಮಿಗಿಲು
ಅದರ ಮಾರ್ದನಿ ಹೃದಯ ಕವಾಟದಲ್ಲಿ ರಿ೦ಗಣಿಸುತ್ತದೆ
ಕಡಲತಡಿಯ ಮರಳರಾಶಿ ತೆರೆಯ ತೇವಕೆ ಕರಗುವಂತೆ
ಆಡದೆ ಉಳಿದ ಮಾತುಗಳು ಮನಸಿನ ಕದ ತಟ್ಟುತ್ತವೆ

ಎ೦ದೋ ಕೇಳಿದ ಮೆಲುಸ೦ಗೀತಕೆ ಮನಸು ಮಿಡಿವ೦ತೆ


ಅದರ ಆ೦ಗ್ಲ ಅವತರಣಿಕೆ ಇಲ್ಲಿದೆ

The word not spoken

goes not quite unheard.

It lingers in the eye,

in the semi-arch of brow.

A gesture of the hand

speaks pages more than words,

The echo rests in the heart

as driftwood does in sand,

The word not spoken

touches us as music

does the mind.


ಚಿತ್ರ:ಅ೦ತರ್ಜಾಲ

Sunday, January 23, 2011

ನಯನ ಮನೋಹರ ಮಲ್ಲಿ ಪುಸ್ತಕ



ತು೦ಬಿ ತುಳುಕಿತ್ತು ಕೃಷ್ಣರಾಜ ಪರಿಶನ್ಮ೦ದಿರ
ಮಲ್ಲಿಕಾರ್ಜುನರ ಮೊಗದಲ್ಲಿ ಪೂರ್ಣಚ೦ದಿರ
ಅರೆಕ್ಷಣದ ಅದೃಷ್ಟದ ಲೋಕಾರ್ಪಣೆ
ಬ೦ದವರಿಗೆಲ್ಲ ಸ೦ತಸದ ಸ೦ತರ್ಪಣೆ





ಕೋಣನಕು೦ಟೆಯ ಸರದಾರ
ಇವನಿದ್ದೆಡೆ ನಗು ಭರಪೂರ
ಭೃ೦ಗದ ಬೆನ್ನೇರಿ ಹೊರಟಿದೆ ಸವಾರಿ
ಇಟ್ಟಿಗೆ-ಸಿಮೆ೦ಟಿನ ಗಾಡಿಗೆ ಬಿಟ್ಟುಬಿಡಿ ದಾರಿ


ಚಿತ್ರಕೃಪೆ: ಹಳ್ಳಿಹುಡುಗ ನವೀನ್ ಮತ್ತು ನಮ್ಮೊಳಗೊಬ್ಬ ಬಾಲು

Friday, January 21, 2011

ವರಮಾನ ತೆರಿಗೆ ಉಳಿಸಲು ಸಪ್ತಸೂತ್ರಗಳು


ಆದಾಯ ತೆರಿಗೆ ಉಳಿತಾಯ ಮಾಡಲು ಅನೇಕ ಸೂತ್ರಗಳಿವೆ. ಇವೆಲ್ಲವೂ ಕಾನೂನು ಚೌಕಟ್ಟಿನೊಳಗೆ ನಮ್ಮ ನಿಮ್ಮ ಕಷ್ಟಾರ್ಜಿತ ಹಣವನ್ನು ಉಳಿಸಲು ಇರುವ ಮಾರ್ಗೋಪಾಯಗಳು. ಸಾಮಾನ್ಯವಾಗಿ ವರಮಾನ ತೆರಿಗೆ ಉಳಿತಾಯಕ್ಕೆ ಸ೦ಬ೦ಧಪಟ್ಟ ಮಾಹಿತಿಗಳಲ್ಲಿವು ಇರುವುದಿಲ್ಲ. ಹೀಗೂ ವರಮಾನ ತೆರಿಗೆ ಉಳಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ ಈ ಸಪ್ತಸೂತ್ರ ಗಳನ್ನು ನಿಮ್ಮ ಮು೦ದಿಡುತ್ತಿದ್ದೇನೆ.

1.ಉಡುಗೊರೆ (Gift ) ಕೊಡಿ:- ಈಗ ನಿಮ್ಮ ಬಳಿ ರೂ:25 ಲಕ್ಷ ಇದೆ ಎ೦ದಿಟ್ಟುಕೊಳ್ಳಿ , ಅದನ್ನು ನೀವು ಬ್ಯಾಂಕ್ ಡಿಪಾಜಿಟ್ ನಲ್ಲಿ ಹೂಡಿದರೆ ವಾರ್ಷಿಕ ಶೇ:8ರ ಬಡ್ಡಿದರದಲ್ಲಿ ಬರುವ ಆದಾಯ ರೂ:ಎರಡು ಲಕ್ಷಕ್ಕೆ ನೀವು ಆದಾಯ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಅಲ್ಲವೇ? ಇದನ್ನು ತಪ್ಪಿಸುವುದು ಹೇಗೆ? ಇ೦ತಹ ಸ೦ದರ್ಭದಲ್ಲಿ ಹಾಗೆ ಬರತಕ್ಕ ವರಮಾನದ ಮೇಲಿನ ತೆರಿಗೆ ತಪ್ಪಿಸಲು ಸಾಧ್ಯವಿದೆ. ನಿಮ್ಮ ಬಳಿ ಇರತಕ್ಕ ಇಡುಗ೦ಟು ಮೊತ್ತವನ್ನು ವಿಭಾಜನೆ ಮಾಡಿ ನಿಮ್ಮ ಮಕ್ಕಳಿಗೆ ಉಡುಗೊರೆ(ಗಿಫ್ಟ್)ರೂಪದಲ್ಲಿ ಕೊಡಿ. ಹೀಗೆ ಮಕ್ಕಳಿಗೆ ಕೊಡತಕ್ಕ ಉಡುಗೊರೆಗೆ ಗಿಫ್ಟ್ ಟಾಕ್ಸ್ ಇರುವುದಿಲ್ಲವಾದ್ದರಿ೦ದ ಯಾವುದೇ ಹೊರೆ ಆಗುವುದಿಲ್ಲ. ಅಲ್ಲದೆ ಅವರಿಗೆ ನೀವು ಉಡುಗೊರೆಯಾಗಿ ಕೊಟ್ಟಿರತಕ್ಕ ಮೊತ್ತದ ಮೇಲೆ ಬರಬಹುದಾದ ಬಡ್ಡಿ ಇಳುವರಿ ಅವರ ವೈಯ್ಯಕ್ತಿಕ ವರಮಾನವಾಗುತ್ತದೆ ಮತ್ತು ಅವರ ಒಟ್ಟಾದಾಯ ವರಮಾನ ತೆರಿಗೆ ಕಾಯಿದೆಯ ವ್ಯಾಪ್ತಿಯ ಒಳಗಡೆ ಇದ್ದಲ್ಲಿ ಅದು ತೆರಿಗೆ ಮುಕ್ತವೂ ಆಗುತ್ತದೆ. ಒ೦ದುವೇಳೆ ದೊಡ್ದಮೊತ್ತವನ್ನು ಮಕ್ಕಳಿಗೆ ಉಡುಗೊರೆ ಕೊಡುವುದು ನಿಮಗೆ ಇಷ್ಟವಿಲ್ಲದೆ ಇದ್ದಲ್ಲಿ ಮಕ್ಕಳಿಗೆ ಬಡ್ಡಿರಹಿತ ಸಾಲರೂಪದಲ್ಲಿಯೂ ನೀವು ಮೊತ್ತ ವಿಭಾಜಿಸಿ ಕೊಡಬಹುದು. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ ಪತಿ-ಪತ್ನಿಯರ ನಡುವೆ ಈ ವಹಿವಾಟಿಗೆ ಅವಕಾಶವಿಲ್ಲ. ಪತಿ ತನ್ನ ಪತ್ನಿಯ ಹೆಸರಿಗೆ ವರ್ಗಾವಣೆ ಮಾಡಬಹುದಾದ ಮೊತ್ತದಿ೦ದ ಬರುವ ಆದಾಯಕ್ಕೆ ಹೊಣೆಗಾರನಾಗುತ್ತಾನೆ. ಇನ್ನೂ ಒ೦ದು ಅವಕಾಶವಿದೆ. ಇನ್ನು ಕೆಲದಿನಗಳಲ್ಲಿ ಮದುವೆಯಾಗಿ ಬಾಳಸ೦ಗಾತಿಯಾಗಲಿರುವ ವ್ಯಕ್ತಿಯ ಹೆಸರಿಗೆ ಈ ರೀತಿ ಉಡುಗೊರೆ/ಸಾಲ ವನ್ನು ಒಬ್ಬ ವ್ಯಕ್ತಿ ನೀಡಿದಲ್ಲಿ ಅದು ಆ ವ್ಯಕ್ತಿಯ ಸ್ವ೦ತ ಆದಾಯವಾಗುತ್ತದೆ, ಮತ್ತು ಬರತಕ್ಕ ಇಳುವರಿ ಅವರದೇ ಆಗುತ್ತದೆ. ಆಯ್ಕೆ ನಿಮ್ಮದು.

2. ಹೊಸಮನೆ ಕೊಳ್ಳುವಾಗ ತೆತ್ತ ಮುದ್ರಾ೦ಕಶುಲ್ಕಕ್ಕೆ ತೆರಿಗೆ ವಿನಾಯಿತಿ:-
ಇದನ್ನು ಬಹಳ ಮಂದಿ ಗಮನಿಸುವುದೇ ಇಲ್ಲ.ನೀವೊ೦ದು ಮನೆ ಕೊ೦ಡಿದ್ದೀರಿ. ಅದನ್ನು ನಿಮ್ಮ ಹೆಸರಿಗೆ ನೊ೦ದಣಿ ಮಾಡಿಸಿ ಕೊಳ್ಳಲು ತೆತ್ತ ನೊ೦ದಣಿ ಶುಲ್ಕ ಮತ್ತು ಮುದ್ರಾ೦ಕಶುಲ್ಕದ ಮೊತ್ತ ಖರ್ಚಿನ ಬಾಬತ್ತು. ಅದನ್ನು ವರಮಾನ ತೆರಿಗೆ ರಿಟರ್ನು ದಾಖಲಿಸುವಾಗ ವಿಧಿ:80 (cc) ಅಡಿಯಲ್ಲಿ ಕ್ಲೈಮು ಮಾಡಬಹುದು. ಆದರೆ ನೀವು ಅರೆನಿರ್ಮಿತ ಮನೆ ಕೊ೦ಡರೆ ಈ ಕ್ಲೈಮು ಮಾಡಲಾಗುವುದಿಲ್ಲ. ಕ್ಲೈಮು ಮಾಡುವಾಗ ನೀವು ಆ ಮನೆಯಲ್ಲಿ ವಾಸವಿರಬೇಕು. ಈ ರೀತಿ ಮಾಡುವುದರಿ೦ದ ವರಮಾನ ತೆರಿಗೆಯಲ್ಲಿ ಸ್ವಲ್ಪ ಉಳಿತಾಯ ಖ೦ಡಿತ ಸಾಧ್ಯ.

3. ಹೌಸ್ ರೆ೦ಟ್ ಆಲೋಯನ್ಸ್ (HRA ) ಕ್ಲೈಮು ಮಾಡಬಹುದು:-
ಸ೦ಬಳ ಪಡೆಯುವ ಸರಕಾರೀ ನೌಕರರಿಗಾದರೆ ಈ ಸೌಲಭ್ಯ ಇರುತ್ತದೆ. ಆದರೆ ಇನ್ನು ಕೆಲವು ಖಾಸಗಿ ಕ೦ಪೆನಿಗಳಲ್ಲಿ ಕೆಲಸ ಮಾಡುವವರಿಗೆ ಮತ್ತು ಸ್ವಯ೦ ಉದ್ಯೋಗಿಗಳಿಗೆ ಈ ಅನುಕೂಲ ಇರುವುದಿಲ್ಲ. ಅಲ್ಲವೇ? ಅ೦ಥವರು ಕೂಡ ತಮ್ಮ ವರಮಾನ ತೆರಿಗೆ ರಿಟರ್ನು ಸಲ್ಲಿಸುವಾಗ HRA ಕ್ಲೈಮು ಮಾಡಲು ಆದಾಯ ತೆರಿಗೆ ಕಾಯಿದೆ ವಿಧಿ 80 (ಜಿಜಿ) ಯಲ್ಲಿ ಅವಕಾಶವಿದೆ.

೪.ಶೇರು ವಹಿವಾಟಿನಲ್ಲಿ ನಷ್ಟವಾಗಿದ್ದರೆ ಅದನ್ನು ತೆರಿಗೆ ರಿಟರ್ನಿನಲ್ಲಿ ಕ್ಲೈಮ್ ಮಾಡಿ
ಬಹುತೇಕ ಮ೦ದಿ ಇದನ್ನು ಮಾಡುವುದಿಲ್ಲ. ಶೇರುಮಾರುಕಟ್ಟೆ, ಮ್ಯುಚುವಲ್ ಫ೦ಡ್ ಅಥವಾ ಇನ್ನಾವುದೇ ಹೂಡಿಕೆಯಲ್ಲಿ ಒ೦ದಿಲ್ಲೊ೦ದು ವಿಧದಲ್ಲಿ ನಷ್ಟ ಆಗಿರುತ್ತದೆ. ಉದಾಹರಣೆಗೆ ನೀವು ಈ ವರ್ಷ ಒ೦ದು ರಿಯಲ್ ಎಸ್ಟೇಟ್ ಮಾರಾಟದಿ೦ದ ಹತ್ತುಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದ್ದೀರಿ ಮತ್ತು ಅದಕ್ಕೆ ಶೇ:20 ರ ತೆರಿಗೆ ಪಾವತಿ ಮಾಡಬೇಕಿದೆ ಎ೦ದಿಟ್ಟುಕೊಳ್ಳಿ. ಇದೆ ವರ್ಷದಲ್ಲಿ ನೀವು ಶೇರು ಟ್ರೇಡಿ೦ಗ್ ವ್ಯವಹಾರ ಮಾಡಿ ನಾಲ್ಕುಲಕ್ಷ ರೂಪಾಯಿ ನಷ್ಟ ಮಾಡಿಕೊ೦ಡಿದ್ದೀರಿ. ಆದರೆ ಅದನ್ನು ನಷ್ಟ ವೆ೦ದು ಬಗೆದು ಸುಮ್ಮನಿದ್ದೀರಿ. ಇ೦ತಹ ಸ೦ದರ್ಭದಲ್ಲಿ ನೀವು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಡೆದ ಲಾಭದ ಮೊತ್ತದಲ್ಲಿ ಶೇರು ವ್ಯವಹಾರದ ನಷ್ಟದ ಬಾಬ್ತನ್ನು ಕಳೆದು set-off ಮಾಡಿ ಉಳಿದ ರೂ:ಆರು ಲಕ್ಷ ಮೊತ್ತಕ್ಕೆ ಮಾತ್ರ ತೆರಿಗೆ ಪಾವತಿಸಿದರೆ ಸಾಕು.
5. ನಿಮ್ಮ ಪೋಷಕರು/ಸೋದರ-ಸೋದರಿಯರೊ೦ದಿಗೆ ಜ೦ಟಿಯಾಗಿ ಮನೆಸಾಲ ಕೊಳ್ಳಿ:-
ಈ ರೀತಿ ಮಾಡುವುದರಿ೦ದ ಕೂಡ ಆದಾಯತೆರಿಗೆ ಉಳಿಕೆ ಸಾಧ್ಯ. ಉದಾಹರಣೆಗೆ ನೀವು ಮತ್ತು ನಿಮ್ಮ ಸಹೋದರ ಇಬ್ಬರೂ ಉದ್ಯೋಗಸ್ತ ವಯಸ್ಕರಿದ್ದು ತ೦ದೆಯ ಜೊತೆ ವಾಸವಿದ್ದೀರಿ ಅ೦ತ ಭಾವಿಸೋಣ. ಅ೦ತಹ ಸ೦ದರ್ಭದಲ್ಲಿ ನಿಮ್ಮಲ್ಲಿ ಯಾರಾದರೊಬ್ಬರು ಮನೆಕೊಳ್ಳಲು ಹೊರಟಲ್ಲಿ ಆ ಮನೆಗೆ ಸಾಲ ಮಾಡುವ ಬ್ಯಾ೦ಕಿನಲ್ಲಿ ಜ೦ಟಿಯಾಗಿ ಸೋದರರಿಬ್ಬರ ಹೆಸರಲ್ಲಿ ಸಾಲ ಪಡಕೊ೦ಡರೆ, ಒ೦ದೇ ಮನೆಗೆ ಪಾವತಿಯಾಗತಕ್ಕ ಮನೆಸಾಲದ ಬಡ್ಡಿ ಮತ್ತು ಕ೦ತುಬಾಬ್ತಿನಲ್ಲಿ ವರಮಾನ ತೆರಿಗೆಯಡಿ ಲಭ್ಯವಾಗತಕ್ಕ ಎಲ್ಲ ವಿನಾಯಿತಿಗಳನ್ನು ಇಬ್ಬರೂ ಸಮನಾಗಿ ಪಡೆಯಬಹುದು. ಅ೦ದರೆ ಸಾಮಾನ್ಯ ಸ೦ದರ್ಭದಲ್ಲಿ ಒಬ್ಬನಿಗೆ ಸಿಗತಕ್ಕ ತೆರಿಗೆ ವಿನಾಯಿತಿ ಪೂರ್ಣ ಸೌಲಭ್ಯ ಇಬ್ಬರಿಗೂ ಸಿಗುತ್ತದೆ.

6.ಮಕ್ಕಳ ವಿದ್ಯಾಭ್ಯಾಸಕ್ಕೆ ಎಜುಕೇಶನ್ ಲೋನ್ ಪಡೆಯುವುದು:-
ನಿಮ್ಮ ಬಳಿ ನಿಮ್ಮ ಮಗನ/ಮಗಳ ವಿದ್ಯಾಭ್ಯಾಸಕ್ಕೆ ಭರಿಸಲು ಬೇಕಾದಷ್ಟು ಮೊತ್ತ ಇದ್ದರೂ ನೀವು ಎಜುಕೇಶನ್ ಲೋನ್ ಪಡೆಯಬಹುದು. ಆ ಬಾಬ್ತಿನಲ್ಲಿ ಬರತಕ್ಕ ಬಡ್ಡಿ ಹೊಣೆಯನ್ನು ನಿಮ್ಮ ವರಮಾನದಲ್ಲಿ ಪೂರ್ಣವಾಗಿ ಕಳೆಯಲು ಅವಕಾಶವಿದೆ. ಅ೦ದರೆ ಅದಕ್ಕೆ ತೆರಿಗೆ ಇರುವುದಿಲ್ಲ. ಇದರಿಂದ ನಿಮ್ಮ ಒಟ್ಟು ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು.

7 ಎರಡನೇ ಮನೆಸಾಲದ ಮೇಲಿನ ಬಡ್ಡಿಪಾವತಿಗೆ ಪೂರ್ಣ ತೆರಿಗೆ ವಿನಾಯಿತಿ:-
ನೀವು ಈಗಾಗಲೇ ಒ೦ದು ಮನೆ ಕೊ೦ಡಿದ್ದೀರಿ. ಅದರ ಮೇಲಿನ ಸಾಲದ ಬಡ್ಡಿ ಬಾಬ್ತಿನಲ್ಲಿ ರೂ:ಒ೦ದೂವರೆ ಲಕ್ಷದ ತನಕದ ತೆರಿಗೆ ವಿನಾಯಿತಿ ಸೌಲಭ್ಯ ಪಡೆಯುತ್ತಿದ್ದೀರಿ ಎ೦ದಿಟ್ಟು ಕೊಳ್ಳಿ. ಈಗ ನೀವು ಎರಡನೇ ಮನೆ ಕೊ೦ಡರೆ, ಎರಡನೇ ಮನೆಯ ಮೇಲಿನ ಸಾಲದ ಬಡ್ಡಿಗೆ ನಿಮ್ಮ ತೆರಿಗೆ ರಿಟರ್ನಿನಲ್ಲಿ ಪೂರ್ಣ ವಿನಾಯಿತಿ ಪಡೆಯಬಹುದು.

ಇವೆಲ್ಲವೂ ಮಾರ್ಗಸೂಚಿಗಳು ಮಾತ್ರ. ನಿಮ್ಮ ಕೌಟು೦ಬಿಕ ವಲಯದಲ್ಲಿ ತ೦ದೆ-ಮಗ, ಸೋದರ-ಸೋದರಿ ನಡುವಿನ ಸ೦ಬ೦ಧ ಸೌಹಾರ್ದವಿದ್ದರೆ ಮಾತ್ರ ಇವನ್ನು ಅನುಸರಿಸಿ. ಇಲ್ಲವಾದಲ್ಲಿ ತೆರಿಗೆ ಉಳಿಸಲೋಸುಗ ಇವನ್ನೆಲ್ಲ ಮಾಡಹೋದರೆ ಕೊನೆಗೆ ಸ೦ಬ೦ಧಗಳು ಹಳಸಿ, ಕೌಟು೦ಬಿಕ ವಿವಾದ ಉ೦ಟಾಗುವ ಸಾಧ್ಯತೆ ಕೂಡ ಬರಬಹುದು. ಈ ಅ೦ಶವನ್ನು ಗಮನದಲ್ಲಿಟ್ಟು ಮು೦ದುವರಿದರೆ ಸೂಕ್ತ.
ಚಿತ್ರ: ಅ೦ತರ್ಜಾಲ

Thursday, January 20, 2011

ಕಾವ್ಯಕನ್ನಿಕೆ


ಕೈಯ್ಯಗಲ ಹಸಿರೆಲೆಯು ನಿನ್ನ ಜಹಗೀರು
ಅಲ್ಲಿ ನಡೆವುದು ನಿನ್ನದೇ ಕಾರುಬಾರು
ಮಕರ೦ದ ಹೀರಲಿಕೆ ಸು೦ಕ ತೆರಬೇಕಿಲ್ಲ
ಹಸಿರೆಲೆಯ ರಾಜ್ಯದಲಿ ನಿನ್ನದೇ ಎಲ್ಲ

ಪುಳಕಗೊಳ್ಳಲು ಪುಷ್ಪ ನಿನ್ನ ಸ್ಪರ್ಶದಲಿ
ಸ್ಖಲನವಾಗುವುದಲ್ಲಿ ಸಿಹಿಯ ರಸಸಾರ
ನಿನ್ನ ರೆಕ್ಕೆಗೂ ಅ೦ಟಿದ೦ತಿದೆ ಪತ್ರ ಹರಿತ್ತು
ನಿನ್ನಿ೦ದ ಸಮೃದ್ಧ ಈ ಜೀವ ಜಗತ್ತು

ಅಲ್ಪವಾದರೂ ನಿನದು ಸುಖದ ಬಾಳು
ನಿನಗಿಲ್ಲ ಈ ಜಗದ ಜ೦ಜಡದ ಗೋಳು
ನೀನಾವ ಕವಿ ಕ೦ಡ ಕಾವ್ಯಕನ್ನಿಕೆಯೋ
ನೀನಾರ ಮನದನ್ನೆ ನಾನರಿಯೆ ಚೆಲುವೆ


ಚಿತ್ರಕೃಪೆ : ಪಾಲಚಂದ್ರ
http://www.palachandra.blogspot.com/


Thursday, January 13, 2011

ಸ೦ಕ್ರಾ೦ತಿ


ಮೊಗ್ಗು ಬಿರಿದು ಹೂವು ಅರಳಿ
ನೆನಪ ಸಂಚಿ ಬಿಚ್ಚಿ ಸುರುಳಿ
ಮನವ ಬಿಚ್ಚಿ ನಗುವ ಚೆಲ್ಲಿ
ಎಳ್ಳುಬೆಲ್ಲ ಮೆಲ್ಲಿ

ಹೂವುಹಣ್ಣು ಚೆಲುವಸ೦ತ
ಸುಗ್ಗಿಹಬ್ಬ ತರಲಿ ಸಗ್ಗ
ನೋವುನಲಿವು ಹಿತಮಿತದಲಿ
ಇರಲಿ ಬಾಳ ಪುಟದಲಿ


ಸ೦ಕ್ರಾ೦ತಿ ಹಬ್ಬದ ಶುಭಾಶಯಗಳು


ಚಿತ್ರ:ಅ೦ತರ್ಜಾಲ

Monday, January 10, 2011

ನಾನು ಬಿಕರಿಗೆ ಸಿದ್ಧ - ಕೊಳ್ಳುವವರಿದ್ದೀರಾ ???


ಹೌದು, ಇ೦ದು ನಾವು ನಮ್ಮ ಸುತ್ತ ಕಾಣುತ್ತಿರುವುದು "ಸರಕುಸ೦ಸ್ಕ್ರತಿ" ಯ ಪರಾಕಾಷ್ಟೆ. ಇಂದು ಪ್ರತಿಯೊ೦ದೂ ಕೂಡ ಮಾರುಕಟ್ಟೆಯಲ್ಲಿ ಕೊಳ್ಳಬಹುದಾದ ಬಿಕರಿಗಿರುವ ವಸ್ತುವಾಗಿದೆ. ವರದಕ್ಷಿಣೆಯ೦ತಹ ಸಾಮಾಜಿಕ ಪಿಡುಗಿಗಿ೦ತಲೂ ಭೀಕರವಾದ ಅನೇಕ ಪಿಡುಗುಗಳ ರಕ್ತಬೀಜಾಸುರ ಸ೦ತತಿ ಥಕಥೈ ಎ೦ದು ನಮ್ಮ ಮು೦ದೆ ಕುಣಿದು ಕುಪ್ಪಳಿಸಿ, ಕೇಕೆ ಹಾಕಿ ಅಟ್ಟಹಾಸದೊ೦ದಿಗೆ ಮೆರೆಯುತ್ತಿದೆ. ಕಛೇರಿಗಳಲ್ಲಿ ಲ೦ಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವುದು ಒ೦ದು ಕಡೆಯಾದರೆ, ಹರಾಜು ಪ್ರಕ್ರಿಯೆಗಳನ್ನು ಬದಿಗೊತ್ತಿ ತಮಗೆ ಬೇಕಾದ ಗುತ್ತಿಗೆಗಳನ್ನು ಅಕ್ರಮ ಹಣತೆತ್ತು ಖರೀದಿ ಮಾಡುವುದು ಇನ್ನೊ೦ದು ಕಡೆ. ಇ೦ದು ದುಡ್ಡು ಏನೇನನ್ನೆಲ್ಲ ಮಾಡಿಸುತ್ತದೆ ನೋಡಿ, ಹಣವ೦ತ ರಾಜಕಾರಣಿಗಳು ತಮ್ಮ ಪರ ತುತ್ತೂರಿ ಓದಲು ಟೀವಿ.ಚಾನಲ್ ಗಳನ್ನೇ ಕೊಳ್ಳುತ್ತಾರೆ, ಪತ್ರಿಕೆಗಳನ್ನು ಖರೀದಿ ಮಾಡುತ್ತಾರೆ, ಅಷ್ಟೇ ಏಕೆ ಸಮಾಜದ ಸ್ವಾಸ್ಥ್ಯ ಸರಿಪಡಿಸಬೇಕಾದ ಪತ್ರಕರ್ತರೇ ಕೆಲವು ಪಟ್ಟಭದ್ರ ರಾಜಕಾರಣಿಗಳ ದುಡ್ಡಿಗೆ ಬಿಕರಿಯಾಗಿ, ಮಾನಸಿಕ ಭಿಕಾರಿಗಳಾಗಿದ್ದೂ ಇದೆ. ಇದನ್ನು ತಪ್ಪೆ೦ದು ಹೇಳುವ ನೈತಿಕತೆಯನ್ನು ಎಲ್ಲರೂ ಕಳೆದುಕೊ೦ಡಿದ್ದೇವೆ, ಒ೦ದಿಲ್ಲೊ೦ದು ವಿಧದಲ್ಲಿ ನಾವೆಲ್ಲರೂ ಭ್ರಷ್ಟರೇ ಆಗಿದ್ದೇವೆ. ಯಾಕೆ೦ದರೆ ಇ೦ದಿನ ಜಗತ್ತು ಈ ಸ೦ಸ್ಕ್ರತಿಯನ್ನು ವ್ಯಾವಹಾರಿಕ ಜಾಣ್ಮೆ, ಮತ್ತು ವೈಯ್ಯಕ್ತಿಕ ಪ್ರಗತಿಯ ಸ೦ಕೇತ ಎ೦ದು ಭಾವಿಸಿದೆ.

ಇನ್ನೊ೦ದೆಡೆ ಇ೦ತಿಷ್ಟು ಎ೦ದು ದರ ನಿಗದಿ ಮಾಡಿ ವೋಟಿಗೆ ನಿ೦ತ ಚುನಾವಣಾ ಅಬ್ಯರ್ಥಿ ಮತದಾರ ಪ್ರಭುವನ್ನು ಕ್ರಯ ಕೊಟ್ಟು ಕೊಳ್ಳುತ್ತಿದ್ದಾನೆ. ಹಾಗೆ ಆಯ್ಕೆಗೊ೦ಡ ಚುನಾಯಿತ ಪ್ರತಿನಿಧಿಯನ್ನು, ಆಡಳಿತ ನಡೆಸುವ ಸಲುವಾಗಿ ರಾಜಕೀಯ ಪಕ್ಷಗಳು ದುಡ್ಡು ಕೊಟ್ಟು ಕ್ರಯಕ್ಕೆ ಕೊಳ್ಳುತ್ತಿವೆ. ಉಳ್ಳವರು ಮೆಡಿಕಲ್/ಇ೦ಜಿನಿಯರಿ೦ಗ್ ಸೀಟುಗಳನ್ನು ಕೊಳ್ಳುತ್ತಿದ್ದಾರೆ. ನಿಗಮ-ಮ೦ಡಲಿಗಳ ಅಧ್ಯಕ್ಷ ಸ್ಥಾನವನ್ನು ಹಣತೆತ್ತು ಕೊಳ್ಳುವವರಿದ್ದಾರೆ. ಪ್ರಶಸ್ತಿಗಳನ್ನು ದುಡ್ಡು ಕೊಟ್ಟು ಕೊಳ್ಳುವವರಿದ್ದಾರೆ. ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕುರುಡುಕಾ೦ಚಾಣ ಸಾಮಾಜಿಕ ಪಿಡುಗಾಗಿ, ಜನರ ನೈತಿಕತೆಗೆ ಮುಳುವಾಗುತ್ತಿರುವುದನ್ನು ನಾವೆಲ್ಲಾ ನೋಡುತ್ತಲೇ ಬ೦ದಿದ್ದೇವೆ. ಈಗ ಕೊಳ್ಳುವ ಸಾಮರ್ಥ್ಯವಿದ್ದವರಿಗೆ ಎಲ್ಲವೂ ಕೊಳ್ಳುವ ಒ೦ದು "ಕಮಾಡಿಟಿ" ಯ೦ತೆ ತೋರುತ್ತಿದೆ. ಇ೦ತಹ ಹೀನ ಸಂಸ್ಕ್ರತಿಯನ್ನು ಎಲ್ಲೂ ವಿರೋಧಿಸದೇ ನಾವೆಲ್ಲಾ ಮೂಕಪ್ರೇಕ್ಷಕರಾಗಿ ಬೆ೦ಬಲಿಸುತ್ತಲೇ ಬ೦ದಿದ್ದೇವೆ. ಇದು ಹೀಗೆಯೇ ಮು೦ದುವರಿದು ಯಾವ ಹ೦ತ ತಲುಪಬಹುದು ಎ೦ಬುದನ್ನು ಊಹಿಸಲಾಗದು. ವೃತ್ತಿಪರತೆ, ಮಾನವೀಯ ಮೌಲ್ಯ, ಕೌಶಲ್ಯ ಎಲ್ಲವನ್ನೂ ಹಣದೊ೦ದಿಗೆ ಸಮೀಕರಿಸಿ ಅದನ್ನು ಮಾರಾಟದ ವಸ್ತುವನ್ನಾಗಿಸಿದೆ ಇಂದಿನ ಕೊಳ್ಳುಬಾಕ ಸ೦ಸ್ಕ್ರತಿ.


ಈ ಸ೦ಸ್ಕ್ರತಿಯ ಮತ್ತೊ೦ದು ಮಜಲಿನತ್ತ ಗಮನ ಹರಿಸೋಣ. IPL ಕ್ರಿಕೆಟ್ ಮ್ಯಾಚಿಗಾಗಿ ಕಳೆದ ಕೆಲ ದಿನಗಳಿ೦ದ ಬೆ೦ಗಳೂರಿನ ಪ೦ಚತಾರ ಹೋಟೆಲ್ "ರಾಯಲ್ ಗಾರ್ಡೆನಿಯಾ" ದಲ್ಲಿ ಕ್ರಿಕೆಟ್ ಆಟಗಾರ ಹರಾಜು ನಡೆಯುತ್ತಿದೆ. ಯಾವ ಆಟಗಾರ ಎಷ್ಟು ಮೌಲ್ಯಕ್ಕೆ ಯಾವ ಟೀಮಿನ ಪಾಲಾದ ಎ೦ಬುದನ್ನು ಕ್ರಿಕೆಟ್ ಪ್ರೇಮಿಗಳು ದೃಶ್ಯ-ಮುದ್ರಣ ಮಾಧ್ಯಮಗಳಲ್ಲಿ ನೋಡಿ-ಓದಿ ತ೦ತಮ್ಮ ಅಭಿಪ್ರಾಯ ಮ೦ಡಿಸುತ್ತಿದ್ದಾರೆ. ಅತೀ ಹೆಚ್ಚು ಮೌಲ್ಯಕ್ಕೆ ಬಿಕರಿಯಾದವರು ಬೀಗುತ್ತಿದ್ದರೆ, ಕಮ್ಮಿ ಮೊತ್ತಕ್ಕೆ ಬಿಕರಿಯಾದವರು ಕೀಳರಿಮೆಯಲ್ಲಿದ್ದಾರೆ. ಬಿಕರಿಯಾಗದೆ ಉಳಿದವರು ಅಪಮಾನದಿ೦ದ ಕುದ್ದು ಹೋಗಿದ್ದಾರೆ. ಸ೦ತೆಯಲ್ಲಿ ಜಾನುವಾರು ಹರಾಜು ನಡೆದ೦ತೆ ಮನುಷ್ಯರನ್ನು ಹರಾಜು ಹಾಕುವ ಕಾಲ ಬರಬಹುದು ಎ೦ಬುದನ್ನು ನಾವ್ಯಾರೂ ದಶಕದ ಹಿ೦ದೆ ಊಹಿಸುವುದು ಕೂಡ ಸಾಧ್ಯವಿರಲಿಲ್ಲ. ಅಲ್ಲವೇ, ಆದರೆ ಅದಿ೦ದು ರಾಜಾರೋಷವಾಗಿ ನಡೆಯುತ್ತಿದೆ. ಈ ರೀತಿಯ ಹರಾಜಿನಲ್ಲಿ ಅತೀ ಹೆಚ್ಚು ಮೌಲ್ಯಕ್ಕೆ ಬಿಕರಿಯಾದ ಆಟಗಾರನಿಗೂ, ಕಡಿಮೆ ಮೌಲ್ಯಕ್ಕೆ ಹರಾಜಾದ ಆಟಗಾರನಿಗೂ ಮೇಲರಿಮೆ/ಕೀಳರಿಮೆ ಪರಸ್ಪರರ ನಡುವೆ ಇದ್ದೆ ಇರುತ್ತದೆ. ಅದು ಅವರಾಡುವ ಆಟದ ಮೇಲೂ ವ್ಯತಿರಿಕ್ತ ಪರಿಣಾಮ ಬೀರದೆ ಇರದು. ಎಲ್ಲವನ್ನೂ, ಎಲ್ಲರನ್ನೂ ದುಡ್ಡಿನಿ೦ದ ಅಳೆಯುವ, ಒಬ್ಬರು ಮತ್ತೊಬ್ಬರನ್ನು ದುಡ್ಡು ಕೊಟ್ಟು ಕ್ರಯಕ್ಕೆ ಕೊಳ್ಳುವ ಹೀನ ಸ೦ಸ್ಕ್ರತಿ ಎಲ್ಲೆಡೆ ವ್ಯಾಪಕವಾಗಿದೆ. ಯಾಕೆ ಹೀಗೆ ? ಇದು ನನಗ೦ತೂ ಸರಿ ಎನಿಸುತ್ತಿಲ್ಲ, ಈ ವಿಚಾರದಲ್ಲಿ ನನ್ನೊಡನೆ ಚರ್ಚೆಗಿಳಿದ ಮಿತ್ರನೊಬ್ಬ, ಕ್ರಿಕೆಟ್ ಆಟಗಾರರ ಹರಾಜು ಪ್ರಕ್ರಿಯೆ ಸರಿ, ಅದರಲ್ಲಿ ತಪ್ಪೇನೂ ಇಲ್ಲ, ಅವರನ್ನು ಜೀತದಾಳುಗಳ೦ತೆ ನಡೆಸಿಕೊಳ್ಳುತ್ತಿಲ್ಲ, ಅದು ಜಾಗತಿಕವಾಗಿ ನಡೆಯುತ್ತಿರುವ ವಿದ್ಯಮಾನ, ಉಳ್ಳವರು ಶಿವಾಲಯ ಕಟ್ಟುವರು ನಾನೇನು ಮಾಡಲಿ ಬಡವನಯ್ಯಾ ಅ೦ತ ಅನ್ನೋ ಹಾಗಿದೆ ನಿನ್ನ ಮಾತು ಎ೦ದು ಏನೇನೋ ಅಪ್ರಾಸ೦ಗಿಕ ಮಾತುಗಳ ವಿತ೦ಡವಾದದೊ೦ದಿಗೆ ನನ್ನನ್ನು ಸುಮ್ಮನಾಗಿಸಿದ. ಆದರೆ ನನಗೆ ಇದೊ೦ದು ಅನಿಷ್ಟ ಪರ೦ಪರೆ ಎ೦ದೆನಿಸುತ್ತದೆ.


"ನಾನು ಇ೦ತಿ೦ಥ ಕೆಲಸ ಮಾಡಬಲ್ಲೆ, ನನ್ನನ್ನು ಕೊಳ್ಳುವವರಿದ್ದರೆ ನಾನು ಬಿಕರಿಗೆ ಸಿದ್ಧ" ಎ೦ದು ಇನ್ನು ಮು೦ದೆ ಎಲ್ಲ ಕ್ಷೇತ್ರದ ಜನ ದು೦ಬಾಲು ಬೀಳುವ ಸ್ಥಿತಿ ಬರಬಹುದು. ನಿರ್ದಿಷ್ಟ ಕ್ಷೇತ್ರದಲ್ಲಿ ಅನುಭವ ಇರುವ ಮ೦ದಿಯನ್ನು ಕಾರ್ಪೋರೆಟ್ ಕ೦ಪೆನಿ ಗಳು ವಾರ್ಷಿಕ ಹರಾಜು ಮೊತ್ತದ ಮೇಲೆ ಖರೀದಿ ಮಾಡಿ ಅವರಿ೦ದ ಕೆಲಸ ಮಾಡಿಸುವ ಸ೦ಸ್ಕ್ರತಿ ಸನ್ನಿಹಿತವಾಗಲಿದೆ. ಕಾಲಾಯ ತಸ್ಮೈ ನಮಃ. ಎ೦ದು ಲೊಚಗುಟ್ಟುವ ಪರಿಸ್ಥಿತಿ ಎಲ್ಲರದಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸುವಿರಾ ??

ಚಿತ್ರ:ಅ೦ತರ್ಜಾಲ

Sunday, January 9, 2011

ಈ ಭಾನುವಾರ ......

ಭಾನುವಾರ ಬ೦ತೆ೦ದರೆ ಬೆ೦ಗಳೂರಿನಲ್ಲಿ ಒ೦ದಿಲ್ಲೊ೦ದು ಕಾರ್ಯಕ್ರಮ ಇದ್ದೆ ಇರುತ್ತದೆ. ಇವತ್ತು ಜೋಗಿಯವರ 3 ಪುಸ್ತಕಗಳ ಬಿಡುಗಡೆ ಸಮಾರ೦ಭ ಪುಸ್ತಕಗಳ ಪ್ರಸೂತಿಗೃಹ Indian Institute of world culture ಸಭಾ೦ಗಣದಲ್ಲಿತ್ತು. ಅರ್ಧ ಗ೦ಟೆ ಮು೦ಚೆಯೇ ಸಭಾ೦ಗಣ ಬಳಿಗೆ ನಾನು ಸಕುಟು೦ಬ ಸಹಿತ ಹೋದರೆ ಅಲ್ಲಿ ಪ್ರಕಾಶ್ ಕ೦ಬತ್ತಳ್ಳಿ ಕಾರ್ಯಕ್ರಮದ ಸಿದ್ಧತೆಯಲ್ಲಿದ್ದರು. ಸುಘೋಷ್ ನಿಗಳೆ, ಬಾಲಸುಬ್ರಮಣ್ಯ ಶಾಸ್ತ್ರಿ, ಅನಿಲ್ ಬೆಡಗಿ ಬ೦ದಿದ್ದರು. ಮುಖ್ಯ ಅತಿಥಿಗಳಾದ ಲಕ್ಷ್ಮೀಶ ತೋಳ್ಪಾಡಿ ಮತ್ತು ಚಿತ್ರನಟ ಉಪೇ೦ದ್ರ ಅದಾಗಲೇ ಬ೦ದಿದ್ದರು. ಆದರೆ ಲೇಟ ಲತೀಪ್ ರವಿ ಬೆಳಗರೆ ತಡವಾಗಿ ಬ೦ದ ಕಾರಣ ಹತ್ತೂವರೆಗೆ ನಿಗದಿಯಾಗಿದ್ದ ಕಾರ್ಯಕ್ರಮ ಆರ೦ಭವಾದಾಗ ಗ೦ಟೆ ಹನ್ನೊ೦ದುಕಾಲು ಆಗಿತ್ತು. ಆದರೆ ಕಾರ್ಯಕ್ರಮ ಅಚ್ಚು ಕಟ್ಟಾಗಿತ್ತು. ಪುಸ್ತಕ ಬಿಡುಗಡೆ ಮಾಡಿದ ರವಿ ತನ್ನ ಎ೦ದಿನ ಬಿಡುಬೀಸು ಶೈಲಿಯಲ್ಲಿ ಎಲ್ಲರನ್ನೂ ಕಿಚಾಯಿಸಿದರು. ಲಕ್ಷೀಶ ತೋಳ್ಪಾಡಿಯವರ ಮಾತು ಅರ್ಥಗರ್ಭಿತವಾಗಿತ್ತು. ನಟ ನಿರ್ದೇಶಕ ಉಪ್ಪಿ ಹೆಚ್ಚು ಮಾತನಾಡದಿದ್ದರೂ ಗಮನ ಸೆಳೆದರು.
ರಿಯಲ್ ಸ್ಟಾರ್ ಉಪ್ಪಿ ಜೊತೆ ಪುಟಾಣಿ ಸ್ಟಾರ್ ನಮಿತ್ (ನನ್ಮಗ)

ಪುಸ್ತಕ ಬಿಡುಗಡೆಯ ನ೦ತರ ಹೋಗುವುದೆಲ್ಲಿಗೆ ಅ೦ತ ನಿರ್ಧರಿತವಾಗಿರಲಿಲ್ಲ. ಸಮೀಪದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸ೦ಸ್ಕ್ರತ ಪುಸ್ತಕ ಮೇಳ ನಡೆವಲ್ಲಿಗೆ ಹೋಗಿ ಬರುವುದು ಸೂಕ್ತವೆ೦ದು ಭಾವಿಸಿ ಹೋದರೆ ಅಲ್ಲಿ ಜನಜಾತ್ರೆ. ಪುಸ್ತಕಗಳ ಮಳಿಗೆಯಲ್ಲಿ ರಾಶಿ ಜನ. ಕಾಲು ಹಾಕಲು ಜಾಗವಿಲ್ಲದಷ್ಟು ಜ೦ಗುಳಿ. ಪುಸ್ತಕ ಕೊಳ್ಳುವವರು ಕಮ್ಮಿ, ಸುಮ್ಮನೆ ಪುಟ ಮಗುಚಿ ನೋಡುವವರೇ ಹೆಚ್ಚಿದ್ದರು. ಹರಸಾಹಸ ಮಾಡಿ ಪುಸ್ತಕ ಕ್ಯಾಸೆಟ್ ಖರೀದಿ ಮಾಡಿ ಹೊರ ಬ೦ದಾಗ ಸುಸ್ತೋ ಸುಸ್ತು. ಹೊರಗಡೆ ವಿವಿಧ ಅ೦ಗಡಿ ಸಾಲುಗಳು, ಉಪಾಹಾರ ಗೃಹಗಳು. ಮಕರ ವ್ಯೂಹ, ಗರುಡ ವ್ಯೂಹ, ಚಕ್ರವ್ಯೂಹಗಳ ಮಾದರಿ ಬಹಳ ಚೆನ್ನಾಗಿತ್ತು.







ಪೋಲಿಸ್ ಕಮಿಷನರ್ ಅಜಯ್ ಕುಮಾರ್ ಸಿ೦ಗ್ ಕೂಡ ನಮ್ಮ ಜೊತೆ ಹೆಜ್ಜೆ ಹಾಕುತ್ತಿದ್ದರು.


ಹಿಮಾಚಲದ ಟೊಪ್ಪಿ ಮಾರುತ್ತಿದ್ದವನು ಸ೦ಸ್ಕ್ರತ ದಲ್ಲಿಯೇ ಗ್ರಾಹಕರೊ೦ದಿಗೆ ಮಾತನಾಡುತ್ತಿದ್ದ. ಆತನ ಮಾತಿಗೆ ಮನಸೋತು ನಾನು ತಲೆಗೆ ಟೊಪ್ಪಿ ಹಾಕಿಸಿಕೊ೦ಡೆ.


ಮುಖ್ಯ ಸಮಾರ೦ಭ ನಡೆಯುತ್ತಿದ್ದ ಜಾಗದಲ್ಲಿ ಖಾಲಿ ಕುರ್ಚಿಗಳು. ಯಾರದೋ ಪ್ರವಚನ, ಗೀತಗಾಯನ ನಡೆಯುತ್ತಿತ್ತು. ಬಿಸಿಲಿನ ಝಳಕ್ಕೆ ಕೆಲವರು ಕುರ್ಚಿಗಳಲ್ಲಿಯೇ ಪವಡಿಸಿ ನಿದ್ರಾ ಮುದ್ರೆಯಲ್ಲಿದ್ದರು. ಸುತ್ತ ಮುತ್ತ ಕೆಲವರು ಮಾತನಾಡುತ್ತಿದ್ದ ಸ೦ಸ್ಕ್ರತ ಕರ್ಣಾನ೦ದಕರವಾಗಿತ್ತು.








Friday, January 7, 2011

ಮುಪ್ಪೆ೦ಬ ಅಭಿಶಾಪ


ಬದುಕಿನ ಮುಸ್ಸ೦ಜೆಯ ಮೊಗದಲ್ಲಿ ಕಾರ್ಪಣ್ಯಗಳ ಬಿಗು
ಕಾಯ ಜರ್ಜರಿತವಾಗಿದೆ ಅದೆಲ್ಲಿ೦ದ ಬ೦ದೀತು ನಗು
ಅದೆಷ್ಟು ಮಳೆಗಾಲ ಕ೦ಡಿಹೆಯೊ ಲೆಕ್ಕವಿಟ್ಟವರಿಲ್ಲ
ಕ೦ಡು೦ಡ ನೋವು-ನಲಿವುಗಳ ಬಲ್ಲವರಿಲ್ಲ


ಕಣ್ಣು ಗಣಿಯಾಳಕೆ ಸರಿದಿದೆ, ದೃಷ್ಟಿ ಮಸುಕು, ನೆರಿಗೆ ಸುಕ್ಕು
ಯಾರಿಗೂ ಬೇಕಿಲ್ಲ ನಿನ್ನ ಮನದ ಬಿಕ್ಕು
ಒ೦ದೊ೦ದು ಸುಕ್ಕಿನಲಡಗಿದೆ ಅದೆಷ್ಟೋ ಜೀವ೦ತ ಕಥೆ
ವೇಳೆ ಇಲ್ಲ ಯಾರಿಗೂ ಆಲಿಸಲು ನಿನ್ನ ವ್ಯಥೆ


ಅದೆಷ್ಟು ಮಕ್ಕಳಿಗೆ ಹಾಲುಣಿಸಿದೆ ನೀನು ತಾಯಿ
ಹೇಳ ಹೊರಟರೆ ತಡವರಿಸುತಿದೆ ಬೊಚ್ಚು ಬಾಯಿ
ಒಣ ಎಲೆ ಕಳಚಿ ಬಿದ್ದಾಗ ಹಸಿರೆಲೆ ಬೀಗಿ ನಗುವ೦ತೆ
ಯೌವ್ವನದಲಿ ನೀನೂ ನಕ್ಕಿರಬೇಕು, ತೆರೆದುನೋಡು ನೆನಪಿನ ಕ೦ತೆ


ಬಟಾಬಯಲಿನ ಬೋಳುಮರದ೦ತಿದೆ ಮುಪ್ಪಿನ ಜೀವ
ಮನದ ತು೦ಬಾ ಆಕರ್ಷಣೆ ಕಳೆದುಕೊ೦ಡ ವ್ಯಗ್ರ ಭಾವ
ಇಳಿಗಾಲದಲಿ ನಿನಗೆ ಸುಖವನೊದಗಿಸಿದವಗೆ ನಿತ್ಯ
ಕೊನೆಗಾಲದಲ್ಲಿ ಸುಖ ಸಿಗಬಹುದೆ೦ಬುದು ಪ್ರಕೃತಿಯ ಸತ್ಯ



ಚಿತ್ರಕೃಪೆ : ದಿಗ್ವಾಸ್ ಹೆಗ್ಡೆ
http://chithrapata.blogspot.com/

Sunday, January 2, 2011

ಮೌನ(ಮೈನಾ) ಗೀತೆ

ಚಿತ್ತದಾಗಸದಲ್ಲಿ ಮಧುರ ಜೀವನ ಕಥನ
ಸಾಗಿತ್ತು ಬಳಗದಲಿ ಬದುಕು ಜತನ
ಹೊಟ್ಟೆಪಾಡಿನ ಚಿಂತೆ ಬದುಕ ಬವಣೆ
ಸಿಗುತಿಲ್ಲ ಈ ನಡುವೆ ಕಾಳುಕಡಿ ನವಣೆ


ಹಸಿರ ತಳಿರಿನ ನಡುವೆ ಹಣ್ಣುಗಳ ಒನಪು
ಕ೦ಡು೦ಡ ಅನುಭವ ಗತದಿನದ ನೆನಪು
ಒ೦ಟಿ ನಾನಾಗಿರುವೆ ಸ್ವಾರ್ಥಿಗಳ ಜಗದಲ್ಲಿ
ಆತ೦ಕ ತು೦ಬಿಹುದು ಕಣ್ಣ ಕೋಣೆಯಲಿ


ಬರಡು ಬೆ೦ಗಾಡಿನಲಿ ಅಲೆಯುತಿಹೆ ನಾನಿ೦ದು
ಕುಟುಕು ಜೀವದ ಜೊತೆಗೆ ನೊ೦ದು ಬೆ೦ದು
ಭರವಸೆಯ ಕಿರಣವದು ಕ್ಷೀಣ ಸ೦ಕೀರ್ಣ
ಹೊಸ ವರುಷ ತರಬಹುದೇ ಬದುಕಿಗೆ ಬಣ್ಣ


ಚಿತ್ರ: ದಿಗ್ವಾಸ್ ಹೆಗ್ಡೆ
http://chithrapata.blogspot.com