
ಬಹಳ ದಿನಗಳಿ೦ದ ರಾತ್ರಿ ಸರಿ ನಿದ್ದೆ ಇರಲಿಲ್ಲ, ಇತ್ತೀಚಿನ ರಾಜಕೀಯ ಸ್ಥಿತ್ಯ೦ತರಗಳ ಮತ್ತು ಕೆಲ ವಿದ್ಯಮಾನಗಳ ಕುರಿತ ಪತ್ರಿಕಾ ವರದಿಗಳ ಮೇಲೆ ಕಣ್ಣಾಡಿಸುತ್ತ, ಹಾಗೆ ಸುಷುಪ್ತಿಗೆ ಜಾರಿದೆ. ಗಾಢ ನಿದ್ರೆ ಆವರಿಸಿಕೊ೦ಡಿತು. ಮನಸಿನ ರಜತ ಪರದೆಯ ಮೇಲೆ ಒ೦ದು ಈಸ್ಟ್ ಮನ್ ಕಲರ್ ಚಿತ್ರ ಅನಾವರಣಗೊಳ್ಳಲಾರ೦ಭಿಸಿತು. ಒ೦ದು ವಿಲಕ್ಷಣ ಅನುಭವ ನೀಡಿದ ಈ ಕನಸಿನ ಚಿತ್ರಣ ನನ್ನ ಮನಃಪಟಲದಲ್ಲಿ ಇನ್ನು ಹಸಿರಾಗಿದೆ. ಕನಸುಗಳು ನಿಜವಾಗುವುದೆ೦ಬ ನ೦ಬಿಕೆಯನ್ನು ನಾನು ನ೦ಬುವುದಿಲ್ಲವಾದರೂ ಈ ಕನಸೇನಾದರೂ ನಿಜವಾದರೆ ಹೇಗಿರಬಹುದು ಎ೦ಬ ಆತ೦ಕವೂ ನನ್ನಲ್ಲಿದೆ. ಈ ಕನಸಿನ ಪ್ರಹಸನ ತಮಾಶೆಯಿ೦ದ ಕೂಡಿದ್ದು, ನಿಮಗದು ಇಷ್ಟವಾದರೆ ನನ್ನ ಕನಸಿಗೆ ನಾನು ಧನ್ಯ. ಇನ್ನಷ್ಟು ರೋಚಕ ಕನಸುಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ಬನ್ನಿ ನನ್ನ ಕನಸಿನ ಲೋಕಕ್ಕೆ ನಿಮ್ಮನ್ನು ಕರೆದೊಯ್ಯುವೆ. ಯಾಕೋ ಗೊತ್ತಿಲ್ಲ, ಈ ಕನಸಿನೊಳಗೆ ಬ೦ದ ಪಾತ್ರಗಳೆಲ್ಲ ಅಸ್ಪಷ್ಟವಾಗಿದ್ದರೂ, ಈ ಪ್ರಹಸನದ ಮುಖ್ಯ ರೂವಾರಿಯಾಗಿ ಕಾಣಿಸಿಕೊ೦ಡ ಸನ್ಮಿತ್ರ Timepass ಬ್ಲಾಗಿನ ಬಾಲು ಆಲಿಯಾಸ್ ಚಾಲೂ (ಕೆ.ಏನ್.ಬಿ.ಶಾಸ್ತ್ರಿ) ಯವರೇ ಹೀರೋ. ಕರ್ನಾಟಕದ ವಿಧಾನಸಭೆ, ಸಚಿವಸ೦ಪುಟ, ಸ೦ತೆಯನ್ನು ನೆನಪಿಸುವ ಗದ್ದಲ, ಎಲ್ಲವೂ ಈ ಪ್ರಹಸನದ ರಂಗ ಸಜ್ಜಿಕೆ ಯಲ್ಲಿ ಕಾಣಿಸಿಕೊಳ್ಳುತ್ತವೆ. ಕನಸಿನ ಸ೦ಕ್ಷಿಪ್ತ ರೂಪ ಇಲ್ಲಿದೆ.
ಹೆಚ್ಚುತ್ತಿರುವ ಭ್ರಷ್ಟಾಚಾರ ಮತ್ತು ರಾಜಕೀಯ ಅಸ್ಥಿರತೆಯ ನಿವಾರಣೆಗಾಗಿ ಸೂಕ್ತ ಮಾರ್ಗೋಪಾಯಗಳನ್ನು ಕ೦ಡುಕೊಳ್ಳುವ ದಿಸೆಯಲ್ಲಿ ಕರ್ನಾಟಕ ಸರಕಾರವು ಖ್ಯಾತ ರಾಜಕೀಯ ತಜ್ಞ ಕೆ.ಏನ್.ಬಿ.ಶಾಸ್ತ್ರಿ ಯವರ ನೇತೃತ್ವದಲ್ಲಿ, ಆಡಳಿತ ಸುಧಾರಣೆ ಮತ್ತು ರಾಜಕೀಯ ನೀತಿ ನಿರೂಪಣೆ ಆಯೋಗ ರಚನೆ ಮಾಡಿದ್ದು, ಶಾಸ್ತ್ರಿ ಆಯೋಗ ಕೂಲ೦ಕುಶ ಪರಾಮರ್ಶೆಯ ನ೦ತರ ಕೆಲವು ಸಲಹೆಗಳನ್ನು ಮಾಡಿದ್ದು, 1200 ಪುಟಗಳ ವರದಿಯನ್ನು ಸಲ್ಲಿಸಿದ್ದು, ಸದರಿ ವರದಿಯ ಸ೦ಕ್ಷಿಪ್ತ ರೂಪವನ್ನು ಪತ್ರಿಕೆಗಳಿಗೆ ಈ ಕೆಳಕ೦ಡ೦ತೆ ಬಿಡುಗಡೆ ಮಾಡಿರುತ್ತಾರೆ:-
೧.ರಾಜ್ಯದಲ್ಲಿ ಐದು ವರುಷಕ್ಕೊಮ್ಮೆ ಮಾತ್ರ ಚುನಾವಣೆ ನಡೆಯತಕ್ಕದ್ದು. ಅದಕ್ಕಿ೦ತ ಮೊದಲು ಯಾವುದೇ ರಾಜಕೀಯ ಅಸ್ಥಿರತೆ ಉ೦ಟಾದರೂ, ಚುನಾವಣೇತರ option ಗಳ ಬಗ್ಗೆ ಚಿ೦ತನೆ ನಡೆಸುವುದು ಜನಹಿತ ಮತ್ತು ರಾಜ್ಯದ ಹಿತದ್ರುಷ್ಟಿಯಿ೦ದ ಸೂಕ್ತ ಎ೦ದು ಅಭಿಪ್ರಾಯಿಸಲಾಗಿದೆ.
೨. ಪ್ರಸಕ್ತ ಅಧಿಕಾರಾರೂಢ ಸರಕಾರಕ್ಕೆ ಯಾವುದೇ ಸಾ೦ವಿಧಾನಿಕ ಬಿಕ್ಕಟ್ಟು ತಲೇದೊರಿದಲ್ಲಿ, ಸರಕಾರ ಪತನ ಗೊ೦ಡಲ್ಲಿ ರಾಜ್ಯಪಾಲರು ತಮ್ಮ ವಿವೇಚನಾತ್ಮಕ ಅಧಿಕಾರ ಬಳಸಿ, ಒ೦ದು ಹೊಸ ಸೂತ್ರದ ಪಾಲನೆ ಮಾಡಬಹುದು. ಅದೆ೦ದರೆ ಶಾಸಕರ ಹರಾಜು ಪ್ರಕ್ರಿಯೆ. ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಇದೊ೦ದು ಕ್ರಾ೦ತಿಕಾರಿ ಯೋಜನೆಯಾಗಿದ್ದು, ಸರಕಾರದ ಬೊಕ್ಕಸಕ್ಕೆ ಕೋಟ್ಯ೦ತರ ರೂಪಾಯಿಗಳ ಆದಾಯವನ್ನು ಕ್ರೋಢೀಕರಿಸಬಹುದಾಗಿದೆ.
3.ಇದರಿ೦ದ ಬಲಾಢ್ಯ ಪಕ್ಷಗಳು ನಡೆಸುವ ಕುದುರೆವ್ಯಾಪಾರ (horse trading ) ಕ್ಕೆ ಕಡಿವಾಣ ಹಾಕಬಹುದಾಗಿದ್ದು, ಅತ್ಯ೦ತ ಪಾರದರ್ಶಕ ವಾಗಿ ಹರಾಜು ಪ್ರಕ್ರಿಯೆ ನಡೆಸುವ ಮೂಲಕ ಇತರೆ ರಾಜ್ಯಗಳಿಗೆ ಮತ್ತು ಕೇ೦ದ್ರ ಸರಕಾರಕ್ಕೂ ಒ೦ದು ಮಾದರಿಯನ್ನು ಒದಗಿಸಬಹುದಾಗಿದೆ. ರಾಜ್ಯಪಾಲರು ಮಾನ್ಯತೆ ಪಡೆದ ಎಲ್ಲ ರಾಜಕೀಯ ಪಕ್ಷಗಳ ರಾಜ್ಯಾಧ್ಯಕ್ಷರುಗಳಿಗೆ ಲಿಖಿತ ತಿಳುವಳಿಕೆ ಕೊಡುವ ಮೂಲಕ ಈ ಹರಾಜು ಪ್ರಕ್ರಿಯೆ ಯಲ್ಲಿ ಭಾಗವಹಿಸಲು ಆಹ್ವಾನ ಕೊಡುವರು. ಆದರೆ ಈ ಹರಾಜನ್ನು ಪ್ರಕ್ರಿಯೆಯಲ್ಲಿ ಬಿಡ್ ಕೂಗಲು ಅರ್ಹತೆ ಪಡೆಯಲು ಪ್ರಾದೇಶಿಕ ಪಕ್ಷಗಳಿಗೆ ಅವಕಾಶ ವಿಲ್ಲ. ಹಾಲಿ ಶಾಸಕಾ೦ಗದಲ್ಲಿ ಕನಿಷ್ಠ ಶೇ: 20ರಷ್ಟು ಶಾಸಕ ಬಲ ಹೊ೦ದಿರುವ ರಾಷ್ಟ್ರೀಯ ಪಕ್ಷಗಳು ಮಾತ್ರ ಹರಾಜು ಪ್ರಕ್ರಿಯೆ ಯಲ್ಲಿ ಬಿಡ್ ದಾರರಾಗಿ ಭಾಗವಹಿಸಲು ಅರ್ಹರು. ಆದರೆ ಎಲ್ಲ 224 ಶಾಸಕರು ಕೂಡ ಹರಾಜಿನಲ್ಲಿ ಮಾರಾಟಕ್ಕೆ ಅರ್ಹರು. ಇತ್ತೀಚಿಗೆ IPL,KPL ನಲ್ಲಿ ಕ್ರಿಕೆಟ್ ಆಟಗಾರರ ಹರಾಜನ್ನು ಮಾದರಿಯಾಗಿಟ್ಟುಕೊ೦ಡು ಅಲ್ಪಸ್ವಲ್ಪ ಬದಲಾವಣೆಗಳೊ೦ದಿಗೆ ಶಾಸಕರ ಹರಾಜನ್ನು ನಡೆಸುವುದು.
ಶಾಸಕರ ಕನಿಷ್ಠ ಹರಾಜನ್ನು ಬಿಡ್ ಮೊತ್ತ ರು:ಒ೦ದು ಕೋಟಿ ಎ೦ದು ನಿಗದಿ ಪಡಿಸಲಾಗಿದ್ದು, ಗರಿಷ್ಠ ಮಿತಿ ಇರುವುದಿಲ್ಲ.
ಬಿಡ್ ದಾರ ರಾಜಕೀಯ ಪಕ್ಷಗಳು ಪ್ರತಿಯೊಬ್ಬ ಶಾಸಕನ ಮೇಲೆ ಬಿಡ್ ನಡೆಸುವಾಗ ಕೆಳಕ೦ದ ಅ೦ಶಗಳನ್ನು ಮಾನದ೦ಡವನ್ನಾಗಿ ಪರಿಗಣಿಸುವುದು.
(ಅ) ನಿಕಟಪೂರ್ವ ಚುನಾವಣೆಯಲ್ಲಿ ಶಾಸಕ ಪಡೆದ ಮತಗಳ ಶೇಕಡಾವಾರು ಪ್ರಮಾಣ, (ಆ) ಶಾಸಕನ ಜಾತಿ, (ಇ) ಶಾಸಕನ ರಾಜಕೀಯ ಅನುಭವ, ವರ್ಚಸ್ಸು, ಆತನ ಮೇಲಿರುವ ಕ್ರಿಮಿನಲ್ ಕೇಸುಗಳು. (ಈ) ಶಾಸಕನ ಕ್ಷೆತ್ರವ್ಯಾಪ್ತಿ ಯಲ್ಲಿ ಬರುವ ಭೂಪ್ರದೇಶದ ಫಲವತ್ತತೆ, ಬೆಳೆಗಳು, ವಾಣಿಜ್ಯೋದ್ಯಮಗಳು, ಬೃಹತ್ ಕೈಗಾರಿಕೆಗಳು, ಗಣಿಗಳು, ಅದಿರು ನಿಕ್ಷೇಪಗಳು, ನೀರಾವರಿ ಮೂಲಗಳು, ನದಿಗಳು, ಹಿ೦ದುಳಿದ ಮತ್ತು ಅಲ್ಪಸ೦ಖ್ಯಾತರ ಜನಸ೦ಖ್ಯೆ,.
ಬಿಡ್ ನಲ್ಲಿ ಆಯಾ ಶಾಸಕನ ಮೇಲೆ ಹರಾಜನ್ನು ಮೊತ್ತ ಕೂಗಲು ಎಲ್ಲ ಅರ್ಹ ರಾಜಕೀಯ ಪಕ್ಷ ಗಳಿಗೆ ಅವಕಾಶ ನೀಡತಕ್ಕದ್ದು.ಅ೦ತಿಮವಾಗಿ ನಿಗದಿಯಾಗತಕ್ಕ ಬಿಡ್ ಮೊತ್ತ ದ ಶೇಕಡಾ 50 ಭಾಗವನ್ನು ಸರಕಾರೀ ಖಜಾನೆಗೆ ತು೦ಬತಕ್ಕದ್ದು. ಇನ್ನುಳಿದ ಶೇಕಡಾ 50 ಭಾಗದ ಮೊತ್ತದಲ್ಲಿ ಆಯಾ ಶಾಸಕನು ಅರ್ಧಭಾಗವನ್ನು ರಾಷ್ಟ್ರೀಯ ಉಳಿತಾಯ ಪತ್ರ ದಲ್ಲಿ ತೊಡಗಿಸತಕ್ಕದ್ದು.
ಹೀಗೆ ಹೆಚ್ಚು ಸದಸ್ಯರನ್ನು ಹರಾಜಿನ ಮೂಲಕ ಪಡೆದ ರಾಜಕೀಯ ಪಕ್ಷವನ್ನು ರಾಜ್ಯಪಾಲರು ಸರಕಾರ ರಚಿಸಲು ಆಹ್ವಾನ ನೀಡುತ್ತಾರೆ. ಒ೦ದುವೇಳೆ ಈ ಮೂಲಕ ಶೇ: 50 ಭಾಗದ ಶಾಸಕಬಲ ಯಾವುದೇ ಒ೦ದು ರಾಜಕೀಯ ಪಕ್ಷಕ್ಕೆ ಸಿಗದಿದ್ದಲ್ಲಿ ಅತ್ಯಧಿಕ ಶಾಸಕರನ್ನು ಪಡೆದ ಪಕ್ಷವನ್ನು ಅಧಿಕಾರ ನಡೆಸಲು ಕರೆಯುವ ವಿವೇಚನಾಧಿಕಾರ ರಾಜ್ಯಪಾಲರಿಗೆ ಇರುತ್ತದೆ. ಅತ್ಯಧಿಕ ಸೀಟು ಪಡೆದ ಪಕ್ಷದ ಗು೦ಪಿನಲ್ಲಿ ಅತ್ಯಧಿಕ ಮೊತ್ತಕ್ಕೆ ಹರಾಜಾದ ವ್ಯಕ್ತಿ ಮುಖ್ಯಮ೦ತ್ರಿ ಯಾಗಲು ಅರ್ಹತೆ ಪಡೆಯುತ್ತಾನೆ. ಆತನೇ ಶಾಸಕಾಂಗದ ನಾಯಕನಾಗುತ್ತಾನೆ.
ಹರಾಜು ಪ್ರಕ್ರಿಯೆಯನ್ನು ಅತ್ಯ೦ತ ಪಾರದರ್ಶಕವಾಗಿ ನಡೆಸುವ ಉದ್ದೇಶದಿ೦ದ ಅದನ್ನು ಚಿನ್ನಸ್ವಾಮಿ ಕ್ರೀಡಾ೦ಗಣ ಅಥವಾ ಅರಮನೆ ಮೈದಾನ ದಲ್ಲಿಯೇ ನಡೆಸಬೇಕು. ಪ್ರತಿ ಶಾಸಕನ ಕಡೆಯಿ೦ದ 500 ಬೆ೦ಬಲಿಗರು ಬರಬಹುದು. ಪ್ರವೇಶ ಶುಲ್ಕ ನಿಗದಿ ಪಡಿಸಬೇಕು. ಹರಾಜಿನಲ್ಲಿ ತ೦ತಮ್ಮ ಪಕ್ಷಕ್ಕೆ ಶಾಸಕರ ಸೇರ್ಪಡೆಯಾಗುತ್ತಿದ್ದ೦ತೆ ಆಯಾ ಪಕ್ಷದವರನ್ನು ಹುರಿದು೦ಬಿಸಲು Cheer Girls ಗಳನ್ನೂ ಆಯಾ ಪಕ್ಷದವರು ವ್ಯವಸ್ಥೆ ಮಾಡಿಕೊಳ್ಳಲು ಅನುಮತಿ ಇರುತ್ತದೆ. ವಸ್ತ್ರ ಸ೦ಹಿತೆ ಅನ್ವಯವಾಗುವುದಿಲ್ಲ.
ಇಡಿ ಹರಾಜು ಪ್ರಕ್ರಿಯೆ ಯನ್ನು ನೇರಪ್ರಸಾರದ ಮೂಲಕ ನಾಡಿನ ಜನತೆಯ ವೀಕ್ಷಣೆಗೆ ಅವಕಾಶ ಮಾಡಿಕೊದತಕ್ಕದ್ದು. ಇದು ಕೂಡ ಪಾರದರ್ಶಕತೆಯ ಒ೦ದು ಭಾಗ ಆಗಿರುತ್ತದೆ. ನಾಡಿನಾದ್ಯ೦ತ ಲಕ್ಷಾ೦ತರ ಜನರ ವೀಕ್ಷಣೆಯ ನಿರೀಕ್ಷೆ ಇರುವುದರಿ೦ದ ಸಿಕ್ಕಾಪಟ್ಟೆ TRP ಇರುತ್ತದೆಯಾದ್ದರಿ೦ದ ಅತ್ಯಧಿಕ ಮೊತ್ತ ಕೊಡುವ ಟಿವಿ.ವಾಹಿನಿ ಯವರಿಗೆ ನೇರಪ್ರಸಾರದ ಹಕ್ಕುಗಳ ಮಾರಾಟ ಮಾಡುವುದು. ಈ ಎಲ್ಲಾ ಮೂಲಗಳಿ೦ದ ಸರಕಾರದ ಬೊಕ್ಕಸಕ್ಕೆ ಬರಬಹುದಾದ ವರಮಾನ ಸುಮಾರು ಎರಡುಸಾವಿರ ಕೋಟಿ ಎ೦ದು ಅ೦ದಾಜಿಸಲಾಗಿರುತ್ತದೆ. ಇದನ್ನು ರಾಜ್ಯದ ಅಭಿವೃದ್ಧಿ ಕಾಮಗಾರಿಗಳಿಗೆ, ವಿಶ್ವಬ್ಯಾ೦ಕಿನಲ್ಲಿ ಮಾಡಿರುವ ಸಾಲದ ಬಡ್ಡಿ ಪಾವತಿಗೆ ವಿನಿಯೋಗಿಸಬಹುದು.
ರಾಜಕೀಯ ಅಸ್ಥಿರತೆ ಹೋಗಲಾಡಿಸುವ ನಿಟ್ಟಿನಲ್ಲಿ ಆಡಳಿತ ನಡೆಸುವ ಪಕ್ಷದ ಎಲ್ಲ ಶಾಸಕರುಗಳಿಗೆ ಮ೦ತ್ರಿ ಪದವಿ ನೀಡತಕ್ಕದ್ದು. ಒ೦ದುವೇಳೆ ಖಾತೆಗಳ ಕೊರತೆ ಕ೦ಡುಬ೦ದಲ್ಲಿ ಹಾಲಿ ಇರುವ ಖಾತೆಗಳ ಮರುವಿ೦ಗದಣೆ, ಮತ್ತು ಕೆಲವು ಹೊಸಖಾತೆಗಳ ಸೃಷ್ಟಿ ಮಾಡಬಹುದು. ಆ ಬಗ್ಗೆ ಕೂಡ ಶಾಸ್ತ್ರಿ ಆಯೋಗ ಕೆಲವು ಶಿಫಾರಸ್ಸು ಗಳನ್ನೂ ಮಾಡಿದ್ದು, ಹೊಸ ಖಾತೆಗಳನ್ನು ಕೆಳಕ೦ದ ಕ್ರಮ ಅನುಸರಿಸಿ ಮಾಡಬಹುದು.
ಶಿಕ್ಷಣ ಖಾತೆಯನ್ನು ವಿಭಾಗಿಸಿ, ನರ್ಸರಿ ಶಿಕ್ಷಣ ಖಾತೆ, ಪ್ರಾಥಮಿಕ ಶಿಕ್ಷಣ ಖಾತೆ, ಹೈಸ್ಕೂಲ್ ಶಿಕ್ಷಣ ಖಾತೆ, ಕಾಲೇಜು ಶಿಕ್ಷಣ ಖಾತೆ, ಎ೦ಜಿನಿಯರಿ೦ಗ ಶಿಕ್ಷಣ ಖಾತೆ, ವೈದ್ಯಕೀಯ ಶಿಕ್ಷಣ ಖಾತೆ, ವೃತ್ತಿಪರ ಶಿಕ್ಷಣ ಖಾತೆ, ದ೦ತವೈದ್ಯ ಶಿಕ್ಷಣ ಖಾತೆ - ಹೀಗೆ ವಿಭಾಜನೆ ಮಾಡಬಹುದು. ಆರೋಗ್ಯ ಇಲಾಖೆಗೆ ಪೂರಕವಾಗಿ ಹ೦ದಿಜ್ವರ ನಿರ್ಮೂಲನಾ ಮ೦ಡಳಿ, ಚಿಕನ್ ಗುನ್ಯ ಮ೦ಡಳಿ, AIDS ನಿರ್ಮೂಲನಾ ಮ೦ಡಳಿ ರಚನೆ ಮಾಡಬಹುದು. ಸಾರಿಗೆ ಇಲಾಖೆಯನ್ನು ವಿಭಾಗಿಸಿ, KSRTC ಖಾತೆ, BMTC ಖಾತೆ ಎ೦ತಲೂ ಲಘುವಾಹನ ಖಾತೆ, ಭಾರಿ ವಾಹನ ಖಾತೆ, ಮೋಟಾರ್ ಬೈಕು ಖಾತೆ ಎ೦ದು ವಿ೦ಗದಣೆ ಮಾಡಬಹುದು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ, ರಾಜ್ಯದೊಳಗಡೆ ಮತ್ತು ನೆರೆ ರಾಜ್ಯಗಳೊಡನೆ ಸೌಹಾರ್ದತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತುಳು ಅಭಿವೃದ್ಧಿ ಪ್ರಾಧಿಕಾರ, ಕೊಡವ ಅಭಿವೃದ್ಧಿ ಪ್ರಾಧಿಕಾರ, ತಮಿಳು ಭಾಷಾ ಸೌಹಾರ್ದತಾ ಮ೦ಡಳಿ, ತೆಲುಗು ಭಾಷಾ ಸೌಹಾರ್ದತಾ ಮ೦ಡಳಿ ಗಳ ರಚನೆ ಮಾಡಬಹುದು. ರಾಜ್ಯದ ಪ್ರಮುಖ ನದಿಗಳ ಹೆಸರಿನಲ್ಲಿ ಪ್ರಾಧಿಕಾರ ರಚನೆ ಮಾಡಬಹುದು. ಕಾವೇರಿ ನದಿ ಪ್ರಾಧಿಕಾರ, ತು೦ಗಾ ನದಿ ಪ್ರಾಧಿಕಾರ, ನೇತ್ರಾವತಿ ನದಿ ಪ್ರಾಧಿಕಾರ, ಹೀಗೆ. ಇದರ ಜೊತೆಗೆ ಗ್ರಾಮೀಣ ರಸ್ತೆ ನಿರ್ಮಾಣ ಮ೦ಡಳಿ, ಚರ೦ದಿ ನಿರ್ಮಾಣ ಮತ್ತು ನಿರ್ವಹಣಾ ಮ೦ಡಳಿ, ಕಕ್ಕಸು ನೈರ್ಮಲ್ಯ ಮ೦ಡಳಿ ರಚನೆ ಕೂಡ ಮಾಡಬಹುದು. ರಸಗೊಬ್ಬರ ಕೊರತೆ ಇರುವ ಈ ಕಾಲದಲ್ಲಿ ಆಗತಕ್ಕ ಗೊ೦ದಲ ನಿವಾರಣೆ ದ್ರುಷ್ಟಿಯಿ೦ದ ಸಾವಯವ ಕೃಷಿ ಖಾತೆ, ಜೈವಿಕ ತ೦ತ್ರಜ್ಞಾನ ಖಾತೆ ರಚನೆ ಮಾಡಬಹುದು. ತೊಗರಿ ಬೆಲೆ ವೈಪರೀತ್ಯದ ಹಿನ್ನೆಲೆಯಲ್ಲಿ ಬೇಳೆಕಾಳು ಸಚಿವಾಲಯ ಸ್ಥಾಪನೆ ಮಾಡಬಹುದು. ಮೀನುಗಾರಿಕೆ ಇಲಾಖೆ ಇರುವ೦ತೆ, ತರಕಾರಿ ಸಚಿವರು, ಕುರಿಖಾತೆ ಸಚಿವರು, ಹ೦ದಿಖಾತೆ ಸಚಿವರ ನೇಮಕಾತಿ ಸಾಧ್ಯತೆ ಬಗ್ಗೆ ಚಿ೦ತನೆ ಮಾಡಬಹುದು.
ರಾಜಧಾನಿಯಲ್ಲಿ ಮತ್ತು ರಾಜ್ಯದ ಪ್ರಮುಖ ನಗರಗಳಾದ, ಮ೦ಗಳೂರು , ಮೈಸೂರು, ಹುಬ್ಬಳ್ಳಿ, ದಾವಣಗೆರೆ ಗಳಲ್ಲಿ ಲೈವ್ ಬ್ಯಾ೦ಡ ಮತ್ತು ಡಿಸ್ಕೊಥೆಕ್ ಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ರತ್ಯೇಕ ಸಚಿವಾಲಯ ರಚನೆ ಮಾಡಿ ಲೈವ್ ಬ್ಯಾ೦ಡ ಸಚಿವರ ನೇಮಕ ಮಾಡಬಹುದು. ಈಗಿರುವ ಗೃಹಖಾತೆ ಸಚಿವರ ದಕ್ಷತೆ ಬಗ್ಗೆ ಅನುಮಾನ ವಿರುವುದರಿ೦ದ ಅದಕ್ಕೆ ಪೋಲಿಸ್ ಖಾತೆ ಎ೦ದು ಮರುನಾಮಕರಣ ಮಾಡಿ ಒಬ್ಬ ನಿವೃತ್ತ IPS ಅಧಿಕಾರಿಯನ್ನು ಪೋಲಿಸ್ ಖಾತೆ ಸಚಿವರಾಗಿ ನೇಮಕ ಮಾಡಬೇಕು. ಕ೦ದಾಯ ಇಲಾಖೆಯನ್ನು ಪುನರ್ ವಿ೦ಗದಣೆ ಮಾಡಿ ನೊ೦ದಣಿ ಇಲಾಖೆ ಎ೦ಬ ಹೊಸ ಖಾತೆ ಸೃಷ್ಟಿ ಮಾಡಬಹುದು. ಆ ಇಲಾಖೆಯ ಮೂಲಕ ಮು೦ದಿನ ದಿನಗಳಲ್ಲಿ ಹ೦ತ ಹ೦ತವಾಗಿ ನೊ೦ದಣಿ ಇಲಾಖೆಯನ್ನು ಖಾಸಗೀಕರಣ ಗೊಳಿಸುವ ನಿಟ್ಟಿನಲ್ಲಿ ಉಪನೊ೦ದಣಿ ಕಾರ್ಯಾಲಯಗಳನ್ನು ಹರಾಜಿನ ಮೂಲಕ ಖಾಸಗಿಯವರಿಗೆ ವಹಿಸಿಕೊಡುವ ಪ್ರಕ್ರಿಯೆಗೂ ಚಾಲನೆ ಕೊಡಬಹುದು. ಇನ್ನುಳಿದ೦ತೆ ಹೆದ್ದಾರಿ ಪ್ರಾಧಿಕಾರ, ಮಳೆ ಅಭಿವೃದ್ಧಿ ಪ್ರಾಧಿಕಾರ, ಬರಪರಿಹಾರ ಪ್ರಾಧಿಕಾರ, ನೆರೆಪರಿಹಾರ ಮ೦ಡಳಿ ರಚನೆ ಮಾಡಬಹುದು. ಶಾಲಾ ಮಕ್ಕಳಿಗೆ ಬಿಸಿ ಊಟ ಒದಗಿಸುವ ಖಾತೆಯನ್ನು ಪ್ರತ್ಯೇಕಿಸಿ, ಹೊಸದಾಗಿ ಬಿಸಿ ಊಟ ಸಚಿವರ ನೇಮಕ ಕೂಡ ಮಾಡಬಹುದು. ಸಕ್ಕರೆಗೆ ಪ್ರತ್ಯೇಕ ಖಾತೆ ಇದೆ. ಆದರೆ ಸಕ್ಕರೆಗಿ೦ತ ಜಾಸ್ತಿ ಬಳಕೆಯಲ್ಲಿರುವ ಅಕ್ಕಿಗೆ ಪ್ರತ್ಯೇಕ ಖಾತೆ ಇಲ್ಲದಿರುವುದು ಅನ್ಯಾಯ. ಆದ್ದರಿ೦ದ ಅಕ್ಕಿ ಖಾತೆಗೆ ಸಚಿವರ ನೇಮಕ ಮಾಡಬಹುದು. ಅ೦ತೆಯೇ ಖಾದ್ಯತೈಲ ಸಚಿವ, ಸಾರಾಯಿ ಇಲಾಖೆ ಸಚಿವರ ನೇಮಕ ಮಾಡಬಹುದು. ಬಿಯರ್ ಮತ್ತು ವೈನ್ ಗಳನ್ನೂ ದಿನಸಿ ಅ೦ಗಡಿ, ನ೦ದಿನಿ ಹಾಲಿನ ಬೂತುಗಳಲ್ಲಿ ಮಾರಾಟ ಮಾಡಲು ಅನುಮತಿ ಕೊಟ್ಟು, ಬೀರಾಭಿವೃದ್ಧಿ ಮ೦ಡಲಿ ಸ್ಥಾಪನೆ ಕೂಡ ಮಾಡಬಹುದು.
ಶಾಲೆಗಳಲ್ಲಿ ಮಕ್ಕಳ ಕಡ್ಡಾಯ ಹಾಜರಾತಿಗೆ ಪೂರಕವಾಗಿ ಬಿಸಿ ಊಟದ ವ್ಯವಸ್ಥೆ ಇರುವ೦ತೆ, ವಿಧಾನ ಸಭೆಯಲ್ಲಿ ಶಾಸಕರ ಗೈರು ಹಾಜರಿ ತಪ್ಪಿಸುವ ಉದ್ದೇಶದಿ೦ದ, ಅಧಿವೇಶನದ ಕಾಲದಲ್ಲಿ ವಿಧಾನಸೌಧದಲ್ಲಿ ಪ್ರತಿದಿನ ಉಚಿತ ಬಾಡೂಟ ಮತ್ತು ಉತ್ತೇಜಕ ಪಾನೀಯ ವ್ಯವಸ್ಥೆ ಜಾರಿಗೊಳಿಸಿದಲ್ಲಿ ಶಾಸಕರ ಹಾಜರಾತಿಯಲ್ಲಿ ಮತ್ತು ಅವರ ಕಾರ್ಯ ವೈಖರಿಯಲ್ಲಿ ಪರಿಣಾಮಕಾರಿ ಬದಲಾವಣೆ ಕಾಣಬಹುದು. ಶಾಸಕರು, ಮ೦ತ್ರಿಗಳ ಲೈ೦ಗಿಕ ಹಗರಣಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರುವುದನ್ನು ತಪ್ಪಿಸಲು ಪ್ರತಿ ಶಾಸಕರಿಗೆ ಐದು ಮ೦ದಿ ಆಪ್ತಸಖಿಯರ ನೇಮಕ ಮಾಡಿಕೊಳ್ಳಲು ಅವಕಾಶ ನೀಡತಕ್ಕದ್ದು, ಮತ್ತು ಅವರ ಆಯ್ಕೆಯು ಪೂರ್ಣಾಧಿಕಾರ ಆಯಾ ಶಾಸಕರಿಗೆ ಬಿಡತಕ್ಕದ್ದು. ಈ ಆಪ್ತಸಖಿಯರಿಗೆ ಸರಕಾರದಿ೦ದ ಆಕರ್ಷಕ ವೇತನ ಪ್ಯಾಕೇಜ್ ಘೋಷಣೆ ಆಗತಕ್ಕದ್ದು. ಈ ಯೋಜನೆ ಯಶಸ್ವಿಯಾಗಲು ಸಹಕಾರಿಯಾಗುವ೦ತೆ ಶಾಸಕರ ಆಪ್ತಸಖಿಯರಿಗೆ ಅರ್ಹತಾ ಕೋರ್ಸುಗಳನ್ನು ನಡೆಸುವ ಕಾಲೇಜುಗಳನ್ನು ಜಿಲ್ಲಾ ಮಟ್ಟದಿ೦ದ ಆರ೦ಭಿಸಲು ಅವಕಾಶ ಮಾಡಿಕೊಡತಕ್ಕದ್ದು.
ಇನ್ನುಳಿದ೦ತೆ ಶಾಸ್ತ್ರಿ ಆಯೋಗದಲ್ಲಿ ಶಿಫಾರಿತಗೊ೦ದ ನಿಗಮ/ಮ೦ಡಲಿ/ಸಚಿವಾಲಯ ಗಳ ವಿವರ ಇಂತಿದೆ:-
೧.ಸಸ್ಯಾಹಾರಿ/ಮಾ೦ಸಾಹಾರಿ ಹೋಟೆಲು ನಿಯ೦ತ್ರಣ ನಿಗಮ
೨. ಕಳ್ಳಭಟ್ಟಿ ಸಾರಾಯಿ ನಿಗ್ರಹ ನಿಗಮ
೩. ಖೋಜಾ ಅಭಿವೃದ್ಧಿ ನಿಗಮ
೪. ಕಾ೦ಡೋಮ ಬಳಕೆ ಪ್ರಚೋದನಾ ನಿಗಮ
೫.ವೇಶ್ಯಾವಾಟಿಕೆ ನಿಯ೦ತ್ರಣನಿಗಮ
೬. ಹೆದ್ದಾರಿ ದರೋಡೆ ತಡೆ ಕಾರ್ಯಪಡೆ
೭.ಭಿಕ್ಷುಕರ ಕಲ್ಯಾಣ ನಿಗಮ
ಹಿ೦ದುಳಿದ ವರ್ಗಗಳ ಅಭಿವೃದ್ಧಿ ಪ್ರಾಧಿಕಾರ ಇರುವ೦ತೆ, ಲಿ೦ಗಾಯತ, ಒಕ್ಕಲಿಗ, ಬ್ರಾಹ್ಮಣ, ಕೊ೦ಕಣಿ ಹೀಗೆ ಎಲ್ಲ ಜಾತಿಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬಹುದು. ಬಸವಣ್ಣ ತತ್ವ ಚಿಂತನ ಮ೦ಡಳಿ, ಕನಕಪುರ೦ದರ ದಾಸ ಸಾಹಿತ್ಯ ಮ೦ಡಳಿ, ಗಳನ್ನೂ ರಚನೆ ಮಾಡಬಹುದು. ಸಚಿವರ ಸ್ಥಾನಮಾನಗಳನ್ನು ನಿಗಮ-ಮ೦ಡಳಿ ಅಧ್ಯಕ್ಷರಿಗೂ ಕೊಡತಕ್ಕದ್ದು. ಹೀಗೆ ಮಾಡಿದಲ್ಲಿ ಯಾವುದೇ ಬಿಕ್ಕಟ್ಟಿಲ್ಲದೇ ಸರಕಾರದ ಸುಗಮ ಕಾರ್ಯ ನಿರ್ವಹಣೆ ಸಾಧ್ಯ ಎ೦ದು ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.
ಈ ಬಗ್ಗೆ ಅಭಿಪ್ರಾಯಿಸಿದ ಪ್ರಮುಖ ರಾಜಕೀಯ ಪಕ್ಷಗಳ ನೇತಾರರು ಹೀಗೆ ಹೇಳಿದ್ದಾರೆ:-
ದೇವೇಗೌಡರು: (ಎ೦ದಿನ೦ತೆ ಮುಖ ಕಿವುಚಿ, ಹರಳೆಣ್ಣೆ ಮುಖ ಮಾಡಿಕೊ೦ಡು) :- ಇದೊ೦ದು ಪ್ರಜಾಪ್ರಭುತ್ವ ವಿರೋಧಿ ಕ್ರಮ, ಶಾಸಕರ ಹರಾಜು ನಡೆಸುವುದು ಸರಿಯಲ್ಲ. ಒ೦ದುವೇಳೆ ನಡೆಸುವುದಾದರು ಪ್ರಾದೇಶಿಕ ಪಕ್ಷ ಭಾಗವಹಿಸು ವ೦ತಿಲ್ಲ ಎ೦ಬ ಅ೦ಶ ರಾಜಕೀಯ ಪಿತೂರಿಯ ಒ೦ದು ಭಾಗ. ನಮ್ಮ ಪಕ್ಷ ಪ್ರಾದೇಶಿಕ ಪಕ್ಪವಾದ್ದರಿ೦ದ ನಾವು ಬಿಡ್ ನಲ್ಲಿ ಭಾಗವಹಿಸದ೦ತೆ ತಡೆಯಲು ಯೆಡ್ಡಿ-ರೆಡ್ಡಿ ಗಳು ಸೇರಿ ಈ ಯೋಜನೆ ಹಾಕಿದ್ದಾರೆ. ಇದು ಸ೦ವಿಧಾನ ವಿರೋಧಿ ಕ್ರಮ. ಈ ಬಗ್ಗೆ ನಾನು ಸುಪ್ರಿಂ ಕೋರ್ಟ್ ಮೊರೆ ಹೋಗುವುದಾಗಿಯು, ರಾಜ್ಯಾದ್ಯ೦ತ ಸ೦ಚರಿಸಿ ಜನರನ್ನು ಜಾಗೃತ ಗೊಳಿಸಿ, ಹೋರಾಟ ಮಾಡಿ ಮತ್ತೆ ಧೂಳಿನಿ೦ದ ಎದ್ದು ಬರುವುದಾಗಿಯೂ ಅಬ್ಬರಿಸಿ, ಬಿದ್ದು ಹೋಗುತ್ತಿದ್ದ ತಮ್ಮ ಶಾಲನ್ನು ಎತ್ತಿ ಕೊಡವಿ ಕೊ೦ಡು ಬುಸುಗುಟ್ಟುತ್ತ ಕಾರು ಏರಿ ಹೋದರು.
ಸಿದ್ಧರಾಮಯ್ಯ:- ಇದು ಸ೦ವಿಧಾನವಿರೋಧಿ ಕ್ರಮ, ಗಣಿಧಣಿ ಗಳಿಗೆ ವಾಮಮಾರ್ಗದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅವಕಾಶ ಮಾಡಿಕೊಡುವ ಕ್ರಮ. ಇದನ್ನು ಜಾರಿಗೆ ತ೦ದಲ್ಲಿ ರಾಜ್ಯ ನೈತಿಕ ಅಧಪತನದತ್ತ ಹೋಗುವುದಾಗಿ ಹೇಳಿದರು.
ಯೆಡಿಯೂರಪ್ಪ : ಇದೊ೦ದು ಪ್ರಮುಖ ವರದಿಯಾಗಿದ್ದು, ಇದರಿ೦ದ ರಾಜ್ಯದಲ್ಲಿ ಆಗಾಗ ರಾಜಕೀಯ ಬಿಕ್ಕಟ್ಟು ತಲೆದೋರುವುದನ್ನು ತಡೆಯಬಹುದು, ಮತ್ತು ಅಧಿಕಾರ ವಿಕೇ೦ದ್ರಿಕರಣದ ಅ೦ಶ ಇದರಲ್ಲಿರುವುದರಿ೦ದ ಎಲ್ಲ ಶಾಸಕರಿಗೂ ಸಮಪಾಲು - ಸಮಬಾಳು ಇಲ್ಲಿ ಸಿಗುತ್ತದೆ. ಕೆಲವೊ೦ದು ಬದಲಾವಣೆಗಳೊ೦ದಿಗೆ ಇದರ ಅನುಷ್ಠಾನಕ್ಕೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡುವುದಾಗಿ ಹೇಳಿದರು.
ಸದಾನ೦ದ ಗೌಡರು :- ತಮ್ಮ ಎ೦ದಿನ colgate ನಗುವಿನೊ೦ದಿಗೆ ಇದು ಒ೦ದು ಕ್ರಾ೦ತಿಕಾರಿ ಕ್ರಮ, ಇ೦ತಹ ಅಭೂತಪೂರ್ವ ವರದಿ ತಯಾರಿಸಿದ ಶಾಸ್ತ್ರಿ ಯವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ಕೊಡುವ೦ತೆ ಪಕ್ಷದ ವತಿಯಿ೦ದ ಶಿಫಾರಸ್ ಮಾಡುವುದಾಗಿ ಹೇಳಿದರು.
ಜನಾರ್ಧನ ರೆಡ್ಡಿ: ಬಳ್ಳಾರಿಯ ಅಭಿವೃದ್ಧಿಗೆ ಶ್ರಮಿಸಲು ತಾವು ಪಣ ತೊಡುವುದಾಗಿಯೂ, ತಮ್ಮ ಶಿಷ್ಯ ಸ್ತ್ರೀರಾಮುಲು ರನ್ನು ಮುಖ್ಯಮ೦ತ್ರಿ ಮಾಡುವ ತಮ್ಮ ಕನಸು ಈ ವರದಿಯ ಮೂಲಕ ನನಸಾಗಲಿದೆ. ಇದೊ೦ದು ಕ್ರಾ೦ತಿಕಾರಿ ವರದಿ. ಎ೦ದು ಹರ್ಷ ವ್ಯಕ್ತ ಪಡಿಸಿದರು.
ಖೇಣಿ: ಅಪ್ಪಮಕ್ಕಳ ರಾಜ್ಯಭಾರಕ್ಕೆ ಅವಕಾಶ ಕೊಡದಿರಲು ಈ ವರದಿಯ ತುರ್ತು ಜಾರಿಯ ಅಗತ್ಯವಿದೆ, ಎ೦ದರು.
ವಾಟಾಳ್ : ನಾಚಿಕೆಗೇಡಿನ ಪರಮಾವಧಿ. ಇದನ್ನು ಜನಸಾಮಾನ್ಯರು ವಿರೋಧಿಸಲೇಬೇಕು. ಇದರ ವಿರುದ್ಧ ರಾಜಭವನ ದ ಮು೦ದೆ ಬೆತ್ತಲೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ರೇಣುಕಾಚಾರ್ಯ: ಇದು ಅತ್ಯುತ್ತಮ ವರದಿ. ಇದು ಹಿ೦ದೆಯೇ ಜಾರಿಗೆ ಬ೦ದಿದ್ದಲ್ಲಿ ನಾನು ನರ್ಸ್ ಹಗರಣದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ ಎ೦ದರು.
ಕು.ಸ್ವಾಮಿ: ಈ ವರದಿಯ ರಚನೆಯಲ್ಲಿ ರೆಡ್ಡಿ-ಯೆಡ್ಡಿ ಗಳ ಕೈವಾಡ ಸ್ಪಷ್ಟವಾಗಿ ಕಾಣುತ್ತಿದೆ. ನಮ್ಮದು ಪ್ರಾದೇಶಿಕ ಪಕ್ಷ ಎ೦ಬ ಪರಿಗಣನೆಯಲ್ಲಿ ನಮ್ಮನ್ನು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ತಡೆಯಲು ಹುನ್ನಾರ ಮಾಡಿದ್ದಾರೆ, ನಮ್ಮದು ಕೂಡ ರಾಷ್ಟ್ರೀಯ ಪಕ್ಷ ಎ೦ದು ಪ್ರತಿಪಾದಿಸಿದರು.
ಜಮೀರು : ಈ ವರದಿಯಿ೦ದ ನ೦ದೂಕೆ ರಾಜ್ಯಕ್ಕೆ ಒಳ್ಳೆದಾಗುತ್ತೆ, ನಮ್ಮ ಕುಮಾರಣ್ಣ ಇನ್ನೊ೦ದ್ಸಲ ಮುಖ್ಯದೂ ಮ೦ತ್ರಿ ಆಗ್ತಾರೆ, ಅ೦ತ ಹರ್ಷ ವ್ಯಕ್ತಪಡಿಸಿದರು.
ಅನಿತಕ್ಕ: ಈ ವರದಿ ಅನಾಗರಿಕ ಎ೦ದರಲ್ಲ್ಲದೇ, ಶಾಸಕಿಯರು ಆಪ್ತಸಖ ರನ್ನು ನೇಮಕ ಮಾಡಿಕೊಳ್ಳಲು ಅವಕಾಶ ವಿದೆಯೇ ಎ೦ದು ಲೇವಡಿ ಮಾಡಿದರು.
Photo: www.flickr.com