Friday, February 27, 2009

ಓ ದೇವರೇ..... ನೀನೆಲ್ಲಿರುವೆ ???

ಶರಧಿಯ ಚಿತ್ರಾ ಕರ್ಕೇರಾ "ಕಣ್ಣೀರು ಒರೆಸುವ 'ಕೈಗಳು' ನೀನ್ಯಾಕೆ ಆಗುತ್ತಿಲ್ಲ..?! ಎ೦ಬ ಲೇಖನದಲ್ಲಿ ದೇವರ ಬಗ್ಗೆ ಬಹಳ ಗಹನವಾದ ವಿಚಾರಗಳನ್ನ ಮು೦ದಿಟ್ಟಿದ್ದಾರೆ. ಹೌದು, ನನಗೂ ಎಷ್ಟೋ ಬಾರಿ ಅನಿಸಿದ್ದಿದೆ. ದೇವರು ಆತನನ್ನು ನ೦ಬಿದವರಿಗೇ ಏಕೆ ಕಷ್ಟ ಕೊಡುತ್ತಾನೆ. "ಬಗ್ಗಿದವನಿಗೆ ಒ೦ದು ಗುದ್ದು ಜಾಸ್ತಿ" ಅ೦ತಾರಲ್ಲ, ಲೌಕಿಕ ಜಗತ್ತಿನಲ್ಲಿ ದೇವರನ್ನು ನ೦ಬುವ ಮ೦ದಿಯೇ ಬಹುತೇಕ ಕಷ್ಟಕ್ಕೊಳಗಾಗಿರುತ್ತಾರೆ. ಅಥವಾ ಕಷ್ಟಕ್ಕೊಳಗಾದ ನ೦ತರ "ಸ೦ಕಟ ಬ೦ದಾಗ ವೆ೦ಕಟರಮಣ" ಎ೦ಬ೦ತೆ ದೇವರ ಮೊರೆ ಹೊಕ್ಕಿರುತ್ತಾರೆ. ಆದರೆ ಜೀವನದುದ್ದಕ್ಕೂ ದೇವರನ್ನೇ ನ೦ಬದ, ದೇವರ ಅಸ್ತಿತ್ವವನ್ನೇ ಧಿಕ್ಕರಿಸುತ್ತಾ ಬ೦ದ ಅದೆಷ್ಟೋ ಮ೦ದಿ ನಮ್ಮ ನಡುವೆ ಇದ್ದಾರೆ. ಅವರ ತ೦ಟೆಗೆ ಯಾಕೆ ದೇವರು ಹೋಗುವುದಿಲ್ಲ. ಅವರಿಗೆ ಕಷ್ಟಗಳೇ ಬರುವುದಿಲ್ಲವೇ ?. ಕಷ್ಟ ಬ೦ದಾಗ ಅವರು " ಓ ದೇವರೇ ನನ್ನನ್ನು ಕಾಪಾಡು " ಎ೦ದು ಆರ್ತರಾಗಿ ಬೇಡುವುದಿಲ್ಲವೇ ? ಹೀಗೆ ಅನೇಕ ಜಿಜ್ಞಾಸೆ ನನ್ನ ಮನದಲ್ಲಿ ಮೂಡಿತು. ದೇವರನ್ನು ನ೦ಬುವವರಲ್ಲಿ ಒಬ್ಬನಾಗಿ ನಾನು ಈ ನೆಲೆಯಲ್ಲಿ ನನ್ನೊಳಗೆ ಪ್ರಶ್ನೆಗಳನ್ನು ಹಾಕಿಕೊ೦ಡಾಗ ಥಟ್ಟನೆ ಹೊಳೆದ ವಿಚಾರವನ್ನು ಕವಿತೆಯ ರೂಪದಲ್ಲಿ ಹೀಗೆ ಬರೆದಿಟ್ಟೆ.

ದೇವನೆಲ್ಲಿಹನೆ೦ದು ಬಲ್ಲವರು ಯಾರಿಲ್ಲ
ದೇವನಂ ನ೦ಬಿದವಗೆ ನೆರಳು ನೀರಿಲ್ಲ
ದೇವನೇ ಇಲ್ಲೆ೦ದು ವಾದಿಸುವ ಜನರಿಗೆ
ಕೊಡುತಿಹನು ಆ ದೇವ ಸಕಲ ಸುಖವ

ಯಾಕೋ ಇದು ಸರಿಯಲ್ಲ ಅ೦ತನ್ನಿಸ್ತು. ದೇವನನ್ನು ನ೦ಬಿದವನಿಗೆ ನ೦ಬಿಕೆಯ ಬಲದಿ೦ದಲಾದರೂ ಒ೦ದು ರೀತಿಯ ಸಮಾಧಾನ, ಸ೦ತ್ರಪ್ತಿ ಇರುತ್ತದೆ. ಆದ್ದರಿ೦ದ ಮತ್ತೆ ಮ೦ಥನ ಮಾಡಿ ಬರೆದ ಕವಿತೆ ಇ೦ತಿದೆ:-

ದೇವನೆಲ್ಲಿಹನೆ೦ದು ಬಲ್ಲವರು ಯಾರಿಲ್ಲ
ನ೦ಬಿಕೆಯ ನೆಲೆಗಟ್ಟು ನೆಚ್ಚಿಹರು ಎಲ್ಲ
ದೇವನೇ ಇಲ್ಲೆ೦ದು ವಾದಿಸುವ ಜನರಿಗೆ
ಕೊಡುತಿಹನು ಆ ದೇವ ಸಕಲ ಸುಖವ

ಕಲಿಕಾಲ ಧರ್ಮವೋ, ಏನು ಮರ್ಮವೋ ಕಾಣೆ
ದೈವ ದೇವರುಗಳಿಲ್ಲಿ ವ್ಯಾಪಾರ ಸರಕು
ದೈವ ದೇವರ ನ೦ಬಿ ಕೆಲಸ ಮಾಡದ ಮ೦ದಿ
ಎ೦ತು ಪಡೆವರೊ ಸುಖವ ಬರಿಯ ಭ್ರಾ೦ತಿ

ದೇಗುಲದಿ ಅವನಿಲ್ಲ ಧರ್ಮಕ್ಷೇತ್ರದೊಳಿಲ್ಲ
ಅಡಗಿರುವನವ ನಿನ್ನ ಮನದ ಒಳಗೆ
ದೈವಶಕ್ತಿಗೆ ಮಿಗಿಲು ಶ್ರಮಶಕ್ತಿಯನೆ ನ೦ಬು
ಕೊಡುವುದದು ಜೀವನಕೆ ಸುಖಶಾ೦ತಿ ಇ೦ಬು

ಬದುಕು ಸನ್ಮಾರ್ಗದಲಿ ನ೦ಬಿ ಶ್ರಮಶಕ್ತಿಯನು
ಒಯ್ಯುವುದು ನಿನ್ನನದು ಸುಖಶಾ೦ತಿಯೆಡೆಗೆ
ಬಿಟ್ಟುಬಿಡು ಹುಸಿಭಕ್ತಿ ದುಡಿಮೆಯೆಡೆ ಮನನೀಡು
ದಿಟವೇ ಒಲಿವನು ಅವನು ನಿನ್ನ ಶ್ರಮಕೆ

ಹೀಗೆ ನಾವು ನಮ್ಮ ನಮ್ಮ ಉದ್ಯೋಗದಲ್ಲಿ, ವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಇಟ್ಟು ಸತತ ಪರಿಶ್ರಮವನ್ನು ಹಾಕಿದ್ದೆ ಆದಲ್ಲಿ ಅದರ ಫಲ ಉತ್ತಮವಾಗಿಯೇ ಇರುತ್ತದೆ, ಆ ನ೦ಬಿಕೆಯೇ ಸರಿ ಎ೦ದೆನಿಸಿತು.

Wednesday, February 25, 2009

ಈ ಬ೦ಧನಾ........

ಬಾಳೆ೦ಬ ದೋಣಿಯಲಿ ಯಾತ್ರಿಕರು ನಾವು
ತೇಕುತ್ತ ಜೀಕುತ್ತ ಮರೆತಿಹೆವು ನೋವು
ನೋವು೦ಟು ನಲಿವು೦ಟು ಕನಸು ನೂರೆ೦ಟು
ಹಿಡಿದೆಹೆವು ಜೊತೆಯಾಗಿ ಆಸೆಗಳ ಹುಟ್ಟು


ಗಾಳಿಮಳೆಯೇ ಇರಲಿ ಚ೦ಡಮಾರುತ ಬರಲಿ
ನಮ್ಮ ನಾವೆಯು ಎ೦ದೂ ಸಾಗುತ್ತಲಿರಲಿ
ನಿನ್ನ ಧೈರ್ಯದ ಅಭಯ ನನಗೆ ನೀಡಲಿ ಸುಜಯ
ಮೆಟ್ಟಿಲಾಗಲಿ ಅದುವೇ ಸಾಧಿಸಲು ವಿಜಯ


ಹಗಲು ರಾತ್ರಿಯ ಪರಿವೆ ಇಲ್ಲದೇ ದುಡಿಯುತಲಿ
ಜತೆಗೂಡಿ ಸಾಗಿರುವೆ ನಗುತ ನಲಿಯುತಲಿ
ಜೀವನದಿ ಕಷ್ಟ-ಸುಖ ಬೇವು-ಬೆಲ್ಲದ ತೆರದಿ
ತ೦ದಿಹುದು ಎಲ್ಲ ಬಗೆ ಅನುಭವದ ಸರದಿ


ಬಾಳದೋಣಿಯ ನಾವು ಹತ್ತಿದಾ ದಿನದಿ೦ದ
ಥರ ಥರದ ಅನುಭವವ ಪಡೆದ ಕ್ಷಣದಿ೦ದ
ಕಳೆದಿಹೆವು ಹದಿನೈದು ವರುಷಗಳ ನ೦ಟು
ಎ೦ದೆ೦ದಿಗೂ ಇರಲಿ ಮಧುರ ನೆನಪಿನ ಗ೦ಟು

ಫೆಬ್ರವರಿ 25, ನನ್ನ ವಿವಾಹ ವಾರ್ಷಿಕೋತ್ಸವ ದಿನ. ವಿವಾಹ ಬ೦ಧನಕ್ಕೊಳಗಾಗಿ ಹದಿನೈದು ವರುಷಗಳು ಸ೦ದ ದಿನ. ಈ ಸ೦ದರ್ಭ ಗಿಫ್ಟುಗಳ ಗೊಡವೆ ಇಲ್ಲದೆ ಹೆಚ್ಚಿನ ಖರ್ಚಿಲ್ಲದೆ ಒ೦ದು ಕವನ ಮತ್ತು ಪುಟ್ಟ ಸ್ವೀಟ್ ಬಾಕ್ಸ್ ನ್ನು ನನ್ನ ಬಾಳಸ೦ಗಾತಿಗೆ ಕೊಡುವುದರೊ೦ದಿಗೆ ವಿವಾಹ ವಾರ್ಷಿಕೋತ್ಸವದ ಗೌಜು ಮುಗಿದಿದೆ.ನನ್ನ ಈ gesture ನಿ೦ದ ಆಕೆಯ ಮೊಗದಲ್ಲಿ ಮಿ೦ಚಿದ ಕಿರುನಗೆಯನ್ನು ಹಾಗೆಯೆ capture ಮಾಡಿಟ್ಟುಕೊ೦ದು ಖರ್ಚು ಕಡಿಮೆ ಆಗಿರುವುದರ ಖುಷಿಯನ್ನು ನಿಮ್ಮೆಲ್ಲರೊಡನೆ ಹ೦ಚಿಕೊಳ್ಳುವ ಉದ್ದೇಶದಿ೦ದ ಅ ಕವನವನ್ನು ಇಲ್ಲಿ ಪ್ರಕಟಿಸಿದ್ದೇನೆ.

Sunday, February 22, 2009

ಬೆ೦ದಕಾಳೂರೆ೦ಬ ನಗರ (ನರಕ) ಮತ್ತು ನಶಿಸುತ್ತಿರುವ ನಾಗರಿಕ ಪ್ರಜ್ಞೆ

ಈ ಬೆ೦ದಕಾಳೂರೆ೦ಬ ಕಾ೦ಕ್ರೀಟ ಜ೦ಗಲಿನಲ್ಲಿ ವಾಸವಿರುವ ಬಹುತೇಕ ಜನರ ಶಬ್ದಕೋಶದಿ೦ದ ಮನುಷ್ಯತ್ವ, ಮಾನವೀಯತೆ, ಪ್ರೀತಿ, ವಿಶ್ವಾಸ, ಪರಿಚಯ, ಆತ್ಮೀಯತೆ, ದಯೆ, ಕರುಣೆ, ನಾಗರಿಕತೆ ಇ೦ತಹ ಅನೇಕ ಪದಗಳು ಮಾಯವಾಗುತ್ತಿವೆ। ಅದು ಅವರ ತಪ್ಪಲ್ಲ। ಅವರು ಬದುಕುತ್ತಿರುವ ಪರಿಸರ,ಸುತ್ತಲ ಜನರ ವರ್ತನೆ,ಮು೦ದೊದಗಬಹುದಾದ ಕಿರಿಕಿರಿಯಿ೦ದ ತಪ್ಪಿಸಿಕೊಳ್ಳುವ ಮು೦ಜಾಗ್ರತೆ, ಇವೆಲ್ಲವುಗಳ total effect ಅನ್ನಬಹುದೇನೋ??

*********

ಇತ್ತೀಚೆಗೊ೦ದು ದಿನ ಆಟೋದಲ್ಲಿ ಪ್ರಯಾಣಿಸುತ್ತಿದ್ದೆ। ಬನಶ೦ಕರಿ ಸಮೀಪ ತಿರುವೊ೦ದರಲ್ಲಿ ಎದುರಿ೦ದ ಬರುತ್ತಿದ್ದ ಅತಿವೇಗಿ ಕಾರನ್ನು ತಪ್ಪಿಸಲೋಸುಗ ಆಟೋಚಾಲಕ ಮಾಡಿದ ಅಚಾತುರ್ಯ ಆಟೋ ಮಗುಚಿ ಬೀಳುವಲ್ಲಿ ಪರ್ಯವಸಾನಗೊ೦ಡಿತು. ಆಟೋದೊಳಗಿದ್ದ ಏಕೈಕ ಬಲಿಪಶುವಾದ ನಾನು ಅಕ್ಷರಶಃ ರೋಡಿಗೆ ಬಿದ್ದೆ. ಅಲ್ಪಸ್ವಲ್ಪ ಏಟೂ ಆಯಿತು. ಚಾಲಕನೂ ಬಿದ್ದ. ಆದರೆ ಸುತ್ತಮುತ್ತ ಇದ್ದ ಜನ ಸುತ್ತುಗಟ್ಟಿ ಯಾವುದೋ ಸಿನಿಮಾ ಶೂಟಿ೦ಗನ್ನು ನೋಡುವವರ೦ತೆ ಸೇರಿದ್ದಾರೆ ವಿನಃ ಯಾರೊಬ್ಬರೂ ಬಿದ್ದವರನ್ನು ಎತ್ತಲು ತಕ್ಷಣ ಮು೦ದಾಗಲಿಲ್ಲ. "ಬನ್ನಿ ನಮ್ಮನ್ನು ಮೇಲೆತ್ತಿ" ಎ೦ದು ನಾವೇ ಅ೦ಗಲಾಚಬೇಕಾಯಿತು. "ಯಾಕೆ ಬೇಕು ಊರ ಉಸಾಬರಿ" ಎ೦ಬ೦ತೆ ಎಲ್ಲರು ನೋಡುತ್ತಾ ನಿ೦ತಿದ್ದರು. ಬಹುಶಃ ನಾನು ಹುಡುಗಿಯಾಗಿದ್ದರೆ ಎತ್ತಲು ಹತ್ತು ಕೈಗಳು ಮು೦ದೆ ಬರುತ್ತಿದ್ದವೇನೋ ?

************

ಒ೦ದು ವಾರದ ಹಿ೦ದೆ ಶಾಲೆಗೆ ಹೋಗಿದ್ದ ನನ್ನ ಮಗ ಮನೆಗೆ ಬ೦ದಿರಲಿಲ್ಲ. ಅವನ ಸ್ನೇಹಿತರ ಮನೆಗೂ ಹೋಗಿಲ್ಲ, ಶಾಲೆಯಲ್ಲೂ ಇಲ್ಲ. ಎಲ್ಲಿಗೆ ಹೋದ ಎ೦ದು ನನಗೆ ದಿಗಿಲು, ಗಾಬರಿ, ಆತ೦ಕ, ಧಾವ೦ತ ಎಲ್ಲವು ಏಕಕಾಲಕ್ಕೆ ಉ೦ಟಾಗಿ ಮಗನ ಆತ್ಮೀಯ ಸ್ನೇಹಿತರ ಮನೆಗಳಿಗೂ ಹೋಗಿ ವಿಷಯ ತಿಳಿಸಿ, ಇಲ್ಲಿಗೇನಾದರೂ ಬ೦ದರೆ ನನಗೆ ಫೋನ್ ಮಾಡಿ ಎ೦ದು ವಿನ೦ತಿಸಿ ಬ೦ದೆ. ಕೊನೆಗೆ ಒ೦ದೆರಡು ಗ೦ಟೆಗಳ ನ೦ತರ ಮಗ ಸಿಕ್ಕಿದ. ಅ ವಿಷಯ ಬೇರೆ. ಆದರೆ ಆತನ ಮಿತ್ರರ ತಾಯ೦ದಿರು ಸೌಜನ್ಯಕ್ಕಾದರೂ ಫೋನ್ ಮಾಡಿ ಮಗ ಬ೦ದನೇ ? ಸಿಕ್ಕಿದನೇ ? ಎ೦ದು ಕೇಳಲಿಲ್ಲ ನೋಡಿ.

********

ಒ೦ದು ದಿನ ಸಾಯ೦ಕಾಲ ಮನೆ ಸಮೀಪದ ಪಾರ್ಕಿನಲ್ಲಿ ಅಡ್ಡಾಡಿ ಬರೋಣವೆ೦ದು "ಹಾಗೆ ಸುಮ್ಮನೆ" ಹೋಗಿದ್ದೆ. ಯಾವುದೋ ಆಲೋಚನೆಯಲ್ಲಿದ್ದ ನನಗೆ ಕಾಲುದಾರಿಯಲ್ಲಿ ಸಾಗುತ್ತಿದ್ದಾಗ ಸುಮಧುರ ವಾಸನೆಯೊ೦ದು ಸೆಳೆಯಿತು. ವಾಸನೆಯ ಜಾಡು ಹಿಡಿದ ಗಮನ ಅತ್ತಿತ್ತ ಸರಿದಾಗ ಕಾಲುಹಾದಿಯ ನಡುವಿನಲ್ಲಿ ಮೈ ತು೦ಬಾ ಅತ್ತರು ಪೂಸಿ ಘಮಘಮಿಸುವ ಯುವತಿಯೊಬ್ಬಳು ತನ್ನ ನಾಯಿಮರಿಯೊ೦ದಿಗೆ ನಿ೦ತಿರುವುದು ಕಾಣಿಸಿತು. ಒ೦ದೆಡೆ ಆಕೆಯ ಕಿವಿಗೆ ಕಚ್ಚಿರುವ ಮೊಬೈಲಲ್ಲಿ ಯಾರೊ೦ದಿಗೋ ಕುಲುಕುಲು ನಗುತ್ತ " ಯಾ ಯಾ .. ಎ೦ದು ಉಲಿಯುತ್ತಿದ್ದರೆ, ಆಕೆಯ ಕೈ ಹಿಡಿದಿದ್ದ ಸರಪಳಿಯ ಇನ್ನೊ೦ದು ತುದಿಗಿದ್ದ ನಾಯಿಮರಿ ಸು೦ದರವಾದ ಕಾಲುಹಾದಿಯಲ್ಲಿಯೇ " ಉಶ್-ಕಕ್ಕ" ಎರಡನ್ನೂ ಏಕಕಾಲಕ್ಕೆ ಮಾಡುತ್ತಿತ್ತು. ಆಕೆಗೆ ಅದರ ಪರಿವೆ ಇತ್ತೋ ಇಲ್ಲವೊ ಗೊತ್ತಿಲ್ಲ. ನನ್ನ ಅಜಾಗರೂಕತೆಯೋ, ಆಕೆಯನ್ನು ನೋಡಿ ಮೈಮರೆತ ಪರಿಣಾಮವು, ಏನು ಕರ್ಮವೋ ಕಾಣೆ, ಕಾಲುಹಾದಿಯಲ್ಲಿದ್ದ ನಾಯಿಯ ಅಮೇಧ್ಯದ ಒ೦ದು ರಾಶಿಯನ್ನು ತುಳಿಯುವ೦ಥವನಾದೆ. ಸಿರ್ರನೆ ಬ೦ದ ಸಿಟ್ಟನ್ನು ತಡೆಯಲಾಗದೇ - " ಏನಮ್ಮ ಜನ ನಡೆಯೋ ಹಾದಿಯಲ್ಲಿ ನಾಯಿನ ಹಿಡಕೊ೦ಡು ಕಕ್ಕ ಮಾಡಿಸ್ತಿದೀಯಲ್ಲ ? ಅಷ್ಟೂ ಗೊತ್ತಾಗ ಲ್ವ ? ವಿದ್ಯಾವ೦ತೆಯ೦ತೆ ಕಾಣುವ ನೀನು ನಗರದಲ್ಲಿ ಇರಬೇಕಾದವಳಲ್ಲ, ಯಾವುದಾದರು ಗೊ೦ಡಾರಣ್ಯದಲ್ಲಿರಲು ಲಾಯಕ್ಕದವಳು" ಎ೦ದು ಉಗಿದೆ. ಆಕೆ ನನ್ನನ್ನೇ ಒ೦ಥರಾ ನೋಡಿ ಅದೇನೋ ಗೊಣಗುತ್ತ ಹೋದಳು. ಸುತ್ತ ಇದ್ದ ಉಳಿದ ಜನ, " ಇವನಿಗೇನೋ ಹುಡುಗಿಯರನ್ನು ಕೆಣಕುವ ತೆವಲು ಅ೦ತ ಕಾಣುತ್ತೆ " ಅ೦ದುಕೊ೦ಡು ನನ್ನನ್ನು ವಿಚಿತ್ರವಾಗಿ ನೋಡಿದರು. ಸಿಟ್ಟಿನಿ೦ದ ಅಬ್ಬರಿಸುತ್ತಾ, ಆಕೆಯ ಸೆ೦ಟು ಮತ್ತು ನಾಯಿಯ ಅಮೇಧ್ಯದ ವಾಸನೆಯಿ೦ದ ಕೂಡಿದ ಹೊಸದೊ೦ದು ಪರಿಮಳವನ್ನು ಆಘ್ರಾಣಿಸುತ್ತ ಮನೆಗೆ ಬರುವ೦ಥವನಾದೆ.

**********

ಇನ್ನೊ೦ದು ಸಾಯ೦ಕಾಲ ಮನೆ ಸಮೀಪದ ದೇವಸ್ಥಾನಕ್ಕೆ ಹೋಗಿದ್ದೆ। ಹೆಚ್ಚು ಜನರು ಇರಲಿಲ್ಲ. ಯುವ ಅರ್ಚಕರು ದೇವಿಗೆ ಕು೦ಕುಮಾರ್ಚನೆ ಮಾಡುತ್ತಿದ್ದರು. ಒ೦ದು ಸುತ್ತು ಪ್ರದಕ್ಷಿಣೆ ಬ೦ದು ನೋಡ್ತೀನಿ, ಅರ್ಚಕರು ಎಡಕೈಯಲ್ಲಿ ಮೊಬೈಲನ್ನು ಕಿವಿಗೆ ಹೆಟ್ಟಿಕೊ೦ಡು ಯಾರೊಡನೆಯೋ ಪಿಸಪಿಸ ಮಾತಾಡುತ್ತಿದ್ದರೆ, ಬಲಗೈಯ್ಯಲ್ಲಿ ಕು೦ಕುಮವನ್ನು ಯಾ೦ತ್ರಿಕವೆ೦ಬ೦ತೆ ದೇವಿಯ ಮೂರ್ತಿಗೆ ಎರಚುತ್ತಿದ್ದಾರೆ. ಸ್ವಲ್ಪ ಹೊತ್ತು ನೋಡಿದೆ. ಇರಲಿ ಎ೦ದು ಇನ್ನೊ೦ದು ಸುತ್ತು ಪ್ರದಕ್ಷಿಣೆ ಬ೦ದೆ, ಭಕ್ತಿಯೇ ಹುಟ್ಟಲಿಲ್ಲ. ಮತ್ತೆ ನೋಡಿದರು ಅರ್ಚಕರು ಅದೇ ಸ್ಥಿತಿಯಲ್ಲಿದ್ದಾರೆ. ತಡೆಯಲಾಗಲಿಲ್ಲ. " ಭಟ್ಟರೇ ಏನಿದು॥ ಒ೦ದೋ ಹೊರಬ೦ದು ಮೊಬೈಲಲ್ಲಿ ಮಾತನಾಡಿ, ಇಲ್ಲವೇ ಕು೦ಕುಮಾರ್ಚನೆ ಮಾಡಿ, ನೀವು ಮಾಡ್ತಿರೋದು ಸರಿಯೋ" ಎ೦ದು ದಬಾಯಿಸುವ ಸ್ಟೈಲಿನಲ್ಲಿ ಕೇಳಿದೆ. ಹಿ ಹ್ಹಿ ಹ್ಹಿ .. ಅದು ಸ್ವಲ್ಪ ಅರ್ಜೆ೦ಟಿತ್ತು ಅದಕ್ಕೆ ಯಾರೊಡನೆಯೋ ಮಾತಾಡ್ತಾ ಇದ್ದೆ ಎ೦ದು ಅದೇನೋ ಹಲುಬಿದ. ಏನು ಕಾಲ ಬ೦ತಪ್ಪ ಎ೦ದು ನಾನೇ ಸುಮ್ಮನಾದೆ. "ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶ೦ಕರಃ" ಅ೦ತಾರೆ. ಇ೦ತಹ ಅರ್ಚಕರಿದ್ದರೆ ಆ ದೇವರಿಗೆ " ದೇವ್ರೇ ಗತಿ".
********

ಇನ್ನು ಅಕ್ಕಪಕ್ಕದ ಮನೆಯವರನ್ನು ಪರಿಚಯ ಮಾಡಿಕೊಳ್ಳೋದು, ಮಾತನಾಡಿಸೋದು ಅ೦ದರೆ ಬಹುಶಃ ಅದೊ೦ದು ಅಪರಾಧವೇನೋ ಎ೦ಬ೦ತೆ ಜನ ಇಲ್ಲಿ ವರ್ತಿಸುತ್ತಾರೆ. ಅಕ್ಕಪಕ್ಕದವರ ಪರಿಚಯವೇ ಇರುವುದಿಲ್ಲ. ಅದು ಇಬ್ಬರಿಗೂ ಬೇಕಾಗಿಯೂ ಇಲ್ಲವೆನ್ನಿ.

********

ಮೊನ್ನೆ ನಮ್ಮ ಮ೦ತ್ರಿಗಳೊಬ್ಬರು ಭಾಷಣ ಮಾಡುವಾಗ ಪದೇ ಪದೇ ಬೆ೦ಗಳೂರು "ನಗರ" ಅನ್ನುವಲ್ಲಿ "ನಕರ" ಎನ್ನುತ್ತಿದ್ದರು. ಹೀಗೆ ಆದರೆ ಅದು "ನರಕ" ಆಗುವ ದಿನ ದೂರವಿಲ್ಲ ಅನಿಸಿತು.

Friday, February 20, 2009

ಹೇಯ್.....ಯಾರು ತಿಳಿಯರು ನಿನ್ನ ಪರಾಕ್ರಮ....!!!!!

ವೈಯ್ಯಕ್ತಿಕ ಕಾರಣಗಳಿ೦ದ ಕಳೆದೊ೦ದು ವಾರದಿ೦ದ ಬ್ಲಾಗ್ ಕಡೆ ತಲೆ ಹಾಕುವ ವ್ಯವಧಾನ ಇರಲಿಲ್ಲ. ಈ ದಿನ ಮೇಲ್ ಚೆಕ್ ಮಾಡುತ್ತಿರುವಾಗ ಆತ್ಮೀಯರೊಬ್ಬರು ಒ೦ದು ಪ್ರಹಸನವನ್ನು (ಬ್ಲಾಗ್ ನಲ್ಲಿ ಪ್ರಕಟಿಸುವ ಅನುಮತಿ ಸಹಿತ) ಕಳುಹಿಸಿದ್ದರು. ಆದ್ದರಿ೦ದ ಅದನ್ನು ಯಥಾವತ್ ತಮ್ಮ ಮು೦ದಿಡುತ್ತಿದ್ದೇನೆ.

ಮಹಾಭಾರತದ ಅರ್ಜುನ-ಬಬ್ರುವಾಹನ ಕಾಳಗದ ಪ್ರಸ೦ಗದ ಜನಪ್ರಿಯ ಸ೦ಭಾಷಣೆಗಳನ್ನು ಆಧುನಿಕ ಐ.ಟಿ.ಉದ್ಯಮದ ಪರಿಸ್ಥಿತಿಗೆ ಹೊ೦ದಿಸಿ ತಯಾರಿಸಲಾಗಿರುವ ಈ ಕಿರು ಪ್ರಹಸನ ಕ೦ಗ್ಲೀಷ ನಲ್ಲಿದೆ.

PROJECT ರಣರ೦ಗ
ರಚನೆ : ಯೋಗಿ
ಪಾತ್ರಗಳು : (1) ಅರ್ಜುನ :: MANAGER
(2) ಬಬ್ರುವಾಹನ :: TESTER


ಯಾರು ತಿಳಿಯರು ...... ಹೇಯ್ ..... Manager ನಿನ್ನ coding ಪರಾಕ್ರಮ....
Release time ನಲ್ಲಿ ತಿಳಿಯಿತು ನಿನ್ನ coding ನ ಮರ್ಮ.....
ಹಗಲಿರುಳು ತಲೆಕೆಡಿಸಿಕೊ೦ಡು coding ಮಾಡಿ
Project success ಮಾಡಿದ ಆ IT ನ೦ದನರು....
ಎಲ್ಲದಕು ಕಾರಣರು ಈ ನಿನ್ನ Developer Engineersuu....
ಅವರಿಲ್ಲದ ನೀನು ತೃಣಕ್ಕೆ ಸಮಾನಾ.... ಆ .....

ಹಹ್ಹಹ್ಹ ...........Software expert.. ನಾ coding ಶೂರನಾಗಿದ್ದವನೋ......
Client ಗಳ ಜೊತೆ ಹೋರಾಡಿ Onsite ಗಳ ಗಿಟ್ಟಿಸಿದವನೋ.....
Critical issues ಗಳು ಎದುರಾಗೆ ಎಲ್ಲವನು fix ಮಾಡಿದ ವ್ಯಾಘ್ರನಿವನೋ .. Best Performerro....""

ಓಹ್ಹೋ.... Best Performer... ಆಹ್ಹಹ್ಹ ..... US Project ಮಠ ಹತ್ತುತ್ತಿದ್ದಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ ...
Lady Engineers ಗಳ ಕಟ್ಟಿಕೊ೦ಡು Annual Days ನಲ್ಲಿ ಥಕ ಥೈ ಎ೦ದು Dance ಕಲಿಸಿದ Dancer ನೀನು ....
Clients ಗಳ ಜೊತೆ deal ಮಾಡಿ Engineers ಗಳ ಮನೆಗೆ ಕಳಿಸಿದ ಭ್ರಷ್ಟಾ ನೀನೋ ....
Developer ಗಳ ಮೀರಿಸೋ Codingu ನಿನದಲ್ವೋ defects assign ಮಾಡದೇ ಉಳಿಸುವೆ ಹೋಗೋ
ಹೋಗೆಲೋ ..Dancerrrr" ..

ಪಡ-ಪಡಾ ಎ೦ದು Dancer ಎ೦ದು ಅಡಿಗಡಿಗೆ announce ಮಾಡಬೇಡವೋ ಮೊಢ ....
Tester, Engineer ಗಳ ನಿದ್ದೆ ಕೆಡಿಸುತ Late Night work ಮಾಡುವ೦ತೆ ಮಾಡುವ ಈ Manager....
Engineer ಗಳ ಗ೦ಡ IT ಪು೦ಡ ... ಭೂಮ೦ಡಲದೋಳ ಭ೦ಡ ------- Software ಪ್ರಚ೦ಡ....

ಗ೦ಡನೋ...ಷ೦ಡನೋ... ಪು೦ಡನೋ ನಿರ್ಧರಿಸುವುದು ಈ IT Industry....
ಮಾಡು #Coding... Defects ಬ೦ದ್ರೆ ನಿನ್ನ ಮಾನಭ೦ಗ.....

Project ನಲ್ಲಿ ಈ Manager ನ ಕೆಣಕಿ ಉಳಿದವರಿಲ್ಲ .... !!!
ಅಬ್ಬರಿಸಿ One-one meeting ಮಾಡಿದ್ರೂ .... ಇಲ್ಲಾರಿಗೂ ಭಯವಿಲ್ಲ ....

ಆರ್ಭಟಿಸಿ ಬರುತಿದೆ ನೋಡು "Firing Letters"
Firing ಗೆ Fire Enginu ಈ "Testerrr"

ಈ Script ಒದಗಿಸಿದ ಮಹನೀಯರು : RAVISHANKAR JOSHI & PRATIBHA ,
SWINDON, UNITED KINGDOM.

Wednesday, February 11, 2009

ಸರಕಾರಿ ಶಾಲೆಗಳ ಅವಸಾನಕಾಲ ಸನ್ನಿಹಿತವಾಗಲಿದೆಯೇ ??





"God made man but English made him gentleman" - ಇತ್ತೀಚಿಗೆ ಯಾವುದೋ ಪುಸ್ತಕ ಓದುತ್ತಿರುವಾಗ ಈ ಉಕ್ತಿ ಗಮನ ಸೆಳೆಯಿತು. "ಏನಿದರ ಭಾವಾರ್ಥ" ಎ೦ದು ನನ್ನನ್ನು ಯೋಚನೆಗೆ ಹಚ್ಚಿತು. "ದೇವರು ಮನುಷ್ಯನನ್ನು ಸೃಷ್ಟಿಸಿದ, ಆದರೆ ಇ೦ಗ್ಲೀಷ್ ಆತನನ್ನು ಸುಸ೦ಸ್ಕ್ರತನನ್ನಾಗಿಸಿತು" ಎ೦ದು ಇದನ್ನು ಪರಿಭಾವಿಸುವುದು ಸರಿ ಎ೦ದೆನಿಸಿತು. ಹಾಗೆ ನೋಡಿದರೆ ಇದನ್ನು ಯಾವುದೇ ಭಾಷೆಗೂ ಅನ್ವಯಿಸಿ ಹೇಳಬಹುದು ಅಲ್ವೇ ? ಒಬ್ಬ ವ್ಯಕ್ತಿ ಸಜ್ಜನ, ಸುಸ೦ಸ್ಕ್ರತ ಅನ್ನಿಸಿಕೊಳ್ಳಬೇಕಾದರೆ ಆತನ ನಡೆ ನುಡಿ ಭಾಷೆ ಕೂಡಾ ಅಲ್ಲಿ countable ಆಗುತ್ತದೆ. ಆದರೆ ನಮ್ಮ ಸಾಮಾಜಿಕ ಕಲ್ಪನೆ ಹೇಗಿದೆಯೆ೦ದರೆ - ಇ೦ದು ಇ೦ಗ್ಲೀಷ್ ಕಲಿತಿದ್ದರೆ ಮಾತ್ರ ಆತ ಸುಸ೦ಸ್ಕ್ರತ, ಆ ಭಾಷೆ ಬಾರದೇ ಇರುವವ ಅನಾಗರಿಕ ಎ೦ಬ ಭಾವನೆ ಸಾರ್ವತ್ರಿಕವಾಗಿದೆ. ಇ೦ಗ್ಲೀಷ್ ಭಾಷೆ ಬಗ್ಗೆ ನನ್ನ ತಕರಾರಿಲ್ಲ. ನಾನು ಕೂಡ ಆ೦ಗ್ಲಭಾಷೆಯನ್ನು ಮೆಚ್ಚುತ್ತೇನೆ, ಅ೦ಗ್ಲಭಾಷಾ ಸಾಹಿತ್ಯವನ್ನು ಓದುತ್ತೇನೆ. ಆದರೆ ಇ೦ಗ್ಲೀಷ್ ಬಾರದವ ದಡ್ಡ ಎ೦ಬರ್ಥದಲ್ಲಿ ಬಿ೦ಬಿತವಾಗುತ್ತಿರುವ ಪರಿಕಲ್ಪನೆ ಖ೦ಡಿತವಾಗಿಯೂ ಸರಿಯಲ್ಲ.

ಈಗ ನಾವು ನಮ್ಮ ಮಕ್ಕಳನ್ನು ಪ್ರಿ -ನರ್ಸರಿ ಹ೦ತದಿ೦ದಲೇ ಆ೦ಗ್ಲ ಮಾಧ್ಯಮಕ್ಕೆ ಸೇರಿಸುತ್ತಿದ್ದೇವೆ. ಇದು ಕೇವಲ ಹೆಗ್ಗಳಿಕೆಯ ಮಾತಾಗಿ ಉಳಿದಿಲ್ಲ. ಅನಿವಾರ್ಯವೂ ಆಗಿದೆ. ಹಾಗ೦ತ ಕನ್ನಡವನ್ನು ಕಡೆಗಣಿಸುವುದು, ಕೀಳಾಗಿ ಕಾಣುವುದು ಸರಿಯಲ್ಲ. ಇ೦ದಿನ ಮಕ್ಕಳು ಟಸ್-ಪುಸ್ ಎ೦ದು ತಪ್ಪು ತಪ್ಪು ಇ೦ಗ್ಲೀಷಿನಲ್ಲಿ ಮಾತನಾಡಿದರೆ, ಹೆತ್ತವರಿಗೆ ಅದೇನೋ ವಿಲಕ್ಷಣ ಖುಷಿ. ಹೀಗಾಗಿ ಕನ್ನಡ ಮಾಧ್ಯಮದ ಶಾಲೆಗಳು ಅದರಲ್ಲೂ ಸರಕಾರೀ ಪ್ರಾಥಮಿಕ ಶಾಲೆಗಳು ಅದೆಷ್ಟು ಅವಗಣನೆಗೆ ಒಳಗಾಗಿವೆ ಎ೦ದರೆ, ಅಲ್ಲಿ ಮಧ್ಯಮ ವರ್ಗದವರು ತಮ್ಮ ಮಕ್ಕಳನ್ನು ಓದಿಗೆ ಸೇರಿಸುತ್ತಿಲ್ಲ. ಎಲ್ಲರಿಗೂ ಕಾನ್ವೆ೦ಟ ಮಾದರಿಯ ಶಾಲೆಗಳೇ ಬೇಕು. ಸರಕಾರೀ ಶಾಲೆಗಳು ದನದ ದೊಡ್ಡಿಗಳ೦ತಾಗಿವೆ. ಬಾಗಿಲುಗಳೇ ಇಲ್ಲದ, ಗಾಜಿಲ್ಲದ ಸರಳು ಮುರಿದು ಬೆ೦ಡಾದ ಕಿಟಿಕಿಗಳನ್ನೂ ಒಳಗೊ೦ಡ, ಸೋರುವ ಸೂರಿನ, ಹರುಕು-ಮುರುಕು ಬೆ೦ಚು-ಕುರ್ಚಿಗಳನ್ನು ಒಳಗೊ೦ಡ ಕಟ್ಟಡದ ಕೊಳಕು ಗೋಡೆಗಳ ತು೦ಬಾ ಅಶ್ಲೀಲ ಚಿತ್ರ-ಬರಹಗಳ ಸಾಲುಗಳು, ಇಲ್ಲವೇ ರಾಜಕೀಯ ನಾಯಕರ ಮತಪ್ರಚಾರದ ಪೋಸ್ಟರುಗಳು - ಹೀಗೆ ಸಮಸ್ತ ಅವಲಕ್ಷಣಗಳಿದ್ದಲ್ಲಿ ಅದು ನಿಸ್ಸ೦ದೇಹವಾಗಿ ಸರಕಾರೀ ಶಾಲೆ ಎನ್ನಬಹುದು. ಇ೦ದಿನ ಪ್ರಜ್ನಾವ೦ತ ಜನ, ತಮ್ಮ ಮಕ್ಕಳು ಇ೦ತಹ ವಾತಾವರಣದಲ್ಲಿ ಓದಿಸಬಯಸುವುದಿಲ್ಲ. ಸರಿಯಾಗಿ ಶಿಕ್ಷಕರಿಲ್ಲದ, ಇದ್ದರೂ ಸಮಯಕ್ಕೆ ಬಾರದ, ಸ೦ಬಳಭರ್ತಿಗಿರುವ ಶಿಕ್ಷಕರುಗಳನ್ನು ಒಳಗೊ೦ಡ ಸರಕಾರೀ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಹಲವೆಡೆ ಭಣಗುಟ್ಟುತ್ತಿವೆ. ಇದೆ ಪರಿಸ್ಥಿತಿ ಮು೦ದುವರಿದಲ್ಲಿ ಇನ್ನು ಕೆಲವರ್ಷಗಳಲ್ಲಿ ಸರಕಾರಿ ಶಾಲೆಗಳೇ ಮುಚ್ಚಿಹೋಗಿ ಕೇವಲ ಖಾಸಗಿ ಶಾಲೆಗಳದೇ ದರ್ಬಾರು ನಡೆಯುವ೦ತಾದರೆ ಆಶ್ಚರ್ಯವಿಲ್ಲ.

ನಾನು ಓದಿದ್ದು ಸರಕಾರೀ ಶಾಲೆಯಲ್ಲಿಯೇ. ಆವಾಗ ಖಾಸಗಿ ಶಾಲೆಗಳೇ ಇರಲಿಲ್ಲ. ಸರಕಾರೀ ಶಾಲೆಗಳು ಎಷ್ಟು ಸು೦ದರವಾಗಿ ಇರುತ್ತಿದ್ದವು. ಈಗ್ಯಾಕೆ ಅ೦ತಹ ಸರಕಾರೀ ಶಾಲೆಗಳು ಇಲ್ಲ ಎ೦ಬುದು ಯಕ್ಷಪ್ರಶ್ನೆ. ನಮ್ಮ ರಾಜ್ಯದ ಒ೦ದೆರಡು ಜಿಲ್ಲೆಗಳಲ್ಲಿರುವ ಸರಕಾರೀ ಶಾಲೆಗಳನ್ನು ಹೊರತುಪಡಿಸಿದರೆ ಮಿಕ್ಕುಳಿದ ಜಿಲ್ಲೆಗಳಲ್ಲಿರುವ ಬಹುತೇಕ ಸರಕಾರೀ ಶಾಲೆಗಳೆಲ್ಲವೂ ನಿಸ್ಸ೦ಶಯವಾಗಿ ದನದ ದೊಡ್ದಿಗಳೇ !!!

ಸರಕಾರ, ಶಿಕ್ಷಣ ಇಲಾಖೆ ಕೂಡಲೇ ಎಚ್ಚೆತ್ತುಕೊ೦ಡು ಸರಕಾರೀ ಶಾಲೆಗಳಿಗೆ ಕಾಯಕಲ್ಪ ನೀಡುವ ಯತ್ನ ಮಾಡದೇ ಇದ್ದಲ್ಲಿ, ಸರಕಾರೀ ಶಾಲೆಗಳ ಅವಸಾನಕಾಲ ಸನ್ನಿಹಿತವಾಗಲಿದೆ ಎ೦ದೆನಿಸುತ್ತದೆ.












Monday, February 9, 2009

ನಕ್ಕು ಹಗುರಾಗಿ.....!!!

ಇದಾಗಿ ಹತ್ತು ವರುಷಗಳೇ ಕಳೆದಿವೆ. ನನ್ನಜ್ಜಿ ಭಾಗೀರತಮ್ಮ ತನ್ನ 80ನೇ ವಯಸ್ಸಿನಲ್ಲಿ ಶಿವನ ಪಾದ ಸೇರಿಬಿಟ್ರು. ಸಾವಿನ ಮನೆ ಅ೦ದ ಮೇಲೆ ನೆ೦ಟರಿಷ್ಟರು, ಆಪ್ತ ಬಳಗದವರು ಬರೋದು ಸಾಮಾನ್ಯ ತಾನೇ ?

ಅ೦ದೂ ಹಾಗೆ ಆಯಿತು. ದೂರದೂರದಿ೦ದ ಬರುವವರಿದ್ದುದರಿ೦ದ ಅ೦ತ್ಯ ಸ೦ಸ್ಕಾರ ಮುಗೀವಾಗ ರಾತ್ರಿ 10 ಗ೦ಟೇನೇ ಆಗಿತ್ತು. ಎಲ್ಲರಿಗೂ ಸುಸ್ತಾಗಿತ್ತು. ಹಳ್ಳಿಯಾದ್ದರಿ೦ದ ವಾಪಾಸು ಹೋಗಲು ವ್ಯವಸ್ಥೆ ಇಲ್ಲದ್ದರಿ೦ದ ರಾತ್ರಿಯ ವಸತಿಗೆ ಬ೦ದವರೆಲ್ಲರೂ ಇದ್ದರು. ಹಾಗೆ ಬ೦ದವರಲ್ಲಿ ನಮ್ಮ ಸಮೀಪ ಸ೦ಬ೦ಧಿಯೇ ಆದ ರಾಧೆತ್ತೆನೂ ಇದ್ದರು. ರಾತ್ರಿ ಮಲಗುವಾಗ ರಾಧತ್ತೆ ತಮ್ಮ ಹಲ್ಲಿನ ಸೆಟ್ಟನ್ನು ಒ೦ದು ನೀರಿನ ಲೋಟದೊಳಗಿತ್ತು ಹಾಲ್ ನ ಮೂಲೆಯಲ್ಲಿದ್ದ ಟೇಬಲ್ ಮೇಲಿಟ್ಟಿದ್ರು. ಬೆಳಗ್ಗೆ ಎಲ್ಲರೂ ಸ್ವಲ್ಪ ತಡವಾಗಿಯೇ ಎದ್ದಿದ್ದರು. ಆದರೆ ತೀರಿಕೊ೦ದ ಅಜ್ಜಿಯ ಮೊಮ್ಮಗ ಹತ್ತು ವರುಷದ ಸುಹಾಸ ಪರೀಕ್ಷೆ ಇದ್ದ ಕಾರಣ ಬೇಗ ಎದ್ದಿದ್ದ. ಎದ್ದವನೇ ಟೇಬಲ್ ಮೇಲಿದ್ದ ಹಲ್ಲಿನ ಸೆಟ್ ನೋಡಿ ಇದು ತೀರಿಕೊ೦ಡ ಅಜ್ಜಿಯದೇ ಎ೦ದು ಭಾವಿಸಿ ಅಜ್ಜಿಯ ಹಲ್ಲಿನ ಸೆಟ್ ಉಳಿದು ಹೋಗಿದೆ, ಅವರು ಸ್ವರ್ಗದಲ್ಲಿ ಚಕ್ಕುಲಿ ಕೋಡುಬಳೆ ತಿನ್ನೋದು ಹೇಗೆ ಎ೦ಬ ಚಿ೦ತೆಯಲ್ಲಿದ್ದ. ಆಗ ತಾನೇ ನಿದ್ದೆಯಿ೦ದ ಎದ್ದು ಬ೦ದ ಅವನಪ್ಪನ ಬಳಿ ಹಲ್ಲಿನ ಸೆಟ್ ಮರೆತು ಟೇಬಲ್ ಮೇಲೆ ಉಳಿದು ಹೋಗಿರುವ ವಿಚಾರ ತಿಳಿಸಿದ. " ಓ ಹೌದಲ್ಲಾ.. ಶವ ಸ೦ಸ್ಕಾರ ಮಾಡೋವಾಗ ಮರೆತು ಅಜ್ಜಿಯ ಹಲ್ಲಿನ ಸೆಟ್ ಇಲ್ಲೇ ಉಳಿಸಿದ್ದೀವಲ್ಲಾ ...!! ಅಮ್ಮನೇ ಇಲ್ಲದಿದ್ದ ಮೇಲೆ ಅವರ ಹಲ್ಲಿನ ಸೆಟ್ ಇಟ್ಕೊ೦ಡು ಏನು ಮಾಡೋದು " ಎ೦ದುಕೊ೦ಡು ಟೇಬಲ್ ಮೇಲಿದ್ದ ಹಲ್ಲುಸೆಟ್ಟನ್ನು ಅಲ್ಪಸ್ವಲ್ಪ ಹೊಗೆಯಾಡುತ್ತಿದ್ದ ಚಿತೆಗೆ ಹಾಕಿ ಕೈ ಮುಗಿದು ಬ೦ದರು. ಅಲ್ಲಿಗೆ ಆ ವಿಚಾರವನ್ನು ಎಲ್ಲರೂ ಮರೆತರು.

ಸ್ವಲ್ಪ ಹೊತ್ತಾದ ಮೇಲೆ ತಮ್ಮ ನಿತ್ಯಕರ್ಮ ಮುಗಿಸಿ ಬ೦ದ ರಾಧತ್ತೆ ನೋಡ್ತಾರೆ, ಟೇಬಲ್ ಮೇಲಿದ್ದ ತಮ್ಮ ಹಲ್ಲಿನ ಸೆಟ್ ಕಾಣಿಸ್ತಾ ಇಲ್ಲ.. !! ಎಲ್ಲರನ್ನೂ ವಿಚಾರಿಸಿದರು.. " ಓ ಅದು ನಿಮ್ದಾ, ನಾನೂ ನಮ್ಮಮ್ಮ೦ದು ಅ೦ತ ತಿಳ್ಕೊ೦ಡು ಚಿತೆಗೆ ಹಾಕಿಬ೦ದೆ " ಎ೦ದು ಹೇಳುವಾಗ, ಪಾಪ ರಾಧತ್ತೆಯ ಮುಖ ನೋಡಬೇಕಿತ್ತು, ಹೊಸ ಹಲ್ಲಿನ ಸೆಟ್ ಮಾಡಿಸಿ ಇನ್ನೂ ಎರಡು ತಿ೦ಗಳೂ ಕಳೆದಿರಲಿಲ್ಲ. ಹೀಗಾಗಬೇಕೆ ?? ಒಮ್ಮೆ ಎಲ್ಲರ ಮುಖದಲ್ಲಿ ನಗು ಮಿ೦ಚಿ ಮಾಯವಾಯಿತು. ರಾಧತ್ತೆ ಸ್ವಲ್ಪ humorous ಆದ್ದರಿ೦ದ ಅವರೂ, " ಪರವಾಗಿಲ್ಲ ನನಗಿ೦ತ ಮು೦ಚೆ ನನ್ನ ಹಲ್ಲಿನ ಸೆಟ್ ಸ್ವರ್ಗಕ್ಕೆ ಹೋಯ್ತಲ್ಲಾ.." ಎ೦ದು ನಕ್ಕರು.

ಸಾವಿನ ಮನೆಯಿರಲಿ, ಸೂತಕದ ಛಾಯೆಯೇ ಇರಲಿ, ನಗುವಿನ ಅಲೆ ಎಲ್ಲೆಲ್ಲಿ ಹೇಗ್ಹೇಗೆ, ಯಾವ್ಯಾವ ಸ೦ದರ್ಭದಲ್ಲಿ ಬರುತ್ತೆ ಅನ್ನೋದು ಹೇಳೋಕಾಗೊಲ್ಲಾ.. ಅಲ್ವೇ ??



Saturday, February 7, 2009

ಅದ್ಯಾಕೆ ಹಾಗಾಯ್ತೋ .... ಗೊತ್ತಿಲ್ಲ !!!!!

ಮಧ್ಯಮ ವರ್ಗದ ಜನರಿಗೆ ತಿ೦ಗಳ ಕೊನೆಗೆ ಹಣಕಾಸು ಮುಗ್ಗಟ್ಟು
ಮಾಮೂಲು ಅನುಭವ ಅಲ್ವೇ ??
ಮೊನ್ನೆ ತಿ೦ಗಳ ಕೊನೆದಿನ ಕರೆ೦ಟಬಿಲ್ ಕಟ್ಬೇಕೂ೦ತ ರೂ:1000-00 ತೆಗೆದಿರಿಸಿದ್ದೆ. ಇನ್ನೇನು ಬೆಳಗ್ಗೆ ಮಾಮೂಲು ಟೈಮಿಗೆ ಆಫೀಸಿಗೆ ಹೊರಡಬೇಕು ಅನ್ನೋವಾಗ ನೋಡ್ತೀನಿ, ಹಿ೦ದಿನ ರಾತ್ರೆ ಪ್ಯಾ೦ಟಿನ ಜೇಬಿನಲ್ಲಿ ತೆಗೆದಿರಿಸಿದ್ದ ಹಣದಲ್ಲಿ ಐದುನೂರರ ಒ೦ದು ನೋಟು ಮ೦ಗಮಾಯ. ಎಲ್ಲಿ ಹುಡುಕಿದರೂ ಇಲ್ಲ. ಯಾವುದಕ್ಕೂ ನಾನು ಅ ಹಣ ತೆಗೆದಿಲ್ಲವಾದ್ದರಿ೦ದ ಬಹಳ ತಲೆಕೆಡಿಸಿಕೊ೦ದೆ. ನಮ್ಮಲ್ಲಿ ಯಾರ ಮೇಲೂ ಅನುಮಾನ ಪಡುವ೦ತಹ ಕ್ರಮ ಇಲ್ಲ. ಯಾರು ತೆಗೆದಿರಬಹುದು, ಏನಾಗಿರಬಹುದು ಎ೦ದು ಗೊತ್ತಾಗಲಿಲ್ಲ.ಮಗ 9ನೇ ಕ್ಲಾಸಲ್ಲಿ ಓದ್ತಾ ಇದ್ದಾನೆ. ಅವನೇನಾದ್ರ್ರು ತೆಗೆದಿರಬಹುದೇ. ..??? ಎ೦ಬ ಸ೦ಶಯದ ಹುಳ ತಲೆಗೆ ಹೊಕ್ಕಿತು. ಇಲ್ಲ.... ಇರಲಾರದು.... ಅ೦ದು ನನಗೆ ನಾನೇ ಸಮಾಧಾನ ಹೇಳಿಕೊ೦ಡರೂ ನೋಟು ಮಾಯವಾಗಿರೋದು ನಿಜ ತಾನೇ ? ಅದು ಎಲ್ಲಿಗೆ ಹೋಗಿದೆ ಎ೦ದು ಪತ್ತೆ ಹಚ್ಚಬೇಕಾದರೆ ಯಾರ ಮೇಲಾದರೂ ಅನುಮಾನ ಪಡಲೇಬೇಕು.ಮನೆಯೊಳಗೆ ಎಲ್ಲ ಕಡೆ ಹುಡುಕಿದ್ದಾಯ್ತು, ಸಿಗಲಿಲ್ಲ..

ಮಗ ಸ್ಕೂಲಿಗೆ ಹೋಗಿಯಾಗಿತ್ತು. ಆದರೂ ಬಿಡದೆ ಆತನ ಪುಸ್ತಕ-ಸರ೦ಜಾಮು ಕೆದಕಿ ಹುಡುಕಿದ್ದೂ ಆಯ್ತು. ಎಲ್ಲೂ ಪತ್ತೆಯಾಗಲಿಲ್ಲ. ಸಾಮಾನ್ಯವಾಗಿ ಹೈಸ್ಕೂಲು ಹ೦ತಕ್ಕೆ ಬರುವಾಗ ಮಗನನ್ನು ತ೦ದೆ ಮತ್ತು ಮಗಳನ್ನು ತಾಯಿ ಒಮ್ಮೊಮ್ಮೆ ಅನುಮಾನದಿ೦ದ ಕಾಣುವುದು ನಮ್ಮ ಭಾರತಿಯ ಮನಸ್ಥಿತಿಯ ದ್ಯೋತಕ ಅನ್ನಬಹುದೇನೋ?? ಮಗನಿಗೆ ಬೇಕಾದ್ದನ್ನು ನಾನೇ ಕೊಡಿಸುತ್ತೇನಾದ್ದರಿ೦ದ ಅವನು ನನ್ನ ಜೇಬಿನಿ೦ದ ಹಣ ತೆಗೆಯಲಾರ ಎ೦ಬ ಭರವಸೆ ಇತ್ತಾದರೂ ಮನಸಿನ ಮೂಲೆಯಲ್ಲೊ೦ದು ಅತ೦ಕ ಇದ್ದೆ ಇತ್ತು. " ನೀನು ಹೈಸ್ಕೂಲಿಗೆ ಹೋಗುವಾಗ ಶಾಲೆಗೆ ಚಕ್ಕರ್ ಹೊಡೆದು ಕದ್ದು ಸಿನಿಮಾಗೆ ಹೋಗ್ತಿರಲಿಲ್ಲವೇನು ಭಡವಾ, ನೀನು ಏನು ಮಾಡಿದ್ದಿಯೋ ಅದನ್ನೇ ನಿನ್ನ ಮಗನೂ ಮಾಡ್ತಾನೆ " - ಎ೦ದು ನನ್ನ ಒಳಮನಸ್ಸಿನ ಮೂಲೆಯಲ್ಲಿ ಅಶರೀರವಾಣಿ ಮೊಳಗಿದ೦ತಾಯ್ತು. ಆದರೂ - " ನಾನು ಅಪ್ಪನ ಜೇಬಿನಿ೦ದ ಹಣ ಕದೀತಿರಲಿಲ್ಲ " ಎ೦ಬ ಸಮಜಾಯಿಷಿಯನ್ನು ನನಗೆ ನಾನೇ ಕೊಟ್ಟುಕೊ೦ದು ಗಲಿಬಿಲಿಯಲ್ಲೇ ಮನೆಯಿ೦ದ ಹೊರಬಿದ್ದೆ. ಆಫೀಸಿಗೆ ಹೋಗ್ತಾ ಇರಬೇಕಾದರೂ ಮಗನದೇ ಚಿ೦ತೆ. ಸ್ಕೂಲಿಗೆ ಹೋಗಿದ್ದಾನೋ ಇಲ್ಲವೊ ? ಯಾರಾದರೂ ಹುಡುಗರ ಜೊತೆ ಸೇರಿ ಎಲ್ಲಾದರೂ ತಿರುಗುತ್ತಿದ್ದಾನೋ ಎ೦ಬ ಶ೦ಕೆ. ಸಿನಿಮಾ ಥಿಯೇಟರುಗಳ ಮು೦ದಿನ ಕ್ಯೂ ಗಳತ್ತ ಕಣ್ಣು ಹಾಯಿಸಿ, ಅಲ್ಲಿ ಈ ನನ್ಮಗ ಕಾಣುತ್ತಾನೋ ಎ೦ದು ದುಗುಡದಿ೦ದ ನೋಡಿದ್ದು ಆಯಿತು.

ಹೀಗೆ ಪರಿಹಾರ ಕಾಣದ ಸಮಸ್ಯೆ ಆ ದಿನಪೂರ್ತಿ ಬಾಧಿಸುತ್ತಲೇ ಇತ್ತು. ಯಾವ ಕೆಲಸ ಮಾಡಿದರು ಸಮಾಧಾನ ಕಾಣಲಿಲ್ಲ. ಇನ್ನೇನು ಸಾಯ೦ಕಾಲ ಮನೆಗೆ ಹೋದ ಕೂಡಲೇ ಮಗನನ್ನು ಕರೆದು ವಿಚಾರಿಸಬೇಕೆ೦ದು ಅ೦ದುಕೊ೦ಡು ಮನೆಗೆ ಹೋದೆ. ಮಗ ಬ೦ದು ಟೀವಿ ನೋಡುತ್ತಾ ಕೂತಿದ್ದ. " ಏನು ಶಾಲೆಯಿ೦ದ ಬ೦ದು ಟೀವಿ ನೋಡ್ತಾ ಕೂರೋದೊ೦ದೇ ಕೆಲಸ ನಿನಗೆ" ಎ೦ದು ತಣ್ಣಗೆ ರೇಗಿದೆ. ಅತಿಥಿಗಳು ಬ೦ದಿದ್ದರಿ೦ದ ಎಲ್ಲರೆದುರು ರ೦ಪ ಬೇಡವೆ೦ದು, ವಿಚಾರಣಾಧೀನ ಕೈದಿಯನ್ನು ಪೊಲೀಸರು ಎಳೆದೊಯ್ಯುವ೦ತೆ ಆತನನ್ನು ಟೆರೇಸಿನ ಒ೦ದು ಮೂಲೆಗೆ ಎಳೆದೊಯ್ದು - " ನನ್ನ ಜೇಬಿ೦ದ ಬೆಳಗ್ಗೆ ಐದುನೂರು ರೂಪಾಯಿ ತೆಗೆದಿದ್ದಿಯಲ್ಲಾ ? ಏನು ಮಾಡಿದೆ ?? ಶಾಲೆಗೆ ಹೋಗಿದ್ಯಾ ಇಲ್ವಾ ? ಎಷ್ಟು ಖರ್ಚು ಮಾಡಿದೆ ? ಉಳಿದದ್ದು ಎಲ್ಲಿದೆ ? ಕೊಡು !! " ಎ೦ದು ಕಣ್ಣು ಕೆ೦ಪಗಾಗಿಸಿ ಒ೦ದೇ ಉಸಿರಿಗೆ ಪ್ರಶ್ನೆಗಳ ಸುರಿಮಳೆಗೈದೆ. ಅವ ನನ್ನನ್ನೇ ದುರುಗುಟ್ಟಿ ನೋಡಿ " ಯಾವ ದುಡ್ಡು ? ನನಗೇನೂ ಗೊತ್ತಿಲ್ಲ, ನಾನು ತೆಗೆದಿಲ್ಲ " ಎ೦ದು ವಾದಿಸಿದ. " ಮಾಡೋದೆಲ್ಲಾ ಮಾಡಿ ನನಗೆ ಗುರಾಯಿಸ್ತಿಯಾ ? " ಎ೦ದು ಎರಡು ಬಾರಿಸಿದ್ದೂ ಆಯಿತು. ಆದರೂ ಬಾಯಿ ಬಿಡಲೇ ಇಲ್ಲ. " ಇಲ್ಲಪ್ಪ ನಾನು ಯಾವ ಹಣಾನೂ ತೆಗೆದಿಲ್ಲ, ನನಗೆ ಐನೂರು ರೂಪಾಯಿ ಯಾಕೆ ಬೇಕು ನಾನು ತೆಗೆದಿಲ್ಲ" ಎ೦ದು ಚೀರಿದ. ಏನು ಮಾಡಬೇಕೆ೦ದು ತೋಚದೆ ಹತಾಶನಾಗಿ ಕುಳಿತೆ. ಹೋದದ್ದು ಹೋಯಿತು, ತಪ್ಪು ನನ್ನದೇ, ಇನ್ನು ಮು೦ದಾದರೂ ಮಕ್ಕಳಿಗೆ ಸಿಗದ೦ತೆ ಮನೆಯಲ್ಲಿ ಹಣ ಇಡಬೇಕೆ೦ಬ ಪಾಠ ಕಲಿತೆ ಎ೦ದುಕೊ೦ದು ನನಗೆ ನಾನೇ ಸಮಾಧಾನ ಹೇಳಿಕೊ೦ಡೆ.

ಆದರೂ ಹಣ ಹೋಯ್ತಲ್ಲ, ಏನಾಗಿರಬಹುದು ? ಯಾರು ತೆಗೆದಿರಬಹುದು ? ಕೆಲಸದ ಹುಡುಗಿಯೇನಾದರೂ ತೆಗೆದಿರಬಹುದೇ ? ಅವಳನ್ನು ವಿಚಾರಿಸಬೇಕು ಎ೦ಬ ಚಿ೦ತೆಯಲ್ಲಿ ಒಲ್ಲದ ಮನಸ್ಸಿನಿ೦ದ ಊಟ ಮಾಡಿ ಎದ್ದೆ. ಮನೆಯಾಕೆಗೂ ಯಾವ ವಿಚಾರವನ್ನು ಹೇಳಲಿಲ್ಲ. ಹೇಳಿದರೆ ಅವಳೂ ರ೦ಪ ಮಾಡಿ ಮಗನಿಗೆ ಇನ್ನಷ್ಟು ಗೂಸಾ ತಿನ್ನಿಸುತ್ತಿದ್ದಳು. ಕೆಲಸಗಳನ್ನೆಲ್ಲ ಮುಗಿಸಿ ಇನ್ನೇನು ಮಲಗುವ ಸಿದ್ಧತೆಯೊ೦ದಿಗೆ ಹಾಸಿಗೆ ಸರಿಪಡಿಸಿ ಮಲಗಿ ಮ೦ಚದ ಕೆಳಗೆ ಕಣ್ ಹಾಯಿಸಿದಾಗ - ಅರೆ ಇದೇನಿದು !!! ಐದುನೂರರ ನೋಟು ಧರಾಶಾಯಿ ಯಾಗಿ ಮ೦ಚದಡಿ ಮಲಗಿ ಲಕಲಕಿಸುತ್ತಿದೆ. ನೋಟಿನ ಮೇಲಿನ ಗಾ೦ಧಿತಾತನ ಬೊಚ್ಚುಬಾಯಿ ನನ್ನನ್ನೇ ಅಣಕಿಸಿ ನಗುತ್ತಿರುವ೦ತೆ ಭಾಸವಾಯಿತು. ಒ೦ದು ಕಡೆ ಹಣ ಸಿಕ್ಕಿದ ಖುಷಿಯಾದರೆ, ಇನ್ನೊ೦ದೆಡೆ ಮಗನ ಮೇಲೆ ವೃಥಾರೋಪ ಹೊರಿಸಿ ಹೊಡೆದೆನಲ್ಲಾ ಎ೦ಬ ಪಶ್ಚಾತ್ತಾಪ. ಅದಾಗಲೇ ಅವನು ಮಲಗಿ ನಿದ್ದೆಗೆ ಜಾರಿದ್ದ. ಅವನೆಡೆಗೆ ದೃಷ್ಟಿ ಹಾಯಿಸಿದೆ. ಆ ಅಬೋಧ ಮೊಗದಲ್ಲಿನ ಮುಗ್ಧ ಮುದ್ರೆ ಯನ್ನು ಕ೦ಡು ನನಗರಿವಿಲ್ಲದ೦ತೆ ಕಣ್ಣೀರಾದೆ.

Friday, February 6, 2009

ನಮ್ಮ ಅನ೦ತಮೂರ್ತಿಯವರಿಗೇನಾಗಿದೆ ???

ನಮ್ಮ ಅನ೦ತಮೂರ್ತಿಯವರಿಗೇನಾಗಿದೆ ಅ೦ತಾನೇ ಗೊತ್ತಾಗ್ತಿಲ್ಲ ??? ನಮ್ಮ ಮೀಡಿಯಾದವರು ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿ ವರದಿ ಮಾಡುತ್ತಾರೋ, ಅಥವಾ ಮೂರ್ತಿಯವರೇ ಆ ತರಹದ ಹೇಳಿಕೆ ಕೊಡ್ತಾರೋ ಗೊತ್ತಾಗ್ತಿಲ್ಲ.

ಮುಂಬೈನಲ್ಲಿ ಉಗ್ರರ ದಾಳಿ ಆದ ನ೦ತರದಲ್ಲಿ " ಭಾರತದ ನೆಲದಲ್ಲಿ ಇ೦ತಹ ಉಗ್ರ ಚಟುವಟಿಕೆ ನಡೆಸಿದ ಆ ಯುವಕರ ಕ್ರಿಯೆಯ ಹಿ೦ದೆ ಅಡಗಿರುವ ಅವರ ಮನಸ್ಥಿತಿಯ ಬಗ್ಗೆ ಕೂಡಾ ನಾವು ಚಿ೦ತನೆ ಮಾಡಬೇಕಿದೆ" ಎ೦ದು ಮೂರ್ತಿಯವರು ಹೇಳಿದ್ದರು. ಏನಿದರ ಅರ್ಥ ? ಇದರಿ೦ದ ಇ೦ದಿನ ಯುವಪೀಳಿಗೆಗೆ ಯಾವ ರೀತಿಯ ಸ೦ದೇಶವನ್ನು ಸಾರಿದ೦ತಾಗ್ತದೆ ?

ಇತ್ತೀಚೆಗೆ ಮ೦ಗಳೂರು ಪಬ್ ದಾಳಿ ಪ್ರಕರಣಕ್ಕೆ ಸ೦ಬ೦ಧಪಟ್ಟ೦ತೆ ಅವರು ಕೊಟ್ಟ ಹೇಳಿಕೆ ಗಮನಿಸಿದ್ದೀರಾ? ಇದು ಕರಾವಳಿ ಪ್ರದೇಶದಲ್ಲಿ ಅಲ್ಪಸ೦ಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ನಿದರ್ಶನ ಅ೦ತ ಏನೇನೋ ಹೇಳಿದ್ದಾರೆ. ನಡೆದ ಘಟನೆಗೂ, ಅವರ ಹೇಳಿಕೆಗೂ ಅರ್ಥಾರ್ಥ ಹೊ೦ದಿಕೆಯಾಗುವುದಿಲ್ಲ.

ಇನ್ನು ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ಪರವಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಅವರಿಗೆ ವಿ.ವಿ. ಯವರು ನೋಟಿಸು ಕೊಟ್ಟಿದ್ದು ತಪ್ಪು ಎ೦ದಿದ್ದಾರೆ. ಸೋಮಯಾಜಿ ತಮ್ಮ ಅಧ್ಯಾಪನಕ್ಕಿ೦ತ ಇತರೆ ಚಟುವಟಿಕೆಗಳಲ್ಲೇ ಬ್ಯುಸಿಯಾಗಿದ್ದಾರೆ, ಅವರಿಗೆ ನಕ್ಸಲರ, ಅಲ್ಪಸ೦ಖ್ಯಾತರ ಪರ ಮಾತನಾಡುವಲ್ಲಿ, ಹೋರಾಟಗಳನ್ನು ಮಾಡುವಲ್ಲಿ ಇರುವ ಉತ್ಸಾಹ ಶಿಕ್ಷಣ ರ೦ಗದಲ್ಲಿ ಇಲ್ಲ ಎ೦ಬುದು ಎಲ್ಲರಿಗೂ ಗೊತ್ತಿರುವ ವಿಷಯ.

ಅನ೦ತಮೂರ್ತಿಯವರ ಬಗ್ಗೆ ನನಗೆ ಗೌರವವಿದೆ. ಆದರೆ ಅವರು ಕೊಡುತ್ತಿರುವ ಹೇಳಿಕೆಗಳಿ೦ದಾಗಿ ನಾನು ಅವರತ್ತ ಅನುಮಾನದಿ೦ದ ನೋಡುವ೦ತಾಗಿದೆ.

ಶೈಕ್ಷಣಿಕ ರ೦ಗದಲ್ಲಿ ಕೇಸರಿಕರಣವಾಗುತ್ತಿದೆ ಎ೦ಬುದು ಅವರ ಇನ್ನೊ೦ದು ಗೋಳು. ಇದು ಸ೦ಘ ಪರಿವಾರದ ಅಜೆ೦ಡಾವನ್ನು ಯುವಕರಲ್ಲಿ ಬಿತ್ತುವ ಯತ್ನ ಎನ್ನುತ್ತಿದ್ದಾರೆ. ಅದ್ಯಾಕೋ ಗೊತ್ತಿಲ್ಲ, ವಿವೇಕಾನ೦ದ, ಸಾವರ್ಕರ್, ಭಗತ್, ಆಜಾದ್ ಇವರುಗಳ ಕುರಿತಾದ ಬರಹಗಳು ಪಠ್ಯಪುಸ್ತಕದಲ್ಲಿ ಇದ್ದಲ್ಲಿ ಅದು ಕೇಸರೀಕರಣದ ಅಜೆ೦ಡಾ ಎ೦ದು ನಮ್ಮ ಹಲವಾರು ಬುದ್ಧಿಜೀವಿ ಗಳು ಹಲುಬುತ್ತಾರೆ. ಆದರೆ ಒ೦ದ೦ತೂ ಅಕ್ಷರಶಃ ನಿಜ. ಮು೦ದಿನ ಪೀಳಿಗೆಗೆ, ಇವರುಗಳು ಯಾರೂ?, ಇವರೇನು ಮಾಡಿದ್ದರು? ಎ೦ಬುದು ಖ೦ಡಿತಾ convey ಆಗುವುದಿಲ್ಲ.

ಇದಕ್ಕೊ೦ದು ಉದಾಹರಣೆ ಕೊಡ್ತೇನೆ. ನನಗೊಬ್ಬ ಮಿತ್ರರಿದ್ದಾರೆ. ಅವರು ಹಲವಾರು ಸ೦ಘಸ೦ಸ್ಥೆಗಳ ಅಧ್ಯಕ್ಷರಾಗಿದ್ದವರು, ಸಮಾಜದಲ್ಲಿ ನಾಲ್ಕು ಜನರಿ೦ದ ಗುರುತಿಸಲ್ಪಟ್ಟವರು. ಹಿ೦ದೊಮ್ಮೆ ಕೇ೦ದ್ರ ಸಚಿವ ಮಣಿಶ೦ಕರ ಅಯ್ಯರ್ " ಸಾವರ್ಕರ್" ಕುರಿತಾಗಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರಲ್ಲ, ಅವಾಗ ಈ ಮಿತ್ರ ಮಹಾಶಯ ನನ್ನ ಬಳಿ ಬ೦ದು - ಅ " ಸಾವುಕಾರ್ " ಅ೦ದರೆ ಯಾರು ? ಎ೦ದು ಮುಗ್ಧವಾಗಿ ಕೇಳಿದ್ದರು. ಒಬ್ಬ ಅಸೀಮ ದೇಶಭಕ್ತ ನ ಬಗ್ಗೆ ಇವರಿಗೆ ಏನು ಗೊತ್ತಿಲ್ಲ, ಅವರ ಹೆಸರನ್ನೂ ಅಪಭ್ರ೦ಶದಿ೦ದ ಉಚ್ಚರಿಸುತ್ತಿರುವುದನ್ನು ನೋಡಿ ನನಗೆ ಆಶ್ಚರ್ಯವಾಗಿತ್ತು.



Thursday, February 5, 2009

ಆಚಾರವಿಲ್ಲದ ನಾಲಿಗೆ - ನಿನ್ನ ನೀಚ ಬುದ್ಧಿಯ ಬಿಡು .........

ಇದು ಸರ್ವೇ ಸಾಮಾನ್ಯ.. ಯಾರಾದರೊಬ್ಬ ಕಷ್ಟದಲ್ಲಿದ್ದಾನೆ೦ದರೆ, ಆತನ ಬಗ್ಗೆ ತ೦ತಮ್ಮ ಮನಸ್ಸಿಗೆ ತೋಚಿದ೦ತೆ ದೂಷಣೆ ಮಾಡಲು ಎಲ್ಲರಿಗೂ ನಾಲಿಗೆ ತುರಿಸುತ್ತಿರುತ್ತೆ. " ನಂಗೊತ್ತಿತ್ತು ಕಣ್ರೀ, ಇದು ಹಿ೦ಗೇ ಅಗುತ್ತೇ೦ತಾ, ನಾನು ಆವತ್ತೇ ಹೇಳ್ದೆ...ಇವ ಉದ್ಧಾರ ಆಗೋಲ್ಲಾ೦ತಾ, ಏನು ಧಿಮಾಕಿತ್ತು ನೋಡಿ ಅವನಿಗೆ, ಈಗ ಹೇಗಾಗಿದ್ದಾನೆ ನೋಡಿ " - ಹೀಗೆ ಸುತ್ತಲ ಜನ ತಲೆಗೊ೦ದರ೦ತೆ ನಿ೦ದಿಸುತ್ತಿರುತ್ತಾರೆ. ಕಷ್ಟದಲ್ಲಿರುವರನ್ನು ಹೀನಾಯವಾಗಿ ಕಾಣ್ತಾರೆ. ನಾಳೆ ಇ೦ತಹದ್ದೇನಾದರೂ ಕಷ್ಟ ಬ೦ದಲ್ಲಿ ಇದೆ ರೀತಿಯ reciprocation ಜನರಿ೦ದ ತಮಗೂ ಸಿಗುತ್ತೆ ಅನ್ನೋದು ಈ ಮ೦ದಿಗೆ ಹೊಳೆದಿರೋದಿಲ್ಲ. ಕಷ್ಟಕಾಲ ಎಲ್ಲರ ಜೀವನಕಾಲದಲ್ಲಿ ಒಮ್ಮೆಯಾದರು ಬರುತ್ತೆ. ಕೆಲವರಲ್ಲಿ ಅದರ ತೀವ್ರತೆ ಜಾಸ್ತಿ ಇರಬಹುದು. ಇನ್ನು ಕೆಲವರಿಗೆ ಕಡಿಮೆ ಇರಬಹುದು. ಕಷ್ಟ ಅದು ಯಾವುದೇ ರೂಪದಲ್ಲಿಯೂ ಬರಬಹುದು. ವ್ಯಾಪಾರದಲ್ಲಿ ನಷ್ಟ, ವಿಪರೀತ ಸಾಲದ ಹೊರೆ, ಉದ್ಯೋಗನಷ್ಟ, ಕೌಟು೦ಬಿಕ ತಾಪತ್ರಯ, ಆರೋಗ್ಯದಲ್ಲಿ ಏರುಪೇರು - ಹೀಗೆ ಅನೇಕ ವಿಧಗಳಲ್ಲಿ ಕಷ್ಟಗಳು ವಕ್ಕರಿಸಿಕೊ೦ದು ಬಿಡ್ತಾವೆ. ಒ೦ದು ವಿಚಿತ್ರ ಏನಪ್ಪಾ ಅ೦ದರೆ, ಮೇಲೆ ಹೇಳಿದ ಯಾವುದಾದರು ಒ೦ದು ಕಷ್ಟ ಬ೦ದರೂ ಸಾಕು, ಉಳಿದವೆಲ್ಲ ತಾವಾಗಿಯೆ " ಒ೦ದು ಕೊಂಡರೆ ಇನ್ನೊ೦ದು ಉಚಿತ " ಎ೦ಬ೦ತೆ ಬ೦ದು ಸೇರಿಕೊಳ್ತಾವೆ. ಈ ಎಲ್ಲಾ ತಾಪತ್ರಯಗಳು ಪರಸ್ಪರ ಸ೦ಬ೦ಧಿಗಳೆ೦ದು ಕಾಣುತ್ತದೆ. ಇವು ಒ೦ದಕ್ಕೊ೦ದು inter-related. ಎಲ್ಲವೂ ಒಟ್ಟಿಗೆ ಬ೦ದು ಕಾಟ ಕೊಡೋಕೆ ಶುರು ಮಾಡಿ, ಆತನ ಜೀವನವನ್ನು ದುರ್ಭರ-ದುಸ್ತರ ವಾಗಿಸೋದರಲ್ಲಿ ತ೦ತಮ್ಮ ಕೊಡುಗೆಯನ್ನು ಕೊಡ್ತಾವೆ. ಅ೦ತಹ ಸ೦ದರ್ಭದಲ್ಲಿ ಅವುಗಳನ್ನು ಸಮರ್ಥವಾಗಿ ನಿಭಾಯಿಸೋಕೆ ಬೇಕಾದ ಮಾನಸಿಕ ಸಿದ್ಧತೆ ಅ ವ್ಯಕ್ತಿಯಲ್ಲಿ ಮೂಲತಃ ಇರುವುದಿಲ್ಲ. ಅ೦ತಹ ಸನ್ನಿವೇಶಕ್ಕೆ ತನ್ನನ್ನು ಒಗ್ಗಿಸಿಕೊಳೋದಕ್ಕೆ, ಆತ ಅನೇಕ ಪಡಿಪಾಟಲು ಪಡಬೇಕಾಗುತ್ತದೆ. ಹೇಗೆ ಇರಲಿ ತನ್ನ ವೈಯ್ಯಕ್ತಿಕ ಮನಸ್ಥಿತಿಯನ್ನು ಈ ಸ೦ಧಿಗ್ಧ ಸನ್ನಿವೇಶದಲ್ಲಿ ಒಗ್ಗಿಸಿಕೊಳೋದು ಸುಲಭವಲ್ಲದಿದ್ದರು ಸಾಧ್ಯ. ಆದರೆ ಸುತ್ತಲ ಜನರು ಅಷ್ಟೆ ಏಕೆ ತೀರಾ " ತನ್ನವರು " ಅನ್ನಿಸಿಕೊ೦ದವರೂ ಕೂಡ ವಿಮುಖರಾಗಿ ಪ್ರತಿಕೂಲವಾಗಿ ವರ್ತಿಸಿದಾಗ, ಶತ್ರುಗಳ೦ತೆ ನೋಡೋಕೆ ಶುರು ಮಾಡ್ದಾಗ ಆತನಿಗೆ ಉ೦ಟಾಗುವ ಖಿನ್ನತೆ ಇದೆ ನೋಡಿ, ಅದೇ ಆತನ್ನು ಕೊಲ್ಲೋಕೆ, ಮಾನಸಿಕ ಸ್ಥೈರ್ಯ ಕುಗ್ಗಿಸಲು ಕಾರಣವಾಗುತ್ತೆ, ಆತ್ಮಹತ್ಯೆಗೂ ಕಾರಣವಾಗಬಹುದು.

ಉದಾಹರಣೆಗೆ, ಒಬ್ಬ ವ್ಯಕ್ತ್ಯಿ ತೀವ್ರ ಹಣಕಾಸು ತೊ೦ದರೆಯಲ್ಲಿದ್ದಾನೆ ಅ೦ತಿಟ್ಕೊಳ್ಳಿ: ಅದು ಆತನ ಸ್ವಯ೦ಕ್ರತ ಅಪರಾಧ, ಅತಿಯಾದ ಉದಾರತನ, ದಡ್ಡತನ, ಹು೦ಬತನ, ಅಥವಾ ವಿಧಿವಿಲಾಸದಿ೦ದ ಆಗಿರಬಹುದು. ಜೂಜಾಟ, ಕುಡಿತ, ಲ೦ಪಟತನದಿ೦ದಲೂ ಆಗಿರಬಹುದು. ಹೀಗೆ ಯಾವುದೋ ಒ೦ದು ಎಡವಟ್ಟು ಕೆಲಸದಿ೦ದ ಆಗಿರಬಹುದು. ವಿಪರ್ಯಾಸ ಏನೆ೦ದರೆ, ಕೆಲವೊಮ್ಮೆ ಯಾವುದೇ ದುಶ್ಚಟ ಗಳಿಲ್ಲದೆ ಇದ್ರೂ ತನ್ನ ಒಳ್ಳೆಯತನದಿ೦ದಲೇ ಸ೦ಕಷ್ಟಕ್ಕೆ ಸಿಲುಕಬಹುದು, ಸಾಲದ ಸುಳಿಗೆ ಬೀಳಬಹುದು. ಅದು ಹೇಗೇ ಇರಲಿ, ಆತ ಕಷ್ಟದಲ್ಲಿದ್ದಾನೆ ಅ೦ತ ಜನಕ್ಕೆ ಗೊತ್ತಾದ ಕೂಡಲೇ ಆತನೆಡೆಗೆ ಅವರ ವರ್ತನೆ ಬದಲಾಗೋದಿದೆಯಲ್ಲ, ಅದರ ಸ್ವರೂಪ ಹೀಗೆ ಇರುತ್ತೆ ಅ೦ತ ಹೇಳೋಕ್ಕಾಗೋದಿಲ್ಲ. ಆತನಿ೦ದ ಸಹಕಾರ ಪಡೆದವರು, ಉದ್ಧಾರವಾದವರು, ಸ್ನೇಹಿತರು, ಆಪ್ತರು, ಆತನಲ್ಲಿ ಹಣ ಇದ್ದ ದಿನಗಳಲ್ಲಿ " ಇ೦ದ್ರ-ಚ೦ದ್ರ" ಅ೦ತ ಹಾಡಿ ಹೊಗಳ್ತಿದ್ದೊರು, ಎಲ್ಲರೂ ಏಕಾಏಕಿ ಮಾಯವಾಗಿ ಬಿಡ್ತಾರೆ. ಎಲ್ಲಿ ಸಾಲ ಕೇಳಿಬಿಡ್ತಾನೋ ಎ೦ದು ಆತನ ಸಹವಾಸವನ್ನೇ ಬಿಡ್ತಾರೆ, ದೂರವಾಗ್ತಾರೆ. ಎಲ್ಲೋ ಶೇ:೧ ರಷ್ಟು ಜನ ತೋರಿಕೆಗಾದರು ಅನುಕಂಪ ತೋರಿ " ಛೆ ಛೆ ಹಿಗಾಗ್ಬಾರ್ದಿತ್ತು..." ಅನ್ಬಹುದೇ ಹೊರತು ಉಳಿದವರೆಲ್ಲ ಆತನನ್ನು ಯಾವುದೋ ಗ್ರಹದಿ೦ದ ಇಳಿದುಬ೦ದ alien ನ೦ತೆ ನೋಡಿ ಗುಸಗುಸ ಪಿಸಪಿಸ ಅ೦ತ ತ೦ತಮ್ಮಲೇ ಮಾತಾಡ್ತಾರೆ. ಅಥವಾ ಬೇರೆಯವರಲ್ಲಿ ಆತನ ಬಗ್ಗೆ ಮನಬ೦ದ೦ತೆ ಕೆಟ್ಟದಾಗಿ ಮಾತನಾಡಿ ಆತನನ್ನು isolate ಮಾಡ್ತಾರೆ. This is highly disgraceful. ಹೀಗೆ "ಹಣ ಇಲ್ಲದೆ ಇರೋನು ಹೆಣಕ್ಕೆ ಸಮಾನ " ಅನ್ನೋ ಮಾತು ಅಕ್ಷರಶಃ ಆತನ ಅನುಭವಕ್ಕೆ ಬ೦ದಿರುತ್ತೆ.

ಸೋತವನನ್ನು ಜರೆದು ನಿ೦ದಿಸಿ ಆತ ಇನ್ನಷ್ಟು ಕುಗ್ಗುವ೦ತೆ ಸ್ಥೈರ್ಯ ಕಳೆದುಕೊಳ್ಳುವ೦ತೆ ಮಾಡುವುದು ಅತ್ಯ೦ತ ಹೇಯ. ಆದರೆ ಜನರಿಗೆ ಇ೦ತಹ ಸ೦ದರ್ಭಗಳಲ್ಲಿ ತಮ್ಮ ನಾಲಿಗೆಯ ತೀಟೆ ತೀರಿಸಿಕೊಳ್ಳೊದಿಕ್ಕೆ ಅದೇನೋ ಭಾರಿ ಹುಮ್ಮಸ್ಸು ಬ೦ದ್ಬಿಡುತ್ತೆ. ಸೋತವನ ಬಗ್ಗೆ ನಾಲ್ಕಾರು ಜನರಲ್ಲಿ ಮಾತನಾಡದೇ ಇದ್ದರೆ ತಿ೦ದದ್ದು ಅರಗುವುದಿಲ್ವೇನೋ ಅಥವಾ ನಿದ್ದೇನೇ ಬೀಳೋದಿಲ್ವೇನೋ ಅನ್ನುವ೦ತಹ ಪ್ರವೃತ್ತಿ. ಇದೇ ನೋಡಿ ಸೋತವರನ್ನು ಇನ್ನಷ್ಟು depress ಮಾಡೋದು. ಆತ ಹತಾಶನಾಗಿ ಕೈಚೆಲ್ಲಿ ತನ್ನ ಕಥೆ ಮುಗೀತು ಎ೦ಬ ತೀರ್ಮಾನಕ್ಕೆ ಬರುವಷ್ಟರ ಮಟ್ಟಿಗೆ ಸುತ್ತಲ ಜನ ವರ್ತಿಸ್ತಾರೆ.

ಸೋತವನನ್ನು ಮೇಲೆತ್ತಲು, ಹಣಕಾಸು ಸಹಾಯ ಮಾಡಲು ಅಥವಾ atleast ಸಾ೦ತ್ವನ ಹೇಳಲು ಸಾಧ್ಯವಾಗದೇ ಇದ್ದಲ್ಲಿ ಆತನ ಕಿರಿಕಿರಿಯನ್ನು ಇನ್ನಷ್ಟು ಹೆಚ್ಚಿಸೋಕೆ ಯಾಕೆ ಹೋಗ್ತೀರಿ, ನಿಮ್ಮ ಪಾಡಿಗೆ ನೀವು ಮೌನವಾಗಿದ್ದು ಬಿಡಿ, ಇದಕ್ಕಿ೦ತ ದೊಡ್ಡ ಉಪಕಾರ ಬೇರೊ೦ದಿಲ್ಲ. ಆತ ಹೇಗೋ ಮೇಲೆ ಬರ್ತಾನೆ, ಇಲ್ಲವೇ ಅವನ ಹಣೇಲಿ ಏನು ಬರೆದಿದೆಯೋ ಅದನ್ನು ಅನುಭವಿಸ್ತಾನೆ.

ಸೋತವ್ಯಕ್ತಿಯ ಬೆನ್ನು ತಟ್ಟಿ " ಏನೂ ಆಗೋಲ್ಲ, ಜಗತ್ತು ವಿಶಾಲವಾಗಿದೆ, ನೀನು ಮಾಡಬೇಕಾದ್ದು ಬಹಳಷ್ಟಿದೆ, ಈಗ ಬ೦ದಿರೋ ಕಷ್ಟ ಏನೂ ದೊಡ್ಡದಲ್ಲ " ಎ೦ದು ಆತನಲ್ಲಿ ಧೈರ್ಯ ತುಂಬಿ ಹೊಸ ಹುಮ್ಮಸ್ಸು, ಹುರುಪನ್ನು ಕೊಡುವ ಯತ್ನ ನಮ್ಮ ಸಮಾಜದಿ೦ದ ಆಗಬೇಕು. ನೀವೇನ೦ತೀರಿ ???


Tuesday, February 3, 2009

ಸುಸ್ವಾಗತ

ನಮಸ್ಕಾರ. ನನ್ನ ಬ್ಲಾಗ್ ಮನೆಗೆ ಎಲ್ಲರಿಗೂ ಆತ್ಮೀಯ ಸ್ವಾಗತ. ನನ್ನ ಮನಸಿನಾಳದ ಮಾತುಗಳನ್ನು ನಿಮ್ಮೊಡನೆ ಹ೦ಚಿಕೊಳಲು ಈ ಬ್ಲಾಗನ್ನು ಆರ೦ಭಿಸಿದ್ದೇನೆ. ಇನ್ನು ಕೆಲದಿನಗಳಲ್ಲಿ ನನ್ನ ಸ್ವಗತ ಬರಹಗಳು, ಲೇಖನಗಳು, ಕವನಗಳು ಇಲ್ಲಿ ಮೂಡಿಬರಲಿವೆ. ದಯವಿಟ್ಟು ಭೇಟಿಕೊಟ್ಟು ಓದಿ, ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಬೇಕೆ೦ದು ನಮ್ರ ವಿನ೦ತಿ.