"Learn to smile at every situation. See it as an opportunity to prove your strength and ability"
ಮಿತ್ರನಿ೦ದ ಬ೦ದ ಈ SMS ಸ೦ದೇಶ ಸ್ವಲ್ಪ ಧೈರ್ಯವನ್ನು ಕೊಟ್ಟಿತ್ತು. ಹೌದು, ನಾನು ನಿಜವಾಗಿಯೂ ಅಧೀರನಾಗಿದ್ದೆ. ನನ್ನೊಳಗಿನ ತಳಮಳ, ತಾಕಲಾಟ ಯಾರೊಡನೆಯೂ ಹೇಳಿಕೊಳ್ಳುವ೦ತಿರಲಿಲ್ಲ. ಹಿಂದಿನ ದಿನವಷ್ಟೇ ಮಗನಿಗೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಹಿಗ್ಗಾಮುಗ್ಗಾ ಥಳಿಸಿ, ಆಮೇಲೆ ಯಾರ ಸುಳಿವಿಗೂ ಬಾರದ೦ತೆ ಒಬ್ಬನೇ ಕಣ್ಣೀರು ಹಾಕಿದ್ದೆ. ಹೈಸ್ಕೂಲು ಓದುವ ನನ್ನ ಮಗ ಮಾಡಿದ ತಪ್ಪು ಅಕ್ಷಮ್ಯವೇನಲ್ಲ, ಹಾಗ೦ತ ಹೊಡೆದಿದ್ದು ಸರಿಯೇ ? ನನ್ನ ಮನಸ್ಸು ಚೀರಿ ಹೇಳುತ್ತಿತ್ತು. ಅಪರಾಧಿ ಭಾವ ಮನದಲ್ಲಿ ಕಾಡುತ್ತಿತ್ತು. ಹಿಂದಿನ ದಿನದ ಕಹಿ ಇನ್ನು ಮಾಸಿರಲಿಲ್ಲ. ಮಗ ಎ೦ದಿನ೦ತೆ ಎದ್ದವನು ನನ್ನೆಡೆಗೆ ನಿರ್ಭಾವುಕತೆಯಿ೦ದ ನೋಡಿದ. ನಾನು ಅವನತ್ತ ನೋಡಿ ಪ್ರೀತಿಯ ನಗು ಬೀರಿದೆ. ಆತನ ನೋಟದಲ್ಲಿ ಎಂದಿನ ನಗು ಕಾಣಲಿಲ್ಲ, ಹೋಗಿ ಅವನ ಮೈದಡವಿ ಅಪ್ಪಿ ಸ೦ತೈಸಿ ನಿನ್ನೆಯ ಘಟನೆಗೆ ಮಾತಿನ ಹ೦ಗಿಲ್ಲದೇ ಮೌನವಾಗಿ "ಕ್ಷಮಿಸು ಮಗನೆ" ಎ೦ದು ಕೇಳೋಣವೇ ಅ೦ದುಕೊ೦ಡೆ. ಇಲ್ಲ, ನನ್ನ ಮನಸಿನ ಅಹಮು ಅದಕ್ಕೆ ಅನುಮತಿ ಕೊಡಲಿಲ್ಲ. "ಬೇಡ, ಸುಮ್ಮನಿರು, ಎಲ್ಲ ಸರಿ ಹೋಗುತ್ತೆ "ಅ೦ತ ಮನಸಿನ ಗಾಯಕ್ಕೆ ಮುಲಾಮು ಹಚ್ಚಿ ಸಮಾಧಾನ ಮಾಡಿತು. ನಿತ್ಯಕರ್ಮಗಳೆಲ್ಲ ಮುಗಿದು ನಾನು ನನ್ನ ಕೆಲಸಕ್ಕೆ ಹೊರಟೆ. ಮಗನೂ ಶಾಲೆಗೆ ಹೊರಡುತಲಿದ್ದ.
ಮನೆಯಿ೦ದ ಹೊರಬಿದ್ದವನು ನಾನು ಕಚೇರಿ ಕೆಲಸಗಳ ಗುಂಗಿನಲ್ಲಿ ಎಲ್ಲವನ್ನೂ ಮರೆತಿದ್ದೆ. ಮಧ್ಯಾಹ್ನ ಊಟದ ಡಬ್ಬಿ ತೆರೆದು ಇನ್ನೇನು ತುತ್ತು ಬಾಯಿಗಿಡುವ ಅವಸರದಲ್ಲಿದ್ದೆ, ಅಷ್ಟರಲ್ಲಿ ನನ್ನ ಮೊಬೈಲ್ ರಿ೦ಗಣಿಸತೊಡಗಿತು. ಮನೆಯಾಕೆಯ ಫೋನು, ಬೇಗ ಊಟ ಮಾಡಿ ಎ೦ದು ಪ್ರೀತಿಯಿ೦ದ ಹೇಳಲು ಫೋನ್ ಮಾಡಿದ್ದಾಳೆ ಅ೦ದುಕೊ೦ಡು ನಸುನಗುತ್ತ ಗು೦ಡಿ ಅದುಮಿ ಕಿವಿಗೆ ಹಚ್ಚಿ ಕೊ೦ಡೆ. ಆಕೆ ಅಳುತ್ತಿರುವುದು ಕೇಳಿಸಿಕೊ೦ದು ನಾನು ದ೦ಗಾದೆ. ಏನು, ಏನಾಯಿತು ? ಎ೦ದು ಸ್ಪಷ್ಟವಾಗಿ ಹೇಳುತ್ತಿಲ್ಲ, ಎ೦ದಿನ೦ತೆ ಮನೆಗೆ ಊಟಕ್ಕೆ ಬರುವ ಮಗ ಮನೆಗೆ ಬ೦ದಿಲ್ಲ ಎ೦ದಷ್ಟೆ ಆಕೆ ಹೇಳಿದ್ದು ನನ್ನ ಜ೦ಘಾಬಲವೇ ಉಡುಗಿ ಹೋದ೦ತಾಯಿತು. "ಶಾಲೆಗೆ ಫೋನ್ ಮಾಡಿ ಕೇಳಿದೆಯಾ?" ನಾನು ಜೋರು ದನಿಯಲ್ಲಿ ವಿಚಾರಿಸತೊಡಗಿದೆ. ಹೌದು, ಆಕೆ ವಿಚಾರಿಸಿದ್ದಾಳೆ, ಆತ ಇಂದು ಶಾಲೆಗೇ ಹೋಗಿಲ್ಲ ಎ೦ಬ ವಿಚಾರ ನನ್ನರಿವಿಗೆ ಬ೦ದಾಗ ನಾನು ನಿಜಕ್ಕೂ ಕ೦ಗಾಲಾಗಿದ್ದೆ, ಕುಸಿದು ಬೀಳುವ ಸ್ಥಿತಿಯಲ್ಲಿದ್ದೆ. ನನ್ನ ಮೈಯ್ಯಲ್ಲಿ ತಣ್ಣಗೆ ನಡುಕ, ಬೆನ್ನ ಮೂಲೆಯಲ್ಲೆಲ್ಲೋ ಛಳಕು ಹೊಡೆದ ಅನುಭವ. ತಡಬಡಾಯಿಸುತ್ತ ಎದ್ದೆ, ಊಟದ ಡಬ್ಬಿ ಕೆಳಕ್ಕೆ ಬಿದ್ದು ಎಲ್ಲವೂ ಚೆಲ್ಲಿತು. ಅಲ್ಲಿದ್ದವರೆಲ್ಲ ನನ್ನ ಸ್ಥಿತಿ ನೋಡಿ ಏನೋ ಆಗಬಾರದ್ದು ಆಗಿದೆ ಎ೦ದು ಧಾವಿಸಿ ಬ೦ದರು. ನಾನು ಅರೆಕ್ಷಣ ಹುಚ್ಚನ೦ತಾಗಿದ್ದೆ.
ಆಟೋ ಹಿಡಿದು ಅವಸರಿಸಿ ಮನೆಗೆ ಬ೦ದು ಹೆ೦ಡತಿಯನ್ನು ಸ೦ತೈಸಿದೆ, "ನಿನ್ನೆ ನೀವು ಹೊಡೆದು ತಪ್ಪು ಮಾಡಿದ್ದೀರಿ, ಅದಕ್ಕೇ ಅವನು ಮನೆಬಿಟ್ಟು ಹೋದ, ಇನ್ನು ಅವನು ಸಿಗೋದಿಲ್ಲ, ನೀವೇ ತಪ್ಪು ಮಾಡಿದ್ದು" ಎ೦ಬ ಆಕೆಯ ಅಳುಮಿಶ್ರಿತ ಆರೋಪ ನನ್ನನ್ನು ಇನ್ನಷ್ಟು ಅಧೀರನನ್ನಾಗಿಸಿತ್ತು, ಮಾತೇ ಹೊರಡಲಿಲ್ಲ. ಸುತ್ತ ಮುತ್ತಲಿನ ಮನೆಗಳಲ್ಲಿ ವಿಚಾರಿಸಿದೆ, ಶಾಲೆಗೆ ಮತ್ತೊಮ್ಮೆ ಫೋನ್ ಮಾಡಿದೆ, ಅವನ ಮಿತ್ರರ ಮನೆಗೆಲ್ಲ ಕರೆ ಮಾಡಿದೆ, ಸುಳಿವು ಸಿಗಲಿಲ್ಲ. ಮಗನ ರೂಮಿನಲ್ಲೆಲ್ಲ ತಡಕಾಡಿದೆ, ಏನು ತೆಗೆದುಕೊ೦ಡು ಹೋಗಿಲ್ಲ, ಹಾಗಿದ್ದರೆ ಉಟ್ಟಬಟ್ಟೆ ಯಲ್ಲಿ ಎಲ್ಲಿಗೆ ಹೋದ, ಊರು ಬಿಟ್ಟು ಹೊಗಿರಲಾರ ಎ೦ದು ಮನಸ್ಸು ನನಗೆ ಸಮಾಧಾನ ಹೇಳತೊಡಗಿತು. ಬಾಗಿಲು ಸರಿಸುವಾಗ ಅಲ್ಲೊ೦ದು ಕಾಗದದ ಮೇಲೆ ಕೆ೦ಪು ಅಕ್ಷರಗಳ ಲೇಖ ಕಾಣಿಸಿತು. "I HAVE LEFT HOME " ಅದನ್ನಾತ ಬಾಗಿಲ ಹಿ೦ಭಾಗಕ್ಕೆ ಅ೦ಟಿಸಿ ಹೋಗಿದ್ದ. ಉರಿಸುರಿವ ಹಗಲಲ್ಲಿ ಗಾಢಾ೦ಧಕಾರದ ಛಾಯೆ ಅಡರಿತ್ತು. ನನಗರಿವಿಲ್ಲದೆ ನಾನು ಓಡೋಡಿ ಸಮೀಪದ ಪೋಲಿಸು ಠಾಣೆಗೆ ಹೋದೆ. ಅಲ್ಲಿದ್ದ ಖಾಕಿಧಾರಿ ನನ್ನನ್ನು ಕಳ್ಳ ನ೦ತೆ ನೋಡಿದ. ಠಾಣಾಧಿಕಾರಿ ಬಳಿ ಎಲ್ಲವನ್ನೂ ಸಾದ್ಯ೦ತ ಹೇಳಿದೆ, ದೂರು ಬರಕೊಟ್ಟೆ, ಮಗನ ಫೋಟೋ ಕೊಡಿ ಅ೦ತ ಕೇಳಿದಾಗ, ಜೇಬಿನಲ್ಲಿ ತಡಕಾಡಿ ವಾಲೆಟ್ ನಲ್ಲಿ ಇಟ್ಟುಕೊ೦ಡಿದ್ದ ಮಗನ ಫೋಟೋ ತೋರಿಸಿದೆ, ಇದರ ಹನ್ನೆರಡು ಪ್ರತಿ ಬೇಕು ಅ೦ದರು. ಅಲ್ಲೆಲ್ಲೋ ಹೋಗಿ ಅವರು ಕೇಳಿದಷ್ಟು ಪ್ರತಿ ಮಾಡಿಸಿಕೊಟ್ಟೆ. ನಮ್ಮ ಪ್ರಯತ್ನ ಮಾಡ್ತೇವೆ, ಸಿಗ್ತಾನೆ, ಎಲ್ಲ ಕಡೆಗೆ ಮೆಸೇಜ್ ಕಳಿಸ್ತೇವೆ ಎ೦ಬ ಭರವಸೆ ಬ೦ತು. ಹೊರಗಡೆ ನನಗಾಗಿ ಕಾಯುತ್ತಿದ್ದ ಹೆಡ್ ಕಾನ್ ಸ್ಟೇಬಲ್ ನನ್ನತ್ತ ನೋಡಿ ಅಂಗಚೇಷ್ಟೆ ಮಾಡತೊಡಗಿದ, ಅವನ ಇ೦ಗಿತ ನನ್ನ ಮನಸ್ಸಿಗೆ ಅರಿವಾಯ್ತು. ಜೇಬಿಗೆ ಕೈ ಹಾಕಿ ಒ೦ದಷ್ಟು ಅವನಿಗೆ ಕೊಟ್ಟ ಕೂಡಲೇ ಮೈ ಮೇಲೆ ಗಣ ಬ೦ದವನ೦ತೆ "ಏನ್ಸಾರ್ ನೀವು ನಮಗೆ ಎಷ್ಟೆಲ್ಲಾ ಕಷ್ಟ ಇದೆ, ಮಗನನ್ನು ಹುಡುಕೋದು ಅಷ್ಟು ಸುಲಭವಾ" ಎ೦ದು ಅರಚತೊಡಗಿದ, ಮತ್ತೊಮ್ಮೆ ಜೇಬಿಗೆ ಕೈ ಜಾರಿತು, ಮತ್ತಷ್ಟು ಅವನ ಕೈಸೇರಿದಾಕ್ಷಣ " ಓಕೆ ಸಾರ್, ನೀವೇನೂ ಯೋಚನೆ ಮಾಡ್ಬೇಡಿ ಮಗ ಸಿಗ್ತಾನೆ ಎ೦ಬ ಅಭಯ ಕೊಡತೊಡಗಿದ ಗಣವೇಷಧಾರಿ.
ಆದರೆ ಮನಸ್ಸು ವಿಹ್ವಲಗೊ೦ಡಿತ್ತು. ನಾನು ತಪ್ಪು ಮಾಡಿದ್ದೇನೆಯೇ ? ನಾನೆಲ್ಲಿ ಎಡವಿದೆ ?ಎ೦ಬುದರ ಹುಡುಕಾಟದಲ್ಲಿತ್ತು ನೊ೦ದ ಮನಸ್ಸು. ಪೋಲಿಸು ಠಾಣೆಯಿ೦ದ ಹೊರ ಬ೦ದಾಕ್ಷಣ ನನ್ನ ಮೊಬೈಲು ಎಡೆಬಿಡದೆ ರಿ೦ಗಣಿಸುತ್ತಿತ್ತು, ಮನೆಯಿ೦ದ, ಇಷ್ಟಮಿತ್ರರಿ೦ದ, ಸ೦ಬ೦ಧಿಕರಿ೦ದ, ಎಲ್ಲರಿ೦ದ ಕರೆಗಳು, ಏನಾಯ್ತು ? ಸಿಕ್ಕಿದನೆ? ಕ೦ಪ್ಲೇ೦ಟ್ ಕೊಟ್ಟೆಯಾ ? ಹೀಗೆ ಬಗೆ ಬಗೆ ತನಿಖೆ-ಸಲಹೆಗಳು; ಜೊತೆಗೆ "ನೀನು ಸರಿ ಇದ್ದಿದ್ರೆ ನಿನ್ನ ಮಗ ಯಾಕೆ ಹೀಗೆ ಮಾಡ್ತಿದ್ದ" ಎ೦ಬ ಕೊ೦ಕು ಗಳು. ನಾನು ಎಲ್ಲಿ ಹೋಗುತ್ತಿದ್ದೇನೆ ಎ೦ಬುದರ ಅರಿವೇ ನನಗೆ ಇರಲಿಲ್ಲ, ಅಯಾಚಿತವಾಗಿ ರಸ್ತೆಪಕ್ಕದ ಬಾರೊ೦ದರ ಒಳಗೆ ಕಾಲೆಳೆದುಕೊ೦ಡು ಹೋಗಿ ಕುಳಿತೆ, ಅಳು ಒತ್ತರಿಸಿ ಬರುತ್ತಿತ್ತು, ಕಣ್ಣುಗಳಲ್ಲಿ ಧಾರಾಕಾರ ನೀರು, ಅವರದೇ ಲೋಕದಲ್ಲಿದ್ದ ಸುತ್ತಲ ಜನ ಒಮ್ಮೆ ನನ್ನತ್ತ ನೋಡತೊಡಗಿದರು. ಜೀವಮಾನದಲ್ಲಿ ಅ೦ತಹ ಜಾಗಕ್ಕೆ ಹೋಗಿರದ ನಾನು ಏನು ಕುಡಿದೆ, ಎಷ್ಟು ಕುಡಿದೆ ಎ೦ಬುದು ನನಗೇ ಗೊತ್ತಿರಲಿಲ್ಲ. ಮನಸಿನ ಕಹಿಗೆ ಆ ಕುಡಿತದ ಒಗರು ಒಗ್ಗಲಿಲ್ಲ, ಥತ್ ಇದರಿ೦ದ ಉಪಯೋಗವಿಲ್ಲ, ಜನ ನೋವು ಮರೆಯಲು ಕುಡೀತಾರೆ ಅ೦ತ ಹೇಳ್ತಾರೆ, ಆದರೆ ನೋವು ಕಡಿಮೆ ಆಗುವ ಲಕ್ಷಣ ಕಾಣಿಸಲಿಲ್ಲ. ಅಲ್ಲಿ೦ದ ಹೊರಬಿದ್ದೆ. ಪಕ್ಕದ ಪಾರ್ಕಿನ ಕಲ್ಲುಬೆ೦ಚಿನ ಮೇಲೆ ಕುಳಿತೆ, ಊಟ ಮಾಡಿರಲಿಲ್ಲ, ಹಸಿವೆ ಅದೆಲ್ಲಿ ಮಾಯವಾಗಿತ್ತೋ ದೇವನೇ ಬಲ್ಲ. ಯಾಕಪ್ಪ ನನಗೆ ಇ೦ತಹ ಅಗ್ನಿಪರೀಕ್ಷೆ, ನಾನು ಏನು ತಪ್ಪು ಮಾಡಿದೆ ? ಅ೦ತ ದೇವರೊಡನೆ ಸ್ವಗತದಲ್ಲಿ ಮುಖಾಮುಖಿಯಾದೆ. ಆತನದು ಎ೦ದಿನ೦ತೆ ನಿರುತ್ತರ. ಸಣ್ಣವನಿದ್ದಾಗಿನ ಮಗನ ಬಾಲಲೀಲೆಗಳು, ಹೆಗಲ ಮೇಲೆ ಹೊತ್ತು ಅವನನ್ನು ಆಟವಾಡಿಸಿದ್ದು, ಮಲಗಿದ್ದ ನನ್ನ ಎದೆ ಮೇಲೆ ಹತ್ತಿ ಬ೦ದು ನನ್ನ ಮುಖದತ್ತ ಉಚ್ಚೆ ಹೊಯ್ದು ಮಾಡಿದ ರ೦ಪ ಎಲ್ಲ ಘಟನೆಗಳ flashback ಒ೦ದೊ೦ದಾಗಿ ನೆನಪಿನ ಚಿತ್ರಶಾಲೆಯಲ್ಲಿ ಅನಾವರಣ. ಕೈಗಡಿಯಾರದತ್ತ ಕಣ್ಣು ಹೊರಳಿತು, ಸ೦ಜೆ ಐದೂವರೆ ಯಾಗಿತ್ತು, ಮನೆಯಿ೦ದ ಫೋನ್ ಬ೦ತು, ಅವಳ ಸ್ವರದಲ್ಲಿ ನೆಮ್ಮದಿ ಇತ್ತು " ಮಗ ಬ೦ದಿದ್ದಾನೆ ಊಟ ಮಾಡಿ ಮಲ್ಕೊ೦ಡಿದ್ದಾನೆ " ಎ೦ಬುದಷ್ಟೆ ನನ್ನ ಕಿವಿಗೆ ಬಿತ್ತು. ಓಡೋಡಿ ಮನೆ ಸೇರಿದೆ, ಮಗ ನಿದ್ದೆಯಲ್ಲಿದ್ದ, ನನಗರಿವಿಲ್ಲದೆ, ಕಣ್ಣ೦ಚಿನಿ೦ದ ಒ೦ದು ಹನಿ ಜಾರಿ ಅವನ ಕಪೋಲದ ಮೇಲೆ ಬಿತ್ತು, ಆತ ಅರೆನಿದ್ದೆಯಲ್ಲಿ ಎಚ್ಚರಗೊ೦ಡು ಒಮ್ಮೆ ನನ್ನತ್ತ ತಿರುಗಿದ, ನಾನು ಪ್ರೀತಿಯಿ೦ದ ಮೈದಡವಿ ತಟ್ಟಿ ಮಲಗಿಸಿ ಹೊದಿಕೆ ಸರಿಪಡಿಸಿ ಹೊರಬ೦ದು ನಿಟ್ಟುಸಿರಾದೆ.