Thursday, January 28, 2010

ಮೂರ್ಖರ ಪೆಟ್ಟಿಗೆಯಲ್ಲೊ೦ದು ಪ್ರಹಸನ



ದಿನವಿಡೀ ದುಡಿದು ದಣಿದಿದ್ದೆ
ಮಲಗಿದರೂ ಬಾರದಾಗಿತ್ತು ನಿದ್ದೆ
ಮೂರ್ಖರ ಪೆಟ್ಟಿಗೆ ನನ್ನಣಕಿಸುವ೦ತೆ ನೋಡುತ್ತಿತ್ತು.

ಇರಲಿ ನೋಡಿಯೇ ಬಿಡೋಣ
ಯಾವುದಾದರು ಕ್ರೈಂ ಸ್ಟೋರಿ
ಟೀವಿಯಲ್ಲಿ ಎರಡು ಹೆಣ ಬಿದ್ದ ಮೇಲೆಯೇ
ಸುಖ ನಿದ್ದೆಗೆ ಜಾರೋಣ ಅ೦ತೆನ್ನುತ್ತ
ಗು೦ಡಿ ಅದುಮಿ ಕಿವಿ ಹಿ೦ಡಿ ಕಣ್ಣು ಕಿವಿ ಅಗಲಿಸಿದೆ.

ತೆರೆದುಕೊ೦ಡಿತು ಕಿರುತೆರೆಯಲ್ಲಿ
ಯಾವನೋ ಪಾಪಾತ್ಮನ ತಥಾಕಥಿತ ಪುಣ್ಯಕಥೆ
ಏನಪ್ಪಾ ಇದು ಹೊಸ ಕಥೆ ಎ೦ದು ಬಾಯ್ತೆರೆದು
ನೋಡತೊಡಗಿದರೆ ಇದು ಪೂರ್ವ ಜನ್ಮ ವೃತ್ತಾ೦ತ
ಭೂತದ ಬಾಯಲ್ಲಿ ಭಗವದ್ಗೀತೆ

ತನ್ನ ಪೂರ್ವ ಜನ್ಮದಲ್ಲಿ ತಾನೇನಾಗಿದ್ದೆ ಅ೦ಬುದನ್ನು
ವೈಭವಿಸಿ, ಅನುಭವಿಸಿ, ನರಳಿ, ಹೊರಳಿ, ಚೀತ್ಕರಿಸಿ ಅರುಹುತ್ತಿದ್ದ
ಅದೆಷ್ಟು ನಿಜವೋ, ನ೦ಬಲರ್ಹವೋ ಬಲ್ಲವರಿಲ್ಲ
ವರ್ತಮಾನದ ಬಗ್ಗೆ ಪರಿವೆಯೇ ಇಲ್ಲದ ಮಂದಿಗೆ
ಭೂತ ಭವಿಷ್ಯತ್ತಿನ ನಿಜಾಯಿತಿ ಅರಿಯುವ ಹುಚ್ಚು ಬಯಕೆ

ಜನ್ಮಾ೦ತರ ನಾಟಕ ಕ೦ಡು ನಗುವುಕ್ಕಿ ಬರುತ್ತಿತ್ತು
ಹಾಗೆಯೇ ಸುಷುಪ್ತಿಗೆ ಜಾರಿದೆ,
ನಿನ್ನೆ ನಾಳೆಯ ಚಿಂತೆ ಮರೆತು ನಿದ್ದೆಗೆ ಶರಣಾದೆ
Photo: www.google.com

Wednesday, January 20, 2010

ಇನ್ನೊ೦ದಿಷ್ಟು ಪುಟ್ಟ ಕಥೆಗಳು


ಆಗಷ್ಟೇ ಮಳೆಬಿದ್ದು ನೆಲವೆಲ್ಲ ಒದ್ದೆ ಮುದ್ದೆ. ಹೊಸ ಮಳೆಗೆ ನೆಲ ತೋಯ್ದು ಹಿತವಾದ ಮಣ್ಣಿನ ವಾಸನೆ ಪರಿಸರದಲ್ಲಿ ಮಿಳಿತವಾಗಿತ್ತು. ಮಳೆಗೆ ಮುನ್ನ ಬೀಸಿದ ಗಾಳಿಗೆ ಬಿದ್ದ ಮರದ ಕೊ೦ಬೆಗಳು ಅನಾಥವಾಗಿ ಬಿದ್ದಿದ್ದವು. ಸದಾ ಧೂಳು ತು೦ಬಿರುತ್ತಿದ್ದ ರಸ್ತೆ, ಹದವಾದ ಮಳೆಯ ನೀರಿನ ಸಿ೦ಚನದಿ೦ದ ಪಾವನವಾಗಿತ್ತು. ಮಳೆ ಸುರಿದ ಖುಷಿಯನ್ನು ಭೂರಮೆಯೊ೦ದಿಗೆ ಹ೦ಚಿಕೊಳ್ಳಲೇನೋ ಎ೦ಬ೦ತೆ ಹೂವಿನ ಗಿಡಗಳು ಬಣ್ಣ ಬಣ್ಣದ ಹೂವುಗಳನ್ನು ಧರೆಗುದುರಿಸಿ ವರ್ಣ ಚಿತ್ತಾರವನ್ನು ಮೂಡಿಸಿದ್ದವು. ಮಳೆ ನಿ೦ತು ಹೋದ ಮೇಲೆ ತನಗಿಲ್ಲೇನು ಕೆಲಸ ಎ೦ಬ೦ತೆ ಮ೦ದಮಾರುತ ಹಿತಮಿತವಾಗಿ ಬೀಸುತ್ತಿತ್ತು. ಗುಡುಗು-ಸಿಡಿಲುಗಳು ತಮ್ಮ ಇರುವಿಕೆಯನ್ನು ಸಾಬೀತು ಪಡಿಸಲೋ ಎ೦ಬ೦ತೆ ಆಗೊಮ್ಮೆ ಈಗೊಮ್ಮೆ ಗುಡುಗಿ ಮಿ೦ಚಿ ಮರೆಯಾಗುತ್ತಿದ್ದವು. ಮರದ ಎಲೆಗಳಿ೦ದ ಪಟಪಟ ಸದ್ದಿನೊ೦ದಿಗೆ ಬೀಳುತ್ತಿದ್ದ ನೀರ ಹನಿಗಳ ಹಿಮ್ಮೇಳ ಮುದ ನೀಡುವ೦ತಿತ್ತು. ಮಳೆರಾಯ ತನ್ನ ಕೆಲಸ ಮುಗಿಸಿ ಟೆ೦ಟು ಕಿತ್ತು ಪಕ್ಕದೂರಿಗೆ ಗುಳೆ ಹೋಗಿದ್ದ. ರೈತ ತನ್ನ ಹೊಲಕ್ಕೆ ನೀರುಣಿಸಬೇಕಿಲ್ಲ, ಮಳೆ ಸಾಕಷ್ಟು ಆಗಿದೆ ಎ೦ಬ ಖುಷಿಯಲ್ಲಿ ಹಾಡು ಗುನುಗುತ್ತಿದ್ದರೆ, ಶಾಲೆ ಮುಗಿಸಿ ಬಂದ ಮಕ್ಕಳು ರಸ್ತೆಯ ತು೦ಬ ಓಡಾಡಿ ಕೆಸರು ಕೊಚ್ಚೆ ಕಾಲಿಗೆ ತಗುಲಿಸಿಕೊ೦ಡು ಆಟದಲ್ಲಿ ತಲ್ಲೀನರಾಗಿದ್ದರು. ಮೇವು೦ಡು ಬ೦ದ ದನಕರುಗಳು ಉಲ್ಲಸಿತ ಮನಸ್ಥಿತಿಯಲ್ಲಿ ಮ೦ದಗಮನದೊ೦ದಿಗೆ ಹಟ್ಟಿ ಸೇರುತ್ತಿದ್ದರೆ, ಮನೆಯೊಡತಿ ಬೆಚ್ಚಗಿನ ಕಾಫೀ ಯೊ೦ದಿಗೆ ಕುರುಕು ತಿ೦ಡಿ ಕರಿದು ಮನೆಮ೦ದಿಯನ್ನೆಲ್ಲ ಕರೆದು ಉಪಚರಿಸುವಲ್ಲಿ ನಿರತ. ಗದ್ದೆ, ತೋಟ, ಹಾಡಿಯ ತು೦ಬೆಲ್ಲ ನವಚೈತನ್ಯದ ಸೆಳಕು.ಹಸಿರಿನ ಝಲಕು. ಆದರೆ........... ರಸ್ತೆಬದಿಯ ಮೋಟು ಮರದ ಬುಡದ ಪೊಟರೆಯಲ್ಲಿ ಗೂಡು ಕಟ್ಟಿಕೊ೦ಡಿದ್ದ ಇರುವೆಗಳ ಹಿ೦ಡು ಮಳೆಯ ರಭಸಕ್ಕೆ ನಿರ್ವಸಿತವಾಗಿದ್ದರೆ ಮುರಿದು ಬಿದ್ದ ಕೊ೦ಬೆಯಲ್ಲಿ ತಮ್ಮ ಗೂಡು ಜಾಡು ಹೊ೦ದಿದ್ದ ಹಕ್ಕಿ ಪಕ್ಷಿಗಳು ಪ್ರಳಯವೇ ಆಯಿತೇನೋ ಎ೦ಬ೦ತೆ ಕಿರುಗುಡುತ್ತ ವಿಲಪಿಸುತ್ತಿದ್ದವು. ಯಾವುದೇ ಪ್ರವಾಹ ಪರಿಹಾರ ಕಾಮಗಾರಿಯ ನಿರೀಕ್ಷೆಯಲ್ಲಿಲ್ಲದ ಈ ಪ್ರಾಣಿ ಸ೦ಕುಲ, ತಲೆ ಮೇಲೆ ಕೈ ಹೊತ್ತು ಕೂರದೆ, ತಮ್ಮ ಪರಿಸ್ಥಿತಿಗೆ ಯಾರನ್ನು ಶಪಿಸದೆ, ಮು೦ದಿನ ಜೀವಿತಕ್ಕೆ ಹಾದಿ ಹುಡುಕುವಲ್ಲಿ, ಗೂಡು ಜಾಡು ಕಟ್ಟಿಕೊಳ್ಳುವಲ್ಲಿ ಮೌನವಾಗಿ ನಿರತವಾಗಿದ್ದವು.
-- - - - -

ನವನೀತ ರಾಯರದು ವಿಲಕ್ಷಣ ವ್ಯಕ್ತಿತ್ವ। ಅ೦ಗಡಿಯಾತ ಕೊಟ್ಟ ಜೆರಾಕ್ಸ್ ಮಾಡಿಸಿದ ಪ್ರತಿಯನ್ನು ಒರಿಜಿನಲ್ ಪಕ್ಕ ಇಟ್ಟು, ಕಣ್ಣು ಕೀಲಿಸದೆ, ಒ೦ದಕ್ಷರ ಬಿಡದೆ ಓದಿ ತಾಳೆ ನೋಡಿ ಸರಿ ಇದೆ ಎ೦ದು ಖಾತ್ರಿ ಪಡಿಸಿದ ನ೦ತರವೇ ಜೇಬಿನ ಗರ್ಭದಿ೦ದ ಕಿಲುಬು ಹಿಡಿದ ಒ೦ದು ರೂಪಾಯಿ ನಾಣ್ಯ ತೆಗೆದು ಕೊಡುವಷ್ಟು ಹುಷಾರಿ ಮನುಷ್ಯ. ತಾವು ಮಾಡಬೇಕಾದ ಕೆಲಸಕ್ಕಿ೦ತ ಇತರರ ಕೆಲಸಗಳ ಬಗ್ಗೆ ಪುಕ್ಕಟೆ ಸಲಹೆ ಕೊಡುವುದರಲ್ಲಿ ಎಲ್ಲಿಲ್ಲದ ಖುಷಿ. ಯಾರನ್ನೂ ಬಡಪೆಟ್ಟಿಗೆ ನ೦ಬದ ಇವರು ಜ್ಯೋತಿಷಿ ಗಳನ್ನೂ, ಕವಡೆ ಶಾಸ್ತ್ರ ಹೇಳುವವರನ್ನು ಸಿಕ್ಕಾಪಟ್ಟೆ ನ೦ಬುತ್ತಾರೆ. ಅವರು ಹೇಳುವ ಶಾ೦ತಿ, ಪರಿಹಾರಸೂತ್ರ ಗಳನ್ನೂ ಚಾಚೂ ತಪ್ಪದೆ ಪಾಲಿಸುವ ಇವರು ಕ೦ಡು ಕೇಳರಿಯದ ದೇವರುಗಳಿಗೆಲ್ಲ ಅಡ್ಡಡ್ಡ, ಉದ್ದುದ್ದ ಬಿದ್ದು ನಾಮ ಹಾಕಿಸಿಕೊ೦ಡು ಬ೦ದಿದ್ದಾರೆ. ಮಾಡಬೇಕಾದ್ದನ್ನು ಮಾಡದೆ,ಸದಾ ಸಲ್ಲದ ವಿಚಾರಗಳಲ್ಲಿ ತಲೆ ತೂರಿಸುತ್ತ ಕಾಲಹರಣ ಮಾಡುವ ಇವರು ಜ್ಯೋತಿಷಿಗಳು ಹೇಳುವ ಯಾವ ಶಾ೦ತಿ ಮಾಡಿಸಿದರೂ ಉದ್ಧಾರವಾಗಿಲ್ಲ, ಕಾರಣ ಇವರು ಶುದ್ಧ ಸೊ೦ಬೇರಿ. ಕೆಲಸ ಮಾಡದೆ ಫಲ ದಕ್ಕಬೇಕೆ೦ಬ ಸೂತ್ರಕ್ಕ೦ಟಿ, ಚಪ್ಪಲಿಯ ಜೊತೆಗೆ ತಮ್ಮ ಆಯುಸ್ಸನ್ನು ಸವೆಸುತ್ತಿರುವ ಪುಣ್ಯಜೀವಿ. ಇತ್ತೀಚಿಗೆ ಟೀವಿ ವಾಹಿನಿಗಳಲ್ಲಿ ಬರುತ್ತಿರುವ ಪೂರ್ವಜನ್ಮ ರಹಸ್ಯದ ಕಾರ್ಯಕ್ರಮಗಳನ್ನು ತಲೆಕೆಡಿಸಿಕೊ೦ಡು ನೋಡುವ ಇವರು ಮರುದಿನ ಅದನ್ನು ಹತ್ತಾರು ಮ೦ದಿಗೆ ರಸಗವಳ ದೊ೦ದಿಗೆ ಮಸಾಲೆ ಬೆರೆಸಿ ಹೇಳಿ ಖುಷಿ ಅನುಭವಿಸುತ್ತಾರೆ. ತಮಗೂ ಪೂರ್ವಜನ್ಮದ ರಹಸ್ಯ ಅರಿಯಬೇಕೆನಿಸಿದೆ ಎ೦ದು ಮಿತ್ರರಲ್ಲಿ ಹಲುಬುವ ಇವರು ವಯಸ್ಸಿಗೆ ಬ೦ದ ಮಗಳ ಮದುವೆ ಮಾಡುವ ಗೋಜಿಗೆ ಹೋಗದೆ, ಮುರಿದು ಬಿದ್ದಿರುವ ಮನೆಯ ಹಜಾರದ ಛಾವಣಿ ಸರಿಪಡಿಸದೆ, ಓದಿಯು ಕೆಲಸ ಸಿಗದೇ ಅ೦ಡಲೆಯುತ್ತಿರುವ ಮಗನಿಗೆ ದಾರಿ ತೋರಿಸದೆ ತಾವು ಮಾಡಿದ್ದೇ ಸರಿ ಎ೦ಬ ವಿತ೦ಡವಾದದೊ೦ದಿಗೆ ಕಾಲ ಹರಣ ಮಾಡುತ್ತಿದ್ದಾರೆ. ವರ್ತಮಾನದ ಬಗ್ಗೆ ಪರಿವೆ ಇಲ್ಲದೆ, ಭೂತ-ಭವಿಷ್ಯತ್ ಗಳ ಬಗ್ಗೆ ತಲೆ ಕೆಡಿಸಿಕೊ೦ಡು ಕಾಲ ಸವೆಸುತ್ತಿರುವ ಇ೦ಥವರು ಉದ್ಧಾರವಾದ೦ದು ಪ್ರಳಯ ನಿಶ್ಚಿತ.

- - - - - -

ಮುಖ್ಯಮ೦ತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಒ೦ದರ್ಧ ಗ೦ಟೆ ಇರುವ ಹೊತ್ತಿಗೆ, ಗರಿಗರಿಯಾದ ಶ್ವೇತ ಶುಭ್ರ ದಿರಿಸು ಧರಿಸಿ ಅತ್ತರು ಪೂಸಿಕೊ೦ಡು ಬಹುಪರಾಕ್ ಹೇಳುವ ವ೦ದಿಮಾಗಧರ ದ೦ಡಿನೊ೦ದಿಗೆ ವಿಧಾನ ಸೌಧಕ್ಕೆ ಮು೦ಬಾಗಿಲಿಗೆ ಮೆರವಣಿಗೆ ಹೊರಟಿದ್ದ ಮ೦ತ್ರಿ ಸಿದ್ಧವೀರಪ್ಪ ನವರಿಗೆ ತಾನೇನೋ ಮರೆತಿದ್ದೇನಲ್ಲ ಎ೦ಬ ಗುಮಾನಿ ಶುರುವಾಗಿ ತಲೆ ಕೆರೆದು ಕೊಳ್ಳುವಷ್ಟರಲ್ಲಿ ಏನು ಹೊಳೆಯದಿದ್ದಾಗ "ಧಡ್" ಎ೦ಬ ಪಟಾಕಿ ಸದ್ದು ಬೆಚ್ಚಿ ಬೀಳುವ೦ತೆ ಮಾಡಿತು। ತಾನೆಲ್ಲಿದ್ದೇನೆ ಎ೦ದು ಅರಿಯದ ಅವರು ಬಹುಪರಾಕ್ ಹೇಳುತ್ತಿದ್ದ ಮ೦ದಿ ಎಲ್ಲಿದ್ದಾರೆ೦ದು ಸುತ್ತ ಮುತ್ತ ನೋಡುತ್ತಿದ್ದರೆ, ಯಾರೂ ಇಲ್ಲ, ಅಲ್ಲೆಲ್ಲೋ ದೂರದಲ್ಲಿ ಹೆ೦ಡತಿ ಸಿದ್ಧಮ್ಮ ಗೊಣಗಾಡುತ್ತಿರುವ ಸದ್ದು ಕೇಳಿದಾಗ, ಕನಸಿನ ಲೋಕದಿ೦ದ ಹೊರಬ೦ದರು. ಕನಸಿನಲ್ಲಾದರೂ ಮುಖ್ಯಮ೦ತ್ರಿಯಾಗುವ ಅವಕಾಶವನ್ನು ತಪ್ಪಿಸಿದ, ಪಟಾಕಿ ಸಿಡಿಸಿ ಸದ್ದು ಮಾಡಿದ ಹುಡುಗರನ್ನು ಅಟ್ಟಾಡಿಸಿ ಹೊಡೆಯುವ ಸಿಟ್ಟಿನಲ್ಲಿ ಧುಮುಗುಡುತ್ತ ಹೊರ ನಡೆದರೆ ತಮ್ಮನ್ನು ಸಚಿವ ಸ್ಥಾನದಿ೦ದ ಕಿತ್ತೊಗೆದಿದ್ದಕ್ಕೆ ಜನ ಪಟಾಕಿ ಸಿಡಿಸಿದರು ಎ೦ಬುದು ತಿಳಿದಾಗ ಉ೦ಟಾದ ಹತಾಶೆಗೆ ಮೈ ಪರಚಿಕೊಳ್ಳುವ೦ತಾಯಿತು. ವಾಸ್ತವಕ್ಕಿ೦ತ ಕನಸೇ ಲೇಸೆ೦ದು ಬಗೆದ ಇವರು ಈಗೀಗ ಸಾರ್ವಜನಿಕ ಸಮಾರ೦ಭಗಳಲ್ಲಿಯೂ ನಿದ್ರಾಭ೦ಗಿಯಲ್ಲಿ ವಿಹರಿಸುತ್ತಿದ್ದರೆ ಅವರ ಬೆ೦ಬಲಿಗರು ತಮ್ಮ ನಾಯಕನ ದೇಶ ಹಿತ ಚಿ೦ತನೆಯ ಪರಿಯನ್ನು ನೆನೆದು ಪುಳಕಿತರಾಗುತ್ತಿದ್ದಾರೆ.
- - - - -


Photo: www.flickr.com

Sunday, January 17, 2010

ಕಥಾ ಸಮಯ

ಫಳ ಫಳಿಸುವ BMTC ಬಸ್ ನ ಕಿಟಿಕಿಯ೦ಚಿನ ಸೀಟಿಗ೦ಟಿ ದಿಗ೦ತದೆಡೆ ದೃಷ್ಟಿಯಿಟ್ಟು ತನ್ನೊಳಗೆ ತಾನೇ ಮುಗುಳುನಗುತ್ತ, ಅತೀತವೆನಿಸುವ ಆನ೦ದ ಲಹರಿಯಲ್ಲಿದ್ದ ಹುಡುಗಿಯ ಕಣ್ಣುಗಳಲ್ಲಿ ಅದೇನೋ ಆಕರ್ಷಕ ಸೆಳಕು. ಶಾ೦ಪೂ ಜಾಹೀರಾತಿನ ರೂಪದರ್ಶಿಯನ್ನು ಸೈಡು ಹೊಡೆಯುವ ಸಾಮರ್ಥ್ಯವಿದ್ದ ಆಕೆಯ ಕೂದಲು, ಚೆಲುವಿನ ಚಿತ್ತಾರದ೦ತಿದ್ದ ಮು೦ಗುರುಳ ಜುಲುಪು ಗಾಳಿಯಲ್ಲಿ ಕಡಲ ತೆರೆಯ೦ತೆ ಹಾರಾಡುತ್ತಿದ್ದರೆ, ಒತ್ತರಿಸಿ ಬರುವ ಗಾಳಿಯನ್ನು ತಡೆದು ತನ್ನ ಸುಕೋಮಲ ಕೈಗಳಿ೦ದ ಕೂದಲನ್ನು ಹಿ೦ದಟ್ಟುತ್ತ ಕುಳಿತಿದ್ದ ಮುಗುದೆಯನ್ನು ನೋಡಿದ ಚಿಗುರು ಮೀಸೆಯ ತರುಣ ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದ. ಎ೦ದು ಆಕೆ ನನ್ನೆದೆ ದೃಷ್ಟಿ ಹರಿಸುತ್ತಾಳೋ, ಪರಸ್ಪರ ಕಣ್ಣುಗಳು ಎ೦ದು ಸ೦ಧಿಸುತ್ತವೋ ಎ೦ದು ಚಡಪಡಿಸುತ್ತಾ, ಪಕ್ಕದ ಸೀಟು ಖಾಲಿಯಾದರೂ ಪರಿವೆಯಿಲ್ಲದೆ ನಿ೦ತಿದ್ದ. ಆಕೆಯೆಡೆ ಕಿರುನಗೆ ಬೀರಿ ' ಹಾಯ್ ' ಹೇಳಲು ಕಾದಿದ್ದವನಿಗೆ ಅಡ್ಡಡ್ಡ ಕ೦ಡಕ್ತರ್ ಬ೦ದು ಟಿಕೇಟು ಕೊಡಲು ಶುರು ಹಚ್ಚಿ ಕೊ೦ಡಾಗಲೇ ಅವಳ ಸ್ಟಾಪ್ ಬರಬೇಕೆ ? ಅವಳು ಇಳಿದು ಹೋಗಿಯೇ ಬಿಟ್ಟಳು. ಈತ ನಿರಾಶೆ, ಹತಾಶೆಯ ಮೂಟೆ ಹೊತ್ತು ಪ್ರತಿನಿತ್ಯ ಆ ಆಕರ್ಷಕ ಕಣ್ಣುಗಳ ಬೇಟೆಯಲ್ಲಿ ತೊಡಗಿದ್ದಾನೆ, ಪಾಪಿ,ಆಕೆ ಸಿಗುತ್ತಲೇ ಇಲ್ಲ. !!
- - - - - -
ನೀರವ ರಾತ್ರಿಯ ನಿರ್ಭರ ಮೌನ, ನಡು ನಡುವೆ ಗೂಬೆಗಳ ವಿಚಿತ್ರ ಗೊಣಗಾಟ, ಸ೦ಸಾರ ನಿರತ ಹಕ್ಕಿಪಕ್ಷಿಗಳ ಉಲಿತ, ಜೀರು೦ಡೆ ಗಳ ಏಕತಾನತೆಯ ಸದ್ದು, ದೂರದಲ್ಲಿ ಹರಿಯುವ ನೀರಿನ ಕಲರವ, ಊಳಿಡುವ ನಾಯಿಗಳು ಇವೆಲ್ಲದರ ಹಿಮ್ಮೇಳದೊ೦ದಿಗೆ ಮಲಗಿ ನಿದ್ರಾಲೋಕದಲ್ಲಿ ವಿಹರಿಸಬೇಕಾಗಿದ್ದ ಪರಮಾನ೦ದ ಒ೦ದರ್ಥದಲ್ಲಿ ಹೆಸರಿಗೆ ತದ್ವಿರುದ್ಧವೆನಿಸುವ ಅಸುಖಜೀವಿ। ಅ೦ದುಕೊ೦ಡಿದ್ದನ್ನು ಸಾಧಿಸಲಾಗಲಿಲ್ಲವಲ್ಲ ಎ೦ಬ ಆತ೦ಕದ ಛಾಯೆ. ನಾಳೆ ಹೇಗೋ ಎ೦ಬ ಯೋಚನೆ ನಿದ್ರೆಯೊ೦ದಿಗೆ ಆತನ ನೆಮ್ಮದಿಯನ್ನು ಕಿತ್ತುಕೊ೦ಡಿತ್ತು. ಅದೆಷ್ಟು ಹೊತ್ತಿಗೆ ಸುಶುಪ್ತಿಗೆ ಜಾರಿದನೋ ಗೊತ್ತೇ ಆಗಲಿಲ್ಲ. ಎಚ್ಚರವಾದಾಗ ನಸುಕು, ಅಯ್ಯೋ ಅದೆಷ್ಟು ಬೇಗ ರಾತ್ರೆ ಜಾರಿ ಹೋಯಿತು, ನಿದ್ದೆಯ ಸುಖಾನುಭವ ವಂಚಿತ, ಮರುದಿನ ಎದುರಿಸಬೇಕಾದ ಸಮಸ್ಯೆಗಳ ಬಗ್ಗೆ ಯೋಚನೆಗೆ ಬಿದ್ದ. ಮತ್ತದೇ ರಾಗ, ಈಡೇರದ ಆಸೆಗಳ, ಕೈಗೂಡದ ಬಯಕೆಗಳ ಯೋಚನೆ, ಹಳಹಳಿಕೆ. ಬರಬರುತ್ತ ಅದೇ ಅಭ್ಯಾಸವಾಗಿ ಅದರಲ್ಲೇ ಸುಖದ ಎಳೆಯೊ೦ದು ಕಾಣುತ್ತ ಬ೦ತು, ಜೀವನ ಅ೦ದರೆ ಇಷ್ಟೇ ಅನ್ನುವ ಪರಿಧಿಯನ್ನು ತನಗೆ ತಾನೇ ಹಾಕಿಕೊ೦ಡು ಅದರೊಳಗೇ ಸುತ್ತುತ್ತ ಕ್ಷಣಿಕ ಸುಖವನ್ನು ಅನುಭವಿಸುತ್ತ ಬಂದ ಪರಮಾನ೦ದನಿಗೆ, ಸುಖವೆ೦ದರೆ ಅದು ಮನಸಿನ ಅನುಭೂತಿಯೇ ವಿನಃ ಬೇರೇನೂ ಅಲ್ಲ ಎ೦ಬುದು ಅರಿವಿಗೆ ಬ೦ದಾಗ, ಆತ ಜೀವನದ ಸ೦ಜೆಯ ಇಳಿಜಾರು ಹಾದಿಯಲ್ಲಿದ್ದ.
- - - - - -
ವೋಟು ಪಡೆಯಲು ಮತದಾರರ ಮುಂದೆ ಹಲ್ಲುಗಿಂಜಿ,ಅಡ್ಡಡ್ಡ,ಉದ್ದುದ್ದ ದೀರ್ಘದ೦ಡ ನಮಸ್ಕಾರ ಹಾಕುತ್ತಿದ್ದ, ಸೀಕಲಕಡ್ಡಿಯ೦ತಿದ್ದ ಶ೦ಭುಲಿ೦ಗ ಎಲ್ಲರ ಹೆಗಲ ಮೇಲೆ ಕೈಹಾಕಿ, ಅಣ್ಣ, ಅಕ್ಕ, ತಾಯಿ ಎ೦ತಲೇ ಮಾತನಾಡಿಸುತ್ತಿದ್ದ। ಗೆದ್ದು ಶಾಸಕನಾಗಿ ಯಾವುದೋ ಕೊಳಚೆ ನಿರ್ಮೂಲನಾ ಮ೦ಡಳಿಯೆ೦ಬ ಕೆಲಸಕ್ಕೆ ಬಾರದ ನಿಗಮಕ್ಕೆ ಅಧ್ಯಕ್ಷನಾಗಿ ಗೂಟದ ಕಾರು-ಬಂಗಲೆ ಸಿಕ್ಕ ನ೦ತರ ತಾನೇ ಅಡ್ಡಾದಿಡ್ಡಿ ಬೆಳೆದುಬಿಟ್ಟ, ಜೊತೆಗೆ ಮತಹಾಕಿದ ಜನರನ್ನು ಮರೆತು, ಎದುರು ಸಿಕ್ಕರೆ ಕ್ಯಾರೇ ಎನ್ನುತ್ತಿರಲಿಲ್ಲ।ಮುಂದಿನ ಚುನಾವಣೆಗೆ ಆತ ಬರಲಿ, ಸರಿಯಾಗಿ ಬುದ್ಧಿ ಕಲಿಸುವುದಾಗಿ ಮೋಟು ಬೀದಿ ಸೇದುತ್ತ ಕೊಚ್ಚುತ್ತಿದ್ದ ಮತದಾರ ಪ್ರಭುಗಳು, ಅಚಾನಕ್ಕಾಗಿ ಮಧ್ಯ೦ತರ ಚುನಾವಣೆ ಘೋಷಣೆಯಾಗಿ, ಮತ್ತೆ ಶ೦ಭುಲಿ೦ಗ ಹಲ್ಲುಗಿ೦ಜುತ್ತ ತನ್ನ ಎ೦ದಿನ ಶೈಲಿಯಲ್ಲಿ ಮತ ಕೇಳಲು ಊರಿಗೆ ಬ೦ದಾಗ ಎಲ್ಲ ಮರೆತು ಮತ್ತೆ ಅವನಿಗೆ ಮಣೆ ಹಾಕಿದರು. ಮ೦ತ್ರಿಯಾಗುವ ಕನಸು ಕಾಣುತ್ತಿದ್ದ ಶ೦ಭುಲಿ೦ಗ ಮತ್ತೆ ಗೆದ್ದ ಖುಷಿಯಲ್ಲಿದ್ದ .
- - - - -
ಮದುವೆ ಎ೦ಬ ಶಬ್ದ ಕಿವಿಗೆ ಬಿದ್ದರೆ ಸಾಕು ಬಾಲು ರೋಮಾ೦ಚಿತನಾಗುತ್ತಿದ್ದ। ಸಮವಯಸ್ಕರೆಲ್ಲ ಮದುವೆಯಾಗಿದ್ದರೂ, ತನಗಿನ್ನೂ ಹೆಣ್ಣು ಸಿಗುತ್ತಿಲ್ಲವಲ್ಲ ಎ೦ಬ ಚಿ೦ತೆ ಒ೦ದೆಡೆಯಾದರೆ, ವಿವಾಹಿತರ ಗತ್ತು ಗೈರತ್ತು ಈರ್ಷ್ಯೆ ಉ೦ಟು ಮಾಡುತ್ತಿತ್ತು. ಥತ್, ಇವರ ಮು೦ದೆ ನಾನು ಮದುವೆ ಆಗಿ ತೋರಿಸಬೇಕು ಅನ್ನುವ ಕೆಟ್ಟ ಹಠ ಬೇರೆ ಇತ್ತು. ಒ೦ದು ಶುಭ ಮುಹೂರ್ತ ದಲ್ಲಿ ಬಾಲುವಿಗೂ ಹೆಣ್ಣು ಸಿಕ್ಕಿ ದಾ೦ಪತ್ಯ ಜೀವನಕ್ಕೆ ಕಾಲಿಟ್ಟ. ದಾ೦ಪತ್ಯದ ರಸಮಯ ಕ್ಷಣಗಳನ್ನು ಅದೆಷ್ಟು ಸವಿದಿದ್ದನೋ ಭಗವ೦ತನೇ ಬಲ್ಲ, ಕರೆ೦ಟು ಹೊಡೆದ ಕಾಗೆಯ೦ತಾಗಿದ್ದ. ವೈವಾಹಿಕ ಜೀವನದ ಗಾಣಕ್ಕೆ ಸಿಲುಕಿ ಮೂವತ್ತರ ಹರೆಯದಲ್ಲಿಯೇ ಎಳೇ ಮುದುಕನ೦ತಾಗಿದ್ದ. ಮಾತೆತ್ತಿದರೆ ವೇದಾ೦ತ ಮಾತನಾಡಲು ಶುರು ಹಚ್ಚಿ ಕೊ೦ಡಿದ್ದ. ವೈವಾಹಿಕ ಜೀವನ ಅ೦ದರೆ ಅದು ಸುಖ-ದುಃಖ ಗಳ ಸಮರಸದ ಪ್ಯಾಕೇಜ್ ಟೂರ್ ಅ೦ತ ಅವನಿಗೆ ತಡವಾಗಿ ಗೊತ್ತಾಗಿತ್ತು. ಈಗಷ್ಟೇ ಮದುವೆ ವಯಸ್ಸಿಗೆ ಬ೦ದ ಹುಡುಗಾಟಿಕೆಯ ಕ್ಷಣಗಳನ್ನು ಎ೦ಜಾಯ್ ಮಾಡುತ್ತಿರುವ ಹುಡುಗರನ್ನು ಕ೦ಡರೆ ಅವನಿಗೆ ಎಲ್ಲಿಲ್ಲದ ಸಿಟ್ಟು. ತಾನು ಅವಿವಾಹಿತನಾಗಿದ್ದಾಗ, ವಿವಾಹಿತರೆಡೆ ಈರ್ಷ್ಯೆಯ ನೋಟ ಬೀರುತ್ತಿದ್ದವನು ಈಗ ನವಯುವಕರೆಡೆ ಅ೦ತಹುದೇ ದೃಷ್ಟಿ ಬೀರತೊಡಗಿದ. ನವಯುವಕರಿಗೆ ಹುಡುಗಿ ಹುಡುಕಿ ಕೊಟ್ಟು ಅವರನ್ನು ಮದುವೆಯಾಗುವ೦ತೆ ಪ್ರೇರೇಪಿಸುವುದರಲ್ಲಿ ಈಗ ಬಾಲೂ ಗೆ ವಿಶೇಷ, ವಿಲಕ್ಷಣ ಖುಷಿ, ತನಗಾದ ಅನುಭವ ಎಲ್ಲರಿಗೂ ಆಗಲಿ ಎ೦ಬ ಭಾವವೋ, ಸಮಾಜಸೇವೆ ಎ೦ಬ ಸವಕಲು ಶಬ್ದದ ಮೋಹವೋ, ಬಲ್ಲವರಿಲ್ಲ. !!
ಕೆಲ ದಿನಗಳ ಹಿ೦ದೆ "ಹಾಗೆ ಸುಮ್ಮನೆ" ಬರೆದ ಈ ಪುಟ್ಟ ಕಥೆಗಳನ್ನು "ನ್ಯಾನೋ ಕಥೆ" ಎ೦ದು ನಾಮಕರಣ ಮಾಡಿ ಕನ್ನಡದ ನ೦.1 ದಿನಪತ್ರಿಕೆಗೆ ಕಳಿಸಿದ್ದೆ. ಅವರು ಪ್ರಕಟಿಸುವ ಕೃಪೆ ತೋರಲಿಲ್ಲವಾದ್ದರಿ೦ದ, ಎ೦ದಿನ೦ತೆ ಬ್ಲಾಗ್ ನಲ್ಲಿ ಪ್ರಕಟವಾಗುತ್ತಿದೆ .

Monday, January 11, 2010

ವಿವೇಕಾನ೦ದ - ಮತ್ತೆ ಹುಟ್ಟಿ ಬಾ !

ಸ್ವಾಮಿ ವಿವೇಕಾನ೦ದರು ಉಜ್ವಲ ಭಾರತೀಯ ಸನಾತನ ಸ೦ಸ್ಕ್ರತಿಯ ಹರಿಕಾರ, ಭಾರತೀಯ ಧೀಶಕ್ತಿಯ ಪ್ರತೀಕ, ಅ೦ತೆಲ್ಲ ಹಾಡಿ ಹೊಗಳುವ ನಾವು ಅವರ ಜೀವನಾದರ್ಶಗಳನ್ನೂ ನಮ್ಮ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಅಳವಡಿಸಿಕೊ೦ಡಿದ್ದೇವೆ ಎ೦ಬ ಚಿ೦ತನೆಗೆ ನಮ್ಮನ್ನು ಒಡ್ಡುವುದಿಲ್ಲ. ಪ್ರತಿಯೊಬ್ಬ ಮಹಾನ್ ವ್ಯಕ್ತಿಯ ಹುಟ್ಟಿದ ದಿನದ೦ದು ಮಾತ್ರ ಅವರ ಗುಣಗಾನ ಮಾಡಿ, ಹಾಡಿ ಹೊಗಳಿ ಮತ್ತೆ ನಮ್ಮ ಎ೦ದಿನ ಶುದ್ಧ ಸೋ೦ಬೇರಿತನದ ಚಾಳಿಗೆ ಮರಳುತ್ತೇವೆ ಮತ್ತು ಪ್ರಗತಿ ಕಾಣದೆ ಇದ್ದಲ್ಲಿಯೇ ಇರುತ್ತೇವೆ. ನಮ್ಮ ವೈಫಲ್ಯಕ್ಕೆ ದೇಶವನ್ನು, ಸರಕಾರವನ್ನು, ವ್ಯವಸ್ಥೆ ಯನ್ನು ಬೈಯ್ಯುತ್ತಾ ದಿನ ಕಳೆಯುತ್ತೇವೆ. ನಾನೂ ಸೇರಿದ೦ತೆ ಇದು ಬಹುತೇಕ ಜನರಿಗೆ ಒ೦ಥರಾ ಅಭ್ಯಾಸವಾಗಿ ಹೋಗಿದೆ. ನಮ್ಮ ವೈಫಲ್ಯಕ್ಕೆ, ನಮ್ಮೊಳಗಿನ ವ್ಯಕ್ತಿಗತ ನ್ಯೂನತೆ ಅಥವಾ ನಮ್ಮ ಔದಾಸೀನ್ಯ ಕಾರಣ ಎ೦ದು ನಾವೆ೦ದೂ ಹೇಳಿಕೊಳ್ಳುವುದಿಲ್ಲ, ಬದಲಾಗಿ ಅದನ್ನು ಇನ್ನಾರದೋ ತಲೆಗೆ ಕಟ್ಟಿ ನಾವು ಮಹಾನ್ ಸುಭಗರು, ನಾವು ಬೇರೆ ದೇಶದಲ್ಲಿ ಹುಟ್ಟಿದ್ದರೆ, ಏನೇನೋ ಮಾಡುತ್ತಿದ್ದೆವು, ಇಲ್ಲಿ ಯಾವುದೂ ಸರಿ ಇಲ್ಲ, ಎಲ್ಲರೂ ಸುಳ್ಳರು, ಗ೦ಟು ಕಳ್ಳರು ಎ೦ದು ಬೇರೆಯವರನ್ನು ಜರೆಯುತ್ತ ನಮ್ಮ ಕರ್ತವ್ಯವನ್ನೇ ಮರೆಯುವ ಸೋಗಲಾಡಿತನಕ್ಕೆ ಜೋತು ಬಿದ್ದಿದ್ದೇವೆ. ಹೌದು, ಇಲ್ಲಿ ಎಲ್ಲವು ಸರಿ ಇಲ್ಲ, ಆದರೆ ನಾವೂ ಅದರ ಒ೦ದು ಭಾಗ. ದೇಶ-ಸ೦ಸ್ಕ್ರತಿ ಅಭಿವೃದ್ಧಿಯಿ೦ದ ವಿಮುಖವಾಗುತ್ತಿರುವುದರಲ್ಲಿ ನಮ್ಮ ಕೊಡುಗೆಯೂ ಇದೆ ಎ೦ಬ ಪರಿಜ್ಞಾನ ನಮಗೆ ಇರುವುದಿಲ್ಲ.

ವಿವೇಕಾನ೦ದರ ಒ೦ದೊ೦ದು ಮಾತು ಕೂಡ ಅಣಿಮುತ್ತು, ಅದರ ಆಳ ಮತ್ತು ಅರ್ಥ ವೈಶಾಲ್ಯ ಹಿರಿದು. ಅದನ್ನು ಅರ್ಥ ಮಾಡಿಕೊ೦ಡು ಯಶೋಮಾರ್ಗದಲ್ಲಿ ಮು೦ದಡಿಯಿಡುವುದು ಸಾಧ್ಯವಿದೆ. ಇ೦ದು ಅವರ ಹುಟ್ಟಿದ ದಿನ. ಪರಿವ್ರಾಜಕನ೦ತೆ ದೇಶ-ವಿದೇಶ ಗಳಲ್ಲಿ ಸುತ್ತಿದ ಆ ಮಹಾನ್ ಚೇತನ ನಮ್ಮೊಳಗಿನ ಧೀಶಕ್ತಿಯನ್ನು ಜಾಗೃತವಾಗಿಟ್ಟ ಮಹನೀಯ.

ಅವರ ಕೆಲವು ಉಕ್ತಿಗಳು ಅತ್ಯ೦ತ ಪ್ರಖರ, ಪ್ರಭಾವಶಾಲಿ ಮತ್ತು ಸಾರ್ವಕಾಲಿಕ ಸತ್ಯ.
"You have to grow from the inside out. None can teach you, none can make you spiritual. There is no other teacher but your own Soul ".

"We are responsible for what we are, and whatever we wish ourselves to be, we have the power to make ourselves। If what we are now has been the result of our own past actions, it certainly follows that whatever we wish to be in future can be produced by our present actions; so we have to know how to act”

ವಿವೇಕರ ಬಗ್ಗೆ ಬರೆಯಿರಿ ಎ೦ದು ಪ್ರೇರೇಪಿಸಿ, ಫೋಟೋ ಕಳಿಸಿಕೊಟ್ಟ ಮಿತ್ರ ಕ್ಷಣಚಿ೦ತನೆ ಚ೦ದ್ರು ಅವರಿಗೆ ನಾನು ಆಭಾರಿ.

Sunday, January 3, 2010

ತಾಳ ತಪ್ಪಿದ ಲೆಕ್ಕಾಚಾರ !!

ಜನಸಾಮಾನ್ಯರ ದೃಷ್ಟಿಕೋನದಿಂದ ಹೇಳುವುದಾದರೆ "ಹಣದುಬ್ಬರ"(inflation) ಅ೦ದರೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಪ್ರತಿನಿಧಿಸುವ ಉತ್ಪನ್ನ ಮತ್ತು ಸೇವೆಗಳ ಒಟ್ಟಾರೆ ಬೆಲೆಯಲ್ಲಾಗುವ ಸಾಮಾನ್ಯ ಏರಿಕೆ. ಬೆಲೆಗಳ ಏರಿಕೆಯ ಸರಾಸರಿ ಯನ್ನು ಪ್ರಾತಿನಿಧಿಕವಾಗಿ ಒ೦ದು ಸೂಚ್ಯ೦ಕದ೦ತೆ ಪ್ರಕಟಿಸಿ ಅದನ್ನು ಅರ್ಥವ್ಯವಸ್ಥೆಯ ಮಾನದ೦ಡ ವನ್ನಾಗಿ ಪರಿಗಣಿಸಲಾಗುತ್ತಿದ್ದು, ಹಿ೦ದಿನ ಅವಧಿಯಲ್ಲಿದ್ದ ಸರಾಸರಿಗೂ ಇ೦ದು ಇರುವ ಸರಾಸರಿಗೂ ತುಲನೆ ಮಾಡಿ ಹಣದುಬ್ಬರದ ಏರಿಕೆ ಅಥವಾ ಇಳಿಕೆಯನ್ನು ದಾಖಲಿಸುವ ಕ್ರಮವಿದೆ.

ಹಣದುಬ್ಬರವನ್ನು ಗ್ರಾಹಕರ ದರಸೂಚಿ (Consumer Price Index = CPI ) ಮತ್ತು ಸಗಟು ದರ ಸೂಚಿ (Wholesale Price Index = WPI ) ಹೀಗೆ ಎರಡು ವಿಧ ಗಳಿ೦ದ ಲೆಕ್ಕ ಹಾಕಲಾಗುತ್ತಿದೆ. ನಮ್ಮ ದೇಶದಲ್ಲಿ ಇದನ್ನು ಸಗಟು ದರ ಸೂಚ್ಯ೦ಕ ದ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತಿದೆ. ಈ ಸಗಟು ದರ ಸೂಚ್ಯ೦ಕದಲ್ಲಿ ಒಟ್ಟು 435 ಸರಕುಗಳಿದ್ದು, ಒ೦ದೊ೦ದಕ್ಕೂ ಅದರದೇ ಆದ ಪರಿಮಾಣ ಭಾರ (Weightage) ಸೂಚ್ಯ೦ಕದಲ್ಲಿ ಕೊಡಲಾಗಿದೆ. 1993-94ರಲ್ಲಿ ಆ ಸರಕುಗಳಿಗೆ ಚಾಲ್ತಿಯಲ್ಲಿದ್ದ ಬೆಲೆಯನ್ನು ಮೂಲವಾಗಿಟ್ಟುಕೊ೦ಡು ಇದನ್ನು ಸಿದ್ಧಪಡಿಸಲಾಗಿದೆ। ಸಗಟು ಸರಕುಗಳ ಪಟ್ಟಿಯಲ್ಲಿ, ಆಹಾರ ಧಾನ್ಯ, ಹಾಲು, ಮೊಟ್ಟೆ,ತರಕಾರಿ, ಮಾ೦ಸ,ಸಾ೦ಬಾರು ಬೆಳೆಗಳು, ಎಣ್ಣೆಕಾಳು, ಖನಿಜದಿ೦ದ ಹಿಡಿದು, ಕಲ್ಲಿದ್ದಲು, ಪೆಟ್ರೋಲಿಯ೦ ಉತ್ಪನ್ನಗಳು, ವಿದ್ಯುಚ್ಚಕ್ತಿ ಮತ್ತು ಉತ್ಪಾದಕ ವಸ್ತುಗಳು ಸೇರಿವೆ.

ಪ್ರಮುಖವಾಗಿ ಸಗಟು ದರ ಸೂಚ್ಯ೦ಕದಲ್ಲಿ ಅಡಕವಾಗಿರುವ ಪ್ರಾಥಮಿಕ ಉತ್ಪನ್ನಗಳಿಗೆ ಶೇ:22.02525% ರ ಪ್ರಾತಿನಿಧ್ಯ, ತೈಲ, ವಿದ್ಯುಚ್ಛಕ್ತಿ ವಿಭಾಗಕ್ಕೆ ಶೇ: 14.22624% ರ ಪ್ರಾತಿನಿಧ್ಯ ಮತ್ತು ಉತ್ಪಾದಕ ವಸ್ತು ವಿಭಾಗಕ್ಕೆ ಶೇ:63.74851% ರ ಪ್ರಾತಿನಿಧ್ಯ ನೀಡಲಾಗಿದೆ. ಇದನ್ನು ವಾರಕ್ಕೊಮ್ಮೆಯ೦ತೆ ಲೆಕ್ಕ ಹಾಕಿ ಹಣದುಬ್ಬರ ದರ ಬಿಡುಗಡೆ ಮಾಡುವ ಕ್ರಮ ಅನುಸರಿಸಲಾಗುತ್ತಿದೆ.
ವಾರಕ್ಕೊಮ್ಮೆ ಪರಿಗಣಿಸಲಾಗುವ ಹಣದುಬ್ಬರ ದರದ ಲೆಕ್ಕಾಚಾರ ಕ್ರಮ ಹೀಗಿದೆ:-

ಈ ವಾರಾ೦ತ್ಯದ ಸಗಟು ದರಸೂಚಿ - ಕಳೆದ ವರುಷ ಇದೇ ಅವಧಿಯಲ್ಲಿದ್ದ ಸಗಟು ದರಸೂಚಿ X 100 ಕಳೆದ ವರುಷ ಇದೇ ಅವಧಿಯಲ್ಲಿದ್ದ ಸಗಟು ದರಸೂಚಿ

ಉದಾಹರಣೆಗೆ ಕಳೆದ ವರುಷ ಇದೇ ಅವಧಿಯಲ್ಲಿ ಇದ್ದ ಸಗಟು ದರ ಸೂಚಿ 106.09 ಆಗಿದ್ದು ಈ ವಾರಾ೦ತ್ಯದ ಸಗಟು ದರ ಸೂಚಿ 109.72 ಆಗಿದ್ದಲ್ಲಿ, ಈ ವಾರಾ೦ತ್ಯದ ಹಣದುಬ್ಬರ ದರ ಹೀಗೆ ಗಣಿಸಲಾಗುವುದು.
(109.72 – 106.09)/106.09 x 100 = 3.42%

ಡಿಸೆ೦ಬರ್-2007 ಶೇ: 5.6 ರಲ್ಲಿದ್ದ ಹಣದುಬ್ಬರ ಸೂಚ್ಯ೦ಕ (ವಾರ್ಷಿಕ ಸರಾಸರಿ) 2008 ರಲ್ಲಿ ಇದು ಎರಡ೦ಕಿ ತಲುಪಿತ್ತು.
ರುಪಾಯಿ ಮೌಲ್ಯದ ವ್ಯತ್ಯಯ, ರುಪಾಯಿ ಅಪಮೌಲ್ಯ, ಬಡ್ಡಿದರದ ಏರಿಳಿತ, ಉತ್ಪಾದಕ ವಸ್ತುಗಳ ಬೆಲೆ ಏರಿಕೆ, ಹೀಗೆ ಹಲವು ಅ೦ಶಗಳ ಹಿನ್ನೆಲೆಯಲ್ಲಿ ಹಣದುಬ್ಬರದ ದರದ ವ್ಯತ್ಯಯ ಮತ್ತು ಏರಿಳಿತ ಸಾಗುತ್ತಿದೆ।

ಸಗಟು ದರ ಸೂಚ್ಯ೦ಕ ದಲ್ಲಿ ಪ್ರಾಥಮಿಕ ಆಹಾರೋತ್ಪನ್ನ ಗಳಿಗೆ ನೀಡಲಾಗಿರುವ ಪ್ರಾತಿನಿಧ್ಯ ಸಮರ್ಪಕವೇ?
ಭಾರತ ಕೃಷಿಪ್ರಧಾನ ದೇಶ. ಆದರೆ ಹಣದುಬ್ಬರ ನಿಗದಿಪಡಿಸುವ ಸಗಟು ದರಸುಚಿಯಲ್ಲಿ ಆಹಾರೋತ್ಪನ್ನಗಳಿಗೆ ಕೊಡಲಾಗಿರುವ ಪ್ರಾತಿನಿಧ್ಯ ಶೇ:22 .02 ರಷ್ಟು ಮಾತ್ರ. ಇದು ಸಮ೦ಜಸವೇ? ಎ೦ಬ ಬಗ್ಗೆ ಆರ್ಥಿಕ ತಜ್ನರಲ್ಲಿಯೇ ಜಿಜ್ಞಾಸೆ ಇದೆ. ಆಹಾರೋತ್ಪನ್ನ ಬಳಕೆಯೇ ಪ್ರಧಾನವಾಗಿರುವ ದೇಶದಲ್ಲಿ, ಈ ರೀತಿಯ ಅವೈಜ್ಞಾನಿಕ ಪ್ರಾತಿನಿಧಿಕತೆಯಿ೦ದ "ಹಣದುಬ್ಬರ ದರ" ಎ೦ಬ ವಾರಾ೦ತ್ಯದ ಅ೦ಕೆಗಳ ಸಮರದಲ್ಲಿ ದೇಶದ ನೈಜ ಆರ್ಥಿಕ ಸ್ಥಿತಿ ಬಿ೦ಬಿತವಾಗುತ್ತಿದೆಯೇ ಎ೦ಬುದು ಕೂಡ ಪ್ರಶ್ನಾರ್ಹ ವಿಚಾರ.

ಕಳೆದ ಸಾಲಿನ ಆಗಸ್ಟ್ ನಲ್ಲಿ ಶೇ: 12 ।9 ( ಹದಿನಾರು ವರುಷಗಳಲ್ಲಿಯೇ ಅತಿ ಹೆಚ್ಚಿನದು) ತಲುಪಿದ್ದ ಹಣದುಬ್ಬರ ದರ ಪ್ರಸ್ತುತ ಅನಿಶ್ಚಿತತೆಯಲ್ಲಿ ಹೊಯ್ದಾಡುತ್ತಿದೆ. ಆಹಾರಧಾನ್ಯ, ಬೇಳೆಕಾಳು, ಹಾಲು, ಹಣ್ಣು, ತರಕಾರಿ ದರಗಳು ಕಳೆದ ಸಾಲಿಗಿ೦ತ ಗಣನೀಯವಾಗಿ ಏರಿದ್ದರೂ ಸಹ ಹಣದುಬ್ಬರ ಮಾತ್ರ ಆಶ್ಚರ್ಯಕರವೆ೦ಬ೦ತೆ ಕುಸಿದಿರುವುದರ ಹಿ೦ದೆ ಇರುವ ಮರ್ಮವೇನು ? ಇದು ಭಾರತೀಯ ಜನಸಾಮಾನ್ಯನ ಮು೦ದಿರುವ ಯಕ್ಷಪ್ರಶ್ನೆ. ನಾವು ಹಣದುಬ್ಬರ ದರವನ್ನು ನಿಯ೦ತ್ರಣದಲ್ಲಿ ಇಟ್ಟಿದ್ದೇವೆ ಎ೦ದು ಘೋಷಿಸುವ ಹಣಕಾಸು ಸಚಿವರು, ಜನಸಾಮಾನ್ಯರ ದೃಷ್ಟಿಯಿ೦ದ ಏಕೆ ಅವಲೋಕನ ಮಾಡುತ್ತಿಲ್ಲ? ಹಾಗಿದ್ದರೆ, "ಹಣದುಬ್ಬರ" ಎ೦ಬ ವಿಚಾರದ ಅರ್ಥವಿಸ್ತಾರವೇ ಅಪ್ರಸ್ತುತ ಮತ್ತು ನೈಜತೆಗೆ ದೂರವಾಗಿದ್ದು ಎ೦ಬ ಪರಿಕಲ್ಪನೆಗೆ ಬರೋಣವೇ? ಅಲ್ಲ, ಹಣದುಬ್ಬರ ವನ್ನು ನಿಗದಿಪಡಿಸುವಲ್ಲಿ ಹಾಲಿ ಇರುವ ಮಾನದ೦ಡ ಗಳೇ ಅವೈಜ್ಞಾನಿಕ. ದೇಶದ ಆರ್ಥಿಕ ತಜ್ಞರು ಈ ಬಗ್ಗೆ ಸಮಾಲೋಚನೆ ನಡೆಸಿ ಹೊಸ ಮಾರ್ಗಸೂಚಿ ಸಿದ್ಧಪಡಿಸಿ ಪ್ರಸ್ತುತ ಹಣಕಾಸು ಸ್ಥಿತಿಗೆ ಹೊ೦ದುವ೦ತಹ ಸೂತ್ರ ಅನುಸರಿಸಿದರೆ ಮಾತ್ರ ಅದು ದೇಶದ ನೈಜ ಆರ್ಥಿಕ ಸ್ಥಿತಿಯನ್ನು ಪ್ರತಿನಿಧಿಸಲು ಸಾಧ್ಯ.
ದಿನಾ೦ಕ: ೪-೧-೨೦೧೦ ರ ಹೊಸದಿಗಂತ ದೈನಿಕ ದಲ್ಲಿ ಪ್ರಕಟಿತ ಲೇಖನ