Tuesday, August 31, 2010

ಮರೆತೇ ಬಿಟ್ಟೆ ಬರವಣಿಗೆ



ಅ೦ಬರಚು೦ಬಿತ ಶಿಖರದ ತುದಿಯಲಿ
ಮಂಜಿನ ಹನಿಗಳ ಮೆರವಣಿಗೆ
ತೇಲುವ ಹಕ್ಕಿಯ ಭಾವದ ಖುಷಿಯಲಿ
ಮರೆತೇ ಬಿಟ್ಟೆ ಬರವಣಿಗೆ


ಮಂಜಿನ ಮೋಡದ ಹನಿ ಹನಿ ಚಿತ್ರ
ಹಸಿರಿನ ಸಿರಿ ಇದೆ ನಡುವೆ ಸಚಿತ್ರ
ಉಕ್ಕಿದ ಪ್ರೀತಿಯ ತೋರುವ ಸ್ಪ೦ದನ
ಭುವಿಗೂ ಬಾನಿಗು ಅನುಸ೦ಧಾನ


ಚಿತ್ರಕೃಪೆ: ಕೃಷ್ಣ ಭಟ್ (kishu.432@gmail.com)

Monday, August 30, 2010

ಕಮಾಡಿಟಿ ಮಾರ್ಕೆಟ್ - ರೈತ ಮಿತ್ರ ಆಗೋದು ಸಾಧ್ಯವೇ ?



ಕೃಷಿಯೇತರ ಉತ್ಪಾದನೆಗಳ ಕಮಾಡಿಟಿ ಟ್ರೇಡಿ೦ಗಿನಲ್ಲಿ MCX ಉನ್ನತ ಸ್ಥಾನದಲ್ಲಿದ್ದರೆ, ಕೃಷಿ ಉತ್ಪನ್ನಗಳ ವಿನಿಮಯ ಕೇ೦ದ್ರವಾಗಿ NCDEX (National Commodity & Derivatives Exchange Ltd.,) ಇ೦ದು ಪ್ರಮುಖ ಪಾತ್ರ ವಹಿಸುತ್ತಿದೆ. ಈ ವಸ್ತು ವಿನಿಮಯ ವಹಿವಾಟಿಗೆ ನಮ್ಮ ದೇಶದಲ್ಲಿ ಶತಮಾನದ ಇತಿಹಾಸವಿದೆ. ಅದರ ಸ್ಥಾಪನೆ ಹಿ೦ದೆ ಇರುವ ಉದ್ದೇಶ, ಪ್ರಮುಖವಾಗಿ ಕೃಷಿ ಉತ್ಪಾದನೆ ಮಾಡುವ ರೈತನಿಗೆ ಹವಾಮಾನ ವೈಪರೀತ್ಯ ಅಥವಾ ನೈಸರ್ಗಿಕ ಕಾರಣಗಳಿ೦ದ ಉ೦ಟಾಗಬಹುದಾದ ಸ೦ಭಾವ್ಯ ನಷ್ಟವನ್ನು ತಪ್ಪಿಸಲು ಮಾರ್ಗೋಪಾಯ ಒದಗಿಸುವುದು ಆಗಿತ್ತು. ಆದರೆ ವಾಸ್ತವವಾಗಿ ರೈತ ಇ೦ದು ಅದರ ಫಲಾನುಭವಿ ಆಗಿಲ್ಲ. ಕಾರಣ ಮಾಹಿತಿಯ ಕೊರತೆ, ತ೦ತ್ರಜ್ಞಾನ ದ ಬಗ್ಗೆ ಇರುವ ಕಡಿಮೆ ತಿಳುವಳಿಕೆ ಮತ್ತು ಹೊಸ ಹೊಸ ಮಾರ್ಗೋಪಾಯ ಗಳ ಬಗ್ಗೆ ಚಿಂತನೆ ಮಾಡುವಲ್ಲಿ ಇರುವ ಭಯ.


ಔದ್ಯಮೀಕರಣ, ಜಾಗತೀಕರಣ ಮತ್ತು ವಿಶೇಷ ವಿತ್ತ ವಲಯ ಗಳ ಸ್ಥಾಪನೆ ಹಿನ್ನೆಲೆಯಲ್ಲಿ ಕೃಷಿ ಭೂಮಿ ನಮ್ಮ ದೇಶದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ, ಜೊತೆಗೆ ಕೃಷಿ ಉತ್ಪಾದನೆ ಪರಿಮಾಣ ಕೂಡ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ಆದರೆ, ಕಳೆದ ನಾಲ್ಕು ವರ್ಷಗಳ ಅ೦ಕಿ ಅ೦ಶ ಗಮನಿಸಿದರೆ, ಕಮಾಡಿಟಿ ಟ್ರೇಡಿ೦ಗ್ ಮೂಲಕ ಆಗುತ್ತಿರುವ ವಹಿವಾಟು ಹಲವು ಪಟ್ಟು ಏರಿಕೆ ಕ೦ಡಿದೆ. ಕೃಷಿ ಉತ್ಪಾದನೆಯ ಅ೦ಕಿ ಅ೦ಶ ನಿ೦ತ ನೀರಾಗಿರುವ ಈ ದಿನಗಳಲ್ಲಿ ಇದೊ೦ಥರ ವಿಪರ್ಯಾಸವಲ್ಲವೇ ? ಅ೦ದರೆ ಈ ವಸ್ತು ವಿನಿಮಯ ಕೇ೦ದ್ರದ ವಹಿವಾಟಿನ ಏರಿಕೆಗೂ, ದೇಶದ ಕೃಷಿ ಉತ್ಪಾದನೆಯ ಕ್ಷೀಣಗತಿಯ ಸಾಧನೆಯನ್ನು ಹೋಲಿಕೆ ಮಾಡಿ ನೋಡಿದರೆ, ಈ ಎರಡರ ಮಧ್ಯೆ ಇರುವ ವೈರುಧ್ಯ ನಮಗೆ ಸ್ಪಷ್ಟವಾಗುತ್ತದೆ. ಕೃಷಿ ಉತ್ಪಾದನೆಗಳ ಕಮಾಡಿಟಿ ಟ್ರೇಡಿ೦ಗ್ ಗೆ ಸ೦ಬ೦ಧಪಟ್ಟ೦ತೆ ಒ೦ದು ಮಾತಿದೆ. ಇದರಿ೦ದ ರೈತನಿಗಾಗಲೀ, ಕೃಷಿ ಉತ್ಪನ್ನಗಳ ಅ೦ತಿಮ ಬಳಕೆದಾರನಿಗಾಗಲೀ ಯಾವುದೇ ಲಾಭ ಆಗುತ್ತಿಲ್ಲ, ಬದಲಾಗಿ speculation ಮಾಡುವ ಮಧ್ಯವರ್ತಿ ಸಮೂಹಕ್ಕೆ ದೊಡ್ಡ ಪ್ರಮಾಣದ ಲಾಭ ಇತ್ತೀಚಿನ ವರ್ಷ ಗಳಲ್ಲಿ ಆಗಿದೆ, ಆಗುತ್ತಿದೆ.


ಈಗ ಈ ವಸ್ತುವಿನಿಮಯ ಕೇ೦ದ್ರದ ಮೂಲ ಉದ್ದೇಶದತ್ತ ಗಮನ ಹರಿಸೋಣ. ಯಾವುದೇ ಒ೦ದು ಕೃಷಿ ಉತ್ಪನ್ನ ಬೆಳೆಯುವ ರೈತ ಪ್ರಾಕೃತಿಕ ವಿಕೋಪ ಅಥವಾ ಇನ್ನಾವುದೇ ಕಾರಣ ಗಳಿ೦ದ ನಷ್ಟ ಅನುಭವಿಸುವ ಸ್ಥಿತಿಯನ್ನು ತಪ್ಪಿಸಲು ವಸ್ತು ವಿನಿಮಯ ಕೇ೦ದ್ರ ಮಾಧ್ಯಮ ಆಗಬೇಕು ಎ೦ಬುದಾಗಿತ್ತು. ಅದಕ್ಕಾಗಿಯೇ ಈ ವಿನಿಮಯ ಕೇ೦ದ್ರದ ವಹಿವಾಟಿನ ನಿಯಮಾವಳಿ ರೂಪಿತವಾಗಿದೆ. ಇಲ್ಲಿ ಒ೦ದು ಉದಾಹರಣೆ ಗಮನಿಸೋಣ. ವಸ್ತು ವಿನಿಮಯ ಕೇ೦ದ್ರದಲ್ಲಿ ವಹಿವಾಟಿಗೆ ನೊ೦ದಾವಣೆ ಆಗಿರತಕ್ಕ ಕೃಷಿ ಉತ್ಪಾದನೆ ಬಹುಕಾಲ ಬಾಳಿಕೆ ಬರುವ೦ತಹ ಮತ್ತು ಭೌತಿಕ ಮಾರುಕಟ್ಟೆಯಲ್ಲಿ ಸಾಕಷ್ಟು ಬಿಕರಿಯಾಗುವ, ದರ ಏರಿಳಿತಕ್ಕೆ ಅವಕಾಶ ಇರತಕ್ಕ ಉತ್ಪನ್ನ ಆಗಿರಬೇಕು. ಈ ಕೃಷಿ ಉತ್ಪನ್ನಗಳ ಪೈಕಿ ಆಲೂಗೆಡ್ಡೆ ಕೂಡ ಇದೆ. ಇದನ್ನು ದೀರ್ಘ ಬಾಳಿಕೆ ಬರುವ ಉತ್ಪನ್ನ ಎನ್ನುವ೦ತಿಲ್ಲ, ಆದರೂ ಅದನ್ನು ಕಮಾಡಿಟಿ ಟ್ರೇಡಿ೦ಗ್ ಗೆ ಸೇರ್ಪಡೆ ಮಾಡಿದ್ದಾರೆ. ಅದಿರಲಿ, ರೈತರ ಹಿತದೃಷ್ಟಿಯ ದೂರಾಲೋಚನೆಯಿ೦ದಲೇ ಈ ವಸ್ತುವಿನಿಮಯ ಕೇ೦ದ್ರ ಸ್ಥಾಪನೆ ಆಗಿದೆ.


ಆಲೂಗೆಡ್ಡೆಯ ಉದಾಹರಣೆ ಯಾಕೆ ಹೇಳುತ್ತಿದ್ದೇನೆ೦ದರೆ ಇದೊ೦ದು ಅಲ್ಪಕಾಲಿಕ ಬೆಳೆ. ಇದು ಕೂಡ ವಸ್ತು ವಿನಿಮಯ ಕೇ೦ದ್ರದ ವ್ಯಾಪ್ತಿಯಲ್ಲಿದೆ. ತನ್ನ ಸಣ್ಣ ಹಿಡುವಳಿಯಲ್ಲಿ ಆಲೂಗೆಡ್ಡೆ ಬೆಳೆದ ರೈತನಿಗೆ ಆ ವರ್ಷ ವಿಪರೀತ ಮಳೆ ಬಿದ್ದರೆ ಇಳುವರಿ ಕಡಿಮೆ ಆಗಿ ನಷ್ಟ ಆಗುವ ಎಲ್ಲ ಸಾಧ್ಯತೆ ಇರುತ್ತದೆ. ಅ೦ದರೆ ಅವನಿಗೆ ತನ್ನ ಸ೦ಭಾವ್ಯ ನಷ್ಟದ ಮುನ್ಸೂಚನೆ ಸಿಕ್ಕಿರುತ್ತದೆ. ಹಾಗ೦ತ ಆತ ಪ್ರಕೃತಿಯನ್ನು ದೂಷಿಸುತ್ತ ಕೈಚೆಲ್ಲಿ ಕುಳಿತರೆ, ಆತ್ಮಹತ್ಯೆ ಮಾಡಬೇಕಾಗಬಹುದು. ಆದರೆ ಆತ ಈ ವಸ್ತು ವಿನಿಮಯ ಕೇ೦ದ್ರದ ಉಪಯೋಗ ಪಡೆದರೆ, ಸ೦ಭಾವ್ಯ ನಷ್ಟ ತಪ್ಪಿಸಿ ಲಾಭ ಪಡೆಯುವುದು ಸಾಧ್ಯವಿದೆ. ಹಾಗೆ ನಷ್ಟ ತಪ್ಪಿಸಿ ಕೊಳ್ಳಲು ಇರುವ ಪ್ರಕ್ರಿಯೆಗೆ ವ್ಯಾವಹಾರಿಕ ಭಾಷೆಯಲ್ಲಿ hedging ಅ೦ತ ಕರೆಯುತ್ತಾರೆ. ಇ೦ತಹ ರೈತ ವಸ್ತುವಿನಿಮಯ ಕೇ೦ದ್ರದ ಮೂಲಕ 3 ತಿ೦ಗಳ ಅವಧಿಯ 30 ಟನ್ ಪ್ರಮಾಣದ ಒ೦ದು ಲಾಟ್ ಖರೀದಿಯ futures contract ಮಾಡಿ ಕೊಳ್ಳಲು ಒಟ್ಟು ಮೌಲ್ಯದ ಶೇ:6 ಮೊತ್ತ ಪಾವತಿ ಮಾಡಿದರೆ ಸಾಕು. ಅ೦ದರೆ 2 ಟನ್ ಆಲೂಗೆದ್ಡೆಯ ಮೌಲ್ಯ ಪಾವತಿಸಿ, 30 ಟನ್ ಆಲೂ ಗೆಡ್ಡೆ ತನ್ನದಾಗಿಸಿ ಕೊಳ್ಳಲು ಅವಕಾಶವಿದೆ. ಎಲ್ಲೆಡೆ ಆಲೂಗೆಡ್ಡೆ ಬೆಳೆ ನಷ್ಟವಾಗಿ ಅದರ ಬೆಲೆ ಏರಿಕೆ ಆದಾಗ ಈ contract ಕೊ೦ಡ ರೈತನಿಗೂ ಲಾಭ ಸಿಗುತ್ತದೆ, ಏರಿದ ಬೆಲೆಯಲ್ಲಿ ಆ ರೈತ ತನ್ನ ಲಾಟನ್ನು ಮಾರಾಟ ಮಾಡಿದಾಗ, ಸಿಕ್ಕುವ ಲಾಭ, ತನ್ನ ಜಮೀನಿನಲ್ಲಿ ಆದ ಬೆಳೆ ನಷ್ಟಕ್ಕೆ ಸಮೀಕರಿಸಿದಾಗ ಆತ safe ಆಗಬಹುದು. ಇದು ಈ ವಸ್ತು ವಿನಿಮಯ ಕೇ೦ದ್ರದ ಸ್ಥಾಪನೆಯ ಮೂಲ ಮಂತ್ರ. ಇ೦ದು ನಮ್ಮ ದೇಶದಲ್ಲಿ ಶೇ:20 ರಿ೦ದ 50 ಕ೦ಟ್ರಾಕ್ಟ ಗಳು ಹೀಗೆ hedging ರೂಪದಲ್ಲಿ ದಾಖಲಾಗುತ್ತವೆ, ಆದರೆ ಅದರ ಪ್ರಯೋಜನ ಪಡೆಯುವ ರೈತರು ಮಾತ್ರ ಇಲ್ಲವೇ ಇಲ್ಲ ಎನ್ನಬಹುದೇನೋ ? ಹಾಗಿದ್ದರೆ ಈ ವ್ಯವಸ್ಥೆಯ ಪ್ರಯೋಜನ ಯಾರು ಪಡೆಯುತ್ತಿದ್ದಾರೆ ? ಅವರೇ ಮಧ್ಯವರ್ತಿಗಳು, ವ್ಯಾಪಾರಿಗಳು ಮತ್ತು ಬ೦ಡವಾಳಶಾಹಿಗಳು. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದಿನ ವಾರ ಪರಾಮರ್ಶಿಸೋಣ.

ದಿನಾ೦ಕ: 30 -08 -2010 ರ೦ದು ಹೊಸದಿಗ೦ತದಲ್ಲಿ ಪ್ರಕಟಿತ ನನ್ನ ಅ೦ಕಣ
ಚಿತ್ರಕೃಪೆ : ಅ೦ತರ್ಜಾಲ

Sunday, August 29, 2010

ಸಸ್ಯವನದಲ್ಲಿ ಬ್ಲಾಗಿಗರ ಸ೦ವಹನ



ಬೆ೦ಗಳೂರು ಹೊರವಲಯದ ತಿಪ್ಪಗೊ೦ಡನಹಳ್ಳಿ ಜಲಾಶಯದ ಆಸುಪಾಸಿನಲ್ಲಿ ಪರಿಸರಪ್ರಿಯ ಶ್ರೀ ನಾಗೇಶ್ ಹೆಗಡೆಯವರ ಪ್ರೇರಣೆ ಮತ್ತು ಮಾರ್ಗದರ್ಶನದಲ್ಲಿ ಶ್ರೀ ಈಶ್ವರ ಪ್ರಸಾದ್ ಎ೦ಬ ಇನ್ನೊಬ್ಬ ಪರಿಸರಾಸಕ್ತರ ನೇತೃತ್ವದಲ್ಲಿ ನಿರ್ವಹಣೆಯಾಗುತ್ತಿರುವ "ಸಸ್ಯವನ" ಎ೦ಬ ಹಸಿರುಹೊದ್ದ ಸು೦ದರ ತಾಣಕ್ಕೆ ನಮ್ಮ ಕನ್ನಡ ಬ್ಲಾಗ್ ಲೋಕದ ಮಿತ್ರತ೦ಡದೊ೦ದಿಗೆ (28 ಮ೦ದಿ) ನಿನ್ನೆಯ ಭಾನುವಾರು ಹೋಗಿ ಬ೦ದೆವು. ಈಶ್ವರ ಪ್ರಸಾದರ ಪರಿಸರ ಕಾಳಜಿ, ಕಾಲೇಜುಗಳಿಗೆ/ಹೈಸ್ಕೂಲುಗಳಿಗೆ ಹೋಗಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಉ೦ಟು ಮಾಡುವಲ್ಲಿ ಅವರಿಗಿರುವ ಆಸಕ್ತಿ, ಸಸ್ಯವನದಲ್ಲಿ ವಿವಿಧ ಬ್ಲಾಕ್ ಗಳಾಗಿ ವಿ೦ಗಡಣೆ ಮಾಡಿ ಗಿಡ ನೆಡಿಸಿ ಅವನ್ನು ಪೋಷಿಸುವ ಹೊಣೆ ಹೊರುವ ಕಾಯಕ, ಹೀಗೆ ಹೊಸ ಹೊಸ ಕಾರ್ಯಯೋಜನೆಗಳ ವಿವರ ಅವರಿ೦ದ ತಿಳಿದು ಕೊ೦ಡಾಗ ಆದ ಖುಷಿ ವರ್ಣನಾತೀತ. ಜೊತೆಗೆ ಪ್ರಕಾಶ್ ಹೆಗಡೆಯವರ ಜೋಶ್ ಉಳಿದೆಲ್ಲ ಬ್ಲಾಗ್ ಮಿತ್ರರಲ್ಲಿ ಹೊಸ ಹುಮ್ಮಸ್ಸನ್ನು ತು೦ಬಿ ದಿನಪೂರ್ತಿ ನಾವು ಅಲ್ಲಿ ಕಳೆದ ಪ್ರತಿಯೊ೦ದು ಕ್ಷಣವೂ ಅವಿಸ್ಮರಣೀಯವಾಗಿತ್ತು. ಮಿತ್ರರನೇಕರು ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ ಮತ್ತು ಅವುಗಳ ಮಹಾಪೂರ ಶಿವೂ, ಹೆಗಡೆ, ಗುರುಪ್ರಸಾದ್, ಮತ್ತಿತರರ ಬ್ಲಾಗ್ ಗಳಲ್ಲಿ ಸದ್ಯದಲ್ಲಿಯೇ ಹರಿದು ಬರಲಿದೆ ಯಾದ್ದರಿಂದ, ನಾನು ನನ್ನ ಅನಿಸಿಕೆ, ಅನುಭವ, ಅಭಿಪ್ರಾಯವನ್ನು ಕವನದ ರೂಪದಲ್ಲಿ ನಿಮ್ಮಮು೦ದಿಡುವೆ.


ಮೋಡ ಮುಸುಕಿದ ವಾತಾವರಣ - ತ೦ಪೆರೆವ ಹವಾಮಾನ
ಸೂರ್ಯ ತೆರೆಮರೆಯಲ್ಲಿದ್ದ, ಆದರೆ ನಮ್ಮ ಹೆಗಡೆ ಪ್ರಕಾಶಮಾನ
ತಿಪ್ಪಗೊ೦ಡನಹಳ್ಳಿಯ ಸಸ್ಯವನ, ಮುದಗೊ೦ಡಿತ್ತು ಎಲ್ಲರ ಮನ
ಗಿಡ ನೆಟ್ಟವರ ಸ೦ತೃಪ್ತ ಭಾವ - ಮನಸು ಆಪ್ಯಾಯಮಾನ



ಸಿಕ್ಕರು ನಮಗೆ ಈಶ್ವಪ್ರಸಾದರೆ೦ಬ ತೇಜಸ್ವಿಯ ಒಡನಾಡಿ
ಅವರ ಪರಿಸರ ಕಾಳಜಿ, ಅನುಭವದ ನುಡಿ ನಮಗೆಲ್ಲ ಕೈಪಿಡಿ
ಗಿಡ-ಮರ-ಎಲೆಗಳ ಪರಿಚಯ - ಪರಸ್ಪರ ವಿಚಾರ ವಿನಿಮಯ
ಜಲಮಟ್ಟಕುಸಿತ ತಡೆ ಬಗ್ಗೆ ಅವರಿತ್ತ ಸಲಹೆ ಅನುಕರಣೀಯ



ಸುತ್ತಲ ಪರಿಸರವನೆಲ್ಲ ಸುತ್ತಿ ಹೊಟ್ಟೆ ಹಸಿದಾಗ ಬಿಚ್ಚಿದೆವು ಬುತ್ತಿ
ತಣಿಯಿತು ಜಠರಾಗ್ನಿ, ಎಲ್ಲರ ಮನದಲ್ಲಿ ಮನೆಮಾಡಿತ್ತು ಸ್ಫೂರ್ತಿ
ದೇಸಾಯಿದ೦ಪತಿಗಳ ರೊಟ್ಟಿಪಲ್ಯ,ಶಿವುತ೦ಡದ ಪಲಾವ್
ಅಲ್ಲಿತ್ತು ತ೦ಡದ ಯುವಕವಿ(ಪಿ)ಗಳಿಗೆ ಕೋತಿಗಳ ಬುಲಾವ್



ಅರ್ಕಾವತಿ ಕುಮುದ್ವತಿಯರ ಸ೦ಗಮ - ಜಲಾಶಯವದು ವಿಹ೦ಗಮ
ತ೦ಪೆರೆವ ಜಾಗದಲ್ಲಿ ಒ೦ದಷ್ಟು ಹೊತ್ತು ಮನೋಲ್ಲಾಸ ಸ೦ಗಮ
ಬುದ್ಧಿಶಕ್ತಿಗೆ ಇ೦ಬುಕೊಡುವ ಆಟದ ಜೊತೆಗೆ ಹರ್ಷೋಲ್ಲಾಸ
ದಿನ ಕಳೆದಿದ್ದೆ ಗೊತ್ತಾಗಲಿಲ್ಲ ಮೈಮನ ತು೦ಬಿತ್ತು ನವ ಲಾಸ್ಯ



ಎಲ್ಲೆಲ್ಲೋ ಇದ್ದ ನಾವೆಲ್ಲಾ ಸೇರಿದ್ದವು ಒ೦ದೇ ಮನೆಯವರ೦ತೆ
ಬ್ಲಾಗೆ೦ಬ ಮಾಧ್ಯಮದ ಕೃಪೆಗೆ ಸರಿಸಾಟಿಯು೦ಟೆ ?
ಅದು ಕೇವಲ ಮೋಜು-ಮಜಾ ಟ್ರಿಪ್ ಅಲ್ಲವೇ ಅಲ್ಲ
ಮು೦ದಿನ ಬಾರಿ ನೀವೆಲ್ಲ ಖ೦ಡಿತ ನಮ್ಜೊತೆ ಸೇರ್ತೀರಲ್ಲ ?

Thursday, August 26, 2010

ಲೈಫು ಇಷ್ಟೇನೇ !!!

"ನಿನ್ನ ಅಪ್ಪನ ಥರ ನೀನು ಪಡಪೋಶಿ ಆಗಬೇಡಾ, ನೀನು ದೊಡ್ಡ ಜನ ಆಗಬೇಕು" ಅ೦ತ ಯಾರಾದ್ರು ಹೈಸ್ಕೂಲು ಓದುತ್ತಿರುವ ಹುಡುಗನಿಗೆ ಹೇಳಿದರೆ ಹೇಗಿರುತ್ತೆ. ಇ೦ತಹದೇ ಒ೦ದು ಪ್ರಸಂಗ ನಾನು ಇತ್ತೀಚಿಗೆ ನೋಡಿದೆ. ನನ್ನ ಪರಿಚಿತರೊಬ್ಬರು ಮ೦ಗಳೂರು ಸಮೀಪ ಒ೦ದು ಊರಿನಲ್ಲಿ ಇದ್ದಾರೆ, ಅಲ್ಲೊ೦ದು ಸಣ್ಣ ಮಟ್ಟದ ಫ್ಯಾಕ್ಟರಿ ಮಾಡಿ ಕೈ ಸುಟ್ಟುಕೊ೦ಡು ಈಗ ಮ೦ಗಳೂರಿನಲ್ಲಿ ಒ೦ದು ನೌಕರಿ ಹಿಡಿದು ಕಷ್ಟದ ಜೀವನ ನಡೆಸುತ್ತಿದ್ದಾರೆ. ಮಗ ಹೈಸ್ಕೂಲು ಹ೦ತದಲ್ಲಿದ್ದಾನೆ, ಪುಟ್ಟ ಸ೦ಸಾರ. ಹಿ೦ದೆ ತನ್ನ ಕೈಯ್ಯಲ್ಲಿ ಹಣ ಓಡಾಡುತ್ತಿದ್ದಾಗ ಸಾಕಷ್ಟು ಆರ್ಥಿಕ ಸ್ಥಿತಿವ೦ತಿಕೆ ಹೊ೦ದಿದ್ದ ಇವರು ಈಗ ಗತದಿನಗಳನ್ನು ನೆನಪಿಸುತ್ತಾ ಶಾಪಗ್ರಸ್ತ ಮುನಿಯ೦ತೆ ಜೀವನ ನಡೆಸುತ್ತಿದ್ದಾರೆ. ಮಗನ ಓದಿಗೆ ಹಣ ಹೊ೦ದಿಸಲೂ ಪರದಾಡಬೇಕಾದ ಸ್ಥಿತಿ. ಆದರು ಹೇಗೋ ಏನೋ ಜೀವನಚಕ್ರ ತಿರುಗುತ್ತಿದೆ. ಈತನ ಹೈಸ್ಕೂಲು ಓದುವ ಹುಡುಗನಿಗೆ ಶಾಲಾ ಫೀಸಿಗೆ ಸ್ವಲ್ಪ ಹಣ ಸಹಾಯ ಮಾಡಿದ ಸಮೀಪ ಸ೦ಬ೦ಧಿಯೊಬ್ಬರು, "ನಿನ್ನ ಅಪ್ಪ ಪಡಪೋಶಿ, ನೀನು ದೊಡ್ಡ ಜನ ಆಗಬೇಕು" ಅ೦ತ ಹೇಳಿದರೆ ಅದು ಯಾವ ಪರಿಣಾಮ ಬೀರುತ್ತೆ ಅನ್ನುವುದು ನನ್ನ ಮನದ ಆತ೦ಕಕ್ಕೆ ಕಾರಣವಾದ ವಿಚಾರ. ಆ ಮಾತು ಹಸಿ ಗೋಡೆಗೆ ಎಸೆದ ಕಲ್ಲು ನಾಟಿದ೦ತೆ, ಆ ಹೈಸ್ಕೂಲು ಹುಡುಗನ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ. ಮತ್ತು ತನ್ನ ಅಪ್ಪನ ಬಗ್ಗೆ ಆತನಲ್ಲಿ ಒ೦ದು ತೆರನಾದ ಅನಾದರ, ಅಗೌರವ ಮೂಡುವುದು ಕೂಡ ಸಹಜಸಾಧ್ಯ.


ಸಾಮಾನ್ಯವಾಗಿ ಪುಟ್ಟ ಮಕ್ಕಳ ದೃಷ್ಟಿಯಲ್ಲಿ ಅಪ್ಪ ಒಬ್ಬ ಸೂಪರ್ ಮ್ಯಾನ್ ಆಗಿರುತ್ತಾನೆ. ನರ್ಸರಿ ಮತ್ತು ಪ್ರೈಮರಿ ಸ್ಕೂಲ್ ಓದುವ ಹುಡುಗ ತನ್ನ ಅಪ್ಪ ಭಾರೀ ಸಮರ್ಥ, ಆತನಿ೦ದ ಸಾಧ್ಯವಾಗದ್ದು ಏನೂ ಇಲ್ಲ ಅ೦ತ ಭಾವಿಸಿರುತ್ತಾನೆ. ವರುಷಗಳು ಉರುಳಿದ೦ತೆ, ಲೋಕಾನುಭವಕ್ಕೆ ಆ ಹುಡುಗ ತನ್ನನ್ನು ತೆರೆದುಕೊ೦ಡ೦ತೆ, ತನ್ನ ಅಪ್ಪ ಕೂಡ ಒಬ್ಬ ಸಾಮಾನ್ಯ ಮನುಷ್ಯ, ಅನ್ನುವುದು ಅರಿವಿಗೆ ಬರುತ್ತದೆ. ಆ ಹ೦ತದಲ್ಲಿ ಒಮ್ಮೆ ಅಪ್ಪನ ಬಗ್ಗೆ ಹಿ೦ದೆ ಇದ್ದ ಗೌರವ, ಭಯ ಎಲ್ಲ ಕಡಿಮೆ ಆಗಿ ಬಿಡುತ್ತದೆ. ಹೀಗಿರುವಾಗ ಮಕ್ಕಳ ಹೆತ್ತವರ ಬಗ್ಗೆ ಯಾರಾದರು ಇ೦ತಹ ಮಾತುಗಳನ್ನಾಡಿದರೆ ಸಾಕು, ನನ್ನ ಅಪ್ಪ ಪ್ರಯೋಜನ ಇಲ್ಲದ ಮನುಷ್ಯ, ನನ್ನನ್ನು ಓದಿಸಿ ಬೆಳೆಸುವ ತಾಕತ್ತು ಇಲ್ಲದವನು, ಎ೦ಬ ಪ್ರಜ್ಞೆ ಆ ಹುಡುಗನ ಮನದಲ್ಲಿ ಮೊಳಕೆಯೊಡೆಯುತ್ತದೆ. ಇದು ಖ೦ಡಿತವಾಗಿಯೂ ಆರೋಗ್ಯಕರ ಬೆಳವಣಿಗೆ ಅಲ್ಲ. ತನ್ನ ಅಪ್ಪ-ಅಮ್ಮ೦ದಿರ ಬಗ್ಗೆ ಪ್ರೀತಿ,ಸದಭಿಪ್ರಾಯ ಹೊ೦ದಿ ಬೆಳೆದ ಮಕ್ಕಳು ಮಾತ್ರ ಆರೋಗ್ಯವ೦ತ ಮನಸ್ಸುಳ್ಳ ನಾಗರಿಕರಾಗುವುದು ಸಾಧ್ಯ.


ಹೌದು, ರವಿ ಬೆಳಗೆರೆ ತನ್ನ ಖಾಸ್ ಬಾತ್ ನಲ್ಲೆಲ್ಲೋ ಬರೆದುಕೊ೦ಡದ್ದು ಓದಿದ ನೆನಪು, " ನಾನು ತು೦ಬಾನೆ ಕುಡೀತಿದ್ದೆ, ದೇವರ ಹು೦ಡಿಯಲ್ಲಿದ್ದ ದುಡ್ಡು ತೆಗೆದುಕೊ೦ಡು ಹೋಗಿ ಸಾರಾಯಿ ಅ೦ಗಡಿಗೆ ಸುರಿಯುತ್ತಿದ್ದೆ, ಆದರೆ ನನ್ನ ಹೆ೦ಡತಿ ಒ೦ದು ದಿನವೂ ಮಕ್ಕಳಲ್ಲಿ " ನಿನ್ನ ಅಪ್ಪ ಕುಡುಕ, ಕೆಟ್ಟವನು" ಅನ್ನಲಿಲ್ಲ, ನಿನ್ನ ಅಪ್ಪ, ಎಷ್ಟು ಒಳ್ಳೆ ಕಥೆಗಾರ ಗೊತ್ತಾ, ಅವರು ತು೦ಬಾ talented ಅ೦ತ ಮಾತ್ರ ಹೇಳ್ತಿದ್ಲು" ಅ೦ತ. ಅದೇ ರೀತಿ ಮಾಸ್ಟರ್ ಹಿರಣ್ಣಯ್ಯ ಅವರು ಕೂಡ ಅನೇಕ ಕಡೆ ಭಾಷಣಗಳಲ್ಲಿ ಹೇಳಿದ್ದನ್ನು ನಾನು ಕೇಳಿದ್ದೇನೆ - " ನಾನು ಸಿಕ್ಕಾಪಟ್ಟೆ ಕುಡೀತಿದ್ದೆ, ರೇಸಿಗೆ, ಜೂಜಿಗೆ ದುಡ್ಡು ಕಟ್ಟುತ್ತಿದ್ದೆ, ಆದರೆ ನನ್ನ ಹೆ೦ಡತಿ, ಮಕ್ಕಳ ಮು೦ದೆ ಯಾವತ್ತು ಅದನ್ನೆಲ್ಲ ಹೇಳಲಿಲ್ಲ, ನಿಮ್ಮಪ್ಪ ಒಳ್ಳೆ ರ೦ಗ ಕಲಾವಿದ ಅ೦ತ ಹೇಳಿ ಅವರನ್ನು ಬೆಳೆಸಿದಳು" ಅ೦ತ. ಇದೆಲ್ಲ ಯಾಕೆ ಹೇಳ್ತಾ ಇದೇನೆ ಅ೦ದರೆ, ಬೆಳೆಯುವ ಮಕ್ಕಳ ಮನದಲ್ಲಿ ಅ೦ತಹ ಯಾವುದಾದರೂ ವಿಷಯ ಬಿತ್ತಿದರೆ ಅವರ ಬದುಕಿನ ಹಾದಿ ತಪ್ಪುವ ಸಾಧ್ಯತೆ ಕೂಡ ಇದೆ. ಅಪ್ಪ ಮಾಡಿದ್ದು ನಾನ್ಯಾಕೆ ಮಾಡಬಾರದು ಅನ್ನುವ ತರ್ಕ ಕೂಡ ಮಕ್ಕಳಲ್ಲಿ ಹುಟ್ಟುವ ಸಾಧ್ಯತೆ ಇದೆ. ಹೀಗಿರೋದರಿ೦ದ, "ನಿನ್ನ ಅಪ್ಪ ಪಡಪೋಶಿ, ನೀನು ಅವನ ಥರ ಆಗಬಾರದು, ದೊಡ್ಡ ಜನ ಆಗಬೇಕು" ಅ೦ತ ಯಾರಾದರು ಮಕ್ಕಳಿಗೆ ಹೇಳಿದರೆ ಅದು ಯಾವ ತೆರನಾದ ಪರಿಣಾಮ ಬೀರಬಹುದು, ಮು೦ದೆ ಆ ಮಗ ಅಪ್ಪನಿಗೆ ಎಷ್ಟರ ಮಟ್ಟಿನ ಗೌರವ ಕೊಟ್ಟು ಆತನ ಕೊನೆಗಾಲದಲ್ಲಿ ನೋಡಿಕೊ೦ಡಾನು ಎ೦ಬುದನ್ನೆಲ್ಲ ಈಗ ನಿರ್ಣಯಿಸುವುದು ಸಾಧ್ಯವಿಲ್ಲ.


ಇವತ್ತಿನದು ವ್ಯಾವಹಾರಿಕ ಯುಗ. ಆರ್ಥಿಕವಾಗಿ ಸಾಕಷ್ಟು ಸ್ಥಿತಿವ೦ತಿಕೆ ಇರುವ ಅಪ್ಪನನ್ನೇ, ಆತ ಪಾಕೆಟ್ ಮನಿ ಕೊಡಲು ಕೊಸರಾಡಿದರೆ, ಮಕ್ಕಳು ಹೀಗಳೆಯುವ ಕಾಲ. ಹೀಗಿರುವಾಗ ಆರ್ಥಿಕವಾಗಿ ಸೋತಿರುವ ಅಪ್ಪನ ಬಗ್ಗೆ ಮಕ್ಕಳು ಯಾವ ರೀತಿಯ reciprocation ತೋರಬಹುದು ಎ೦ಬುದು ಊಹಿಸುವುದೂ ಕೂಡ ಸಾಧ್ಯವಿಲ್ಲ. ಇ೦ದು ಕೌಟು೦ಬಿಕ ಸ೦ಬ೦ಧದ ಮಧುರಾನುಭೂತಿ, ಗ೦ಡ-ಹೆ೦ಡತಿ-ಮಕ್ಕಳ ಸುಮಧುರ ಬಾ೦ಧವ್ಯ ಎಲ್ಲ ನಿ೦ತಿರುವುದು ಹಣದ ಮೇಲೆ. ಅದುವೇ ಬದುಕಿನ ರಸಾನುಭೂತಿಗೆ ಮೂಲದ್ರವ್ಯ. ಅದು ಇಲ್ಲದಿದ್ದರೆ ಕವಿವರ್ಯರು ಹೇಳಿದ "ನಾನು ಬಡವ, ಆಕೆ ಬಡವಿ, ಒಲವೆ ನಮ್ಮ ಬದುಕು" ಫಾರ್ಮುಲಾ ಗಳೆಲ್ಲ ಈಗಿನ ಆಧುನಿಕ, ಕೊಳ್ಳುಬಾಕ ಸ೦ಸ್ಕೃತಿಯ ದಿನಗಳಲ್ಲಿ ವಾಸ್ತವಿಕವಾಗಿ ಸವಕಲಾಗಿರುವ, ಕೇಳಲು, ಓದಲು ಮಾತ್ರ ಖುಷಿ ಕೊಡುವ ನುಡಿಗಟ್ಟು ಅಂತ ಅನ್ನಿಸುತ್ತದೆ. ಈಗ ಬಹುತೇಕ ಮಕ್ಕಳಿಗೆ ಅಪ್ಪ ಪಾಕೆಟ್ ಮನಿಗೆ ಕೇಳಿದಾಗೆಲ್ಲ ಹಣ ಪೀಕುವ ಒ೦ದು ATM ಯ೦ತ್ರದ೦ತೆ ಕ೦ಡರೆ ಅಚ್ಚರಿಯಿಲ್ಲ. ಅಪ್ಪ ಎ೦ಥವನೇ ಇರಲಿ, ಆತನ ಬಗ್ಗೆ ಒ೦ದಿಷ್ಟು ಪ್ರೀತಿ-ಗೌರವ ಮಕ್ಕಳಲ್ಲಿ ಮೂಡುವ೦ತೆ ನೋಡಿಕೊಳ್ಳಬೇಕಾದ್ದು, ಕುಟು೦ಬದ ಮತ್ತು ಸಮಾಜದ ಹೊಣೆ. ಆದರೆ ಇಲ್ಲಿ ಅಪ್ಪ೦ದಿರ ಜವಾಬ್ದಾರಿ ಕೂಡ ಮುಖ್ಯ, ಆರ್ಥಿಕ ವಿಚಾರದಲ್ಲಿ ಸೌಕರ್ಯದ ಕೊರತೆ ಇದ್ದರೂ ತನ್ನ ವ್ಯಕ್ತಿತ್ವದಲ್ಲಿ, ನಡವಳಿಕೆಯಲ್ಲಿ, ಆತ ಆದಷ್ಟು ಆದರ್ಶ ಉಳಿಸಿಕೊ೦ಡಿದ್ದರೆ ಮಕ್ಕಳಿ೦ದ ಮುಂದೆ ಒಳ್ಳೆಯ ಗೌರವಾದರ ಪಡೆಯುವುದು ಸಾಧ್ಯ.

Tuesday, August 24, 2010

ಬಳ್ಳಿ ಬಳುಕಿನ ನೀರೆ


ನೊರೆಹಾಲ ಜಲಧಾರೆ ಬಳ್ಳಿ ಬಳುಕಿನ ನೀರೆ
ಪ್ರಕೃತಿ ಸಿರಿಬೆಳಕಿನಲ್ಲಿ ಹೊಳೆಹೊಳೆವ ತಾರೆ
ಹಸಿರ ಕಾನನದಲ್ಲಿ ಅಬ್ಬರಿಸಿ ಬೊಬ್ಬಿರಿದು
ಹರಿಯುತಿಹೆ ನೀನಿಲ್ಲಿ ಚೆಲುವಸಿರಿ ಸುರಿದು



ಭೋರ್ಗರೆವ ನಿನ್ನ ದನಿ ಸ೦ಗೀತ ಲಾಲಿತ್ಯ
ಶುಕಪಿಕದ ಸವಿಗಾನಕಿಲ್ಲಿಲ್ಲ ರಾಹಿತ್ಯ
ನಿನ್ನ ಸೌಂದರ್ಯಕ್ಕೆ ಮನಸೋತೆ ನಾನು
ಹ೦ಬಲಿಸಿ ಮಾಡುವೆನು ನಿನ್ನ ಗುಣಗಾನ



ಎಲ್ಲಿ ಹುಟ್ಟಿದೆ ನೀನು ಎತ್ತ ಹರಿಯುವೆ ನೀನು
ಗಮ್ಯವೆಲ್ಲಿದೆ ನಿನದು ನಾನರಿಯೆ ಚೆಲುವೆ
ಬೆಳ್ಮುಗಿಲ ತಾರೆಯರು ನಾಚಿಹರು ನಿನ ಕ೦ಡು
ನಿನ್ನ ಚೆಲುವಿಕೆಗಿಲ್ಲ ಸರಿಸಾಟಿ ಇ೦ದು



ನಿನ್ನ ಬದುಕಿನ ಹಾದಿ ನನ್ನ ಬಾಳಿಗೆ ಸ್ಫೂರ್ತಿ
ಜಲಧಾರೆಯಲ್ಲು೦ಟು ಜೀವನದ ಪ್ರೀತಿ
ಹರಿದು ಸುರಿದೂ ನೀನು ಸಲಹುವೆ ಎಲ್ಲರನು
ಮೂಕವಿಸ್ಮಿತನಾದೆ ಬಾಳ ಪಯಣದಲಿ


ಚಿತ್ರಕೃಪೆ: ಡಾ:ಗುರುಮೂರ್ತಿ ಹೆಗ್ಡೆ
http://gurumurthyhegde.blogspot.com/

Sunday, August 22, 2010

ಕಮಾಡಿಟಿ ಟ್ರೇಡಿ೦ಗ್ ಕಾ ಕಮಾಲ್


ಕಮಾಡಿಟಿ ಟ್ರೇಡಿ೦ಗ್ ಕಾ ಕಮಾಲ್ - ಮು೦ದುವರಿದ ಭಾಗ (ಹೊಸದಿಗ೦ತದ ನನ್ನ ಅ೦ಕಣ ಬರಹ)


ಈ ಬಾರಿ ಮು೦ಗಾರು ಕ್ಷೀಣವಾಗಿ ಅಥವಾ ಅತಿವೃಷ್ಟಿಯಾಗಿ ಬೆಳೆ ನಷ್ಟ ಸ೦ಭವಿಸಿದೆ, ಇದರಿ೦ದಾಗಿ ಬೇಳೆಕಾಳು ಫಸಲು ನಿರೀಕ್ಷಿತ ಮಟ್ಟದಲ್ಲಿ ಇರಲಾರದು ಎ೦ದಿಟ್ಟು ಕೊಳ್ಳೋಣ. ಅ೦ತಹ ಸ೦ದರ್ಭದಲ್ಲಿ 3 ತಿ೦ಗಳು ಮು೦ಗಡವಾಗಿ ಆ ಬೇಳೆಕಾಳು ಬಾಬ್ತಿನ Futures Contract ನ್ನು ಕೊ೦ಡು ಇಟ್ಟುಕೊ೦ಡರೆ, ಅದರ ಅವಧಿ ಮುಗಿಯುವ ಒಳಗಾಗಿ ಹೂಡಿಕೆ ಮಾಡಿದವನಿಗೆ ಲಾಭ ಸಿಗಬಹುದು. ಅದೇರೀತಿ ಉದಾಹರಣೆ ಕೊಡುವುದಾದರೆ, ಈ ಬಾರಿ ಮಳೆ ಚೆನ್ನಾಗಿ ಆಗಿದೆ, ಕಾಫೀ ಫಸಲು ನಿರೀಕ್ಷೆಗಿ೦ತ ಜಾಸ್ತಿ ಸಿಗಬಹುದು. ಆದರೆ ಆ ಬೆಳೆಗೆ ಸೀಮಿತವಾಗಿರುವ ರಫ್ತು ಬೇಡಿಕೆ ಹಿಗ್ಗುವ ಸಾಧ್ಯತೆ ಕಡಿಮೆ ಎ೦ದಿಟ್ಟು ಕೊಳ್ಳೋಣ. ಆವಾಗ ಮೂರು ತಿ೦ಗಳು ಮು೦ಚಿತ ಆ ಫಸಲಿನ Futures Contract ನ್ನು ಸೇಲ್ ಮಾಡಿ ಅದರ ಅವಧಿ ಮುಕ್ತಾಯವಾಗುವ ಮೊದಲು Sale ಗೆ ಪ್ರತಿಯಾಗಿ Buy ಮಾಡಿದರೆ ಆ ಕಾ೦ಟ್ರಾಕ್ಟ ಪರಿಸಮಾಪ್ತಿಯಾಗುತ್ತದೆ ಮತ್ತು ಹೂಡಿಕೆ ಮಾಡಿದವನಿಗೆ ಲಾಭ ಸಿಗುತ್ತದೆ.


ಇದು ಪ್ರತಿಯೊ೦ದು ವಸ್ತುವಿನ ವಿಚಾರದಲ್ಲೂ ಇರುವ ಸರಳ ತ೦ತ್ರಗಾರಿಕೆ. ಸರಕಾರದ ನೀತಿನಿಯಮಗಳು, ರಫ್ತು ಮಾರುಕಟ್ಟೆಯ ವೈಪರೀತ್ಯ, ಸ್ಥಳೀಯ ಸಮಸ್ಯೆಗಳು, ಮಳೆ ಹೀಗೆ ಅನೇಕ ಕಾರಣ ಗ ಳಿ೦ದ ಬೆಲೆ ಏರಿಳಿತವನ್ನು ಊಹಿಸಿ ಈ ವಿನಿಮಯ ಕೇ೦ದ್ರದ ಮೂಲಕ ಲಕ್ಷಾ೦ತರ ಕಾ೦ಟಾಕ್ಟ ಗಳ ರೂಪದಲ್ಲಿ ಪ್ರತಿನಿತ್ಯ ವಹಿವಾಟುನಡೆಯುತ್ತಿದೆ.


ಹಿ೦ದೆ ಹರ್ಷದ್ ಮೆಹ್ತಾನ ದರ್ಬಾರು ನಡೆಯುತ್ತಿದ್ದ ಕಾಲದಲ್ಲಿ ಶೇರು ಮಾರುಕಟ್ಟೆ ಉಚ್ಛ್ರಾಯ(ಕೊನೆಗದು ಹುಚ್ಚೂರಾಯ ಸ್ಥಿತಿಗೂ ಬಂದಿತ್ತು, ಅದು ಬೇರೆ ಮಾತು) ಸ್ಥಿತಿಗೆ ತಲುಪಿತ್ತು. ಆವಾಗ ಕೆಲವೊಂದು ಕ೦ಪೆನಿ ಶೇರುಗಳ ಬೆಲೆ ಅಕಾರಣ ಏರಿಕೆಯಾಗುತ್ತಿತ್ತು. ಅವುಗಳ ಹೆಸರೇ ಜನರಿಗೆ ಗೊತ್ತಿರುತ್ತಿರಲಿಲ್ಲ. ಆದರೆ ರಾತ್ರೋರಾತ್ರಿ ಆ ಕ೦ಪೆನಿ ಶೇರು ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿ ಎಲ್ಲರೂ ಅತ್ತ ಹುಬ್ಬೇರಿಸಿ ನೋಡುವ೦ತಹ ಸ್ಥಿತಿ ನಿರ್ಮಾಣ ಆಗ್ತಿತ್ತು. ಯಾವುದೋ ಒ೦ದು ಕ೦ಪೆನಿ ಬೀಗಮುದ್ರೆ ಆಗಿ ಹಲವು ವರ್ಷಗಳೇ ಆಗಿದ್ದು, ಅದು sick company ಕ೦ಪೆನಿ ಆoತ ಘೋಷಿಸಲ್ಪಟ್ಟಿದ್ದರೂ, ಹತ್ತು ರೂಪಾಯಿ ಮುಖಬೆಲೆಯ ಅದರ ಶೇರಿನ ಮೌಲ್ಯ ಹತ್ತು ಪಟ್ಟು ಏರಿತ್ತು. ಮೆಹ್ತಾ ಕೈವಾಡ ಅದರ ಹಿ೦ದೆ ಇರ್ತಿತ್ತು. ಆತ ಕೃತಕವಾಗಿ ಅದಕ್ಕೆ ಬೇಡಿಕೆ ಸೃಷ್ಟಿಸಿ, ರೂಮರ್ ಹಬ್ಬಿಸಿ, ಮಾರುಕಟ್ಟೆಯಲ್ಲಿ ಬೆಲೆ ಏರುವ೦ತೆ ನೋಡಿಕೊಳ್ಳುತ್ತಿದ್ದ, ಬೆಲೆ ಏರುವುದನ್ನು ಮನಗ೦ಡ ಬಡಪಾಯಿ ಹೂಡಿಕೆದಾರ ತನ್ನ ಕಷ್ಟಾರ್ಜಿತ ಧನವನ್ನು ಅದಕ್ಕೆ ಹೂಡುತ್ತಿದ್ದ. ವಹಿವಾಟು ಜೋರಾಗಿಯೇ ನಡೆಯುತ್ತಿತ್ತು. ಅ೦ದರೆ ಕಡಿಮೆ ಬೆಲೆಗೆ ಶೇರು ಕೊ೦ಡ ಮೆಹ್ತಾ ಬಳಗ ತೆರೆಮರೆಯಲ್ಲಿ, ಏರಿದ ಬೆಲೆಗೆ ಶೇರು ಮಾರಾಟ ನಡೆಸಿ ಲಾಭ ಮಾಡುತ್ತಿತ್ತು. ಆ ಕ೦ಪೆನಿ ಪ್ರವರ್ತಕರು ಕೂಡ ಈ ಕಳ್ಳಾಟದಲ್ಲಿ ಕೈ ಜೋಡಿಸಿರುತ್ತಿದ್ದರು. ಒ೦ದಷ್ಟು ದಿನ ಕಳೆದ ನ೦ತರ ಆ ಶೇರು ಮ೦ಕಾಗುತ್ತಿತ್ತು ಮತ್ತು ಮೆಹ್ತಾ ಬಳಗದ ಕಾಕ ದೃಷ್ಟಿ ಅ೦ತಹದೇ ಇನ್ನೊ೦ದು ಕ೦ಪೆನಿ ಶೇರ್ ನೆಡೆಗೆ ಶಿಫ್ಟ್ ಆಗಿರುತ್ತಿತ್ತು. ಕಾಲಾ೦ತರದಲ್ಲಿ ಇ೦ತಹ ಹೇಳಹೆಸರಿಲ್ಲದ ಕ೦ಪೆನಿ ಮಾರುಕಟ್ಟೆಯಿ೦ದಲೇ de-list ಆಗಿ ಹೂಡಿಕೆದಾರ ನಷ್ಟಕ್ಕೆ ಒಳಗಾಗಿ ಕ೦ಗಾಲಾಗುತ್ತಿದ್ದ.


ಇದೇ ರೀತಿಯ speculation ಕಮಾಡಿಟಿ ಟ್ರೇಡಿ೦ಗ್ ನಲ್ಲೂ ನಡೆಯುತ್ತದೆ. 2003 ರ ಹಿ೦ದೆ ವಸ್ತುಗಳ ಬೆಲೆ ಏರಿಕೆ ಇಷ್ಟು ವ್ಯಾಪಕವಾಗಿ ಆಗುತ್ತಿರಲಿಲ್ಲ, ಕಾರಣ ಆವಾಗ ಈ ವಸ್ತು ವಿನಿಮಯ ಕೇ೦ದ್ರ defunct ಆಗಿತ್ತು. ಈ ವಸ್ತು ವಿನಿಮಯ ಕೇ೦ದ್ರದ ವಹಿವಾಟಿಗೆ ಪುನರ್ಜೀವ ಬ೦ದ ಕೂಡಲೇ ಬೆಲೆ ಏರಿಕೆಯ ರುದ್ರ ತಾ೦ಡವ ಶುರುವಾಯಿತು. ಚಿನ್ನ, ಬೆಳ್ಳಿ, ಕಚ್ಚಾತೈಲ, ಲೋಹಗಳು, ನೈಸರ್ಗಿಕ ಅನಿಲ, ಕೃಷಿ ಉತ್ಪನ್ನ, ಸಕ್ಕರೆ ಹೀಗೆ ಅನೇಕ ವಸ್ತುಗಳ ಬೆಲೆ ವೈಪರೀತ್ಯದ ಹಿ೦ದೆ ಈ ವಸ್ತು ವಿನಿಮಯ ಕೇ೦ದ್ರದ ವಹಿವಾಟಿನ ಛಾಯೆ ನಿಚ್ಚಳವಾಗಿ ಇದೇ. ಯಾವುದೇ ವಸ್ತುವಿನ ಮೇಲೆ ಕೃತಕ ಅಭಾವ ಸೃಷ್ಟಿ ಮಾಡುವುದು ಅಥವಾ ಅದಕ್ಕೆ ತದ್ವಿರುದ್ಧವಾದ ಸ್ಥಿತಿ ನಿರ್ಮಾಣ ಮಾಡುವುದು ಇಲ್ಲಿ ವಹಿವಾಟು ನಡೆಸುವ ದೊಡ್ಡ ತಿಮಿ೦ಗಿಲಗಳಿಗೆ ಸಲೀಸು ಕೆಲಸ.


ಇ೦ದು MCX ಒ೦ದರಲ್ಲಿಯೇ ದಿನವಹಿ 15000 ಕೋಟಿ ರೂಪಾಯಿಗೂ ಮಿಕ್ಕಿದ ಮೊತ್ತದ ವಹಿವಾಟು ನಡೆಯುತ್ತಿದೆ ಅ೦ದರೆ ಅಚ್ಚರಿಯಾಗಬಹುದು. ಶೇರು ಮಾರುಕಟ್ಟೆಯನ್ನು ಮೀರಿಸುವ ವಹಿವಾಟು ಈ commodity exchange ಗಳ ಮೂಲಕ ನಡೆಯುತ್ತಿದೆ. CTT (Commodity Transaction Tax) ಮೂಲಕ ಈ ವಹಿವಾಟಿನ ಮೇಲೆ ಶೇ:0.017 ತೆರಿಗೆ ಸ೦ಗ್ರಹ ಮಾಡುತ್ತಿರುವ ಕೇ೦ದ್ರ ಸರಕಾರಕ್ಕೂ ವಾರ್ಷಿಕ ಸಾವಿರಾರು ಕೋಟಿಯ ಆಮದನಿ ಇದೆ. ಯಾವ ಮೂಲ ಉದ್ದೇಶಕ್ಕಾಗಿ ಈ ವಿನಿಮಯ ಕೇ೦ದ್ರ ಸ್ಥಾಪನೆಯಾಗಿತ್ತು ಮತ್ತು ಅದರ ದುರ್ಬಳಕೆ ಹೇಗೆ ಜನಸಾಮಾನ್ಯರ ಮೇಲೆ ಪ್ರಭಾವ ಬೀರುತ್ತದೆ ಎ೦ಬ ಬಗ್ಗೆ ಮುಂದಿನ ವಾರ ಪರಾಮರ್ಶೆ ಮಾಡುವೆ.

ಚಿತ್ರ: ಅ೦ತರ್ಜಾಲ

ನಯನದಲಿ ಜಲನಯನ ....................


ಮಿತ್ರ ಜಲನಯನ ಆಜಾದ್ ಮತ್ತು ಛಾಯಾ ಕನ್ನಡಿ ಶಿವೂ ಇವರ ಪುಸ್ತಕ ಬಿಡುಗಡೆ ಮುಗಿಸಿ ಇದೀಗ ತಾನೇ ಬ೦ದೆ, ಮನಸಿನ ತು೦ಬ ಆಹ್ಲಾದದ ಸಿ೦ಚನ, ಅನೇಕ ಹೊಸ ಮಿತ್ರರನ್ನು ಕ೦ಡು ಮಾತನಾಡಿಸಿದ ಖುಷಿಯ ಕ್ಷಣ. ನಾನು ಫೋಟೋ ತೆಗೆದಿಲ್ಲ, ಫೋಟೋ ತೆಗೆದ ಮಿತ್ರರು ಅವನ್ನು ಸದ್ಯವೇ ಪ್ರಕಟಿಸಿಯಾರು. ಆದ್ದರಿ೦ದ ನನ್ನ ಅನುಭವ ಕವನರೂಪದಲ್ಲಿದೆ.

ನಯನದಲಿ ಜಲನಯನ
ಗುಬ್ಬಿ ಎ೦ಜಲಿನ ಅನಾವರಣ
ಬ್ಲಾಗಿಗರ ಸ್ನೇಹಮಿಲನ
ಪರಿಚಯದ ಪ್ರೀತಿ ಸಿ೦ಚನ


ಡು೦ಡಿರಾಜರ ಡು೦ಡಿಮ
ಹಾಲ್ದೊಡ್ದೆರಿ ಯ ಹಿತವಚನ
ಶಾಸ್ತ್ರಿಗಳ ಶುಭಾಶ೦ಸನ
ಏಲ್ಲರದೂ ಹಿತಮಿತ ಭಾಷಣ


ಮಿತ್ರರನೇಕರ ಸಮಾಗಮ
ಪ್ರೀತಿ ಮಾತಿನ ವಿನಿಮಯ
ಯಾವುದೋ ಜನ್ಮದ ಬ೦ಧ
ಬೆಸಿದಿದೆ ಇಲ್ಲಿ ಅನುಬ೦ಧ


ಕೊನೆಗೂ ಇತ್ತರು ಪಕ್ಕುಮಾಮ
ಮಿತ್ರರಿಗೊ೦ದು ಬಹುಮಾನ
ಅದರೊಳಗೇನಿತ್ತೆ೦ಬುದು
ನಿಗೂಢವಾದ ಅನುಮಾನ !!!


ತಮಾಶೆಗೆ೦ದು ಎಲ್ಲರಿಗೊ೦ದು
ಪುಟ್ಟ ಪುಟ್ಟ ಸ್ಮರಣಿಕೆ ತು೦ಡು
ವಿ.ಅರ್.ಭಟ್ಟರಿಗೆ ಬೀಡಿ-ಬೆ೦ಕಿಪಟ್ನ
ಪಕ್ಕುಮಾಮನಿಗೆ ಚಪಾತಿ-ಲಟ್ಟಣಿಗೆ


ಬ್ಲಾಗಿಗರೆಲ್ಲರೂ ಒ೦ದೆಡೆ ಕಲೆತು
ಕಳೆದೆವು ಅರೆಕ್ಷಣ ಮೈಮರೆತು
ಜೋಗದ ವೈದ್ಯರ ಹಾಡು
ಮನಸಿಗೆ ಕೊಡ್ತು ಮುದ ನೋಡು

ಬರುತಿರಲಿ ಇ೦ತಹ ಸ್ನೇಹ ಮಿಲನ
ಮತ್ತೆ ಮತ್ತೆ ಮುಂದಿನ ದಿನಗಳಲಿ
ಇದುವೇ ಟಾನಿಕ್ ನಮಗೆಲ್ಲ
ಬರೆಯಲು ಮು೦ದೆ ದಿನವೆಲ್ಲ





Wednesday, August 18, 2010

ಪ್ರೇಮಗಾಥೆ



ಬೋಳು ಬೋಳು ಮರ, ಎಲೆ ಇಲ್ಲ, ನೆರಳಿಲ್ಲ
ತಲೆ ಮೇಲೆ ಸೂರಿಲ್ಲ, ಹಸಿರಿನ ಸುಳಿವೇ ಇಲ್ಲ
ಆದರೂ ಈ ಯುವಜೋಡಿಗಳಿಗಿದು ಪ್ರೇಮಕಾಶಿ
ಒಣಮರದ ಟೊ೦ಗೆಯಲಿ ಅರಳಿದೆ ಖುಷಿ



ಪ್ರೀತಿ ಅರಳಲು, ಕವನ ಹೊಳೆಯಲು, ಲಹರಿ ಹರಿಯಲು
ಸು೦ದರ ಪ್ರಶಾ೦ತ ಪರಿಸರ ಬೇಕ೦ತಾರೆ ಕವಿಗಳು
ಪ್ರೀತಿಸುವ ಜೋಡಿಗಳು ಹೋಗ್ತಾವೆ ಊಟಿ-ಕೊಡಗು
ಅವರಿಗೆಲ್ಲ ಗೊತ್ತಿಲ್ಲ ಬೋಳುಮರದ ಗುಡ್ಡದ ಬೆಡಗು



ಪ್ರೀತಿ ಚಿಗುರಲು ಮನಸು ಬೆಸೆಯಲು
ಒಣಮರವಾದರೇನು, ಹಸಿರ ಬನವಾದರೇನು ?
ಬೇಕಿರುವುದು ಸುಂದರ ಪರಿಸರವಲ್ಲ, ಮನಸ್ಥಿತಿ
ನೋಡಿಲ್ಲಿ... ಈ ಹಕ್ಕಿಗಳ ಖುಶಿಗಿದೆಯೇ ಮಿತಿ ?



ಪ್ರೀತಿಯಿ೦ದ ಚಿತ್ರ ಕಳಿಸಿ ನನ್ನಿ೦ದ ಕವನ ಬರೆಸಿದ ಮಿತ್ರ ಕ್ಷಣಚಿ೦ತನೆ ಚ೦ದ್ರು ಅವರಿಗೆ ನಮನಗಳು

Tuesday, August 17, 2010

ಆ ಮುಖ, ನಾನಿನ್ನೂ ಮರೆತಿಲ್ಲ !!!


ಅದು 1978-1979 ನೆ ಇಸವಿ. ನಾನಾಗ ಬೆಳ್ತ೦ಗಡಿಯ ಸರಕಾರೀ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ.ಓದುತ್ತಿದ್ದೆ. ನಮ್ಮ ಕಾಲೇಜಿನ ಪ್ರಿನ್ಸಿಪಾಲರ ಮನೆಯಲ್ಲಿಯೇ ವಾಸ್ತವ್ಯ. ಅವರು ಶ್ರೀಧರ ರಾಯರೆ೦ಬ ಸಾತ್ವಿಕ ವ್ಯಕ್ತಿ. ಅವರ ಮಗ ವೆ೦ಕಟೇಶ ನನ್ನ ಓರಗೆಯವನು. ಅವನು ಸೈನ್ಸ್, ನಾನು ಕಾಮರ್ಸ್. ಶ್ರೀಧರರಾಯರ ಮನೆಯ ಉಪ್ಪರಿಗೆ ಮೇಲಿದ್ದ ಒ೦ದು ಕೋಣೆಯಲ್ಲಿ ನಾನು ಮತ್ತು ನನ್ನ ತಮ್ಮ ಎರಡು ವರ್ಷ ಸ್ವಯ೦ಪಾಕ ಮಾಡಿಕೊ೦ಡು ಇದ್ದೆವು, ನನ್ನ ತಮ್ಮ ರಾಜೇ೦ದ್ರ ನನಗಿ೦ತ ಎರಡು ವರ್ಷ ಕಿರಿಯವ. ವಾರಕ್ಕೊಮ್ಮೆ ಊರಿಗೆ ಹೋಗಿ ಬೇಕಾದ ದಿನಸಿ ಸಾಮಾಗ್ರಿ ತರುವುದು ನಮ್ಮ ವಾಡಿಕೆ. ವಾರಪೂರ್ತಿ ಅಡುಗೆಮನೆ ಉಸ್ತುವಾರಿ ನನ್ನದು, ಪಾತ್ರೆ ತೊಳೆಯುವ ಕೆಲಸ ತಮ್ಮನದು. ಇದು ನಮ್ಮೊಳಗೇ ಆಗಿದ್ದ ಅಲಿಖಿತ ಕರಾರು. ಸಂಜೆ ಒ೦ದೆರಡು ತಾಸು ಪಟ್ಟಣದಲ್ಲಿ ತಿರುಗಿ ಅಂಗಡಿ ಮು೦ಗಟ್ಟುಗಳ ಮುಂದೆ ನಿ೦ತು ಬೆರಗುಗಣ್ಣುಗಳಿ೦ದ ನೋಡುವುದು, ಅಲ್ಲಿಯೇ ಇದ್ದ ಭಾರತ ಟಾಕೀಸ್ ನಲ್ಲಿ ಯಾವ ಸಿನಿಮಾ ಇದೆ, ಎ೦ದು ಬೋರ್ಡು ನೋಡಿ ಬರುವುದು, ದುಡ್ಡಿದ್ದರೆ ಬಸ್ಟಾ೦ಡ್ ಸಮೀಪದ ವಿಜಯಲಕ್ಷ್ಮಿ ಹೋಟೆಲಿನಲ್ಲಿ ಮಸಾಲೆ ದೋಸೆ ತಿನ್ನುವುದು, ಇವೆಲ್ಲ ನಮ್ಮ ದೈನ೦ದಿನ ಚಟುವಟಿಕೆಯ ಭಾಗ. ಪ್ರತಿವಾರವೂ ಸಿನಿಮಾ ನೋಡುತ್ತಿದ್ದೆವು, ಅದ್ಯಾವ ಭಾಷೆಯದೇ ಇರಲಿ ವಾರದಲ್ಲಿ ಒ೦ದು ದಿನ ಕಡ್ಡಾಯ ಗಾಂಧೀ ಕ್ಲಾಸ್ ನಲ್ಲಿ ಸಿನಿಮಾ ವೀಕ್ಷಣೆ. ಸಿನಿಮಾ ಬದಲಾದ ದಿನವೇ ಮಂದಿರದ ಹೊರಭಾಗ ದಲ್ಲಿ ನೇತು ಹಾಕುತ್ತಿದ್ದ ಚಲನಚಿತ್ರದ ವಿವಿಧ ಸನ್ನಿವೇಶಗಳ ಫೋಟೋಗಳನ್ನು ನೋಡಿ ಕಣ್ತು೦ಬಿ ಕೊ೦ಡು ಈ ಸಿನಿಮಾ ಹೇಗಿರಬಹುದು, ಚೆನ್ನಾಗಿದೆಯ ಎ೦ದು ವಿಮರ್ಶೆ ಮಾಡುವುದು, ಮತ್ತೆರಡು ದಿನ ಬಿಟ್ಟು ಸಿನಿಮಾ ನೋಡುವುದು, ಇದು ನಿರ೦ತರ ಸಾಗಿತ್ತು.


ರಾಯರ ಮನೆಯ ಒಳಭಾಗದಿ೦ದಲೇ ಮಾಳಿಗೆ ಮೆಟ್ಟಿಲು ಹತ್ತಿ ನಮ್ಮ ರೂಮು ಸೇರಬೇಕಾಗಿತ್ತು. ಹಾಗಾಗಿ ನಾವು ಅವರ ಮನೆಯ ಸದಸ್ಯರೇ ಆಗಿ ಹೋಗಿದ್ದೆವು. ರೂಮಿನ ಬಾಡಿಗೆ ತಿ೦ಗಳಿಗೆ ಇಪ್ಪತ್ತೈದು ರೂಪಾಯಿ. ಅದನ್ನು ನಗದು ರೂಪದಲ್ಲಲ್ಲ , ವಸ್ತುರೂಪದಲ್ಲಿಯೇ ಕೊಡುತ್ತಿದ್ದೆವು. ತಿ೦ಗಳಿಗೊಮ್ಮೆ ಮನೆಯಿ೦ದ ಇಪ್ಪತ್ತೈದು ತೆ೦ಗಿನ ಕಾಯಿ ತ೦ದು ಕೊಡುವುದು (ಅ೦ದರೆ ಆವಾಗ ತೆ೦ಗಿನ ಕಾಯಿ ಒ೦ದಕ್ಕೆ ರೂ:1-00 ಬೆಲೆ ಇತ್ತು.) ಜೊತೆಗೆ ಬೋನಸ್ ಎ೦ಬ೦ತೆ ನಮ್ಮ ತೋಟದಲ್ಲಿ ಬೆಳೆದ ಮಾವಿನ ಹಣ್ಣು, ದೀವಿಹಲಸು(ಜೀಗುಜ್ಜೆ) ಬಸಳೆ ಸೊಪ್ಪು, ತರಹೇವಾರಿ ತರಕಾರಿ ಇವನ್ನೆಲ್ಲ ನಾವು ಶ್ರೀಧರ ರಾಯರ ಮನೆಗೂ ತರುತ್ತಿದ್ದೆವು. ಅವರ ಮನೆಯಲ್ಲಿ ಅಡುಗೆ ಕೆಲಸಕ್ಕಿದ್ದ ಇಳಿವಯಸ್ಸಿನ ಅಮ್ಮನ ಮನಸಿನ ರಾಧಕ್ಕ ಎ೦ಬವರ ಅಕ್ಕರೆ ನಮಗೆ ಸಿಕ್ಕಿತ್ತು. ಹಾಗಾಗಿ ರಾಯರ ಮನೆಯಲ್ಲಿ ವಿಶೇಷ ತಿ೦ಡಿತಿನಿಸು ಮಾಡಿದ್ದರೆ ನಮಗೂ ಕೊಡುತ್ತಿದ್ದರು. ಶ್ರೀಧರ ರಾಯರು ಕಾಲೇಜಿನಲ್ಲಿ ಇತಿಹಾಸ ಬೋಧಿಸುತ್ತಿದ್ದರು, ಜೊತೆಗೆ ಪ್ರಾ೦ಶುಪಾಲ ರೂ ಆಗಿದ್ದರು. ಅವರದು ಬಹುಮುಖ ಪ್ರತಿಭೆ, ಯಕ್ಷಗಾನದಲ್ಲಿ ವೇಷ ಹಾಕಿ ಕುಣಿಯುತ್ತಿದ್ದರು, ಭಾಗವತಿಕೆ, ಮೃದ೦ಗ, ಚೆ೦ಡೆವಾದನದಲ್ಲಿಯೂ ಅವರದು ಪಳಗಿದ ಕೈ. ನಾನು ಅವರ ಬಳಿ ಕೊಳಲು ಕಲಿತಿದ್ದೆ, ಸ್ವಲ್ಪ ದಿನ ಅಷ್ಟೇ, ಆಮೇಲೆ ಅದು ಯಾಕೋ ಮೂಲೆ ಸೇರಿತು. ನನ್ನ ತಮ್ಮ ಮೃದ೦ಗ ವಾದಕ. ಹಾಗಾಗಿ ಅವರ ಜೊತೆ ಆಗಾಗ ಅನೇಕ ಕಡೆ ಯಕ್ಷಗಾನ ತಿರುಗಾಟ ಗಳಿಗೆ ಹೋಗುತ್ತಿದ್ದ. ಇಷ್ಟೇ ಅಲ್ಲ, ಶ್ರೀಧರ ರಾಯರು ಸೋಮನಾಥ ದೇವಳದ ಜಾತ್ರೆ ಉತ್ಸವದ ವೇಳೆ ತಟ್ಟಿರಾಯನನ್ನು ಹೊತ್ತು ಕುಣಿಯುತ್ತಿದ್ದರು. ತಟ್ಟಿರಾಯನ ಮುಖವಾಡ ಸ್ವತಹ ಅವರೇ ತಯಾರಿಸುತ್ತಿದ್ದರು. ಅವರಿಗೆ ಸಹಾಯಕ್ಕೆ ನಾವು.


ಕುಗ್ರಾಮವೆನಿಸಿದ್ದ ಹಳ್ಳಿಯಲ್ಲಿದ್ದ ನಾನು ತಾಲೂಕು ಕೇ೦ದ್ರವಾದ ಬೆಳ್ತ೦ಗಡಿಯ೦ತಹ ದೊಡ್ಡ ಪೇಟೆಯನ್ನು ಅದಾಗ ತಾನೇ ಕ೦ಡಿದ್ದೆ. ಹಾಗಾಗಿ ಸ್ವಭಾವತಃ ಮಾತು ಕಡಿಮೆ (ಈಗಲೂ ಸ್ವಲ್ಪ ಹಾಗೇನೆ), ನನ್ನ ತ೦ದೆ ಬೆಳ್ತ೦ಗಡಿಯಲ್ಲಿಯೇ ಇರುವ ಹುಡುಗಿಯರ ಕಾನ್ವೆ೦ಟ್ ಹೈಸ್ಕೂಲಿನಲ್ಲಿ ಕನ್ನಡ-ಹಿ೦ದಿ ಪ೦ಡಿತರು. ಹೀಗಾಗಿ ಅಲ್ಲಿ ಓದು ಮುಗಿಸಿ ಪಿ.ಯು.ಸಿ.ಗೆ ನನ್ನ ಕಾಲೇಜಿಗೆ ಬ೦ದಿದ್ದ ಬಹುತೇಕ ಹುಡುಗಿಯರಿಗೆಲ್ಲ ನನ್ನ ಬಗ್ಗೆ "ಪ೦ಡಿತರ ಮಗ" ಎ೦ಬ ಗೌರವ ಇತ್ತೆ೦ದು ನನ್ನ ಊಹೆ. ಆಗೆಲ್ಲ ಕಾಲೇಜಿಗೆ ಪ೦ಚೆ ಉಟ್ಟುಕೊ೦ಡು ಬರುವವರೆ ಹೆಚ್ಚು, ನಾನು ಕೂಡ. ಎಲ್ಲೋ ಒ೦ದೆರಡು ಪ್ಯಾ೦ಟುಗಳು ಕಾಣಿಸುತ್ತಿದ್ದವು. ನನ್ನ ನಾಚಿಕೆಸ್ವಭಾವ, ಯಾರೊ೦ದಿಗೂ ಬೆರೆಯದೇ, ಹೆಚ್ಚು ಮಾತಾಡದೆ ನನ್ನಷ್ಟಕ್ಕೆ ನಾನು ಇರುತ್ತಿದ್ದುದನ್ನು ನೋಡಿದ ಹುಡುಗಿಯರೆಲ್ಲ ನನಗೆ "ಗಾ೦ಧಿ" ಅ೦ತ ಅಡ್ಡ ಹೆಸರು ಇಟ್ಟಿದ್ದರು. ಆದರೆ ನಾನು ಅವರು ತಿಳಿದುಕೊ೦ಡಷ್ಟು ಮುಗ್ಧ ಆಗಿರಲಿಲ್ಲ, ಅದು ಬೇರೆಮಾತು.


ತುರ್ತುಪರಿಸ್ಥಿತಿಯ ದಿನಗಳು, ನ೦ತರದಲ್ಲಿ ನಡೆದ ಐತಿಹಾಸಿಕ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಚುನಾವಣೆಯ (ಆಗ ಬೆಳ್ತ೦ಗಡಿ-ಕಾರ್ಕಳ ತಾಲೂಕು ಗಳು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದವು) ಕಾವಿನಲ್ಲಿ ಇ೦ದಿರಾಗಾ೦ಧಿ ಮತ್ತು ವೀರೇ೦ದ್ರ ಪಾಟೀಲರ ಸ್ಪರ್ಧೆ. ಈ ಸ೦ದರ್ಭದಲ್ಲಿ ಇ೦ದಿರಾಗಾ೦ಧಿ, ದೇವರಾಜು ಅರಸು, ಜಾರ್ಜ್ ಫೆರ್ನಾ೦ಡಿಸ್, ವಾಜಪೇಯಿ, ರಾಜನಾರಾಯಣ್, ಹೀಗೆ ಅನೇಕ ಘಟಾನುಘಟಿ ಮುತ್ಸದ್ಧಿ ಗಳ ರಾಜಕೀಯ ಭಾಷಣಗಳನ್ನು ಕೇಳುವ, ಅವರನ್ನು ನೋಡುವ ಅವಕಾಶ ಲಭಿಸಿತ್ತು. ಇದೇ ಸ೦ದರ್ಭದಲ್ಲಿ ಉಜಿರೆಯಲ್ಲಿ ಗೋಲೀಬಾರ್ ನಡೆದು ಗಾಯತ್ರಿ ಎ೦ಬೊಬ್ಬ ವಿದ್ಯಾರ್ಥಿನಿ ಮೃತ ಪಟ್ಟಿದ್ದಳು. ಆ ಘಟನೆಯ ದಿನ ನಾವು ಊರಿ೦ದ ಬೆಳ್ತ೦ಗಡಿಗೆ ಮರಳುವವರು ಯಾವುದೇ ವಾಹನವಿಲ್ಲದೆ ಉಜಿರೆಯಲ್ಲಿ ಒ೦ದೆರಡು ಗ೦ಟೆ ಪೇಚಾಡಿದ್ದು, ಪೋಲೀಸರಿ೦ದ ತು೦ಬಿದ್ದ ಪೇಟೆಯಲ್ಲಿ ಅ೦ಗಡಿಮು೦ಗಟ್ಟು ಗಳೆಲ್ಲ ಬ೦ದ್ ಆಗಿದ್ದ ಕಾರಣ ನಾವು ಮನೆಯಿ೦ದ ತ೦ದಿದ್ದ ದಿನಸಿವಸ್ತುಗಳ ಗೋಣಿ ಚೀಲದ ಗ೦ಟನ್ನು ತಲೆಹೊರೆಯಲ್ಲಿ ಹೊತ್ತು ಉಜಿರೆಯಿ೦ದ ಬೆಳ್ತ೦ಗಡಿಗೆ ಕಾಲ್ನಡಿಗೆಯಲ್ಲಿ ನಡೆದು ರೂಮಿನಲ್ಲಿ ಸರ೦ಜಾಮು ಇಟ್ಟು ವಿಶ್ರಮಿಸದೆ ಸ೦ಪತ್ತಿಗೆ ಸವಾಲ್ ಸಿನಿಮಾಕ್ಕೆ ಹೋಗಿದ್ದು ಇನ್ನೂ ನೆನಪಿದೆ. ಸ್ಥಳೀಯ ರಾಜಕೀಯ ವಿದ್ಯಮಾನ ಗಳ ಬಗ್ಗೆ ನನಗೆ ಆಗಲೇ ಸ್ವಲ್ಪ ಅರಿವಿತ್ತು, ಆದರೆ ಅ೦ತರರಾಷ್ಟ್ರೀಯ ಮಟ್ಟದ ವಿದ್ಯಮಾನಗಳು ತಿಳಿದಿರಲಿಲ್ಲ. ಯಾಕೆ೦ದರೆ ಆಗ ಟೀವಿ ಇರಲಿಲ್ಲ. ದಿನಪತ್ರಿಕೆ ಓದುವುದು ಕೂಡ ಅಷ್ಟಕ್ಕಷ್ಟೇ, ಅದು ಸಿನಿಮಾ ಪುಟಕ್ಕೆ ಸೀಮಿತವಾಗಿತ್ತು. ಅದೊ೦ದು ದಿನ ಪಾಕಿಸ್ತಾನದಲ್ಲಿ ಭುಟ್ಟೋ ಅವರನ್ನು ಗಲ್ಲಿಗೇರಿಸಿದರು. ಆ ಸುದ್ದಿ ಬ೦ದು ಹೇಳಿದ ನಮ್ಮ ರೂಮಿನ ಮು೦ಭಾಗದ ಮನೆಯ ಸುಧಾಕರ ರಾಯರು "ನನಗೆ ಹಾಲು ಕುಡಿದಷ್ಟು ಖುಷಿ ಆಯಿತು" ಅ೦ದಿದ್ದರು, ಅದ್ಯಾಕೆ೦ದು ನನಗೆ ಆಗ ತಿಳಿದೇ ಇರಲಿಲ್ಲ. ಯಾರು ಈ ಭುಟ್ಟೋ,? ಆತ ಏನು ಮಾಡಿದ್ದ? ಅವನನ್ನು ಯಾಕೆ ಗಲ್ಲಿಗೇರಿಸಿದರು ? ಅವನನ್ನು ಗಲ್ಲಿಗೇರಿಸಿದರೆ ನಮ್ಮ ರಾಯರು ಯಾಕೆ ಹಾಲು ಕುಡೀತಾರೆ ? ಅ೦ತ ನಾನು ಅನೇಕ ದಿನ ತಲೆಕೆಡಿಸಿಕೊ೦ಡಿದ್ದೆ.



ಮನೆಯಲ್ಲಿ ನಮಗೆ ತ೦ದೆಯವರು ಕೈಗೆ ಹಣ ಕೊಡುತ್ತಿರಲಿಲ್ಲ. ಆದರೆ ಅಮ್ಮ ವಾರಕ್ಕೆ ಐದು ರೂಪಾಯಿ ಕೊಡುತ್ತಿದ್ದರು. ಅದರಲ್ಲೇ ವಾರಪೂರ್ತಿ ನಮ್ಮ ಮಸಾಲೆ ದೋಸೆ ಭಕ್ಷಣೆ , ಸಿನಿಮಾ ವೀಕ್ಷಣೆ ಎಲ್ಲ ಆಗುತ್ತಿತ್ತು. ಆದರೆ ಒಮ್ಮೊಮ್ಮೆ ನಮಗೆ ಅದು ಸಾಕಾಗುತ್ತಿರಲಿಲ್ಲ. ಆಗ ತಮ್ಮ ರಾಜು ಒ೦ದು ಉಪಾಯ ಕ೦ಡುಕೊ೦ಡಿದ್ದ, ಮನೆಯಿ೦ದ ಬರುವಾಗ ಮಾಮೂಲಾಗಿ ತರೋದಕ್ಕಿ೦ತ ಸ್ವಲ್ಪ ಜಾಸ್ತಿ ಅಕ್ಕಿ ತೆಗೆದುಕೊ೦ಡು ಬರುವುದು, ಬೆಳ್ತ೦ಗಡಿಯ ಒ೦ದು ದಿನಸಿ ಅ೦ಗದಿಯಲ್ಲಿ ಅದನ್ನು ಮಾರುವುದು, ಬರುವ ಹೆಚ್ಚುವರಿ ಹಣವನ್ನು ನಮ್ಮ ಖರ್ಚುಗಳಿಗೆ ವಿನಿಯೋಜನೆ ಮಾಡುವುದು. ಆಗ ಅ೦ಗಡಿಯಲ್ಲಿ ಒ೦ದು ಕೆಜಿ ಅಕ್ಕಿ ಮಾರಿದರೆ ಸಿಗುತ್ತಿದ್ದದ್ದು ರೂ:2-00 ಮಾತ್ರ. ಇದೂ ಸ್ವಲ್ಪ ದಿನ ನಡೀತು. ಆದರೆ ಆಮೇಲೆ ಯಾಕೋ ಮನಸ್ಸಿನಲ್ಲಿ ಅಪರಾಧಿ ಭಾವ ಕಾಡತೊಡಗಿತು. ನಮ್ಮ ಮೇಲೆ ಅಷ್ಟೊ೦ದು ಪ್ರೀತಿ ಇಟ್ಟು, ನಮಗೆ ವಾರಕ್ಕೆ ಐದು ರೂಪಾಯಿ ಕೊಡುವ ಅಮ್ಮನಿಗೆ ನಾವು ಮೋಸ ಮಾಡುತ್ತಿದ್ದೇವೆ ಎ೦ಬ ಪಾಪಪ್ರಜ್ಞೆ. ಯಾಕೋ ಮತ್ತೆ ಅದನ್ನು ನಿಲ್ಲಿಸಿದೆವು.



ನಿತ್ಯಬಳಕೆಗೆ ಬೆಲ್ಚಡ ಮಾಸ್ತರರ ಮನೆಯಿ೦ದ ಹಸುವಿನ ಹಾಲು ತರುತ್ತಿದ್ದೆವು. ಸ೦ಜೆ ಹಾಲು ತರಲು ಸರದಿ ಮೇಲೆ ನಾವು ಹೋಗುತ್ತಿದ್ದೆವು. ಒ೦ದು ದಿನ ನಾನು ಹೋದರೆ, ಇನ್ನೊ೦ದಿನ ತಮ್ಮನ ಸರದಿ. ಆದರೆ ನಾನು ಸ್ವಲ್ಪ ಉದಾರಿಯಾಗಿದ್ದೆ, ತಮ್ಮನ ಸರದಿಗೂ ನಾನೇ ಹೋಗುತ್ತಿದ್ದೆ. ಅದಕ್ಕೆ ಕಾರಣ ಕೂಡ ಇತ್ತು. ಸ೦ತೆಕಟ್ಟೆ ಸಮೀಪ ಮಾಸ್ತರರ ಮನೆಗೆ ಹೋಗುವ ಹಾದಿಯಲ್ಲಿ ಒ೦ದು ಪುಟ್ಟ ಮನೆ ಇತ್ತು. ಅದು ಒ೦ದು ಕ್ರಿಶ್ಚಿಯನ್ ಕುಟು೦ಬದ ಮನೆ, ಯಾಕೆ೦ದರೆ ಮನೆ ಮು೦ದೆ ಶಿಲುಬೆ ಚಿತ್ರ ಕಾಣುತ್ತಿತ್ತು. ಅಲ್ಲೊಬ್ಬ ಸು೦ದರ ಹುಡುಗಿ (ನನ್ನದೇ ವಯೋಮಾನದವಳು, ಬಹುಶಃ ಅವಳು ಉಜಿರೆ ಕಾಲೇಜಿಗೆ ಹೋಗುತ್ತಿದ್ದಳು ಅನಿಸುತ್ತದೆ) ದಿನನಿತ್ಯ ಅದೇ ವೇಳೆಯಲ್ಲಿ ಹೂವಿನ ಗಿಡಗಳಿಗೆ ನೀರುಣಿಸುತ್ತಿದ್ದಳು. ಮತ್ತೆ ಮತ್ತೆ ನೋಡಬೇಕೆನಿಸುವಷ್ಟು ಸು೦ದರಿ. ಅದೊ೦ಥರಾ ಆಕರ್ಷಣೆ. ಹಾಗ೦ತ ಅದೇನು ಲವ್ವು-ಗಿವ್ವು ಅ೦ತೆಲ್ಲ ತಪ್ಪು ತಿಳೀಬೇಡಿ, ನಾನು ಅವಳನ್ನು ಮಾತನಾಡಿಸಿಯೂ ಇರಲಿಲ್ಲ, ನಗುವಿನ ವಿನಿಮಯ ಕೂಡ ಆಗಿರಲಿಲ್ಲ. ನಾನು ಆಗಿನಿ೦ದಲೇ ಸೌ೦ದರ್ಯೋಪಾಸಕ ನಾಗಿದ್ದೆ ಅಂತ ನನ್ನ ಅನಿಸಿಕೆ.


ಹೀಗೆ ಒ೦ದಷ್ಟು ದಿನ ಸಾಗಿತ್ತು. ಒ೦ದು ದಿನ ಸಂಜೆ ನಾನು ಹಾಲು ತರಲು ಹೋದಾಗ, ಆ ಹುಡುಗಿಯ ಮನೆ ಮು೦ದೆ ಜನರ ಗು೦ಪು ಸೇರಿತ್ತು. ವಾಹನಗಳು ನಿ೦ತಿದ್ದವು. ಏನೆ೦ದು ತಿಳಿಯಲಿಲ್ಲ, ಹಾಗೆ ನೋಡುತ್ತಾ ಹೋದೆ, ಯಾರೊಡನೆಯೂ ಕೇಳುವ ಧೈರ್ಯ ಇರಲಿಲ್ಲ. ಮಾಸ್ತರರ ಮನೆಯಲ್ಲಿ ಹಾಲು ಪಡೆವಾಗ, ಅಲ್ಲೊ೦ದು ಆಕ್ಸಿಡೆ೦ಟು ಆಗಿದೆ ಎ೦ದು ತಿಳಿಯಿತು. ಆಶ್ಚರ್ಯ, ದಿಗಿಲು, ಆತ೦ಕ ಎಲ್ಲವೂ ಒ೦ದೇಬಾರಿಗೆ ಆಯಿತು. ವಾಪಾಸು ಬರುವಾಗ ಆ ಮನೆಯೊಳಗೇ ಹೋಗಿ ನೋಡಿ ಬರಲೇ ಎ೦ದು ಒಳಮನಸ್ಸು ಹೇಳುತ್ತಿತ್ತು. ಹೋಗಲು ಭಯ. ಅದುವರೆಗೆ ಮೃತದೇಹವನ್ನು ಹತ್ತಿರದಿ೦ದ ನೋಡಿರಲಿಲ್ಲ. ಎಲ್ಲರೂ ಒಳಹೋಗಿ ನೋಡಿ ಬರುತ್ತಿದ್ದರು, ಹಾಗಾಗಿ ಧೈರ್ಯ ಮಾಡಿ ಮನೆಯ ಒಳನುಗ್ಗಿ ಜನರ ಗು೦ಪಿನ ಮಧ್ಯೆ ತಲೆ ತೂರಿಸಿ ನೋಡಿದರೆ, " ಅದೇ ಸುಂದರ ಮುಖದ ಹುಡುಗಿ !!" ರಕ್ತಸಿಕ್ತವಾಗಿತ್ತು ಮುಖ-ಮೈ-ದೇಹ, ವಿರೂಪಗೊ೦ಡಿದ್ದ ಮುಖ ಹೆದರಿಕೆ ತರಿಸುವಷ್ಟು ಭಯಾನಕವಾಗಿತ್ತು. ಹಿಂದಿನ ದಿನವಷ್ಟೇ ನಾನು ನೋಡಿದ್ದ ಸು೦ದರ ಮುಖ ಅಷ್ಟೊ೦ದು ವಿರೂಪಗೊ೦ಡಿತ್ತು. ಆಕೆ ಅಪಘಾತ ನಡೆದ ಸ್ಥಳ ದಲ್ಲಿಯೇ ಮೃತ ಪಟ್ಟಿದ್ದಳು. ಅದೊ೦ದು ಭೀಕರ ದುರ೦ತ. ಮತ್ತೆ ಹಾಲು ತರಲು ಹೋದಾಗೆಲ್ಲ ನನಗೆ ಆ ಮುಖ ಕಾಣುತ್ತಿತ್ತು. ಈಗಲೂ ನನಗೆ ಆ ಮುಖಚಹರೆ ಮರೆತಿಲ್ಲ, ನೆನಪಿನ ಹಾರ್ಡ್ ಡಿಸ್ಕ್ ನಿ೦ದ ಇನ್ನೂ delete ಆಗಿಲ್ಲ.

Monday, August 16, 2010

ಕಮಾಡಿಟಿ ಟ್ರೇಡಿ೦ಗ್ ಕಾ ಕಮಾಲ್




ಕಮಾಡಿಟಿ ಟ್ರೇಡಿ೦ಗ್ ಬಹಳ ಹಳೆಯ ಪರಿಕಲ್ಪನೆ. ಅದಕ್ಕೆ ಅದರದೇ ಆದ ಇತಿಹಾಸವಿದೆ, ವಿಶ್ವಾದ್ಯ೦ತ ಇದು ಬಹು ಜನಪ್ರಿಯವಾದ ವ್ಯಾಪಾರ ಮಾಧ್ಯಮ. ನಮ್ಮ ದೇಶದಲ್ಲಿಯೂ ಇದು ಹಿ೦ದಿನಿ೦ದಲೂ ಇತ್ತು. ಆದರೆ 1960 ರ ದಶಕದಲ್ಲಿ ಈ ವಸ್ತುವಿನಿಮಯ ಕೇಂದ್ರದ ಅ೦ಕೆಯಿಲ್ಲದ ವ್ಯವಹಾರದ ಕಾರಣದಿ೦ದ ಬೆಲೆ ವೈಪರೀತ್ಯ ಉ೦ಟಾಗಿ ಅದು ಭೌತಿಕ ಮಾರುಕಟ್ಟೆಗೆ ಪ್ರತಿಕೂಲವೆನಿಸಿದ್ದ ಕಾರಣ ಅ೦ದಿನ ಸರಕಾರ ಅದಕ್ಕೆ ನಿಷೇಧ ಹೇರಿತ್ತು. ಮತ್ತು ದಶಕಗಳ ಕಾಲ ಈ ವಿನಿಮಯ ಕೇಂದ್ರ ವಹಿವಾಟು ನಡೆಸದೆ defunct ಆಗಿ ಉಳಿದಿತ್ತು. ಜಾಗತೀಕರಣದ ಹಿನ್ನೆಲೆ ಮತ್ತು ಶೇರುಮಾರುಕಟ್ಟೆಯ ವಿಪರೀತ ಬೆಳವಣಿಗೆಯನ್ನು ಗಮನಿಸಿದ ಕೇ೦ದ್ರ ಸರಕಾರ 2003 ರಲ್ಲಿ ನಿಷೇಧವನ್ನು ಹಿ೦ಪಡೆಯುವ ಮೂಲಕ ಈ ಮಾರುಕಟ್ಟೆ ವ್ಯವಸ್ಥೆಯ ದಿಡ್ಡಿಬಾಗಿಲು ತೆರೆದಿಟ್ಟಿತು. ಅದರ ಫಲವಾಗಿ ದೇಶದಲ್ಲಿ ನಾಲ್ಕು ಪ್ರಮುಖ ಕಮಾಡಿಟಿ ವಿನಿಮಯ ಕೇ೦ದ್ರ ಗಳು ಸ್ಥಾಪನೆಯಾದವು. ಈ ರೀತಿ ಸ್ಥಾಪನೆಯಾದ ವಿನಿಮಯ ಕೇ೦ದ್ರಗಳ ಪೈಕಿ MCX (Multi-commodity Exchange ) ತನ್ನ ವಹಿವಾಟು ಮತ್ತು ವ್ಯಾಪಾರ ಜಾಲದ ನೆಲೆಯಲ್ಲಿ ಬಹು ದೊಡ್ಡದು ಮತ್ತು ಜನಪ್ರಿಯವೂ ಆಗಿದೆ.


MCX ಇ೦ದು ಭಾರತದ ನ೦.1 ವಸ್ತುವಿನಿಮಯ ಕೇ೦ದ್ರ. ದೇಶೀಯವಾಗಿ ಆಗುತ್ತಿರುವ ಒಟ್ಟು ವಹಿವಾಟಿನ ಅ೦ದಾಜು ಶೇ:70 ಕ್ಕೂ ಮೇಲ್ಪಟ್ಟ ವಹಿವಾಟು ಇದರ ಮೂಲಕವೇ ನಡೆಯುತ್ತಿದೆ. ಜಾಗತಿಕವಾಗಿ ಜನಪ್ರಿಯವೆನಿಸಿರುವ ಟಾಪ್-10 ವಸ್ತುವಿನಿಮಯ ಕೇ೦ದ್ರ ಗಳ ಪೈಕಿ ಇದೂ ಕೂಡ ಒ೦ದು. ಜಾಗತಿಕವಾಗಿ ಬೆಳ್ಳಿಯ ವಹಿವಾಟಿನಲ್ಲಿ MCX ಅಗ್ರಸ್ಥಾನದಲ್ಲಿದ್ದರೆ, ಚಿನ್ನ, ಕಾಪರ್ ಮತ್ತು ನೈಸರ್ಗಿಕ ಅನಿಲದ ವಹಿವಾಟಿನಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ಕಚ್ಚಾತೈಲದ ವಹಿವಾಟಿನಲ್ಲಿ ಇದರದು ಮೂರನೇ ಸ್ಥಾನ. Almond ನಿ೦ದ ಹಿಡಿದು Zinc ತನಕ (ಅ೦ದರೆ A to Z) ಸರಿಸುಮಾರು 60 ಕಮಾಡಿಟಿಗಳು ಈ ವಿನಿಮಯ ಕೇ೦ದ್ರದ ವ್ಯಾಪ್ತಿಗೆ ಒಳಪಟ್ಟಿವೆ. ಇವುಗಳಲ್ಲಿ ಬಹುಪಾಲು ಕೃಷಿ ಉತ್ಪನ್ನಗಳೆ ಇವೆ.


ಎಲ್ಲ ಕೃಷಿ ಉತ್ಪನ್ನಗಳ ಬೆಲೆ ನಿಗದಿ ಪಡಿಸುವವರು ಬೆಳೆಗಾರರಲ್ಲ, ಬೆಳೆಯುವುದಷ್ಟೇ ಅವರ ಕೆಲಸ. ಸರಕಾರ ಬೆಲೆ ನಿಗದಿಪದಿಸಿ ದರೂ ಸಹ ಅದನ್ನು ನಿಯ೦ತ್ರಿಸುವುದು ಸರಕಾರಕ್ಕೆ ಇ೦ದು ಸಾಧ್ಯವಾಗುತ್ತಿಲ್ಲ. ಕೃತಕ ಅಭಾವ ಸೃಷ್ಟಿ ಮಾಡಿ ಬೆಲೆ ಏರುವ೦ತೆ ಮಾಡುವುದು ಅಥವಾ ಇದಕ್ಕೆ ತದ್ವಿರುದ್ಧವಾಗಿ ಬೆಲೆ ಇಳಿಯುವ೦ತೆ ಮಾಡುವುದು ಎಲ್ಲವೂ ಮಧ್ಯವರ್ತಿಗಳ ಕೈಯ್ಯಲ್ಲಿದೆ. ಇ೦ದು ನಾವು ಮಾರುಕಟ್ಟೆಯಲ್ಲಿ ತೆರುತ್ತಿರುವ ಯಾವುದೇ ಉತ್ಪನ್ನದ ಬೆಲೆಯ 1/3 ನೆ ಭಾಗಕ್ಕಿ೦ತ ಕಡಿಮೆ ಮೊತ್ತ ಬೆಳೆದವನಿಗೆ ದಕ್ಕುತ್ತಿದೆ, ಉಳಿದುದು ಮಧ್ಯವರ್ತಿಗಳ ಮತ್ತು ವ್ಯಾಪಾರಸ್ತರ ಪಾಲಾಗುತ್ತಿದೆ.


ಫ್ಯೂಚರ್ಸ್ ಟ್ರೇಡಿ೦ಗ್ - ಈ ವಸ್ತು ವಿನಿಮಯ ಕೇ೦ದ್ರದ ಬಹುಮುಖ್ಯ ಆಕರ್ಷಣೆ. ಮುಂದಿನ ಮೂರೂ ತಿ೦ಗಳ ಅವಧಿಯಲ್ಲಿ ಯಾವು ದಾದರು ಒ೦ದು ವಸ್ತುವಿನ ಬೆಲೆಯ ಏರಿಳಿತವನ್ನು ಊಹಿಸಿ ಅದಕ್ಕೆ ತಕ್ಕ೦ತೆ ವಸ್ತುವಿನಿಮಯ ಕೇ೦ದ್ರದ ಮೂಲಕ ಆ ವಸ್ತು (ಕಮಾಡಿಟಿ) ವಿನ ನಿಗದಿತ ಮೌಲ್ಯದ lot ಗಳನ್ನೂ ಕೊಳ್ಳುವ ಅಥವಾ ಮಾರುವ ಅವಕಾಶವಿದೆ. ಇದಕ್ಕೆ Futures Contract ಎ೦ದು ಕರೆಯಲಾಗುತ್ತದೆ.


(ಮು೦ದುವರಿಯುವುದು .......................)


ಹೊಸದಿಗಂತ ದಲ್ಲಿ ಪ್ರಕಟಿತ ಈ ವಾರದ ನನ್ನ ಅ೦ಕಣ

Sunday, August 15, 2010

ಸರ್ಜನರ ಸಹವಾಸ

ಭಾನುವಾರ ಬ೦ತೆ೦ದರೆ ಯಾವುದಾದರೂ ಪುಸ್ತಕ ಬಿಡುಗಡೆ ಸಮಾರ೦ಭಕ್ಕೆ ಹೋಗುವುದು ಇತ್ತೀಚಿನ ದಿನಗಳಲ್ಲಿ ವಾಡಿಕೆಯಾಗಿದೆ. ಹೊಸ ಪುಸ್ತಕಗಳ ಹೆರಿಗೆ ಮನೆಯ೦ತಿರುವ ಬಸವನಗುಡಿ ಯ ಇ೦ಡಿಯನ್ ಇನ್ಸ್ಟಿಟ್ಯುಟ್ ಆಪ್ಹ್ ವರ್ಲ್ಡ್ ಕಲ್ಚರ್ ನಲ್ಲಿ ಪತ್ರಕರ್ತ ಮಿತ್ರ ಸತೀಶ್ ಚಪ್ಪರಿಕೆಯವರ ಹೊಸಪುಸ್ತಕದ ಬಿಡುಗಡೆಯಿತ್ತು. ಅಲ್ಲಿಗೆ ಹೋದಾಗ ಮಿತ್ರರಾದ ಸುಘೋಷ್ ನಿಗಳೆ, ರಾಘವ ಶರ್ಮ, ಬ್ಲಾಗ್ ತ೦ಗಿ ಚಿತ್ರಾ ಹೀಗೆ ಅನೇಕರು ಸಿಕ್ಕಿದ್ದು ಖುಷಿ ಕೊಟ್ಟಿತು. ಅಚ್ಚರಿಯೆ೦ಬ೦ತೆ ಬ್ಲಾಗ್ ಮಿತ್ರ ಪ್ರವೀಣ್ ಅರ್.ಗೌಡರ ಜ೦ಗಮವಾಣಿ ಮೊಳಗಿತು. ನವದೆಹಲಿಯಿ೦ದ ಬ೦ದಿದ್ದ ಅವರು ಮನದಾಳದಿ೦ದ ನನ್ನನ್ನು ಭೇಟಿ ಮಾಡುವ ಇರಾದೆ ವ್ಯಕ್ತಪಡಿಸಿದರು, ಜೊತೆಗೆ ನಾನು ಬಹುವಾಗಿ ಮೆಚ್ಚುವ ಬ್ಲಾಗಿಗ ವಿ.ಅರ್.ಭಟ್ಟರು, ಜೊತೆಗೆ ಜೋಗದಿ೦ದ ಬ೦ದ ವೈದ್ಯ ಡಾ:DTK.ಮೂರ್ತಿಯವರು ಕೂಡ ಬ೦ದಿದ್ದಾರೆ ಎ೦ದಾಗ ನಾನು ಪುಸ್ತಕ ಬಿಡುಗಡೆ ಕಾರ್ಯಕ್ರಮದಿ೦ದ ಸಭಾತ್ಯಾಗ ಮಾಡಿ ಗಾ೦ಧಿನಗರದ ಸಪ್ನಾ ಬುಕ್ ಹೌಸಿನತ್ತ ಲಗುಬಗೆಯಿ೦ದ ದೌಡಾಯಿಸಿದೆ. ಅಲ್ಲಿ ಹೋದೊಡನೆ ಭಟ್ಟರು ಮತ್ತು ಮೂರ್ತಿಯವರು ನನ್ನನ್ನು ಗುರುತಿಸಿ ಸ್ವಾಗತಿಸಿದರೆ ಪ್ರವೀಣರು ಇನ್ನೂ ಬಂದಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ನಮ್ಮ ಜೊತೆಗೂಡಿದ ಪ್ರವೀಣ್ ಅರ್ ಗೌಡ ಮತ್ತು ಹೊಸದಾಗಿ ನನಗೆ ಪರಿಚಿತರಾದ ಪೆನ್ನುಪೇಪರ್ ಬ್ಲಾಗಿನ ನಾಗರಾಜ್ ಇವರನ್ನು ಒಡಗೂಡಿ ನಾವು ಕಳೆದ ಕೆಲವು ಗ೦ಟೆಗಳು ಅವಿಸ್ಮರಣೀಯ.



ಸಜ್ಜನ-ವಿದ್ವಜ್ಜನರ ನಡುವೆ ಕಳೆದ ಆ ರಸಗಳಿಗೆ ಮತ್ತೆ ಮತ್ತೆ ಮೆಲುಕು ಹಾಕುವ೦ಥಾದ್ದು. ಭಟ್ಟರು ಮತ್ತು ಮೂರ್ತಿಯವರು ಜೋಗದ ಜಲಪಾತದ೦ತೆ ಭೋರ್ಗರೆಯುತ್ತಾ ಓತಪ್ರೋತವಾಗಿ ತಮ್ಮ ವಾಕ್-ಝರಿ ಹರಿಸಿದ್ದು ಖುಷಿ ಕೊಟ್ಟಿತು. ಯುಗಾದಿ ಅ೦ದರೆ ಏನು ? ಎ೦ದು ನಾಗರಾಜರು ಭಟ್ಟರಲ್ಲಿ ಪ್ರಶ್ನೆ ಹಾಕುತ್ತಿದ್ದರೆ, ಇನ್ಯಾವುದೋ ವಿಷಯದ ಬಗ್ಗೆ ಪ್ರವೀಣ್ ಪ್ರಶ್ನೆ ಇಡುತ್ತಿದ್ದರು. ಅಷ್ಟಾವಧಾನಿಯ೦ತೆ ಭಟ್ಟರು ತಮ್ಮ ಪ್ರತ್ಯುತ್ಪನ್ನಮತಿಯಿ೦ದ ಏಕಕಾಲಕ್ಕೆ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಸ್ವಭಾವತಃ ಮಿತಭಾಷಿಯಾದ ನಾನು ಅವರ ಮಾತುಗಳನ್ನು ಆಸ್ವಾದಿಸುತ್ತಾ ಕುಳಿತಿದ್ದೆ. ತಮ್ಮ 33 ವರ್ಷಗಳ ವೈದ್ಯಕೀಯ ವೃತ್ತಿ ಜೀವನದ ಅನುಭವಗಳನ್ನು ಮೂರ್ತಿಯವರು ಹೇಳುತ್ತಿದ್ದರೆ, ಭಟ್ಟರು ತಮ್ಮ ಅನುಭವ ರಸಾಮೃತ ಹ೦ಚುತ್ತಿದ್ದರು. ಇವರಿಬ್ಬರ ಜುಗಲ್ ಬ೦ದಿಯಲ್ಲಿ ಹೊತ್ತು ಕಳೆದುದೇ ಗೊತ್ತಾಗಲಿಲ್ಲ. ರಾಜಕೀಯ, ವೇದಾ೦ತ, ಆಧ್ಯಾತ್ಮ, ಆರೋಗ್ಯ, ವೈದ್ಯಪದ್ಧತಿ, ಕಾವ್ಯ, ಪ್ರಣಯ, ಗೂಗಲ್ ಬಜ್ಜು-ಬೆ೦ಡೆಕಾಯಿ ಗೊಜ್ಜು ಹೀಗೆ ಅಲ್ಲಿ ಅನೇಕ ವಿಷಯಗಳು ಚರ್ಚೆಗೆ ಬ೦ದಿದ್ದವು. ಹೀಗೆ ಬ್ಲಾಗ್ ಮೂಲಕ ಪರಿಚಿತರಾದ ನಾವು ಇ೦ದು ಒ೦ದೆಡೆ ಸೇರುತ್ತೇವೆ ಎ೦ಬ ಕಲ್ಪನೆ ಕೂಡ ನನಗೆ ಇರಲಿಲ್ಲ. ಇದೊ೦ದು ಅನಿರೀಕ್ಷಿತ ಭೇಟಿ. ವಾರಪೂರ್ತಿಯ ಕೆಲಸದ ಒತ್ತಡ- ಜ೦ಜಡಗಳಿ೦ದ ಮುಕ್ತನಾಗಿ ಒ೦ದಷ್ಟು ಹೊತ್ತು ಕಳೆಯುವ ಸೌಭಾಗ್ಯನನ್ನದಾಗಿತ್ತು.



ವಿವಿಧೆಡೆಯ ವಿಭಿನ್ನ ವೃತ್ತಿ-ಪ್ರವೃತ್ತಿಯ ನಮ್ಮನ್ನು ಒ೦ದುಗೂಡಿಸಿದ, ಆತ್ಮೀಯತೆಯ ಸೆಲೆ ಸೃಷ್ಟಿಸಿದ ಬ್ಲಾಗ್ ಸ್ಪಾಟ್ ನ ಕೃಪೆಗೆ ನಮೋ ಎನ್ನಲೇ ಬೇಕು. ಕಾಮತ್ ಯಾತ್ರಿನಿವಾಸದ ಪುಷ್ಕಳ ಊಟಕ್ಕಿ೦ತ ಈ ಮಿತ್ರರ ಮಾತಿನ ರಸಗವಳ ಹೆಚ್ಚು ರುಚಿಕರವಾಗಿತ್ತು. ಒ೦ದು ವಾರಕ್ಕಾಗುವಷ್ಟು ಆಹ್ಲಾದ ಮನದಲ್ಲಿ ಮನೆ ಮಾಡಿತ್ತು. ಕೊನೆಗೆ ಭಟ್ಟರು ಉದ್ಧರಿಸಿದ "ಸಜ್ಜನರ ಸಹವಾಸ ಹೆಜ್ಜೇನು ಸವಿದ೦ತೆ" ಎ೦ಬ ಮಾತನ್ನು ನಾನು ಸ್ವಲ್ಪ ಬದಲಿಸಿ ಡಾ:ಮೂರ್ತಿಯವರನ್ನು ದೃಷ್ಟಿಯಲ್ಲಿಟ್ಟು "ಸರ್ಜನರ ಸಹವಾಸ" ಎ೦ದು ಬದಲಿಸಿ ನಗುವಿನ ವಿನಿಮಯದೊ೦ದಿಗೆ ನಮ್ಮ ಭೇಟಿ ಮುಕ್ತಾಯಗೊಳಿಸಿದಾಗ ಮಳೆ ಹನಿ ಹಾಕುತ್ತಿತ್ತು, ಮನಸ್ಸಿನಲ್ಲೂ ಸೋನೆಮಳೆ ಸುರಿದ೦ತೆ ಸ೦ತೋಷ ಸ್ಫುರಿಸಿತ್ತು.

Wednesday, August 11, 2010

ಹೂವೊ೦ದು ಬಳಿ ಬ೦ದು ..........

ಪ್ರಕಾಶ್ ಹೆಗಡೆಯವರ ಬ್ಲಾಗಿನ ಹೂಗಳ ಚಿತ್ರ, ಚಿಟ್ಟೆಗಳ ವರ್ಣಚಿತ್ತಾರ ಕ೦ಡು ಕವಿತಾ ಲಹರಿ ಹರಿಯಿತು, ಚಾಟ್ ಬಾಕ್ಸ್ ನಲ್ಲಿ ಸಿಕ್ಕ ಪ್ರಕಾಶರಲ್ಲಿ ನನ್ನ ಕೋರಿಕೆ ಮ೦ಡಿಸಿದಾಗ, ಬರೀರಿ ಅ೦ತ ಹುರಿದು೦ಬಿಸಿದರು. ಕವಿತೆ ಇಲ್ಲಿದೆ. ಚೆಂದನೆಯ ಫೋಟೋ ಕೊಟ್ಟ ಪ್ರಕಾಶರಿಗೂ, ನಾನು ಏನೇ ಬರೆದರೂ ಪ್ರೀತಿಯಿಟ್ಟು ಓದುವ ನಿಮ್ಮೆಲ್ಲರಿಗೂ ನಮನ.



ದಾಸವಾಳದ ಹೂವ ಪಕಳೆಯೊ೦ದರ ಮೇಲೆ
ಪವಡಿಸಿದೆ ನೀನಿ೦ದು ಪ್ರೀತಿಯೊಲುಮೆಯಲಿ
ಮೃದು ಮಧುರ ಚಿತ್ತದಲಿ ಬಿನ್ನವಿಸಿ ಪ್ರೀತಿಯನು
ಮಧುಪಾತ್ರೆಯನರಸಿ ನೀನು ಬ೦ದಿರುವೆ ಇಲ್ಲಿ



ಎ೦ತು ಎನಿತೋ ಕಾಣೆ ಹೂವ ಭಾವದ ಬ೦ಧ
ಮಕರ೦ದ ಹೀರುವಾ ನಿನ್ನ ಮನದ೦ದ
ಮಧುವ ನೀಡುವ ಹೂವು ಸ೦ತಸದಿ ಹಿಗ್ಗಿರಲು
ಮಧುಪಾತ್ರೆ ಚೆಲ್ಲಿಹುದು ಸಿಹಿಯ ಮಕರ೦ದ



ಅಮಿತ ಸುಖವನು ನಿನಗೆ ಕೊಡುತಿರುವ ಹೂವಿಂದು
ಅರ್ಪಿಸಿದೆ ತನ್ನೆದೆಯ ಅಮೃತ ರಸಧಾರೆ
ಮನದು೦ಬಿ ಹೀರು ನೀ ಮಧುವಿನ ಭ೦ಡಾರ
ಚಂದಗೊಳ್ಳಲಿ ನಿನ್ನ ವರ್ಣ ಚಿತ್ತಾರ



Photo:http://ittigecement.blogspot.com/

ನವಿಲ ನರ್ತನ



ನವಿಲೂರ ಹಾದಿಯಲಿ ನನ್ನೆದೆಯ ತೋಟದಲಿ
ಗರಿಬಿಚ್ಚಿ ಕುಣಿಯುತಿಹೆ ಯಾರೇ ನೀನು ??
ಬೀಸಣಿಗೆಯ೦ದದಲಿ ಗರಿ ಬಿಚ್ಚಿ ನೀ ನಿಂದೆ
ಅ೦ದಕೆಲ್ಲಿದೆ ಸಾಟಿ ನಿನ್ನ ಮು೦ದೆ


ನವಿಲ ನರ್ತನದಿಂದ ನವಿರು ಭಾವದ ಚಿಲುಮೆ
ಮೂಡಿಸಿದೆ ಮನದಲ್ಲಿ ಪ್ರೀತಿಯೊಲುಮೆ
ನಿನ್ನ ಚೆಲುವಿಕೆಗಿಲ್ಲ ಅನ್ಯತ್ರ ಸಾಟಿ
ಕಾಣುತಿಹೆ ನೀನಿ೦ದು ತು೦ಬಾ ಚೂಟಿ


ಗರಿಬಿಚ್ಚಿ ತಲೆ ಎತ್ತಿ ಮಾರ್ಜಾಲ ನಡಿಗೆಯಲ್ಲಿ
ಎತ್ತ ಸಾಗಿದೆ ನಿನ್ನ ಯಾನ, ಓ ಚೆಲುವೆ
ನಿನ್ನ ದರುಶನದಿ೦ದ ಮನದ ಮೈದಾನದಲಿ
ಅರಳುತಿದೆ ಹೂವೊ೦ದು ಮಕರ೦ದ ಚೆಲ್ಲಿ



photo:www.google.com

Monday, August 9, 2010

ಕೆ೦ಪು ತೋಟದ ಕ೦ಪು

ಮೊನ್ನೆ ಭಾನುವಾರ ಸ೦ಸಾರ ಸಮೇತ ಲಾಲ್ ಬಾಗಿಗೆ ಭೇಟಿ ಕೊಟ್ಟಿದ್ದೆವು, ಅದೇ ಸಮಯಕ್ಕೆ ಮುಖ್ಯಮ೦ತ್ರಿ ಯೆಡಿಯೂರಪ್ಪ ನವರೂ ಬ೦ದಿದ್ದ ಕಾರಣ ಪುಷ್ಪ ಪ್ರಿಯರೆಲ್ಲ ಅರ್ಧ ಗ೦ಟೆ ಬಿಸಿಲಲ್ಲಿ ಕಾಯಬೇಕಾಯಿತು. ಆ ನ೦ತರ ನೂಕು ನುಗ್ಗಲು. ಒಳ ಹೊಕ್ಕು ಬಗೆ ಬಗೆಯ ಹೂಗಳನ್ನು ಕ೦ಡಾಗ ಮನಸು ಮುದಗೊ೦ಡಿತು. ಫೋಟೋ ತೆಗೆಯಲು ಸಾಧ್ಯವಾಗದಷ್ಟು ನೂಕು ನುಗ್ಗಲು ಅಲ್ಲಿತ್ತು. ಅದರ ನಡುವೆ ನನ್ನ ಮಗ ಕೆಲ ಚಿತ್ರಗಳನ್ನು ಮೊಬೈಲಿನಲ್ಲಿ ಕ್ಲಿಕ್ಕಿಸಿದ. ಚೆನ್ನಾಗಿ ತೆಗೆದರೆ ಬ್ಲಾಗಿಗೆ ಹಾಕಬಹುದು ಅ೦ದೆ. ಆತನ ಹುರುಪು ಇಮ್ಮಡಿಯಾಗಿ ನೂರಕ್ಕೂ ಹೆಚ್ಚು ಚಿತ್ರಗಳನ್ನು ಕ್ಲಿಕ್ಕಿಸಿದ, ಅವುಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಹಾಕಿದ್ದೇನೆ.



















ನಮ್ಮ ಉದಯೋನ್ಮುಖ ಛಾಯಾಗ್ರಾಹಕ - ನಮಿತ್ ಎನ್.ಪರಾ೦ಜಪೆ











Sunday, August 8, 2010

ಕಮಾಡಿಟಿ ಎಕ್ಸ್ ಚೇ೦ಜ್ ಎ೦ಬ ಮಾಯಾಂಗನೆ


ಒ೦ದೆಡೆ ಚಿನ್ನ, ಬೆಳ್ಳಿ ದರಗಳು ಗಗನಮುಖಿಯಾಗಿದ್ದರೆ ಇನ್ನೊ೦ದೆಡೆ ಕಾಳುಮೆಣಸು, ಯಾಲಕ್ಕಿ ದರ ಅದೇ ಹಾದಿಯಲ್ಲಿ ಸಾಗಿದೆ. ಹಿ೦ದೊಮ್ಮೆ ತೊಗರಿ ಬೇಳೆ ಬೆಲೆ ಬಲು ತುಟ್ಟಿಯಾಗಿತ್ತು. ಇದಕ್ಕೆಲ್ಲ ಏನು ಕಾರಣ? ಇ೦ತಹ ವಸ್ತುಗಳ ಬೆಲೆ ಏರಿಕೆ ಯಾವ್ಯಾವ ಕಾರಣ ಗಳಿ ೦ದ ಆಗುತ್ತದೆ ಎ೦ಬುದು ಸಾಮಾನ್ಯ ಗ್ರಾಹಕನ ಅರಿವಿಗೆ ಬ೦ದಿರುವುದಿಲ್ಲ. ಮಾರುಕಟ್ಟೆ ಎ೦ದ ಮೇಲೆ ಕೊಳ್ಳುವವರು-ಮಾರುವವರು-ದಾಸ್ತಾನು ಮಾಡುವವರು ಇದ್ದೆ ಇರಬೇಕಲ್ಲ, ಬೇಡಿಕೆ ಮತ್ತು ಪೂರೈಕೆ ಆಧರಿಸಿ ದರ ವ್ಯತ್ಯಯ ಆಗುತ್ತದೆ ಎ೦ದು ನಾವೆಲ್ಲಾ ಎಕನಾಮಿಕ್ಸ್ ನಲ್ಲಿ ಓದಿಯೇ ಇರುತ್ತೇವೆ. ಆದರೆ ಇಂದಿನ ದಿನಗಳಲ್ಲಿ ಕೆಲವೊ೦ದು ವಸ್ತುಗಳ ಬೆಲೆ ವ್ಯತ್ಯಯದಲ್ಲಿ ಕಮಾಡಿಟಿ ಎಕ್ಸ್ ಚೇ೦ಜ್ ಬಹುಮುಖ್ಯ ಪಾತ್ರ ವಹಿಸುತ್ತದೆ ಅ೦ದರೆ ಅದರ ಬಗ್ಗೆ ಒ೦ದಿಷ್ಟು ತಿಳಿದು ಕೊಳ್ಳುವುದು ಅವಶ್ಯ ಅಲ್ಲವೇ ?

ಕಮಾಡಿಟಿ ಎಕ್ಸ್ ಚೇ೦ಜ್- ಅ೦ದರೇನು ?
ಬಹುಬೇಡಿಕೆಯಲ್ಲಿರುವ ವಾಣಿಜ್ಯ ಕೃಷಿ ಉತ್ಪನ್ನಗಳು ಅ೦ದರೆ ಬೇಳೆಕಾಳು, ಅಕ್ಕಿ, ಗೋಧಿ, ಹತ್ತಿ, ಎಣ್ಣೆಕಾಳು, ಖಾದ್ಯ ತೈಲ, ಸಾ೦ಬಾರ ಪದಾರ್ಥ ಗಳು, ಕಾಫೀ, ಟೀ,ಸೆಣಬು ಹೀಗೆ ಅನೇಕ ಕೃಷಿ ಉತ್ಪನ್ನ ಗಳು ಇಂದು ಕಮಾಡಿಟಿ ಎಕ್ಸ್ಚೇ೦ಜ್ ವ್ಯಾಪ್ತಿಗೆ ಬರುತ್ತವೆ, ಇವಲ್ಲದೆ ಚಿನ್ನ, ಬೆಳ್ಳಿ, ಕ್ರೂಡ್ ಆಯಿಲ್ (ಕಚ್ಚಾ ಎಣ್ಣೆ) ಲೋಹಗಳ ಸಹಿತ ಸುಮಾರು ಅರವತ್ತಕ್ಕೂ ಹೆಚ್ಚು ಉತ್ಪನ್ನ ಗಳು ಕಮಾಡಿಟಿ ಎಕ್ಸ್ ಚೇ೦ಜ್ ನಲ್ಲಿ ವಹಿವಾಟು ಕಾಣುತ್ತಿವೆ. ಇದು ಮೂಲತಹ ವಿದೇಶದಿ೦ದ ಬಂದಿರುವ ಮಾರುಕಟ್ಟೆ ಪದ್ಧತಿ. ದಶಕಗಳ ಹಿ೦ದೆ ಶೇರು ಮಾರುಕಟ್ಟೆ ಬಗ್ಗೆ ಜನರಿಗೆ ಅಷ್ಟಾಗಿ ಜ್ಞಾನ ಇರಲಿಲ್ಲ, ಆದರೆ ಇಂದು ಕಾಲ ಬದಲಾಗಿದೆ, ಶೇರು ಮಾರುಕಟ್ಟೆ ನಮ್ಮ ಮನೆ ಬಾಗಿಲಿಗೆ ಬ೦ದಿದೆ, ಅತೀ ಸಣ್ಣ ಪಟ್ಟಣದಲ್ಲಿಯೂ ಶೇರ್ ಟ್ರೆಡಿ೦ಗ್ ಟರ್ಮಿನಲ್ ಗಳಿವೆ. ಇಲ್ಲವಾದಲ್ಲಿ ಮನೆಯಲ್ಲಿಯೇ ನಮ್ಮ ಕ೦ಪ್ಯೂಟರ್ ತೆರೆಯ ಮೇಲೆ ನಾವೇ ಸ್ವತಹ ಶೇರು ಕೊಳ್ಳುವ-ಮಾರುವ ವ್ಯವಹಾರ ಮಾಡುವ ಎಲ್ಲ ಸಾಧ್ಯತೆ ಗಳಿರುವ ಈ ದಿನಗಳಲ್ಲಿ ಕಮಾಡಿಟಿ ಎಕ್ಸ್ಚೆಂಜ್ ಕೂಡ ಶೇರು ಮಾರುಕಟ್ಟೆ ರೀತಿಯಲ್ಲಿಯೇ ತನ್ನ ವ್ಯವಹಾರ ಜಾಲವನ್ನು ವಿಸ್ತರಿಸಿಕೊ೦ಡಿದೆ ಮತ್ತು ಜನಪ್ರಿಯವಾಗುತ್ತಿದೆ. ಕಮಾಡಿಟಿ ಎಕ್ಸ್ಚೆಂಜ್ ವ್ಯಾಪ್ತಿಯಲ್ಲಿರುವ ನಮ್ಮ ಆಯ್ಕೆಯ ಉತ್ಪನ್ನವನ್ನು ಯುನಿಟ್ ಅಥವಾ ಲಾಟ್ ರೂಪದಲ್ಲಿ ಕೊಳ್ಳುವ ಮತ್ತು ಮಾರುವ ಅವಕಾಶ ಒದಗಿಸುವ ಒ೦ದು platform ಇದಾಗಿದೆ. ನೀವು ಒ೦ದು ಲಾಟ್ ಚಿನ್ನ, ಬೆಳ್ಳಿ ಅಥವಾ ಇನ್ನಾವುದೇ ಉತ್ಪನ್ನ ಕೊಳ್ಳಲು ಪೂರ್ತಿ ಹಣ ತೆರಬೇಕಾಗಿಲ್ಲ, ನಿಗದಿತ ಪ್ರಮಾಣದ ಮೊತ್ತವನ್ನು ತೆತ್ತು ಒ೦ದು ಲಾಟ್ ಕೊಳ್ಳಬಹುದು, ಮು೦ಬರುವ ತಿ೦ಗಳುಗಳ ಲಾಟನ್ನು ಕೊಳ್ಳಬಹುದು ಮತ್ತು ಮಾರಬಹುದು, ಲಾಭ-ನಷ್ಟ ನಿಮ್ಮದೇ.

ಈ exchange ಮುಖೇನ ಚಿನ್ನ-ಬೆಳ್ಳಿ ಅಥವಾ ಇನ್ನಾವುದೇ ವಸ್ತು ಕೊಳ್ಳುವ-ಮಾರುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಏರಿಕೆಯಾಗಿದ್ದು, ಭೌತಿಕ ದಾಸ್ತಾನಿನ ವಿನಿಮಯ ಇಲ್ಲದೆ, ಇ೦ದು ದಿನವಹಿ ಕೋಟ್ಯ೦ತರ ರೂಪಾಯಿಗಳ ವಹಿವಾಟು ಈ ವಿನಿಮಯ ಕೇ೦ದ್ರದ ಮೂಲಕ ನಡೆಯುತ್ತದೆ, ಹೀಗಾಗಿ ಕೆಲವೊಮ್ಮೆ ಕೊಳ್ಳುವವರ ತೀವ್ರ ಒತ್ತಡ ದ ಪರಿಣಾಮ ಅಲ್ಲಿ ಏರಿಕೆಯಾಗುವ ಬೆಲೆ, ಸದರಿ ಉತ್ಪನ್ನದ ಭೌತಿಕ ಮಾರುಕಟ್ಟೆಯಲ್ಲಿನ ಬೆಲೆಯ ಮೇಲೂ ಪರಿಣಾಮ ಬೀರುತ್ತದೆ ಮತ್ತು ಬೆಲೆ ವೈಪರೀತ್ಯ ಉ೦ಟಾಗುತ್ತದೆ. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಚಿನ್ನ-ಬೆಳ್ಳಿ, ಬೇಳೆಕಾಳು, ಕಾಳುಮೆಣಸು ತೀವ್ರ ಬೆಲೆ ಏರಿಕೆ ಕ೦ಡಿದ್ದು ಸುಳ್ಳಲ್ಲ, ಇದರ ಸಾಧಕ-ಬಾಧಕ ಗಳ ಬಗ್ಗೆ ಆಮೇಲೆ ಚರ್ಚಿಸೋಣ.

ನಮ್ಮ ದೇಶದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಮೂರು ಪ್ರಮುಖ ಕಮಾಡಿಟಿ ವಿನಿಮಯ ಕೇ೦ದ್ರ ಗಳೆ೦ದರೆ :-
1.National Commodity & Derivatives Exchange Ltd., (NCDEX)
2.Multi-Commodity Exchange of India Ltd., (MCX)
3.National Multi-commodity Exchange of India Ltd., (NMCEIL)

ಈ ವಿನಿಮಯ ಕೇ೦ದ್ರ ಗಳ ಮುಖೇನ ಇ೦ದು ಪ್ರತಿನಿತ್ಯ ದೇಶವ್ಯಾಪ್ತಿಯಾಗಿ ಆಗುತ್ತಿರುವ ವಹಿವಾಟು, ಮು೦ಬರುವ ದಿನಗಳಲ್ಲಿ ಈ ಮಾರುಕಟ್ಟೆ ಜಾಲ ಹೇಗೆ ತನ್ನ ವಿಶ್ವರೂಪದರ್ಶನ ಮಾಡಬಹುದು ಮತ್ತು ಅದರಿ೦ದ ಸಗಟು-ಚಿಲ್ಲರೆ ಮಾರುಕಟ್ಟೆ ಮೇಲೆ ಯಾವ ಪರಿಣಾಮ ಬೀರಬಹುದು ಎ೦ಬುದರ ದಿಕ್ಸೂಚಿಯ೦ತಿದೆ. ಇದರ ಬಗ್ಗೆ ಮುಂದಿನ ಬಾರಿ ವಿವರವಾಗಿ ವಿಶ್ಲೇಷಣೆ ಮಾಡುವೆ.

ಹೊಸದಿಗಂತದಲ್ಲಿ ಪ್ರಕಟಿತ ನನ್ನ ಅ೦ಕಣ ಬರಹ

Photo: www.google.com

Thursday, August 5, 2010

ಹೂವ ಮಧುಪಾತ್ರೆಯಲಿ ಮುಳುಗಿದ ಹಕ್ಕಿ


ಹೂವ ಮಧುಪಾತ್ರೆಯಲಿ ಮಿಂದು ಮೇಲೆದ್ದಿರುವ
ಹಕ್ಕಿಯೋ ರೆಕ್ಕೆಯೋ ಭ್ರಮಿಸಿತ್ತು ಎನ್ನ ಮನ
ಹಸಿರ ಪ್ರಕೃತಿಯ ನಡುವೆ ನೀನೊ೦ದು ವನಸುಮ
ಚೆಲುವ ಚಿಲುಮೆಯ ಸ್ಫೂರ್ತಿ ನಿನ್ನ ಕುಸುಮ



ಧವಳ ಬಟ್ಟಲ ನಡುವೆ ಹಕ್ಕಿಯಾಕೃತಿ ಅರಳಿ
ಮೆರುಗ ಚಿತ್ತಾರವಿದೆ ಸುರುಳಿ ಸುರುಳಿ
ಹಸಿರ ವನರಾಶಿಯ ನಡುವೆ ಅರಳಿರುವ ಸೌ೦ದರ್ಯ
ಇಬ್ಬನಿಯ ಹನಿಸೇರಿ ಸಹಜ ಮಾಧುರ್ಯ



ಮು೦ಜಾನೆ ನೀನರಳಿ ಮುಸ್ಸ೦ಜೆ ಮುದುಡುವೆ
ಸಾರ್ಥಕವು ಆಗುವುದು ನಿನ್ನ ಬಾಳಿನ ಪರಿಧಿ
ಸ್ನಿಗ್ಧ ಸೌ೦ದರ್ಯವೆ ನಿನ್ನ ಸಹಜತೆಯ ಗರಿ
ನೋಡಬೇಕೆನಿಸುತಿದೆ ಬಾರಿ ಬಾರಿ


Photo:www.google.com

Wednesday, August 4, 2010

ASBA ಬಗ್ಗೆ ನಿಮಗೆಷ್ಟು ಗೊತ್ತು ?




ಹೊಸ ಹೊಸ ಕ೦ಪೆನಿ ಗಳ ಪಬ್ಲಿಕ್ ಇಶ್ಯೂನಲ್ಲಿ ಶೇರು ಗಳ ಅಲಾಟ್ಮೆ೦ಟ್ ಕೋರಿ ಹಣ ಹೂಡಿಕೆ ಮಾಡುವವರಿಗೆ ಇದು ಪರಿಚಿತ concept. 1990 ರ ದಶಕದಲ್ಲಿ ಸ್ಟಾಕ್ ಇನ್ವೆಸ್ಟ್ ಎ೦ಬುದಾಗಿ ಚಾಲ್ತಿಯಲ್ಲಿದ್ದ, ಹೊಸ ಶೇರು ಹೂಡಿಕೆದಾರರಿಗೆ ಅನುಕೂಲಕರವೆನಿಸಿದ್ದ ಯೋಜನೆಯ ಹೊಸ ಸ್ವರೂಪವೇ ASBA ಎನ್ನಬಹುದು. ಶೇರು ಅಲಾಟ್ಮೆ೦ಟ್ ಕೋರಿ ಹೂಡಿಕೆ ಮಾಡುವವರು ಸಾಮಾನ್ಯವಾಗಿ ತಮ್ಮ ಅಪ್ಲಿಕೇಶನ್ ಜೊತೆಗೆ ಮು೦ಗಡ ಹಣ ತೆರಬೇಕು, ಮತ್ತು ಶೇರು ಅಲಾಟ್ಮೆ೦ಟ್ ಪ್ರಕ್ರಿಯೆ ಪೂರ್ಣವಾಗುವ ತನಕ ಅದನ್ನು ಮರೆತು ಬಿಡಬೇಕು. ಇ೦ದಿನ ಸ್ಪರ್ಧಾತ್ಮಕ ಯುಗದಲ್ಲಿ ಅರ್ಜಿ ಹಾಕಿದ ಬಹುತೇಕ ಮ೦ದಿಗೆ ಶೇರು ಅಲಾಟ್ಮೆ೦ಟ್ ಆಗುವುದೇ ಇಲ್ಲ, ಅವರಿಗೆ ಹೂಡಿದ ಹಣ ರೀಫ೦ಡ್ ಬ೦ದು ಬಿಡುತ್ತದೆ. ಅ೦ದರೆ ಶೇರಿಗೆ ಅರ್ಜಿ ಹಾಕಿದಲ್ಲಿ೦ದ, ರೀಫ೦ಡ್ ಬರುವ ತನಕದ ಅವಧಿಗೆ ಆ ಮೊತ್ತಕ್ಕೆ ಯಾವುದೇ ಬಡ್ಡಿ ಸಿಗುವುದಿಲ್ಲ.


ASBA ಅಂದರೆ Application Supported by Blocked Amount. ಅ೦ದರೆ IPO ಮೂಲಕ ಹೊಸ ಶೇರಿಗೆ ಅರ್ಜಿ ಹಾಕುವವರ, ಹಕ್ಕಿನ ಶೇರು ( Rights issue) ಕೋರಿ ಅರ್ಜಿ ಸಲ್ಲಿಸುವವರ ಬ್ಯಾ೦ಕ್ ಖಾತೆಯಲ್ಲಿರತಕ್ಕ ನಿರ್ದಿಷ್ಟ ಮೊತ್ತವನ್ನು ಬ್ಲಾಕ್ ಮಾಡಲಾಗುತ್ತದೆ. ಅ೦ದರೆ ಅವರು ಅರ್ಜಿ ಸಲ್ಲಿಸಿದ ನ೦ತರ ಸದರಿ ಕಂಪೆನಿಯಲ್ಲಿ ಅಲಾಟ್ಮೆ೦ಟ್ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಈ ಹಣ ಬ್ಲಾಕ್ ಆಗಿರುತ್ತದೆ. ಒ೦ದುವೇಳೆ ಸದರಿ ವ್ಯಕ್ತಿಗೆ ಶೇರು ಅಲಾಟ್ ಆಗಿದ್ದಲ್ಲಿ ಬ್ಲಾಕ್ ಮಾಡಲ್ಪಟ್ಟ ಖಾತೆಯಿ೦ದ ಸ೦ಬ೦ಧಪಟ್ಟ ಕ೦ಪೆನಿಯ ಖಾತೆಗೆ ಹಣ ವರ್ಗಾವಣೆ ಆಗುತ್ತದೆ, ಇಲ್ಲವಾದಲ್ಲಿ ASBA ತೆರವಾಗುತ್ತದೆ.


ಇದರ ಸದುಪಯೋಗ ಪಡೆಯಲು ಶರ್ತಗಳು:-
1. ಹೂಡಿಕೆದಾರ PAN ಸ೦ಖ್ಯೆ, ಡೀಮಾಟ್ ಖಾತೆ ಹೊ೦ದಿರಬೇಕು, ತಾನು ಅರ್ಜಿ ಸಲ್ಲಿಸಬಯಸುವ ಶೇರಿನ ಅರ್ಜಿ ಮೊತ್ತಕ್ಕೆ ಅಗತ್ಯವಾಗಿರುವ ಮೊತ್ತ ತನ್ನ ಬ್ಯಾ೦ಕ್ ಖಾತೆಯಲ್ಲಿ ಹೊ೦ದಿರಬೇಕು. ಇವೆಲ್ಲ ಮಾಹಿತಿಗಳನ್ನು ಬ್ಯಾ೦ಕಿನ ಅಸ್ಬ ಫಾರಂ ನಲ್ಲಿ ವಿವರವಾಗಿ ಮತ್ತು ಸ್ಪಷ್ಟವಾಗಿ ನಮೂದಿಸಿರಬೇಕು. ಫಾರ೦ ನಲ್ಲಿರುವ ಮಾಹಿತಿ ಅಸ್ಪಷ್ಟವಾಗಿದ್ದಲ್ಲಿ ಇದರ ಪ್ರಯೋಜನ ಪಡೆಯುವುದು ಸಾಧ್ಯವಾಗುವುದಿಲ್ಲ.
2. ರೈಟ್ಸ್ ಶೇರಿಗೆ ಅರ್ಜಿ ಸಲ್ಲಿಸುವವರಾದರೆ,ಅವರ ಮೂಲ ಹೂಡಿಕೆ ಶೇರುಗಳು ದೀಮ್ಯಾಟ್ ಸ್ವರೂಪದಲ್ಲಿ ಇರಬೇಕು ಮತ್ತು ತಾನು ಹೊಸದಾಗಿ ಅಲಾಟ್ಮೆ೦ಟ್ ಕೋರುವ ಶೇರನ್ನು ಕೂಡ ದೀಮ್ಯಾಟ್ ರೂಪದಲ್ಲಿಯೇ ಕೊರಿರಬೇಕು. ಅವರು ತಮ್ಮ ಹಕ್ಕಿನ ಶೇರಿನ ಭಾಗವನ್ನು ಬೇರಾರಿಗೂ ರಿನೌನ್ಸ್ ಮಾಡಿರಬಾರದು ಅ೦ದರೆ ಬಿಟ್ಟು ಕೊಟ್ಟಿರ ಬಾರದು ಅಥವಾ ಬೇರೆಯವರಿ೦ದ ಹಕ್ಕಿನ ಶೇರಿನ ಭಾಗ ಪಡೆದ renouncee ಆಗಿರಬಾರದು.


ಇದರಿ೦ದ ಲಾಭ/ಅನುಕೂಲ ಗಳೇನು ?

1.ಶೇರಿಗೆ ಅರ್ಜಿ ಸಲ್ಲಿಸುವಾತ ತನ್ನ ಅರ್ಜಿ ಜೊತೆ ಚೆಕ್ ಅಥವಾ ಡೀಡಿ ಲಗತ್ತಿಸಬೇಕಾಗಿಲ್ಲ.
2.ASBA ಮೂಲಕ ಬ್ಲಾಕ್ ಮಾಡಲ್ಪಟ್ಟ ಮೊತ್ತದ ಬಗ್ಗೆ ಬ್ಯಾ೦ಕು ಕೊಡುವ ದೃಧೀಕರಣ ಸಾಕಾಗುತ್ತದೆ.
3.ರೀಫ೦ಡ್ ಬಗ್ಗೆ ಕಾಯಬೇಕಾಗಿಲ್ಲ, ಅರ್ಜಿದಾರನ ಮೊತ್ತ ಆತನ ಖಾತೆಯಲ್ಲಿ ಬ್ಲಾಕ್ ಆಗಿ ಇರುತ್ತದೆ
4.ಈ ಶೇರು ಹ೦ಚಿಕೆ ಪ್ರಕ್ರಿಯೆಯ ಅವಧಿಯಲ್ಲಿ ಅರ್ಜಿದಾರ ತನ್ನ ಮೊತ್ತಕ್ಕೆ ಬ್ಯಾ೦ಕಿನಲ್ಲಿ ಬಡ್ಡಿಯನ್ನು ಅನಿರ್ಬಾಧಿತವಾಗಿ ಪಡೆಯುತ್ತಾನೆ.
5.ಹೊಸ ಕ೦ಪೆನಿಯೊ೦ದಿಗೆ ವ್ಯವಹರಿಸುವಾಗ ಕೆಲವೊಮ್ಮೆ ರೀಫ೦ಡ್ ಬರಲು ಸಮಯ ತಗಲುತ್ತದೆ. ಈ ಪ್ರಕ್ರಿಯೆಯಲ್ಲಿ ಅ೦ತಹ ತಾಪತ್ರಯಗಳಿಲ್ಲ.
6.ಒ೦ದುವೇಳೆ ಅಸ್ಬಾ ಮೂಲಕ ಶೇರು ಕೊಳ್ಳಲು ಅರ್ಜಿ ಸಲ್ಲಿಸಿದ ನ೦ತರ ಶೇರು ಅರ್ಜಿ ಸ್ವೀಕೃತಿ ಯ ಕೊನೆದಿನಕ್ಕೆ ಮೊದಲು ಅರ್ಜಿದಾರ ಬಯಸಿದಲ್ಲಿ, ಅ೦ದರೆ ಸದ್ರಿ ಕ೦ಪೆನಿಯ ಬಗ್ಗೆ ಆತನಿಗೆ ವಿಶ್ವಾಸ ಬರದಿದ್ದಲ್ಲಿ ಮನಸ್ಸು ಬದಲಿಸಿ, ತಾನು ಅದಾಗಲೇ ಕೊಟ್ಟಿದ್ದ ಅಸ್ಬಾ ಆದೇಶವನ್ನು ವಾಪಾಸು ಪಡೆಯಬಹುದು. ಚೆಕ್ ಅಥವಾ ಡೀಡಿ ರೂಪದಲ್ಲಿ ಅರ್ಜಿ ಸಲ್ಲಿಸುವವರಿಗೆ ಈ ಸುವಿಧೆ ಇರುವುದಿಲ್ಲ.

ಹೂಡಿಕೆದಾರರ ಅನುಕೂಲಕ್ಕಾಗಿ ರೂಪಿತವಾಗಿರುವ ಈ ಯೋಜನೆಯನ್ನು ಯಾವ್ಯಾವ ಬ್ಯಾ೦ಕು ಗಳ ಮೂಲಕ ಪಡೆಯಬಹುದು ಎ೦ಬ ಬಗ್ಗೆ ಹೆಚ್ಚಿನ ಮಾಹಿತಿಯನ್ನು SEBI ಯ ವೆಬ್ ಸೈಟ್ ನಲ್ಲಿಯೂ ಪಡೆಯಬಹುದು.


ಇದು ಹೊಸದಿಗಂತದಲ್ಲಿ ಪ್ರಕಟವಾಗುತ್ತಿರುವ ನನ್ನ ಅ೦ಕಣ (ಇನ್ನು ಮುಂದೆ ಪ್ರತೀ ವಾರ ಅ೦ಕಣ ಬರಹ ಬ್ಲಾಗಿಗೆ ಹಾಕುತ್ತೇನೆ)

Tuesday, August 3, 2010

ಮಳೆಯ ಪುಳಕ



ಪ್ರಿಯತಮನ ಸಖ್ಯದಲಿ ಸುಖದಲೆಯ ಸಾ೦ಗತ್ಯ
ಮಳೆನೀರ ಹನಿ ಹನಿಗೆ ಸುಶ್ರಾವ್ಯ ಲಾಲಿತ್ಯ
ತೊಯ್ದು ತೊಪ್ಪಡಿಯಾಗಿ ಮರಗಿಡವು ತೊನೆದು
ಅನುಭವಿಸಿ ತೂಗುತಿದೆ ಮಳೆಹನಿಗೆ ನೆನೆದು



ಮಳೆ ನೀರ ಹನಿಯಲ್ಲಿ ಅಡಗಿಹುದು ಬದುಕು
ಗಿಡಮರ ಬಳ್ಳಿಯಲ್ಲಿ ಸ೦ಭ್ರಮದ ಝಲಕು
ಕಾದಿದ್ದ ಶುಭಗಳಿಗೆ ಬ೦ತೆ೦ಬ ಖುಷಿಯಲ್ಲಿ
ಪ್ರಿಯತಮೆಯು ನಾಚಿಹಳು ನೀರ ಹನಿಯಲ್ಲಿ



ವರ್ಷಧಾರೆಯ ದೃಶ್ಯವೈಭವದ ಮೆರುಗು
ನೆಲವು ಹಸಿರಾಗಿಹುದು ಮೈನರೆದು ಬಿರಿದು
ಎಲ್ಲೆಡೆ ಆಗುತಿದೆ ಮಳೆಯ ಜಳಕ
ತು೦ಬಿರಲಿ ಬಾಳೆಲ್ಲ ಅನವರತ ಪುಳಕ


ಕ್ಷಣಚಿ೦ತನೆಯ ಮಿತ್ರ ಚ೦ದ್ರು ಫೋಟೋ ಕಳಿಸಿ, ಕವನ ಬರೀರಿ ಅ೦ತ ನನಗೆ ಪ೦ಥಾಹ್ವಾನ ಕೊಡ್ತಾ ಇರ್ತಾರೆ, ಅವರ ಚಿತ್ರಕ್ಕೆ ಇದು ನನ್ನ ಇಂದಿನ ಕವನ.

ಚಿತ್ರಕೃಪೆ : ಬಿ.ಎಚ್.ಚ೦ದ್ರಶೇಖರ್
http://www.kshanachintane.blogspot.com


ಹನಿ ಹನಿ .........



ನೀರ ಹನಿ ತೊಟ್ಟಿಕ್ಕುವ ಮರದೆಲೆ
ಕನಸಿಗೆ ಜೀವ ತುಂಬುವ ಭಾವದಲೆ
ಮಳೆನೀರಿಗೆ ತೊಯ್ದ ಬಿರು ನೆಲ
ನನ್ನ ಮನದ ತು೦ಬ ಆರ್ದ್ರ ಜಲ


ಅಲ್ಲೆಲ್ಲೋ ಸಾಗುತಿದೆ ಇರುವೆ ಸಾಲು
ಮರೆತು ಭವ ಸಾಗರದ ಗೋಳು
ಇರುವೆಗೆ ಹೊಟ್ಟೆ ಹೊರೆಯುವ ಚಿಂತೆ
ನಿತ್ಯ ಸ೦ತೆಯಲಿ ಬದುಕಲೇಬೇಕಂತೆ



ಕೆಸುವಿನೆಲೆ ಮೇಲೆ ಬಿದ್ದ ನೀರ ಹನಿಯ೦ತೆ
ಮಳೆನೀರ ಹನಿಯದು ನಿರ್ಮಮ ಕ್ರಾ೦ತಿ
ನೆಲತಣಿದು, ಹಸಿರೊಡೆದು ಎಲ್ಲೆಲ್ಲು ಶಾಂತಿ
ಮಳೆಯಿ೦ದ ಭೂರಮೆಗೆ ಅಪೂರ್ವ ಕಾಂತಿ




photo:www.google.com

Monday, August 2, 2010

ದ೦ಡಪಿ೦ಡ

ಗ೦ಡಹೆ೦ಡಿರ ಜಗಳ ಸೈಟು ಕೊಳ್ಳುವ ತನಕ
ಅ೦ದುಕೊ೦ಡರೆ ನೀವು ಅದು ಬರೇ ಕ್ಷಣಿಕ
ಸಾಲ ಮಾಡಿ ಮನೆಯ ಕಟ್ಟಿ
ಕ೦ತು ಕಟ್ಟಿ ಗೊಣಗಿ ಒಣಗಿ
ಮಗಳ ಮದುವೆ ಮಗನ ಓದು
ಮುಗಿಯದ ತಾಪತ್ರಯಗಳ ಗೋಜು
ಎಲ್ಲ ಮುಗಿದು ವಾನಪ್ರಸ್ಥ ಸೇರುವಾಗಲೂ
ನೀವು ಬರೇ ದ೦ಡಪಿ೦ಡ
ಎ೦ಬ ಬಿರುದು ಪಡೆವ ಗ೦ಡ
ಭವ್ಯ ಭಾರತದ ಪ್ರಗತಿಯ ಮಾನದ೦ಡ

Sunday, August 1, 2010

ಹಾಗೆ ಸುಮ್ಮನೆ



ಓದಿದ್ದು ಕೇಳಿದ್ದು ನೋಡಿದ್ದು ಅರ್ಧಸತ್ಯ
ಹೇಳಬೇಕೆನಿಸುತ್ತದೆ ನ೦ದೊ೦ದ್ಮಾತು
ಅಂತರಂಗದ ಮಾತುಗಳ ಅನುಭೂತಿ
ನೆನಪಿನ ಪುಟಗಳು ಸುಪ್ತದೀಪ್ತಿ



ನನ್ನಭಾವನೆಗಳ ಸುತ್ತ ಸಾವಿರ ಕನಸು
ಮ೦ಜುಮುಸುಕಿದ ದಾರಿಯಲ್ಲಿ
ನವೋದಯದ ಅನುಭವಮ೦ಟಪ
ಹಾಗೆ ಸುಮ್ಮನೆ ಭಾವಯಾನ


ನೆನಪು ಕನಸುಗಳ ನಡುವೆ ಮಾನಸದ ಛಾಯೆ
ಮೃದು ಮನಸು ಅನವರತ ಅಲೆಮಾರಿ
ನನ್ನ ಬರಹಗಳು ಮನಸಿಗೆ ಅನಿಸಿದ್ದು ಬರಹಕ್ಕೆ ಬ೦ದದ್ದು
ಚಿಂತನಾಲಹರಿ ಯಲ್ಲ ಹಳ್ಳಿ ಹುಡುಗನ ಶ೦ಭುಲಿ೦ಗ ಪುರಾಣ


photo:www.google.com