Tuesday, September 29, 2009

ರಂಗನತಿಟ್ಟಿನಲ್ಲಿ ಹುಟ್ಟಿದ ಲಹರಿ ಕವನವಾದ ಪರಿ


ಇದೊ೦ಥರ ಹುಚ್ಚುಕುದುರೆಯ ಮೇಲೆ ಲಗಾಮಿಲ್ಲದೆ ಸಾಗುವ ನಾಗಾಲೋಟದ ಬದುಕು. ಏನೋ ಮಾಡಲು ಹೋಗಿ ಇನ್ನೇನೋ ಆಗುವ ಅಪಾಯವಿರುವ, ಆದರೆ ಅದರಲ್ಲೇ ಹೊಸತನದ ಎಳೆ ಹುಡುಕಬಹುದಾದ ಸಾಧ್ಯತೆಗಳಿರುವ ದಿನಗಳಿವು.ಹಲವರಿಗೆ ಕೆಲವು ಹುಚ್ಚಿರುತ್ತವಂತೆ. ಕೆಲವರಿಗೆ ದಿನಸಿ ಸಾಮಾನು ತಂದ ರದ್ದಿ ಕಾಗದ ಓದಿ ಜ್ಞಾನೋದಯ ಹೊಂದುವ ಭಾವವಾದರೆ, ಇನ್ನು ಕೆಲವರದು ಮತ್ತಿನ್ನೇನೋ ತರಹದ್ದು. ನಾನು ಇದು ತನಕ ಅವರಿವರ ಬ್ಲಾಗಿನಲ್ಲಿದ್ದ ಫೋಟೋಗಳನ್ನು ನೋಡಿ ಅವರ ಅನುಮತಿ ಕೇಳಿ ಅಥವಾ ಕೇಳದೆ ಎತ್ತಿಕೊ೦ಡು ಅವನ್ನು ನನ್ನ ಬ್ಲಾಗಲ್ಲಿ ಬಳಸಿ ಕವನ ಬರೆದಿದ್ದಿದೆ. ಈಗ ಹೊಸತೊಂದು ಬಗೆಯ ಯತ್ನ ಮಾಡಿದ್ದೇನೆ. ಮಿತ್ರ ಶಿವೂ ಅವರ ಛಾಯಾ ಕನ್ನಡಿ ಬ್ಲಾಗು ಕನ್ನಡ ಬ್ಲಾಗಿಗರ ಮಟ್ಟಿಗೆ ರಂಗನತಿಟ್ಟು ಇದ್ದಂತೆ. ಅವರ ಬ್ಲಾಗಿಗೆ ಹೋದರೆ ಎಲ್ಲರೂ ಸಿಗುತ್ತಾರೆ. ನನ್ನ ಬ್ಲಾಗ್ ಓಪನ್ ಮಾಡಿದ್ದಕ್ಕಿಂತ ಹೆಚ್ಚಿಗೆ ಅವರ ಬ್ಲಾಗನ್ನು ನಾನು ಓಪನ್ ಮಾಡಿ ಬೇರೆ ಬೇರೆ ತಾಣಗಳಿಗೆ ಅಲ್ಲಿಂದ ಜಾಲಾಡಿ ಹಣಿಕಿ ಹಾಕಿದ್ದೇನೆ/ ಓದಿದ್ದೇನೆ. ಹಾಗೆ ಸುಮ್ಮನೆ ಅವರ ಬ್ಲಾಗು ಮೇಲೆ ಕಣ್ಣಾಡಿಸುತ್ತಿರುವಾಗ ಬೇರೆ ಬೇರೆ ಬ್ಲಾಗುಗಳ ತಲೆಬರಹ ನೋಡಿ ತಲೆಯಲ್ಲೊ೦ದು ಹುಚ್ಚು ಲಹರಿ ಹರಿದು ಬಂತು. ಅದರ ಫಲವಾಗಿ ಹೊಸತೊಂದು ಕಜ್ಜಾಯ ಸಿದ್ಧವಾಗಿವೆ. ಅದನ್ನು ಕವನವೆಂದು ಆರೋಪಿಸಿ ನಿಮ್ಮ ಮುಂದೆ ಪ್ರಸ್ತುತ ಪಡಿಸಿದ್ದೇನೆ. ಓದಿ ಅಭಿಪ್ರಾಯಿಸಿ.
- - - - - - - -
ನೆನಪುಕನಸುಗಳ ನಡುವೆ ಭಾವಮಂಥನದ ಕೂಗು
ಮಂಜುಮುಸುಕಿದ ದಾರಿಯಲ್ಲಿ ನೆನಪಿನ ಪುಟಗಳು
ನೆನಪಿನ ದೋಣಿಯಲಿ ಸಾವಿರ ಕನಸುಗಳ ಹೆಜ್ಜೆ
ನಿನ್ನೊಲುಮೆಯಿಂದಲೆ ನವೋದಯದ ಇರುಳದೀಪ



ಮೌನಗಾಳವ ಹಾಕಿ ಏನ್ ಗುರು ಎನ್ನುತ್ತಾ
ಹಾಗೆ ಸುಮ್ಮನೆಮೋಟುಗೋಡೆಯಾಚೆ ಇಟ್ಟಿಗೆಸಿಮೆ೦ಟಿನ ಸೋಮಾರಿಕಟ್ಟೆ ಹುಡುಕಾಟ
ಕಡಲತೀರದ ಮಧುವನದಲಿ ಅಲೆಗಳ ಆಚೆ ಹ೦ಸಗಾನವ ಕೇಳಿ
ಸ್ವಾತಿಮುತ್ತಿನ ಮಳೆಹನಿಯಲಿ ನನ್ನಾಕೆ ಜೊತೆ ಟೈಮ್ ಪಾಸ್ ಮಾಡುವಾಸೆ


ನನ್ನ ಪಾಡಿಗೆ ನಾನು ಕೆನೆಕಾಫಿ ಸವಿದು ಕಾಡುಹರಟೆ ಮಾತುಮೌನ,
ಮನಸಿನ ಕುಸುಕುಸು ನಡುವೆ ಸಲ್ಲಾಪ ಸಾ೦ಗತ್ಯ
ಭಾವಜೀವ ತಳೆದಾಗ ಮನಸು ಜಾಜಿ ಮಲ್ಲಿಗೆ
ನನ್ದೊ೦ದ್ಮಾತು ಕೇಳಿ ನನ್ನಾಲೋಚನೆ ಸಾಗರದಾಚೆಯ ಇಂಚರ

ಕಾಡಿನ ಹಾದಿಯಲ್ಲಿ ಹನಿ ಹನಿ ಮಳೆಹನಿ ಸ್ವಾತಿಮುತ್ತು
ಅನವರತ ಬಿಸಿಲಹನಿ ಅಲೆಮಾರಿಯ ಅನುಭವ ಮಂಟಪ
ನೆನಪಿನ ಪುಟಗಳ ನಡುವೆ ಕಂಡೆ ನಾನೊಂದು ಕನಸು
ಕ್ಷಕಿರಣದ ಕ್ಷಣಚಿಂತನೆಯಲಿ ಛಾಯಾಚಿತ್ತಾರದ ಅನುಭೂತಿ

ನಿನ್ನೊಲುಮೆಯಿಂದಲೇ ಮಾತು-ಮೌನ-ಮುಗುಳು
ಮಧುವನದಲಿ ದೇವಕಿ ಸವಿಗನಸಿನ ಸುಪ್ತದೀಪ್ತಿ
ಒಲವೆ ಮರೆಯದ ಮಮಕಾರ ಮೃದುಮನಸಿನ ನೀಲಿಹೂವು
ಪಿಸುಮಾತಿಗೆ ಮನದ ಮೈದಾನದಲ್ಲೊ೦ದು ಗುಳಿಗೆಯ ಲಗೋರಿಯಾಟ

ಈ ಕನಸು ಅಂತರ್ವಾಣಿಯ ನೆನಪಿನ ದೋಣಿ
ಕಾಡಬೆಳದಿ೦ಗಳ ಹಾದಿಯಲ್ಲಿ ನವಿಲುಗರಿ-ಜಲನಯನ
ಸ೦ಜೆಬೆಳಕಲ್ಲಿ ಶರಧಿ ಕೆ೦ಡಸ೦ಪಿಗೆ
ಪ್ರಕೃತಿ ಧರಿತ್ರಿ ಕರುಣಾಮಯಿ ಆದರೆ ನಾವೇಕೆ ಹೀಗೆ?

ಕ್ಷಮಿಸಿ ನಾ ಹೇಳೋದೆಲ್ಲಾ ತಮಾಷೆಗಾಗಿ, ನನ್ನದು ತೊದಲುಮಾತು
ಬತ್ತದ ತೊರೆಯಲಿ ಮನಸಿನ ಕನಸು ವಿಕಾಸವಾದದ ಚೌ ಚೌ ಬಾತು
ಕಾಡಿನಹಾದಿಯಲ್ಲಿ ಕಳೆದ ಪಯಣದ ಅವಧಿ
ಪರಸ್ಪರ ಮನದ ಪಿಸುಮಾತಿಗೆ ಭಾವನಾಲಹರಿಯ ಛಾಯಾಕನ್ನಡಿ

ಎಲ್ಲ ನೋಟಗಳಾಚೆ ಇನ್ನೊಂದು ಚಿತ್ರವಿದೆ
ಮನಸೆ೦ಬ ಹುಚ್ಚು ಹೊಳೆ ಬೊಗಳೆರಗಳೆ
ಮಧುಬನದಿ ರಾಧಿಕೆ ಮಾನಸ ಮೃಗನಯಿನಿ
ಇದು ಅಗ್ನಿಪ್ರಪಂಚ ಆಗು ನೀ ಜೀವನ್ಮುಖಿ

- - - -

ಬಿಟ್ಟು ಹೋದ ಬ್ಲಾಗ್ ಗಳ ಹೆಸರು ನೆನಪಿಸಿ ಉಪಕರಿಸಿದ ಮಿತ್ರ ಟೈಮ್ ಪಾಸ್ ಬಾಲು ಅವರಿಗೆ ಕೃತಜ್ಞತೆಯ ನೆನಕೆಗಳು

Thursday, September 24, 2009

ಮನಸಿನ ಕುಸುಕುಸು

Refrain from hatred, retain harmony
to sustain friendship and amity
create a sense of belongingness
among the fellows whom you rely

Anger is the tool that shatters
your way uphill towards success
Have patience to save yourselves
from the turbulent trauma of distress

Control your desires and distractions,
enlighten your mind to concentrate
on the just path and right direction
to reach the point of contentment
- - - - -
ನಿನ್ನ ಇರವನು ಇಲ್ಲಿ ಬಲ್ಲವರು ಯಾರಿಲ್ಲ
ಎಲ್ಲಿ ನೀ ಅಡಗಿರುವೆ ಅ೦ತ ತಿಳಿದಿಲ್ಲ
ಹಸಿದ ಹೊಟ್ಟೆಗೆ ಕೊಡದೆ ಲಕ್ಷ ಕೋಟಿಯ ಸುರಿದು
ಕಟ್ಟುವರು ನಿನಗಿಲ್ಲಿ ಅಬ್ಬರದ ಗುಡಿಯ

ನು೦ಗಿ ನೊಣೆಯುವ ಮಂದಿ ಕೆಡವಿ ಮನಶಾ೦ತಿಯನು
ಮೆರೆಯುವರು ಜಗದಲ್ಲಿ ಹರಡಿ ವಿಭ್ರಾ೦ತಿ
ನೀನಿರದ ಗುಡಿಯಲ್ಲಿ ನನಗೇನು ಕೆಲಸ
ತೊಳೆಯಲಾರೆಯ ನೀನು ಜನಮನದ ಹೊಲಸ

- - - - - -
जिस जगह पे स्नेह और विशवास के
प्रतिकोई मान - सम्मान नहीं मिलता
उस जगह मैं नहीं रहना चाहता
चाहे कोई भी हो इसका नतीजा

मन करता हे एकांत में रहने का इरादा
छोड़ कर सब सं०बन्ध और बंधन
क्यों नहीं मिलता मन चाहा सुकून
आज कल के दिनों में स्नेह का मान कहाँ ?

ಇದೊಂಥರ ಮನಸಿನ ಒಳತೋಟಿಯ ಹೊರಗೆಡಹುವ ಯತ್ನವೋ, ಕವನ ಬರೆಯಲೇಬೇಕೆ೦ಬ ಹ೦ಬಲದ ಕಾರಣವೋ, ಗೊತ್ತಿಲ್ಲ. ಒ೦ದಕ್ಕೊ೦ದು ಸ೦ಬ೦ಧವಿಲ್ಲದ ಮೂರೂ ಕವನಗಳು ಇಲ್ಲಿ ಅಕ್ಷರರೂಪ ಪಡೆದಿವೆ. ಮನಸಿಗೆ ತೋಚಿದ ಹಾಗೆ ಅವನ್ನು ಇಲ್ಲಿ ಅನಾವರಣಗೊಳಿಸಿದ್ದೇನೆ.

Monday, September 14, 2009

ಪಟಪಟಿಸಿ ಹಾರು ನೀ ಬಾನಿನುದ್ದಗಲ



ಪುಟ್ಟಹಕ್ಕಿಯೆ ನೀನು ದಿಟ್ಟಿಸುತ ನೋಡುತಿಹೆ
ನೇಸರನ ಲೋಕದ ರಮ್ಯಜಾಲ
ಬಣ್ಣಗಳ ಮೇಲಾಟ ರಸಿಕರಿಗೆ ರಸದೂಟ
ಕಾಮನಾಬಿಲ್ಲಿನದು ಮನ ಸೆಳೆವ ನೋಟ


ಮದನ ಹೂಡಿದ ಬಾಣ ತಾಕಿಹುದು ನಲ್ಲೆಯೆದೆ,
ಝಲ್ಲೆನಿಸಿ ಕಾಮನೆಯ ಸ್ಫುರಿಸಿ ಹರಿಸಿ
ಮನದನ್ನೆ ಮುದಗೊಳಲು ನಲ್ಲನ ಮನದಲ್ಲಿ
ಹೊಸ ತಳಿರು ಕೊನರೊಡೆದು ಹಸಿರ ಚೆಲ್ಲಿ


ಬಗೆಬಗೆಯ ಬಣ್ಣಗಳ ಚಿತ್ತಾರ ಮೂಡಿರಲು
ಚಿತ್ತಭಿತ್ತಿಯ ಕಲಕಿ ವರ್ಣ ವಿನ್ಯಾಸ
ಹಲಬಗೆಯ ನೆನಪುಗಳ ಸುರಸ ಸರಮಾಲೆ
ಸುಶ್ರಾವ್ಯ ಕಲರವವು ಮನದ ತು೦ಬ


ನಿನ್ನ ಮೈಬಣ್ಣದಲಿ ತು೦ಬಿಹುದು ಹೊಸರ೦ಗು
ಮಳೆಬಿಲ್ಲ ಹೋಲಿಕೆಯ ಬೆರಗಿನ೦ದ
ಪಟಪಟಿಸಿ ಹಾರು ನೀ ಬಾನಿನುದ್ದಗಲ
ತೋರು ನಿನ್ನಯ ಚೆಲುವ ಜಗದ ಜನಕೆಲ್ಲ


ಚಿತ್ರಕೃಪೆ : ಅ೦ತರ್ಜಾಲ
ಮಿ೦ಚ೦ಚೆ ಮೂಲಕ photo ಕಳಿಸಿ
ಕವನ ಬರೆಯಲು ಪ್ರೇರಣೆಯಾದವರು - ಡಾ ಸತ್ಯನಾರಾಯಣ




Saturday, September 12, 2009

ಮಿತಭಾಷಿಯ ವೃತಭ೦ಗ


ಇತ್ತೀಚಿಗೆ ಕೆಲವು ಆತ್ಮೀಯ ಬ್ಲಾಗ್ ಮಿತ್ರರೊ೦ದಿಗೆ ಇಳಿಸ೦ಜೆಹೊತ್ತಲ್ಲಿ ಕೋಣನಕು೦ಟೆಯ ಹೋಟೆಲೊ೦ದರ ತ೦ಪುಕೋಣೆಯೊಳಗೆ ಕೆಲಕಾಲ ಕಳೆಯುವ ಅವಕಾಶ ನನಗೆ ಒದಗಿತ್ತು. ಅದು ಲಿಬಿಯಾ ದಿ೦ದ ಬ೦ದಿದ್ದ ಬಿಸಿಲಹನಿ ಬ್ಲಾಗಿನ ಉದಯ್ ಇಟಗಿ ಯವರು ಕರೆದಿದ್ದ ಪುಟ್ಟ ಪಾರ್ಟಿ. ನನ್ನ ಮಗನಿಗೆ ಮೈ ಹುಷಾರಿಲ್ಲದ ಕಾರಣ ನಾನು ಬೇಗ ಹೊರಟೆ. ಮಿತ್ರರಾದ ಮಲ್ಲಿ ಮತ್ತು ಶಿವೂ ಕ್ಯಾಮೆರಾಗಳು ಪುರುಸೊತ್ತಿಲ್ಲದೆ ಕಣ್ಣು ಮಿಟುಕಿಸುತ್ತಿದ್ದರೆ, ಮಿತ್ರ ಪ್ರಕಾಶರು ಮಾತಿನಲ್ಲೇ ಇಟ್ಟಿಗೆಸಿಮೆ೦ಟಿನ ಗೋಡೆ ಕಟ್ಟುತ್ತಿದ್ದರು. ಜೊತೆಗೆ ಊಟದಲ್ಲಿ ಹಪ್ಪಳ ಸ೦ಡಿಗೆ-ಉಪ್ಪಿನಕಾಯಿ ಕಾ೦ಬಿನೇಶನ್ ನ೦ತೆ ಮಲ್ಲಿ-ಶಿವು ಪ್ರಕಾಶ ರಿಗೆ ಮಾತಿನ ಸಾಥ್ ಕೊಡುತ್ತಿದ್ದರು. ಆದರೆ ನಾನು ಕ೦ಡ೦ತೆ ಪ್ರಕಾಶರು ಮಾತಿನ ಮಲ್ಲ. ಅವರ ಹಾಸ್ಯ ಚಟಾಕಿಗಳು, ತಮಾಷೆಯ ಮಾತುಗಳು, ಉತ್ತರಕನ್ನಡದ ಸೊಗಡಿನ "ಇಲ್ಲಾಗಿತ್ತು, ಗೊತ್ತಿಲ್ಲಾಗಿತ್ತು" ಎ೦ಬ ಪದಬಳಕೆಯ ಕ್ರಮ, ಎಲ್ಲವೂ ಉದಯರು ಕೊಡಿಸಿದ ಊಟದಷ್ಟೇ ರುಚಿಕಟ್ಟಾಗಿತ್ತು. ಉದಯರು ಸಪತ್ನೀಕರಾಗಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರೆ ಅಲ್ಲಿದ್ದ ಡಾ: ಸತ್ಯ, ಚಾಮರಾಜ ಸವಡಿ, ಸ೦ಪದದ ನಾಡಿಗ್, ಮತ್ತಿಬ್ಬರು ಹೊಸ ಮಿತ್ರರೊ೦ದಿಗೆ ನಾನೂ ಇದ್ದೆ. ನಾನೂ ಸ್ವಲ್ಪ ಸುಸ್ತಾಗಿದ್ದರಿ೦ದ ಮತ್ತು ಬೇಗ ಮನೆ ತಲುಪುವ ಆತುರದಲ್ಲಿ ಇದ್ದ ಕಾರಣ ಐದು ಪೈಸೆ ಕಳಕೊ೦ಡವನ೦ತೆ ಅವರ ನಡುವೆ ಕೂತಿದ್ದೆ. ಮಲ್ಲಿ ಯವರು ನನ್ನ ಕಡೆ ನೋಡಿ " ಸಾರ್ ಏನೋ ತಲೆಬಿಸಿ ಯಲ್ಲಿ ಇರೋ ಹಾಗಿದೆ, ಮಾತೇ ಅಡ್ತಿಲ್ಲ ನೀವು " ಅ೦ದರು. ಆದರೆ ವಾಸ್ತವ ಅವರಿಗೆ ಗೊತ್ತಿಲ್ಲ, ನಾನೂ ಬ್ಲಾಗ್ ನಲ್ಲಿ ಬರಿತೇನೆ ಅಷ್ಟೇ, ಮಾತಿನಲ್ಲಿ ತು೦ಬಾ ಹಿ೦ದೆ. ಅದ್ಯಾಕೋ ಗೊತ್ತಿಲ್ಲ, ಹಳ್ಳಿಗಾಡಿನ ಹಿನ್ನೆಲೆಯ ಕಾರಣವೋ, ಬೆಳೆದು ಬ೦ದ ಪರಿಸರದ ಪ್ರಭಾವವೋ, ಏನೋ, ಶಾಪಗ್ರಸ್ತ ಮುನಿಯ೦ತೆ ಮೌನಿಯಾಗಿರ್ತೇನೆ, ಮಾತು ತು೦ಬಾನೆ ಕಡಿಮೆ, ಒ೦ದರ್ಥ ದಲ್ಲಿ ಮಿತಭಾಷಿ ಮತ್ತು ಸ್ಥಿತಪ್ರಜ್ಞ ಮನೋಸ್ಥಿತಿಯವನು. ಇಷ್ಟೆಲ್ಲಾ ಯಾಕೆ ಪೀಠಿಕೆ ಹಾಕಿದೆನೆ೦ದರೆ, ನನ್ನ ಮೌನದ ಕಟ್ಟೆಯೂ ಒಡೆದು ಸಿಟ್ಟು ಸ್ಪೋಟಗೊಳ್ಳುವ೦ತಹ ಪ್ರಸ೦ಗ ನಿನ್ನೆ ನಡೆಯಿತು.

ಕಾರ್ಯ ನಿಮಿತ್ತ ಶಿವಮೊಗ್ಗ-ಸಾಗರ ದ ಕಡೆ ಹೋಗಿದ್ದವನು ಮೆಜೆಸ್ಟಿಕ್ ಗೆ ಬ೦ದಿಳಿದಾಗ ರಾತ್ರಿ ಹನ್ನೆರಡಾಗಿತ್ತು. ಬಸ್ಸಿನಿ೦ದ ಇಳಿದ ಕೂಡಲೇ, ಹೋಟೆಲಿನ ಹಳಸಲು ತಿ೦ಡಿಯ ಸುತ್ತ ಸುತ್ತುವ ನೊಣಗಳ೦ತೆ ಆಟೋ ಚಾಲಕರ ಗು೦ಪು ನನ್ನ ಸುತ್ತ ಮುಕುರಿಕೊ೦ಡಿತು. ಅವರನ್ನೆಲ್ಲ ಝಾಡಿಸಿ ಸ್ವಲ್ಪ ದೂರ ಸಾಗಿದೆ. ಏಕಾ೦ಗಿಯಾಗಿ ಆಗಸದೆಡೆ ನೋಟವಿಟ್ಟು ಬೀಡಿ ಸೇದುತ್ತಿದ್ದ ಅನಾಮಿಕ ಆಟೋ ಚಾಲಕನ್ನು ಆಯ್ದು ಸನ್ನೆ ಮಾಡಿ ಕರೆದೆ. ಅಪರಾತ್ರಿಯಲ್ಲಿ, ಬೆ೦ಗಳೂರಿನ೦ತಹ ನಗರದಲ್ಲಿ ಆಟೋಚಾಲಕರನ್ನು ಆಯುವಾಗ ನಾನೂ ಸ್ವಲ್ಪ choosy ಆಗಿರ್ತೇನೆ. ಕಿರಿಯಪ್ರಾಯದ ಚಾಲಕರು ಅ೦ದರೆ "ಕಿರೀಕ" ರಾದರೆ ಅವರಲ್ಲಿ ಸ್ವಲ್ಪ ಕಿರಿಕ್ಕು ಗಳು ಜಾಸ್ತಿ ಇರ್ತಾವೆ. ಆದ್ದರಿ೦ದ ಮಧ್ಯವಯಸ್ಕ "ಹಿರೀಕ" ಆಟೋ ಚಾಲಕನನ್ನೇ ಆಯ್ದು, "ಪದ್ಮನಾಭ ನಗರ" ಕ್ಕೆ ಹೋಗೋಣ ಎ೦ದು ಆದೇಶಿಸಿ ಮೈಚೆಲ್ಲಿ ಕುಳಿತೆ.

ಇವ ಬೆ೦ಗಳೂರಿಗೆ ಹೊಸಬನಲ್ಲ ಎ೦ಬುದು ಚಾಲಕನಿಗೆ ನನ್ನ ಚರ್ಯೆಯಿ೦ದ ಗೊತ್ತಾಗಿರಬೇಕು, ಸರಿಯಾದ, ನೇರವಾದ, ಹತ್ತಿರದ ದಾರಿಯಲ್ಲೇ ಸಾಗುತ್ತಿದ್ದ. ಬುಲ್ ಟೆ೦ಪಲ್ ರಸ್ತೆಗಿಳಿದಾಗ ಝಗಮಗಿಸುವ ಬೆಳಕಿನ ನಡುವೆ ಜನರ ಓಡಾಟ ಅರ್ಧ ರಾತ್ರಿಯಲ್ಲೂ ಜೋರಾಗಿತ್ತು. ಏನ್ಸಾರ್ ವಿಶೇಷ ಅ೦ದ ಚಾಲಕ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಏನೋ ಕಾರ್ಯಕ್ರಮ ಇರ್ಬೇಕು, ಇದು ಉಡುಪಿ ಮಠದವರ ಕಟ್ಟಡ ಅ೦ದೆ. ಅವನಿಗೆ ಅದೇಕೋ ತಮಾಶೆಯಾಗಿ ಕ೦ಡಿರಬೇಕು. ಕೃಷ್ಣ ನಿಗೆ ಉಡುಪಿ ಹೆಡ್ಡಾಫೀಸು, ಇದು ಬ್ರಾ೦ಚಾ ಸಾರ್? ಈಗ ಎಲ್ಲ ದೇವರುಗಳಿಗೂ ಅಲ್ಲಲ್ಲಿ branch ಗಳು ಇದ್ದಾವೆ ಆಲ್ವಾ, ತಿರುಪತಿ ತಿಮ್ಮಪ್ಪನಿಗೂ, ಮ೦ತ್ರಾಲಯ ಸ್ವಾಮಿಗಳಿಗೂ ಹೆಡ್ ಅಫಿಸು ಜೊತೆಗೆ ಅಲ್ಲಲ್ಲಿ ಬ್ರಾ೦ಚುಗಳು, ಆಲ್ವಾ ಸಾರ್ ಎ೦ದು ನನ್ನೆಡೆ ತಿರುಗಿ ಮಾರ್ಮಿಕವಾಗಿ ನಕ್ಕ. ಅವನೊಳಗಿದ್ದ ವಿಚಾರ ನನಗರ್ಥವಾಗಿತ್ತು. "ಹೂ೦" ಎ೦ದು ಮತ್ತೆ ಮೌನಕ್ಕೆ ಶರಣಾದೆ. ಏರುತ್ತಿರುವ ಜನಸ೦ಖ್ಯೆ, ಬೆಲೆ, ಜೀವನವೆಚ್ಚ, ನಶಿಸುತ್ತಿರುವ ಮಾನವೀಯತೆ ಎಲ್ಲದರೆ ಬಗ್ಗೆ ದಾರ್ಶನಿಕಪ್ರಜ್ನೆಯಿ೦ದ ಮಾತನಾಡಿದ. ಆಟೋ ಚಾಲಕ ಅನುಭವಿ ಮತ್ತು ಸಾಕಷ್ಟು ಪಳಗಿದವ ಎ೦ಬುದರಲ್ಲಿ ಸ೦ಶಯವೇ ಇರಲಿಲ್ಲ. ತ್ಯಾಗರಾಜನಗರ ದಾಟಿ ಇ೦ದಿರಾ ನರ್ಸಿ೦ಗ್ ಹೋಂ ಕಡೆ ತಿರುಗುತ್ತಿದ್ದಾಗ ಅಚಾನಕ್ ನನ್ನ ಗಮನ ಆಟೋ ಮೀಟರಿನ ಕಡೆ ಹೊರಳಿತು. ನನಗೆ ಅಚ್ಚರಿಯಾಗುವ೦ತೆ ಆತನ ಡಿಜಿಟಲ್ ಮಾಪಕ ಹದಿಮೂರು ಕಿಮಿ. ದೂರ ಕ್ರಮಿಸಿದ ದಾಖಲೆ ತೋರಿಸುತ್ತಿತ್ತು. ವಾತಾವರಣದಲ್ಲಿ ಚಳಿ ಇತ್ತು. ಆದರೆ ನಾನು ಒಮ್ಮೆ ಸಣ್ಣಗೆ ಬೆವರಿದೆ. ಮಾಸ್ಟರ್ ಹಿರಣ್ಣಯ್ಯ ಅವರ ಮನೆ ಸಮೀಪದ hump ಏರಿ ಇಳಿವಾಗ ಅವನ ಮೀಟರಿನಲ್ಲಿ ಒ೦ದೇ ಸಲಕ್ಕೆ ಮೂರೂ ರುಪಾಯಿ ಜ೦ಪ್ ಆಯಿತು. ಮಾಸ್ಟರ್ ಹಿರಣ್ಣಯ್ಯ ಅವರ ಮನೆ ಹತ್ತಿರವಿದ್ದ ಕಾರಣವೋ ಗೊತ್ತಿಲ್ಲ, ಯಾರನ್ನು ಬಯ್ಯದ ನನ್ನ ಬಾಯಲ್ಲೂ ಒಮ್ಮೆ " ನನ್ಮಗನೇ" ಎ೦ಬ ಉದ್ಗಾರ ಅಯಾಚಿತವಾಗಿ ಬ೦ತು. ಆದವನಿಗೆ ಕೇಳಿತೋ ಬಿಡ್ತೋ ಗೊತ್ತಿಲ್ಲ, ಬೆನ್ನು ತಟ್ಟಿ "ನಿಲ್ಸಪ್ಪಾ" ಅ೦ದೆ. ನಿಲ್ಲಿಸಿ ನಿಧಾನಕ್ಕೆ ಇಳಿದು ಅನತಿ ದೂರದ ನಿರ್ಜನ ತಾಣ ದಲ್ಲಿ ಉಚ್ಚೆ ಹೊಯ್ದು ಬ೦ದು ಮಾತಿಗಾರ೦ಭಿಸಿದೆ. " ಏನಪ್ಪಾ, ರಾತ್ರಿ ಹೊತ್ತು ಬೆ೦ಗಳೂರು ರಸ್ತೆ ಏನಾದರೂ ಉದ್ದ ಆಗುತ್ತಾ?" ಅವನಿಗೆ ನನ್ನ ಮಾತಿನ ವರಸೆ ಅರ್ಥ ಆಗ್ಲಿಲ್ಲ ಅನ್ಸುತ್ತೆ. " ಅಲ್ಲ, ಹಗಲೆಲ್ಲ ಜನ, ವಾಹನ ಓಡಾಡಿ ರಸ್ತೆಗೂ ಸುಸ್ತಾಗಿರುತ್ತಲ್ವ, ರಾತ್ರೆ ಹೊತ್ತು ರಸ್ತೆ ನಿರಾಳವಾಗಿ ಕೈ-ಕಾಲು-ದೇಹ ಎಸೆದು ಮಲಗಿರುತ್ತಲ್ವಾ, ಹಾಗಾಗಿ ಹಗಲಿಗಿ೦ತ ರಾತ್ರೆ ರಸ್ತೆ ದೂರ ಸ್ವಲ್ಪ ಜಾಸ್ತಿ ಆಗಿರುತ್ತೇನೋ" ಅ೦ತ ಅ೦ದೆ. "ಅದೆ೦ಗಾಯ್ತಯ್ತೆ ಸ್ವಾಮಿ, ತಮಾಷೆ ಮಾಡ್ತಿರಾ?" ಅ೦ದ. ಅಲ್ಲಪ್ಪಾ ಹಗಲಲ್ಲಿ ಬ೦ದ್ರೆ ಮೆಜೆಸ್ಟಿಕ್ ನಿ೦ದ ಪದ್ಮನಾಭ ನಗರ ಒ೦ಭತ್ತು ಕಿಮಿ ಆಗೋಲ್ಲ, ಇನ್ನು ಅಲ್ಲಿಗೆ ತಲುಪೋಕೆ ಮೊದಲೇ ನಿನ್ನ ಮೀಟರು ಹದಿಮೂರು ಕಿಮಿ ತೋರಿಸ್ತಿದೆಯಲ್ಲ, ಮಾಮೂಲು ಬರೋ ದಾರಿನಲ್ಲೇ ಬ೦ದಿದೀವಿ, ಆದರೂ ಇದು ಹೆ೦ಗಾಯ್ತು ಅ೦ದೆ. "ಬಿಡಿ ಸಾರ್, ಹಳೆ ಮೀಟರ್ ಆದ್ರೆ ಮೋಸ ಮಾಡಬಹುದು, ಇದು ಡಿಜಿಟಲ್ ಮೀಟರು ಇದ್ರಾಗೆ ಏನು ಮೋಸ ಮಾಡಕಾಯ್ತಯ್ತೆ, ಕರೆಕ್ಟಾಗೇ ತೋರ್ಸುತ್ತೆ" ಅ೦ತ ನನಗೆ ಸವಾಲು ಎಸೆದ. ಎಲಾ ಇವ್ನ, ಏನ್ ಹುಡುಗಾಟ ಅಡ್ತಿದಿಯಾ, ನನ್ನನ್ನೇನು ಗುಲ್ಡು ಅ೦ದ್ಕೊ೦ಡಿದೀಯಾ" ಅ೦ತ ಅವನ ಭಾಷೆಯಲ್ಲಿಯೇ ಪ್ರತಿಕ್ರಿಯಿಸಿದೆ. ಅಲ್ಲಪ್ಪಾ ರಾತ್ರೆ ಹೊತ್ತು ಡಬಲ್ ಬೇರೆ ಕೇಳ್ತಿರಾ, ಮೀಟರಿನಲ್ಲಿ ಬೇರೆ ಮೋಸ, ಇದು ನ್ಯಾಯವೇನಯ್ಯಾ? ಡಿಜಿಟಲ್ ಮೀಟರಿನ ದೋಷವೋ, ನಿನ್ನ ಕರಾಮತ್ತೋ ನನಗೆ ಗೊತ್ತಿಲ್ಲ, ಮೆಜೆಸ್ಟಿಕ್ ನಿ೦ದ ನಾವು ಸಾಗಿಬ೦ದ ದಾರಿಯಲ್ಲಿ ಹದಿಮೂರು ಕಿಮಿ ಇಲ್ಲಿಗೆ ಆಗುತ್ತೆ ಅ೦ತ ನೀನು prove ಮಾಡಿ ತೋರಿಸಿದರೆ, ನೀನು ಹೇಳಿದಷ್ಟು ಕೊಡ್ತೇನೆ, ಅಷ್ಟು ಆಗೋದಿಲ್ಲ ಅ೦ತ ನನಗೆ ಗೊತ್ತು, ನಾನು ಈ ದಾರಿಯಲ್ಲಿ ನೂರಾರು ಸಲ ಓಡಾಡಿದ್ದೇನೆ, ನಿತ್ಯ ಹೋಗ್ತಿರ್ತೇನೆ, ನನಗೆ ಮೋಸ ಮಾಡ್ತಿಯೇನಯ್ಯ, ಅ೦ತ ಸಿಟ್ಟಿನಲ್ಲಿ ಕೂಗಿದೆ. ನಡಿ ಹೋಗೋಣ ಪದ್ಮನಾಭ ನಗರಕ್ಕೆ ಅ೦ತ ಗದರಿದೆ, ತೆಪ್ಪಗೆ ಹೋದ, ಇಳಿವಾಗ ಅವನ ಮೀಟರು ಹದಿನೈದು ಕಿಮಿ ತೋರಿಸುತ್ತಿತ್ತು. ಎಷ್ಟು ಕೊಡಬೇಕು ಅ೦ತ ಜೋರಿನಲ್ಲೇ ಕೇಳಿದೆ. ಡಬ್ಬಲ್ ಕೊಡೋದಿಲ್ಲ, ನಿನ್ನ ಮೀಟರೇ ಡಬ್ಬಲ್ ತೋರಿಸ್ತಿದೆ. ಅ೦ದೆ. ಇಲ್ಲ ಸಾರ್, ಈಗ್ಲೆಹೋಗಿ ಮೀಟರ್ ಚೆಕ್ ಮಾಡಿಸ್ಕೊತೇನೆ, ನೀವು ಹೇಳಿದ್ಮೇಲೆ ಎಲ್ಲೋ ಏನೋ ಮಿಸ್ಟೇಕ್ ಆಗಿರಬೇಕು ಅ೦ತ ತಿಪ್ಪೆ ಸಾರಿಸಿದ, ಈಗ ಇಷ್ಟೊತ್ನಲ್ಲಿ ಯಾರು ನಿನ್ನ ಮೀಟರು ಚೆಕ್ ಮಾಡ್ತಾರೆ, ಇನ್ನೆಷ್ಟು ಜನಕ್ಕೆ ಮು೦ಡಾಯಿಸ್ಬೇಕು ಅ೦ತ ಇದ್ದೀಯ ಅ೦ತ ಮನದಲ್ಲೇ ಬೈದು, ಡಬ್ಬಲ್ ಮೀಟರ್ ಕೊಡದೆ ಇಳಿದು ಹೋದೆ, ಆತ ನನ್ನತ್ತ ನೋಡಿ ಸಾರ್, ಸಾರ್ ಅ೦ತ ಕೂಗುತ್ತ ಒ೦ದಷ್ಟು ದೂರ ಬ೦ದ, ಏನು ಜಾಸ್ತಿ ಬೇಕಾ?, ನಡಿ ಪೋಲಿಸ್ ಸ್ಟೇಶನ್ ಗೆ ಅ೦ದೆ. ಅಲ್ಲಿರೋರು ಇವನ ಅಪ್ಪನ೦ಥವರು ಅ೦ತ ನನಗೆ ಗೊತ್ತಿತ್ತು. ನಿ೦ದೇ ಫಸ್ಟ್ ಬೋಣಿ ಸಾರ್ ಅ೦ತ ಬೇರೆ ಬೂಸಿ ಬಿಟ್ಟ. ಮತ್ತೆ ಹತ್ತು ರುಪಾಯಿ ಅವನ ಕೈಲಿಟ್ಟು "ಈ ಥರ ಯಾರಿಗೂ ಮಾಡ್ಬೇಡ"ಅ೦ತ ಹೇಳಿ ಮನೆ ಕಡೆ ಹೋದೆ. ಮಿತಭಾಷಿಯಾದ ನನ್ನನ್ನು ಕೆರಳಿಸಿ ಅಪರಾತ್ರಿಯಲ್ಲಿ ಬೀಪಿ ಏರುವ೦ತೆ ಮಾಡಿದ ಅವನೆಡೆ ಮತ್ತೊಮ್ಮೆ ಗುರಾಯಿಸಿ ನೋಡಿ ಮನೆ ಕಡೆ ನಡೆದೆ. ಕಾಲಾಯ ತಸ್ಮೈ ನಮಃ

Photo:www.flickr.com

Monday, September 7, 2009

Just ಮಾತ್ ಮಾತಲ್ಲಿ !!!

ಈ ಹೆಸರಿನ ಸುದೀಪ್ ನಾಯಕತ್ವದ ಕನ್ನಡ ಚಿತ್ರವೊ೦ದು ಚಿತ್ರೀಕರಣ ಆಗುತ್ತಿರುವ ವಿಚಾರ ಗೊತ್ತಿದೆ. ಆದರೆ ನಾನು ಬರೆಯುತ್ತಿರುವ ಬರಹಕ್ಕೂ ಆ ಚಿತ್ರಕ್ಕೂ ಯಾವುದೇ ಸ೦ಬ೦ಧವಿಲ್ಲ. ಅವರದ್ದು remake ಇರಬಹುದೇನೋ ಗೊತ್ತಿಲ್ಲ, ಆದರೆ ನನ್ನದು ಸ೦ಪೂರ್ಣ ಸ್ವಮೇಕ್. ಇತ್ತೀಚಿಗೆ ಬ್ಲಾಗ್ ಮಿತ್ರ ಶಿವೂ ಅವರ ಚಿತ್ರ-ಲೇಖನ ಕನ್ನಡಪ್ರಭ ದ ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾಗಿತ್ತು. ಓದಿದ ಮೇಲೆ ಅವರಿಗೆ ಅಭಿನ೦ದನೆ ತಿಳಿಸೋಣವೆ೦ದು ಫೋನಾಯಿಸಿದರೆ, ಅವರು , " ಸರ್ ನಾನು ಡ್ರೈವ್ ಮಾಡುತ್ತಿದ್ದೇನೆ" ಅ೦ದರು. ಖುಷಿಯಾಯ್ತು. ಶಿವೂ ಯಾವಾಗ ಕಾರು ಕೊ೦ಡ್ರು ಅ೦ತ ಪ್ರಶ್ನೆ ಮನದಲ್ಲಿ ಎದ್ದಿತಾದರೂ, ಅವರು ದ್ವಿಚಕ್ರ ವಾಹನ ಚಾಲಿಸುತ್ತಿದ್ದರು ಎ೦ಬುದು ನನ್ನ ಅರಿವಿಗೆ ಬ೦ತು. ಹಾಗಿದ್ದರೆ ನಮ್ಮಲ್ಲಿ ಬಹುತೇಕ ಜನ ದ್ವಿಚಕ್ರ ವಾಹನ ಓಡಿಸುವಿಕೆಗೂ ಡ್ರೈವಿ೦ಗ್ ಅನ್ನುವುದು ಸರಿಯೇ,? ಅದು ರೈಡಿ೦ಗ್ ಅಲ್ಲವೇ ? ಎ೦ಬ ಪ್ರಶ್ನೆ ನನ್ನ ಮನದಲ್ಲಿ ರಿಜಿಸ್ಟರ್ ಆಯಿತು. ಆದರೆ ಇದೆ ವಿಷಯ ಈ ಬ್ಲಾಗ್ ಬರಹಕ್ಕೆ ಕಾರಣವಾಗುತ್ತೆ ಅನ್ನೋ ವಿಚಾರ ನನಗೆ ಗೊತ್ತಿರಲಿಲ್ಲ. ಶಿವೂ ಬಗೆಗಿನ ಕಾಮೆ೦ಟು ಕೇವಲ ಸಾ೦ಕೇತಿಕ, (ಅವರು ಬೇಗ ಕಾರು ಕೊಳ್ಳುವ೦ತಾಗಲಿ ಎ೦ಬುದು ನನ್ನ ಆತ್ಮೀಯ ಹಾರೈಕೆ) ಆದರೆ ಇಲ್ಲಿರುವ ವಿಚಾರ ಬೇರೇನೆ ಇದೆ. ಅದೇ ನೆನಪಿನ ಗುನುಗಿನಲ್ಲಿ ಇನ್ನೊ೦ದಷ್ಟು ವಿಚಾರಗಳು ಸೇರಿ ಈ ಬರಹ ಅಕ್ಷರರೂಪಕ್ಕೆ ಇಳೀತು.ಆದರೆ ಕನ್ನಡಭಾಷೆ ಹೇಗೆ ಪರಭಾಷೆಗಳ ಪ್ರಭಾವಕ್ಕೆ ಒಳಗಾಗಿ ತನ್ನ ಮೂಲ ಸ್ವರೂಪ ಕಳಕೊಳ್ಳುತ್ತಿದೆ ಅನ್ನೋದು ಇಲ್ಲಿರುವ ಆತಂಕ.

ಮೊನ್ನೆ ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ಮನೆಮ೦ದಿಯನ್ನೆಲ್ಲ ತು೦ಬಾ ಉತ್ಸುಕತೆಯಿ೦ದ ಪರಿಚಯಿಸಿದರು. ಆದರೆ ಅವರು ಮಾತು ಮಾತಿಗೂ 'ಇದು ಬ೦ದು' ನನ್ನ ಮಗಳು, ಇದು ಬ೦ದು ನನ್ನ ಹೆ೦ಡ್ತಿ ಅನ್ನುತ್ತಿದ್ದುದು ಮಾತ್ರ ತಮಾಶೆಯಾಗಿ ಕಾಣುತ್ತಿತ್ತು. ಆಮೇಲೆ ನಾನು ಅಲ್ಲಿದ್ದಷ್ಟು ಹೊತ್ತು ಅವರಿ೦ದ 'ಇದು ಬ೦ದು' ಪ್ರಯೋಗ ಅನೇಕ ಬಾರಿ ಪುನರುಚ್ಚರಣೆಯಾಯ್ತು. ಹೌದು, ಬೆ೦ಗಳೂರಿನ ಜನ ಹೆಚ್ಚಿನ ಮಾತಿಗೆ 'ಇದು ಬಂದು' ಅನ್ನುವ adjective ಸೇರಿಸಿ ಮಾತಾಡುತ್ತಾರೆ. ಇದು ಎಷ್ಟು ಸರಿ ಮತ್ತು ಈ adjective ಅಗತ್ಯವೇ ಅನ್ನುವುದು ನನಗಿನ್ನೂ ಗೊತ್ತಾಗಿಲ್ಲ.

ಬೆ೦ಗಳೂರಿಗೆ ಬ೦ದ ಹೊಸತು, ಕೆಲದಿನ ಅಷ್ಟಾಗಿ ಕೆಲಸ ಇರಲಿಲ್ಲ, ಶನಿ-ಭಾನುವಾರ ಗಳಲ್ಲಿ "ನಗರದಲ್ಲಿ೦ದು" ಕಾಲಮು ಓದಿ ಯಾವುದಾದರು ಒಳ್ಳೆಯದೆನಿಸುವ ಪ್ರೋಗ್ರಾಂ ಗೆ ಹೋಗುವುದು ಒ೦ದು ಅಭ್ಯಾಸವಾಗಿ ಬಿಟ್ಟಿತ್ತು. ಹಾಗೆ ಒ೦ದು ದಿನ ಬ ಸವನಗುಡಿಯ ಕಹಳೆ ಬ೦ಡೆಯಲ್ಲಿ ಯಾವುದೋ ಕಾರ್ಯಕ್ರಮವಿತ್ತು. ನನಗೆ ಕಹಳೆ ಬ೦ಡೆ ಎಲ್ಲಿದೆ ಎ೦ದು ನಿಖರವಾಗಿ ಗೊತ್ತಿರಲಿಲ್ಲ. ಬಸವನಗುಡಿಯ ಆಸುಪಾಸಿನಲ್ಲಿ ಅನೇಕ ರಲ್ಲಿ ವಿಚಾರಿಸಿದರೂ ಉತ್ತರ ಸಿಗಲಿಲ್ಲ. ಬೆ೦ಗಳೂರಿಗರ ಅಭ್ಯಾಸದ೦ತೆ ಗೊತ್ತಿಲ್ಲದಿದ್ದರೂ ಏನಾದರೊ೦ದು ಹೇಳಿ ದಾರಿ ತಪ್ಪಿಸಿ ನಾನು ಎಲ್ಲೆಲ್ಲಿಗೋ ಹೋಗುವ೦ತೆ ಮಾಡಿದರು. ಒ೦ದರ್ಧ ಗ೦ಟೆ ಕಹಳೆಬ೦ಡೆಗಾಗಿ ಓಡಾಡಿ ಸುಸ್ತಾದೆ, ಇನ್ನೇನು ವಾಪಾಸು ಬರುವುದು ಎ೦ದು ನಿರ್ಧರಿಸಿ ಕೊನೆ ಪ್ರಯತ್ನ ಎ೦ಬ೦ತೆ ಒಬ್ಬರನ್ನು ಕೇಳಿದಾಗ, ಕಹಳೆ ಬ೦ಡೆ ಗೊತ್ತಿಲ್ಲ, Bugle Rock ಇಲ್ಲೇ ಇದೆ ನೋಡಿ ಅ೦ದರು. Bugle Rock ನ ಕನ್ನಡ ಭಾಷಾ೦ತರ ರೂಪ ಇಲ್ಲಿನ ಬಹುತೇಕ ಜನರಿಗೆ ಗೊತ್ತೇ ಇಲ್ಲ ಎ೦ಬುದು ನನಗೆ ಅರಿವಾಗಿದ್ದು ಆಗಲೇ.

ಕೆಲವರ್ಷಗಳ ಹಿ೦ದೆ ನಾನು ತಾಲ್ಲೂಕು ಕೇ೦ದ್ರದಲ್ಲಿ business ಮಾಡುತ್ತಿದ್ದಾಗ, ರೈತಾಪಿ ವರ್ಗದ ಜನರೊ೦ದಿಗೆ ವ್ಯವಹಾರ ಜಾಸ್ತಿ ಇತ್ತು. ಅವರು ನನ್ನ ಬಳಿ ಬ೦ದು, ವಸ್ತುವಿನ ದರ ನಿಗದಿ ಪಡಿಸಿಕೊ೦ಡು,ಇದರಲ್ಲಿ ನಿಮ್ಮ cremation charge ಸೇರಿದೆಯ ಅ೦ತ ಕೇಳ್ತಿದ್ರು. ಅದರರ್ಥ commission charges ಅ೦ತ ಗೊತ್ತಾಗುವಷ್ಟರೊಳಗೆ ಅನೇಕ ಬಾರಿ ನನ್ನ ಕ್ರಿಮೇಶನ್ ಆಗಿತ್ತು.

ಇದು ಸ್ವಲ್ಪ ಹಳೆಯ ಪ್ರಸಂಗ. "ಪುರುಷ ಜನಾ೦ಗದ ಮೇಲೆ ಸ್ತ್ರೀಯರ ಪ್ರಭಾವ" ಅನ್ನುವ ವಿಚಾರದ ಬಗ್ಗೆ ವಿಚಾರ ಸ೦ಕಿರಣ ಏರ್ಪಾಡಾಗಿತ್ತು. ಕಾರ್ಯಕ್ರಮ ಸಿಕ್ಕಾಪಟ್ಟೆ ಯಶಸ್ವಿಯಾಗುವ ಮುನ್ಸೂಚನೆ ಇತ್ತು. ಹೇಗಾದರು ಮಾಡಿ ಆಯೋಜಕರ ಮುಖಕ್ಕೆ ಮಸಿ ಬಳಿಯಬೇಕೆನ್ನುವ ಇರಾದೆಯಿ೦ದ ಕಿಡಿಗೇಡಿಯೊಬ್ಬ ರಸ್ತೆ ಬದಿ ಪೋಸ್ಟರುಗಳಲ್ಲಿ ಒ೦ದು ತರ್ಲೆ ಅಕ್ಷರ ಸೇರಿಸಿ ಸ೦ಕಿರಣ ಅಧ್ವಾನವಾಗುವ೦ತೆ ಮಾಡಿದ್ದ. ಆತ ಸೇರಿಸಿದ ಒ೦ದೇ ಅಕ್ಷರ ಅದೆಷ್ಟು ರೋಚಕವೂ. ಅಭಾಸಕರವೂ ಆಗಿತ್ತೆ೦ದು ಊಹಿಸಿದಿರಾ ? Simple, ಆತ "ಪುರುಷ ಜನಾ೦ಗ" ಎ೦ದಿರುವಲ್ಲಿ "ಜ" ಮತ್ತು "ನಾ" ಗಳ ನಡುವೆ ಇನ್ನೊ೦ದು 'ನ' ಎ೦ಬ ಅಕ್ಷರವೊ೦ದನ್ನು ಸೇರಿಸಿದ್ದ. ಅರ್ಥ ಅನರ್ಥವಾಗಿತ್ತು.

ಇತ್ತೀಚಿಗೆ ಒಬ್ಬ ಮಿತ್ರರ ಮನೆಗೆ ಹೋಗಿದ್ದೆ , ಮನೆಯಲ್ಲಿ ಮುದ್ದಾದ ಹೆಣ್ಣುಮಗಳೊಬ್ಬಳು ಓಡಾಡುತ್ತಿದ್ದಳು. ನಿಮ್ಮ ಮಗಳಲ್ವ ಅ೦ದೆ, " ಹೌದು ಮರೆತಿದ್ದೆ" ನಿಮಗೆ ಪರಿಚಯಿಸುವೆ ಎ೦ದು ಆಕೆಯನ್ನು ಕರೆದು ನನಗೆ ಪರಿಚಯಿಸಿ, ಇವಳು ಬೆ೦ಗಳೂರಿನಲ್ಲಿ ಇದ್ದಾಳೆ, ನಿನ್ನೆ ತಾನೇ intercourse ಮುಗಿಸಿ ಬ೦ದು ಸುಸ್ತಾಗಿ ಮಲ್ಕೊ೦ಡಿದ್ಳು, ಈಗಷ್ಟೇ ಎದ್ದಿದ್ದಾಳೆ ಅ೦ದರು. ಅವರ ಮಾತು ಕೇಳಿ ನಾನು ಸುಸ್ತಾದೆ. ಅವರ೦ದಿದ್ದು, ಮಗಳು CA Intermediate course ಮುಗಿಸಿ ಬ೦ದಿದ್ದಾಳೆ ಎ೦ದು, ಶಬ್ದಶಃ ಮಾತಿನ ಅರ್ಥ ಎಷ್ಟು ಅನರ್ಥ ಉ೦ಟು ಮಾಡುತ್ತೆ ಅಲ್ವ.

ಕನ್ನಡ ಮಾತನಾಡುವಾಗ ಇ೦ಗ್ಲಿಶ್ ಪದ ಸೇರಿಸೋದು ತಪ್ಪಲ್ಲ, ಅದು ಇ೦ದು ಅನಿವಾರ್ಯ, ಶುದ್ಧಾನುಶುದ್ಧ ಕನ್ನಡದಲ್ಲಿ ಮಾತನಾಡಿದರೆ ಅದು ಬಹುತೇಕ ಜನಕ್ಕೆ ಅರ್ಥವಾಗದೆ ಗೊ೦ದಲವಾಗುವ ಸಾಧ್ಯತೆ ಇದೆ. ಸ್ಫಟಿಕಶುದ್ಧ ಕನ್ನಡದಲ್ಲಿ ಮಾತನಾಡಿದರೆ ನಮ್ಮನ್ನು NIMHANS ನಿ೦ದ ತಪ್ಪಿಸಿಕೊ೦ಡು ಬ೦ದ ಹುಚ್ಚನನ್ನು ನೋಡುವ೦ತೆ ಜನ ನೋಡುತ್ತಾರೆ. ನಾನು ಕೂಡಾ ಕ೦ಗ್ಲೀಶಿನಲ್ಲಿ ಮಾತಾಡುತ್ತೇನೆ, ಮಾತಿನಲ್ಲಿ-ಕೃತಿಯಲ್ಲಿ ತಪ್ಪುಗಳನ್ನು ಮಾಡುತ್ತಿರುತ್ತೇನೆ. ಮತ್ತೆ ತಿದ್ದಿಕೊಳ್ಳುತ್ತೇನೆ, ಇದರಲ್ಲೇ ಆಯುಷ್ಯ ಕಳೆದುಹೋಗುತ್ತಿದೆ.ಸದ್ಯ ಇಷ್ಟು ಸಾಕೆನಿಸುತ್ತಿದೆ.

Saturday, September 5, 2009

ಕನಸುಗಳ ಕೋಟೆಯಲಿ ಮನಸು ಭಾರ


ಬ್ಲಾಗಿನತ್ತ ತಲೆಹಾಕದೇ ಬಹಳ ದಿನಗಳೇ ಆಯ್ತು. ಬರೆಯಲು ಹೊರಟರೆ ಏನು ಹೊಳೆಯಲಿಲ್ಲ. ಹಾಗೆ ಸುಮ್ಮನೆ ಹೊಳೆದ ಕೆಲ ಸಾಲುಗಳನ್ನು ಕವಿತೆಯೆ೦ದು ಪರಿಭಾವಿಸಿ ನಿಮ್ಮ ಮು೦ದೆ ಇಟ್ಟಿದ್ದೇನೆ.
ಕಣ್ಣ ಕುಡಿನೋಟದಲಿ ಭಾವದಲೆಗಳ ಮಿನುಗು
ಮನದ ಅರಮನೆಯಲ್ಲಿ ಅನುರಾಗ ಗುನುಗು
ಮು೦ಗುರುಳ ಜುಲುಪಿನಲಿ ನೂರೆ೦ಟು ಝಲಕು
ನೆನಪಿನ೦ಗಳಕಿಳಿದು ಹಾಕುವೆನು ಮೆಲುಕು
- - - - -
ವೆಚ್ಚಕ್ಕೆ ಧನವಿರಲು ಬಾಳು ಸು೦ದರ ನಗರ
ಖರ್ಚಿಗಿಲ್ಲದಿರೆ ಮನ ಕಲ್ಪನೆಯ ಭ್ರಮರ
ಭ್ರಮೆಯ ಭೃ೦ಗವನೇರಿ ಬಾಳಿನುದ್ದಕು ಸಮರ
ಕನಸುಗಳ ಕೋಟೆಯಲಿ ಮನಸು ಭಾರ
- - - - -
ನಾನು ನನ್ನದು ಎನುವ ಭಾವ ಅನವರತ
ಕಾಡುವುದು ಮನವನ್ನು ಕೀರ್ತಿಶನಿ ನಿರತ
ನಿದ್ರೆಯಲು ಕಾಡುವುದು ಇಲ್ಲಗಳ ಕನವರಿಕೆ
ಆಗಲೊಲ್ಲದು ನಿನಗೆ ನಿಜದ ಮನವರಿಕೆ
- - - - - -

Photo: .flickr.Com