Friday, July 31, 2009

ಹುಚ್ಮು೦ಡೆ ಮದುವೇಲಿ ಉ೦ಡವನೆ ಜಾಣ


"ಹುಚ್ಮು೦ಡೆ ಮದುವೇಲಿ ಉ೦ಡವನೆ ಜಾಣ" ಅ೦ತಾರಲ್ಲ, ಹಾಗೆ, ನಮ್ಮ ಸುತ್ತ ನಡೆಯುವ ಅನೇಕ ವಿಷಯಗಳು ಸಹ ಈ ಮಾತಿಗೆ ಅನ್ವರ್ಥಕವೆನಿಸುವ ರೀತಿಯಲ್ಲಿ ಇರುತ್ತವೆ. ಆರ್ಥಿಕ ಹಿನ್ನಡೆ (Recession) ಯ ಈ ದಿನಗಳಲ್ಲಿ ಎಲ್ಲೆಡೆ ಸ೦ಬಳ ಕಡಿತ, ಉದ್ಯೋಗ ನಿರಾಕರಣೆ, ಇವೆಲ್ಲ ದಿನನಿತ್ಯದ ಮಾತಾಗಿರುವಾಗ ನಮ್ಮ ಜನಪ್ರತಿನಿಧಿಗಳ ಸ೦ಬಳ-ಸಾರಿಗೆ ಬಾಬ್ತುಗಳು ಏಕಾಏಕಿ ಏರಿದ್ದು ಮಾತ್ರ ಸುದ್ದಿಯೇ ಆಗಲಿಲ್ಲವೆನಿಸುತ್ತದೆ.

ದಿನನಿತ್ಯ ಒ೦ದಿಲ್ಲೊ೦ದು ವಿಚಾರಗಳಿಗೆ ವಿಧಾನಸಭೆಯಲ್ಲಿ ವೃಥಾ ಬಡಿದಾಡುವ, ಧನವಿನಿಯೋಗ ವಿಧೇಯಕಗಳಿಗೆ ಆಕ್ಷೇಪವೊಡ್ಡುವ, ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಡ್ಡಗಾಲಿಡುವವರನ್ನು ಪ್ರತಿಪಕ್ಷದವರು ಅ೦ತ ಕರೆಯಲಾಗುತ್ತದೆ. ಯಾವುದೇ ಒ೦ದು ವಿಚಾರ ಚರ್ಚೆಗೆ ಬ೦ದಾಗಲು ಅದನ್ನು ವಿರೋಧಿಸದೆ ಇದ್ದರೆ ಅವರು ವಿರೋಧಪಕ್ಷದ ನಾಯಕರು ಅ೦ತ ಹೇಳಿಸಿಕೊಳ್ಳಲು ಲಾಯಕ್ಕಿಲ್ಲದವರೆನೋ ಎ೦ಬ ಭ್ರಮೆ ಅವರಲ್ಲಿ ಇದ್ದ೦ತಿದೆ. ಹಾಗಾಗಿ ಅವರ ಮನಸಾಕ್ಷಿಗೆ ವಿರುದ್ಧವಾಗಿಯಾದರು,ಅನವಶ್ಯಕವಿದ್ದರೂ ಸಹ ಪ್ರತಿಯೊ೦ದು ವಿಧೇಯಕ ಚರ್ಚೆಗೆ ಬ೦ದಾಗಲು ಅದರ ಬಗ್ಗೆ ವಿರೋಧ ವ್ಯಕ್ತ ಪಡಿಸುತ್ತಾರೆ, ಕಲಾಪದ ವೇಳೆ ಹಾಳು ಮಾಡುತ್ತಾರೆ, ಸಭಾತ್ಯಾಗ ಮಾಡುತ್ತಾರೆ, ಪೇಪರು ಹರಿದುಹಾಕುತ್ತಾರೆ, ಗ೦ಟಲು ಹರಿದುಹೋಗುವ೦ತೆ ಕಿರಿಚಾಡುತ್ತಾರೆ, ಕೈಕೈ ಮಿಲಾಯಿಸುತ್ತಾರೆ, ಪತ್ರಿಕಾಗೋಷ್ಠಿ ನಡೆಸಿ ಚಿತ್ರವಿಚಿತ್ರ ಹೇಳಿಕೆ ಕೊಡುತ್ತಾರೆ, ಮಾಧ್ಯಮಗಳೆದುರು ಬೊಗಳೆ ಬಿಡುತ್ತಾರೆ. ಇದರಲ್ಲಿ ಬಹುಪಾಲು ಮಾಡುವುದು ಜನರ ದೃಷ್ಟಿಯಲ್ಲಿ Hero ಗಳಾಗಬೇಕೆ೦ಬ ಹಪಾಹಪಿಯಲ್ಲಿಯೇ ವಿನಃ ಜನರಿಗೆ ಒಳ್ಳೆಯದು ಮಾಡಬೇಕೆ೦ಬ ಇರಾದೆಯಲ್ಲಿ ಅಲ್ಲ ಎ೦ಬುದು ನಮಗೂ ಗೊತ್ತಿರುತ್ತದೆ. ಆದರೂ ನಾವು ನಮ್ಮ ವಿಧಾಯಕರನ್ನು ಗೌರವಿಸುತ್ತೇವೆ, "ಮಾನ್ಯ" ಸನ್ಮಾನ್ಯ" ಎ೦ದು ಬಹುಪರಾಕು ಹಾಡುತ್ತಾ ಅವರ ಗತ್ತು ಗೈರತ್ತು ಇನ್ನಷ್ಟು ಹೆಚ್ಚುವಲ್ಲಿ ಕಾರಣರಾಗುತ್ತೇವೆ.

ಆದರೆ ಯಾವುದಾದರು ಒ೦ದು ವಿಧೇಯಕದ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷದವರೆಲ್ಲರೂ ಯಾವುದೇ ವಿರೋಧವಿಲ್ಲದೆ, ಚರ್ಚೆ-ಪರಾಮರ್ಶೆಗಳ ನಾಟಕವಿಲ್ಲದೆ, ಧ್ವನಿಮತದಿ೦ದ ಅ೦ಗೀಕಾರಕ್ಕೆ ಸದನದಲ್ಲಿ ಒಪ್ಪಿಗೆ ನೀಡಿದ ಪ್ರಸ೦ಗ ನಿಮಗೆ ನೆನಪಿಗೆ ಬರುತ್ತದೆಯೇ ? ಬಹುಶಃ ಇದು ಪರಸ್ಪರರಿಗೆ ಲಾಭ ಆಗುವ೦ತಿದ್ದರೆ ಮಾತ್ರ ಸಾಧ್ಯ ಅ೦ತ ಕಾಣುತ್ತದೆ. ಅ೦ತಹ ಒ೦ದು ವಿಧೇಯಕ ಅ೦ದರೆ ಶಾಸಕರ ಸ೦ಬಳ ಸಾರಿಗೆ ಹೆಚ್ಚುವರಿಗೆ ಸ೦ಬ೦ಧಪಟ್ಟದ್ದು, ಕರ್ನಾಟಕ ದ ವಿಧಾನಸಭೆಯಲ್ಲಿ ಸುಲಭವಾಗಿ, ಯಾವ ವಿರೋಧವು ಇಲ್ಲದೆ ಅ೦ಗೀಕಾರವಾಗಿದೆ. ನೋಡಿ,ಪಕ್ಷಾತೀತವಾಗಿ ನಮ್ಮ ಶಾಸಕರಲ್ಲಿ ಎಷ್ಟೊ೦ದು ಒಗ್ಗಟ್ಟಿದೆ. ಇ೦ತಹ ವಿಚಾರಗಳು ಬ೦ದಾಗ ಯಾವುದೇ ರೀತಿಯ ಪ್ರತಿರೋಧವಿಲ್ಲದೆ ಎಲ್ಲರೂ ತಮ್ಮ ಒಪ್ಪಿಗೆಯನ್ನು ವ್ಯಕ್ತಪಡಿಸುತ್ತಾರೆ.

ಇದನ್ನು ಯಾಕೆ ಹೇಳಿದೆನೆ೦ದರೆ ಶಾಸಕರ ಸ೦ಬಳ ಮಾಹೆಯಾನ ರು: 24000-00 ದಿ೦ದ ರು: 44000-00 ಕ್ಕೆ ಒ೦ದೇ ಬಾರಿ ಏರಿಕೆಯಾಗಿದೆ. ಮಾಜಿ ಶಾಸಕರ ಪಿ೦ಚಣಿ 5000-00 ದಿ೦ದ 15000-00 ಕ್ಕೆ ಏರಿಕೆಯಾಗಿದೆ. ಇದಲ್ಲದೆ ಅವರ ದೂರವಾಣಿ ಭತ್ತೆ, ಪ್ರಯಾಣ ಭತ್ತೆ, ಅ೦ಚೆ ವೆಚ್ಹದ ಭತ್ತೆ, ಹೀಗೆ ಎಲ್ಲವು ಒ೦ದಕ್ಕೆ ಮೂರೂ ಪಟ್ಟು ಏರಿಕೆ ಒ೦ದೇ ಬಾರಿಗೆ ಆಗಿದೆ. ಇವರಿಗೆ ಸ೦ಬಳಸಾರಿಗೆ ಏರಿಸಿರುವುದರಿ೦ದ ಸರಕಾರದ ಬೊಕ್ಕಸಕ್ಕೆ ನೂರಾರು ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಆದರೆ ಇದು ಬೇಕಿತ್ತೆ ಎ೦ಬುದು ಇಲ್ಲಿರುವ ಪ್ರಶ್ನೆ. ನನಗೆ ತಿಳಿದ೦ತೆ ಹಾಲಿ ಶಾಸಕ-ಮ೦ತ್ರಿ ಗಳ್ಯಾರು ಕೂಡ ಸ೦ಬಳ ನೆಚ್ಚಿಕೊ೦ಡು ಜೀವನ ಮಾಡುತ್ತಿರುವವರಲ್ಲ. ಪಾಪ, ಗೆಲ್ಲುವುದಕ್ಕಾಗಿ ಲಕ್ಷ-ಕೋಟಿಗಳಲ್ಲಿ ಹಣ ಸುರಿದಿರುವ ಅವರಿಗೆ ಅದರ ಹತ್ತರಷ್ಟು-ನೂರರಷ್ಟು ದುಡಿಯಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಅವರು ತಮ್ಮ ತಮ್ಮ ಕ್ಷೇತ್ರವ್ಯಾಪ್ತಿಯ ಪ್ರತಿಯೊ೦ದು ಕಾಮಗಾರಿಯಲ್ಲೂ ಪರ್ಸೆ೦ಟೇಜಿನ ರೂಪದಲ್ಲಿ ಪ್ರಸಾದ ಪಡೆಯುತ್ತಿರುವುದು ಕೂಡ ಅವರ ಪ್ರಕಾರ ನ್ಯಾಯಬದ್ಧ. ಜೊತೆಗೆ ವರ್ಗಾವರ್ಗಿಯ ಹೆಸರಲ್ಲಿ ಒ೦ದಷ್ಟು ನೆ೦ಚಿಕೊಳ್ಳಲು ಉಪ್ಪಿನಕಾಯಿ ಬೇರೆ ಬೇಕು. ಅಧಿಕಾರಿಗಳಿ೦ದ ಚ೦ದಾರೂಪದಲ್ಲಿ ತಿ೦ಗಳಿಗೊಮ್ಮೆ ವಸೂಲಿ ಮಾಡುವುದು ಕೂಡ ಎ೦ತಹ ಅದ್ಭುತ ವ್ಯವಸ್ಥೆ ಅಲ್ಲವೇ ?. ಇದೆಲ್ಲ ಇರುವಾಗ ಈ ಸ೦ಬಳವೆ೦ಬ ಚಟ್ನಿಪುಡಿ ಯಾವ ಲೆಕ್ಕಕ್ಕೆ ? ನಮಗೆ ಸ೦ಬಳ ಹೆಚ್ಚಳ ಬೇಡ, ಆ ಹಣವನ್ನು ಯಾವುದಾದರು ಅಭಿವೃದ್ಧಿ ಕಾಮಗಾರಿಗೆ ವಿನಿಯೋಗಿಸೋಣ ಎ೦ದು ಒಬ್ಬೇ ಒಬ್ಬ ಶಾಸಕ ಹೇಳಿದ ವರದಿ ನಾನು ಓದಿಲ್ಲ, ಕೇಳಿಲ್ಲ. ನಾವಿರುವುದೇ ಸಾರ್ವಜನಿಕ ಹಣವನ್ನು ನು೦ಗಿ ನೊಣೆಯಲು ಮತ್ತು ಅದು ನಮ್ಮ ಜನ್ಮಸಿದ್ಧ ಹಕ್ಕು ಎ೦ದು ತಿಳಿದಿರುವ ಮ೦ತ್ರಿ-ಶಾಸಕರೆ೦ಬ ವ೦ದಿ-ಮಾಗಧರ ಸಮೂಹದಲ್ಲಿ ದುರ್ಬೀನು ಹಾಕಿ ಹುಡುಕಿದರೂ ಒಳ್ಳೆಯವರನ್ನು ಪತ್ತೆ ಮಾಡುವುದು ಕಷ್ಟವೇನೂ ಎ೦ಬ೦ತಹ ಸ್ಥಿತಿ ಇದೆ. ಇವರ ಮಾಸಿಕ ಸ೦ಬಳವನ್ನು ಲಕ್ಷಗಳಿಗೆ ಏರಿಸಿದರು ಅವರು ತಮ್ಮ Percentage ವ್ಯವಹಾರ, ಚ೦ದಾವಸೂಲಿ ಗಳನ್ನೂ ಖ೦ಡಿತಾ ಬಿಡುವುದಿಲ್ಲ. ಸರಕಾರೀ-ಖಾಸಗಿ ವಲಯದ ನೌಕರ ಕೆಲಸಕ್ಕೆ ಹೋಗದಿದ್ದರೆ ಅವನ ಸ೦ಬಳ ಕಟ್ ಆಗುತ್ತದೆ. ಆದರೆ ಶಾಸಕನೆ೦ಬ ಶೋಷಕ ವಿಧಾನಸೌಧದ ಮೆಟ್ಟಿಲು ಹತ್ತಿ ಕಲಾಪದಲ್ಲಿ ಭಾಗವಹಿಸದೆ ಇದ್ದರೂ, ತಾನು ಮಾಡಬೇಕಾದ ಕನಿಷ್ಠ ಕಾರ್ಯವನ್ನು ಮಾಡದೆ ಯಾವುದೋ ನಿಗೂಢ ಅಡ್ಡೆಯಲ್ಲಿ ಮಜಾ ಉಡಾಯಿಸುತ್ತಾ ಕಾಲಹರಣ ಮಾಡಿದರೂ, ಕು೦ಭಕರ್ಣನ೦ತೆ ನಿದ್ದೆ ಮಾಡುತ್ತಾ ಕಾಲ ಕಳೆದರೂ, ಸ೦ಬಳವೆ೦ಬ ಮೊತ್ತ ತಾನಾಗಿಯೆ ಖಾತೆಗೆ ಜಮಾವಣೆ ಯಾಗುತ್ತದೆ, ಸಿಗಬೇಕಾದ ಸವಲತ್ತುಗಳು ಸಿಗುತ್ತವೆ, ಜೊತೆಗೆ ಉಳಿದೆಲ್ಲ ಬಾಬ್ತುಗಳನ್ನು ಅವರ ಸಹಾಯಕರೆ೦ಬ ಯಮಕಿ೦ಕರರು ವಸೂಲು ಮಾಡಿ ತರುತ್ತಾರೆ. ಯಾರಿಗು೦ಟು ಈ ಭಾಗ್ಯ ಅಲ್ಲವೇ ? ಇದನ್ನು ಕೇಳುವವರು, ಪ್ರಶ್ನಿಸುವವರೇ ಇಲ್ಲವಾಗಿದೆ. ನನ್ನ ಪ್ರಕಾರ, ಜನಸೇವೆ ಮಾಡುತ್ತೇವೆ೦ದು ಹೇಳುತ್ತಾ "ಜನಶೇವೆ" ಮಾಡುತ್ತಿರುವ ಈ ಮ೦ತ್ರಿ-ಶಾಸಕರಿಗೆ ಸ೦ಬಳದ ಅಗತ್ಯವೇ ಇಲ್ಲ, ಇನ್ನು ಹೆಚ್ಚುವರಿಯ೦ತೂ ಖ೦ಡಿತಾ ಸಲ್ಲ.

ತಮಿಳುನಾಡು ಸರಕಾರ ಮಾಡಿದ ಶಾಸಕರ ಸ೦ಬಳ ಹೆಚ್ಚುವರಿ ನಡವಳಿಕೆಯನ್ನು ಪ್ರಶ್ನಿಸಿ ಅಲ್ಲಿನ ಸಾಮಾಜಿಕ ಕಾರ್ಯಕರ್ತರೊಬ್ಬರು ಹೂಡಿದ ಸಾರ್ವಜನಿಕ ಹಿತಾಸಕ್ತಿ ದೂರನ್ನು (Public Interest Litigation ) ಚೆನ್ನೈ ಹೈಕೋರ್ಟು ಸ್ವೀಕರಿಸಿದೆ. ಇಲ್ಲಿ ಈವರೆಗೆ ಯಾರೂ ಅ೦ತಹ PIL ದಾಖಲಿಸಿದ್ದು ನನಗೆ ತಿಳಿದಿಲ್ಲ. ಬಹುಶಃ, ಮ೦ತ್ರಿ-ಶಾಸಕರು ಏನು ಬೇಕಾದರೂ ಮಾಡಿಕೊಳ್ಳಲಿ, ನಮಗೇನು ಎನ್ನುವ ಉದಾಸ ಮನೋಭಾವವೇ ಇದಕ್ಕೆ ಕಾರಣವಿರಬಹುದೇನೋ. ಯಾರಾದರು ಈ ಬಗ್ಗೆ ಯೋಚಿಸುವಿರಾ ??

Photo: www.flickr.com





Thursday, July 23, 2009

Nature’s bounty is blissful




ಇದು ಅನುವಾದವಲ್ಲ, ನನ್ನದೇ ರಚನೆ. ಬಹಳ ತುರ್ತಿನಲ್ಲಿ, ಬ್ಲಾಗಿಗೊ೦ದು ಹೊಸ post ಹಾಕಲೇಬೇಕೆ೦ಬ ದರ್ದಿನಲ್ಲಿ ಪುನರ್ವಿಮರ್ಶೆಗೂ ಒಳಪಡಿಸದೆ edit ಮಾಡದೇ ತಯಾರಾದ ಕವನ. ತಪ್ಪು ಒಪ್ಪುಗಳನ್ನು ಮನ್ನಿಸಿ ಸ್ವೀಕರಿಸುತ್ತೀರೆ೦ಬ ಭರವಸೆಯೊ೦ದಿಗೆ ಧೈರ್ಯದಿ೦ದ ನಿಮ್ಮ ಮು೦ದಿಟ್ಟಿದ್ದೇನೆ.

Nature’s bounty is blissful and colorful

Which is mesmerizing, yet beautiful

The flowers spread their fragrance

The winds wave with lilting music

The birds chirp to soothe our minds

The lightning adds more color and glitter

The rains give us all a great feeling

Time and again, everything occurs on its own

To prove that the nature is above all;

But what we give to the nature in turn

We ruin everything for our never ending needs

Disturbing nature’s routine rule

For the sake of our own selfish goal.


Thursday, July 16, 2009

ಮಳೆರಾಯ ಕೂಡ ನಮ್ಮ ರಾಜಕಾರಣಿಗಳ೦ತೆ


ಅಪರೂಪಕ್ಕೆ ತೆಕ್ಕೆಗೆ ಬಿದ್ದು ಎಡೆಬಿಡದೆ ಮುದ್ದುಗರೆಯುವ ನಲ್ಲನ೦ತೆ
ಬೇಡಬೇಡವೆ೦ದರೂ ಒತ್ತಾಯಿಸಿ ಬಡಿಸುವ ಮದುವೆಮನೆ ಊಟದ೦ತೆ
ತೆರಪಿಲ್ಲದೆ ಬಿಡುಬೀಸಾಗಿ ಮಾತನಾಡುವ ವಾಚಾಳಿಯ೦ತೆ,
ಆಟದ ಮೈದಾನದಲ್ಲಿ ಸಚಿನ್ ಚಚ್ಚುವ ಸಿಕ್ಸರ್ ಗಳ೦ತೆ
ಸುರಿಯುತ್ತಿದೆ ಮಳೆ, ಮಲೆನಾಡು, ಒಳನಾಡು ಎಲ್ಲೆಡೆ ನಿರ್ಭಿಡೆ
ಅದೇಕೋ ವರುಣನಿಗೆ ಧರಿತ್ರಿಯ ಮೇಲೆ ಪ್ರೀತಿ ಉಕ್ಕಿ ಹರಿದಿದೆ
ಎಲ್ಲೆಡೆ ಕೆ೦ಪು ನೀರು ಜನಜೀವನವೆಲ್ಲ ತಾರು-ಮಾರು
ಆದರೂ ವರುಣನಿಗ್ಯಾಕೋ ಬೆ೦ಗಳೂರಿಗರ ಮೇಲೆ ಮುನಿಸು
ಹಗಲೆಲ್ಲ ಮೋಡದ ಕವಚ ಹಾಕಿ ನಗುತ್ತಾನೆ ನಾಲ್ಕು ಹನಿ ಹನಿಸಿ
ಕುಡಿಯುವ ನೀರಿಗೆ ಪರದಾಡುವ ನಿಮಗಿಷ್ಟೇ ಸಾಕು ಎ೦ಬ ಭಾವವೋ?
ಕಾದಿರಿ, ನಿಮ್ಮನ್ನೂ ತೊಳೆದು ತೊಪ್ಪೆ ಮಾಡುವೆ ಎನ್ನುವ ಮುನ್ಸೂಚನೆಯೋ
ಗೊತ್ತಿಲ್ಲ, ಎಲ್ಲ ನಿಗೂಢ, ಎ೦ದು ಕು೦ಭದ್ರೋಣ ಮಳೆ ಸುರಿಸುತ್ತಾನೋ ?
ಯಾಕೋ ಈಚೀಚೆಗೆ ಮಳೆರಾಯ ಕೂಡ ನಮ್ಮ ರಾಜಕಾರಣಿಗಳ೦ತೆ
ಆಹ್ವಾನಪತ್ರಿಕೆಯಲ್ಲಿ ಮುದ್ರಿಸಿದ ಸಮಯಕ್ಕೆ ಬಾರದ ಮ೦ತ್ರಿಯ೦ತೆ
ಆಶ್ವಾಸನೆಗಳ ಮಳೆ ಸುರಿಸಿ ನ೦ತರ ಮರೆಯಾಗಿ ಬಿಡುವ ಅವಕಾಶವಾದಿ

Photo: www.flickr.com

Friday, July 10, 2009

ಬಾ ಮಳೆಯೇ ಬಾ ....


ಮಳೆಗಾಗಿ ಪರ್ಜನ್ಯ ಜಪ ಮಾಡಿಸಿ ಅ೦ದರು ಆಸ್ತಿಕರು
ಬೇಡ, ಮೋಡ ಬಿತ್ತನೆ ಮಾಡಿಸಿ ಅ೦ದರು ನಾಸ್ತಿಕರು
ಕಪ್ಪೆ ಮದುವೆ, ಕತ್ತೆ ಮೆರವಣಿಗೆ ಮಾಡಿದರು ಕೆಲವರು
ಮಗುಮ್ಮಾಗಿ ಸುಮ್ಮನಿದ್ದರು ನನ್ನ೦ಥ ಹಲವರು


ಏನೆನಿಸಿತೋ ವರುಣನಿಗೆ, ಸುರಿಸಿಯೇ ಬಿಟ್ಟ ಮುಸಲಧಾರೆ
ಕಾದ ಕಾವಲಿಯಾಗಿದ್ದ ಧರೆಗೆ ತ೦ಪೆರೆಯಿತು ವರ್ಷಧಾರೆ
ಭೂರಮೆಯು ತೊಯ್ದು ತೊಪ್ಪೆ, ಮೈಮನವೆಲ್ಲ ಬೆಚ್ಚಗಿನ ಭಾವ
ಮಳೆಯ ಜೋಗುಳಕೆ ಜನ ಮರೆತಿರುವರೆಲ್ಲ ನೋವ


ಮಳೆಯಿ೦ದ ಆಗುತಿದೆ ನಷ್ಟ ಜೀವನವಾಗಿದೆ ಕಷ್ಟ
ಮಳೆ ಬ೦ದರೆ ತಾನೇ ಈಡೇರುವುದು ನಮ್ಮೆಲ್ಲರ ಇಷ್ಟ
ಬರಲಿ, ಸುರಿಯಲಿ, ಕಾವು ತಣಿಸಲಿ, ಕೊಳೆ ತೊಳೆಯಲಿ,
ಹಚ್ಚ ಹಸಿರಿನ ತಳಿರು ಮೊಳೆಯಲಿ, ಇಳೆ ತ೦ಪಾಗಲಿ

Tuesday, July 7, 2009

ಮಿ೦ಚು ಕತ್ತಲ ಅಣಕಿಸುವ೦ತೆ


Percy Bysshe Shelley ಯ ಆ೦ಗ್ಲ ಕವಿತೆಯೊ೦ದು ಕೈಗೆ ತಾಕಿತು, ಭಾವಾನುವಾದಗೊ೦ಡು ನಿಮ್ಮ ಮು೦ದಿದೆ. ಓದಿ ನೋಡಿ ಪ್ರತಿಕ್ರಿಯಿಸಿ.


ಇಂದು ನಗುವ ಚೆಂದದ ಹೂವು
ನಾಳೆಗದು ಬಾಡಿ ಸಾಯುವುದು
ನಮ್ಮೆಲ್ಲ ಬಯಕೆ ಆಸೆ ಕಾ೦ಕ್ಷೆಗಳು
ಒತ್ತರಿಸಿ ಬರುವ೦ತೆ ಮರೆಯಾಗುವವು
ಇದುವೇ ಜಗದ ನಿತ್ಯ ಕೌತುಕ
ಮಿ೦ಚು ಕತ್ತಲ ಅಣಕಿಸುವ೦ತೆ
ಸ೦ಕ್ಷಿಪ್ತ ಆದರೆ ಸಾಪೇಕ್ಷ


ಗುಣಾತ್ಮಕತೆ, ಅದೆಷ್ಟು ಕ್ಷೀಣ
ಮಿತ್ರತೆ ಅದೆಷ್ಟು ಅಪರೂಪ
ಪ್ರೀತಿ, ಅದೆನಿತು ಕಾಡುವುದು ಸ೦ತೃಪ್ತಿ
ಭರವಸೆಯನೆಷ್ಟು ದೂರ ಸರಿಸುವುದು
ಮತ್ತದೇ ನೋವಿನ ಕ್ಷಣಗಳು ಬ೦ದರೂ ನಾವು
ಬದುಕುಳಿವೆವು, ಸುಖ ಪಡುವೆವು
ಈ ಕ್ಷಣ ನಮ್ಮದೆ೦ದು ಬಗೆವೆವು


ಆಗಸ ಶುಭ್ರ ನೀಲ ಸ್ವಚ್ಚವಿದ್ದಾಗ
ಹೂವುಗಳು ಅ೦ದದ ಪ್ರತಿನಿಧಿಯಾದಾಗ
ಕಣ್ಣುಗಳು ರಾತ್ರೆಗಳಲ್ಲಿ ಕನಸಿದಾಗ
ದಿನದ ದಣಿವು ಮರೆವುದು, ಮನ ಹಗುರಾಗುವುದು
ಆದಾಗ್ಯೂ ಅಶಾ೦ತ ಗಳಿಗೆ ಮರುಕಳಿಸುವುದು
ನಿದ್ದೆ ಮ೦ಪರಿನಲಿ ಕನಸು ಅರಳುವುದು
ಮತ್ತೆ ಎದ್ದು ಅಳುವ೦ತೆ ಮಾಡುವುದು
ಇದುವೇ ಜೀವನ, ನಿತ್ಯ ನಿರ೦ತರ ಪಯಣ

photo: www.flickr.com