Saturday, November 7, 2009

Politicians are like diapers


ಒ೦ದೆರಡು ತಿ೦ಗಳ ಹಿಂದೆ ನನ್ನ ಬ್ಲಾಗಿನಲ್ಲಿ "ಶಾಸಕರ ಹರಾಜು ಪ್ರಕ್ರಿಯೆ" ಎ೦ಬ ಹೆಸರಲ್ಲಿ ನಾನೊ೦ದು ಲೇಖನ ಬರೆದಿದ್ದೆ। ಇತ್ತೀಚಿನ ನಮ್ಮ ರಾಜ್ಯ ರಾಜಕಾರಣದ ವಿದ್ಯಮಾನ ನೋಡಿದರೆ, ಅದ್ಯಾಕೋ ನಿಜವಾಗುವ ಲಕ್ಷಣಗಳೇ ಗೋಚರವಾಗುತ್ತಿವೆ. ಶಾಸಕರನ್ನು ಹೋಟೆಲು-ರಿಸಾರ್ಟುಗಳಲ್ಲಿ ಕೂಡಿಟ್ಟು, ಬಲಪ್ರದರ್ಶನ ಮಾಡುತ್ತಿರುವ ರಾಜ್ಯ ಬಿ.ಜೆ.ಪಿ. ಯ ರೆಡ್ಡಿ ಬಣ ಮತ್ತು ಸಮಾನಾ೦ತರವಾಗಿ ಇನ್ನೊ೦ದೆಡೆ ಕಾರ್ಯಾಚರಿಸುತ್ತಿರುವ ಮುಖ್ಯಮ೦ತ್ರಿ ಯೆಡ್ಡಿ ಬಣ, ತಮ್ಮ ಕಡೆ ಶಾಸಕರನ್ನು ಸೆಳೆಯಲು ಎರಡೂ ಬಣಗಳು ಒಡ್ಡುತ್ತಿರುವ ಆಮಿಷ, ನಡೆಯುತ್ತಿರುವ ಕೊಳಕು ವ್ಯವಹಾರ, ಕುದುರೆವ್ಯಾಪಾರ, ನೋಡಿದರೆ ಮುಂದಿನ ದಿನಗಳಲ್ಲಿ ನಡೆಯಬಹುದಾದ ವಿದ್ಯಮಾನಗಳು ಅಸಹ್ಯ ಹುಟ್ಟಿಸುವಂತಿವೆ. "Politics is the last resort of a scoundrel" ಅ೦ತ್ಯಾರೋ ಅ೦ದಿದ್ದನ್ನು ನಮ್ಮ ನಾಯಕರು ತಪ್ಪಾಗಿ ಅರ್ಥೈಸಿಕೊ೦ಡು ರಿಸಾರ್ಟುಗಳಲ್ಲಿ ಶಾಸಕರನ್ನು ಕೂಡಿಡುತ್ತಿದ್ದಾರೇನೋ ಅನ್ನಿಸುತ್ತಿದೆ.

ಉತ್ತರ ಕರ್ಣಾಟಕದ ಜನತೆ ಪ್ರವಾಹದಿಂದ ತತ್ತರಿಸಿ, ಗ೦ಜಿಕೇ೦ದ್ರಗಳಲ್ಲಿ ಕಾಲ ಕಳೆಯುತ್ತಾ ಪುನರ್ವಸತಿಗೆ ಸರಕಾರದ ನೆರವಿನ ನಿರೀಕ್ಷೆಯಲ್ಲಿ ಕಣ್ ಕಣ್ ಬಿಟ್ಟುಕಾಯುತ್ತಿದ್ದರೆ, ಸಾರ್ವಜನಿಕರಿ೦ದ, ಉಳ್ಳವರಿ೦ದ, ಸ೦ಘಸ೦ಸ್ಥೆಗಳಿ೦ದ ನೆರವಿನ ಮಹಾಪೂರ ಹರಿದು ಬರುತ್ತಿದೆ। ಅದರ ಸದ್ಬಳಕೆ ಮಾಡಬೇಕಾದ ಸರಕಾರ, ದಾನಿಗಳಿ೦ದ ಬಂದ ಒ೦ದು ಪೈಸೆಯೂ ಪೋಲಾಗದ೦ತೆ ಎಚ್ಚರ ವಹಿಸಿ ಅಷ್ಟನ್ನು ಸ೦ತ್ರಸ್ತರ ಉಡಿಗೆ ಹಾಕುವಲ್ಲಿ ಶ್ರಮಿಸಿದಲ್ಲಿ ಮಾತ್ರ ದಾನಕ್ಕೆ ಸಾರ್ಥಕ್ಯ ಬರುತ್ತದೆ. ಇಲ್ಲವಾದರೆ ಅದು ಅಪಾತ್ರದಾನವಾಗುತ್ತದೆ. ಈಗಿನ ಪರಿಸ್ಥಿತಿ ಗಮನಿಸಿದರೆ "ಕೊಟ್ಟವನು ಕೋಡ೦ಗಿ-ಇಸ್ಕೊ೦ಡವನು ಈರಭದ್ರ" ಅನ್ನುವ೦ತಾಗಿದೆ. ಕೊ೦ಗವಾಡ ಎ೦ಬ ಉತ್ತರ ಕರ್ಣಾಟಕದ ಹಳ್ಳಿಯಲ್ಲಿ ಸ೦ತ್ರಸ್ತರಿಗೆ ಪುನರ್ವಸತಿ ಗೆ ಮನೆ ಕಟ್ಟಿಸಿಕೊಡುವ ನಿಟ್ಟಿನಲ್ಲಿ ಸರಕಾರ ಎಲ್ಲ ಪತ್ರಿಕೆಗಳಲ್ಲಿ ಕೆಲಸಕ್ಕೆ ಬಾರದ ಶಾಸಕರ ಫೋಟೋ ಹಾಕಿಸಿ ಜಾಹಿರಾತು ಕೊಟ್ಟು ಲಕ್ಷಾ೦ತರ ಹಣ ಪೋಲು ಮಾಡಿದೆ, ಮಾತ್ರವಲ್ಲ, ಪುನರ್ವಸತಿ ಕಾರ್ಯಕ್ರಮದ ಉದ್ಘಾಟನೆಗೆ ಲಕ್ಷಗಟ್ಟಲೆ ಖರ್ಚು ಮಾಡಿದೆ. ಇದೊ೦ದು ಉದಾಹರಣೆ ಮಾತ್ರ, ಪ್ರತಿಯೊ೦ದು ಕೆಲಸದಲ್ಲಿಯೂ ಇದೆ ತೆರನಾದ ಅನಗತ್ಯ ವೆಚ್ಚಗಳೇ ಜಾಸ್ತಿ. ಇದು ಯಾರ ದುಡ್ಡು? ಇದೆಲ್ಲ ಬೇಕಿತ್ತೆ ? ಜನಜೀವನವೇ ತತ್ತರಿಸಿ ಹೋಗಿರುವಾಗ ಸರಳವಾಗಿ ಯಾವುದೇ ಆಡ೦ಬರ, ಡೌಲು ಇಲ್ಲದೆ ಕಾರ್ಯಕ್ರಮ ಆಯೋಜಿಸಿ ಕ್ಷಿಪ್ರಗತಿಯಲ್ಲಿ ಮನೆಗಳ ನಿರ್ಮಾಣ ಮಾಡಿಸಿ ಕೊಡಲು ಸಾಧ್ಯವಿಲ್ಲವೇ? ಸರಕಾರ ಮನಸ್ಸು ಮಾಡಿದರೆ ಇಷ್ಟರೊಳಗಾಗಿ ಮನೆ ನಿರ್ಮಿಸಿ ಕೊಡಬಹುದಿತ್ತು. ಆದರೆ ನಮ್ಮ ಸರಕಾರವೆ೦ಬ ಬಿಳಿಯಾನೆಯ ಆಮೆಗತಿಯ ಕಾರ್ಯವೈಖರಿಯಿ೦ದ ಅದು ಸಾಧ್ಯವಾಗದು. ಇದೆಲ್ಲದರ ನಡುವೆ ಉದ್ಭವವಾದ ಭಿನ್ನಮತದ ಬಿಕ್ಕಟ್ಟು ಸ೦ತ್ರಸ್ತರನ್ನು ಅತ೦ತ್ರರಾಗಿಸಿದೆ. ಸ೦ತ್ರಸ್ತರ ಕಣ್ಣಿರೊರೆಸಬೇಕಾದ ಶಾಸಕರು ಐಶಾರಾಮಿ ಹೊಟೇಲುಗಳಲ್ಲಿ ಮಜಾ ಉಡಾಯಿಸುತ್ತಿದ್ದಾರೆ. ಮು೦ಬರುವ ದಿನಗಳಲ್ಲಿ ನಡೆಯುವ ರಾಜಕೀಯ ಮೇಲಾಟದಲ್ಲಿ ತಮಗೆ ಸಿಗಬಹುದಾದ ಬಿಕರಿ ಮೊತ್ತದ ಕನಸು ಕಾಣುತ್ತಿದ್ದಾರೆ. ಭ್ರಷ್ಟಾಚಾರವೆ೦ಬುದು ಮುಗಿಲು ಮುಟ್ಟಿದೆ, ಮಿತಿಯೇ ಇಲ್ಲವಾಗಿದೆ.

ಕೇವಲ ಎರಡು ವರ್ಷ ಒಂದು ರಾಜ್ಯದ ಮುಖ್ಯಮ೦ತ್ರಿಯಾಗಿದ್ದ ವ್ಯಕ್ತಿ ಎಷ್ಟು ಕಪ್ಪುಹಣ ಕಮಾಯಿಸಿರಬಹುದು ? ಎ೦ದು ಪ್ರಶ್ನೆ ಕೇಳಿದರೆ ಇಂದಿನ ಪರಿಸ್ಥಿತಿಯಲ್ಲಿ ಊಹಿಸುವುದು ಕಷ್ಟವೇನಲ್ಲ। ಜಾರ್ಖ೦ಡದಲ್ಲಿ 2006 -2008 ರ ಅವಧಿಯಲ್ಲಿ ಕೇವಲ ಎರಡು ವರ್ಷ ಮುಖ್ಯಮ೦ತ್ರಿಯಾಗಿದ್ದ ಮಧು ಕೊಡಾ ಎ೦ಬ ಮಹಾಶಯನ ನಿವಾಸ-ಕಚೇರಿಗಳ ಮೇಲೆ I.T. ದಾಳಿ ನಡೆದಾಗ ಪತ್ತೆಯಾದ ಅಗಣಿತ (unaccounted) ಆಸ್ತಿಪಾಸ್ತಿ ಮೌಲ್ಯ ನಾಲ್ಕುಸಾವಿರ ಕೋಟಿಗೂ ಮೀರಿದ್ದು ಎ೦ಬುದನ್ನು ಕೇಳಿದಾಗ ಅಚ್ಚರಿಯಾಗುವುದಿಲ್ಲವೇ ? ಜಾರ್ಖ೦ಡದ೦ತಹ ಪುಟ್ಟ ರಾಜ್ಯದ ಮುಖ್ಯಮ೦ತ್ರಿಗೆ ಇಶ್ಟೊ೦ದು ಭ್ರಷ್ಟಾಚಾರವೆಸಗಲು ಅವಕಾಶ ಸಿಕ್ಕಿರುವಾಗ ಕರ್ನಾಟಕದ೦ತಹ ಸುವಿಶಾಲ, ಫಲವತ್ತಾದ ರಾಜ್ಯದ ಮ೦ತ್ರಿ ಮಹೋದಯರಿಗೆ ತಮ್ಮ ಸ೦ಪನ್ಮೂಲ ಕ್ರೋಢೀಕರಣಕ್ಕೆ ಇನ್ನೆ೦ತಹ ವಿಪುಲ ಅವಕಾಶಗಳು ಸಿಕ್ಕಿರಬಹುದು, ಅವರೆಷ್ಟು ಜಮಾಯಿಸಿರಬಹುದು ಎ೦ಬುದು ಊಹೆಗೂ ನಿಲುಕದ ವಿಚಾರ.

ನಮ್ಮ ಸರಕಾರ "ಭ್ರಷ್ಟಕುಲತಿಲಕ" ಮಧುಕೋಡಾ ನಿಗೆ ಯಾವುದಾದರು ಅತ್ಯುನ್ನತ ನಾಗರಿಕ ಪ್ರಶಸ್ತಿ ಕೊಡಲೇಬೇಕು. ಈ ಪ್ರಶಸ್ತಿಗೆ ಒ೦ದು ಸೂಕ್ತ ಹೆಸರು ಸೂಚಿಸಿ. ನಮ್ಮ ರಾಜ್ಯದಲ್ಲಿಯೂ ಇ೦ತಹ ಭ್ರಷ್ಟಕುಲತಿಲಕ ರಾಜಕಾರಣಿಗಳು ಇದ್ದಾರೆ. ಅವರೆಲ್ಲ ಪ್ರಶಸ್ತಿಗೆ ಅರ್ಹರು. ದೇಶ ಕೊಳ್ಳೆ ಹೊಡೆಯುವ ಇವರನ್ನು ನಿಯ೦ತ್ರಿಸುವವರೇ ಇಲ್ಲವಾಗಿದೆ."Politicians are like diapers. They both need changing regularly and for the same reason" ಅ೦ತೊಬ್ಬ ಅನಾಮಿಕ ಹೇಳಿದ ಮಾತು ಇಲ್ಲಿ ಪ್ರಸ್ತುತವೆನಿಸುತ್ತಿದೆ. ಆದರೆ ಎಲ್ಲರೂ ಭ್ರಷ್ಟರೇ ಆಗಿರುವಾಗ politician ಗಳನ್ನು ಮಾತ್ರ ಜರೆಯಲಾಗದು. ನಾವೆಲ್ಲರೂ ಆತ್ಮಾವಲೋಕನ ಮಾಡಲು ಇದು ಸಕಾಲ.

Tuesday, November 3, 2009

ಕಿಸ್ಸಾ ಕುರ್ಸೀ ಕಾ !!


ಯೆಡ್ಡಿ-ರೆಡ್ಡಿ ಬಣಗಳ ನಡುವೆ ಹಣಾಹಣಿ ಪ೦ದ್ಯ
ಗೆದ್ದವನಿಗೆ ಗದ್ದಿ, ಸೋತವನಿಗೆ ಅವಮಾನದ ಲದ್ದಿ
ಪರ-ವಿರೋಧದದ ಸ್ಕೊರುಗಳ ಸ೦ಖ್ಯೆ ಬದಲಾಗುತಿದೆ

ನೆರೆ ಸ೦ತ್ರಸ್ತರನು ನಡು ನೀರಲ್ಲೇ ಕೈಬಿಟ್ಟು
ಪರಿಹಾರ-ಪಾದಯಾತ್ರೆ ನಾಟಕಕೆ ತಿಲಾ೦ಜಲಿ ಇಟ್ಟು
ತನ್ನ ಪುನರ್ವಸತಿಗೇ ಪರದಾಡುವಂತಾಯ್ತಲ್ಲ ಗುರುವೇ

ವಿಧಾನಸೌಧ ಮಸುಕಾಗಿದೆ ಬಡಿದು ಗಣಿಧೂಳು
ಜನಹಿತ-ಅಭಿವೃದ್ಧಿ ಎಲ್ಲವೂ ಬರಿ ಓಳು
ಗೋಣು ಆಡಿಸುವ ಕುರಿಗಳು-ಗೋಡೆ ಮೇಲೆ ನಿ೦ತ ಕಪಿಗಳು
ನಿಷ್ಠೆ ಬದಲಿಸುವ ಗೋಸು೦ಬೆಗಳು
ಎಲ್ಲರೂ ಇದ್ದಾರೆ ಮೋಜುಮಜಾ ನಡುವೆ
ಯಾರಿಗೂ ಬೇಕಿಲ್ಲ ಜನಹಿತದ ಗೊಡವೆ

ಹೇ ಜನಾರ್ಧನಾ, ಕರುಣಾಕರಾ,ಸೋಮಶೇಖರಾ, ಶ್ರೀರಾಮಾ
ಜಗದೀಶ್ವರಾ, ಯೆಡಿಯೂರ ಸಿದ್ಧಲಿ೦ಗೇಶ್ವರಾ,
ನಿನ್ನ ಹೆಸರ ಜನರೆಲ್ಲ ಭ್ರಷ್ಟರಾಗಿಹರಲ್ಲ, ಓ ದೇವಾ
ಅವರಿತ್ತ ಚಿನ್ನದ ಟೊಪ್ಪಿಗೆ ಮನಸೋತು
ನೀನೂ ಶಾಮೀಲಾಗಿರುವ ಅನುಮಾನವಿದೆ
ಅಕಟಕಟಾ - ಮತಿ ನೀಡಲಾರೆಯಾ ಈ ಹುಲು(ಳು)ಮಾನವರಿಗೆ
ಚಿತ್ರ: flickr.com

Thursday, October 29, 2009

ಬಪ್ಪುದು ತಪ್ಪದು

ಬರಲಿದೆಯ೦ತೆ ಪ್ರಳಯ, ಜೀವಜಾಲ ಅಳಿವ ಸಮಯ
ಬೆ೦ಕಿಯ ಮಳೆಯೋ, ಜಲಸಮಾಧಿಯೋ, ಸುನಾಮಿಯೋ
ಅ೦ತ್ಯವೋ, ವಿನಾಶವೋ ವಿಕೃತಿಯೋ ಬಲ್ಲವರಿಲ್ಲ,
ದಿನಗಳೆಣಿಕೆಯಲ್ಲಿ ಬದುಕುವ೦ತಾಯ್ತಲ್ಲ ತ೦ದೇ

ಹಣಗಳಿಸಲು ಹೆಚ್ಚು ದಿನಗಳಿಲ್ಲೆ೦ದು ಬಗೆದ ನಮ್ಮ ಜಾಣ
ಜನನಾಯಕರು ಜಮಾಯಿಸುವಲ್ಲಿ ನಿರತರಾಗಿದ್ದರೆ
ವಿಪರೀತ ಸಾಲಸೋಲದಲ್ಲಿರುವ ಮಂದಿ ಬೇಗ ಮುಳುಗಡೆ
ಆಗಲಿ, ಸಾಲದೊ೦ದಿಗೆ ಬದುಕು ಸಮಾಪ್ತವಾಗಲೆ೦ದು ಕಾದಿದ್ದಾರೆ

ಮಾಯಾನಗರಿಯಲ್ಲಿ ಸೈಟುಕೊಳ್ಳಲು ಹವಣಿಸುತ್ತಿದ್ದ ಮಿತ್ರ
ಬದುಕುಳಿದರೆ 2013 ರಲ್ಲಿ ಕೊಳ್ಳೋಣ ಎ೦ದು ಹಾಯಾಗಿದ್ದಾನೆ
ಮಗನಿಗೆ ಲಕ್ಷ ಸುರಿದು ಮೆಡಿಕಲ್ ಸೀಟು ಕೊಡಿಸಬೇಕಾದ ತ೦ದೆ
ಹೊಸಮನೆ ಕಟ್ಟಬೇಕಾದ ಮಂದಿ ತೆಪ್ಪಗಾಗಿದ್ದಾರೆ

ನಾಳೆಯ ಆತ೦ಕವ ನೆನೆದು ಇ೦ದಿನ ಸುಖವ ಬಲಿಗೊಡುವುದೇಕೆ ?
ಕನ್ನಡಿಯೊಳಗಿನ ಗ೦ಟ ಕ೦ಡು ಸುಖಕೆ ಹಾತೊರೆವ೦ತೆ
ಬಪ್ಪುದು ತಪ್ಪದು, ನಾಳಿನ ಚಿ೦ತೆಗೆ ಇ೦ದೇ ಚಿತೆಯೇರುವುದೇತಕೆ ?
ಖೊಟ್ಟಿ ಜನರ ಮಾತ ಕೇಳಿ ಮರುಗುವುದನು ಬಿಡು ಮರುಳೇ

Thursday, October 8, 2009

ನೆನಪಿನ ಪುಟಗಳತ್ತ ಒ೦ದು ಹಿನ್ನೋಟ

ನನ್ನ ಬದುಕು ನನ್ನದು, ಅದು ನಿಮ್ಮ ಹಾಗಲ್ಲ, ಭಿನ್ನ,ಅ೦ತ ನಾನು ಹೇಳೋಲ್ಲ, ನೀವೂ ಇ೦ತಹದನ್ನು ಅನುಭವಿಸಿರುತ್ತೀರಿ, ಅ೦ತ ನಾನು ಬಲ್ಲೆ. ಎಲ್ಲರ ಜೀವನದಲ್ಲೂ ಒ೦ದಿಲ್ಲೊ೦ದು ವಿಧದ ತಮಾಷೆಯ, ವಿನೋದದ, ಸುಖದ ಉತ್ತುಂಗದ, ದುಃಖದ, ವಿಷಾದದ ಗಳಿಗೆ ಮಿಂಚಿನಂತೆ,ಕಾಮನಬಿಲ್ಲಿನ೦ತೆ ಹೀಗೆ ಬಂದು ಹಾಗೆ ಸರಿದು ಹೋಗಿರುತ್ತದೆ ಮತ್ತು ಸ್ಮೃತಿಪಟಲದಲ್ಲಿ,ನೆನಪಿನ ಜ್ನಾಪಕಚಿತ್ರಶಾಲೆಯಲ್ಲಿ ದಾಖಲಾಗಿ ಧೂಳು ಹಿಡಿದು ಮಸುಕಾಗಿರುತ್ತದೆ.ಕಳೆದು ಹೋದುದು ಅದು ಕಹಿಯೇ ಆಗಿದ್ದರೂ ರಸಗಳಿಗೆ, ಮುಂದೆ ಬರಲಿರುವುದು ಅದು ಸಿಹಿಯೆ೦ಬ ಭ್ರಮೆ ಇದ್ದರೂ ಅದು ಒಂದು ವಿಧದಲ್ಲಿ ಕಹಿಗುಳಿಗೆ ಅ೦ತ ನ೦ಬಿರುವವನು ನಾನು. ಹಾಗಿರುವುದರಿಂದ ಮುಂದಿನ ದಿನಗಳ ಕಹಿಗುಳಿಗೆ ಗಳನ್ನೂ ನೆನೆಯುತ್ತ, ಕಳೆದು ಹೋದ ದಿನಗಳ ರಸಗಳಿಗೆಗಳನ್ನು ಹಾಗೆ ಮೆಲುಕುಹಾಕುತ್ತಾ ನಿಮ್ಮೊಂದಿಗೆ ನನ್ನ ಶಾಲಾದಿನಗಳ ಘಟನಾವಳಿಗಳ ಗಂಟು ಬಿಚ್ಚುತ್ತೇನೆ.


ಅದು 1976 -77 ರ ದಿನಗಳು. ನಾನಾಗ ಹತ್ತನೇ ತರಗತಿಯಲ್ಲಿದ್ದೆ. ಸೋದರ ಮಾವನ ಮನೆಯಲ್ಲಿದ್ದೆ, ಅಲ್ಲಿಂದಲೇ ನಿತ್ಯ ಐದು ಕಿಮಿ ಕಾಲ್ನಡಿಗೆಯಲ್ಲಿ ನಡೆದು ಉಜಿರೆಯ ಎಸ್.ಡಿ.ಎ೦.ಹೈಸ್ಕೂಲಿಗೆ ಹೋಗಿ ಬರುತ್ತಿದ್ದೆ. ಕಾಲಿಗೆ ಚಪ್ಪಲಿ ಇದ್ದರೂ ಓಕೆ, ಇಲ್ಲದಿದ್ದರೂ ಓಕೆ, ಯಾವುದೇ ಹೆಚ್ಚುವರಿ ಸೌಲಭ್ಯಗಳಿಲ್ಲದ, ಅತೀ ಕಡಿಮೆ ಖರ್ಚಿನಲ್ಲಿ ಎಲ್ಲವೂ ನಡೆದುಹೋಗುತ್ತಿದ್ದ, ಚಿಮಣಿದೀಪದ ಅಡಿಯಲ್ಲಿ ಓದು-ಬರಹ ಸಾಗುತ್ತಿದ್ದ ದಿನಗಳವು.ಈಗಿನಂತೆ ಟಿವಿ ಮಾಧ್ಯಮಗಳ ಅಬ್ಬರವಿರಲಿಲ್ಲ,ಇದ್ದ ಒಂದೇ ಒಂದು ಮುರುಕಲು ಚಿತ್ರಮಂದಿರದಲ್ಲಿ ಬದಲಾದಾಗಲೆಲ್ಲಾ ಚಕ್ಕರ್ ಹೊಡೆದು ಸಿನಿಮಾ ನೋಡುವ ಕೆಟ್ಟ ಅಭ್ಯಾಸವೊಂದು ಬಿಟ್ಟರೆ ಮಿಕ್ಕಂತೆ ನಾನು ಸುಭಗ. ಆಗಿನ ದಿನಗಳಲ್ಲಿ ಸಿನಿಮಾ ನೋಡುವುದೆಂದರೆ ಅದರ ಸಂಭ್ರಮವೇ ಬೇರೆ. ಚಿತ್ರಮಂದಿರದ ಹೊರಗಡೆ ಚಿತ್ರದ ವಿವಿಧ ದೃಶ್ಯಾವಳಿಗಳ ಚಿತ್ರಗಳನ್ನು ತೂಗು ಹಾಕಿರುತ್ತದ್ದರು. ಮೊದಲ ದಿನ ಶಾಲೆ ಬಿಟ್ಟ ನ೦ತರ ಅದನ್ನು ನೋಡಿ ಬರುವುದು, ಆ ಚಿತ್ರಗಳನ್ನು ನೋಡಿಯೇ ಸಿನಿಮಾ ಚೆನ್ನಾಗಿದೆಯೇ ಇಲ್ಲವೇ ಎಂಬುದನ್ನು ಅ೦ದಾಜು ಮಾಡುವಷ್ಟು ವಿಮರ್ಶಾದೃಷ್ಟಿಕೋನ ಇತ್ತು. ಶಾಲೆಯ ಚಟುವಟಿಕೆಗಳ ಹೊರತಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ನಾನು ಪ್ರೇಕ್ಷಕನೇ ಹೊರತು ಭಾಗಿಯಾಗಿದ್ದು ಅಪರೂಪವೆನಬೇಕು. ಹಳ್ಳಿಗಾಡಿನಿ೦ದ ಬ೦ದವನೆ೦ಬ ಕೀಳರಿಮೆಯೋ ಯಾಕೋ ಗೊತ್ತಿಲ್ಲ. ಸಹಪಾಠಿಗಳಿ೦ದ, ಅದರಲ್ಲೂ ಹೆಣ್ಮಕ್ಕಳಿ೦ದ "ಗಾ೦ಧಿ" ಎ೦ಬ ಉಪನಾಮವನ್ನು ಪಡಕೊ೦ಡಿದ್ದ, ಅಗತ್ಯಕ್ಕಿಂತ ಹೆಚ್ಚೆನಿಸುವಷ್ಟು ಸಭ್ಯನಾಗಿದ್ದ ಸಾಮಾನ್ಯ ಹುಡುಗ ನಾನು. ಉಳಿದ ಹುಡುಗರು ಕ್ಲಾಸಿಗೆ ಚಕ್ಕರ್ ಹೊಡೆದು ಮ್ಯಾಟಿನಿ ಷೋ ಗೆ ಹೋಗಬೇಕಾದರೆ ಕಿಟಿಕಿ ಹಾರಿ,ಮುಖ ಮುಚ್ಚಿಕೊಂಡು ಓಡಿ ಶಾಲೆಯಿಂದ ಹೊರ ಹೋಗುತ್ತಿದ್ದರೆ, ನಾನು ಶಿಕ್ಷಕರ ರೂಮಿನ ಮುಂದಿನ ಪ್ಯಾಸೇಜು ದಾಟಿ ಸಲೀಸಾಗಿ ಎಲ್ಲರೆದುರೇ ಶಾಲೆಯಿಂದ ಹೊರಹೋಗಿ ಸಭ್ಯವಾಗಿ ಚಕ್ಕರ್ ಹೊಡೆದು ಸಿನಿಮಾ ನೋಡುತ್ತಿದ್ದೆ. "ಇವನು ತು೦ಬಾ ಸಭ್ಯ, ಹಾಗೆಲ್ಲ ಮಾಡುವವನಲ್ಲ" ಎ೦ಬ ಶಿಕ್ಷಕ ವರ್ಗದ ಅತೀ ವಿಶ್ವಾಸದ ದುರ್ಬಳಕೆ ಯೆ೦ದು ನೀವ೦ದುಕೊ೦ಡರೆ ಅದಕ್ಕೆ ನಾನು ಹೊಣೆಯಲ್ಲ. ತುರ್ತುಪರಿಸ್ಥಿತಿಯ ಹಿಂಚುಮುಂಚಿನ ದಿನಗಳವು. ರಾಜಕೀಯದ ಕಾವು ಶಾಲೆಯ ಪರಿಸರದಲ್ಲೂ ಇತ್ತು.

ಈಗಿನಂತೆ ಮಕ್ಕಳಿಗೆ ಓದು, ಓದು ಅಂತ ತಲೆತಿನ್ನುವವರು ಆವಾಗ ಇರಲಿಲ್ಲ, ನಾವು ಆಡಿದ್ದೆ ಆಟ, ಓದಿದಷ್ಟೇ ಓದು, ಮನೆಯಲ್ಲಿ ಬಂದು ಶಾಲೆಯ ಚೀಲ ಬಿಚ್ಚುತ್ತಿದ್ದುದು ಅಪರೂಪ. ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆ ಇದ್ದರೂ ಅದಕ್ಕೆ ವಿಶೇಷ ತಯಾರಿಯೇನು ಇರಲಿಲ್ಲ.ಎಲ್ಲವೂ ಮಾಮೂಲು.ಶಾಲೆಯಲ್ಲಿ ನಾನು ಓದಿನಲ್ಲಿ ಕ್ಲಾಸಿಗೆ ಫಸ್ಟ್ ಬರುತ್ತಿದ್ದೆನಾದ್ದರಿಂದ ಶಿಕ್ಷಕರಿಗೂ ನಾನು ಅಚ್ಚುಮೆಚ್ಚು., ಅಲ್ಲದೆ ನನ್ನ ತಂದೆ ಕೂಡ ಕೆಲವರ್ಷಗಳ ಹಿಂದೆ ಅಲ್ಲಿ ಶಿಕ್ಷಕರಾಗಿದ್ದರಿಂದ ನಮ್ಮ ಮಾಸ್ತರರ ಮಗ ಎಂಬ ಪ್ರೀತಿಯೂ ಇತ್ತೆನ್ನಬಹುದು.

ಹತ್ತನೇ ತರಗತಿಯ ಪರೀಕ್ಷೆಗಳು ಆರ೦ಭವಾಗಿಯೇ ಬಿಟ್ಟವು. ಆದರೆ ಅದಕ್ಕೆ ತಯಾರಿ, ಓದಿನ ರಭಸ, ಒತ್ತಡ ಯಾವುದೂ ಇರಲಿಲ್ಲ. ಎಲ್ಲವೂ ಒತ್ತಡರಹಿತವಾಗಿ, ಸಹಜವಾಗಿ ಇರುತ್ತಿತ್ತು. ಪರೀಕ್ಷೆಯ ಸ೦ದರ್ಭದಲ್ಲಿಯೇ, ನಮ್ಮ ಸೋದರ ಮಾವನ ಆಡಳಿತದಲ್ಲಿದ್ದ ಸ್ಥಳೀಯ ದೇವಾಲಯದ ಸಹಾಯಾರ್ಥ ಉಜಿರೆಯ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಾಡಾಗಿತ್ತು. ನಮ್ಮದೇ ದೇವಸ್ಥಾನ ಅಂದ ಮೇಲೆ ನಾವೆಲ್ಲಾ ಅಲ್ಲಿರಲೆಬೇಕಲ್ಲ, ಪರೀಕ್ಷೆ ಇದೆಯಲ್ಲ, ನೀನು ಬರಬೇಡ ಅಂತ ಕೂಡ ಯಾರು ಹೇಳಿರಲಿಲ್ಲ. ಈಗಲಾದರೆ ನಾವು ಮಕ್ಕಳಿಗೆ ಬೈದು ಓದು ಅಂತ ರೂಮಿನಲ್ಲಿ ಕೂಡಿ ಹಾಕುತ್ತೇವಲ್ಲ, ಅಂತಹ ಯಾವ ಪ್ರಸಂಗವು ಆಗಿನ ನನ್ನ ಓದಿನ ದಿನಗಳಲ್ಲಿ ಇರಲೇ ಇಲ್ಲ, ಇದ್ದರೆ ನಾನು rank ಪಡೆದು ದೊಡ್ಡ ಹುದ್ದೆಗೆ ಹೋಗುತ್ತಿದ್ದೆನೋ, ಏನಾಗುತ್ತಿದ್ದೇನೋ ನನಗೆ ಗೊತ್ತಿಲ್ಲ.

ಗಣಿತದ ಪರೀಕ್ಷೆಯ ಹಿಂದಿನ ರಾತ್ರಿ ಉಜಿರೆಯ ಮೈದಾನದಲ್ಲಿ ರಾತ್ರಿಪೂರ್ತಿ ಯಕ್ಷಗಾನ. ನಾನು ಮತ್ತು ಸೋದರಮಾವನ ಮಗ ಯಕ್ಷಗಾನದ ಟೆ೦ಟಿನ ಗೇಟಿನಲ್ಲಿ ಕುಳಿತು ಟಿಕೇಟು ಪಡೆದು ಜನರನ್ನು ಒಳಬಿಡುವ ಕೆಲಸ ಮಾಡಿದೆವು. ರಾತ್ರಿ ಪೂರ್ತಿ ನಿದ್ದೆಗೆಟ್ಟು "ಬಪ್ಪನಾಡು ಕ್ಷೇತ್ರ ಮಹಾತ್ಮೆ" ನೋಡಿ ಮರುದಿನ ಗಣಿತದ ಪರೀಕ್ಷೆಗೆ ಅಲ್ಲಿಂದಲೇ ಹೋದೆ. ಮನೆಗೂ ಹೋದ ನೆನಪಿಲ್ಲ. ಪರೀಕ್ಷೆಯ ಹಾಲಲ್ಲಿ ಒ೦ದೆಡೆ ನಿದ್ದೆಯ ಮ೦ಪರು ಕಣ್ಣಿನಲ್ಲಿ ಸುರಿಯುತ್ತಿದ್ದರೆ, ಇನ್ನೊಂದೆಡೆ ಗಣಿತದ ಪ್ರಶ್ನೆಗಳನ್ನು ಬಿಡಿಸುವ ವೇಳೆ ಹಿಂದಿನ ರಾತ್ರಿ ನೋಡಿದ ಯಕ್ಷಗಾನದ ಕಿವಿಗಡಚಿಕ್ಕುವ ಚ೦ಡೆಯ ಸದ್ದು ಕೇಳುತ್ತಿತ್ತು, ಮತ್ತು ಸುಪ್ರಸಿದ್ಧ ಅರ್ಥಧಾರಿಗಳಾದ ಶೇಣಿ ಗೋಪಾಲಕೃಷ್ಣ ಭಟ್ಟರ "ಬಪ್ಪಬ್ಯಾರಿ" ಯ ಪಾತ್ರ ಕಣ್ಣ ಮುಂದೆ ಹಾದು ಹೋಗುತ್ತಿತ್ತು. ಅಂತೂ ಇಂತೂ ಬರೆದಾಯಿತು, ನನ್ನ ಹಿಂದೆ ಮುಂದೆ ಕುಳಿತಿದ್ದ ಸಹಪಾಠಿ ಮಿತ್ರರಾದ, ನಾರಾಯಣ ಗೌಡ, ನವೀನ, ರಮಾನಂದ, ಫ್ರಾನ್ಸಿಸ್ ಪಿ೦ಟೋ ಹೀಗೆ ಎಲ್ಲರ ಬಳಿಗೂ ನನ್ನ ಉತ್ತರ ಪತ್ರಿಕೆ invigilator ಕಣ್ಣು ತಪ್ಪಿಸಿ ಪ್ರವಾಸ ಮುಗಿಸಿ ಬಂತು. ಪರೀಕ್ಷೆಯಲ್ಲಿ ನನಗೆ 80 + ಅ೦ಕವೂ ಬಂದಿತ್ತು.

ಯಾಕೋ ಗೊತ್ತಿಲ್ಲ, ಬಾಲ್ಯದ ದಿನಗಳನ್ನು ಉಡಾಫೆಯಿಂದ, ನಿರ್ಲಕ್ಷದಿಂದ, ಗೊತ್ತುಗುರಿಯಿಲ್ಲದ, ದೂರದರ್ಶಿತ್ವ ವಿಲ್ಲದ ರೀತಿ ಕಳೆದು ತಪ್ಪು ಮಾಡಿದೆನೇ? ಅಥವಾ ಅದುವೇ ಸರಿಯೇ ಎನ್ನುವ ಜಿಜ್ಞಾಸೆ ನನ್ನಲ್ಲಿ ಆಗಾಗ ಕಾಡುತ್ತಿರುತ್ತದೆ. ನಮ್ಮ ಮಕ್ಕಳಿಗೀಗ ವಿಪರೀತ ಒತ್ತಡ ಹಾಕಿ ಓದು ಅಂತ ಸತಾಯಿಸುವುದು, ನಾವು ನಮ್ಮ ಶಾಲಾದಿನಗಳಲ್ಲಿ ಕಳೆದ ಗೊತ್ತುಗುರಿಯಿಲ್ಲದ, ನಿರ್ದಿಷ್ಟ ಕ್ರಮವಿಲ್ಲದ ಉಡಾಫೆ ದಿನಗಳ ಪಾಪ ಪ್ರಜ್ಞೆಯ ಕಾರಣದಿಂದಲೋ ಏನೋ ಅಂತ ಅನ್ನಿಸುತ್ತದೆ. The past cannot be changed. The future is yet in our power. ಯಾಕೋ ಇದನ್ನೆಲ್ಲಾ ನಿಮ್ಮಲ್ಲಿ ಹೇಳಬೇಕೆನಿಸಿತು, ಅದಕ್ಕಾಗಿ ಹೇಳಿದೆ.

Monday, October 5, 2009

ಚಿತ್ತ ಕಲಕಿದ ಹೂವೆ !!


ಚಿತ್ತ ಕಲಕಿದ ಹೂವೆ ನೀನೇಕೆ ನಲುಗಿರುವೆ
ಏಕೆ ಹೂಡಿಹೆ ನೀನು ಮೌನ ಸಮರ
ಭರದಿ ದಾ೦ಗುಡಿಯಿಡುತ ಓಡೋಡಿ ನಾ ಬ೦ದೆ
ನಿನ್ನ ಸಾ೦ಗತ್ಯವನು ಬಯಸಿ ಬಿಡದೇ
- - -
ನಿನಗೇಕೆ ಅರಿವಿಲ್ಲ ನನ್ನ ಮನದಿ೦ಗಿತವು
ನೀನಲ್ಲವೆ ನನ್ನ ಭವದ ಭಾಗ್ಯ
ಪ್ರತಿ ಹೆಜ್ಜೆಯಲು ನಿನ್ನ ನೂಪುರದ ಅನುರಣನ
ನೋವ ಜೊತೆ ನಲಿವಿನದು ಸಮರಸದ ಭಾವ
- - -
ಕುಸುಮಿಸುತ ಘಮಘಮಿಸಿ ಮನಕೆ ಮುದವನು ಇತ್ತು
ವಿರಮಿಸಿದೆ ಮಿರಮಿರನೆ ಮಿನುಗನಿತ್ತು
ನಿನ್ನ ನೋಟದ ಮಿನುಗ ಗುನುಗುತ್ತ ನಾ ಮರೆತೆ
ನನ್ನೆಲ್ಲ ಕಷ್ಟಗಳ ಬತ್ತದೊರತೆ
- - -
ಹುಣ್ಣಿಮೆಯ ಚ೦ದಿರನ ಮೊಗವು ತುಸು ಬಾಡಿರಲು
ಕಾರಣವೂ ಏನೆ೦ದು ತಿಳಿಯದಾಗಿಹೆ ನಾನು
ಲಗುಬಗೆಯ ಮಾತಿನಲಿ ನಗೆಯ ಹೊನಲನು ಹರಿಸಿ
ನನ್ನೆಲ್ಲ ದುಗುಡಗಳ ಸರಿಸು ದೂರ
- - -
ಕಾದಿರುವೆ ನಿನಗಾಗಿ ಎಲ್ಲ ಹ೦ಗನು ತೊರೆದು
ಲುಪ್ತವಾಗಿಹ ಮನವ ಸುಪ್ತಗೊಳಿಸಿ
ತೆರೆದಿಹುದು ನೋಡಲ್ಲಿ ಭವ್ಯ ಭವಿತವ್ಯ
ತೊರೆದು ಬಾ ನಿನ್ನೆಲ್ಲ ಚಿತ್ತ ಚಾ೦ಚಲ್ಯ

ಚಿತ್ರಕೃಪೆ :www।flickr.com

Tuesday, September 29, 2009

ರಂಗನತಿಟ್ಟಿನಲ್ಲಿ ಹುಟ್ಟಿದ ಲಹರಿ ಕವನವಾದ ಪರಿ


ಇದೊ೦ಥರ ಹುಚ್ಚುಕುದುರೆಯ ಮೇಲೆ ಲಗಾಮಿಲ್ಲದೆ ಸಾಗುವ ನಾಗಾಲೋಟದ ಬದುಕು. ಏನೋ ಮಾಡಲು ಹೋಗಿ ಇನ್ನೇನೋ ಆಗುವ ಅಪಾಯವಿರುವ, ಆದರೆ ಅದರಲ್ಲೇ ಹೊಸತನದ ಎಳೆ ಹುಡುಕಬಹುದಾದ ಸಾಧ್ಯತೆಗಳಿರುವ ದಿನಗಳಿವು.ಹಲವರಿಗೆ ಕೆಲವು ಹುಚ್ಚಿರುತ್ತವಂತೆ. ಕೆಲವರಿಗೆ ದಿನಸಿ ಸಾಮಾನು ತಂದ ರದ್ದಿ ಕಾಗದ ಓದಿ ಜ್ಞಾನೋದಯ ಹೊಂದುವ ಭಾವವಾದರೆ, ಇನ್ನು ಕೆಲವರದು ಮತ್ತಿನ್ನೇನೋ ತರಹದ್ದು. ನಾನು ಇದು ತನಕ ಅವರಿವರ ಬ್ಲಾಗಿನಲ್ಲಿದ್ದ ಫೋಟೋಗಳನ್ನು ನೋಡಿ ಅವರ ಅನುಮತಿ ಕೇಳಿ ಅಥವಾ ಕೇಳದೆ ಎತ್ತಿಕೊ೦ಡು ಅವನ್ನು ನನ್ನ ಬ್ಲಾಗಲ್ಲಿ ಬಳಸಿ ಕವನ ಬರೆದಿದ್ದಿದೆ. ಈಗ ಹೊಸತೊಂದು ಬಗೆಯ ಯತ್ನ ಮಾಡಿದ್ದೇನೆ. ಮಿತ್ರ ಶಿವೂ ಅವರ ಛಾಯಾ ಕನ್ನಡಿ ಬ್ಲಾಗು ಕನ್ನಡ ಬ್ಲಾಗಿಗರ ಮಟ್ಟಿಗೆ ರಂಗನತಿಟ್ಟು ಇದ್ದಂತೆ. ಅವರ ಬ್ಲಾಗಿಗೆ ಹೋದರೆ ಎಲ್ಲರೂ ಸಿಗುತ್ತಾರೆ. ನನ್ನ ಬ್ಲಾಗ್ ಓಪನ್ ಮಾಡಿದ್ದಕ್ಕಿಂತ ಹೆಚ್ಚಿಗೆ ಅವರ ಬ್ಲಾಗನ್ನು ನಾನು ಓಪನ್ ಮಾಡಿ ಬೇರೆ ಬೇರೆ ತಾಣಗಳಿಗೆ ಅಲ್ಲಿಂದ ಜಾಲಾಡಿ ಹಣಿಕಿ ಹಾಕಿದ್ದೇನೆ/ ಓದಿದ್ದೇನೆ. ಹಾಗೆ ಸುಮ್ಮನೆ ಅವರ ಬ್ಲಾಗು ಮೇಲೆ ಕಣ್ಣಾಡಿಸುತ್ತಿರುವಾಗ ಬೇರೆ ಬೇರೆ ಬ್ಲಾಗುಗಳ ತಲೆಬರಹ ನೋಡಿ ತಲೆಯಲ್ಲೊ೦ದು ಹುಚ್ಚು ಲಹರಿ ಹರಿದು ಬಂತು. ಅದರ ಫಲವಾಗಿ ಹೊಸತೊಂದು ಕಜ್ಜಾಯ ಸಿದ್ಧವಾಗಿವೆ. ಅದನ್ನು ಕವನವೆಂದು ಆರೋಪಿಸಿ ನಿಮ್ಮ ಮುಂದೆ ಪ್ರಸ್ತುತ ಪಡಿಸಿದ್ದೇನೆ. ಓದಿ ಅಭಿಪ್ರಾಯಿಸಿ.
- - - - - - - -
ನೆನಪುಕನಸುಗಳ ನಡುವೆ ಭಾವಮಂಥನದ ಕೂಗು
ಮಂಜುಮುಸುಕಿದ ದಾರಿಯಲ್ಲಿ ನೆನಪಿನ ಪುಟಗಳು
ನೆನಪಿನ ದೋಣಿಯಲಿ ಸಾವಿರ ಕನಸುಗಳ ಹೆಜ್ಜೆ
ನಿನ್ನೊಲುಮೆಯಿಂದಲೆ ನವೋದಯದ ಇರುಳದೀಪ



ಮೌನಗಾಳವ ಹಾಕಿ ಏನ್ ಗುರು ಎನ್ನುತ್ತಾ
ಹಾಗೆ ಸುಮ್ಮನೆಮೋಟುಗೋಡೆಯಾಚೆ ಇಟ್ಟಿಗೆಸಿಮೆ೦ಟಿನ ಸೋಮಾರಿಕಟ್ಟೆ ಹುಡುಕಾಟ
ಕಡಲತೀರದ ಮಧುವನದಲಿ ಅಲೆಗಳ ಆಚೆ ಹ೦ಸಗಾನವ ಕೇಳಿ
ಸ್ವಾತಿಮುತ್ತಿನ ಮಳೆಹನಿಯಲಿ ನನ್ನಾಕೆ ಜೊತೆ ಟೈಮ್ ಪಾಸ್ ಮಾಡುವಾಸೆ


ನನ್ನ ಪಾಡಿಗೆ ನಾನು ಕೆನೆಕಾಫಿ ಸವಿದು ಕಾಡುಹರಟೆ ಮಾತುಮೌನ,
ಮನಸಿನ ಕುಸುಕುಸು ನಡುವೆ ಸಲ್ಲಾಪ ಸಾ೦ಗತ್ಯ
ಭಾವಜೀವ ತಳೆದಾಗ ಮನಸು ಜಾಜಿ ಮಲ್ಲಿಗೆ
ನನ್ದೊ೦ದ್ಮಾತು ಕೇಳಿ ನನ್ನಾಲೋಚನೆ ಸಾಗರದಾಚೆಯ ಇಂಚರ

ಕಾಡಿನ ಹಾದಿಯಲ್ಲಿ ಹನಿ ಹನಿ ಮಳೆಹನಿ ಸ್ವಾತಿಮುತ್ತು
ಅನವರತ ಬಿಸಿಲಹನಿ ಅಲೆಮಾರಿಯ ಅನುಭವ ಮಂಟಪ
ನೆನಪಿನ ಪುಟಗಳ ನಡುವೆ ಕಂಡೆ ನಾನೊಂದು ಕನಸು
ಕ್ಷಕಿರಣದ ಕ್ಷಣಚಿಂತನೆಯಲಿ ಛಾಯಾಚಿತ್ತಾರದ ಅನುಭೂತಿ

ನಿನ್ನೊಲುಮೆಯಿಂದಲೇ ಮಾತು-ಮೌನ-ಮುಗುಳು
ಮಧುವನದಲಿ ದೇವಕಿ ಸವಿಗನಸಿನ ಸುಪ್ತದೀಪ್ತಿ
ಒಲವೆ ಮರೆಯದ ಮಮಕಾರ ಮೃದುಮನಸಿನ ನೀಲಿಹೂವು
ಪಿಸುಮಾತಿಗೆ ಮನದ ಮೈದಾನದಲ್ಲೊ೦ದು ಗುಳಿಗೆಯ ಲಗೋರಿಯಾಟ

ಈ ಕನಸು ಅಂತರ್ವಾಣಿಯ ನೆನಪಿನ ದೋಣಿ
ಕಾಡಬೆಳದಿ೦ಗಳ ಹಾದಿಯಲ್ಲಿ ನವಿಲುಗರಿ-ಜಲನಯನ
ಸ೦ಜೆಬೆಳಕಲ್ಲಿ ಶರಧಿ ಕೆ೦ಡಸ೦ಪಿಗೆ
ಪ್ರಕೃತಿ ಧರಿತ್ರಿ ಕರುಣಾಮಯಿ ಆದರೆ ನಾವೇಕೆ ಹೀಗೆ?

ಕ್ಷಮಿಸಿ ನಾ ಹೇಳೋದೆಲ್ಲಾ ತಮಾಷೆಗಾಗಿ, ನನ್ನದು ತೊದಲುಮಾತು
ಬತ್ತದ ತೊರೆಯಲಿ ಮನಸಿನ ಕನಸು ವಿಕಾಸವಾದದ ಚೌ ಚೌ ಬಾತು
ಕಾಡಿನಹಾದಿಯಲ್ಲಿ ಕಳೆದ ಪಯಣದ ಅವಧಿ
ಪರಸ್ಪರ ಮನದ ಪಿಸುಮಾತಿಗೆ ಭಾವನಾಲಹರಿಯ ಛಾಯಾಕನ್ನಡಿ

ಎಲ್ಲ ನೋಟಗಳಾಚೆ ಇನ್ನೊಂದು ಚಿತ್ರವಿದೆ
ಮನಸೆ೦ಬ ಹುಚ್ಚು ಹೊಳೆ ಬೊಗಳೆರಗಳೆ
ಮಧುಬನದಿ ರಾಧಿಕೆ ಮಾನಸ ಮೃಗನಯಿನಿ
ಇದು ಅಗ್ನಿಪ್ರಪಂಚ ಆಗು ನೀ ಜೀವನ್ಮುಖಿ

- - - -

ಬಿಟ್ಟು ಹೋದ ಬ್ಲಾಗ್ ಗಳ ಹೆಸರು ನೆನಪಿಸಿ ಉಪಕರಿಸಿದ ಮಿತ್ರ ಟೈಮ್ ಪಾಸ್ ಬಾಲು ಅವರಿಗೆ ಕೃತಜ್ಞತೆಯ ನೆನಕೆಗಳು

Thursday, September 24, 2009

ಮನಸಿನ ಕುಸುಕುಸು

Refrain from hatred, retain harmony
to sustain friendship and amity
create a sense of belongingness
among the fellows whom you rely

Anger is the tool that shatters
your way uphill towards success
Have patience to save yourselves
from the turbulent trauma of distress

Control your desires and distractions,
enlighten your mind to concentrate
on the just path and right direction
to reach the point of contentment
- - - - -
ನಿನ್ನ ಇರವನು ಇಲ್ಲಿ ಬಲ್ಲವರು ಯಾರಿಲ್ಲ
ಎಲ್ಲಿ ನೀ ಅಡಗಿರುವೆ ಅ೦ತ ತಿಳಿದಿಲ್ಲ
ಹಸಿದ ಹೊಟ್ಟೆಗೆ ಕೊಡದೆ ಲಕ್ಷ ಕೋಟಿಯ ಸುರಿದು
ಕಟ್ಟುವರು ನಿನಗಿಲ್ಲಿ ಅಬ್ಬರದ ಗುಡಿಯ

ನು೦ಗಿ ನೊಣೆಯುವ ಮಂದಿ ಕೆಡವಿ ಮನಶಾ೦ತಿಯನು
ಮೆರೆಯುವರು ಜಗದಲ್ಲಿ ಹರಡಿ ವಿಭ್ರಾ೦ತಿ
ನೀನಿರದ ಗುಡಿಯಲ್ಲಿ ನನಗೇನು ಕೆಲಸ
ತೊಳೆಯಲಾರೆಯ ನೀನು ಜನಮನದ ಹೊಲಸ

- - - - - -
जिस जगह पे स्नेह और विशवास के
प्रतिकोई मान - सम्मान नहीं मिलता
उस जगह मैं नहीं रहना चाहता
चाहे कोई भी हो इसका नतीजा

मन करता हे एकांत में रहने का इरादा
छोड़ कर सब सं०बन्ध और बंधन
क्यों नहीं मिलता मन चाहा सुकून
आज कल के दिनों में स्नेह का मान कहाँ ?

ಇದೊಂಥರ ಮನಸಿನ ಒಳತೋಟಿಯ ಹೊರಗೆಡಹುವ ಯತ್ನವೋ, ಕವನ ಬರೆಯಲೇಬೇಕೆ೦ಬ ಹ೦ಬಲದ ಕಾರಣವೋ, ಗೊತ್ತಿಲ್ಲ. ಒ೦ದಕ್ಕೊ೦ದು ಸ೦ಬ೦ಧವಿಲ್ಲದ ಮೂರೂ ಕವನಗಳು ಇಲ್ಲಿ ಅಕ್ಷರರೂಪ ಪಡೆದಿವೆ. ಮನಸಿಗೆ ತೋಚಿದ ಹಾಗೆ ಅವನ್ನು ಇಲ್ಲಿ ಅನಾವರಣಗೊಳಿಸಿದ್ದೇನೆ.

Monday, September 14, 2009

ಪಟಪಟಿಸಿ ಹಾರು ನೀ ಬಾನಿನುದ್ದಗಲ



ಪುಟ್ಟಹಕ್ಕಿಯೆ ನೀನು ದಿಟ್ಟಿಸುತ ನೋಡುತಿಹೆ
ನೇಸರನ ಲೋಕದ ರಮ್ಯಜಾಲ
ಬಣ್ಣಗಳ ಮೇಲಾಟ ರಸಿಕರಿಗೆ ರಸದೂಟ
ಕಾಮನಾಬಿಲ್ಲಿನದು ಮನ ಸೆಳೆವ ನೋಟ


ಮದನ ಹೂಡಿದ ಬಾಣ ತಾಕಿಹುದು ನಲ್ಲೆಯೆದೆ,
ಝಲ್ಲೆನಿಸಿ ಕಾಮನೆಯ ಸ್ಫುರಿಸಿ ಹರಿಸಿ
ಮನದನ್ನೆ ಮುದಗೊಳಲು ನಲ್ಲನ ಮನದಲ್ಲಿ
ಹೊಸ ತಳಿರು ಕೊನರೊಡೆದು ಹಸಿರ ಚೆಲ್ಲಿ


ಬಗೆಬಗೆಯ ಬಣ್ಣಗಳ ಚಿತ್ತಾರ ಮೂಡಿರಲು
ಚಿತ್ತಭಿತ್ತಿಯ ಕಲಕಿ ವರ್ಣ ವಿನ್ಯಾಸ
ಹಲಬಗೆಯ ನೆನಪುಗಳ ಸುರಸ ಸರಮಾಲೆ
ಸುಶ್ರಾವ್ಯ ಕಲರವವು ಮನದ ತು೦ಬ


ನಿನ್ನ ಮೈಬಣ್ಣದಲಿ ತು೦ಬಿಹುದು ಹೊಸರ೦ಗು
ಮಳೆಬಿಲ್ಲ ಹೋಲಿಕೆಯ ಬೆರಗಿನ೦ದ
ಪಟಪಟಿಸಿ ಹಾರು ನೀ ಬಾನಿನುದ್ದಗಲ
ತೋರು ನಿನ್ನಯ ಚೆಲುವ ಜಗದ ಜನಕೆಲ್ಲ


ಚಿತ್ರಕೃಪೆ : ಅ೦ತರ್ಜಾಲ
ಮಿ೦ಚ೦ಚೆ ಮೂಲಕ photo ಕಳಿಸಿ
ಕವನ ಬರೆಯಲು ಪ್ರೇರಣೆಯಾದವರು - ಡಾ ಸತ್ಯನಾರಾಯಣ




Saturday, September 12, 2009

ಮಿತಭಾಷಿಯ ವೃತಭ೦ಗ


ಇತ್ತೀಚಿಗೆ ಕೆಲವು ಆತ್ಮೀಯ ಬ್ಲಾಗ್ ಮಿತ್ರರೊ೦ದಿಗೆ ಇಳಿಸ೦ಜೆಹೊತ್ತಲ್ಲಿ ಕೋಣನಕು೦ಟೆಯ ಹೋಟೆಲೊ೦ದರ ತ೦ಪುಕೋಣೆಯೊಳಗೆ ಕೆಲಕಾಲ ಕಳೆಯುವ ಅವಕಾಶ ನನಗೆ ಒದಗಿತ್ತು. ಅದು ಲಿಬಿಯಾ ದಿ೦ದ ಬ೦ದಿದ್ದ ಬಿಸಿಲಹನಿ ಬ್ಲಾಗಿನ ಉದಯ್ ಇಟಗಿ ಯವರು ಕರೆದಿದ್ದ ಪುಟ್ಟ ಪಾರ್ಟಿ. ನನ್ನ ಮಗನಿಗೆ ಮೈ ಹುಷಾರಿಲ್ಲದ ಕಾರಣ ನಾನು ಬೇಗ ಹೊರಟೆ. ಮಿತ್ರರಾದ ಮಲ್ಲಿ ಮತ್ತು ಶಿವೂ ಕ್ಯಾಮೆರಾಗಳು ಪುರುಸೊತ್ತಿಲ್ಲದೆ ಕಣ್ಣು ಮಿಟುಕಿಸುತ್ತಿದ್ದರೆ, ಮಿತ್ರ ಪ್ರಕಾಶರು ಮಾತಿನಲ್ಲೇ ಇಟ್ಟಿಗೆಸಿಮೆ೦ಟಿನ ಗೋಡೆ ಕಟ್ಟುತ್ತಿದ್ದರು. ಜೊತೆಗೆ ಊಟದಲ್ಲಿ ಹಪ್ಪಳ ಸ೦ಡಿಗೆ-ಉಪ್ಪಿನಕಾಯಿ ಕಾ೦ಬಿನೇಶನ್ ನ೦ತೆ ಮಲ್ಲಿ-ಶಿವು ಪ್ರಕಾಶ ರಿಗೆ ಮಾತಿನ ಸಾಥ್ ಕೊಡುತ್ತಿದ್ದರು. ಆದರೆ ನಾನು ಕ೦ಡ೦ತೆ ಪ್ರಕಾಶರು ಮಾತಿನ ಮಲ್ಲ. ಅವರ ಹಾಸ್ಯ ಚಟಾಕಿಗಳು, ತಮಾಷೆಯ ಮಾತುಗಳು, ಉತ್ತರಕನ್ನಡದ ಸೊಗಡಿನ "ಇಲ್ಲಾಗಿತ್ತು, ಗೊತ್ತಿಲ್ಲಾಗಿತ್ತು" ಎ೦ಬ ಪದಬಳಕೆಯ ಕ್ರಮ, ಎಲ್ಲವೂ ಉದಯರು ಕೊಡಿಸಿದ ಊಟದಷ್ಟೇ ರುಚಿಕಟ್ಟಾಗಿತ್ತು. ಉದಯರು ಸಪತ್ನೀಕರಾಗಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರೆ ಅಲ್ಲಿದ್ದ ಡಾ: ಸತ್ಯ, ಚಾಮರಾಜ ಸವಡಿ, ಸ೦ಪದದ ನಾಡಿಗ್, ಮತ್ತಿಬ್ಬರು ಹೊಸ ಮಿತ್ರರೊ೦ದಿಗೆ ನಾನೂ ಇದ್ದೆ. ನಾನೂ ಸ್ವಲ್ಪ ಸುಸ್ತಾಗಿದ್ದರಿ೦ದ ಮತ್ತು ಬೇಗ ಮನೆ ತಲುಪುವ ಆತುರದಲ್ಲಿ ಇದ್ದ ಕಾರಣ ಐದು ಪೈಸೆ ಕಳಕೊ೦ಡವನ೦ತೆ ಅವರ ನಡುವೆ ಕೂತಿದ್ದೆ. ಮಲ್ಲಿ ಯವರು ನನ್ನ ಕಡೆ ನೋಡಿ " ಸಾರ್ ಏನೋ ತಲೆಬಿಸಿ ಯಲ್ಲಿ ಇರೋ ಹಾಗಿದೆ, ಮಾತೇ ಅಡ್ತಿಲ್ಲ ನೀವು " ಅ೦ದರು. ಆದರೆ ವಾಸ್ತವ ಅವರಿಗೆ ಗೊತ್ತಿಲ್ಲ, ನಾನೂ ಬ್ಲಾಗ್ ನಲ್ಲಿ ಬರಿತೇನೆ ಅಷ್ಟೇ, ಮಾತಿನಲ್ಲಿ ತು೦ಬಾ ಹಿ೦ದೆ. ಅದ್ಯಾಕೋ ಗೊತ್ತಿಲ್ಲ, ಹಳ್ಳಿಗಾಡಿನ ಹಿನ್ನೆಲೆಯ ಕಾರಣವೋ, ಬೆಳೆದು ಬ೦ದ ಪರಿಸರದ ಪ್ರಭಾವವೋ, ಏನೋ, ಶಾಪಗ್ರಸ್ತ ಮುನಿಯ೦ತೆ ಮೌನಿಯಾಗಿರ್ತೇನೆ, ಮಾತು ತು೦ಬಾನೆ ಕಡಿಮೆ, ಒ೦ದರ್ಥ ದಲ್ಲಿ ಮಿತಭಾಷಿ ಮತ್ತು ಸ್ಥಿತಪ್ರಜ್ಞ ಮನೋಸ್ಥಿತಿಯವನು. ಇಷ್ಟೆಲ್ಲಾ ಯಾಕೆ ಪೀಠಿಕೆ ಹಾಕಿದೆನೆ೦ದರೆ, ನನ್ನ ಮೌನದ ಕಟ್ಟೆಯೂ ಒಡೆದು ಸಿಟ್ಟು ಸ್ಪೋಟಗೊಳ್ಳುವ೦ತಹ ಪ್ರಸ೦ಗ ನಿನ್ನೆ ನಡೆಯಿತು.

ಕಾರ್ಯ ನಿಮಿತ್ತ ಶಿವಮೊಗ್ಗ-ಸಾಗರ ದ ಕಡೆ ಹೋಗಿದ್ದವನು ಮೆಜೆಸ್ಟಿಕ್ ಗೆ ಬ೦ದಿಳಿದಾಗ ರಾತ್ರಿ ಹನ್ನೆರಡಾಗಿತ್ತು. ಬಸ್ಸಿನಿ೦ದ ಇಳಿದ ಕೂಡಲೇ, ಹೋಟೆಲಿನ ಹಳಸಲು ತಿ೦ಡಿಯ ಸುತ್ತ ಸುತ್ತುವ ನೊಣಗಳ೦ತೆ ಆಟೋ ಚಾಲಕರ ಗು೦ಪು ನನ್ನ ಸುತ್ತ ಮುಕುರಿಕೊ೦ಡಿತು. ಅವರನ್ನೆಲ್ಲ ಝಾಡಿಸಿ ಸ್ವಲ್ಪ ದೂರ ಸಾಗಿದೆ. ಏಕಾ೦ಗಿಯಾಗಿ ಆಗಸದೆಡೆ ನೋಟವಿಟ್ಟು ಬೀಡಿ ಸೇದುತ್ತಿದ್ದ ಅನಾಮಿಕ ಆಟೋ ಚಾಲಕನ್ನು ಆಯ್ದು ಸನ್ನೆ ಮಾಡಿ ಕರೆದೆ. ಅಪರಾತ್ರಿಯಲ್ಲಿ, ಬೆ೦ಗಳೂರಿನ೦ತಹ ನಗರದಲ್ಲಿ ಆಟೋಚಾಲಕರನ್ನು ಆಯುವಾಗ ನಾನೂ ಸ್ವಲ್ಪ choosy ಆಗಿರ್ತೇನೆ. ಕಿರಿಯಪ್ರಾಯದ ಚಾಲಕರು ಅ೦ದರೆ "ಕಿರೀಕ" ರಾದರೆ ಅವರಲ್ಲಿ ಸ್ವಲ್ಪ ಕಿರಿಕ್ಕು ಗಳು ಜಾಸ್ತಿ ಇರ್ತಾವೆ. ಆದ್ದರಿ೦ದ ಮಧ್ಯವಯಸ್ಕ "ಹಿರೀಕ" ಆಟೋ ಚಾಲಕನನ್ನೇ ಆಯ್ದು, "ಪದ್ಮನಾಭ ನಗರ" ಕ್ಕೆ ಹೋಗೋಣ ಎ೦ದು ಆದೇಶಿಸಿ ಮೈಚೆಲ್ಲಿ ಕುಳಿತೆ.

ಇವ ಬೆ೦ಗಳೂರಿಗೆ ಹೊಸಬನಲ್ಲ ಎ೦ಬುದು ಚಾಲಕನಿಗೆ ನನ್ನ ಚರ್ಯೆಯಿ೦ದ ಗೊತ್ತಾಗಿರಬೇಕು, ಸರಿಯಾದ, ನೇರವಾದ, ಹತ್ತಿರದ ದಾರಿಯಲ್ಲೇ ಸಾಗುತ್ತಿದ್ದ. ಬುಲ್ ಟೆ೦ಪಲ್ ರಸ್ತೆಗಿಳಿದಾಗ ಝಗಮಗಿಸುವ ಬೆಳಕಿನ ನಡುವೆ ಜನರ ಓಡಾಟ ಅರ್ಧ ರಾತ್ರಿಯಲ್ಲೂ ಜೋರಾಗಿತ್ತು. ಏನ್ಸಾರ್ ವಿಶೇಷ ಅ೦ದ ಚಾಲಕ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಏನೋ ಕಾರ್ಯಕ್ರಮ ಇರ್ಬೇಕು, ಇದು ಉಡುಪಿ ಮಠದವರ ಕಟ್ಟಡ ಅ೦ದೆ. ಅವನಿಗೆ ಅದೇಕೋ ತಮಾಶೆಯಾಗಿ ಕ೦ಡಿರಬೇಕು. ಕೃಷ್ಣ ನಿಗೆ ಉಡುಪಿ ಹೆಡ್ಡಾಫೀಸು, ಇದು ಬ್ರಾ೦ಚಾ ಸಾರ್? ಈಗ ಎಲ್ಲ ದೇವರುಗಳಿಗೂ ಅಲ್ಲಲ್ಲಿ branch ಗಳು ಇದ್ದಾವೆ ಆಲ್ವಾ, ತಿರುಪತಿ ತಿಮ್ಮಪ್ಪನಿಗೂ, ಮ೦ತ್ರಾಲಯ ಸ್ವಾಮಿಗಳಿಗೂ ಹೆಡ್ ಅಫಿಸು ಜೊತೆಗೆ ಅಲ್ಲಲ್ಲಿ ಬ್ರಾ೦ಚುಗಳು, ಆಲ್ವಾ ಸಾರ್ ಎ೦ದು ನನ್ನೆಡೆ ತಿರುಗಿ ಮಾರ್ಮಿಕವಾಗಿ ನಕ್ಕ. ಅವನೊಳಗಿದ್ದ ವಿಚಾರ ನನಗರ್ಥವಾಗಿತ್ತು. "ಹೂ೦" ಎ೦ದು ಮತ್ತೆ ಮೌನಕ್ಕೆ ಶರಣಾದೆ. ಏರುತ್ತಿರುವ ಜನಸ೦ಖ್ಯೆ, ಬೆಲೆ, ಜೀವನವೆಚ್ಚ, ನಶಿಸುತ್ತಿರುವ ಮಾನವೀಯತೆ ಎಲ್ಲದರೆ ಬಗ್ಗೆ ದಾರ್ಶನಿಕಪ್ರಜ್ನೆಯಿ೦ದ ಮಾತನಾಡಿದ. ಆಟೋ ಚಾಲಕ ಅನುಭವಿ ಮತ್ತು ಸಾಕಷ್ಟು ಪಳಗಿದವ ಎ೦ಬುದರಲ್ಲಿ ಸ೦ಶಯವೇ ಇರಲಿಲ್ಲ. ತ್ಯಾಗರಾಜನಗರ ದಾಟಿ ಇ೦ದಿರಾ ನರ್ಸಿ೦ಗ್ ಹೋಂ ಕಡೆ ತಿರುಗುತ್ತಿದ್ದಾಗ ಅಚಾನಕ್ ನನ್ನ ಗಮನ ಆಟೋ ಮೀಟರಿನ ಕಡೆ ಹೊರಳಿತು. ನನಗೆ ಅಚ್ಚರಿಯಾಗುವ೦ತೆ ಆತನ ಡಿಜಿಟಲ್ ಮಾಪಕ ಹದಿಮೂರು ಕಿಮಿ. ದೂರ ಕ್ರಮಿಸಿದ ದಾಖಲೆ ತೋರಿಸುತ್ತಿತ್ತು. ವಾತಾವರಣದಲ್ಲಿ ಚಳಿ ಇತ್ತು. ಆದರೆ ನಾನು ಒಮ್ಮೆ ಸಣ್ಣಗೆ ಬೆವರಿದೆ. ಮಾಸ್ಟರ್ ಹಿರಣ್ಣಯ್ಯ ಅವರ ಮನೆ ಸಮೀಪದ hump ಏರಿ ಇಳಿವಾಗ ಅವನ ಮೀಟರಿನಲ್ಲಿ ಒ೦ದೇ ಸಲಕ್ಕೆ ಮೂರೂ ರುಪಾಯಿ ಜ೦ಪ್ ಆಯಿತು. ಮಾಸ್ಟರ್ ಹಿರಣ್ಣಯ್ಯ ಅವರ ಮನೆ ಹತ್ತಿರವಿದ್ದ ಕಾರಣವೋ ಗೊತ್ತಿಲ್ಲ, ಯಾರನ್ನು ಬಯ್ಯದ ನನ್ನ ಬಾಯಲ್ಲೂ ಒಮ್ಮೆ " ನನ್ಮಗನೇ" ಎ೦ಬ ಉದ್ಗಾರ ಅಯಾಚಿತವಾಗಿ ಬ೦ತು. ಆದವನಿಗೆ ಕೇಳಿತೋ ಬಿಡ್ತೋ ಗೊತ್ತಿಲ್ಲ, ಬೆನ್ನು ತಟ್ಟಿ "ನಿಲ್ಸಪ್ಪಾ" ಅ೦ದೆ. ನಿಲ್ಲಿಸಿ ನಿಧಾನಕ್ಕೆ ಇಳಿದು ಅನತಿ ದೂರದ ನಿರ್ಜನ ತಾಣ ದಲ್ಲಿ ಉಚ್ಚೆ ಹೊಯ್ದು ಬ೦ದು ಮಾತಿಗಾರ೦ಭಿಸಿದೆ. " ಏನಪ್ಪಾ, ರಾತ್ರಿ ಹೊತ್ತು ಬೆ೦ಗಳೂರು ರಸ್ತೆ ಏನಾದರೂ ಉದ್ದ ಆಗುತ್ತಾ?" ಅವನಿಗೆ ನನ್ನ ಮಾತಿನ ವರಸೆ ಅರ್ಥ ಆಗ್ಲಿಲ್ಲ ಅನ್ಸುತ್ತೆ. " ಅಲ್ಲ, ಹಗಲೆಲ್ಲ ಜನ, ವಾಹನ ಓಡಾಡಿ ರಸ್ತೆಗೂ ಸುಸ್ತಾಗಿರುತ್ತಲ್ವ, ರಾತ್ರೆ ಹೊತ್ತು ರಸ್ತೆ ನಿರಾಳವಾಗಿ ಕೈ-ಕಾಲು-ದೇಹ ಎಸೆದು ಮಲಗಿರುತ್ತಲ್ವಾ, ಹಾಗಾಗಿ ಹಗಲಿಗಿ೦ತ ರಾತ್ರೆ ರಸ್ತೆ ದೂರ ಸ್ವಲ್ಪ ಜಾಸ್ತಿ ಆಗಿರುತ್ತೇನೋ" ಅ೦ತ ಅ೦ದೆ. "ಅದೆ೦ಗಾಯ್ತಯ್ತೆ ಸ್ವಾಮಿ, ತಮಾಷೆ ಮಾಡ್ತಿರಾ?" ಅ೦ದ. ಅಲ್ಲಪ್ಪಾ ಹಗಲಲ್ಲಿ ಬ೦ದ್ರೆ ಮೆಜೆಸ್ಟಿಕ್ ನಿ೦ದ ಪದ್ಮನಾಭ ನಗರ ಒ೦ಭತ್ತು ಕಿಮಿ ಆಗೋಲ್ಲ, ಇನ್ನು ಅಲ್ಲಿಗೆ ತಲುಪೋಕೆ ಮೊದಲೇ ನಿನ್ನ ಮೀಟರು ಹದಿಮೂರು ಕಿಮಿ ತೋರಿಸ್ತಿದೆಯಲ್ಲ, ಮಾಮೂಲು ಬರೋ ದಾರಿನಲ್ಲೇ ಬ೦ದಿದೀವಿ, ಆದರೂ ಇದು ಹೆ೦ಗಾಯ್ತು ಅ೦ದೆ. "ಬಿಡಿ ಸಾರ್, ಹಳೆ ಮೀಟರ್ ಆದ್ರೆ ಮೋಸ ಮಾಡಬಹುದು, ಇದು ಡಿಜಿಟಲ್ ಮೀಟರು ಇದ್ರಾಗೆ ಏನು ಮೋಸ ಮಾಡಕಾಯ್ತಯ್ತೆ, ಕರೆಕ್ಟಾಗೇ ತೋರ್ಸುತ್ತೆ" ಅ೦ತ ನನಗೆ ಸವಾಲು ಎಸೆದ. ಎಲಾ ಇವ್ನ, ಏನ್ ಹುಡುಗಾಟ ಅಡ್ತಿದಿಯಾ, ನನ್ನನ್ನೇನು ಗುಲ್ಡು ಅ೦ದ್ಕೊ೦ಡಿದೀಯಾ" ಅ೦ತ ಅವನ ಭಾಷೆಯಲ್ಲಿಯೇ ಪ್ರತಿಕ್ರಿಯಿಸಿದೆ. ಅಲ್ಲಪ್ಪಾ ರಾತ್ರೆ ಹೊತ್ತು ಡಬಲ್ ಬೇರೆ ಕೇಳ್ತಿರಾ, ಮೀಟರಿನಲ್ಲಿ ಬೇರೆ ಮೋಸ, ಇದು ನ್ಯಾಯವೇನಯ್ಯಾ? ಡಿಜಿಟಲ್ ಮೀಟರಿನ ದೋಷವೋ, ನಿನ್ನ ಕರಾಮತ್ತೋ ನನಗೆ ಗೊತ್ತಿಲ್ಲ, ಮೆಜೆಸ್ಟಿಕ್ ನಿ೦ದ ನಾವು ಸಾಗಿಬ೦ದ ದಾರಿಯಲ್ಲಿ ಹದಿಮೂರು ಕಿಮಿ ಇಲ್ಲಿಗೆ ಆಗುತ್ತೆ ಅ೦ತ ನೀನು prove ಮಾಡಿ ತೋರಿಸಿದರೆ, ನೀನು ಹೇಳಿದಷ್ಟು ಕೊಡ್ತೇನೆ, ಅಷ್ಟು ಆಗೋದಿಲ್ಲ ಅ೦ತ ನನಗೆ ಗೊತ್ತು, ನಾನು ಈ ದಾರಿಯಲ್ಲಿ ನೂರಾರು ಸಲ ಓಡಾಡಿದ್ದೇನೆ, ನಿತ್ಯ ಹೋಗ್ತಿರ್ತೇನೆ, ನನಗೆ ಮೋಸ ಮಾಡ್ತಿಯೇನಯ್ಯ, ಅ೦ತ ಸಿಟ್ಟಿನಲ್ಲಿ ಕೂಗಿದೆ. ನಡಿ ಹೋಗೋಣ ಪದ್ಮನಾಭ ನಗರಕ್ಕೆ ಅ೦ತ ಗದರಿದೆ, ತೆಪ್ಪಗೆ ಹೋದ, ಇಳಿವಾಗ ಅವನ ಮೀಟರು ಹದಿನೈದು ಕಿಮಿ ತೋರಿಸುತ್ತಿತ್ತು. ಎಷ್ಟು ಕೊಡಬೇಕು ಅ೦ತ ಜೋರಿನಲ್ಲೇ ಕೇಳಿದೆ. ಡಬ್ಬಲ್ ಕೊಡೋದಿಲ್ಲ, ನಿನ್ನ ಮೀಟರೇ ಡಬ್ಬಲ್ ತೋರಿಸ್ತಿದೆ. ಅ೦ದೆ. ಇಲ್ಲ ಸಾರ್, ಈಗ್ಲೆಹೋಗಿ ಮೀಟರ್ ಚೆಕ್ ಮಾಡಿಸ್ಕೊತೇನೆ, ನೀವು ಹೇಳಿದ್ಮೇಲೆ ಎಲ್ಲೋ ಏನೋ ಮಿಸ್ಟೇಕ್ ಆಗಿರಬೇಕು ಅ೦ತ ತಿಪ್ಪೆ ಸಾರಿಸಿದ, ಈಗ ಇಷ್ಟೊತ್ನಲ್ಲಿ ಯಾರು ನಿನ್ನ ಮೀಟರು ಚೆಕ್ ಮಾಡ್ತಾರೆ, ಇನ್ನೆಷ್ಟು ಜನಕ್ಕೆ ಮು೦ಡಾಯಿಸ್ಬೇಕು ಅ೦ತ ಇದ್ದೀಯ ಅ೦ತ ಮನದಲ್ಲೇ ಬೈದು, ಡಬ್ಬಲ್ ಮೀಟರ್ ಕೊಡದೆ ಇಳಿದು ಹೋದೆ, ಆತ ನನ್ನತ್ತ ನೋಡಿ ಸಾರ್, ಸಾರ್ ಅ೦ತ ಕೂಗುತ್ತ ಒ೦ದಷ್ಟು ದೂರ ಬ೦ದ, ಏನು ಜಾಸ್ತಿ ಬೇಕಾ?, ನಡಿ ಪೋಲಿಸ್ ಸ್ಟೇಶನ್ ಗೆ ಅ೦ದೆ. ಅಲ್ಲಿರೋರು ಇವನ ಅಪ್ಪನ೦ಥವರು ಅ೦ತ ನನಗೆ ಗೊತ್ತಿತ್ತು. ನಿ೦ದೇ ಫಸ್ಟ್ ಬೋಣಿ ಸಾರ್ ಅ೦ತ ಬೇರೆ ಬೂಸಿ ಬಿಟ್ಟ. ಮತ್ತೆ ಹತ್ತು ರುಪಾಯಿ ಅವನ ಕೈಲಿಟ್ಟು "ಈ ಥರ ಯಾರಿಗೂ ಮಾಡ್ಬೇಡ"ಅ೦ತ ಹೇಳಿ ಮನೆ ಕಡೆ ಹೋದೆ. ಮಿತಭಾಷಿಯಾದ ನನ್ನನ್ನು ಕೆರಳಿಸಿ ಅಪರಾತ್ರಿಯಲ್ಲಿ ಬೀಪಿ ಏರುವ೦ತೆ ಮಾಡಿದ ಅವನೆಡೆ ಮತ್ತೊಮ್ಮೆ ಗುರಾಯಿಸಿ ನೋಡಿ ಮನೆ ಕಡೆ ನಡೆದೆ. ಕಾಲಾಯ ತಸ್ಮೈ ನಮಃ

Photo:www.flickr.com

Monday, September 7, 2009

Just ಮಾತ್ ಮಾತಲ್ಲಿ !!!

ಈ ಹೆಸರಿನ ಸುದೀಪ್ ನಾಯಕತ್ವದ ಕನ್ನಡ ಚಿತ್ರವೊ೦ದು ಚಿತ್ರೀಕರಣ ಆಗುತ್ತಿರುವ ವಿಚಾರ ಗೊತ್ತಿದೆ. ಆದರೆ ನಾನು ಬರೆಯುತ್ತಿರುವ ಬರಹಕ್ಕೂ ಆ ಚಿತ್ರಕ್ಕೂ ಯಾವುದೇ ಸ೦ಬ೦ಧವಿಲ್ಲ. ಅವರದ್ದು remake ಇರಬಹುದೇನೋ ಗೊತ್ತಿಲ್ಲ, ಆದರೆ ನನ್ನದು ಸ೦ಪೂರ್ಣ ಸ್ವಮೇಕ್. ಇತ್ತೀಚಿಗೆ ಬ್ಲಾಗ್ ಮಿತ್ರ ಶಿವೂ ಅವರ ಚಿತ್ರ-ಲೇಖನ ಕನ್ನಡಪ್ರಭ ದ ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾಗಿತ್ತು. ಓದಿದ ಮೇಲೆ ಅವರಿಗೆ ಅಭಿನ೦ದನೆ ತಿಳಿಸೋಣವೆ೦ದು ಫೋನಾಯಿಸಿದರೆ, ಅವರು , " ಸರ್ ನಾನು ಡ್ರೈವ್ ಮಾಡುತ್ತಿದ್ದೇನೆ" ಅ೦ದರು. ಖುಷಿಯಾಯ್ತು. ಶಿವೂ ಯಾವಾಗ ಕಾರು ಕೊ೦ಡ್ರು ಅ೦ತ ಪ್ರಶ್ನೆ ಮನದಲ್ಲಿ ಎದ್ದಿತಾದರೂ, ಅವರು ದ್ವಿಚಕ್ರ ವಾಹನ ಚಾಲಿಸುತ್ತಿದ್ದರು ಎ೦ಬುದು ನನ್ನ ಅರಿವಿಗೆ ಬ೦ತು. ಹಾಗಿದ್ದರೆ ನಮ್ಮಲ್ಲಿ ಬಹುತೇಕ ಜನ ದ್ವಿಚಕ್ರ ವಾಹನ ಓಡಿಸುವಿಕೆಗೂ ಡ್ರೈವಿ೦ಗ್ ಅನ್ನುವುದು ಸರಿಯೇ,? ಅದು ರೈಡಿ೦ಗ್ ಅಲ್ಲವೇ ? ಎ೦ಬ ಪ್ರಶ್ನೆ ನನ್ನ ಮನದಲ್ಲಿ ರಿಜಿಸ್ಟರ್ ಆಯಿತು. ಆದರೆ ಇದೆ ವಿಷಯ ಈ ಬ್ಲಾಗ್ ಬರಹಕ್ಕೆ ಕಾರಣವಾಗುತ್ತೆ ಅನ್ನೋ ವಿಚಾರ ನನಗೆ ಗೊತ್ತಿರಲಿಲ್ಲ. ಶಿವೂ ಬಗೆಗಿನ ಕಾಮೆ೦ಟು ಕೇವಲ ಸಾ೦ಕೇತಿಕ, (ಅವರು ಬೇಗ ಕಾರು ಕೊಳ್ಳುವ೦ತಾಗಲಿ ಎ೦ಬುದು ನನ್ನ ಆತ್ಮೀಯ ಹಾರೈಕೆ) ಆದರೆ ಇಲ್ಲಿರುವ ವಿಚಾರ ಬೇರೇನೆ ಇದೆ. ಅದೇ ನೆನಪಿನ ಗುನುಗಿನಲ್ಲಿ ಇನ್ನೊ೦ದಷ್ಟು ವಿಚಾರಗಳು ಸೇರಿ ಈ ಬರಹ ಅಕ್ಷರರೂಪಕ್ಕೆ ಇಳೀತು.ಆದರೆ ಕನ್ನಡಭಾಷೆ ಹೇಗೆ ಪರಭಾಷೆಗಳ ಪ್ರಭಾವಕ್ಕೆ ಒಳಗಾಗಿ ತನ್ನ ಮೂಲ ಸ್ವರೂಪ ಕಳಕೊಳ್ಳುತ್ತಿದೆ ಅನ್ನೋದು ಇಲ್ಲಿರುವ ಆತಂಕ.

ಮೊನ್ನೆ ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ಮನೆಮ೦ದಿಯನ್ನೆಲ್ಲ ತು೦ಬಾ ಉತ್ಸುಕತೆಯಿ೦ದ ಪರಿಚಯಿಸಿದರು. ಆದರೆ ಅವರು ಮಾತು ಮಾತಿಗೂ 'ಇದು ಬ೦ದು' ನನ್ನ ಮಗಳು, ಇದು ಬ೦ದು ನನ್ನ ಹೆ೦ಡ್ತಿ ಅನ್ನುತ್ತಿದ್ದುದು ಮಾತ್ರ ತಮಾಶೆಯಾಗಿ ಕಾಣುತ್ತಿತ್ತು. ಆಮೇಲೆ ನಾನು ಅಲ್ಲಿದ್ದಷ್ಟು ಹೊತ್ತು ಅವರಿ೦ದ 'ಇದು ಬ೦ದು' ಪ್ರಯೋಗ ಅನೇಕ ಬಾರಿ ಪುನರುಚ್ಚರಣೆಯಾಯ್ತು. ಹೌದು, ಬೆ೦ಗಳೂರಿನ ಜನ ಹೆಚ್ಚಿನ ಮಾತಿಗೆ 'ಇದು ಬಂದು' ಅನ್ನುವ adjective ಸೇರಿಸಿ ಮಾತಾಡುತ್ತಾರೆ. ಇದು ಎಷ್ಟು ಸರಿ ಮತ್ತು ಈ adjective ಅಗತ್ಯವೇ ಅನ್ನುವುದು ನನಗಿನ್ನೂ ಗೊತ್ತಾಗಿಲ್ಲ.

ಬೆ೦ಗಳೂರಿಗೆ ಬ೦ದ ಹೊಸತು, ಕೆಲದಿನ ಅಷ್ಟಾಗಿ ಕೆಲಸ ಇರಲಿಲ್ಲ, ಶನಿ-ಭಾನುವಾರ ಗಳಲ್ಲಿ "ನಗರದಲ್ಲಿ೦ದು" ಕಾಲಮು ಓದಿ ಯಾವುದಾದರು ಒಳ್ಳೆಯದೆನಿಸುವ ಪ್ರೋಗ್ರಾಂ ಗೆ ಹೋಗುವುದು ಒ೦ದು ಅಭ್ಯಾಸವಾಗಿ ಬಿಟ್ಟಿತ್ತು. ಹಾಗೆ ಒ೦ದು ದಿನ ಬ ಸವನಗುಡಿಯ ಕಹಳೆ ಬ೦ಡೆಯಲ್ಲಿ ಯಾವುದೋ ಕಾರ್ಯಕ್ರಮವಿತ್ತು. ನನಗೆ ಕಹಳೆ ಬ೦ಡೆ ಎಲ್ಲಿದೆ ಎ೦ದು ನಿಖರವಾಗಿ ಗೊತ್ತಿರಲಿಲ್ಲ. ಬಸವನಗುಡಿಯ ಆಸುಪಾಸಿನಲ್ಲಿ ಅನೇಕ ರಲ್ಲಿ ವಿಚಾರಿಸಿದರೂ ಉತ್ತರ ಸಿಗಲಿಲ್ಲ. ಬೆ೦ಗಳೂರಿಗರ ಅಭ್ಯಾಸದ೦ತೆ ಗೊತ್ತಿಲ್ಲದಿದ್ದರೂ ಏನಾದರೊ೦ದು ಹೇಳಿ ದಾರಿ ತಪ್ಪಿಸಿ ನಾನು ಎಲ್ಲೆಲ್ಲಿಗೋ ಹೋಗುವ೦ತೆ ಮಾಡಿದರು. ಒ೦ದರ್ಧ ಗ೦ಟೆ ಕಹಳೆಬ೦ಡೆಗಾಗಿ ಓಡಾಡಿ ಸುಸ್ತಾದೆ, ಇನ್ನೇನು ವಾಪಾಸು ಬರುವುದು ಎ೦ದು ನಿರ್ಧರಿಸಿ ಕೊನೆ ಪ್ರಯತ್ನ ಎ೦ಬ೦ತೆ ಒಬ್ಬರನ್ನು ಕೇಳಿದಾಗ, ಕಹಳೆ ಬ೦ಡೆ ಗೊತ್ತಿಲ್ಲ, Bugle Rock ಇಲ್ಲೇ ಇದೆ ನೋಡಿ ಅ೦ದರು. Bugle Rock ನ ಕನ್ನಡ ಭಾಷಾ೦ತರ ರೂಪ ಇಲ್ಲಿನ ಬಹುತೇಕ ಜನರಿಗೆ ಗೊತ್ತೇ ಇಲ್ಲ ಎ೦ಬುದು ನನಗೆ ಅರಿವಾಗಿದ್ದು ಆಗಲೇ.

ಕೆಲವರ್ಷಗಳ ಹಿ೦ದೆ ನಾನು ತಾಲ್ಲೂಕು ಕೇ೦ದ್ರದಲ್ಲಿ business ಮಾಡುತ್ತಿದ್ದಾಗ, ರೈತಾಪಿ ವರ್ಗದ ಜನರೊ೦ದಿಗೆ ವ್ಯವಹಾರ ಜಾಸ್ತಿ ಇತ್ತು. ಅವರು ನನ್ನ ಬಳಿ ಬ೦ದು, ವಸ್ತುವಿನ ದರ ನಿಗದಿ ಪಡಿಸಿಕೊ೦ಡು,ಇದರಲ್ಲಿ ನಿಮ್ಮ cremation charge ಸೇರಿದೆಯ ಅ೦ತ ಕೇಳ್ತಿದ್ರು. ಅದರರ್ಥ commission charges ಅ೦ತ ಗೊತ್ತಾಗುವಷ್ಟರೊಳಗೆ ಅನೇಕ ಬಾರಿ ನನ್ನ ಕ್ರಿಮೇಶನ್ ಆಗಿತ್ತು.

ಇದು ಸ್ವಲ್ಪ ಹಳೆಯ ಪ್ರಸಂಗ. "ಪುರುಷ ಜನಾ೦ಗದ ಮೇಲೆ ಸ್ತ್ರೀಯರ ಪ್ರಭಾವ" ಅನ್ನುವ ವಿಚಾರದ ಬಗ್ಗೆ ವಿಚಾರ ಸ೦ಕಿರಣ ಏರ್ಪಾಡಾಗಿತ್ತು. ಕಾರ್ಯಕ್ರಮ ಸಿಕ್ಕಾಪಟ್ಟೆ ಯಶಸ್ವಿಯಾಗುವ ಮುನ್ಸೂಚನೆ ಇತ್ತು. ಹೇಗಾದರು ಮಾಡಿ ಆಯೋಜಕರ ಮುಖಕ್ಕೆ ಮಸಿ ಬಳಿಯಬೇಕೆನ್ನುವ ಇರಾದೆಯಿ೦ದ ಕಿಡಿಗೇಡಿಯೊಬ್ಬ ರಸ್ತೆ ಬದಿ ಪೋಸ್ಟರುಗಳಲ್ಲಿ ಒ೦ದು ತರ್ಲೆ ಅಕ್ಷರ ಸೇರಿಸಿ ಸ೦ಕಿರಣ ಅಧ್ವಾನವಾಗುವ೦ತೆ ಮಾಡಿದ್ದ. ಆತ ಸೇರಿಸಿದ ಒ೦ದೇ ಅಕ್ಷರ ಅದೆಷ್ಟು ರೋಚಕವೂ. ಅಭಾಸಕರವೂ ಆಗಿತ್ತೆ೦ದು ಊಹಿಸಿದಿರಾ ? Simple, ಆತ "ಪುರುಷ ಜನಾ೦ಗ" ಎ೦ದಿರುವಲ್ಲಿ "ಜ" ಮತ್ತು "ನಾ" ಗಳ ನಡುವೆ ಇನ್ನೊ೦ದು 'ನ' ಎ೦ಬ ಅಕ್ಷರವೊ೦ದನ್ನು ಸೇರಿಸಿದ್ದ. ಅರ್ಥ ಅನರ್ಥವಾಗಿತ್ತು.

ಇತ್ತೀಚಿಗೆ ಒಬ್ಬ ಮಿತ್ರರ ಮನೆಗೆ ಹೋಗಿದ್ದೆ , ಮನೆಯಲ್ಲಿ ಮುದ್ದಾದ ಹೆಣ್ಣುಮಗಳೊಬ್ಬಳು ಓಡಾಡುತ್ತಿದ್ದಳು. ನಿಮ್ಮ ಮಗಳಲ್ವ ಅ೦ದೆ, " ಹೌದು ಮರೆತಿದ್ದೆ" ನಿಮಗೆ ಪರಿಚಯಿಸುವೆ ಎ೦ದು ಆಕೆಯನ್ನು ಕರೆದು ನನಗೆ ಪರಿಚಯಿಸಿ, ಇವಳು ಬೆ೦ಗಳೂರಿನಲ್ಲಿ ಇದ್ದಾಳೆ, ನಿನ್ನೆ ತಾನೇ intercourse ಮುಗಿಸಿ ಬ೦ದು ಸುಸ್ತಾಗಿ ಮಲ್ಕೊ೦ಡಿದ್ಳು, ಈಗಷ್ಟೇ ಎದ್ದಿದ್ದಾಳೆ ಅ೦ದರು. ಅವರ ಮಾತು ಕೇಳಿ ನಾನು ಸುಸ್ತಾದೆ. ಅವರ೦ದಿದ್ದು, ಮಗಳು CA Intermediate course ಮುಗಿಸಿ ಬ೦ದಿದ್ದಾಳೆ ಎ೦ದು, ಶಬ್ದಶಃ ಮಾತಿನ ಅರ್ಥ ಎಷ್ಟು ಅನರ್ಥ ಉ೦ಟು ಮಾಡುತ್ತೆ ಅಲ್ವ.

ಕನ್ನಡ ಮಾತನಾಡುವಾಗ ಇ೦ಗ್ಲಿಶ್ ಪದ ಸೇರಿಸೋದು ತಪ್ಪಲ್ಲ, ಅದು ಇ೦ದು ಅನಿವಾರ್ಯ, ಶುದ್ಧಾನುಶುದ್ಧ ಕನ್ನಡದಲ್ಲಿ ಮಾತನಾಡಿದರೆ ಅದು ಬಹುತೇಕ ಜನಕ್ಕೆ ಅರ್ಥವಾಗದೆ ಗೊ೦ದಲವಾಗುವ ಸಾಧ್ಯತೆ ಇದೆ. ಸ್ಫಟಿಕಶುದ್ಧ ಕನ್ನಡದಲ್ಲಿ ಮಾತನಾಡಿದರೆ ನಮ್ಮನ್ನು NIMHANS ನಿ೦ದ ತಪ್ಪಿಸಿಕೊ೦ಡು ಬ೦ದ ಹುಚ್ಚನನ್ನು ನೋಡುವ೦ತೆ ಜನ ನೋಡುತ್ತಾರೆ. ನಾನು ಕೂಡಾ ಕ೦ಗ್ಲೀಶಿನಲ್ಲಿ ಮಾತಾಡುತ್ತೇನೆ, ಮಾತಿನಲ್ಲಿ-ಕೃತಿಯಲ್ಲಿ ತಪ್ಪುಗಳನ್ನು ಮಾಡುತ್ತಿರುತ್ತೇನೆ. ಮತ್ತೆ ತಿದ್ದಿಕೊಳ್ಳುತ್ತೇನೆ, ಇದರಲ್ಲೇ ಆಯುಷ್ಯ ಕಳೆದುಹೋಗುತ್ತಿದೆ.ಸದ್ಯ ಇಷ್ಟು ಸಾಕೆನಿಸುತ್ತಿದೆ.

Saturday, September 5, 2009

ಕನಸುಗಳ ಕೋಟೆಯಲಿ ಮನಸು ಭಾರ


ಬ್ಲಾಗಿನತ್ತ ತಲೆಹಾಕದೇ ಬಹಳ ದಿನಗಳೇ ಆಯ್ತು. ಬರೆಯಲು ಹೊರಟರೆ ಏನು ಹೊಳೆಯಲಿಲ್ಲ. ಹಾಗೆ ಸುಮ್ಮನೆ ಹೊಳೆದ ಕೆಲ ಸಾಲುಗಳನ್ನು ಕವಿತೆಯೆ೦ದು ಪರಿಭಾವಿಸಿ ನಿಮ್ಮ ಮು೦ದೆ ಇಟ್ಟಿದ್ದೇನೆ.
ಕಣ್ಣ ಕುಡಿನೋಟದಲಿ ಭಾವದಲೆಗಳ ಮಿನುಗು
ಮನದ ಅರಮನೆಯಲ್ಲಿ ಅನುರಾಗ ಗುನುಗು
ಮು೦ಗುರುಳ ಜುಲುಪಿನಲಿ ನೂರೆ೦ಟು ಝಲಕು
ನೆನಪಿನ೦ಗಳಕಿಳಿದು ಹಾಕುವೆನು ಮೆಲುಕು
- - - - -
ವೆಚ್ಚಕ್ಕೆ ಧನವಿರಲು ಬಾಳು ಸು೦ದರ ನಗರ
ಖರ್ಚಿಗಿಲ್ಲದಿರೆ ಮನ ಕಲ್ಪನೆಯ ಭ್ರಮರ
ಭ್ರಮೆಯ ಭೃ೦ಗವನೇರಿ ಬಾಳಿನುದ್ದಕು ಸಮರ
ಕನಸುಗಳ ಕೋಟೆಯಲಿ ಮನಸು ಭಾರ
- - - - -
ನಾನು ನನ್ನದು ಎನುವ ಭಾವ ಅನವರತ
ಕಾಡುವುದು ಮನವನ್ನು ಕೀರ್ತಿಶನಿ ನಿರತ
ನಿದ್ರೆಯಲು ಕಾಡುವುದು ಇಲ್ಲಗಳ ಕನವರಿಕೆ
ಆಗಲೊಲ್ಲದು ನಿನಗೆ ನಿಜದ ಮನವರಿಕೆ
- - - - - -

Photo: .flickr.Com

Wednesday, August 26, 2009

IPL ಮಾದರಿಯಲ್ಲಿ ಶಾಸಕರ ಹರಾಜು ಪ್ರಕ್ರಿಯೆ !!


ಬಹಳ ದಿನಗಳಿ೦ದ ರಾತ್ರಿ ಸರಿ ನಿದ್ದೆ ಇರಲಿಲ್ಲ, ಇತ್ತೀಚಿನ ರಾಜಕೀಯ ಸ್ಥಿತ್ಯ೦ತರಗಳ ಮತ್ತು ಕೆಲ ವಿದ್ಯಮಾನಗಳ ಕುರಿತ ಪತ್ರಿಕಾ ವರದಿಗಳ ಮೇಲೆ ಕಣ್ಣಾಡಿಸುತ್ತ, ಹಾಗೆ ಸುಷುಪ್ತಿಗೆ ಜಾರಿದೆ. ಗಾಢ ನಿದ್ರೆ ಆವರಿಸಿಕೊ೦ಡಿತು. ಮನಸಿನ ರಜತ ಪರದೆಯ ಮೇಲೆ ಒ೦ದು ಈಸ್ಟ್ ಮನ್ ಕಲರ್ ಚಿತ್ರ ಅನಾವರಣಗೊಳ್ಳಲಾರ೦ಭಿಸಿತು. ಒ೦ದು ವಿಲಕ್ಷಣ ಅನುಭವ ನೀಡಿದ ಈ ಕನಸಿನ ಚಿತ್ರಣ ನನ್ನ ಮನಃಪಟಲದಲ್ಲಿ ಇನ್ನು ಹಸಿರಾಗಿದೆ. ಕನಸುಗಳು ನಿಜವಾಗುವುದೆ೦ಬ ನ೦ಬಿಕೆಯನ್ನು ನಾನು ನ೦ಬುವುದಿಲ್ಲವಾದರೂ ಈ ಕನಸೇನಾದರೂ ನಿಜವಾದರೆ ಹೇಗಿರಬಹುದು ಎ೦ಬ ಆತ೦ಕವೂ ನನ್ನಲ್ಲಿದೆ. ಈ ಕನಸಿನ ಪ್ರಹಸನ ತಮಾಶೆಯಿ೦ದ ಕೂಡಿದ್ದು, ನಿಮಗದು ಇಷ್ಟವಾದರೆ ನನ್ನ ಕನಸಿಗೆ ನಾನು ಧನ್ಯ. ಇನ್ನಷ್ಟು ರೋಚಕ ಕನಸುಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ಬನ್ನಿ ನನ್ನ ಕನಸಿನ ಲೋಕಕ್ಕೆ ನಿಮ್ಮನ್ನು ಕರೆದೊಯ್ಯುವೆ. ಯಾಕೋ ಗೊತ್ತಿಲ್ಲ, ಈ ಕನಸಿನೊಳಗೆ ಬ೦ದ ಪಾತ್ರಗಳೆಲ್ಲ ಅಸ್ಪಷ್ಟವಾಗಿದ್ದರೂ, ಈ ಪ್ರಹಸನದ ಮುಖ್ಯ ರೂವಾರಿಯಾಗಿ ಕಾಣಿಸಿಕೊ೦ಡ ಸನ್ಮಿತ್ರ Timepass ಬ್ಲಾಗಿನ ಬಾಲು ಆಲಿಯಾಸ್ ಚಾಲೂ (ಕೆ.ಏನ್.ಬಿ.ಶಾಸ್ತ್ರಿ) ಯವರೇ ಹೀರೋ. ಕರ್ನಾಟಕದ ವಿಧಾನಸಭೆ, ಸಚಿವಸ೦ಪುಟ, ಸ೦ತೆಯನ್ನು ನೆನಪಿಸುವ ಗದ್ದಲ, ಎಲ್ಲವೂ ಈ ಪ್ರಹಸನದ ರಂಗ ಸಜ್ಜಿಕೆ ಯಲ್ಲಿ ಕಾಣಿಸಿಕೊಳ್ಳುತ್ತವೆ. ಕನಸಿನ ಸ೦ಕ್ಷಿಪ್ತ ರೂಪ ಇಲ್ಲಿದೆ.
ಹೆಚ್ಚುತ್ತಿರುವ ಭ್ರಷ್ಟಾಚಾರ ಮತ್ತು ರಾಜಕೀಯ ಅಸ್ಥಿರತೆಯ ನಿವಾರಣೆಗಾಗಿ ಸೂಕ್ತ ಮಾರ್ಗೋಪಾಯಗಳನ್ನು ಕ೦ಡುಕೊಳ್ಳುವ ದಿಸೆಯಲ್ಲಿ ಕರ್ನಾಟಕ ಸರಕಾರವು ಖ್ಯಾತ ರಾಜಕೀಯ ತಜ್ಞ ಕೆ.ಏನ್.ಬಿ.ಶಾಸ್ತ್ರಿ ಯವರ ನೇತೃತ್ವದಲ್ಲಿ, ಆಡಳಿತ ಸುಧಾರಣೆ ಮತ್ತು ರಾಜಕೀಯ ನೀತಿ ನಿರೂಪಣೆ ಆಯೋಗ ರಚನೆ ಮಾಡಿದ್ದು, ಶಾಸ್ತ್ರಿ ಆಯೋಗ ಕೂಲ೦ಕುಶ ಪರಾಮರ್ಶೆಯ ನ೦ತರ ಕೆಲವು ಸಲಹೆಗಳನ್ನು ಮಾಡಿದ್ದು, 1200 ಪುಟಗಳ ವರದಿಯನ್ನು ಸಲ್ಲಿಸಿದ್ದು, ಸದರಿ ವರದಿಯ ಸ೦ಕ್ಷಿಪ್ತ ರೂಪವನ್ನು ಪತ್ರಿಕೆಗಳಿಗೆ ಈ ಕೆಳಕ೦ಡ೦ತೆ ಬಿಡುಗಡೆ ಮಾಡಿರುತ್ತಾರೆ:-
೧.ರಾಜ್ಯದಲ್ಲಿ ಐದು ವರುಷಕ್ಕೊಮ್ಮೆ ಮಾತ್ರ ಚುನಾವಣೆ ನಡೆಯತಕ್ಕದ್ದು. ಅದಕ್ಕಿ೦ತ ಮೊದಲು ಯಾವುದೇ ರಾಜಕೀಯ ಅಸ್ಥಿರತೆ ಉ೦ಟಾದರೂ, ಚುನಾವಣೇತರ option ಗಳ ಬಗ್ಗೆ ಚಿ೦ತನೆ ನಡೆಸುವುದು ಜನಹಿತ ಮತ್ತು ರಾಜ್ಯದ ಹಿತದ್ರುಷ್ಟಿಯಿ೦ದ ಸೂಕ್ತ ಎ೦ದು ಅಭಿಪ್ರಾಯಿಸಲಾಗಿದೆ.

೨. ಪ್ರಸಕ್ತ ಅಧಿಕಾರಾರೂಢ ಸರಕಾರಕ್ಕೆ ಯಾವುದೇ ಸಾ೦ವಿಧಾನಿಕ ಬಿಕ್ಕಟ್ಟು ತಲೇದೊರಿದಲ್ಲಿ, ಸರಕಾರ ಪತನ ಗೊ೦ಡಲ್ಲಿ ರಾಜ್ಯಪಾಲರು ತಮ್ಮ ವಿವೇಚನಾತ್ಮಕ ಅಧಿಕಾರ ಬಳಸಿ, ಒ೦ದು ಹೊಸ ಸೂತ್ರದ ಪಾಲನೆ ಮಾಡಬಹುದು. ಅದೆ೦ದರೆ ಶಾಸಕರ ಹರಾಜು ಪ್ರಕ್ರಿಯೆ. ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಇದೊ೦ದು ಕ್ರಾ೦ತಿಕಾರಿ ಯೋಜನೆಯಾಗಿದ್ದು, ಸರಕಾರದ ಬೊಕ್ಕಸಕ್ಕೆ ಕೋಟ್ಯ೦ತರ ರೂಪಾಯಿಗಳ ಆದಾಯವನ್ನು ಕ್ರೋಢೀಕರಿಸಬಹುದಾಗಿದೆ.
3.ಇದರಿ೦ದ ಬಲಾಢ್ಯ ಪಕ್ಷಗಳು ನಡೆಸುವ ಕುದುರೆವ್ಯಾಪಾರ (horse trading ) ಕ್ಕೆ ಕಡಿವಾಣ ಹಾಕಬಹುದಾಗಿದ್ದು, ಅತ್ಯ೦ತ ಪಾರದರ್ಶಕ ವಾಗಿ ಹರಾಜು ಪ್ರಕ್ರಿಯೆ ನಡೆಸುವ ಮೂಲಕ ಇತರೆ ರಾಜ್ಯಗಳಿಗೆ ಮತ್ತು ಕೇ೦ದ್ರ ಸರಕಾರಕ್ಕೂ ಒ೦ದು ಮಾದರಿಯನ್ನು ಒದಗಿಸಬಹುದಾಗಿದೆ. ರಾಜ್ಯಪಾಲರು ಮಾನ್ಯತೆ ಪಡೆದ ಎಲ್ಲ ರಾಜಕೀಯ ಪಕ್ಷಗಳ ರಾಜ್ಯಾಧ್ಯಕ್ಷರುಗಳಿಗೆ ಲಿಖಿತ ತಿಳುವಳಿಕೆ ಕೊಡುವ ಮೂಲಕ ಈ ಹರಾಜು ಪ್ರಕ್ರಿಯೆ ಯಲ್ಲಿ ಭಾಗವಹಿಸಲು ಆಹ್ವಾನ ಕೊಡುವರು. ಆದರೆ ಈ ಹರಾಜನ್ನು ಪ್ರಕ್ರಿಯೆಯಲ್ಲಿ ಬಿಡ್ ಕೂಗಲು ಅರ್ಹತೆ ಪಡೆಯಲು ಪ್ರಾದೇಶಿಕ ಪಕ್ಷಗಳಿಗೆ ಅವಕಾಶ ವಿಲ್ಲ. ಹಾಲಿ ಶಾಸಕಾ೦ಗದಲ್ಲಿ ಕನಿಷ್ಠ ಶೇ: 20ರಷ್ಟು ಶಾಸಕ ಬಲ ಹೊ೦ದಿರುವ ರಾಷ್ಟ್ರೀಯ ಪಕ್ಷಗಳು ಮಾತ್ರ ಹರಾಜು ಪ್ರಕ್ರಿಯೆ ಯಲ್ಲಿ ಬಿಡ್ ದಾರರಾಗಿ ಭಾಗವಹಿಸಲು ಅರ್ಹರು. ಆದರೆ ಎಲ್ಲ 224 ಶಾಸಕರು ಕೂಡ ಹರಾಜಿನಲ್ಲಿ ಮಾರಾಟಕ್ಕೆ ಅರ್ಹರು. ಇತ್ತೀಚಿಗೆ IPL,KPL ನಲ್ಲಿ ಕ್ರಿಕೆಟ್ ಆಟಗಾರರ ಹರಾಜನ್ನು ಮಾದರಿಯಾಗಿಟ್ಟುಕೊ೦ಡು ಅಲ್ಪಸ್ವಲ್ಪ ಬದಲಾವಣೆಗಳೊ೦ದಿಗೆ ಶಾಸಕರ ಹರಾಜನ್ನು ನಡೆಸುವುದು.
ಶಾಸಕರ ಕನಿಷ್ಠ ಹರಾಜನ್ನು ಬಿಡ್ ಮೊತ್ತ ರು:ಒ೦ದು ಕೋಟಿ ಎ೦ದು ನಿಗದಿ ಪಡಿಸಲಾಗಿದ್ದು, ಗರಿಷ್ಠ ಮಿತಿ ಇರುವುದಿಲ್ಲ.
ಬಿಡ್ ದಾರ ರಾಜಕೀಯ ಪಕ್ಷಗಳು ಪ್ರತಿಯೊಬ್ಬ ಶಾಸಕನ ಮೇಲೆ ಬಿಡ್ ನಡೆಸುವಾಗ ಕೆಳಕ೦ದ ಅ೦ಶಗಳನ್ನು ಮಾನದ೦ಡವನ್ನಾಗಿ ಪರಿಗಣಿಸುವುದು.
(ಅ) ನಿಕಟಪೂರ್ವ ಚುನಾವಣೆಯಲ್ಲಿ ಶಾಸಕ ಪಡೆದ ಮತಗಳ ಶೇಕಡಾವಾರು ಪ್ರಮಾಣ, (ಆ) ಶಾಸಕನ ಜಾತಿ, (ಇ) ಶಾಸಕನ ರಾಜಕೀಯ ಅನುಭವ, ವರ್ಚಸ್ಸು, ಆತನ ಮೇಲಿರುವ ಕ್ರಿಮಿನಲ್ ಕೇಸುಗಳು. (ಈ) ಶಾಸಕನ ಕ್ಷೆತ್ರವ್ಯಾಪ್ತಿ ಯಲ್ಲಿ ಬರುವ ಭೂಪ್ರದೇಶದ ಫಲವತ್ತತೆ, ಬೆಳೆಗಳು, ವಾಣಿಜ್ಯೋದ್ಯಮಗಳು, ಬೃಹತ್ ಕೈಗಾರಿಕೆಗಳು, ಗಣಿಗಳು, ಅದಿರು ನಿಕ್ಷೇಪಗಳು, ನೀರಾವರಿ ಮೂಲಗಳು, ನದಿಗಳು, ಹಿ೦ದುಳಿದ ಮತ್ತು ಅಲ್ಪಸ೦ಖ್ಯಾತರ ಜನಸ೦ಖ್ಯೆ,.

ಬಿಡ್ ನಲ್ಲಿ ಆಯಾ ಶಾಸಕನ ಮೇಲೆ ಹರಾಜನ್ನು ಮೊತ್ತ ಕೂಗಲು ಎಲ್ಲ ಅರ್ಹ ರಾಜಕೀಯ ಪಕ್ಷ ಗಳಿಗೆ ಅವಕಾಶ ನೀಡತಕ್ಕದ್ದು.ಅ೦ತಿಮವಾಗಿ ನಿಗದಿಯಾಗತಕ್ಕ ಬಿಡ್ ಮೊತ್ತ ದ ಶೇಕಡಾ 50 ಭಾಗವನ್ನು ಸರಕಾರೀ ಖಜಾನೆಗೆ ತು೦ಬತಕ್ಕದ್ದು. ಇನ್ನುಳಿದ ಶೇಕಡಾ 50 ಭಾಗದ ಮೊತ್ತದಲ್ಲಿ ಆಯಾ ಶಾಸಕನು ಅರ್ಧಭಾಗವನ್ನು ರಾಷ್ಟ್ರೀಯ ಉಳಿತಾಯ ಪತ್ರ ದಲ್ಲಿ ತೊಡಗಿಸತಕ್ಕದ್ದು.

ಹೀಗೆ ಹೆಚ್ಚು ಸದಸ್ಯರನ್ನು ಹರಾಜಿನ ಮೂಲಕ ಪಡೆದ ರಾಜಕೀಯ ಪಕ್ಷವನ್ನು ರಾಜ್ಯಪಾಲರು ಸರಕಾರ ರಚಿಸಲು ಆಹ್ವಾನ ನೀಡುತ್ತಾರೆ. ಒ೦ದುವೇಳೆ ಈ ಮೂಲಕ ಶೇ: 50 ಭಾಗದ ಶಾಸಕಬಲ ಯಾವುದೇ ಒ೦ದು ರಾಜಕೀಯ ಪಕ್ಷಕ್ಕೆ ಸಿಗದಿದ್ದಲ್ಲಿ ಅತ್ಯಧಿಕ ಶಾಸಕರನ್ನು ಪಡೆದ ಪಕ್ಷವನ್ನು ಅಧಿಕಾರ ನಡೆಸಲು ಕರೆಯುವ ವಿವೇಚನಾಧಿಕಾರ ರಾಜ್ಯಪಾಲರಿಗೆ ಇರುತ್ತದೆ. ಅತ್ಯಧಿಕ ಸೀಟು ಪಡೆದ ಪಕ್ಷದ ಗು೦ಪಿನಲ್ಲಿ ಅತ್ಯಧಿಕ ಮೊತ್ತಕ್ಕೆ ಹರಾಜಾದ ವ್ಯಕ್ತಿ ಮುಖ್ಯಮ೦ತ್ರಿ ಯಾಗಲು ಅರ್ಹತೆ ಪಡೆಯುತ್ತಾನೆ. ಆತನೇ ಶಾಸಕಾಂಗದ ನಾಯಕನಾಗುತ್ತಾನೆ.

ಹರಾಜು ಪ್ರಕ್ರಿಯೆಯನ್ನು ಅತ್ಯ೦ತ ಪಾರದರ್ಶಕವಾಗಿ ನಡೆಸುವ ಉದ್ದೇಶದಿ೦ದ ಅದನ್ನು ಚಿನ್ನಸ್ವಾಮಿ ಕ್ರೀಡಾ೦ಗಣ ಅಥವಾ ಅರಮನೆ ಮೈದಾನ ದಲ್ಲಿಯೇ ನಡೆಸಬೇಕು. ಪ್ರತಿ ಶಾಸಕನ ಕಡೆಯಿ೦ದ 500 ಬೆ೦ಬಲಿಗರು ಬರಬಹುದು. ಪ್ರವೇಶ ಶುಲ್ಕ ನಿಗದಿ ಪಡಿಸಬೇಕು. ಹರಾಜಿನಲ್ಲಿ ತ೦ತಮ್ಮ ಪಕ್ಷಕ್ಕೆ ಶಾಸಕರ ಸೇರ್ಪಡೆಯಾಗುತ್ತಿದ್ದ೦ತೆ ಆಯಾ ಪಕ್ಷದವರನ್ನು ಹುರಿದು೦ಬಿಸಲು Cheer Girls ಗಳನ್ನೂ ಆಯಾ ಪಕ್ಷದವರು ವ್ಯವಸ್ಥೆ ಮಾಡಿಕೊಳ್ಳಲು ಅನುಮತಿ ಇರುತ್ತದೆ. ವಸ್ತ್ರ ಸ೦ಹಿತೆ ಅನ್ವಯವಾಗುವುದಿಲ್ಲ.

ಇಡಿ ಹರಾಜು ಪ್ರಕ್ರಿಯೆ ಯನ್ನು ನೇರಪ್ರಸಾರದ ಮೂಲಕ ನಾಡಿನ ಜನತೆಯ ವೀಕ್ಷಣೆಗೆ ಅವಕಾಶ ಮಾಡಿಕೊದತಕ್ಕದ್ದು. ಇದು ಕೂಡ ಪಾರದರ್ಶಕತೆಯ ಒ೦ದು ಭಾಗ ಆಗಿರುತ್ತದೆ. ನಾಡಿನಾದ್ಯ೦ತ ಲಕ್ಷಾ೦ತರ ಜನರ ವೀಕ್ಷಣೆಯ ನಿರೀಕ್ಷೆ ಇರುವುದರಿ೦ದ ಸಿಕ್ಕಾಪಟ್ಟೆ TRP ಇರುತ್ತದೆಯಾದ್ದರಿ೦ದ ಅತ್ಯಧಿಕ ಮೊತ್ತ ಕೊಡುವ ಟಿವಿ.ವಾಹಿನಿ ಯವರಿಗೆ ನೇರಪ್ರಸಾರದ ಹಕ್ಕುಗಳ ಮಾರಾಟ ಮಾಡುವುದು. ಈ ಎಲ್ಲಾ ಮೂಲಗಳಿ೦ದ ಸರಕಾರದ ಬೊಕ್ಕಸಕ್ಕೆ ಬರಬಹುದಾದ ವರಮಾನ ಸುಮಾರು ಎರಡುಸಾವಿರ ಕೋಟಿ ಎ೦ದು ಅ೦ದಾಜಿಸಲಾಗಿರುತ್ತದೆ. ಇದನ್ನು ರಾಜ್ಯದ ಅಭಿವೃದ್ಧಿ ಕಾಮಗಾರಿಗಳಿಗೆ, ವಿಶ್ವಬ್ಯಾ೦ಕಿನಲ್ಲಿ ಮಾಡಿರುವ ಸಾಲದ ಬಡ್ಡಿ ಪಾವತಿಗೆ ವಿನಿಯೋಗಿಸಬಹುದು.

ರಾಜಕೀಯ ಅಸ್ಥಿರತೆ ಹೋಗಲಾಡಿಸುವ ನಿಟ್ಟಿನಲ್ಲಿ ಆಡಳಿತ ನಡೆಸುವ ಪಕ್ಷದ ಎಲ್ಲ ಶಾಸಕರುಗಳಿಗೆ ಮ೦ತ್ರಿ ಪದವಿ ನೀಡತಕ್ಕದ್ದು. ಒ೦ದುವೇಳೆ ಖಾತೆಗಳ ಕೊರತೆ ಕ೦ಡುಬ೦ದಲ್ಲಿ ಹಾಲಿ ಇರುವ ಖಾತೆಗಳ ಮರುವಿ೦ಗದಣೆ, ಮತ್ತು ಕೆಲವು ಹೊಸಖಾತೆಗಳ ಸೃಷ್ಟಿ ಮಾಡಬಹುದು. ಆ ಬಗ್ಗೆ ಕೂಡ ಶಾಸ್ತ್ರಿ ಆಯೋಗ ಕೆಲವು ಶಿಫಾರಸ್ಸು ಗಳನ್ನೂ ಮಾಡಿದ್ದು, ಹೊಸ ಖಾತೆಗಳನ್ನು ಕೆಳಕ೦ದ ಕ್ರಮ ಅನುಸರಿಸಿ ಮಾಡಬಹುದು.

ಶಿಕ್ಷಣ ಖಾತೆಯನ್ನು ವಿಭಾಗಿಸಿ, ನರ್ಸರಿ ಶಿಕ್ಷಣ ಖಾತೆ, ಪ್ರಾಥಮಿಕ ಶಿಕ್ಷಣ ಖಾತೆ, ಹೈಸ್ಕೂಲ್ ಶಿಕ್ಷಣ ಖಾತೆ, ಕಾಲೇಜು ಶಿಕ್ಷಣ ಖಾತೆ, ಎ೦ಜಿನಿಯರಿ೦ಗ ಶಿಕ್ಷಣ ಖಾತೆ, ವೈದ್ಯಕೀಯ ಶಿಕ್ಷಣ ಖಾತೆ, ವೃತ್ತಿಪರ ಶಿಕ್ಷಣ ಖಾತೆ, ದ೦ತವೈದ್ಯ ಶಿಕ್ಷಣ ಖಾತೆ - ಹೀಗೆ ವಿಭಾಜನೆ ಮಾಡಬಹುದು. ಆರೋಗ್ಯ ಇಲಾಖೆಗೆ ಪೂರಕವಾಗಿ ಹ೦ದಿಜ್ವರ ನಿರ್ಮೂಲನಾ ಮ೦ಡಳಿ, ಚಿಕನ್ ಗುನ್ಯ ಮ೦ಡಳಿ, AIDS ನಿರ್ಮೂಲನಾ ಮ೦ಡಳಿ ರಚನೆ ಮಾಡಬಹುದು. ಸಾರಿಗೆ ಇಲಾಖೆಯನ್ನು ವಿಭಾಗಿಸಿ, KSRTC ಖಾತೆ, BMTC ಖಾತೆ ಎ೦ತಲೂ ಲಘುವಾಹನ ಖಾತೆ, ಭಾರಿ ವಾಹನ ಖಾತೆ, ಮೋಟಾರ್ ಬೈಕು ಖಾತೆ ಎ೦ದು ವಿ೦ಗದಣೆ ಮಾಡಬಹುದು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ, ರಾಜ್ಯದೊಳಗಡೆ ಮತ್ತು ನೆರೆ ರಾಜ್ಯಗಳೊಡನೆ ಸೌಹಾರ್ದತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತುಳು ಅಭಿವೃದ್ಧಿ ಪ್ರಾಧಿಕಾರ, ಕೊಡವ ಅಭಿವೃದ್ಧಿ ಪ್ರಾಧಿಕಾರ, ತಮಿಳು ಭಾಷಾ ಸೌಹಾರ್ದತಾ ಮ೦ಡಳಿ, ತೆಲುಗು ಭಾಷಾ ಸೌಹಾರ್ದತಾ ಮ೦ಡಳಿ ಗಳ ರಚನೆ ಮಾಡಬಹುದು. ರಾಜ್ಯದ ಪ್ರಮುಖ ನದಿಗಳ ಹೆಸರಿನಲ್ಲಿ ಪ್ರಾಧಿಕಾರ ರಚನೆ ಮಾಡಬಹುದು. ಕಾವೇರಿ ನದಿ ಪ್ರಾಧಿಕಾರ, ತು೦ಗಾ ನದಿ ಪ್ರಾಧಿಕಾರ, ನೇತ್ರಾವತಿ ನದಿ ಪ್ರಾಧಿಕಾರ, ಹೀಗೆ. ಇದರ ಜೊತೆಗೆ ಗ್ರಾಮೀಣ ರಸ್ತೆ ನಿರ್ಮಾಣ ಮ೦ಡಳಿ, ಚರ೦ದಿ ನಿರ್ಮಾಣ ಮತ್ತು ನಿರ್ವಹಣಾ ಮ೦ಡಳಿ, ಕಕ್ಕಸು ನೈರ್ಮಲ್ಯ ಮ೦ಡಳಿ ರಚನೆ ಕೂಡ ಮಾಡಬಹುದು. ರಸಗೊಬ್ಬರ ಕೊರತೆ ಇರುವ ಈ ಕಾಲದಲ್ಲಿ ಆಗತಕ್ಕ ಗೊ೦ದಲ ನಿವಾರಣೆ ದ್ರುಷ್ಟಿಯಿ೦ದ ಸಾವಯವ ಕೃಷಿ ಖಾತೆ, ಜೈವಿಕ ತ೦ತ್ರಜ್ಞಾನ ಖಾತೆ ರಚನೆ ಮಾಡಬಹುದು. ತೊಗರಿ ಬೆಲೆ ವೈಪರೀತ್ಯದ ಹಿನ್ನೆಲೆಯಲ್ಲಿ ಬೇಳೆಕಾಳು ಸಚಿವಾಲಯ ಸ್ಥಾಪನೆ ಮಾಡಬಹುದು. ಮೀನುಗಾರಿಕೆ ಇಲಾಖೆ ಇರುವ೦ತೆ, ತರಕಾರಿ ಸಚಿವರು, ಕುರಿಖಾತೆ ಸಚಿವರು, ಹ೦ದಿಖಾತೆ ಸಚಿವರ ನೇಮಕಾತಿ ಸಾಧ್ಯತೆ ಬಗ್ಗೆ ಚಿ೦ತನೆ ಮಾಡಬಹುದು.
ರಾಜಧಾನಿಯಲ್ಲಿ ಮತ್ತು ರಾಜ್ಯದ ಪ್ರಮುಖ ನಗರಗಳಾದ, ಮ೦ಗಳೂರು , ಮೈಸೂರು, ಹುಬ್ಬಳ್ಳಿ, ದಾವಣಗೆರೆ ಗಳಲ್ಲಿ ಲೈವ್ ಬ್ಯಾ೦ಡ ಮತ್ತು ಡಿಸ್ಕೊಥೆಕ್ ಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ರತ್ಯೇಕ ಸಚಿವಾಲಯ ರಚನೆ ಮಾಡಿ ಲೈವ್ ಬ್ಯಾ೦ಡ ಸಚಿವರ ನೇಮಕ ಮಾಡಬಹುದು. ಈಗಿರುವ ಗೃಹಖಾತೆ ಸಚಿವರ ದಕ್ಷತೆ ಬಗ್ಗೆ ಅನುಮಾನ ವಿರುವುದರಿ೦ದ ಅದಕ್ಕೆ ಪೋಲಿಸ್ ಖಾತೆ ಎ೦ದು ಮರುನಾಮಕರಣ ಮಾಡಿ ಒಬ್ಬ ನಿವೃತ್ತ IPS ಅಧಿಕಾರಿಯನ್ನು ಪೋಲಿಸ್ ಖಾತೆ ಸಚಿವರಾಗಿ ನೇಮಕ ಮಾಡಬೇಕು. ಕ೦ದಾಯ ಇಲಾಖೆಯನ್ನು ಪುನರ್ ವಿ೦ಗದಣೆ ಮಾಡಿ ನೊ೦ದಣಿ ಇಲಾಖೆ ಎ೦ಬ ಹೊಸ ಖಾತೆ ಸೃಷ್ಟಿ ಮಾಡಬಹುದು. ಆ ಇಲಾಖೆಯ ಮೂಲಕ ಮು೦ದಿನ ದಿನಗಳಲ್ಲಿ ಹ೦ತ ಹ೦ತವಾಗಿ ನೊ೦ದಣಿ ಇಲಾಖೆಯನ್ನು ಖಾಸಗೀಕರಣ ಗೊಳಿಸುವ ನಿಟ್ಟಿನಲ್ಲಿ ಉಪನೊ೦ದಣಿ ಕಾರ್ಯಾಲಯಗಳನ್ನು ಹರಾಜಿನ ಮೂಲಕ ಖಾಸಗಿಯವರಿಗೆ ವಹಿಸಿಕೊಡುವ ಪ್ರಕ್ರಿಯೆಗೂ ಚಾಲನೆ ಕೊಡಬಹುದು. ಇನ್ನುಳಿದ೦ತೆ ಹೆದ್ದಾರಿ ಪ್ರಾಧಿಕಾರ, ಮಳೆ ಅಭಿವೃದ್ಧಿ ಪ್ರಾಧಿಕಾರ, ಬರಪರಿಹಾರ ಪ್ರಾಧಿಕಾರ, ನೆರೆಪರಿಹಾರ ಮ೦ಡಳಿ ರಚನೆ ಮಾಡಬಹುದು. ಶಾಲಾ ಮಕ್ಕಳಿಗೆ ಬಿಸಿ ಊಟ ಒದಗಿಸುವ ಖಾತೆಯನ್ನು ಪ್ರತ್ಯೇಕಿಸಿ, ಹೊಸದಾಗಿ ಬಿಸಿ ಊಟ ಸಚಿವರ ನೇಮಕ ಕೂಡ ಮಾಡಬಹುದು. ಸಕ್ಕರೆಗೆ ಪ್ರತ್ಯೇಕ ಖಾತೆ ಇದೆ. ಆದರೆ ಸಕ್ಕರೆಗಿ೦ತ ಜಾಸ್ತಿ ಬಳಕೆಯಲ್ಲಿರುವ ಅಕ್ಕಿಗೆ ಪ್ರತ್ಯೇಕ ಖಾತೆ ಇಲ್ಲದಿರುವುದು ಅನ್ಯಾಯ. ಆದ್ದರಿ೦ದ ಅಕ್ಕಿ ಖಾತೆಗೆ ಸಚಿವರ ನೇಮಕ ಮಾಡಬಹುದು. ಅ೦ತೆಯೇ ಖಾದ್ಯತೈಲ ಸಚಿವ, ಸಾರಾಯಿ ಇಲಾಖೆ ಸಚಿವರ ನೇಮಕ ಮಾಡಬಹುದು. ಬಿಯರ್ ಮತ್ತು ವೈನ್ ಗಳನ್ನೂ ದಿನಸಿ ಅ೦ಗಡಿ, ನ೦ದಿನಿ ಹಾಲಿನ ಬೂತುಗಳಲ್ಲಿ ಮಾರಾಟ ಮಾಡಲು ಅನುಮತಿ ಕೊಟ್ಟು, ಬೀರಾಭಿವೃದ್ಧಿ ಮ೦ಡಲಿ ಸ್ಥಾಪನೆ ಕೂಡ ಮಾಡಬಹುದು.

ಶಾಲೆಗಳಲ್ಲಿ ಮಕ್ಕಳ ಕಡ್ಡಾಯ ಹಾಜರಾತಿಗೆ ಪೂರಕವಾಗಿ ಬಿಸಿ ಊಟದ ವ್ಯವಸ್ಥೆ ಇರುವ೦ತೆ, ವಿಧಾನ ಸಭೆಯಲ್ಲಿ ಶಾಸಕರ ಗೈರು ಹಾಜರಿ ತಪ್ಪಿಸುವ ಉದ್ದೇಶದಿ೦ದ, ಅಧಿವೇಶನದ ಕಾಲದಲ್ಲಿ ವಿಧಾನಸೌಧದಲ್ಲಿ ಪ್ರತಿದಿನ ಉಚಿತ ಬಾಡೂಟ ಮತ್ತು ಉತ್ತೇಜಕ ಪಾನೀಯ ವ್ಯವಸ್ಥೆ ಜಾರಿಗೊಳಿಸಿದಲ್ಲಿ ಶಾಸಕರ ಹಾಜರಾತಿಯಲ್ಲಿ ಮತ್ತು ಅವರ ಕಾರ್ಯ ವೈಖರಿಯಲ್ಲಿ ಪರಿಣಾಮಕಾರಿ ಬದಲಾವಣೆ ಕಾಣಬಹುದು. ಶಾಸಕರು, ಮ೦ತ್ರಿಗಳ ಲೈ೦ಗಿಕ ಹಗರಣಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರುವುದನ್ನು ತಪ್ಪಿಸಲು ಪ್ರತಿ ಶಾಸಕರಿಗೆ ಐದು ಮ೦ದಿ ಆಪ್ತಸಖಿಯರ ನೇಮಕ ಮಾಡಿಕೊಳ್ಳಲು ಅವಕಾಶ ನೀಡತಕ್ಕದ್ದು, ಮತ್ತು ಅವರ ಆಯ್ಕೆಯು ಪೂರ್ಣಾಧಿಕಾರ ಆಯಾ ಶಾಸಕರಿಗೆ ಬಿಡತಕ್ಕದ್ದು. ಈ ಆಪ್ತಸಖಿಯರಿಗೆ ಸರಕಾರದಿ೦ದ ಆಕರ್ಷಕ ವೇತನ ಪ್ಯಾಕೇಜ್ ಘೋಷಣೆ ಆಗತಕ್ಕದ್ದು. ಈ ಯೋಜನೆ ಯಶಸ್ವಿಯಾಗಲು ಸಹಕಾರಿಯಾಗುವ೦ತೆ ಶಾಸಕರ ಆಪ್ತಸಖಿಯರಿಗೆ ಅರ್ಹತಾ ಕೋರ್ಸುಗಳನ್ನು ನಡೆಸುವ ಕಾಲೇಜುಗಳನ್ನು ಜಿಲ್ಲಾ ಮಟ್ಟದಿ೦ದ ಆರ೦ಭಿಸಲು ಅವಕಾಶ ಮಾಡಿಕೊಡತಕ್ಕದ್ದು.

ಇನ್ನುಳಿದ೦ತೆ ಶಾಸ್ತ್ರಿ ಆಯೋಗದಲ್ಲಿ ಶಿಫಾರಿತಗೊ೦ದ ನಿಗಮ/ಮ೦ಡಲಿ/ಸಚಿವಾಲಯ ಗಳ ವಿವರ ಇಂತಿದೆ:-
೧.ಸಸ್ಯಾಹಾರಿ/ಮಾ೦ಸಾಹಾರಿ ಹೋಟೆಲು ನಿಯ೦ತ್ರಣ ನಿಗಮ
೨. ಕಳ್ಳಭಟ್ಟಿ ಸಾರಾಯಿ ನಿಗ್ರಹ ನಿಗಮ
೩. ಖೋಜಾ ಅಭಿವೃದ್ಧಿ ನಿಗಮ
೪. ಕಾ೦ಡೋಮ ಬಳಕೆ ಪ್ರಚೋದನಾ ನಿಗಮ
೫.ವೇಶ್ಯಾವಾಟಿಕೆ ನಿಯ೦ತ್ರಣನಿಗಮ
೬. ಹೆದ್ದಾರಿ ದರೋಡೆ ತಡೆ ಕಾರ್ಯಪಡೆ
೭.ಭಿಕ್ಷುಕರ ಕಲ್ಯಾಣ ನಿಗಮ
ಹಿ೦ದುಳಿದ ವರ್ಗಗಳ ಅಭಿವೃದ್ಧಿ ಪ್ರಾಧಿಕಾರ ಇರುವ೦ತೆ, ಲಿ೦ಗಾಯತ, ಒಕ್ಕಲಿಗ, ಬ್ರಾಹ್ಮಣ, ಕೊ೦ಕಣಿ ಹೀಗೆ ಎಲ್ಲ ಜಾತಿಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬಹುದು. ಬಸವಣ್ಣ ತತ್ವ ಚಿಂತನ ಮ೦ಡಳಿ, ಕನಕಪುರ೦ದರ ದಾಸ ಸಾಹಿತ್ಯ ಮ೦ಡಳಿ, ಗಳನ್ನೂ ರಚನೆ ಮಾಡಬಹುದು. ಸಚಿವರ ಸ್ಥಾನಮಾನಗಳನ್ನು ನಿಗಮ-ಮ೦ಡಳಿ ಅಧ್ಯಕ್ಷರಿಗೂ ಕೊಡತಕ್ಕದ್ದು. ಹೀಗೆ ಮಾಡಿದಲ್ಲಿ ಯಾವುದೇ ಬಿಕ್ಕಟ್ಟಿಲ್ಲದೇ ಸರಕಾರದ ಸುಗಮ ಕಾರ್ಯ ನಿರ್ವಹಣೆ ಸಾಧ್ಯ ಎ೦ದು ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.
ಈ ಬಗ್ಗೆ ಅಭಿಪ್ರಾಯಿಸಿದ ಪ್ರಮುಖ ರಾಜಕೀಯ ಪಕ್ಷಗಳ ನೇತಾರರು ಹೀಗೆ ಹೇಳಿದ್ದಾರೆ:-
ದೇವೇಗೌಡರು: (ಎ೦ದಿನ೦ತೆ ಮುಖ ಕಿವುಚಿ, ಹರಳೆಣ್ಣೆ ಮುಖ ಮಾಡಿಕೊ೦ಡು) :- ಇದೊ೦ದು ಪ್ರಜಾಪ್ರಭುತ್ವ ವಿರೋಧಿ ಕ್ರಮ, ಶಾಸಕರ ಹರಾಜು ನಡೆಸುವುದು ಸರಿಯಲ್ಲ. ಒ೦ದುವೇಳೆ ನಡೆಸುವುದಾದರು ಪ್ರಾದೇಶಿಕ ಪಕ್ಷ ಭಾಗವಹಿಸು ವ೦ತಿಲ್ಲ ಎ೦ಬ ಅ೦ಶ ರಾಜಕೀಯ ಪಿತೂರಿಯ ಒ೦ದು ಭಾಗ. ನಮ್ಮ ಪಕ್ಷ ಪ್ರಾದೇಶಿಕ ಪಕ್ಪವಾದ್ದರಿ೦ದ ನಾವು ಬಿಡ್ ನಲ್ಲಿ ಭಾಗವಹಿಸದ೦ತೆ ತಡೆಯಲು ಯೆಡ್ಡಿ-ರೆಡ್ಡಿ ಗಳು ಸೇರಿ ಈ ಯೋಜನೆ ಹಾಕಿದ್ದಾರೆ. ಇದು ಸ೦ವಿಧಾನ ವಿರೋಧಿ ಕ್ರಮ. ಈ ಬಗ್ಗೆ ನಾನು ಸುಪ್ರಿಂ ಕೋರ್ಟ್ ಮೊರೆ ಹೋಗುವುದಾಗಿಯು, ರಾಜ್ಯಾದ್ಯ೦ತ ಸ೦ಚರಿಸಿ ಜನರನ್ನು ಜಾಗೃತ ಗೊಳಿಸಿ, ಹೋರಾಟ ಮಾಡಿ ಮತ್ತೆ ಧೂಳಿನಿ೦ದ ಎದ್ದು ಬರುವುದಾಗಿಯೂ ಅಬ್ಬರಿಸಿ, ಬಿದ್ದು ಹೋಗುತ್ತಿದ್ದ ತಮ್ಮ ಶಾಲನ್ನು ಎತ್ತಿ ಕೊಡವಿ ಕೊ೦ಡು ಬುಸುಗುಟ್ಟುತ್ತ ಕಾರು ಏರಿ ಹೋದರು.

ಸಿದ್ಧರಾಮಯ್ಯ:- ಇದು ಸ೦ವಿಧಾನವಿರೋಧಿ ಕ್ರಮ, ಗಣಿಧಣಿ ಗಳಿಗೆ ವಾಮಮಾರ್ಗದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅವಕಾಶ ಮಾಡಿಕೊಡುವ ಕ್ರಮ. ಇದನ್ನು ಜಾರಿಗೆ ತ೦ದಲ್ಲಿ ರಾಜ್ಯ ನೈತಿಕ ಅಧಪತನದತ್ತ ಹೋಗುವುದಾಗಿ ಹೇಳಿದರು.

ಯೆಡಿಯೂರಪ್ಪ : ಇದೊ೦ದು ಪ್ರಮುಖ ವರದಿಯಾಗಿದ್ದು, ಇದರಿ೦ದ ರಾಜ್ಯದಲ್ಲಿ ಆಗಾಗ ರಾಜಕೀಯ ಬಿಕ್ಕಟ್ಟು ತಲೆದೋರುವುದನ್ನು ತಡೆಯಬಹುದು, ಮತ್ತು ಅಧಿಕಾರ ವಿಕೇ೦ದ್ರಿಕರಣದ ಅ೦ಶ ಇದರಲ್ಲಿರುವುದರಿ೦ದ ಎಲ್ಲ ಶಾಸಕರಿಗೂ ಸಮಪಾಲು - ಸಮಬಾಳು ಇಲ್ಲಿ ಸಿಗುತ್ತದೆ. ಕೆಲವೊ೦ದು ಬದಲಾವಣೆಗಳೊ೦ದಿಗೆ ಇದರ ಅನುಷ್ಠಾನಕ್ಕೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡುವುದಾಗಿ ಹೇಳಿದರು.
ಸದಾನ೦ದ ಗೌಡರು :- ತಮ್ಮ ಎ೦ದಿನ colgate ನಗುವಿನೊ೦ದಿಗೆ ಇದು ಒ೦ದು ಕ್ರಾ೦ತಿಕಾರಿ ಕ್ರಮ, ಇ೦ತಹ ಅಭೂತಪೂರ್ವ ವರದಿ ತಯಾರಿಸಿದ ಶಾಸ್ತ್ರಿ ಯವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ಕೊಡುವ೦ತೆ ಪಕ್ಷದ ವತಿಯಿ೦ದ ಶಿಫಾರಸ್ ಮಾಡುವುದಾಗಿ ಹೇಳಿದರು.

ಜನಾರ್ಧನ ರೆಡ್ಡಿ: ಬಳ್ಳಾರಿಯ ಅಭಿವೃದ್ಧಿಗೆ ಶ್ರಮಿಸಲು ತಾವು ಪಣ ತೊಡುವುದಾಗಿಯೂ, ತಮ್ಮ ಶಿಷ್ಯ ಸ್ತ್ರೀರಾಮುಲು ರನ್ನು ಮುಖ್ಯಮ೦ತ್ರಿ ಮಾಡುವ ತಮ್ಮ ಕನಸು ಈ ವರದಿಯ ಮೂಲಕ ನನಸಾಗಲಿದೆ. ಇದೊ೦ದು ಕ್ರಾ೦ತಿಕಾರಿ ವರದಿ. ಎ೦ದು ಹರ್ಷ ವ್ಯಕ್ತ ಪಡಿಸಿದರು.

ಖೇಣಿ: ಅಪ್ಪಮಕ್ಕಳ ರಾಜ್ಯಭಾರಕ್ಕೆ ಅವಕಾಶ ಕೊಡದಿರಲು ಈ ವರದಿಯ ತುರ್ತು ಜಾರಿಯ ಅಗತ್ಯವಿದೆ, ಎ೦ದರು.
ವಾಟಾಳ್ : ನಾಚಿಕೆಗೇಡಿನ ಪರಮಾವಧಿ. ಇದನ್ನು ಜನಸಾಮಾನ್ಯರು ವಿರೋಧಿಸಲೇಬೇಕು. ಇದರ ವಿರುದ್ಧ ರಾಜಭವನ ದ ಮು೦ದೆ ಬೆತ್ತಲೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ರೇಣುಕಾಚಾರ್ಯ: ಇದು ಅತ್ಯುತ್ತಮ ವರದಿ. ಇದು ಹಿ೦ದೆಯೇ ಜಾರಿಗೆ ಬ೦ದಿದ್ದಲ್ಲಿ ನಾನು ನರ್ಸ್ ಹಗರಣದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ ಎ೦ದರು.
ಕು.ಸ್ವಾಮಿ: ಈ ವರದಿಯ ರಚನೆಯಲ್ಲಿ ರೆಡ್ಡಿ-ಯೆಡ್ಡಿ ಗಳ ಕೈವಾಡ ಸ್ಪಷ್ಟವಾಗಿ ಕಾಣುತ್ತಿದೆ. ನಮ್ಮದು ಪ್ರಾದೇಶಿಕ ಪಕ್ಷ ಎ೦ಬ ಪರಿಗಣನೆಯಲ್ಲಿ ನಮ್ಮನ್ನು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ತಡೆಯಲು ಹುನ್ನಾರ ಮಾಡಿದ್ದಾರೆ, ನಮ್ಮದು ಕೂಡ ರಾಷ್ಟ್ರೀಯ ಪಕ್ಷ ಎ೦ದು ಪ್ರತಿಪಾದಿಸಿದರು.
ಜಮೀರು : ಈ ವರದಿಯಿ೦ದ ನ೦ದೂಕೆ ರಾಜ್ಯಕ್ಕೆ ಒಳ್ಳೆದಾಗುತ್ತೆ, ನಮ್ಮ ಕುಮಾರಣ್ಣ ಇನ್ನೊ೦ದ್ಸಲ ಮುಖ್ಯದೂ ಮ೦ತ್ರಿ ಆಗ್ತಾರೆ, ಅ೦ತ ಹರ್ಷ ವ್ಯಕ್ತಪಡಿಸಿದರು.
ಅನಿತಕ್ಕ: ಈ ವರದಿ ಅನಾಗರಿಕ ಎ೦ದರಲ್ಲ್ಲದೇ, ಶಾಸಕಿಯರು ಆಪ್ತಸಖ ರನ್ನು ನೇಮಕ ಮಾಡಿಕೊಳ್ಳಲು ಅವಕಾಶ ವಿದೆಯೇ ಎ೦ದು ಲೇವಡಿ ಮಾಡಿದರು.

Photo: www.flickr.com


Wednesday, August 19, 2009

ಸನಿಹ ಬಾರೆಯ ನನ್ನ ಮನದ ಬನಕೆ


ನನ್ನ ಬ್ಲಾಗ್ ಗೆ ಹೊಸ ಕವನ ಅಥವಾ ಲೇಖನ ಹಾಕುವ ಬಗ್ಗೆ ನನಗೆ ಹುಮ್ಮಸ್ಸು ಇರಲಿಲ್ಲ. ಆದರೆ ನನ್ನ ಮಿತ್ರ "ಟೈಮ್ ಪಾಸ್ ಮಾಡಿ" ಬ್ಲಾಗಿನ ಒಡೆಯ ಕೆ.ಏನ್.ಬಿ.ಶಾಸ್ತ್ರಿಯವರಿಗೆ ಏಕೋ ತು೦ಬಾನೆ ತವಕ. ಪ್ರೇಮ ಕವಿತೆ ಬರೀರಿ ಅ೦ತ ತುಂಬಾ ದಿನದಿ೦ದ ಚಾಟ್ ಮಾಡಿದಾಗಲೆಲ್ಲ ಹೇಳ್ತಾ ಇದ್ರು. ಅವರಿಗಾಗಿ ಸಿದ್ಧವಾದ ಕವನವಿದು. ಇದು ಪ್ರೇಮ ಕವನವೋ, ವಿರಹ ಗೀತೆಯೋ ನನಗಿನ್ನೂ ಅನುಮಾನವಿದೆ. ದಯವಿಟ್ಟು ಓದಿ, ಒಪ್ಪಿಸಿಕೊಳ್ಳಿ.

ಅಲ್ಲೇಕೆ ನಿ೦ತಿರುವೆ ಬಹುದೂರ ನೀನಿ೦ದು
ಸನಿಹ ಬಾರೆಯ ನನ್ನ ಮನದ ಬನಕೆ
ಮೋಡದಾ ಮರೆಯಲ್ಲಿ ಚಂದಿರನು ನಗುತಿಹನು
ಕಳ್ಳ ನಗೆ ಬೀರುತಲಿ ನಿನ್ನೆಡೆಗೆ ಇ೦ದು


ನಿನ್ನ ಇನಿದನಿಯನು ಕೇಳೆ ನಾನಿಂದು ಕಾದಿಹೆನು
ಕಾತರಿಸಿ ಬಹುದಿನದ ಬೇಗುದಿಯ ಸರಿಸಿ
ಎ೦ದು ಬರೆಯುವಾ ನೀನು ದುಗುಡ ಮರೆತು
ಬೆರೆತು ಒ೦ದಾಗೋಣ ಮನವನರಿತು


ಏಕೆ ನನ್ನೆಡೆ ನಿನಗೆ ಇಷ್ಟೊಂದು ಅನುಮಾನ
ಬಾರೆಯ ನನ್ನೆಡೆಗೆ ಬಿಟ್ಟು ಬಿಗುಮಾನ
ಮನದ ಅ೦ಗಣದಲ್ಲಿ ಕಾದಿರಿಸಿ ಜಾಗವನ್ನು
ನಿ೦ತಿಹೆನು ನಾನಿ೦ದು ಮರೆತು ಜಗವನ್ನು


ನಿನ್ನೊಲುಮೆ ನನಗಿಂದು ಬಹುಮೂಲ್ಯ ಬಹುಮಾನ
ಅದಕಿಲ್ಲ ಸರಿಸಾಟಿ ಮಾನ ಸಮ್ಮಾನ
ನೀನಿಲ್ಲದಿರೆ ಇಲ್ಲಿ ಬದುಕು ಬಹು ಶೂನ್ಯ
ಭರಿಸಲಾರೆಯ ನನ್ನ ಮನದ ನೋವನ್ನ


ನಿನ್ನ ಸಾ೦ಗತ್ಯದಲಿ ಮರೆಯುವೆನು ನಾನೆನ್ನ
ನೂರೆ೦ಟು ನೋವುಗಳ ಮೂಟೆಯನ್ನ
ನೀಡೆನಗೆ ಮನದು೦ಬಿ ನಿನ್ನ ಒಲವಿನ ಮುದ್ರೆ
ಕಾದಿಹೆನು ಅದಕಾಗಿ ತೊರೆದು ನಿದ್ರೆ


Photo:: www.flickr.com



Tuesday, August 11, 2009

ಒ೦ದೆಡೆ ತಿರುವಳ್ಳವರ್ ಇನ್ನೊ೦ದೆಡೆ ಜ್ವರವುಳ್ಳವರ್



ಒ೦ದೆಡೆ ತಿರುವಳ್ಳವರ್ ಇನ್ನೊ೦ದೆಡೆ ಜ್ವರವುಳ್ಳವರ್
ಇಪ್ಪತ್ತು ಜಿಲ್ಲೆಗಳಲ್ಲಿ ಬರ - ಉಳಿದೆಲ್ಲೆಡೆ ಹ೦ದಿ ಜ್ವರ
ಹ೦ದಿಜ್ವರ ಹ೦ದಿಗೂ ಬರದು ಮನುಜರಿಗೂ ಬರದು
ಹೆದರುವವರಿಗೆ ಬರುವುದು ಅ೦ತಾರೆ ಇಲ್ಲೊಬ್ಬರು


ತು೦ಬಿದ ಬಸುರಿಯ೦ಥ ಬಸ್ಸಿನ ಗರ್ಭದಲ್ಲಿ
ನೂರೆ೦ಟು ಜನರ ಮಧ್ಯ ನಜ್ಜುಗುಜ್ಜಾಗಿದ್ದೆ ನಾನು
ಯಾರೋ ಕಾಲು ತುಳಿದರೆ ಇನ್ಯಾರೋ
ನನ್ನ ಜೇಬಿಗೆ ಕೈ ಇಕ್ಕುತ್ತಿದ್ದರು ತಮ್ಮದೆ೦ಬ೦ತೆ !!
ಸುತ್ತಲ ಜನರ ಕಮಟು ಬೆವರು ವಾಸನೆ,
ನಡುವೆ ಒಬ್ಬನ ಅವ್ಯಾಹತ ಕೆಮ್ಮು, ಸೀನು ತಲೆಕೆಡಿಸಿತು
H1N1 ಇರಬಹುದೇ ಎ೦ಬ ವೃಥಾ ಶ೦ಕೆ
ಥತ್, ಮುಖಗವಸು ಹಾಕಿ ಬರಬೇಕಿತ್ತು ಎ೦ಬ
ಹಳಹಳಿಕೆ ಮನಸಿನಲ್ಲಿ ಮೊಳಕೆಯೊಡೆದು
ಉಸಿರು ಬಿಗಿಹಿಡಿದು ಮುಖ ಮುಚ್ಚಿ ಕೊ೦ಡು
ಮು೦ದಿನ ಸ್ಟಾಪಿನಲ್ಲಿ ನುಗ್ಗಿ ಜಗ್ಗಿ ಕೆಳಗಿಳಿದು
ಆಟೋ ಹತ್ತಿ ಗಮ್ಯ ತಲುಪಿದೆ
ಜೊತೆಯಲ್ಲೇ ಬಂತು ಹ೦ದಿಜ್ವರದ ಭೀತಿ!


ಇಲಿ, ಮ೦ಗ,ಹಕ್ಕಿ, ಕೋಳಿ, ಹ೦ದಿ,
ಇನ್ಯಾವ ಪ್ರಾಣಿಯ ಸರದಿಯೋ ನಾ ಕಾಣೆ
ನಾನು ಚಿ೦ತೆ ಮರೆತಿದ್ದೇನೆ,
ಪಾಪಿ ಚಿರಾಯು !!!



ಚಿತ್ರಕೃಪೆ : Dr.B.R.Satyanarayana
http://nandondmatu.blogspot.com/

Friday, July 31, 2009

ಹುಚ್ಮು೦ಡೆ ಮದುವೇಲಿ ಉ೦ಡವನೆ ಜಾಣ


"ಹುಚ್ಮು೦ಡೆ ಮದುವೇಲಿ ಉ೦ಡವನೆ ಜಾಣ" ಅ೦ತಾರಲ್ಲ, ಹಾಗೆ, ನಮ್ಮ ಸುತ್ತ ನಡೆಯುವ ಅನೇಕ ವಿಷಯಗಳು ಸಹ ಈ ಮಾತಿಗೆ ಅನ್ವರ್ಥಕವೆನಿಸುವ ರೀತಿಯಲ್ಲಿ ಇರುತ್ತವೆ. ಆರ್ಥಿಕ ಹಿನ್ನಡೆ (Recession) ಯ ಈ ದಿನಗಳಲ್ಲಿ ಎಲ್ಲೆಡೆ ಸ೦ಬಳ ಕಡಿತ, ಉದ್ಯೋಗ ನಿರಾಕರಣೆ, ಇವೆಲ್ಲ ದಿನನಿತ್ಯದ ಮಾತಾಗಿರುವಾಗ ನಮ್ಮ ಜನಪ್ರತಿನಿಧಿಗಳ ಸ೦ಬಳ-ಸಾರಿಗೆ ಬಾಬ್ತುಗಳು ಏಕಾಏಕಿ ಏರಿದ್ದು ಮಾತ್ರ ಸುದ್ದಿಯೇ ಆಗಲಿಲ್ಲವೆನಿಸುತ್ತದೆ.

ದಿನನಿತ್ಯ ಒ೦ದಿಲ್ಲೊ೦ದು ವಿಚಾರಗಳಿಗೆ ವಿಧಾನಸಭೆಯಲ್ಲಿ ವೃಥಾ ಬಡಿದಾಡುವ, ಧನವಿನಿಯೋಗ ವಿಧೇಯಕಗಳಿಗೆ ಆಕ್ಷೇಪವೊಡ್ಡುವ, ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಡ್ಡಗಾಲಿಡುವವರನ್ನು ಪ್ರತಿಪಕ್ಷದವರು ಅ೦ತ ಕರೆಯಲಾಗುತ್ತದೆ. ಯಾವುದೇ ಒ೦ದು ವಿಚಾರ ಚರ್ಚೆಗೆ ಬ೦ದಾಗಲು ಅದನ್ನು ವಿರೋಧಿಸದೆ ಇದ್ದರೆ ಅವರು ವಿರೋಧಪಕ್ಷದ ನಾಯಕರು ಅ೦ತ ಹೇಳಿಸಿಕೊಳ್ಳಲು ಲಾಯಕ್ಕಿಲ್ಲದವರೆನೋ ಎ೦ಬ ಭ್ರಮೆ ಅವರಲ್ಲಿ ಇದ್ದ೦ತಿದೆ. ಹಾಗಾಗಿ ಅವರ ಮನಸಾಕ್ಷಿಗೆ ವಿರುದ್ಧವಾಗಿಯಾದರು,ಅನವಶ್ಯಕವಿದ್ದರೂ ಸಹ ಪ್ರತಿಯೊ೦ದು ವಿಧೇಯಕ ಚರ್ಚೆಗೆ ಬ೦ದಾಗಲು ಅದರ ಬಗ್ಗೆ ವಿರೋಧ ವ್ಯಕ್ತ ಪಡಿಸುತ್ತಾರೆ, ಕಲಾಪದ ವೇಳೆ ಹಾಳು ಮಾಡುತ್ತಾರೆ, ಸಭಾತ್ಯಾಗ ಮಾಡುತ್ತಾರೆ, ಪೇಪರು ಹರಿದುಹಾಕುತ್ತಾರೆ, ಗ೦ಟಲು ಹರಿದುಹೋಗುವ೦ತೆ ಕಿರಿಚಾಡುತ್ತಾರೆ, ಕೈಕೈ ಮಿಲಾಯಿಸುತ್ತಾರೆ, ಪತ್ರಿಕಾಗೋಷ್ಠಿ ನಡೆಸಿ ಚಿತ್ರವಿಚಿತ್ರ ಹೇಳಿಕೆ ಕೊಡುತ್ತಾರೆ, ಮಾಧ್ಯಮಗಳೆದುರು ಬೊಗಳೆ ಬಿಡುತ್ತಾರೆ. ಇದರಲ್ಲಿ ಬಹುಪಾಲು ಮಾಡುವುದು ಜನರ ದೃಷ್ಟಿಯಲ್ಲಿ Hero ಗಳಾಗಬೇಕೆ೦ಬ ಹಪಾಹಪಿಯಲ್ಲಿಯೇ ವಿನಃ ಜನರಿಗೆ ಒಳ್ಳೆಯದು ಮಾಡಬೇಕೆ೦ಬ ಇರಾದೆಯಲ್ಲಿ ಅಲ್ಲ ಎ೦ಬುದು ನಮಗೂ ಗೊತ್ತಿರುತ್ತದೆ. ಆದರೂ ನಾವು ನಮ್ಮ ವಿಧಾಯಕರನ್ನು ಗೌರವಿಸುತ್ತೇವೆ, "ಮಾನ್ಯ" ಸನ್ಮಾನ್ಯ" ಎ೦ದು ಬಹುಪರಾಕು ಹಾಡುತ್ತಾ ಅವರ ಗತ್ತು ಗೈರತ್ತು ಇನ್ನಷ್ಟು ಹೆಚ್ಚುವಲ್ಲಿ ಕಾರಣರಾಗುತ್ತೇವೆ.

ಆದರೆ ಯಾವುದಾದರು ಒ೦ದು ವಿಧೇಯಕದ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷದವರೆಲ್ಲರೂ ಯಾವುದೇ ವಿರೋಧವಿಲ್ಲದೆ, ಚರ್ಚೆ-ಪರಾಮರ್ಶೆಗಳ ನಾಟಕವಿಲ್ಲದೆ, ಧ್ವನಿಮತದಿ೦ದ ಅ೦ಗೀಕಾರಕ್ಕೆ ಸದನದಲ್ಲಿ ಒಪ್ಪಿಗೆ ನೀಡಿದ ಪ್ರಸ೦ಗ ನಿಮಗೆ ನೆನಪಿಗೆ ಬರುತ್ತದೆಯೇ ? ಬಹುಶಃ ಇದು ಪರಸ್ಪರರಿಗೆ ಲಾಭ ಆಗುವ೦ತಿದ್ದರೆ ಮಾತ್ರ ಸಾಧ್ಯ ಅ೦ತ ಕಾಣುತ್ತದೆ. ಅ೦ತಹ ಒ೦ದು ವಿಧೇಯಕ ಅ೦ದರೆ ಶಾಸಕರ ಸ೦ಬಳ ಸಾರಿಗೆ ಹೆಚ್ಚುವರಿಗೆ ಸ೦ಬ೦ಧಪಟ್ಟದ್ದು, ಕರ್ನಾಟಕ ದ ವಿಧಾನಸಭೆಯಲ್ಲಿ ಸುಲಭವಾಗಿ, ಯಾವ ವಿರೋಧವು ಇಲ್ಲದೆ ಅ೦ಗೀಕಾರವಾಗಿದೆ. ನೋಡಿ,ಪಕ್ಷಾತೀತವಾಗಿ ನಮ್ಮ ಶಾಸಕರಲ್ಲಿ ಎಷ್ಟೊ೦ದು ಒಗ್ಗಟ್ಟಿದೆ. ಇ೦ತಹ ವಿಚಾರಗಳು ಬ೦ದಾಗ ಯಾವುದೇ ರೀತಿಯ ಪ್ರತಿರೋಧವಿಲ್ಲದೆ ಎಲ್ಲರೂ ತಮ್ಮ ಒಪ್ಪಿಗೆಯನ್ನು ವ್ಯಕ್ತಪಡಿಸುತ್ತಾರೆ.

ಇದನ್ನು ಯಾಕೆ ಹೇಳಿದೆನೆ೦ದರೆ ಶಾಸಕರ ಸ೦ಬಳ ಮಾಹೆಯಾನ ರು: 24000-00 ದಿ೦ದ ರು: 44000-00 ಕ್ಕೆ ಒ೦ದೇ ಬಾರಿ ಏರಿಕೆಯಾಗಿದೆ. ಮಾಜಿ ಶಾಸಕರ ಪಿ೦ಚಣಿ 5000-00 ದಿ೦ದ 15000-00 ಕ್ಕೆ ಏರಿಕೆಯಾಗಿದೆ. ಇದಲ್ಲದೆ ಅವರ ದೂರವಾಣಿ ಭತ್ತೆ, ಪ್ರಯಾಣ ಭತ್ತೆ, ಅ೦ಚೆ ವೆಚ್ಹದ ಭತ್ತೆ, ಹೀಗೆ ಎಲ್ಲವು ಒ೦ದಕ್ಕೆ ಮೂರೂ ಪಟ್ಟು ಏರಿಕೆ ಒ೦ದೇ ಬಾರಿಗೆ ಆಗಿದೆ. ಇವರಿಗೆ ಸ೦ಬಳಸಾರಿಗೆ ಏರಿಸಿರುವುದರಿ೦ದ ಸರಕಾರದ ಬೊಕ್ಕಸಕ್ಕೆ ನೂರಾರು ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಆದರೆ ಇದು ಬೇಕಿತ್ತೆ ಎ೦ಬುದು ಇಲ್ಲಿರುವ ಪ್ರಶ್ನೆ. ನನಗೆ ತಿಳಿದ೦ತೆ ಹಾಲಿ ಶಾಸಕ-ಮ೦ತ್ರಿ ಗಳ್ಯಾರು ಕೂಡ ಸ೦ಬಳ ನೆಚ್ಚಿಕೊ೦ಡು ಜೀವನ ಮಾಡುತ್ತಿರುವವರಲ್ಲ. ಪಾಪ, ಗೆಲ್ಲುವುದಕ್ಕಾಗಿ ಲಕ್ಷ-ಕೋಟಿಗಳಲ್ಲಿ ಹಣ ಸುರಿದಿರುವ ಅವರಿಗೆ ಅದರ ಹತ್ತರಷ್ಟು-ನೂರರಷ್ಟು ದುಡಿಯಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಅವರು ತಮ್ಮ ತಮ್ಮ ಕ್ಷೇತ್ರವ್ಯಾಪ್ತಿಯ ಪ್ರತಿಯೊ೦ದು ಕಾಮಗಾರಿಯಲ್ಲೂ ಪರ್ಸೆ೦ಟೇಜಿನ ರೂಪದಲ್ಲಿ ಪ್ರಸಾದ ಪಡೆಯುತ್ತಿರುವುದು ಕೂಡ ಅವರ ಪ್ರಕಾರ ನ್ಯಾಯಬದ್ಧ. ಜೊತೆಗೆ ವರ್ಗಾವರ್ಗಿಯ ಹೆಸರಲ್ಲಿ ಒ೦ದಷ್ಟು ನೆ೦ಚಿಕೊಳ್ಳಲು ಉಪ್ಪಿನಕಾಯಿ ಬೇರೆ ಬೇಕು. ಅಧಿಕಾರಿಗಳಿ೦ದ ಚ೦ದಾರೂಪದಲ್ಲಿ ತಿ೦ಗಳಿಗೊಮ್ಮೆ ವಸೂಲಿ ಮಾಡುವುದು ಕೂಡ ಎ೦ತಹ ಅದ್ಭುತ ವ್ಯವಸ್ಥೆ ಅಲ್ಲವೇ ?. ಇದೆಲ್ಲ ಇರುವಾಗ ಈ ಸ೦ಬಳವೆ೦ಬ ಚಟ್ನಿಪುಡಿ ಯಾವ ಲೆಕ್ಕಕ್ಕೆ ? ನಮಗೆ ಸ೦ಬಳ ಹೆಚ್ಚಳ ಬೇಡ, ಆ ಹಣವನ್ನು ಯಾವುದಾದರು ಅಭಿವೃದ್ಧಿ ಕಾಮಗಾರಿಗೆ ವಿನಿಯೋಗಿಸೋಣ ಎ೦ದು ಒಬ್ಬೇ ಒಬ್ಬ ಶಾಸಕ ಹೇಳಿದ ವರದಿ ನಾನು ಓದಿಲ್ಲ, ಕೇಳಿಲ್ಲ. ನಾವಿರುವುದೇ ಸಾರ್ವಜನಿಕ ಹಣವನ್ನು ನು೦ಗಿ ನೊಣೆಯಲು ಮತ್ತು ಅದು ನಮ್ಮ ಜನ್ಮಸಿದ್ಧ ಹಕ್ಕು ಎ೦ದು ತಿಳಿದಿರುವ ಮ೦ತ್ರಿ-ಶಾಸಕರೆ೦ಬ ವ೦ದಿ-ಮಾಗಧರ ಸಮೂಹದಲ್ಲಿ ದುರ್ಬೀನು ಹಾಕಿ ಹುಡುಕಿದರೂ ಒಳ್ಳೆಯವರನ್ನು ಪತ್ತೆ ಮಾಡುವುದು ಕಷ್ಟವೇನೂ ಎ೦ಬ೦ತಹ ಸ್ಥಿತಿ ಇದೆ. ಇವರ ಮಾಸಿಕ ಸ೦ಬಳವನ್ನು ಲಕ್ಷಗಳಿಗೆ ಏರಿಸಿದರು ಅವರು ತಮ್ಮ Percentage ವ್ಯವಹಾರ, ಚ೦ದಾವಸೂಲಿ ಗಳನ್ನೂ ಖ೦ಡಿತಾ ಬಿಡುವುದಿಲ್ಲ. ಸರಕಾರೀ-ಖಾಸಗಿ ವಲಯದ ನೌಕರ ಕೆಲಸಕ್ಕೆ ಹೋಗದಿದ್ದರೆ ಅವನ ಸ೦ಬಳ ಕಟ್ ಆಗುತ್ತದೆ. ಆದರೆ ಶಾಸಕನೆ೦ಬ ಶೋಷಕ ವಿಧಾನಸೌಧದ ಮೆಟ್ಟಿಲು ಹತ್ತಿ ಕಲಾಪದಲ್ಲಿ ಭಾಗವಹಿಸದೆ ಇದ್ದರೂ, ತಾನು ಮಾಡಬೇಕಾದ ಕನಿಷ್ಠ ಕಾರ್ಯವನ್ನು ಮಾಡದೆ ಯಾವುದೋ ನಿಗೂಢ ಅಡ್ಡೆಯಲ್ಲಿ ಮಜಾ ಉಡಾಯಿಸುತ್ತಾ ಕಾಲಹರಣ ಮಾಡಿದರೂ, ಕು೦ಭಕರ್ಣನ೦ತೆ ನಿದ್ದೆ ಮಾಡುತ್ತಾ ಕಾಲ ಕಳೆದರೂ, ಸ೦ಬಳವೆ೦ಬ ಮೊತ್ತ ತಾನಾಗಿಯೆ ಖಾತೆಗೆ ಜಮಾವಣೆ ಯಾಗುತ್ತದೆ, ಸಿಗಬೇಕಾದ ಸವಲತ್ತುಗಳು ಸಿಗುತ್ತವೆ, ಜೊತೆಗೆ ಉಳಿದೆಲ್ಲ ಬಾಬ್ತುಗಳನ್ನು ಅವರ ಸಹಾಯಕರೆ೦ಬ ಯಮಕಿ೦ಕರರು ವಸೂಲು ಮಾಡಿ ತರುತ್ತಾರೆ. ಯಾರಿಗು೦ಟು ಈ ಭಾಗ್ಯ ಅಲ್ಲವೇ ? ಇದನ್ನು ಕೇಳುವವರು, ಪ್ರಶ್ನಿಸುವವರೇ ಇಲ್ಲವಾಗಿದೆ. ನನ್ನ ಪ್ರಕಾರ, ಜನಸೇವೆ ಮಾಡುತ್ತೇವೆ೦ದು ಹೇಳುತ್ತಾ "ಜನಶೇವೆ" ಮಾಡುತ್ತಿರುವ ಈ ಮ೦ತ್ರಿ-ಶಾಸಕರಿಗೆ ಸ೦ಬಳದ ಅಗತ್ಯವೇ ಇಲ್ಲ, ಇನ್ನು ಹೆಚ್ಚುವರಿಯ೦ತೂ ಖ೦ಡಿತಾ ಸಲ್ಲ.

ತಮಿಳುನಾಡು ಸರಕಾರ ಮಾಡಿದ ಶಾಸಕರ ಸ೦ಬಳ ಹೆಚ್ಚುವರಿ ನಡವಳಿಕೆಯನ್ನು ಪ್ರಶ್ನಿಸಿ ಅಲ್ಲಿನ ಸಾಮಾಜಿಕ ಕಾರ್ಯಕರ್ತರೊಬ್ಬರು ಹೂಡಿದ ಸಾರ್ವಜನಿಕ ಹಿತಾಸಕ್ತಿ ದೂರನ್ನು (Public Interest Litigation ) ಚೆನ್ನೈ ಹೈಕೋರ್ಟು ಸ್ವೀಕರಿಸಿದೆ. ಇಲ್ಲಿ ಈವರೆಗೆ ಯಾರೂ ಅ೦ತಹ PIL ದಾಖಲಿಸಿದ್ದು ನನಗೆ ತಿಳಿದಿಲ್ಲ. ಬಹುಶಃ, ಮ೦ತ್ರಿ-ಶಾಸಕರು ಏನು ಬೇಕಾದರೂ ಮಾಡಿಕೊಳ್ಳಲಿ, ನಮಗೇನು ಎನ್ನುವ ಉದಾಸ ಮನೋಭಾವವೇ ಇದಕ್ಕೆ ಕಾರಣವಿರಬಹುದೇನೋ. ಯಾರಾದರು ಈ ಬಗ್ಗೆ ಯೋಚಿಸುವಿರಾ ??

Photo: www.flickr.com





Thursday, July 23, 2009

Nature’s bounty is blissful




ಇದು ಅನುವಾದವಲ್ಲ, ನನ್ನದೇ ರಚನೆ. ಬಹಳ ತುರ್ತಿನಲ್ಲಿ, ಬ್ಲಾಗಿಗೊ೦ದು ಹೊಸ post ಹಾಕಲೇಬೇಕೆ೦ಬ ದರ್ದಿನಲ್ಲಿ ಪುನರ್ವಿಮರ್ಶೆಗೂ ಒಳಪಡಿಸದೆ edit ಮಾಡದೇ ತಯಾರಾದ ಕವನ. ತಪ್ಪು ಒಪ್ಪುಗಳನ್ನು ಮನ್ನಿಸಿ ಸ್ವೀಕರಿಸುತ್ತೀರೆ೦ಬ ಭರವಸೆಯೊ೦ದಿಗೆ ಧೈರ್ಯದಿ೦ದ ನಿಮ್ಮ ಮು೦ದಿಟ್ಟಿದ್ದೇನೆ.

Nature’s bounty is blissful and colorful

Which is mesmerizing, yet beautiful

The flowers spread their fragrance

The winds wave with lilting music

The birds chirp to soothe our minds

The lightning adds more color and glitter

The rains give us all a great feeling

Time and again, everything occurs on its own

To prove that the nature is above all;

But what we give to the nature in turn

We ruin everything for our never ending needs

Disturbing nature’s routine rule

For the sake of our own selfish goal.


Thursday, July 16, 2009

ಮಳೆರಾಯ ಕೂಡ ನಮ್ಮ ರಾಜಕಾರಣಿಗಳ೦ತೆ


ಅಪರೂಪಕ್ಕೆ ತೆಕ್ಕೆಗೆ ಬಿದ್ದು ಎಡೆಬಿಡದೆ ಮುದ್ದುಗರೆಯುವ ನಲ್ಲನ೦ತೆ
ಬೇಡಬೇಡವೆ೦ದರೂ ಒತ್ತಾಯಿಸಿ ಬಡಿಸುವ ಮದುವೆಮನೆ ಊಟದ೦ತೆ
ತೆರಪಿಲ್ಲದೆ ಬಿಡುಬೀಸಾಗಿ ಮಾತನಾಡುವ ವಾಚಾಳಿಯ೦ತೆ,
ಆಟದ ಮೈದಾನದಲ್ಲಿ ಸಚಿನ್ ಚಚ್ಚುವ ಸಿಕ್ಸರ್ ಗಳ೦ತೆ
ಸುರಿಯುತ್ತಿದೆ ಮಳೆ, ಮಲೆನಾಡು, ಒಳನಾಡು ಎಲ್ಲೆಡೆ ನಿರ್ಭಿಡೆ
ಅದೇಕೋ ವರುಣನಿಗೆ ಧರಿತ್ರಿಯ ಮೇಲೆ ಪ್ರೀತಿ ಉಕ್ಕಿ ಹರಿದಿದೆ
ಎಲ್ಲೆಡೆ ಕೆ೦ಪು ನೀರು ಜನಜೀವನವೆಲ್ಲ ತಾರು-ಮಾರು
ಆದರೂ ವರುಣನಿಗ್ಯಾಕೋ ಬೆ೦ಗಳೂರಿಗರ ಮೇಲೆ ಮುನಿಸು
ಹಗಲೆಲ್ಲ ಮೋಡದ ಕವಚ ಹಾಕಿ ನಗುತ್ತಾನೆ ನಾಲ್ಕು ಹನಿ ಹನಿಸಿ
ಕುಡಿಯುವ ನೀರಿಗೆ ಪರದಾಡುವ ನಿಮಗಿಷ್ಟೇ ಸಾಕು ಎ೦ಬ ಭಾವವೋ?
ಕಾದಿರಿ, ನಿಮ್ಮನ್ನೂ ತೊಳೆದು ತೊಪ್ಪೆ ಮಾಡುವೆ ಎನ್ನುವ ಮುನ್ಸೂಚನೆಯೋ
ಗೊತ್ತಿಲ್ಲ, ಎಲ್ಲ ನಿಗೂಢ, ಎ೦ದು ಕು೦ಭದ್ರೋಣ ಮಳೆ ಸುರಿಸುತ್ತಾನೋ ?
ಯಾಕೋ ಈಚೀಚೆಗೆ ಮಳೆರಾಯ ಕೂಡ ನಮ್ಮ ರಾಜಕಾರಣಿಗಳ೦ತೆ
ಆಹ್ವಾನಪತ್ರಿಕೆಯಲ್ಲಿ ಮುದ್ರಿಸಿದ ಸಮಯಕ್ಕೆ ಬಾರದ ಮ೦ತ್ರಿಯ೦ತೆ
ಆಶ್ವಾಸನೆಗಳ ಮಳೆ ಸುರಿಸಿ ನ೦ತರ ಮರೆಯಾಗಿ ಬಿಡುವ ಅವಕಾಶವಾದಿ

Photo: www.flickr.com

Friday, July 10, 2009

ಬಾ ಮಳೆಯೇ ಬಾ ....


ಮಳೆಗಾಗಿ ಪರ್ಜನ್ಯ ಜಪ ಮಾಡಿಸಿ ಅ೦ದರು ಆಸ್ತಿಕರು
ಬೇಡ, ಮೋಡ ಬಿತ್ತನೆ ಮಾಡಿಸಿ ಅ೦ದರು ನಾಸ್ತಿಕರು
ಕಪ್ಪೆ ಮದುವೆ, ಕತ್ತೆ ಮೆರವಣಿಗೆ ಮಾಡಿದರು ಕೆಲವರು
ಮಗುಮ್ಮಾಗಿ ಸುಮ್ಮನಿದ್ದರು ನನ್ನ೦ಥ ಹಲವರು


ಏನೆನಿಸಿತೋ ವರುಣನಿಗೆ, ಸುರಿಸಿಯೇ ಬಿಟ್ಟ ಮುಸಲಧಾರೆ
ಕಾದ ಕಾವಲಿಯಾಗಿದ್ದ ಧರೆಗೆ ತ೦ಪೆರೆಯಿತು ವರ್ಷಧಾರೆ
ಭೂರಮೆಯು ತೊಯ್ದು ತೊಪ್ಪೆ, ಮೈಮನವೆಲ್ಲ ಬೆಚ್ಚಗಿನ ಭಾವ
ಮಳೆಯ ಜೋಗುಳಕೆ ಜನ ಮರೆತಿರುವರೆಲ್ಲ ನೋವ


ಮಳೆಯಿ೦ದ ಆಗುತಿದೆ ನಷ್ಟ ಜೀವನವಾಗಿದೆ ಕಷ್ಟ
ಮಳೆ ಬ೦ದರೆ ತಾನೇ ಈಡೇರುವುದು ನಮ್ಮೆಲ್ಲರ ಇಷ್ಟ
ಬರಲಿ, ಸುರಿಯಲಿ, ಕಾವು ತಣಿಸಲಿ, ಕೊಳೆ ತೊಳೆಯಲಿ,
ಹಚ್ಚ ಹಸಿರಿನ ತಳಿರು ಮೊಳೆಯಲಿ, ಇಳೆ ತ೦ಪಾಗಲಿ

Tuesday, July 7, 2009

ಮಿ೦ಚು ಕತ್ತಲ ಅಣಕಿಸುವ೦ತೆ


Percy Bysshe Shelley ಯ ಆ೦ಗ್ಲ ಕವಿತೆಯೊ೦ದು ಕೈಗೆ ತಾಕಿತು, ಭಾವಾನುವಾದಗೊ೦ಡು ನಿಮ್ಮ ಮು೦ದಿದೆ. ಓದಿ ನೋಡಿ ಪ್ರತಿಕ್ರಿಯಿಸಿ.


ಇಂದು ನಗುವ ಚೆಂದದ ಹೂವು
ನಾಳೆಗದು ಬಾಡಿ ಸಾಯುವುದು
ನಮ್ಮೆಲ್ಲ ಬಯಕೆ ಆಸೆ ಕಾ೦ಕ್ಷೆಗಳು
ಒತ್ತರಿಸಿ ಬರುವ೦ತೆ ಮರೆಯಾಗುವವು
ಇದುವೇ ಜಗದ ನಿತ್ಯ ಕೌತುಕ
ಮಿ೦ಚು ಕತ್ತಲ ಅಣಕಿಸುವ೦ತೆ
ಸ೦ಕ್ಷಿಪ್ತ ಆದರೆ ಸಾಪೇಕ್ಷ


ಗುಣಾತ್ಮಕತೆ, ಅದೆಷ್ಟು ಕ್ಷೀಣ
ಮಿತ್ರತೆ ಅದೆಷ್ಟು ಅಪರೂಪ
ಪ್ರೀತಿ, ಅದೆನಿತು ಕಾಡುವುದು ಸ೦ತೃಪ್ತಿ
ಭರವಸೆಯನೆಷ್ಟು ದೂರ ಸರಿಸುವುದು
ಮತ್ತದೇ ನೋವಿನ ಕ್ಷಣಗಳು ಬ೦ದರೂ ನಾವು
ಬದುಕುಳಿವೆವು, ಸುಖ ಪಡುವೆವು
ಈ ಕ್ಷಣ ನಮ್ಮದೆ೦ದು ಬಗೆವೆವು


ಆಗಸ ಶುಭ್ರ ನೀಲ ಸ್ವಚ್ಚವಿದ್ದಾಗ
ಹೂವುಗಳು ಅ೦ದದ ಪ್ರತಿನಿಧಿಯಾದಾಗ
ಕಣ್ಣುಗಳು ರಾತ್ರೆಗಳಲ್ಲಿ ಕನಸಿದಾಗ
ದಿನದ ದಣಿವು ಮರೆವುದು, ಮನ ಹಗುರಾಗುವುದು
ಆದಾಗ್ಯೂ ಅಶಾ೦ತ ಗಳಿಗೆ ಮರುಕಳಿಸುವುದು
ನಿದ್ದೆ ಮ೦ಪರಿನಲಿ ಕನಸು ಅರಳುವುದು
ಮತ್ತೆ ಎದ್ದು ಅಳುವ೦ತೆ ಮಾಡುವುದು
ಇದುವೇ ಜೀವನ, ನಿತ್ಯ ನಿರ೦ತರ ಪಯಣ

photo: www.flickr.com

Tuesday, June 30, 2009

Corruption is worse than prostitution

ಲ೦ಚ ಎಲ್ಲಿಲ್ಲ ? ಲ೦ಚಗುಳಿತನ ಇ೦ದು ನಮ್ಮ ಜೀವನದ ಒ೦ದು ಭಾಗವೇ ಆಗಿ ಹೋಗಿದೆ. ಪ್ರತಿಯೊ೦ದಕ್ಕೂ ಲ೦ಚ ಕೊಟ್ಟೆ ಮು೦ದೆ ಹೋಗಬೇಕು. ಭ್ರಷ್ಟಾಚಾರ ನಿರ್ಮೂಲನ ಮ೦ಡಲಿ, ಲೋಕಾಯುಕ್ತ, ಲೋಕಪಾಲ ಹೀಗೆ ಅದೆಷ್ಟೇ ವ್ಯವಸ್ಥೆಗಳಿದ್ದರೂ ಲ೦ಚಗುಳಿತನ, ಭ್ರಷ್ಟಾಚಾರ ತೆರೆಮರೆಯಲ್ಲಿ ಗುಪ್ತಗಾಮಿನಿಯ೦ತೆ ಕೆಲಸ ಮಾಡುತ್ತಲೇ ಇರುತ್ತದೆ. ಅದಕ್ಕೆ ಯಾವ ನಿರ್ಬ೦ಧ ಗಳೂ ಲೆಕ್ಕಕ್ಕಿಲ್ಲ. ಸರಕಾರದ ಯಾವುದೇ ಇಲಾಖೆಯಲ್ಲಿ ನೋಡಿ, ಲ೦ಚ ಕೊಡದಿದ್ದರೆ ನಮ್ಮ-ನಿಮ್ಮ ಕೆಲಸಗಳು ಆಗುವುದೇ ಇಲ್ಲ, ನೂರು ಬಾರಿ ಅಲೆಯಬೇಕಾಗುತ್ತದೆ. ಅಲೆದು ಅಲೆದು ಸುಸ್ತಾಗಿ ಕೊನೆಗೆ ಇದಕಿ೦ತ ಲ೦ಚ ಕೊಟ್ಟು ಕೆಲಸ ಮಾಡಿಸುವುದೇ ಮೇಲು ಎ೦ಬ ನಿರ್ಣಯಕ್ಕೆ ಬರಬೇಕಾದ ಅನಿವಾರ್ಯತೆ ಈ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿ ಹೆಣೆದು ಕೊ೦ಡಿದೆ. ಮಾಸ್ಟರ್ ಹಿರಣ್ಣಯ್ಯ ಹೇಳ್ತಿದ್ರು, "ಲ೦ಚ ಎಲ್ಲಿಲ್ಲ ಹೇಳಿ, ಮನೆಗೆ ಹೋಗಿ ಹೆ೦ಡ್ತಿ ಜೊತೆ ಮ೦ಚ ಏರಬೇಕಾದ್ರೂ ಲ೦ಚ ಕೊಟ್ಟೇ ಕೊಡಬೇಕು." ತಮಾಷೆಯ ಮಾತಲ್ಲ, ಇದನ್ನು ನಿಯ೦ತ್ರಿಸಲು, ಮೂಲೋತ್ಪಾಟನೆ ಮಾಡಲು ದೇವರೇ ಇನ್ನೊ೦ದು ಜನ್ಮ ಎತ್ತಿ ಬ೦ದರೂ ಸಾಧ್ಯವಿಲ್ಲದಷ್ಟು ಅದು ನಮ್ಮನ್ನು, ನಮ್ಮ ಸಮಾಜವನ್ನು ಅವರಿಸಿಬಿಟ್ಟಿದೆ.

“Corruption is worse than prostitution. The latter might endanger the morals of an individual, the former invariably endangers the morals of the entire country.” ಅ೦ತ Karl Kraus ಹೇಳಿದ್ದಾನೆ. ಆತನ ಮಾತು ಅದೆಷ್ಟು ಮಾರ್ಮಿಕವಾಗಿದೇ ಅಲ್ಲವೇ.

ಲೋಕಾಯುಕ್ತರು ಆಗಾಗ್ಯೆ ಭ್ರಷ್ಟ ಅಧಿಕಾರಿಗಳ ಮನೆ ರೇಡು ಮಾಡಿ ಕೋಟ್ಯ೦ತರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಜಫ್ತು ಮಾಡಿದ ಸುದ್ದಿ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಆದರೆ ಯಾವುದಾದರು ಒ೦ದು ಪ್ರಕರಣದಲ್ಲಿ ಅ೦ತಹ ಭ್ರಷ್ಟ ಅಧಿಕಾರಿಗೆ ಅಥವಾ ರಾಜಕಾರಣಿಗೆ ಶಿಕ್ಷೆಯಾದ ಪ್ರಸ೦ಗ ನೆನಪಿಗೆ ಬರುವುದಿಲ್ಲ. ಇದೇಕೆ ಹೀಗೆ ? ಈ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿ ತಪ್ಪಿತಸ್ತನಿಗೆ ಸ್ಥಳದಲ್ಲೇ ಶಿಕ್ಷೆ ಕೊಡುವ ಪರಮಾಧಿಕಾರವನ್ನು ಲೋಕಾಯುಕ್ತರಿಗೆ ಯಾಕೆ ಕೊಡಬಾರದು, ಕೊಟ್ಟರೆ ಅದು ಸಮರ್ಪಕವಾಗಿ ಜಾರಿಯಾದೀತೆ ? ಎ೦ಬ ಪ್ರಶ್ನೆ ಉದ್ಭವಿಸುತ್ತವೆ.

Money and corruption are ruining the land,
crooked politicians betray the working men,
pocketing the profits and treating us like sheep,
and we're tired of hearing promises
that we know they'll never keep

ಹಾಗಿದ್ದರೆ ತಡೆಯಲು ಸಾಧ್ಯವಿಲ್ಲದ ಈ ಲ೦ಚಾವತಾರವನ್ನು ನಿಯ೦ತ್ರಿಸುವುದು ಹೇಗೆ ? ಎ೦ಬುದೇ ಯಕ್ಷಪ್ರಶ್ನೆಯಾಗಿ ಬಿಟ್ಟಿದೆ. ನನ್ನಪ್ರಕಾರ ಮು೦ದೊ೦ದು ದಿನ ಲ೦ಚವನ್ನು ಸರಕಾರ "regularize" ಮಾಡುವ ಅನಿವಾರ್ಯತೆ ಬರಬಹುದು. ಅದು ಹೇಗೆ೦ದರೆ ಪ್ರತಿ ಸರಕಾರೀ ಇಲಾಖೆಯನ್ನು ನಾಲ್ಕು ವಲಯಗಳಾಗಿ ವಿ೦ಗಡಿಸಿ ಖಾಸಗಿಯವರಿಗೆ ವಾರ್ಷಿಕ ಗುತ್ತಿಗೆ ಮೊತ್ತಕ್ಕೆ ಪ್ರತಿ ವರ್ಷ ಹರಾಜಿನಲ್ಲಿ ವಹಿಸಿಕೊಡುವುದು. ಹೀಗೆ ಮಾಡುವುದರಿ೦ದ ಸರಕಾರಕ್ಕೆ ಸ೦ಬಳ ಕೊಡುವ ತಲೆಬಿಸಿಯಿಲ್ಲ. ಇದರಿ೦ದ ಸರಕಾರದ ಬೊಕ್ಕಸಕ್ಕೂ ಒಳ್ಳೆಯ ಆದಾಯದ ಹರಿವು ನಿರ೦ತರ ಬರುತ್ತದೆ. ಇಲಾಖೆಗಳ ನಿರ್ವಹಣೆ,ಸ೦ಬಳಸಾರಿಗೆ ಪಾವತಿಗಳ ತಲೆಬಿಸಿಯಿಲ್ಲ, ವಿವಿಧ ಇಲಾಖೆಗಳ ಹರಾಜಿನಿ೦ದ ಬರುವ ಮೊತ್ತವನ್ನು ಸಚಿವರುಗಳ "ಅಭಿವೃದ್ಧಿ ಕಾರ್ಯ" ಗಳಿಗೆ ಬಳಸಬಹುದು. ಹರಾಜಿನಲ್ಲಿ ಗುತ್ತಿಗೆ ಪಡೆದ ಖಾಸಗಿ ಕ೦ಪೆನಿ "ಇ೦ತಿ೦ಥ ಕೆಲಸಕ್ಕೆ ಇ೦ತಿಷ್ಟು ಮೊತ್ತ ಕೊಡಬೇಕು" ಎ೦ದು ಕಚೇರಿ ಮು೦ದೆ ಬೋರ್ಡು ತೂಗು ಹಾಕಿ, ನೈಸ್ ರಸ್ತೆಯಲ್ಲಿ Toll Fee ವಸೂಲು ಮಾಡುವ೦ತೆ ಸಾರ್ವಜನಿಕರಿ೦ದ ಅವರವರ ಕೆಲಸಗಳಿಗೆ ಹಣಪಡೆದು ರಸೀದಿ ಕೊಡುವ ಪದ್ಧತಿ ಜಾರಿಗೆ ಬ೦ದರೂ ಬರಬಹುದು. ಏನ೦ತೀರಿ ?? .




Wednesday, June 24, 2009

ಮ೦ದಹಾಸದ ಮಿನುಗು ಇರಲಿ ಕೊನೆವರೆಗೆ


ವಿಶ್ವಕವಿ ರವೀ೦ದ್ರನಾಥ ಟಾಗೋರರ ಆ೦ಗ್ಲ ಕವಿತೆ THE KISS ಯಾವುದೋ ಪುಸ್ತಕ ಹುಡುಕುತ್ತಿದ್ದಾಗ ಸಿಕ್ಕಿತು, ಅದರ ಕನ್ನಡ ಭಾವಾನುವಾದದ ಯತ್ನ ಇಲ್ಲಿ ಅನಾವರಣಗೊಳ್ಳುತ್ತಿದೆ.

ತುಟಿಗಳ ಮಿಲನ ಮೂಡಿಸಿದೆ ಮ೦ದಹಾಸ
ಪರಸ್ಪರರ ಹೃದಯಗಳ ಸವಿಯುವ೦ತೆ ಭಾಸ
ಮನೆಮಠ ತೊರೆದ ಪ್ರೇಮಿಗಳ ಪರಿಭ್ರಮಣ
ಅಧರಗಳು ಸ೦ಧಿಸಿವೆ ಮರೆತು ನಿಷ್ಕ್ರಮಣ
ಪ್ರೇಮದಲೆಗಳಿಗಿಲ್ಲಿ ಉನ್ಮಾದದ ಉಬ್ಬರ
ಬೇರ್ಪಡುವ ಚಡಪಡಿಕೆಗಿಲ್ಲಿಲ್ಲ ಆತುರ
ಒಬ್ಬರನೊಬ್ಬರು ಬಿಟ್ಟಿರದಾಗಿದೆ ಉತ್ಕಟ ಬಯಕೆ
ಬ೦ಧಿಸಿದೆ ತ೦ತಮ್ಮ ದೇಹಮಿತಿಯೊಳಗೆ
ಸುಕೋಮಲ ಪದಗಳ ಪತ್ರ ಬರೆದಿದೆ ಈ ಪ್ರೀತಿ
ತುಟಿಗಳ ಮುದ್ರೆಯದು ಅ೦ಕಿತದ ರೀತಿ
ಮೃದುಮಧುರ ಹೂಪಕಳೆ ಕೀಳುತಿದೆ ಅಧರ
ಪೋಣಿಸಲು ಹೂಹಾರ ಬಾಳಿಗಾಧಾರ
ತುಟಿಗಳ ಸ೦ಯೋಜನೆ ಮಧುರ ಈ ಘಳಿಗೆ
ಮ೦ದಹಾಸದ ಮಿನುಗು ಇರಲಿ ಕೊನೆವರೆಗೆ

Photo:www.google.com

Friday, June 19, 2009

ಭವಿಷ್ಯವಾಣಿ ನಿಜವಾಗುವುದೇ ??


ಪತ್ರಿಕೆಗಳಲ್ಲಿ ಬರುವ ದಿನಭವಿಷ್ಯ, ವಾರಭವಿಷ್ಯ , ವರ್ಷಭವಿಷ್ಯಗಳ ಬಗೆಗೆ ನಿಮಗೆಷ್ಟು ಆಸಕ್ತಿ ಇದೆಯೋ ನಾನರಿಯೆ. ಆದರೆ ನನಗೆ ಪ್ರತಿನಿತ್ಯ ಪತ್ರಿಕೆಗಳ ದಿನಭವಿಷ್ಯ ಕಾಲಮುಗಳನ್ನು ಓದುವಲ್ಲಿ ತು೦ಬು ಆಸಕ್ತಿ ಇದೆ. ಯಾಕೋ ಗೊತ್ತಿಲ್ಲ, ಕನ್ನಡ ಅಥವಾ ಆ೦ಗ್ಲಭಾಷೆಯ ಯಾವ ಪತ್ರಿಕೆ ತೆರೆದರೂ ಒ೦ದರೆ ಕ್ಷಣದಲ್ಲಿ ಗಮನ ಅಯಾಚಿತವಾಗಿ ದಿನಭವಿಷ್ಯದ ಅ೦ಕಣದೆಡೆ ಸರಿದು ನನ್ನ ರಾಶಿಗೆ ಏನು ಬರೆದಿದ್ದಾರೆ ಎ೦ಬ ಹುಡುಕಾಟಕ್ಕೆ ತೊಡಗುತ್ತದೆ. ಹಾಗ೦ದ ಮಾತ್ರಕ್ಕೆ ನಾನು ಈ ಭವಿಷ್ಯ, ಜ್ಯೋತಿಷ್ಯ, ಕವಡೆ ಪ್ರಶ್ನೆ ಗಳನ್ನೂ ವಿಪರಿತ ನ೦ಬುವ ಪೈಕಿ ಅ೦ದುಕೊಳ್ಳಬೇಡಿ. " Those who don't look forward remain behind " ಅ೦ತ ಯಾರೋ ಒಬ್ಬ ಅನಾಮಿಕ ಹೇಳಿಬಿಟ್ಟಿದ್ದಾನೆ, ಅದೇ ಕಾರಣಕ್ಕೋ ಅಥವಾ ತಮಾಷೆಗೋ ದಿನಭವಿಷ್ಯ ನೋಡುವ ನನ್ನ ಚಾಳಿ ಅಥವಾ ಅಭ್ಯಾಸ ಮು೦ದುವರಿದೇ ಇದೆ. ನನ್ನದು ತುಲಾ ರಾಶಿ. ಉದಾಹರಣೆಗೆ ಕನ್ನಡದ ಪ್ರಮುಖ ನಾಲ್ಕು ದಿನಪತ್ರಿಕೆಗಳನ್ನು ತೆರೆದು ನನ್ನ ರಾಶಿಗೆ ಬರೆಯಲಾಗಿರುವ ದಿನಭವಿಷ್ಯದೆಡೆಗೆ ಕಣ್ ಹಾಯಿಸಿದರೆ ನಾಲ್ಕರಲ್ಲೂ ವ್ಯತಿರಿಕ್ತ ಉಕ್ತಿಗಳು. ಒ೦ದರಲ್ಲಿ ಧನಲಾಭ ಅ೦ತಿದ್ದರೆ ಇನ್ನೊ೦ದರಲ್ಲಿ ಧನಹಾನಿ ಅ೦ತಲೋ, ಒ೦ದರಲ್ಲಿ ಸ೦ಸಾರದಲ್ಲಿ ಶಾ೦ತಿ ಅ೦ತ ಇದ್ದರೆ ಇನ್ನೊ೦ದರಲ್ಲಿ ಪತ್ನಿಯೊ೦ದಿಗೆ ವಿರಸ ಅ೦ತಲೋ ಎನಾದರೊ೦ದು ಅಭಾಸವೆನಿಸುವ ಭವಿಷ್ಯ ನುಡಿ ನನ್ನನ್ನು ಅಣಕಿಸುತ್ತಿರುತ್ತದೆ. ಇದೆ೦ತಹ ವಿಪರ್ಯಾಸ ನೋಡಿ, ಎಲ್ಲ ಪತ್ರಿಕೆಗಳ ದಿನಭವಿಷ್ಯ ಅ೦ಕಣಗಳನ್ನು ಒತ್ತಟ್ಟಿಗೆ ಇಟ್ಟುಕೊ೦ಡು ಪರಿಶೀಲನೆ ಮಾಡಿದಲ್ಲಿ ಅದೆಷ್ಟು ಪೊಳ್ಳು ಮತ್ತು ಅವಾಸ್ತವ ಅನ್ನುವುದು ಕ್ಷಣದಲ್ಲೇ ತಿಳಿಯುತ್ತದೆ. ಅಖ೦ಡ ಆರುಕೋಟಿ ಕನ್ನಡಿಗರಿಗೆ ಹೊ೦ದಿಕೆಯಾಗುವ೦ತೆ ಅಯಾರಾಶಿಗಳಿಗೆ ದಿನಭವಿಷ್ಯವನ್ನು ಹೊ೦ದಿಸುವ ಕಲೆಗಾರಿಕೆ ಅದು ಹೇಗೆ ಸಿದ್ಧಿಸಿರುತ್ತದೆ ಎ೦ಬುದೇ ಒ೦ದು ಚಿದ೦ಬರ ರಹಸ್ಯ.

Shallow men believe in luck . . . Strong men believe in cause and effect - ಅ೦ತ ಎಮರ್ಸನ್ ಹೇಳಿದ್ದಾನೆ. ಕೆಲವರು ದಿನ ಭವಿಷ್ಯವನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಳ್ಳುವುದನ್ನು ನಾನು ನೋಡಿದ್ದೇನೆ. ಇ೦ದು ವಾಹನ ಪ್ರಯಾಣ ಕ್ಷೇಮವಲ್ಲ ಅ೦ತಿದ್ದ ದಿನ ಅದೇ ಅಳುಕಿನಲ್ಲಿ ಮನೆಯಲ್ಲಿ ಕುಳಿತು ಕಾಲ ಕಳೆಯುತ್ತಿದ್ದವರು, ಅಥವಾ ಒಲ್ಲದ ಮನಸಿನಿ೦ದ ಹೊರಹೋಗಿ ಯಾವುದೋ ಬೈಕಿಗೆ ಅಡ್ಡಬ೦ದು ಆತನಿ೦ದ ಉಗಿಸಿಕೊ೦ಡು ಬ೦ದು ದಿನಭವಿಷ್ಯ ನಿಜವೆ೦ದು ವಾದಿಸಿದವರನ್ನು ನಾನು ಕ೦ಡಿದ್ದೇನೆ. ನಾನು ದಿನ ಭವಿಷ್ಯ ಓದಿದರೂ ಅದನ್ನು ಸೀರಿಯಸ್ ಆಗಿ ತೆಗೆದು ಕೊಳ್ಳುವುದಿಲ್ಲ.

ಒಮ್ಮೆ ಮಾಸ್ಟರ್ ಹಿರಣ್ಣಯ್ಯ ನವರು ಯಾವುದೋ ನಾಟಕದ ಪಾತ್ರಧಾರಿಯಾಗಿ ಹೇಳಿದ ಮಾತುಗಳು ಇಲ್ಲಿ ನೆನಪಾಗುತ್ತವೆ. ಅವರ ಪ್ರಕಾರ ರಾಶಿಭವಿಷ್ಯ ಬರೆಯುವುದು ಬಲು ಸುಲಭ. ಒ೦ದು ದಿನ ಮೇಷ ರಾಶಿಗೆ ಬರೆದ ಸಾಲುಗಳನ್ನು ನಾಳೆ ಮೀನರಾಶಿಗೋ ಅಥವಾ ವೃಶ್ಚಿಕ ರಾಶಿಗೋ ಶಿಫ್ಟ್ ಮಾಡಿದರಾಯಿತು. ಅವರೇ ಹೇಳುವ೦ತೆ ರಾಶಿಭವಿಶ್ಯದಲ್ಲಿ ಬರುವ ನುಡಿಗಟ್ಟುಗಳು ಅದೆಷ್ಟು ಒ೦ದಕ್ಕೊ೦ದು ಹೊ೦ದಿಕೆಯಾಗುವಷ್ಟು ಚೆ೦ದವಿರುತ್ತವೆ ಎ೦ದರೆ ಉದಾಹರಣೆಗೆ:

"ಸುಗ್ರಾಸ ಭೋಜನ - ತೀವ್ರ ಅನಾರೋಗ್ಯ"
"ಅನಿರೀಕ್ಷಿತ ಸ್ತ್ರೀ ಸ೦ಗ - ಮಹಾ ರೋಗ"
"ಅಪರೂಪದ ನೆ೦ಟರ ಆಗಮನ - ವಿಪರೀತ ಖರ್ಚು"

ಹೀಗೆ ಹಿರಣ್ಣಯ್ಯನವರು ಒ೦ದಷ್ಟು ತಮಾಷೆಯ ಉಕ್ತಿಗಳನ್ನು ಉದ್ಧರಿಸುತ್ತಾ, "ಅದನ್ನ ಅವ್ನೇನು ಹೇಳೋದು - ಮೊದಲನೆಯದು ಮಾಡಿದರೆ ಎರಡನೇದು ತಾನಾಗಿಯೆ ಆಗುತ್ತೆ" ಅ೦ತ ವೈನೋದಿಕ ನೆಲೆಯಲ್ಲಿ ಹೇಳಿದ್ದರು.

ಇನ್ನು ಅ೦ಗ್ಲ ದಿನಪತ್ರಿಕೆಗಳಲ್ಲಿ ಬರುವ ಭವಿಷ್ಯವ೦ತೂ ಅಡ್ಡಗೋಡೆ ಮೇಲೆ ದೀಪವಿಟ್ಟ೦ತೆ, ಯಾವುದನ್ನು ನಿಖರವಾಗಿ ಹೇಳುವುದಿಲ್ಲ, ಅದರಲ್ಲಿರುವ ನುಡಿಗಟ್ಟುಗಳನ್ನು ನಮಗೆ ನಾವೇ ಕಲ್ಪಿಸಿಕೊ೦ಡು ಹೊ೦ದಿಕೆ ಮಾಡಿಕೊ೦ಡು ಖುಷಿಪಡಬೇಕು. ಹಾಗಿದೆ.

ಇದೆಷ್ಟು ಪ್ರಸ್ತುತವೋ ಗೊತ್ತಿಲ್ಲ. ಆದರೆ ದಿನ ಭವಿಷ್ಯ ಎ೦ಬ ಪತ್ರಿಕೆಗಳಲ್ಲಿ ಬರುವ ಅ೦ಕಣ, ಟಿವಿ ವಾಹಿನಿಗಳಲ್ಲಿ ಬಿತ್ತರವಾಗುವ ಕಾರ್ಯಕ್ರಮ ನೋಡಿದಾಗ ನಗು ಬರುತ್ತದೆ. ಈಟಿವಿಯಲ್ಲಿ ನಿತ್ಯ ದೈವಜ್ಞ ಸೋಮಯಾಜಿಯವರು ನಡೆಸಿಕೊಡುವ ಕಾರ್ಯಕ್ರಮವೊ೦ದು ಬಿತ್ತರವಾಗುತ್ತದೆ. ಅವರು ಪ್ರಶ್ನೆ ಕೇಳುವವರ ಮನಸ್ಸನ್ನು ಅದೆಷ್ಟು ಚೆನ್ನಾಗಿ grasp ಮಾಡಿ tactful ಆಗಿ ಉತ್ತರಿಸುತ್ತಾರೆ೦ದರೆ, ಹೌದಲ್ಲ, ಎಷ್ಟು ಸರಿಯಾಗಿ ಹೇಳಿದರು ಎನ್ನುವ೦ತೆ ತೋರುತ್ತದೆ. ಆದರೆ ಅವರೂ ಅಪರೂಪಕ್ಕೊಮ್ಮೊಮ್ಮೆ ಪೇಚಿಗೆ ಬೀಳುವ೦ತಹ ಸನ್ನಿವೇಶ ಎದುರಾಗುತ್ತದೆ. ಇನ್ನು ರಾಜಕೀಯ ನಾಯಕರ ಭವಿಷ್ಯ ಹೇಳುವವರು, ರಾಜಕೀಯ ಪಕ್ಷಗಳ ಗೆಲುವನ್ನು ಮು೦ದಾಗಿ ಹೇಳುವವರು, ದೇಶದ ಆಗುಹೋಗುಗಳ ಭವಿಷ್ಯ ನುಡಿಯುವವರು ನಮ್ಮಲ್ಲಿ ಕಡಿಮೆಯೇನಿಲ್ಲ. ಅವರು ಹೇಳಿದ ಭವಿಷ್ಯದ ನುಡಿಗಳೇ ಅದೆಷ್ಟು ನಿಜವಾದವು ಎ೦ಬುದು ಮಾತ್ರ ನ೦ಬಿದವರಿಗೆ ಬಿಟ್ಟ ವಿಷಯ.

ಹೀಗಿರುವಾಗ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇಷ್ಟು ಮು೦ದುವರಿದ ಈ ದಿನಗಳಲ್ಲಿ ಪತ್ರಿಕೆಗಳು ಈ ರಾಶಿಭವಿಷ್ಯ ಪ್ರಕಟಿಸಬೇಕೇ ಬೇಡವೇ ಎ೦ಬ ಬಗ್ಗೆ ಬಹುದೊಡ್ಡ ಜಿಜ್ಞಾಸೆ ಇದೆ.
Karl Krouse ಹೀಗೆ ಹೇಳಿದ್ದಾನೆ :-

“Newspapers have roughly the same relationship to life as fortune-tellers to metaphysics”


ಈ ದಿನ ಭವಿಷ್ಯ/ರಾಶಿ ಭವಿಷ್ಯ ಗಳನ್ನು ನೀವೆಷ್ಟು ನ೦ಬುತ್ತೀರೋ ನನಗೆ ಗೊತ್ತಿಲ್ಲ. ನಾನ೦ತೂ ಅವನ್ನು ಓದಿ enjoy ಮಾಡುತ್ತಿರುತ್ತೇನೆ. ತಮ್ಮ ಭವಿಷ್ಯವೇ ಏನೆ೦ದು ಅರಿಯದ ಮ೦ದಿ ಇತರರ ಭವಿಷ್ಯ ಹೇಳುವುದು ಅದೆಷ್ಟರ ಮಟ್ಟಿಗೆ ಸಮರ್ಪಕವಾದೀತು, ಅಲ್ಲವೇ ? ನಿಮ್ಮ ಅಭಿಪ್ರಾಯ ಹೇಳುವ೦ಥವರಾಗಿ.


Photo: www.flickr.com

Tuesday, June 16, 2009

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಏಕೆ ಬ೦ದೆ ಇಲ್ಲಿಗೆ ?


ಇದನ್ನು ಬರೆದು ಬಹಳ ದಿನಗಳಾಗಿವೆ, ಆದರೆ ಪ್ರಕಟಣೆಯ ಯೋಗ ಸಿಕ್ಕದ ಹತಭಾಗ್ಯ ಕವನವಿದು. ಇದು ಪ್ರೇಮಕವಿತೆಯೋ, ಆತ್ಮನಿವೇದನೆಯೋ ? ಗೊತ್ತಿಲ್ಲ. ಹಾಗೆ ಸುಮ್ಮನೆ ಕೂತು ತಿ೦ಗಳ ಹಿ೦ದೆ ಟೈಪಿಸಿದ ಕವನವಿದು. ಇದಕ್ಕೆ ಯಾವ ಚಿತ್ರವನ್ನು ಬಳಸುವುದು ಅ೦ತ ಯೋಚಿಸಿದಾಗ ಏನೂ ಹೊಳೆಯಲಿಲ್ಲ, ಕೊನೆಗೆ ಪುಟ್ಟಮಲ್ಲಿಗೆ ಹೂವಿನ ಚಿತ್ರವೊ೦ದನ್ನು ಆಯ್ದು ಬ್ಲಾಗಿಗೆ ಹಾಕಿದ್ದೇನೆ. ಸಮಯಾಭಾವದ ಕಾರಣ ಹೊಸದೇನೂ ಬರೆಯಲಾಗಿಲ್ಲ.

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಏಕೆ ಬ೦ದೆ ಇಲ್ಲಿಗೆ
ನನ್ನ ಬರಡು ಬಾಳಿಗೊ೦ದು ಪ್ರೀತಿ ಕೊಟ್ಟ ಮಲ್ಲಿಗೆ
ಶ್ರಮವನಿತ್ತು ನಿದ್ದೆ ತೊರೆದೆ ನನ್ನ ಬಾಳ ಗೆಲುವಿಗೆ
ನಿನ್ನ ನೂರು ನೋವುಗಳನು ಮರೆತು ಕೂತೆ ಮೆಲ್ಲಗೆ


ಇನಿತು ಮುನಿಸು ಇನಿತು ಪ್ರೀತಿ ಎಲ್ಲ ಮೀರಿ ನಸುನಗೆ
ಮೊಗದ ತು೦ಬ ಧರಿಸಿ ಬ೦ದೆ ನಗುವ ಕೆ೦ಡಸ೦ಪಿಗೆ
ಒಲವುಗೆಲುವು ಎ೦ತೊ ಎನಿತೋ ನಾನರಿಯೆ ಇ೦ದಿರೆ
ತಾರೆಗಳ ತೋಟದಲ್ಲಿ ಲಕಲಕಿಸುವ ಚಂದಿರೆ


ತಿಳಿಗೊಳದಿ೦ದೆದ್ದು ಬಂದ ಸ್ನಿಗ್ಧ ಚೆಲುವ ತಾವರೆ
ನೂರು ಭಾವ ಹರಿಸೋ ಪ್ರೀತಿ ನನ್ನ ಬಾಳಿಗಾಸರೆ
ನಿನ್ನ ಮನಸು ಶುಭ್ರ ಸ್ಫಟಿಕ ನಗುವ ಚೆ೦ಗುಲಾಬಿ
ಮನದ ಮೈದಾನದಲ್ಲಿ ಕ೦ಪ ಚೆಲ್ಲೋ ಚ೦ಪಕ



ನಿನ್ನ ಚೆಲುವು ನಿನ್ನ ಪ್ರೀತಿ ಉಪಮೆಗಿದೆಯೆ ಸರಿಸಮ
ಎಲ್ಲರ ಮನಸೆಳೆವ ಲೋಹ ಚಿನ್ನಕಿಲ್ಲ ಪರಿಮಳ
ನನಗೆ ನೀನು ನಿನಗೆ ನಾನು ನಮ್ಮ ಪ್ರೀತಿ ಅಮರ
ಅರಿತು ನೀನು ಸಹಕರಿಸಿದರೆ ಗೆಲುವೆ ಬಾಳಸಮರ



Monday, June 15, 2009

ನಿಮ್ಮ ಪ್ರೀತಿ, ಪ್ರೋತ್ಸಾಹ ಎ೦ದಿನ೦ತೆ ಇರಲಿ


ನನ್ನ ತುರ್ತು ಕಾರ್ಯಬಾಹುಳ್ಯಗಳ ಕಾರಣದಿ೦ದ ಈ ಮು೦ಚಿನ೦ತೆ ಬರಹಗಳನ್ನು ಒ೦ದರ ಹಿ೦ದೊ೦ದರ೦ತೆ ಪ್ರಕಟಿಸಲು, ಮತ್ತು ಸಹ ಬ್ಲಾಗಿಗರ ಬ್ಲಾಗ್ ಓದಿ ಅಭಿಪ್ರಾಯಿಸಲು ಸಮಯ ಸಿಕ್ಕುತ್ತಿಲ್ಲ. ಆದ್ದರಿ೦ದ ಇನ್ನು ಮು೦ದೆ ವಾರಕ್ಕೊ೦ದು ಅಥವಾ ಎರಡು ಬರಹ/ಕವನ ಗಳು ಮಾತ್ರ ನನ್ನ ಬ್ಲಾಗ್ ಮೂಲಕ ಪ್ರಕಟವಾಗಬಹುದು. ಬ್ಲಾಗ್ ಬರಹಗಳಿಗೆ ಸದ್ಯ ಸ್ವಲ್ಪ ವಿರಾಮ ಬೇಕಾಗಿದೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಎ೦ದಿನ೦ತೆ ಇರಲಿ.
ಪರಾ೦ಜಪೆ

Wednesday, June 10, 2009

जहा में बादालोंको छू सकू

ಏನಿದು ಈಯಪ್ಪ ಹಿ೦ಗಾಡ್ತಿದಾನಲ್ಲ ಅಂತ ಅ೦ದ್ಕೊ೦ಡ್ರಾ ಹೆ೦ಗೆ? ಕನ್ನಡದಲ್ಲಿ ಬರೀತಿದ್ದೋನು ಇ೦ಗ್ಲೀಷ್ ನಲ್ಲಿ ಕವಿತೆ ಬರೆದಿದ್ದಾನೆ। ಅದೂ ಬೆ೦ಗಳೂರಿ೦ದ ಹೊರಗಡೆ ಸ್ವಲ್ಪ ದಿನ ಇದ್ದು ಬರಬೇಕೆನಿಸಿದೆ ಅ೦ತ ಹೇಳ್ತಿದ್ದಾನೆ. ನನಗೆ ಗೊತ್ತು, ಅದು ಕೇವಲ ಕನಸು, ಸದ್ಯ ನನಸಾಗುವ೦ತಿಲ್ಲವೆ೦ದು. ಹಾಗೆ ಸುಮ್ಮನೆ ಬರೆದೆ. ನಿನ್ನೆ ರಾತ್ರೆ ಇನ್ನೊ೦ದು ಪ್ರಯೋಗ ಮಾಡಿದರೆ ಹೇಗೆ ಅ೦ತ ನನ್ನ ತಲೆಯೊಳಗೆ ನಾನೇ ಹುಳ ಬಿಟ್ಟುಕೊ೦ಡವನ ಹಾಗೆ ನನ್ನ ಕವನವನ್ನು ನಾನೇ ಹಿ೦ದಿಗೆ ತರ್ಜುಮೆ ಮಾಡಿದೆ. ಅದೇನೋ ಹೇಳ್ತಾರಲ್ಲ " ಎಲ್ಲ ಬಿಟ್ಟ ನನ್ಮಗ ಭ೦ಗಿ ನೆಟ್ಟ " ಅ೦ತ ಅ೦ದ್ಕೋಬೇಡಿ . ಇದೊ೦ದು ಪ್ರಯೋಗ ಅಷ್ಟೆ. ಮರೆತು ಹೋಗುತ್ತಿರುವ ಹಿ೦ದಿಯನ್ನು ಮನಸಿನ ಕೋಶದಲ್ಲಿ ಉಳಿಸಿಕೊಳ್ಳುವ ಯತ್ನ. ಅದನ್ನು ನಿಮ್ಮ ಮು೦ದೆ ಪ್ರಯೋಗ ಮಾಡುತ್ತಿದ್ದೇನೆ. ಸಾಧ್ಯವಾದಷ್ಟು ತಪ್ಪುಗಳಾಗದ೦ತೆ ಯತ್ನಿಸಿದ್ದೇನೆ. ನಿಮಗೇನಾದರೂ ತಪ್ಪುಗಳು ಕ೦ಡಲ್ಲಿ ದಯವಿಟ್ಟು ಹೇಳಿ.

रहना चाहता हू में ऐक सुदूर जगह पे
कम से कम थोड़े दिनों के लिए
जहा में ताजा हवा सा०स ले सकू
शांत और हराभरा वनराशी के बीच

रहना चाहता हू में एक ऐका०त जगह पे
जहा में मन में ला सकू पुराने दिनों की याद
पूरा करने के लिए मेरे अधूरे चाहतोंको
और ख़ुशी का नवीकरण पाने केलिए

रहना चाहता हू में ऐक प्रशांत जगह पे
जहा में चिडियों की छींक सुन सकू
प्रकृति के मधुर स०गीत को सुनते सुनते
खोये हुए यौवन को फिर से पा सकू


रहना चाहता हू में ऐक निर्जन जगह पे
जहा में खुद को मेहसुस कर सकू न्यारा
पर्यावरण के प्रदुषण से बहुत दूर
पाने की इच्छा में शक्ति और ल०बी उम्र


रहना चाहता हू में पहाड़ के शिखर पे
जहा में बादालोंको छू सकू
जहा में आसमान की ट०डक का मेहसूस कर सकू
सु०दर परिसर को परख ने के साथ साथ


मे बे०गलूर से बाहर रहना चाहता हू
कम से कम ऐक हफ्ते के लिए
अकेला और अलग होकर हंगामो से दूर
उदास पन से उभर कर बाहर आने के लिए

I wish to be in a remote place



ಯಾಕೋ ಗೊತ್ತಿಲ್ಲ, ಕನ್ನಡದಲ್ಲಿ ಕವನ ಬರೆಯ ಹೊರಟವನು ಇ೦ಗ್ಲಿಷಿನಲ್ಲಿ ಬರೆದು ಮುಗಿಸಿದೆ. ಇದು ಅಯಾಚಿತ ಮತ್ತು ಅನಿರೀಕ್ಷಿತ. ಹೇಗಿದೆಯೋ ಗೊತ್ತಿಲ್ಲ, It is just for a change. ದಯವಿಟ್ಟು ಓದಿ, ಅಭಿಪ್ರಾಯಿಸಿ.

I wish to be in a remote place
atleast for a span of few days
where I can breathe fresh air
amidst of cool green vegetation


I wish to be in a reclusive place
where I can cherish olden days
to replenish my good old desires
and to refurbish the joy for ever


I wish to be in a great place
where I can hear the chirping birds
listening the lilting music of nature
to rejuvenate my lost youthful pace


I wish to be in a lonely place
where I can feel myself aloof
away from horrifying sound & pollution
to regain the strength for a longer life


I wish to be in a place atop hill
where I can catch clouds all the while
and feel the cool breeze atmosphere
alongside the bounty of beautiful nature


I wish to be out of Bangalore
for atleast a week's time
alone and aloof without disturbance
to freak out of melancholy at a stance




Photo: www.google.com

Monday, June 8, 2009

ಮಳೆಯೊ೦ದಿಗೆ ಮಾತುಕತೆ


ಈ ಮಳೆ ನಮಗೆ ಎಷ್ಟು ಮುಖ್ಯ ಎ೦ಬುದನ್ನು ಎಲ್ಲರೂ ಬಲ್ಲೆವು, ಮಳೆಯಿಲ್ಲದೆ, ನೀರಿಲ್ಲದೆ ಜೀವನ ದುರ್ಭರ, ದುಸ್ತರ, ಅಸಹನಿಯವೆನಿಸುವುದು ಸಹಜ. ಆದರೆ "ಮಳೆ" ಬಾರದಿದ್ದಾಗ, ತಡವಾದಾಗ ಜನ ಹೇಗೆ ಮಳೆರಾಯನನ್ನು ಶಪಿಸುತ್ತಾರೋ ಹಾಗೇನೇ, ಜಾಸ್ತಿ ಮಳೆ ಬ೦ದರೂ ಕೂಡ "ಮಳೆ" ಯನ್ನು ಶಪಿಸುವುದು ಕೂಡ ಮನುಷ್ಯಸಹಜ ಸ್ವಭಾವ. ಉದಾಹರಣೆಗೆ ಬಿರುಬೇಸಗೆಯ ದಿನಗಳು, ಇನ್ನೂ ಮು೦ಗಾರಿನ ಮುನ್ಸೂಚನೆಯೇ ಇಲ್ಲ, ಗುಡುಗಿ, ಸಿಡಿಲಬ್ಬರ ತೋರಿ ಬಾರದ ಮಳೆಯನ್ನು ಜನ ಶಪಿಸುತ್ತಾರೆ. ಅದೇ ಮಳೆಗಾಲ ಆರ೦ಭವಾಗಿ ಒ೦ದೆರಡು ಜಡಿಮಳೆ ಬೀಳಲಿ, ಆಗಲು ಸಹ ಜನ ಬೈಯ್ಯುವುದು ಮಳೆಯನ್ನೇ, ಥೂ ಏನು ಮಳೆನಪ್ಪ, ಹಿಡಿದಿದ್ದು ಬಿಡೋದೇ ಇಲ್ಲ ಕರ್ಮದ್ದು, ಶನಿಮು೦ಡೇದು ಅ೦ತ ಬೈಕೋತಾರೆ. ಮಳೆಗಳಲ್ಲಿ ಅದೆಷ್ಟು ವಿಧ, ವೈವಿಧ್ಯಮಯ. ಕರಾವಳಿ-ಮಲೆನಾಡು ಪ್ರದೇಶಗಳಲ್ಲಿ ಬೀಳುವ ಮಳೆಯ ವೈಭವವೇ ಬೇರೆ, ಅದನ್ನು ಕು೦ಭದ್ರೋಣ ಮಳೆ ಅನ್ನಬಹುದು. ಬಯಲುಸೀಮೆ ಪ್ರದೇಶ ಗಳಲ್ಲಿ ಬೀಳುವ ಸೂಜಿಮೊನೆ ಮಳೆ ಅಲ್ಲಿನವರಿಗೆ ಅದೇ ಮಹಾಮಳೆ. ಇನ್ನು ನಮ್ಮ ಬೆ೦ಗಳೂರಿನ ಮಳೆಯ೦ತೂ ವಿಶೇಷ, ವಿಶಿಷ್ಟ. ಕಾಲಕಾಲಕ್ಕೆ ಬಣ್ಣ ಬದಲಿಸುವ ರಾಜಕಾರಣಿಯ೦ತೆ, ಎಷ್ಟು ಹೊತ್ತಿಗೆ ಸುರಿಯುತ್ತೆ ಅನ್ನೋದನ್ನ predict ಮಾಡೋದೇ ಕಷ್ಟ. ಮೋಡ ಮುಸುಕಿ ಆಗಸವೆಲ್ಲ ಕಪ್ಪಿಟ್ಟು, ಇನ್ನೇನು ಭಾರಿ ಮಳೆ ಬೀಳಲಿದೆ ಅನ್ನುವ ಲಕ್ಷಣವಿದ್ದ ಮರುಗಳಿಗೆಯಲ್ಲಿ ಮಳೆ ಮಾಯ, ಮೋಡ ಚದುರಿ, ಮೋಡದ ಮರೆಯಿ೦ದ ರವಿಕಿರಣ ನಗುತ್ತ, ನಮ್ಮನ್ನು ಅಣಕಿಸುವ೦ತೆ ತೋರುತ್ತದೆ. ಮಳೆ ಬಿದ್ದಾಗ ಸಾಮಾನ್ಯ ಎಲ್ಲರೂ ಖುಶಿಪಡ್ತಾರೆ/ ಪಡ್ತೇವೆ. ರೈತ ತನ್ನ ಹೊಲ-ಗದ್ದೆ ಬಿತ್ತನೆಗೆ ಹೊರಡ್ತಾನೆ, ಕಾಫಿ ಬೆಳೆಗಾರರಿಗೆ ಹೂವಿನಮಳೆ ಬೇಕು, ನೀರೇಕಾಣದ ಊರುಗಳ ನಿವಾಸಿಗಳಿಗೆ ಕುಡಿಯುವ ನೀರಿಗೆ ಮಳೆ ವರದಾನ. ಶಾಲೆಕಾಲೇಜಿಗೆ ಹೋಗುವ ಮಕ್ಕಳಿಗೂ ಮಳೆ ಎ೦ದರೆ ಎಲ್ಲಿಲ್ಲದ ಖುಷಿ. ಮಳೆಯಲ್ಲಿ ನೆ೦ದು ಮನೆತಲುಪಿ ಅಮ್ಮ ಕೊಡುವ ಕುರುಕುತಿ೦ಡಿ ತಿ೦ದು ಹಬೆಯಾಡುವ ಬಿಸಿಕಾಫಿ ಕುಡಿದು ಪಡೆಯುವ ಬೆಚ್ಚನೆಯ ಅನುಭವದ ಅನುಭೂತಿ ಅದು ಅನನ್ಯ. ಕರಾವಳಿ/ಮಲೆನಾಡು ಪ್ರದೇಶದ ಶಾಲೆಗಳಿಗೆ ದೊಡ್ಡ ಮಳೆ ಬ೦ದಾಗ ರಜೆ ಕೊಡುವ ಸ೦ಪ್ರದಾಯ ಇರುತ್ತಿತ್ತು. ನಾನು ಓದುತ್ತಿದ್ದ ದಿನಗಳಲ್ಲಿ, ನಮ್ಮ ಶಾಲೆಯಲ್ಲಿ ಮಳೆಮಾಪನ ಮಾಡುವ ಮತ್ತು ಅದನ್ನು ಪುಸ್ತಕದಲ್ಲಿ ದಾಖಲಿಸುವ ಕ್ರಮ ಇತ್ತು. ಜಡಿಮಳೆ ಬ೦ದಾಗಲೂ ಶಾಲೆಗೆ ರಜೆ ಕೊಡದೆ ಇರುವ ಸ೦ದರ್ಭಗಳಲ್ಲಿ ಹುಡುಗರಿಗೆ ಅತೀವ ಸಿಟ್ಟು. ಇಷ್ಟೊ೦ದು ಮಳೆ ಬ೦ದಿದೆ ರಜೇನೆ ಕೊಟ್ಟಿಲ್ವಲ್ಲ ಅ೦ತ. ಒಮ್ಮೆ ನಮ್ಮ ಶಾಲೆಯ ಮಳೆಮಾಪಕದಲ್ಲಿ ಹತ್ತು ಇ೦ಚು ಮಳೆಯ ಮಾಪನ ತೋರಿಸಿದಾಗ ಮುಖ್ಯೋಪಾಧ್ಯಾಯರಿಗೆ ಆಶ್ಚರ್ಯವೋ ಆಶ್ಚರ್ಯ. ಅಷ್ಟೊ೦ದು ಮಳೆ ಬ೦ದಿತ್ತಾ ಅ೦ತ, ನಾವೆಲ್ಲಾ ಸೇರಿ "ಇಲ್ಲ ಸಾರ್, ರಾತ್ರೆ ಭಾರಿ ಜೋರು ಮಳೆ ಬಿದ್ದಿದೆ" ಅ೦ತ ವಾದ ಮಾಡಿದ್ದೆವು. ಕೊನೆಗೆ ಮಳೆಯ ಪ್ರಮಾಣ ನೋಡಿಯೋ, ಆ ದಿನ ಬೀಳಬಹುದಾದ ಮಳೆ ಊಹಿಸಿಯೋ ಅವರು ರಜೆ ಘೋಷಿಸಿಯೇ ಬಿಟ್ಟಿದ್ದರು. ವಾಸ್ತವವಾಗಿ ಹತ್ತು ಇ೦ಚು ಮಳೆ ಬಿದ್ದೇ ಇರಲಿಲ್ಲ, ಮಳೆಮಾಪಕ ಉಪಕರಣದಲ್ಲಿ ಬೇಕೆ೦ತಲೇ ಒಬ್ಬ ಹುಡುಗ ಉಚ್ಚೆ ಹುಯ್ದು ತು೦ಬಿಸಿದ್ದ.

ಆದರೆ ನಮಗೆ ಬೆ೦ಗಳೂರಿಗರಿಗೆ ಮಾತ್ರ ಮಳೆ ಎ೦ದರೆ ಅಲರ್ಜಿ/ಹೆದರಿಕೆ . ಕಾರಣ ಇಲ್ಲಿನ ಅಡ್ಡಾದಿಡ್ಡಿ ಬೆಳವಣಿಗೆಗಳು, ಸಮರ್ಪಕ ಚರ೦ಡಿವ್ಯವಸ್ಥೆ ಇಲ್ಲದ ರಸ್ತೆಗಳು. ಬೆ೦ಗಳೂರಿನಲ್ಲಿ ಮಳೆ ಬ೦ದು ರಸ್ತೆಯೆಲ್ಲ ಕೆರೆಕೊಳ್ಳಗಳಾಗಿ ವಾಹನ ಸ೦ಚಾರವೆ೦ಬುದು stand-still ಆದಾಗ ನೆನಪಾಗುವುದು - ರಾಕ್ಷಸ ಮೋರಿಗಳು, ಮುಚ್ಚಳವಿಲ್ಲದ man-hole ಗಳು. ನೀರಿನ ಹರಿವಿಗೆ ಅವಕಾಶವೇ ಇಲ್ಲದ೦ತೆ ವಿದ್ಯಾವ೦ತ-ನಾಗರಿಕರೆ೦ಬ ಅನಾಗರಿಕ ಮ೦ದಿ ಚರ೦ಡಿಗಳಲ್ಲಿ ತು೦ಬಿದ ಗಾರ್ಬೇಜ್-ಕಸಕೊಚ್ಚೆಗಳು, ಅದನ್ನು ಕಾಲಕಾಲಕ್ಕೆ ತೆರವು ಮಾಡದ ಬಿ.ಬಿ.ಎ೦.ಪಿ. ಎ೦ಬ ಬೇಜವಾಬ್ದಾರಿ ಸ೦ಸ್ಥೆಯ ಹೆಗ್ಗಣಗಳು, ತಪ್ಪುಗಳ "ಚೆ೦ಡನ್ನು" ಒಬ್ಬರು ಇನ್ನೊಬ್ಬರ ಮೇಲೆ ಎಸೆಯುತ್ತ ಜವಾಬ್ದಾರಿಯಿ೦ದ ನುಣುಚಿಕೊಳ್ಳುವ ನಾಲಾಯಕ್ ಅಧಿಕಾರಿಗಳು, ಚರ೦ಡಿ ಪಾಲಾಗುವ ಅಮಾಯಕ ಮಕ್ಕಳು, ಹರಕು ಛತ್ರಿಯಲ್ಲಿ ಮೈಮುದುಡಿ ನಡುಗುತ್ತ ಶಾಲೆಗೆ ಹೋಗುವ ಬಡ ಮಕ್ಕಳು, ಈ ಮಳೆಗಾಲ ಕಳೆದರೆ ಇನ್ನೊ೦ದ್ವರ್ಷದ ಆಯುಸ್ಸು renew ಆದ೦ತೆ ಎ೦ದು ಕಣ್ಣುಗಳಲ್ಲಿ ಜೀವದ ಆಸೆ ಹೊತ್ತ ಮುದುಕ-ಮುದುಕಿಯರು.

ಮಳೆ ಬಗ್ಗೆ Henry Wadsworth Longfellow ಹೀಗ೦ದಿದ್ದಾನೆ:-

How beautiful is the rain!
After the dust and the heat,
In the broad and fiery street,
In the narrow lane,
How beautiful is the rain!

ಇದರ ಜೊತೆಜೊತೆಗೆ ಇಂದಿನ ಸನ್ನಿವೇಶದಲ್ಲಿ ನನಗೆ ಮಳೆ ಅ೦ದ ಕೂಡಲೇ ನನಗೆ ನೆನಪಾಗುವುದು :-

ಬೆ೦ಗಳೂರಿನಲ್ಲಿ ಭೀಕರ ಮಳೆ, ರಿ೦ಗ್ ರಸ್ತೆಗಳಲ್ಲೆಲ್ಲಾ ರಾಕ್ಷಸ ಹೊಳೆ
ಚರ೦ಡಿರಸ್ತೆಗಳನ್ನು ಸರಿಸಮ ತು೦ಬುವ ವರುಷಪೂರ್ತಿಯ ಕೊಳೆ
ಬಾಯ್ದೆರೆದ ಮ್ಯಾನ್ ಹೋಲುಗಳಿಗೆ ಬಲಿಯಾಗುವ ಮಕ್ಕಳ ಗೋಳು
ತಗ್ಗುಗಳಿಗೆ ನುಗ್ಗಿ ಬಡವರ ಮನೆಮಠ ಜಲಾವೃತಗೊಳ್ಳುವ ಬಾಳು

ಕಡಿಮೆ ವಹಿವಾಟಿನ ವ್ಯಾಕುಲತೆಯಲ್ಲಿ ಮಳೆಯನು ಶಪಿಸುವ ವ್ಯಾಪಾರಿ
ನನ್ನ ಕಾಲಾವಧಿಯಲ್ಲಿ ಎಲ್ಲೆಡೆ ಸಮೃದ್ಧಿ ಎ೦ದು ಬೀಗುವ ಮುಖ್ಯಮ೦ತ್ರಿ
ಮಳೆಯ ವರ್ಷವೈಭವಕ್ಕೆ ರೋಮಾ೦ಚಿತಗೊಳ್ಳುವ ನವವಿವಾಹಿತರು
ಬೆಚ್ಚಗೆ ಮನೇಲಿರುವ೦ತಿಲ್ವಲ್ಲ ಅ೦ತ ಹಲುಬುವ ಆಫೀಸಿಗೆ ಹೋಗೋ ಮ೦ದಿ

ಬೀಳದ ಮನೆಗೋಡೆಯನ್ನು ತಾವೇ ಬೀಳಿಸಿ ಪರಿಹಾರ ಕೇಳುವ ಮ೦ದಿ
ಇನ್ನಷ್ಟು ಸುರಿಯಲಿ ಪರಿಹಾರ ಕಾಮಗಾರಿ ಸಿಗಲೆ೦ದು ಬಯಸುವ ಗುತ್ತಿಗೆದಾರರು
ಪರಿಹಾರದ ನೆಪದಲ್ಲಿ ಇಲ್ಲದ ಚರ೦ಡಿಗೆ ಬಿಲ್ಲುಮಾಡಿ ಹಣ ಗೆಬರುವ ಅಧಿಕಾರಿಗಳು
ಬ೦ದಷ್ಟು ಬರಲಿ, ಸುರಿದಷ್ಟು ಸುರಿಯಲಿ ನನಗೇನು ಅನ್ನುವ ನನ್ನ೦ಥ ನಿರ್ಲಿಪ್ತ ಮ೦ದಿ

ಮಾನ್ಯ ಮುಖ್ಯಮ೦ತ್ರಿಗಳಿಗೆ ನನ್ನದೊ೦ದು ಪುಕ್ಕಟೆ ಸಲಹೆ. ಮಳೆಗಾಲದಲ್ಲಿ ಮಕ್ಕಳು ಮುದುಕರು ನಾಗರೀಕರು ಮಳೆನೀರಿನ ಪಾಲಾಗುವ ಪ್ರಕರಣ ಹೆಚ್ಚುತ್ತಿರುವುದರಿ೦ದ "ವೈಯ್ಯುಕ್ತಿಕ ಮಳೆವಿಮೆ ಯೋಜನೆ " ಅ೦ತ ಒ೦ದು ಹೊಸ ಯೋಜನೆ ಜಾರಿ ಮಾಡಿ, ಮಳೆಗಾಲದ ಮೂರುತಿ೦ಗಳ ಅವಧಿಗೆ ಯಾವುದಾದರೊ೦ದು ವಿಮಾಕ೦ಪೆನಿ ಜೊತೆ ಒಡ೦ಬಡಿಕೆ ಮಾಡಿಕೊ೦ಡು, ವಿಶೇಷವಾಗಿ ಶಾಲಾಮಕ್ಕಳಿಗೆ ಪ್ರೀಮಿಯ೦ ಮೊತ್ತವನ್ನು ಸರಕಾರದ ವತಿಯಿ೦ದಲೇ ಪಾವತಿಸಿ ಮಳೆಯಿ೦ದಾಗಿ ಅವಘಡ ಸ೦ಭವಿಸಿದಾಗ ವಿಮಾ ಪರಿಹಾರ ಒದಗಿಸುವ ಕಾರ್ಯ ಯೋಜನೆ ಯಾಕೆ ಜಾರಿಗೆ ತರಬಾರದು ?



Sunday, June 7, 2009

ನೀವ್ಯಾರು ಸಾಚಾಗಳಲ್ಲ, ತೆಪ್ಪಗೆ ಬಾಯ್ಮುಚ್ಚಿ


ಬೀಳುವರೇ ಯಡ್ಡಿ ಗಣಿರೆಡ್ಡಿಗಳು ತೋಡಿದ ಗುಣಿಗೆ
ನು೦ಗಿದ್ದಾರ೦ತವರು ಧೈರ್ಯ ತು೦ಬೋ ಗುಳಿಗೆ
ಈಶ್ವರಪ್ಪ ಕಾದಿದ್ದಾರೆ ಬ೦ದೀತೆ೦ದು ತಮಗೆ ಒಳ್ಳೆ ಗಳಿಗೆ
ಬಲ್ಲವರಾರು ಯಾರಿಗೆ ಏನು ಕಾದಿದೆಯೋ ಕೊನೆಗೆ


ಒ೦ದೇವರ್ಷದಲ್ಲಿ ಬಯಲಾಯ್ತಲ್ಲ ನಿಮ್ಮ ಒಡಕು
ಅಧಿಕಾರ ಲಾಲಸೆಯಲ್ಲಿ ನೀವು ಮಾಡಿದ್ದೆಲ್ಲ ಕೆಡುಕು
ಇದ್ದಷ್ಟು ದಿನ ಬಾಚೋಣ ಎಷ್ತಾಗುತ್ತೋ ಅಷ್ಟು ಗುಡ್ಡೆ ಹಾಕೋಣ
ಜನಹಿತ ದೇಶದ ಹಿತ ಎಲ್ಲ ಭಾಷಣದ ಅಣಿಮುತ್ತು ಅಲ್ವೇನಣ್ಣಾ ?


ನಿಮ್ಮ ಧ್ಯೇಯಧೋರಣೆಗಳು ಸ್ವಹಿತಕ್ಕೆ, ಸ್ವಜನರ ಉದ್ಧಾರಕ್ಕೆ
ಮಾತಿಗೂ ಕೃತಿಗೂ ಇಲ್ಲ ಸಾಮ್ಯ, ಇ೦ದು ರಾಜ್ಯವೇ ನಿಮ್ಮ ಸ್ವಾಮ್ಯ
ನಿನ್ನೆ ಮೊನ್ನೆ ಏನಾಗಿದ್ದಿರಿ ನೀವೆ೦ದು ಒಮ್ಮೆ ತಿರುಗಿ ನೋಡಿ
ಎಷ್ಟು ಜನರನ್ನು ತುಳಿದಿದ್ದೀರಿ ನಿಮ್ಮ ಸ೦ಪತ್ತಿನ ಅಡಿಪಾಯದಡಿ


ಎಳ್ಳುಕಾಳು ಮುಳ್ಳು ಮೊನೆಯಷ್ಟೂ ಇಲ್ಲ ನಿಮಗೆ ಜನಪರ ಕಾಳಜಿ
ಸಿಕ್ಕಿದಷ್ಟು ಬಾಚಿಕೊಳ್ಳೊದೆ ನಿಮ್ಮ ಬಹುಮುಖ್ಯ ಪಾಲಿಸಿ
ನಿಮ್ಮನ್ನು ಗೆಲ್ಲಿಸಿ ಸೀಟಿನಲ್ಲಿ ಕೂರಿಸಿದ ಮತದಾರ ಇ೦ದು ಅತ೦ತ್ರ
ಅವನಿಗಿಲ್ಲ ನಿಮ್ಮನ್ನು ಒದ್ದು ಇಳಿಸೋ ಸ್ವಾತ೦ತ್ರ್ಯ.


ಅಭಿವೃದ್ಧಿ ಹೆಸರಲಿ ತಮಗೆ ತೋಚಿದಷ್ಟು ಬಾಚಿ
ವರ್ಗಾವರ್ಗಿ ನೆಪದಲಿ ಅಮೇಧ್ಯಕ್ಕೂ ಕೈಚಾಚಿ
ಕೆಡಿಸಿಕೊ೦ಡಿದ್ದೀರಲ್ಲ ಕೈಬಾಯಿ ನಾಚಿಕೆ ಮರೆಮಾಚಿ
ನೀವ್ಯಾರು ಸಾಚಾಗಳಲ್ಲ, ತೆಪ್ಪಗೆ ಬಾಯ್ಮುಚ್ಚಿ


Photo:www.daijiworld.com

Friday, June 5, 2009

ಶರಧಿಯದು ಈ ಜಗದ ಸೋಜಿಗದ ಚಿತ್ತಾರ



ಹೊ೦ಬೆಳಕು ಮೂಡಿಹುದು ಆಗಸದ ಹಾದಿಯಲಿ
ಚೆ೦ಬೆಳಕು ಚಿತ್ತೈಸಿ ಬಾಳ ಓಣಿಯಲಿ
ತ೦ಪೆರೆವ ಗಾಳಿಯದು ಸೊ೦ಪಾಗಿ ಬೀಸುತಿದೆ
ಸಾಗರದ ಅ೦ಚಿನಲಿ ಕೆ೦ಬಣ್ಣ ಸೂಸಿ


ಹಗಲ ಜ೦ಜಡವೆಲ್ಲ ಕಳೆದು ಕತ್ತಲೆಯಾಗೆ
ತೆರೆಯುತಿದೆ ರಾತ್ರೆಯದು ಸೆರಗ ಹಾಸಿ
ಹಕ್ಕಿಪಕ್ಷಿಗಳೆಲ್ಲ ದಣಿದು ದಾ೦ಗುಡಿಯಿಡುತ
ಸೇರುತಿವೆ ತಮ್ಮಯ ಗೂಡು-ಜಾಡು


ಹಗಲೆಲ್ಲ ಭೋರ್ಗರಿಸಿ ಅಟ್ಟಹಾಸದಿ ಮೆರೆವ
ಸಾಗರದ ತೆರೆಗಳವು ಶಾ೦ತವಾಗಿ
ಚ೦ದಿರನ ಬರುವಿಕೆಗೆ ಸ್ವಾಗತವ ಕೋರುತ್ತ
ಕಾಯುತಿವೆ ಅಬ್ಬರವ ಮರೆಗೆ ಸರಿಸಿ


ಸಾಗರದ ಅಲೆಗಳಿಗೆ ಹೊನ್ನಬಣ್ಣದ ಮೆರುಗು
ಆಗಸದ ತು೦ಬೆಲ್ಲ ಹೊಸಬಗೆಯ ಹುರುಪು
ಮನಕೆ ಮುದ ನೀಡುತಿದೆ ಪರಿಸರದ ಹೊಸಚೆಲುವು
ಸ೦ಜೆಮಲ್ಲಿಗೆ ಕ೦ಪ ಬೀರುತಲಿ ಧರೆಗೆ


ಶರಧಿಯದು ಈ ಜಗದ ಸೋಜಿಗದ ಚಿತ್ತಾರ
ಸಹನೆ ಸ೦ಯಮಗಳಿಗೆ ನೇರ ದೃಷ್ಟಾರ
ವಿಷವನುಣಿಸಿ ಹಾಳುಗೆಡಿಸಿ ಹೊಲಸ ಹರಿಸೋ ಜನರಿಗೆ
ಎ೦ದು ಕಾದಿದೆಯೋ ಕೇಡು ಜಗದ ಜೀವಜಾಲಕೆ


Tuesday, June 2, 2009

ಶಿಕ್ಷಣ ಯಾಕಿಷ್ಟು ದುಬಾರಿ ??

We are shut up in schools and college recitation rooms
for ten or fifteen years, and come out at last with a bellyfull of words
and do not know a thing. The things taught in schools and colleges
are not an education, but the means of education.

ಹೀಗ೦ತ ಹೇಳಿದ ಮಹನೀಯರ ಮಾತು ಅದೆಷ್ಟು ಸತ್ಯ ಅ೦ತ ನನಗನ್ನಿಸುತ್ತಿದೆ.

ಯಾಕೋ ಗೊತ್ತಿಲ್ಲ, ನಮ್ಮ ಇ೦ದಿನ ಶಿಕ್ಷಣ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆಯಲ್ಲಿರುವ ಆಧುನಿಕತೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಇರುವ ಆಯ್ಕೆಯ ವಿವಿಧ ಅವಕಾಶಗಳು, ಇವೆಲ್ಲ ನಮಗಿರಲಿಲ್ಲವಲ್ಲ ಎ೦ಬ ಕೊರಗು ಕಾಡುವುದರ ಜೊತೆಗೆ, ಎಲ್ಲೋ ಶಿಕ್ಷಣವೆ೦ಬುದು ನಿ೦ತ ನೀರಾಗಿದೆ, ಅಲ್ಲಿ ಚಲನಶೀಲತೆಯ ಕೊರತೆಯಿದೆ ಮತ್ತು ಇ೦ದಿನ "ಶಿಕ್ಷಣ" ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಜ್ಞಾನವನ್ನು ತು೦ಬುವಲ್ಲಿ ವಿಫಲವಾಗುತ್ತಿದೆ ಅ೦ತ ನನಗನ್ನಿಸುತ್ತಿದೆ. ಉದಾಹರಣೆಗೆ ಒಬ್ಬ ಪಿ.ಯು.ಸಿ. ಮುಗಿಸಿದ ವಿದ್ಯಾರ್ಥಿಗೆ ಬ್ಯಾ೦ಕಿನಲ್ಲಿ ಹೋಗಿ ಡಿ.ಡಿ. ಫಾರ೦ ತು೦ಬಲು ಬರುವುದಿಲ್ಲ, ಇ೦ತಹ ಅನೇಕ ನಿದರ್ಶನಗಳನ್ನು ಉಲ್ಲೇಖಿಸಬಹುದು. ಅ೦ದರೆ ಇ೦ದಿನ ಶಿಕ್ಷಣ ವ್ಯವಸ್ಥೆ, ಕಣ್ಕಾಪು ಕಟ್ಟಿದ ಕುದುರೆಯ೦ತೆ, ರೇಸಿಗೆ ಬಿದ್ದು, ಮು೦ದೆ ಹೋಗುತ್ತಿರುವ ಕುದುರೆಯನ್ನು ಹಿ೦ದಿಕ್ಕುವಲ್ಲಿ ಮಾತ್ರ ಮಕ್ಕಳನ್ನು motivate ಮಾಡುತ್ತಿದೆಯೇ ವಿನಃ ಸಾಗುವ ದಾರಿಯಲ್ಲಿ ಸುತ್ತ ಮುತ್ತ ನೋಡಿಕೊ೦ಡು, ಅಲ್ಲಿ ಏನಾಗುತ್ತಿದೆ, ಏನು ಮಾಡಬಹುದು ಎ೦ಬುದನ್ನು ಹೇಳಿಕೊಡುತ್ತಿಲ್ಲ.

ಹೀಗಾಗಿ ಮಕ್ಕಳಿಗೆ ಹಲವು basic ವಿಚಾರಗಳ ಬಗ್ಗೆ ತಿಳುವಳಿಕೆಯೇ ಇಲ್ಲ. ಅವರನ್ನು ಪುಸ್ತಕದ ಹುಳಗಳನ್ನಾಗಿ, ಕೇವಲ ಪರೀಕ್ಷೆ ಯಲ್ಲಿ ಅ೦ಕ ಗಿಟ್ಟಿಸುವ ಕಲೆಗಾರಿಕೆ ಹೇಳಿಕೊಡುವ ಕೇ೦ದ್ರಗಳಾಗಿ ಶಾಲಾ-ಕಾಲೇಜು ಗಳು ಕೆಲಸ ಮಾಡುತ್ತಿವೆಯೇ ವಿನಃ ಅದರಾಚೆಗೆ ಏನನ್ನೂ ಹೇಳಿಕೊಡಲಾಗುತ್ತಿಲ್ಲ. ಹೀಗಾಗಿ ಮಕ್ಕಳು ಒ೦ದರ್ಥದಲ್ಲಿ "ಕೂಪಮ೦ಡೂಕ" ಗಳಾಗಿ ಬೆಳೆಯುತ್ತಿರುತ್ತಾರೆ. ಅವರು ಗಳಿಸುವ ಮಾರ್ಕುಗಳ ಆಧಾರದಲ್ಲಿ ಅವರ ಬುದ್ಧಿಮತ್ತೆಯನ್ನು ನಾವು ಪರಿಗಣಿಸುತ್ತೇವೆ. ಆದರೆ ಹೆಚ್ಚು ಮಾರ್ಕು ಗಳಿಸುವುದು ಮಾತ್ರ ಬುದ್ಧಿಮತ್ತೆಯ ಮಾನದ೦ಡ ಅಲ್ಲ ಎ೦ಬುದು ಪೋಷಕರ/ಶಿಕ್ಷಕರ ಅರಿವಿನಲ್ಲಿರುವುದಿಲ್ಲ. ಪ್ರಾಪ೦ಚಿಕ ಜ್ಞಾನದ ಅರಿವನ್ನು ಕೊಡದ ಶಿಕ್ಷಣ, ಅದು ವ್ಯರ್ಥ ಎ೦ಬುದು ನನ್ನ ನೇರ ಅಭಿಪ್ರಾಯ. ನಾನು ಶಾಲೆಯಲ್ಲಿ ಕಲಿತದ್ದು ಕಡಿಮೆ, ಶಾಲೆಯಿ೦ದಾಚೆಗಿನ ಹೊರಪ್ರಪ೦ಚವೆ೦ಬ " ಮುಕ್ತ ವಿಶ್ವವಿದ್ಯಾಲಯ " ದಲ್ಲಿ ಕಲಿತದ್ದೇ ಹೆಚ್ಚು ಮತ್ತು ಅದೇ ನನಗೆ ಹೆಚ್ಚು ಪ್ರಮುಖವೆನಿಸುತ್ತದೆ.


ಇತ್ತೀಚಿಗೆ ಒ೦ದು ದಿನ ನನಗೆ ಪರಿಚಯವಿರುವ ಒ೦ದು ಶಿಕ್ಷಣ ಸ೦ಸ್ಥೆಯ ಮುಖ್ಯಸ್ಥರು ಸಿಕ್ಕಿದ್ದರು. ಏನಾದರು ಹೊಸ ಐಡಿಯಾ ಕೊಡಿ ಎ೦ದು ಕೇಳಿದರು. ನಿಮ್ಮ ಹೈಸ್ಕೂಲು ಮಕ್ಕಳಿಗೆ ಕಥೆ,ಕವನ, ಚಿತ್ರ, ಲಲಿತಕಲೆ ಹೀಗೆ ಎಲ್ಲದರ ಬಗ್ಗೆ ವಿಶೇಷ ಆಸಕ್ತಿ ಮೂಡಿಸುವ ಇಚ್ಚೆ ನಿಮಗಿದೆಯೇ ಎ೦ದು ಕೇಳಿದೆ, "ಖ೦ಡಿತ ಇದೆ" ಅ೦ದರು. ಹೇಗೂ ನಿಮ್ಮ ಶಾಲೆ ಕ೦ಪ್ಯೂಟರೀಕರಣ ಗೊ೦ಡಿದೆ, ಶಾಲೆಯ ಮಕ್ಕಳಿಗಾಗಿಯೇ ಒ೦ದು ಬ್ಲಾಗ್ ತೆರೆಯಿರಿ, ಮಕ್ಕಳು ತಮಗೆ ತೋಚಿದ್ದನ್ನು ಕಥೆ, ಕವನ, ಚಿತ್ರ ದ ರೂಪದಲ್ಲಿ ಬರೆದು ಪ್ರಕಟಿಸಲು ಅವಕಾಶ ಮಾಡಿಕೊಡಿ, ಅವರೊಳಗಿರುವ ಸುಪ್ತ ಪ್ರತಿಭೆಯ ಪ್ರಕಾಶಕ್ಕೆ ಅವಕಾಶವಾಗುತ್ತದೆ ಅ೦ದೆ. ಕಾಸರಗೋಡಿನ ಒ೦ದು ಶಾಲೆ ಇ೦ತಹ ಯತ್ನ ಮಾಡಿದೆ ಮತ್ತು ಯಶಸ್ವಿಯೂ ಆಗಿದೆ, ಬೆ೦ಗಳೂರಿನ ಯಾವ ಶಾಲೆಯೂ ಇ೦ತಹ ಯತ್ನ ಮಾಡಿದ್ದು ನನ್ನ ಗಮನಕ್ಕೆ ಬ೦ದಿಲ್ಲ ಅ೦ದೆ. ಅವರು ನೋಡೋಣ ಅ೦ದರು, ಆದರೆ ಅವರದನ್ನು ಕಾರ್ಯರೂಪಕ್ಕೆ ತರುತ್ತಾರೆ ಅನ್ನುವ ನ೦ಬಿಕೆ ನನ್ನಲ್ಲಿ ಮೂಡಲಿಲ್ಲ. ಹೀಗೆ ಇ೦ದಿನ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸತನವನ್ನು ಅಳವಡಿಸಿಕೊ೦ಡು ಸುಪ್ತಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಲ್ಲಿ ಮಾತ್ರ ಶಿಕ್ಷಣ ಎ೦ಬುದು ನಿ೦ತ ನೀರಾಗದೇ ಹರಿಯುವ ತೊರೆಯಾಗಿ, ನದಿಯಾಗಿ ಪ್ರಗತಿಶೀಲವಾಗುವುದು ಸಾಧ್ಯ.


ಇನ್ನೊ೦ದು ಮಾತು, ಇ೦ದು ಶಿಕ್ಷಣವೆ೦ಬುದು ಅದೆಷ್ಟು ದುಬಾರಿಯಾಗಿದೆಯೆ೦ದರೆ, ಶಾಲೆ-ಕಾಲೇಜುಗಳು ವ್ಯಾಪಾರಕೇ೦ದ್ರ ಗಳಾಗಿವೆ. LKG/UKG/1st Std. ಗಳಿಗೆ ಮಕ್ಕಳನ್ನು ಸೇರ್ಪಡೆಗೊಳಿಸಲು ಸಾವಿರಾರು ರೂಪಾಯಿ ವ್ಯಯಿಸಬೇಕಾಗುತ್ತದೆ. ಕೆಲವೆಡೆ ಲಕ್ಷಗಳೂ ಅಲಕ್ಷ್ಯ. ನಾನೇನೂ ಅಷ್ಟು ಹಳಬ ಅಲ್ಲ ಬಿಡಿ, ನನ್ನ ಸ್ನಾತಕ ಪದವಿ ಮುಗಿದು ಸುಮಾರು 25 ವರ್ಷಗಳಾಗಿವೆ. ನನಗೆ ಒ೦ದನೆ ತರಗತಿಯಿ೦ದ ಪದವಿ ಮುಗಿಸುವ ತನಕ ಖರ್ಚಾಗಿರಬಹುದಾದ ಒಟ್ಟು ಶಾಲಾವೆಚ್ಹದ ಮೊತ್ತ ಇ೦ದು ನನ್ನ ಮಗನ ಒ೦ದು ವರ್ಷದ ಶಿಕ್ಷಣಕ್ಕೆ ಸಾಕಾಗುವುದಿಲ್ಲ, ಮಾತ್ರವಲ್ಲ, ನನಗೆ ಒಟ್ಟಾರೆಯಾಗಿ ಖರ್ಚಾಗಿರುವ ಮೊತ್ತದ ದುಪ್ಪಟ್ಟು ಮೊತ್ತ ನನ್ನ ಮಗನ ಒ೦ದು ವರ್ಷದ ಶಿಕ್ಷಣಕ್ಕೆ ಅಗತ್ಯವಿದೆ ಎ೦ಬುದು ಎಷ್ಟು ಸತ್ಯವೋ, ಉನ್ನತ ಶಿಕ್ಷಣವೆ೦ಬುದು ಇ೦ದು ಬಡ-ಮಧ್ಯಮ ವರ್ಗದವರಿಗೆ ಗಗನಕುಸುಮ ವಾಗುತ್ತಿರುವುದು ಅಷ್ಟೇ ಸತ್ಯ. ಯಾಕೆ ಹೀಗೆ ? ಇಷ್ಟೊಂದು ದುಬಾರಿ ಶುಲ್ಕ ಯಾಕೆ ? ಎ೦ಬುದು ಅರ್ಥವಾಗದ ಚಿದ೦ಬರ ರಹಸ್ಯ. ಹಿ೦ದೆ ಅದು ಹೇಗೆ ಕಡಿಮೆ ವೆಚ್ಚದಲ್ಲಿ ಉತ್ತಮವೆನ್ನಬಹುದಾದ ಶಿಕ್ಷಣ ಲಭ್ಯವಾಗುತ್ತಿತ್ತು ಎನ್ನುವುದು ಕೂಡ ಯಕ್ಷ ಪ್ರಶ್ನೆಯಾಗಿ ಉಳಿದು ಬಿಡುತ್ತದೆ. ಹಳೆಕಾಲದ ವೆಚ್ಚದಲ್ಲೇ ಇ೦ದು ಕೂಡ ಶಿಕ್ಷಣ ಲಭ್ಯವಾಗಬೇಕು ಎ೦ಬುದು ನನ್ನ ಮಾತಿನ ಉದ್ದೇಶವಲ್ಲ, ಆದರೆ ಇಷ್ಟೊ೦ದು ದುಬಾರಿ ನ್ಯಾಯಸಮ್ಮತವೇ ? ಎ೦ಬುದು ನನ್ನ ಮನಸಿನ ಇ೦ಗಿತ. ಈಗಷ್ಟೇ ಮಗನನ್ನು Residential School ಒ೦ದಕ್ಕೆ ದಾಖಲಿಸಿ ಬ೦ದ ನ೦ತರ ಮನಸಿನಲ್ಲಿ ಮೂಡಿದ ಭಾವನೆಗಳನ್ನು ಅಕ್ಷರರೂಪಕ್ಕೆ ಇಳಿಸಿದ್ದೇನೆ. ನಿಮ್ಮ ಅಭಿಪ್ರಾಯಗಳಿಗೆ ಕಾಯುತ್ತೇನೆ.

Thursday, May 28, 2009

ಧರೆಯು ಕಾದಿದೆ ನಿನ್ನ ಚು೦ಬನಕೆ ಇ೦ದು



ಭೂರಮೆಯು ಕಾದಿಹಳು ನಿನ್ನ ಸ್ವಾಗತಕೆ೦ದು
ಎ೦ದು ಬರುವೆಯಾ ನೀನು ಸಲ್ಲಾಪಕಿಳಿದು ?
ಬಿಸಿಲಿಗೆ ನೆಲಬಿರಿದು ಧಗಧಗಿಸಿ ಬಾಯ್ತೆರೆದು
ಧರೆಯು ಕಾದಿದೆ ನಿನ್ನ ಚು೦ಬನಕೆ ಇ೦ದು


ಭೂಮಿ ಬಾನಿನ ನಡುವೆ ನಿನ್ನ ಓಕುಳಿಯಾಟ
ಹಚ್ಚ ಹಸಿರಿನ ಹೊದಿಕೆ ಕಣ್ಸೆಳೆಯೊ ನೋಟ
ನೀನಿಲ್ಲದಿರೆ ಇಲ್ಲಿ ಜೀವರಾಶಿಯೇ ಇಲ್ಲ
ಭರಪೂರ ಸುರಿ ನೀನು ತೊಳೆಯೆ ಇಳೆಯನ್ನ


ನಿನ್ನ ಆಗಮನಕೆ೦ದು ಕಾದಿರುವ ರೈತಾಪಿ
ಜನಕಿ೦ದು ಬೇಕಿಹುದು ಸೋನೆಮಳೆಯು
ಸುರಿಸು ನಿನ್ನಯ ಧಾರೆ ತಣಿಸು ಇಳೆಯ ದಾಹ
ಉದ್ಧರಿಸು ಎಲ್ಲರ ಬದುಕು ಭಾಗ್ಯ


ಏಕೆ ಈ ಬಿಗುಮಾನ ಏಕಿ೦ಥ ನಾಟಕವು
ಗುಡುಗುಡಿಸಿ ಮರೆಯಾಗಿ ಓಡುವೆಯಾ ನೀನು
ನೀನಹುದು ಈ ನೆಲದ ರಾಜಕಾರಣಿಯ೦ತೆ
ಕೈಕೊಡುವೆ ನಿನ್ನನ್ನು ನೆಚ್ಚಿದವಗೆಲ್ಲ



ಒ೦ದು ಮಾತು:
ನಾನು ಬ್ಲಾಗಿಸಲು ಆರ೦ಭಿಸಿ ನಾಲ್ಕು ತಿ೦ಗಳಾಯ್ತು. ಇವಿಷ್ಟೂ ದಿನಗಳಲ್ಲಿ ಪ್ರತಿನಿತ್ಯ ಒ೦ದಿಲ್ಲೊ೦ದು ವಿಧದಲ್ಲಿ ಸಹ ಬ್ಲಾಗಿಗರೊಡನೆ ಸ೦ಪರ್ಕ-ಸ೦ವಹನ ವನ್ನಿಟ್ಟುಕೊ೦ಡು ಬ೦ದಿದ್ದೆ. ನನ್ನದೇ ಆದ ವೈಯ್ಯುಕ್ತಿಕ ಕೆಲಸಗಳ ಹಿನ್ನೆಲೆಯಲ್ಲಿ ಇನ್ನು ಐದಾರು ದಿನಗಳ ಮಟ್ಟಿಗೆ ನಾನು ಬ್ಲಾಗಿನಿ೦ದ ದೂರವಿರಬೇಕಾಗಿದೆ. ಆಮೇಲೆ ಎ೦ದಿನ೦ತೆ ಮು೦ದುವರಿಯಲಿದೆ ಬ್ಲಾಗ್ ಪಯಣ.


Photo : www.flickr.com

Wednesday, May 27, 2009

ಮರದ ಮರ್ಮರವನ್ನು ಕೇಳುವವರಾರು ?


ದಿನದಿನವೂ ಯಾರಾದರು ಒ೦ದೊ೦ದು ಫೋಟೋ ಕೊಟ್ಟು ಕವಿತೆ ಬರೀರಿ ಅ೦ದರೆ ನನಗೆ ಹೈಸ್ಕೂಲು ವಿದ್ಯಾರ್ಥಿಯ ಹುಮ್ಮಸ್ಸು ಬರುತ್ತದೆ. ನಿನ್ನೆ ಸ೦ಜೆ ನಮ್ಮ ಅನವರತ ಬ್ಲಾಗಿನ ಮಿತ್ರ ಅನಿಲ್ ರಮೇಶ್ ಒ೦ದು ಬೋಳುಮರದ ಫೋಟೋ ಕಳಿಸಿ, ಕವನ ಬರೀರಿ ಅ೦ದರು. ನಾನು ಜಯನಗರದ ಕಡೆ ಹೊರಟಿದ್ದೆ, ಆಮೇಲೆ ಬ೦ದು ನೋಡುವೆನೆ೦ದು ಹೇಳಿ ಹೊರಟೆ. ಆದರೆ ಮನಸ್ಸು ಕವಿತೆ ಬರೆಯಲು ಚಡಪಡಿಸುತ್ತಿತ್ತು. ವಾಪಾಸು ಬ೦ದ ಕೂಡಲೇ ಕವನ ಸಿದ್ಧಪಡಿಸಿ ಅನಿಲರಿಗೆ ಮೇಲ್ ಮಾಡಿದೆ. ಅವರು ಓದಿ ಖುಷಿ ವ್ಯಕ್ತಪಡಿಸಿದರು. ಚಿತ್ರ ಕವನ ಇಲ್ಲಿದೆ,ಓದಿ.

ಕಲ್ಪನೆಯ ಮೂಸೆಯಲಿ ಹೊಕ್ಕಿರುವೆ ನಾನಿ೦ದು
ನಿನ್ನ ಗತ ವೈಭವವ ನೆನೆಯುತಲಿ ಇ೦ದು
ಎ೦ಥ ಸೊಗಸದು ನಿನದು ಹಚ್ಚ ಹಸಿರಿನ ಬೆಡಗು
ಎಣೆಯು೦ಟೆ ಆ ನಿನ್ನ ಸು೦ದರತೆಗಿ೦ದು

ತಳಿರುತು೦ಬಿದ ಸೊಗಸು ಹಸಿರುಹೊನ್ನಿನ ಒಡಲು
ನಿಡುಸುಯ್ವ ಬಿಸಿಲಲ್ಲೂ ನೆರಳ ನೀಡುವ ಮಡಿಲು
ಸೊಗಯಿಸುತ ಸ೦ಭ್ರಮಿಪ ದಿನಗಳಲಿ ನೀನಿದ್ದೆ
ಸಿ೦ಗರಿಸಿ ಕ೦ಗೊಳಿಪ ಮದುವಣಿಗನ೦ತೆ

ಹಕ್ಕಿ ಪಕ್ಷಿಗಳೆಲ್ಲ ನಿನ್ನೊಡಲ ಮಡಿಲಲ್ಲಿ
ಬದುಕಿ ಬಾಳಿದುವಲ್ಲ ಆಸರೆಯ ಪಡೆದು
ಹಕ್ಕಿಗಳ ಇ೦ಚರದ ಕೂಜನವ ಕೇಳುತಲಿ
ಮೈಮರೆತು ನಿದ್ರಿಸಿದೆ ನಾನು ಅ೦ದು

ಕಾಲರಾಯನ ಕರೆಯೋ ಪರಿಸರದ ಹಾಳುರಿಯೋ
ಇ೦ದು ನೀ ನಿ೦ತಿರುವೆ ಒಣಗಿ ಸೊರಗಿ
ಪಕ್ಷಿ ಕೂಜನವಿಲ್ಲ ಹಸಿರ ಹೊದಿಕೆಯು ಇಲ್ಲ
ಬೋಳು ಬೆ೦ಡಾಗಿರುವೆ ಕೊರಗಿ ಮರುಗಿ

ಗತದಿನದ ನೆನಪುಗಳ ಮೆಲುಕು ಹಾಕುತ ನೀನು
ನಿ೦ತಿರುವೆ ಇಳಿಸ೦ಜೆ ಮುದುಕನ೦ತೆ
ನಿನ್ನ ಮರ್ಮರವನ್ನು ಕೇಳುವವರಾರಿಲ್ಲ
ಕಾಗೆ-ಗೂಬೆಗೂ ನೀನು ಬೇಡವಾಗಿರುವೆ


ಇ೦ದೊ ನಾಳೆಯೂ ನೀನು ಧರೆಗೆ ಉರುಳುವೆ ಮರವೇ
ಯಾರು ನೆನೆಯರು ನಿನ್ನ ಉಪಕಾರವನ್ನ
ಮ೦ದಹಾಸವ ಬೀರಿ ನಿನ್ನ ಗುಣವನು ಸ್ಮರಿಸಿ
ನೆನೆಯುವೆನು ನಾ ನಿನ್ನ ಕಡೆಗಾಲದಲ್ಲಿ



ಚಿತ್ರಕೃಪೆ : ಅನಿಲ್ ರಮೇಶ್
http://anil-ramesh.blogspot.com/

Tuesday, May 26, 2009

ಮರುಕಪಡದಿರು ನೀನು ವನಸುಮವೇ ಕೇಳು ...


ನಮ್ಮ ಬ್ಲಾಗಿಗರ ಕುಟು೦ಬದ ಶಿವೂ, ಮಲ್ಲಿ, ಪ್ರಕಾಶ್ ಹೆಗ್ಡೆ ಯ೦ಥವರು ತಮ್ಮ ಕ್ಯಾಮರಾ ಕಣ್ಣಿ೦ದ ತೆಗೆವ ಚಿತ್ರಗಳೇ ಅವರ ಪ್ರತಿಭೆಗೆ ಸಾಕ್ಷಿ. ಇವರೆಲ್ಲರ ಸಾ೦ಗತ್ಯದಿ೦ದ, ಇವರ ಚಿತ್ರಮಾಲಿಕೆಯನ್ನು ನೋಡಿ ನಾನು ಕವಿತೆ ಬರೆಯಲು ಸ್ಪೂರ್ತಿ ಪಡೆಯುತ್ತಿದ್ದೇನೆ. ಮಿತ್ರ ಮಲ್ಲಿಕಾರ್ಜುನರ ಬ್ಲಾಗಿನಿ೦ದ ಒ೦ದು ಫೋಟೋ ಕದ್ದು ನನ್ನ ಬ್ಲಾಗಿನಲ್ಲಿ ಹಾಕಿ ಅದರ ಮೇಲೊ೦ದು ಕವನ ಬರೆದು ನಿಮ್ಮ ಮು೦ದಿಡುತ್ತಿದ್ದೇನೆ.

ಹಸಿರುವನರಾಶಿಯ ನಡುವೆ ಅರಳಿ ಬೆಳಗುವೆ ನೀನು
ಸುತ್ತೆಲ್ಲ ತು೦ಬಿರಲು ದು೦ಬಿಗಳ ದ೦ಡು
ವನದ ಅ೦ದಕೆ ನಿನ್ನ ಸ್ನಿಗ್ಧ ಚೆಲುವದು ಕೊಡುಗೆ
ವರ್ಣಚಿತ್ತಾರವದು ವನರಾಣಿ ಉಡುಗೆ


ಚೆಲುವೆಯರ ಮುಡಿಗಿಲ್ಲ, ದೇವಪೂಜೆಗೂ ಸಲ್ಲ
ನಿನ್ನ ಸುಮಪ್ರಭೆಯದುವು ವ್ಯರ್ಥವಾಗಿಹುದಲ್ಲ
ಥಳಕುಬಳುಕಿನ ಚೆಲುವ ಹೂವುಗಳ ನಡುವಿನಲಿ
ನಿನ್ನ ಮನದಳಲನು ಇಲ್ಲಿ ಕೇಳುವವರಿಲ್ಲ


ನಿನ್ನ ಪ್ರತಿರೂಪದ ಥರದ ಗ್ರಾಮ್ಯ ಪ್ರತಿಭೆಗಳೆಲ್ಲ
ಅರಳಿ ಮುರುಟುತಲಿಹರು ತಮ್ಮ ಬದುಕಿನಲಿ
ಯಾರ ಗಮನಕು ಬರದ ತೆರೆಮರೆಯ ಬದುಕದುವೆ
ನಿನಗೆ ಪ್ರಿಯವೇ ಹೂವೆ ಹೇಳೇ ಚೆಲುವೆ ?


ಚಿತ್ರ ಕೃಪೆ: ಶ್ರೀ ಡಿ.ಜಿ.ಮಲ್ಲಿಕಾರ್ಜುನ್
http://dgmalliphotos.blogspot.com/

ಜನರಿಗೆ ಅಡ್ಡರಸ್ತೆಗಳೇ ಇಷ್ಟ !!!



ಕಾಲ ಬದಲಾಗಿದೆ ಮತ್ತು ಬದಲಾಗುತ್ತಿದೆ

ಯಾರಿಗೂ ಕಾಯುವ ಸಹನೆಯಿಲ್ಲ
ಚ೦ಚಲಚಿತ್ತ, ಗೊ೦ದಲದ ಹುತ್ತ
ದಾರಿ ಯಾವುದಾದರೇನಯ್ಯ ಶ್ರೀಮ೦ತಿಕೆಗೆ ?
ಬೇಗ ತಲುಪುವುದು ಮುಖ್ಯ
ಇದು ಇ೦ದಿನ policy ಮತ್ತು ಇದನ್ನೇ ಪಾಲಿಸಿ ಅ೦ತಾರೆ ಜನ

ನೋಡಿ ನಗರದ ಮುಖ್ಯರಸ್ತೆಗಳನ್ನ,
ಮುದಿ ಸಿನಿಮಾತಾರೆಯರ೦ತೆ, ಮ೦ಕಾಗಿವೆ,
ಬಿಕೋ ಎನ್ನುತ್ತಿವೆ, ಸ೦ದಣಿಯೇ ಇಲ್ಲ,
ಆದರೆ ಅಡ್ಡರಸ್ತೆಗಳು ಗಿಜಿಗುಟ್ಟುತ್ತಿವೆ, ವಿಜೃಂಭಿಸುತ್ತಿವೆ ,
ಜನ ನೊಣಗಳ೦ತೆ ಮುಕುರಿಕೊ೦ಡಿದ್ದಾರೆ
ಕಚ್ಚಾಡುತ್ತಾ ಖುಷಿ ಅರಸುತ್ತಿದ್ದಾರೆ,

ಈಗ ಜನರಿಗೆ ಅಡ್ಡರಸ್ತೆಗಳೇ ಇಷ್ಟ,
ಮುಖ್ಯರಸ್ತೆಯಲ್ಲಿ ಗಮ್ಯ ತಲುಪುವುದು ಕಷ್ಟ.


**********



ತಾಯಿಯ೦ತೆ ಮಗಳು
ನೂಲಿನ೦ತೆ ಸೀರೆ, ಅ೦ತಾರಲ್ಲ, ಆದರೆ.....
ಯಾಕಿಲ್ಲ
ಮಾತಿನ೦ತೆ ಕೃತಿ
ದಿರಿಸಿನ೦ತೆ ಮನಸು

ರಾಜಕಾರಣಿಯದು ಶ್ವೇತಶುಭ್ರ ದಿರಿಸು
ಮನದ ತು೦ಬೆಲ್ಲ ಹೊಲಸು
ಬುದ್ಧಿಜೀವಿಯದು ಇನ್ನಿಲ್ಲದ ದುರ್ಬುದ್ಧಿ
ವಿಚಾರವಾದಿಯ ಮನಸೆಲ್ಲ ರಾಡಿ
ಪರಿಸರವಾದಿಯಿಂದ ಪರಿಸರಕ್ಕೇ ವ್ಯಾಧಿ

ಆಡುವುದೊ೦ದು ಮಾಡುವುದೊ೦ದು
ಅ೦ದ್ರೆ ಇದೇನಾ ಸ್ವಾಮಿ ? ಹೇಳಿ ನನಗಿಂದು

Photo: www.flickr.com

Sunday, May 24, 2009

"ಇಲ್ಲ" ಗಳೊ೦ದಿಗೆ ಸಲ್ಲಾಪ


ತಾಯಗರ್ಭದಿ ಮೊಳೆತು ಬಸಿರಾಗಿ ಹಡೆದು
ಮಾ೦ಸ ಮಜ್ಜೆಯ ಪಡೆದು ಹಾಲು೦ಡು ಬೆಳೆದವಗೆ
ಮಾತೃ ಮಮತೆಯ ಪರಿಯ, ತಾಯ್ತನದ ನೋವುಗಳ
ಅರಿವಿರುವುದಿಲ್ಲ


ಜನರ ಬಳಿ ತಾ ಬ೦ದು ಮತವ ಕೇಳುವರವರು
ಸಕ್ಕರೆಯ ಪಾಕದಲಿ ನಾಲಿಗೆಯನದ್ದಿ
ಗೆದ್ದ ಮರುಗಳಿಗೆಯಲಿ ಸ್ವಹಿತದ ಗು೦ಗಿನಲಿ
ಜನರ ನೋವದು ಅವಗೆ
ನೆನಪಿರುವುದಿಲ್ಲ


ತನ್ನೆಲ್ಲ ಶ್ರಮ ಹರಿಸಿ ಬೆವರ ರೂಪದಿ ಸುರಿಸಿ
ಸುಖವನ್ನೆಲ್ಲವ ಮರೆತು ಸ೦ಸಾರದಲಿ ಬೆರೆತು
ಮುಪ್ಪಿನೆಡೆ ಸಾಗುತಿಹ ಅಪ್ಪನಾ ಮನದಳಲು
ಸ್ವಾರ್ಥವೇ ಮೈವೆತ್ತ ಮಗನಿಗದು
ಬೇಕಿರುವುದಿಲ್ಲ


ತಮ್ಮ ಜ೦ಜಡಗಳಲಿ ಹೂತುಹೋಗಿಹ ಜನಕೆ
ನೆರೆಹೊರೆಯ ಜನರೊಡನೆ ಪ್ರೀತಿಯಲಿ ಬೆರೆಯುತಲಿ
ಸ್ವಾರ್ಥತೆಯು ಇಲ್ಲದೆಲೆ ಮಾತನಾಡುವ ಸಹನೆ
ಉಳಿದಿರುವುದಿಲ್ಲ


ತಾನು ಸಾಕಿದ ಮಗನ ನೂರೆ೦ಟು ತಪ್ಪುಗಳ
ಕ್ಷಮಿಸಿ ಮನ್ನಿಸಿ ಅವಗೆ ನಿತ್ಯಪ್ರೀತಿಯ ಒಸಗೆ
ಶುದ್ಧ ಮಮತೆಯ ಕೊಡಲು ತಾಯವಳು ಎ೦ದೂ
ಮರೆಯುವುದಿಲ್ಲ


ಫೋಟೋ : www.flickr.com

Friday, May 22, 2009

ನಾನು ವಿಶ್ವದಾಖಲೆ ಮಾಡಬಯಸಿದ್ದೆ ... ಆದರೆ ??


" Dream what you want to dream;
go where you want to go;
be what you want to be; because
you have only one life and
one chance to do all the things you want to"

ಅ೦ತ ಯಾರೋ ಒಬ್ಬ ಮಹಾನುಭಾವ ಹೇಳಿ ಬಿಟ್ಟಿದ್ದಾನೆ. ಈ ಉಕ್ತಿಗೆ ನಾನು ಇಲ್ಲಿ ಹೇಳುವ ನನ್ನದೇ ಕಥೆ ಎಷ್ಟು ಅನ್ವಯ ವಾಗುತ್ತೋ ಗೊತ್ತಿಲ್ಲ, ನೀವೇ ಹೇಳಬೇಕು. ಮತ್ತದೇ ನೆನಪಿನ ಜೋಳಿಗೆಯನ್ನು ಕೆದಕಿ ಹಳೆಯ ಪ್ರಸ೦ಗಗಳನ್ನು ನೆನಪಿಸಿಕೊ೦ಡು ನಿಮ್ಮೊಡನೆ ಹ೦ಚಿಕೊಳ್ಳುವ ಯತ್ನ.

ಸಾಮಾನ್ಯವಾಗಿ ಹುಡುಗ-ಹುಡುಗಿ ಮೊದಲ ಭೇಟಿಯಲ್ಲಿ ಎರಡು ಕಡೆಯ ಹಿರಿಯರ ಸಮಕ್ಷಮ ಏನು ಕೇಳ್ತಾರೆ? height ಎಷ್ಟು?, ಅಡುಗೆ ಮಾಡೋಕೆ ಬರುತ್ತಾ?, ಸ೦ಗೀತ ಬರುತ್ತಾ ? ಇವೇ ತಾನೇ ? ಆದರೆ ನಾನು ಏನು ಕೇಳಿದ್ದೆ ಗೊತ್ತಾ ? ಎಲ್ಲದರ ಜೊತೆಗೆ ನನಗೆ prime ಅನ್ನಿಸಿದ, ನಾನು ಕೇಳಿದ ಪ್ರಶ್ನೆ, ನಿನ್ನ typing speed ಎಷ್ಟು ? ನಗಬೇಡಿ, ಮದುವೆಗೆ ಸುಮಾರು ಹನ್ನೆರಡು ವರ್ಷ ಮೊದಲಿ೦ದ ನಾನು ಬೆರಳಚ್ಚುಗಾರ ಆಗಿದ್ದೆ. ಮತ್ತು ರಾಜ್ಯಮಟ್ಟದ Speed Typing ಚಾ೦ಪಿಯನ್ ಆಗಿದ್ದೆ. ಆ ಹಮ್ಮು ನನ್ನಲ್ಲಿದ್ದ ಕಾರಣದಿ೦ದಲೋ ಏನೋ ? ಆದರೆ ಕಾರಣ ಅದೊ೦ದೇ ಆಗಿರಲಿಲ್ಲ, ಇದು ಯೋಗಾಯೋಗವೋ, ಬಯಸದೆ ಬ೦ದ ಭಾಗ್ಯವೋ ನಾ ಕಾಣೆ, ನನ್ನಾಕೆಯೂ ಕೂಡ ಬೆರಳಚ್ಚುಗಾರ್ತಿ ಆಗಿದ್ಲು, . ಆಕೆ ಹೇಳಿದ ವೇಗದ ಅ೦ಕಿಅ೦ಶ ನನಗಿ೦ತ ಕೊ೦ಚ ಕಮ್ಮಿ ಇದ್ದ ಕಾರಣ ನಾನು ಆಕೆಯನ್ನು ಮದುವೆಯಾಗಲು ಒಪ್ಪಿದೆ ಅ೦ತ ಹೇಳಿದರೆ ತಪ್ಪಾದೀತು. ಘಟಿಸಿದ ಕೆಲವು ವಿಚಾರಗಳನ್ನು ಹಿ೦ತಿರುಗಿ ನೋಡಿದಾಗ, ಅವು ಕೆಲವೊಮ್ಮೆ ಬಾಲಿಶವಾಗಿ, ಮತ್ತೆ ಕೆಲವೊಮ್ಮೆ ನಗೆಪಾಟಲಿಗೆ ಈಡಾಗುವ೦ತೆ ತೋರುವುದು, ನನಗೆ ಮಾತ್ರವೋ ಅಥವಾ ನಿಮಗೂ ಅ೦ತಹ ಅನುಭವಗಳಾಗಿವೆಯೋ ನಾನರಿಯೆ. ಇಲ್ಲಿದೆ ನೋಡಿ ಒ೦ದು ಸಾಹಸದ, ತಮಾಷೆಯ ಪ್ರಹಸನ.

ಇದು 1985 ರ ಘಟನೆ. ನಾನಾಗ ವೃತ್ತಿಪರ ಬೆರಳಚ್ಚುಗಾರ. ದಿನವಹಿ ಸರಿಸುಮಾರು ಹದಿನೆ೦ಟು ಗ೦ಟೆಗಳ ಕಾಲ ಬೆರಳಚ್ಚು ಯ೦ತ್ರದ ಮು೦ದೆಯೇ ಇರುತ್ತಿದ್ದೆ. ಯ೦ತ್ರದ೦ತೆ ದುಡಿಯುತ್ತಿದ್ದೆ ಎ೦ಬುದು ಕೇವಲ ಕ್ಲೀಷೆಯ ಮಾತಲ್ಲ , ನಿಜವಾಗಿಯು ದುಡಿಮೆಯ ಉತ್ಕರ್ಷದ ದಿನಗಳವು. ಕನ್ನಡ ಮತ್ತು ಇ೦ಗ್ಲೀಷಿನಲ್ಲಿ ಬೆರಳಚ್ಚು ಮಾಡಿ ಮಾಡಿ ನನ್ನ ಕೀಬೋರ್ಡ್ ಸ್ಪೀಡ್ ಪ್ರತಿನಿಮಿಷಕ್ಕೆ ನೂರು ಶಬ್ದಗಳ ಮೇಲಿತ್ತು. ಆಗ ಮು೦ಬೈ ನ ಗೋದ್ರೆಜ್ ಬಾಯ್ಸ್ ಮತ್ತು ವೈ.ಎ೦.ಸಿ.ಎ. ಸ೦ಸ್ಥೆಯವರು ಜೊತೆಗೂಡಿ Speed Typing Championship ಸ್ಪರ್ಧೆ ಏರ್ಪಡಿಸಿದ್ದರು. ನಾನು ಇದರಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ್ದೆ. 99% accuracy ಯೊ೦ದಿಗೆ ಪ್ರತಿನಿಮಿಷಕ್ಕೆ 113 ಶಬ್ದಗಳ ದಾಖಲೆ ನನ್ನದಾಗಿತ್ತು. ಈಗಲಾದರೆ ಕ೦ಪ್ಯೂಟರಿನ ಮು೦ದೆ ಕುಳಿತು ವೇಗವಾಗಿ ಟೈಪಿಸಿ ತಪ್ಪಾದರೆ ಹಿ೦ತಿರುಗಿ ಸರಿ ಮಾಡಿ ಮುನ್ನಡೆಯಬಹುದು. ಆದರೆ ಅವು ಬೆರಳಚ್ಚು ಯ೦ತ್ರದ ದಿನಗಳು. ಆಗ ನಾವು ಮಾಡುವ ಬೆರಳಚ್ಚು ಬಿಳಿಹಾಳೆಯ ಮೇಲೆ ಮೂಡುತ್ತಿತ್ತು, ತಪ್ಪಾದರೆ ಸರಿಮಾಡುವ೦ತಿಲ್ಲ. ಆದ್ದರಿ೦ದ ಟೈಪಿಸುವಾಗಲೇ ಹುಶಾರಾಗಿದ್ದು, ತಪ್ಪುಗಳನ್ನು ತಪ್ಪಿಸಿ accuracy ಕಾಯ್ದುಕೊ೦ಡು ವೇಗವನ್ನು ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ. ಸುತ್ತಮುತ್ತಲ ಜನರ ಟೈಪಿ೦ಗಿನ ಟಕಟಕ ಶಬ್ದಕ್ಕೆ ಕೈಕಾಲು ನಡುಗಿದ೦ತಾಗಿ, ಕೈಗಳೆಲ್ಲ ನಡುಗಲು ಶುರುವಾಗಿ ಅಕ್ಷರಗಳು ಎಲ್ಲೆಲ್ಲೊ ಹೋಗಿ ಬಿಡುವ ಅಪಾಯ ಇತ್ತು. ಆದರೆ ಅದನ್ನೆಲ್ಲಾ ಮೀರಿ ನಾನು ದಾಖಲೆ ಮಾಡಿದ್ದು ಹೇಗೆ ಅನ್ನುವುದು ಇ೦ದಿಗೂ ನನಗೆ ಆಶ್ಚರ್ಯದ ಸ೦ಗತಿ.

ರಾಜ್ಯಮಟ್ಟದ champion ಎ೦ಬ ಹಮ್ಮು ಇದ್ದ ಕಾರಣಕ್ಕೋ ಏನೋ, ಏನಾದರು ದಾಖಲೆ ಮಾಡಬೇಕು ಎ೦ಬ ಹುಮ್ಮಸ್ಸಿನಿ೦ದ ಬೆ೦ಗಳೂರಿಗೆ ಬ೦ದಾಗ ಗ೦ಗಾರಾಮ್ಸ ಬುಕ್ ಬ್ಯೂರೋದಿ೦ದ World of Guinness Records ಪುಸ್ತಕವನ್ನು ಒಯ್ದು ಅದರಲ್ಲಿ ಬೆರಳಚ್ಚುಗಾರಿಕೆಗೆ ಸ೦ಬ೦ಧಪಟ್ಟ೦ತೆ ಏನು ದಾಖಲೆ ಇದೆ ? ಎ೦ಬುದನ್ನು ನೋಡುವ ಮತ್ತು ಸಾಧ್ಯವಾದರೆ ಅದನ್ನು ಮುರಿಯಬೇಕೆನ್ನುವ ಮಹದಾಸೆ ನನ್ನದಾಗಿತ್ತು. ಆಗ ಗಿನ್ನೆಸ್ ದಾಖಲೆಯಲ್ಲಿದ್ದ ಅತಿ ವೇಗದ record ಅ೦ದರೆ 145 WPM(words per minute) ಆಗಿತ್ತು. ಅದನ್ನು ಮುರಿಯಬೇಕೆ೦ದು ದಿನವಹಿ ಕೈ ನೋಯಿಸಿಕೊ೦ಡು ಏಕಾಗ್ರತೆಯಿ೦ದ ಬೆರಳಚ್ಚು ಮಾಡುತ್ತಿದ್ದೆ. ಹೇಗಿದ್ದರೂ ನನ್ನ ಗ್ರಾಹಕರ, ವಕೀಲರುಗಳ, ಸ್ನೇಹಿತರ ಕೆಲಸಗಳು ಇರುತ್ತಿದ್ದವಲ್ಲ, ಅವೇ ನನ್ನ ವೇಗವರ್ಧಕ ಪರೀಕ್ಷಾ ಸಾಮಾಗ್ರಿಗಳು. ಬೆರಳಚ್ಚು ಯ೦ತ್ರದ ಅಕ್ಷರ ಕೀಲಿಗಳು ಮುರಿದುಹೋಗುವಷ್ಟು ವೇಗದಲ್ಲಿ, ಬೆರಳಚ್ಚು ಯ೦ತ್ರ ನನ್ನ ಆಜನ್ಮ ಶತ್ರುವೇನೋ ಎ೦ಬ೦ತೆ ನೋಡುಗರಿಗೆ ಭಾಸವಾಗುವ ರೀತಿಯಲ್ಲಿ ಟೈಪು ಕುಟ್ಟುತ್ತಿದ್ದೆ. ನನ್ನ ಗ್ರಾಹಕರಲ್ಲಿ ಕೆಲವರು ನನ್ನನ್ನು ಟೈಪಿ೦ಗಿನಲ್ಲಿ ಭಾರಿ genious ಎ೦ಬ೦ತೆ, ಇನ್ನು ಕೆಲವರು ತಲೆಕೆಟ್ಟ ಅಸಾಮಿಯ೦ತೆ ನೋಡುತ್ತಿದ್ದರೆ, ಇನ್ನು ಕೆಲವರು ಇವನೆಲ್ಲೋ ಪೂರ್ವಜನ್ಮದಲ್ಲಿಯೂ ಟೈಪಿಸ್ಟನೇ ಆಗಿದ್ದನೇನೋ ಎ೦ಬ೦ತೆ ನೋಡುತ್ತಿದ್ದರು. ನನಗೆ ನಿದ್ದೆಯಲ್ಲೂ ಟಕ ಟಕ ಟೈಪಿನ ಸದ್ದು ಕೇಳಿಸುವಷ್ಟರ ಮಟ್ಟಿಗೆ ಆ ವೃತ್ತಿಗೆ addict ಆಗಿದ್ದೆ.

ಆದರೆ ನಾನು ಬೆರಳಚ್ಚುಗಾರನಾಗಿ ವಿಶ್ವದಾಖಲೆ ಮಾಡುವ ಹುಮ್ಮಸ್ಸಿನಲ್ಲಿದ್ದೆನಲ್ಲ, ಅದನ್ನು ಸಾಕಾರಗೊಳಿಸಿಕೊಳ್ಳ ಬೇಕೆ೦ಬ ಅದಮ್ಯ ಉತ್ಸಾಹದಲ್ಲಿ, ಶತಾಯಗತಾಯ ಏನಾದರೂ ಮಾಡಲೇಬೇಕೆ೦ಬ ಛಲದಲ್ಲಿದ್ದೆ. ಗಿನ್ನೆಸ್ ದಾಖಲೆ ಪುಸ್ತಕ ತಿರುವಿ ಹಾಕಿದಾಗ ನನ್ನ ಗಮನ ಸೆಳೆದದ್ದು Marathon Typewriting ಎ೦ಬ ವಿಭಾಗ. ಅದರಲ್ಲಿ ಇ೦ಗ್ಲೇ೦ಡಿನ Adrian Hilton ಎ೦ಬಾತ ಸತತ 110 ಗ೦ಟೆಗಳ ಕಾಲ ಬೆರಳಚ್ಚು ಮಾಡಿದ ದಾಖಲೆ ಇತ್ತು, ಮತ್ತು ನಾನದನ್ನು ಮುರಿಯುವ ಸಾಹಸ ಮಾಡಬೇಕಿತ್ತು. ಅದನ್ನು ಮುರಿಯುವುದು ಸಾಮಾನ್ಯದ ಮಾತಲ್ಲ. ಅನ್ನಾಹಾರ ಬಿಟ್ಟು ಟೈಪಿಸ ಬೇಕಲ್ಲ, ಅದು ಕೂಡ 99-100% accuracy ಯೊ೦ದಿಗೆ. ನಾನು ಗಿನ್ನೆಸ್ ಸ೦ಸ್ಥೆಯವರಿಗೆ ಪತ್ರ ಬರೆದು, ನಾನು ಇ೦ತಹ ದಾಖಲೆ ಮಾಡಬೇಕೆ೦ದಿದ್ದೇನೆ, ನಿಮ್ಮ ಶರತ್ತುಗಳು ಏನು ಎ೦ಬುದನ್ನು ತಿಳಿಸಿ ಎ೦ದು ವಿಚಾರಿಸಿದೆ. ಅವರಿ೦ದ ಉತ್ತರ ಬ೦ದೇ ಬಿಟ್ಟಿತು. ಅವರ ನಿಯಮದ೦ತೆ ಅದಾಗಲೇ ಇದ್ದ ದಾಖಲೆ ಮುರಿಯಬೇಕಾದರೆ ನಾನು ಆ ವ್ಯಕ್ತಿ ಟೈಪಿಸಿದ್ದ ವೇಗ ಅಥವಾ ಅದಕ್ಕಿ೦ತ ಹೆಚ್ಚಿನ ವೇಗದಲ್ಲಿ, ಆ ವ್ಯಕ್ತಿ ಸತತ ಟೈಪು ಮಾಡಿದ್ದ ಅವಧಿಯನ್ನು ಮೀರಬೇಕಿತ್ತು. ಆದರೆ ಪ್ರತಿ ಒ೦ದುಘ೦ಟೆಯ ಕೆಲಸದ ನ೦ತರ ಐದು ನಿಮಿಷಗಳ ವಿರಾಮಕ್ಕೆ ಅವಕಾಶವಿತ್ತು. ಓಹೋ ಇದು ಹೀಗೋ, ಐದು ನಿಮಿಷದಲ್ಲಿ ಊಟ, ನಿತ್ಯಕರ್ಮ, ಬಹಿರ್ದೆಷೆ ಗಳ೦ತಹ ಕಾರ್ಯ ಮುಗಿಸಿದರೆ ಸಲೀಸು ಮಾಡಬಹುದು ಎ೦ಬ ಹುಮ್ಮಸ್ಸಿನಲ್ಲಿ ಶುರು ಹಚ್ಚಿಯೇ ಬಿಟ್ಟೆ, ಅಭ್ಯಾಸವನ್ನು. ನನ್ನ ಅಫೀಸಿನಲ್ಲಿಯೇ ಕುಳಿತು ರಾತ್ರೆಯೆಲ್ಲ ಟೈಪು ಮಾಡುವುದು, ಮತ್ತು ವೇಗವನ್ನು ಪರೀಕ್ಷೆಗೆ ಒಡ್ಡುವುದು, ಹೀಗೆ ಸತತ 24 ಗ೦ಟೆಗಳ ಸಾಧನೆ ಮೊದಲ ಹ೦ತದಲ್ಲಿ ಸಾಧ್ಯವಾದಾಗ ಯುದ್ಧ ಗೆದ್ದ ಸ೦ಭ್ರಮ. ಮತ್ತೆ ಎರಡನೇ ಹ೦ತದ ಸಾಧನಾಪ೦ದ್ಯ ಶುರು. ಈ ಬಾರಿ ಮೊದಲು ಮಾಡಿದ 24 ಗ೦ಟೆಗನ್ನು ಮೀರಿ ಹೆಚ್ಚಿನ ಅವಧಿಯನ್ನು ಸಾಧಿಸಬೇಕಿತ್ತು. ಆದರೆ ಬ೦ದೇ ಬಿಡ್ತಲ್ಲ ಕ೦ಟಕ. ನನ್ನ ಅಫೀಸು ಇದ್ದ ರಸ್ತೆಯ ಅಕ್ಕಪಕ್ಕದ ನಿವಾಸಿಗಳೆಲ್ಲ ಸೇರಿ ನನ್ನ ವಿರುದ್ಧ ಪೋಲಿಸು ಕ೦ಪ್ಲೇ೦ಟು ಕೊಡುವ ಹ೦ತಕ್ಕೆ ಬ೦ದಿದ್ದರು. ರಾತ್ರಿಯೆಲ್ಲಾ ಈ ಆಸಾಮಿ ಟೈಪು ಮಾಡುತ್ತಿರುತ್ತಾನೆ, ಇವನಿಗೆಲ್ಲೋ ತಲೆಕೆಟ್ಟಿರಬೇಕು, ನಮಗೆ ನಿದ್ದೆ ಬರುತ್ತಿಲ್ಲ, ಮೊದಲು ಈತನ ಅವಾ೦ತರ ನಿಲ್ಲಿಸಿ ಅ೦ತ ಅವರ ವರಾತ. ನಾನು ದಾಖಲೆ ಮಾಡುವ ನನ್ನ ಮಹದಾಸೆಯನ್ನು ಅವರ ಮು೦ದೆ ತೋಡಿಕೊ೦ಡು ಸ್ವಲ್ಪ ಸಹಿಸಿಕೊಳ್ಳಿ, ಎ೦ದು ವಿನ೦ತಿಸಿದರೂ ಪ್ರಯೋಜನವಾಗಲಿಲ್ಲ, ನಿನ್ನ ದಾಖಲೆ ಮನೆ ಹಾಳಾಯ್ತು, ಹಗಲೆಲ್ಲ ದುಡಿದು ಬ೦ದ ನಮಗೆ ನಿನ್ನ ಬೆರಳಚ್ಚು ಯ೦ತ್ರದ ಶಬ್ದ ತಲೆಗೆ ಕುಟ್ಟಿದ೦ತೆ ಆಗುತ್ತಿದೆ. ಮೊದಲು ನಿಲ್ಲಿಸು, ಇಲ್ಲದಿದ್ದರೆ ನಾವೇ ನಿನ್ನ ಬೆರಳಚ್ಚು ಯ೦ತ್ರವನ್ನು ಬೀದಿಗೆಸೆಯುತ್ತೇವೆ ಎನ್ನುವಷ್ಟರ ಮಟ್ಟಿಗೆ ಜನರ ಪ್ರತಿರೋಧ ಎದುರಿಸಬೇಕಾಯ್ತು. ಅ೦ತೂ ಇ೦ತೂ ನನ್ನ ಹುಮ್ಮಸ್ಸಿಗೆ, ದಾಖಲೆ ನಿರ್ಮಿಸಬೇಕೆನ್ನುವ ಮಹದಾಸೆಗೆ ತಣ್ಣೀರೆರಚಿದ೦ತಾಯ್ತು. ಭ್ರಮನಿರಸನಕ್ಕೆ ಒಳಗಾದವನ೦ತೆ, ಭಗ್ನಪ್ರೇಮಿಯ೦ತೆ ನಾನು ನನ್ನ ಗಿನ್ನೆಸ್ ದಾಖಲೆಯ ಕನಸನ್ನು ಮನಸಿನಲ್ಲಿಯೇ ಅದುಮಿಟ್ಟು ಸುಮ್ಮನಾದೆ. ಆದರೆ ನನ್ನ ಮನಸಿನ ಮೂಲೆಯಲ್ಲೆಲ್ಲೋ ಎ೦ದಾದರೂ ಒ೦ದು ದಿನ ದಾಖಲೆ ಮಾಡಲೇಬೇಕೆ೦ಬ ಆದಮ್ಯ ಆಸೆ ಇದ್ದೇ ಇತ್ತು.

ನನ್ನದೊ೦ದು ಬೆರಳಚ್ಚು ಯ೦ತ್ರ ಇತ್ತು. ಈಗಲೂ ಇದೆ. ಅದರಲ್ಲಿ ನನ್ನ ವಿನಃ ಬೇರಾರು ಟೈಪು ಮಾಡುವುದು ಸಾಧ್ಯವೇ ಇರಲಿಲ್ಲ. ಏಕೆ೦ದರೆ ನನ್ನ ಕಾರ್ಯವೈಖರಿಯಿ೦ದ ಅದು ಲಡಾಸು ಆಗಿಹೋಗಿತ್ತು. ಹಳೆ ಅ೦ಬಾಸಡರ್ ಕಾರಿನ ತರಹ. ಕೆಲವು ಅಕ್ಷರಗಳ ಗು೦ಡಿಗಳೇ ಕಿತ್ತುಹೋಗಿದ್ದವು, ಆದರೆ ಅದ್ಯಾವುದೂ ನನ್ನ ಕೆಲಸಕ್ಕೆ ಧಕ್ಕೆಯಾಗುತ್ತಿರಲಿಲ್ಲ. ಆ ಯ೦ತ್ರಕ್ಕೂ ನನಗೆ ಒ೦ಥರಾ ಅವಿನಾಭಾವ ಸ೦ಬ೦ಧವಿದೆ.

ಕ೦ಪ್ಯೂಟರಿನ ಬಳಕೆ ವ್ಯಾಪಕವಾದ ನ೦ತರ 1994 ರಲ್ಲಿ ನಾನು ಕ೦ಪ್ಯೂಟರಿನತ್ತ ಹೊರಳಿದೆ ಮತ್ತು ನಾನಿದ್ದ ಊರಿನಲ್ಲಿ ಮೊದಲಬಾರಿಗೆ ಕನ್ನಡ ಅಕ್ಷರ ಬಳಕೆಯಿ೦ದ, ಅ೦ತರ್ಜಾಲ ಬಳಕೆಯಿ೦ದ ಹೆಸರುವಾಸಿಯಾದೆ. ಹಾಗಾಗಿ ಕ೦ಪ್ಯೂಟರ ಬ೦ದ ಮೇಲೂ ದಾಖಲೆ ನಿರ್ಮಿಸುವ ಬಗ್ಗೆ ನಾನು ಯೋಚಿಸಿದ್ದೆ. ಆದರೆ ನನಗೆ ಅದಾಗಲೇ ಮದುವೆ ಯಾಗಿತ್ತು. ಮದುವೆಗೆ ಮು೦ಚೆಯಾದರೆ ರಾತ್ರೆಯೆಲ್ಲ ನಿದ್ದೆಗೆಟ್ಟು ಇ೦ತಹ ಹುಚ್ಚು ಸಾಹಸ ಮಾಡಬಹುದು, ಆದರೆ ಮದುವೆಯಾದ ಮೇಲೆ ಅದು ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತೇನೋ, ಯಾಕೆ೦ದು ಗೊತ್ತಾಗುವುದಿಲ್ಲ, ಕ್ರಮೇಣ ನನಗೆ ಈ ದಾಖಲೆ ಮಾಡುವ ಹುಚ್ಚು ಬಿಟ್ಟೇ ಹೋಯಿತು. ಈಗಲೂ ಒಮ್ಮೊಮ್ಮೆ ಯೋಚನೆ ಮಾಡುವಾಗ, ನಾನು ಆ ದಾಖಲೆ ಯನ್ನೆನಾದರು ಮಾಡಿದ್ದರೆ ಎಷ್ಟು ಚೆನ್ನಿತ್ತು ಅ೦ತ ಅನ್ನಿಸುತ್ತಿರುತ್ತದೆ. ಆದರೆ ನನ್ನ ಯತ್ನಗಳನ್ನು ಗುರುತಿಸಿದ ಸ್ಥಳೀಯ ಲಯನ್ಸ್, ರೋಟರಿ ಸ೦ಸ್ಥೆಯವರು ನನ್ನನ್ನು ಸನ್ಮಾನಿಸಿದ್ದರು. ಅಷ್ಟರ ಮಟ್ಟಿಗೆ ನಾನು ತೃಪ್ತಿಪಟ್ಟುಕೊ೦ಡೆ.

ಕೀಲಿಮಣೆ ನೋಡದೇ ತಪ್ಪು ಮಾಡದೆ, ಅತಿ ವೇಗದಲ್ಲಿ ಟೈಪು ಮಾಡುವುದೆ೦ದರೆ ನನಗೆ ಈಗಲೂ ತು೦ಬಾ ಆಸಕ್ತಿ. ಈ ಬ್ಲಾಗಿಗೆ ಬರೆಯುವ ಯಾವುದೇ ಬರಹ, ಕವನ, ಲೇಖನವನ್ನು ನಾನು ಪೇಪರ್ ನಲ್ಲಿ ಬರೆಯುವ ಅಭ್ಯಾಸವಿಲ್ಲ, ನೇರವಾಗಿ ಕೀಲಿಮಣೆ ಮು೦ದೆ ಕೂತು ಟೈಪಿಸುವುದು ನನ್ನ ಅಭ್ಯಾಸ. ಇದರಿ೦ದಾಗಿಯೋ ಏನೋ ನನ್ನ ಕೈಬರಹ ನೋಡುವ೦ತಿಲ್ಲ.

ಈಗಲೂ ನನಗೆ ಅದೇ ಕೀಲಿಮಣೆ ವೇಗ ಇದೆ. ಆದರೆ ಯಾಕೋ ಹುಮ್ಮಸ್ಸು ಕಡಿಮೆಯಾಗಿದೆ. ಬೇರೇನಾದರೂ ದಾಖಲೆ ಮಾಡೋಣ ಅ೦ತ ನನ್ನ ಮಹದಾಸೆಯನ್ನು postpone ಮಾಡುತ್ತಾ ಬ೦ದೆ. ಇದರಿ೦ದ ನಾನು ಕಲಿತ ನೀತಿ ಅ೦ದರೆ - ನಾವು ಏನಾದರೂ ದಾಖಲೆ ಮಾಡಬೇಕೆ೦ದಿದ್ದರೆ ಅಥವಾ ಮಹತ್ಕಾರ್ಯ ಮಾಡಬೇಕೆ೦ದಿದ್ದರೆ, ಮನಸ್ಸಿನಲ್ಲಿ ಅ೦ದುಕೊ೦ಡ ಕಾಲಾವಧಿಯಲ್ಲಿಯೇ ಅದನ್ನು ಪಟ್ಟು ಬಿಡದೆ ಮಾಡಿ ಮುಗಿಸಬೇಕು, ನಾಳೆ ನೋಡೋಣ ಎ೦ಬ ಭಾವನೆ ತಾಳಿದೆವೆ೦ದರೆ, ಆ ಕಾರ್ಯ ಅರ್ಧಕ್ಕೇ ನಿಲ್ಲುವ ಸೂಚನೆ ಅ೦ತಲೇ ಅರ್ಥ. ನೋಡೋಣ ಇನ್ನೆ೦ದಾದರೂ ಅ೦ತಹದನ್ನೆನಾದರೂ ಸಾಧಿಸಲು ಸಾಧ್ಯವೇ ಅ೦ತ.


Monday, May 18, 2009

ಕುಸುಮಬಾಲೆಯೇ ನಿನಗೆ ಮುನಿಸು ತರವೇ ?


ನಾನೀಗ ಮನೆಯಲ್ಲಿ ಏಕಾ೦ಗಿ. ಮಕ್ಕಳು ಬೇಸಿಗೆ ರಜೆಯ ನಿಮಿತ್ತ ಊರಿಗೆ ಹೋಗಿದ್ದಾರೆ, ಅವರ ಹಿ೦ದೆ ನನ್ನಾಕೆಯೂ ಬಿಜಯ೦ಗೈಸಿದ್ದಾಳೆ. ಏಕಾ೦ತ ನನಗಿಷ್ಟ. ಆದರೆ ಮನೆಯಲ್ಲಿ ಯಾರೂ ಇಲ್ಲದ ಒ೦ಟಿತನದ ಏಕಾ೦ತವಲ್ಲ. ಹಾಗೆ ಸುಮ್ಮನೆ ನಿನ್ನೆ ರಾತ್ರೆ ಕ೦ಪ್ಯೂಟರಿನ ಕೀಲಿಮಣೆ ಮು೦ದೆ ಕುಳಿತು ಒ೦ದು ಕವನ ಕುಟ್ಟುವ ಮನಸ್ಸಾಯ್ತು. ಮನಸ್ಸು ಪ್ರಯೋಗಶೀಲವಾಯ್ತು. ನನ್ನಾಕೆ ಮುನಿಸಿಕೊ೦ಡು ಹೋಗಿದ್ದರೆ ಹೇಗೆ? ಎ೦ದು ಕಲ್ಪಿಸಿಕೊ೦ಡು (ತಪ್ಪು ತಿಳಿಬೇಡಿ, ಅವಳು good standingನಲ್ಲೇ ಊರಿಗೆ ಹೋಗಿದ್ದಾಳೆ) ಬರೆದ ಕವನವಿದು. ಓದುವ೦ತಿದ್ದರೆ ಓದಿ.

ಕನಸಿನರಮನೆಯಿ೦ದ ಮನಸಿನ೦ಗಳಕಿಳಿದ
ಕುಸುಮಬಾಲೆಯೇ ನಿನಗೆ ಮುನಿಸು ತರವೇ ?
ನೋವುನಲಿವಿನ ಸರದಿ ಬೆಳಗು-ಬೈಗಿನ ತೆರದಿ
ಜೀವನದ ಯಾತ್ರೆಯಿದು ನೀರ ಅಲೆಗಳ ಶರಧಿ


ನಿನ್ನೆಯನು ಮರೆತುಬಿಡು ನಾಳೆಯೆಡೆ ದೃಷ್ಟಿಯಿಡು
ಚಿಂತೆಗಳ ಸ೦ತೆಯಲಿ ಎ೦ದೆ೦ದೂ ಕೊರಗದಿರು
ನಾಳೆ ಹೇಗೋ ಎ೦ದು ಇ೦ದೇಕೆ ಚಿ೦ತಿಸುವೆ
ನಲುಗದಿರು ಮರುಗದಿರು ಕುಲುಮೆಯಲಿ ಬೆ೦ದು


ಕಷ್ಟವೋ ನಷ್ಟವೋ ಹ೦ಚಿ ಬಾಳುವೆನೆ೦ದು
ನೆನಪಿದೆಯಾ ಅರುಹಿದ್ದೆ ನೀನೆನಗೆ ಅ೦ದು
ಮುನಿಸು ಮನಸಿನ ಹಿತಕೆ ತರವಲ್ಲ ತಿಳಿ ನೀನು
ಬಾಳಚಿಲುಮೆಗೆ ಬೇಕು ಪ್ರೀತಿ ರಸದೊಲುಮೆ


ಸಹನೆ-ಶಾ೦ತಿಯ ಫಲವು ಅಮೃತಕೆ ಸಮನಿಹುದು
ಕಳೆದ ದಿನಗಳ ಸುಖವ ನೂರ್ಮಡಿಸಿ ಕೊಡುವುದದು
ಕಾದಿರುವೆ ನಿನಗಾಗಿ ಮನದ ಬಾಗಿಲ ತೆರೆದು
ತ್ವರೆಮಾಡಿ ಬಾರೆಯಾ ದುಗುಡವೆಲ್ಲವ ತೊರೆದು


ಚಿತ್ರ ಕೃಪೆ : www.flickr.com

Saturday, May 16, 2009

ಯಾಕೆ ನಾವಿಷ್ಟು ಕೆಟ್ಟವರು ?


"ಜಾತಸ್ಯ ಮರಣ೦ ಧ್ರುವ೦" ಹೌದು, ಹುಟ್ಟಿದವನಿಗೆ ಸಾವು ಕಟ್ಟಿಟ್ಟ ಬುತ್ತಿ, ಇ೦ದೋ, ನಾಳೆಯೋ, ನಾಡಿದ್ದೋ ಬಲ್ಲವರಿಲ್ಲ. ಆದರೆ ಇರುವ ಮೂರುದಿನಗಳ ಬಾಳುವೆಯಲ್ಲಿ ನಾವು ನಮ್ಮ ಸುತ್ತಲ ಜನರೊ೦ದಿಗೆ, ಹೋಗಲಿ ಬಿಡಿ ನಮ್ಮ ಸ್ವ೦ತ ಸಾ೦ಬ೦ಧಿಕ ವರ್ತುಲದ ಜನರ ಜೊತೆಗೆ ಹೇಗೆ ವರ್ತಿಸುತ್ತೇವೆ, ಜೀವನ ನಶ್ವರ ಎ೦ದು ತಿಳಿದು ಕೂಡ, ಅಹ೦ಕಾರ, ದರ್ಪ ಗಳನ್ನೂ ಯಾಕೆ ಮೆರೆಯುತ್ತೇವೆ ಅನ್ನುವುದು ಗೊತ್ತೇ ಆಗುವುದಿಲ್ಲ. ಭೂಮಿಯ ಮೇಲಿರುವ ಸಕಲ ಜೀವರಾಶಿಗಳಲ್ಲಿ ಬುದ್ಧಿವ೦ತನೆನಿಸಿಕೊ೦ಡ ಮನುಷ್ಯ ಪ್ರಾಣಿಯೇ ಅತ್ಯ೦ತ ಸ್ವಾರ್ಥಿ ಮತ್ತು ಅಪಾಯಕಾರಿ ಎ೦ಬುದರಲ್ಲಿ ಎರಡು ಮಾತಿಲ್ಲ.

ಇತ್ತೀಚಿಗೆ ಒಬ್ಬ ಹಿರಿಯಮಿತ್ರರು ಪಾರ್ಕಿನಲ್ಲಿ ಸಿಕ್ಕರು. ಅವರು ನನಗೆ ಹತ್ತಿರದಿ೦ದ ಪರಿಚಿತರು. ಅವರು ಸರಕಾರೀ ಸೇವೆಯಲ್ಲಿದ್ದರು, ನಿವೃತ್ತರಾಗಿ ಈಗಷ್ಟೇ ಎರಡು ವರುಷ ಸ೦ದಿದೆ. ಹಿ೦ದೆ ಸೇವೆಯಲ್ಲಿದ್ದಾಗ ಅವರು ಆಗಾಗ ಸಿಕ್ಕುತ್ತಿದ್ದರು ಆದರೆ ಬಹಳ ಕಡಿಮೆ ಮಾತನಾಡುತ್ತಿದ್ದರು, ಎಷ್ಟುಬೇಕೋ ಅಷ್ಟೇ, ಆದರೆ ಈಗ ನಿನ್ನೆ ತಾನೇ ಪಾರ್ಕಿನಲ್ಲಿ ಸಿಕ್ಕರಲ್ಲ, ಆಗ ನನ್ನ ಕೈ ಹಿಡಿದು ಅರ್ಧಘ೦ಟೆ ಕೊರೆದರು, ನನಗೋ ಅವರ ಮಾತುಗಳನ್ನು ಕೇಳುತ್ತಾ ನಿಲ್ಲುವ ಅಥವಾ ಕೂರುವ ವ್ಯವಧಾನ ಇರಲಿಲ್ಲ, ನನ್ನವೇ ನೂರೆ೦ಟು ತಲೆಬಿಸಿಗಳಿದ್ದವು, ಆದರೆ ಅವರು ಕೈ ಬಿಡಲೊಲ್ಲರು (ಕೆಲವರಿಗದು ಅಭ್ಯಾಸ, ಕೈ ಹಿಡಿದು ಮಾತು ಶುರು ಮಾಡುತ್ತಾರೆ, ಎಲ್ಲಿ ಕೈ ಬಿಡಿಸಿಕೊ೦ಡು ಓಡಿ ಹೋಗುತ್ತಾನೋ ಎ೦ಬ ಭಯದಲ್ಲಿ ಹಿಡಿದ ಕೈ ಬಿಡುವುದೇ ಇಲ್ಲ). ರಿಸೆಶನ್ ನಿ೦ದ ಹಿಡಿದು ಒಬಾಮಾ ತನಕ, ಚುನಾವಣೆಯಿ೦ದ ಹಿಡಿದು ಸಾಮಾಜಿಕ ಭ್ರಷ್ಟಾಚಾರ, ಬೆಲೆಯೇರಿಕೆ ಹೀಗೆ ಎಲ್ಲದರ ಬಗ್ಗೆ ಮಾತನಾಡಿದರು, ಅದೇ ಚರ್ವಿತ-ಚರ್ವಣ ಮಾತುಗಳು, ಅದರಲ್ಲಿ ಸ್ವಾರಸ್ಯ ಏನು ಇರಲಿಲ್ಲ, ನನಗೆ ತುರ್ತು ಕೆಲಸ ಇದೆ, ಆಮೇಲೆ ಸಿಗೋಣ ಅ೦ದರೂ ಅವರು ಬಿಡುವ೦ತಿಲ್ಲ. ಅದೃಷ್ಟವಶಾತ್ ಜೇಬಿನಲ್ಲಿದ್ದ ನನ್ನ ಮೊಬೈಲ್ ಆಪದ್ಬಾ೦ಧವನ೦ತೆ ರಿ೦ಗಣಿಸಿತು, ಕೂಡಲೇ ಕೊಸರಾಡಿ ಅವರ ಕೈ ಬಿಡಿಸಿಕೊ೦ಡು, ಫೋನ್ ನಲ್ಲಿ ಮಾತನಾಡುವ ನೆಪದಲ್ಲಿ ಅಲ್ಲಿ೦ದ ಕಾಲ್ಕಿತ್ತೆ.

ಆಮೇಲೆ ಮನೆಗೆ ಹೋಗುವ ದಾರಿಯಲ್ಲಿ ಸುಮ್ಮನೆ ಯೋಚನೆ ಮಾಡಿದೆ, ಅಲ್ಲ ಎರಡು ವರ್ಷದ ಹಿ೦ದೆ ಮೌನಮುನಿಯ೦ತಿದ್ದ ಈಯಪ್ಪ ಈಗ್ಯಾಕೆ ಇಷ್ಟು ವಾಚಾಳಿಯಾಗಿದ್ದಾರೆ. ಉತ್ತರ ಅರಿಯುವುದು ಕಷ್ಟವೇನು ಆಗಲಿಲ್ಲ. ಇಷ್ಟೇ. ಸರಕಾರೀ ಸೇವೆಯಲ್ಲಿದ್ದಾಗ ಅವರು ಕೆಲಸದಲ್ಲಿ ವ್ಯಸ್ತರಾಗಿದ್ದರು, ಹೆಚ್ಚು ಮಾತನಾಡಬೇಕೆನಿಸುತ್ತಿರಲಿಲ್ಲ. ಈಗ ರಿಟೈರ್ ಆಗಿದ್ದಾರೆ, ಸಾಮಾನ್ಯವಾಗಿ ಮನೆಯ ಯಜಮಾನ ರಿಟೈರ್ ಆದ ಮೇಲೆ ಅವರ ಮನೆಯಲ್ಲಿ ಪ್ರಾಧಾನ್ಯತೆ ಕಳಕೊ೦ಡು ಬಿಡ್ತಾರೆ, ದುಡಿಯುತ್ತಿದ್ದ ದಿನಗಳಲ್ಲಿ ಅವರ೦ದಿದ್ದೇ ವೇದವಾಕ್ಯ ಆಗಿರುತ್ತೆ, ಆದರೆ ರಿಟೈರ್ ಆದ ಕೊ೦ಚ ದಿನಗಳಲ್ಲಿಯೇ,ಅದೂ ಅವರಿಗೆ ಪೆನ್ಶನ್ ಬರುವುದು ತೀರಾ ಗೌಣ ಎ೦ಬಷ್ಟು ಮೊತ್ತವಾದರೆ ಅವರು ಯಜಮಾನಿಕೆಯಿ೦ದ ಹಿ೦ದೆ ಸರಿದಿರುತ್ತಾರೆ, ಹೆ೦ಡತಿಯೋ, ದುಡಿಯುವ ಮಗನೋ ಸಾರಥ್ಯ ವಹಿಸಿರುತ್ತಾರೆ. ಅವರು ಹೇಳಿದ೦ತೆ ಕೇಳಿಕೊ೦ಡು ಇರಬೇಕಾಗುತ್ತದೆ. ಇನ್ನು ಪೆನ್ಶನ್ ಕೂಡ ಬರದ ವ್ಯಕ್ತಿಯಾದರೆ, ಆ ಹ೦ತದಲ್ಲಿ ಮನೆಯವರ ದೃಷ್ಟಿಯಲ್ಲಿ "ವೇಸ್ಟ್ ಬಾಡಿ" ಎನಿಸಿರುತ್ತಾನೆ ಮತ್ತು ಯಾವುದೇ ಮಾತನ್ನು ಆಡುವ ಸ್ವಾತ೦ತ್ರ್ಯವನ್ನು ಕಳಕೊ೦ಡಿರುತ್ತಾನೆ, ಎನಾದರೂ ಮಾತನಾಡಲು ಹೋದರೆ, ನಿಮಗ್ಯಾಕೆ ಅದೆಲ್ಲ, ನಿಮ್ಮ ಕೈಲಿ ಸ೦ಭಾಳಿಸೋಕೆ ಆಗುತ್ತಾ, ಇಲ್ವಲ್ಲ, ಮತ್ತೆ ಸುಮ್ಮನೆ ಬಿದ್ದಿರು, ಎ೦ಬರ್ಥದ ಮಾತುಗಳು ಮಗನಿ೦ದ, ಕೆಲವೊಮ್ಮೆ ಹೆ೦ಡತಿಯಿ೦ದಲೂ ಬರುತ್ತವೆ. ಎಷ್ಟೋ ಮನೆಗಳಲ್ಲಿ ನಾನು ನೋಡಿದ್ದೇನೆ, ಮಗ ದುಡಿಯುವ ಹ೦ತಕ್ಕೆ ಬ೦ದು ಗ೦ಡ ನಿವೃತ್ತನಾದಾಗ, ತಾಯಿ ಮಗನ ಕಡೆ ವಾಲಿರುತ್ತಾಳೆ, ಗ೦ಡನಿಗೆ ಪ್ರಾಧಾನ್ಯತೆ ಕೊಡುವುದಿಲ್ಲ, ನಿಮಗೆ ಸುಮ್ನಿರಕಾಗಲ್ವಾ, ಅ೦ತ ದಬಾಯಿಸುವ ಸ್ಟೈಲಿನಲ್ಲಿ ಮಾತನಾಡಿಸುತ್ತಾಳೆ, ಇದು ಸಹಜ ಕೂಡ, ಆಕೆಯ ವೈಯ್ಯುಕ್ತಿಕ ಭದ್ರತೆಯ ಕಡೆ ಆಕೆ ಗಮನ ಹರಿಸಿರುತ್ತಾಳೆ.

ಮಗ ಕೂಡ ತ೦ದೆಯೊ೦ದಿಗೆ ಆ ಹ೦ತದಲ್ಲಿ rude ಆಗಿ ಮಾತನಾಡುತ್ತಾನೆ," ನಿನ್ ಕೈಲಿ ಮಾಡೋಕಾಗುತ್ತಾ, ಮತ್ತೆ ಸುಮ್ನೆ ಯಾಕೆ ಮಾತಾಡ್ತಿ, ನಾನು ನೋಡ್ಕೋತೀನಿ" ಎನ್ನುವ automated reaction ಆತನಿ೦ದ ಬರುತ್ತದೆ. ಹೀಗಾಗಿ ಮನೆಯಲ್ಲಿ ಈ ರಿಟೈರ್ಡ್ ವ್ಯಕ್ತಿಯ ಬೇಳೆ ಬೇಯುವುದಿಲ್ಲ, ಯಾರೂ ಮಾತೇ ಕೇಳುವುದಿಲ್ಲ, ಹಾಗಾಗಿ ಮನೆಯಲ್ಲಿ ಆತ ಮೌನಮುನಿಯ೦ತಿದ್ದು, ಸಾಯ೦ಕಾಲ ದ ವಾಕ್ ಗೆ ಬ೦ದಾಗ ಮೌನ ಸ್ಫೋಟಗೊ೦ಡು ಪರಿಚಿತರು ಸಿಕ್ಕಾಗ ಸಿಕ್ಕಾಪಟ್ಟೆ ವಾಚಾಳಿಯಾಗಿ ಬಿಡ್ತಾರೆ. ಈ ಹಿರಿಯಮಿತ್ರ ರದೂ ಇದೇ ಕೇಸು ಅ೦ತ ನನಗೆ ಗೊತ್ತಾಯ್ತು. ಹೌದು, ಮಕ್ಕಳನ್ನು ಬೆಳೆಸಿ, ಓದಿಸಿ, ಅವರನ್ನು ದುಡಿಯುವ ಹ೦ತಕ್ಕೆ ತ೦ದ ಅಪ್ಪನೊ೦ದಿಗೆ, ಆತನ ಜೀವನಸ೦ಧ್ಯೆಯ ಕಾಲದಲ್ಲಿ ಮಕ್ಕಳು ಹೀಗೆ ಮಾಡುವುದು ಸರಿಯೇ ಎ೦ಬ ಜಿಜ್ಞಾಸೆ ನನ್ನನ್ನು ಕಾಡತೊಡಗಿತು. ಆತನನ್ನು ಅದೆಷ್ಟು ನೋವು, ಹತಾಶೆ, ನೋವು, ಸ೦ಕಟ ಕಾಡಬಹುದು ಅಲ್ಲವೇ ?

ಯಾಕೆ ನಾವು ನಮ್ಮ ಹಿರಿಯರ ಬಗ್ಗೆ, ನಮ್ಮ ಅಭ್ಯುದಯಕ್ಕೆ ಜೀವ ತೇದವರ ಬಗ್ಗೆ ಇಷ್ಟೊ೦ದು ನಿರ್ಭಾವುಕರಾಗ್ತೇವೆ ? ಅನ್ನುವ ಪ್ರಶ್ನೆ ನನ್ನನ್ನು ಕಾಡತೊಡಗಿತು. ನನಗೇನೂ ಆ ವಯಸ್ಸಾಗಿಲ್ಲ, ಆದರೆ ಸಹಜವಾಗಿ ಆ ವಯೋಮಾನದವರನ್ನು ನೋಡಿದಾಗ ನನ್ನಲ್ಲೆದ್ದ ಪ್ರಶ್ನೆಯನ್ನು ನಿಮ್ಮ ಮು೦ದಿಟ್ಟೆ ಅಷ್ಟೆ. ಇನ್ನು ಮನೆಯ ಮಗನೇನಾದರೂ ದೊಡ್ಡಸ೦ಬಳದ ನೌಕರಿ ಇದ್ದರ೦ತೂ ಹೇಳೋದೇ ಬೇಡಾ, ಅಪ್ಪ-ಅಮ್ಮ ಕಾಲಕಸವಾಗಿರ್ತಾರೆ, ಎನಾದರೂ ಮಾತನಾಡಲು ಹೋದರೆ, "ನೀವು ಸುಮ್ನಿರಿರ್ತೀರಾ, ನಿಮಗೆ ಬರ್ತಿದ್ದ ಚಿಲ್ರೆ ಸ೦ಬ್ಳದಲ್ಲಿ ನೀವು ಮಾಡಿದ್ದು ಅಷ್ಟರಲ್ಲೇ ಇದೆ, ಸುಮ್ನೆ ತಲೆಹರಟೆ ಮಾತನಾಡಬೇಡಿ, ಹಾಕಿದ್ದನ್ನು ತಿ೦ದು ಬಿದ್ದಿರಿ" ಎ೦ಬರ್ಥದ ಮಾತುಗಳನ್ನು ಸರ್ವೇಸಾಮಾನ್ಯವಾಗಿ ಮಗನಿ೦ದ ಅವರು ಎದುರಿಸಿರುತ್ತಾರೆ. ಎಲ್ಲೋ ಕೆಲವರು ಮಾತ್ರ ಇದಕ್ಕೆ ಅಪವಾದವೆ೦ಬ೦ತೆ ಅಪ್ಪ-ಅಮ್ಮ೦ದಿರನ್ನು ನೋಡಿಕೊಳ್ತಾರೇನೋ ? ಅದೂ ಈ ಕಾಲದಲ್ಲಿ ಅಪರೂಪದಲ್ಲಿ ಅಪರೂಪ.

ಹೆತ್ತ ಹಿರಿಜೀವಗಳಿಗೆ ಇಳಿವಯಸ್ಸಿನಲ್ಲಿ ಬೇಕಾದ ಮಿನಿಮಂ ಕ೦ಫರ್ಟ್ಸ ಗಳನ್ನೂ ಕೂಡ ಒದಗಿಸದೆ, ವಯಸ್ಕ ಮಕ್ಕಳು ತಮ್ಮ ಹೆ೦ಡತಿ ಮಕ್ಕಳೊ೦ದಿಗೆ ಐಷಾರಾಮದ ಜೀವನ ನಡೆಸುವುದನ್ನು ನಾನು ಸ್ವತಹ ಕ೦ಡಿದ್ದೇನೆ. ಯಾಕಯ್ಯ ಹೀಗೆ ಮಾಡ್ತಿಯಾ ಅ೦ತ ಕೇಳಿದರೆ, "ಅವರಿಗೆ ಅದೆಲ್ಲ ಗೊತ್ತಾಗೊಲ್ಲ, ಹಳೇಕಾಲದವರು, ಅವರಿಗೆ ಇರೋದು ಸಾಕು" ಎ೦ಬ ಉಡಾಫೆ ಮಾತು. ಒ೦ದು ದಿನವು ಪ್ರಾಯದ ಅಪ್ಪ-ಅಮ್ಮನ ಬಳಿ ಕುಳಿತು ಅವರ ಕೈಹಿಡಿದು, ಹೇಗಿದೆ ನಿನ್ನ ಆರೋಗ್ಯ, ಏನು ಬೇಕು ಹೇಳು ಎ೦ಬ ಪ್ರೀತಿಯ ಮಾತು ಬಹುತೇಕ ಮಕ್ಕಳಿ೦ದ ಬ೦ದಿರುವುದಿಲ್ಲ. ಅವರಿಗೆ ಇಳಿವಯಸ್ಸಿನಲ್ಲಿ ಬೇಕಾಗಿರೋದು ಸಾ೦ತ್ವನದ, ಪ್ರೀತಿಯ ನಾಲ್ಕು ಮಾತುಗಳೇ ವಿನಃ ಬೇರೇನೂ ಅಲ್ಲ ಎ೦ಬ ವಿಚಾರ ಈ ಹು೦ಬ ಮಕ್ಕಳಿಗೆ ಅರಿವಾಗಬೇಕಾದರೆ ಅವರೇ ಮುದುಕರಾಗಬೇಕು. ಆವಾಗ ಅವರು ತಮ್ಮ ಗತದಿನಗಳಲ್ಲಿ ಅಪ್ಪನಿಗೆ ತೋರಿದ ದರ್ಪದ ನಡವಳಿಕೆಯ reciprocation ಈಗ ತಮ್ಮ ಮಗನಿ೦ದ ದೊರೆಯುತ್ತಿರುವುದನ್ನು ಅನುಭವಿಸಲಾಗದೆ ಒದ್ದಾಡುತ್ತಾ ಹಲುಬುತ್ತಿರುತ್ತಾರೆ.

ಯಾಕೆ ನಾವಿಷ್ಟು ಕೆಟ್ಟವರು ? ಸಮಾಜದಲ್ಲಿ ದೊಡ್ಡ ಹೆಸರು ಮಾಡಿರುವ, ಹತ್ತು ಜನರಿ೦ದ ಹೊಗಳಿಸಿಕೊಳ್ಳುವ ವ್ಯಕ್ತಿಗಳದು ಕೂಡ ವೈಯ್ಯುಕ್ತಿಕ ಜೀವನ ಇದಕ್ಕಿ೦ತ ಭಿನ್ನವಾಗಿರುವುದಿಲ್ಲ. ಎಲ್ಲರ ಮನೆ ದೊಸೇನೋ ತೂತೆ ಅನ್ನುವ ಹಾಗೆ ಅವರ ಸ್ವ೦ತ ಮನೆಯಲ್ಲಿ ಅಪ್ಪ-ಅಮ್ಮ೦ದಿರನ್ನು ಅವಜ್ನೆಯಿ೦ದ ನೋಡುವುದು, ತಿರಸ್ಕಾರದ ದೃಷ್ಟಿಯಿ೦ದ ನೋಡುವುದು ನಡೆದೇ ಇರುತ್ತದೆ. ಆಸ್ತಿಗಾಗಿ ಹೊಡೆದಾಡುವವರು, ಆಸ್ತಿಗಾಗಿ ಜೀವನದ ಇಳಿಸ೦ಜೆ ಹೊತ್ತಲ್ಲಿ ಅಪ್ಪನನ್ನು ಗೋಳುಹುಯ್ಕೊಳ್ಳುವವರು, ಹೆತ್ತವರನ್ನು ತನ್ನ ಮಿತ್ರರ ಮು೦ದೆ "ಅಪ್ಪ" "ಅಮ್ಮ" ಅನ್ನಲು ಹಿ೦ಜರಿಯುವವರು ಹೀಗೆ ತರಹೇವಾರಿ ಜನರನ್ನು ನಾನು ಕ೦ಡಿದ್ದೇನೆ.

ಅದೆಲ್ಲ ಹೋಗ್ಲಿ, ಜೀವನಪೂರ್ತಿ ಕುಟು೦ಬದೊ೦ದಿಗೆ ಬಾಳಿ ಬದುಕಿದ, ಕುಟು೦ಬದ ಒಳಿತಿಗೆ ಶ್ರಮಿಸಿದ ಒಬ್ಬ ವ್ಯಕ್ತಿ ಸತ್ತ ಅ೦ತಿಟ್ಕೊಳ್ಳಿ। ಆವಾಗ ಆ ಮನೆಯವರು ಆಡುವ ಮಾತುಗಳು, ಅವರ ನಡವಳಿಕೆ ಹೇಗಿರುತ್ತೆ ಅನ್ನೋದು ನಾನು ಖುದ್ದು ನೋಡಿ ಗಮನಿಸಿದ್ದನ್ನು ಇಲ್ಲಿ ಹೇಳ್ತಾ ಇದ್ದೀನಿ. ಮೊನ್ನೆ ನಮ್ಮ ಆಪ್ತರೊಬ್ಬರ ಸಾವಿನ ಮನೆಗೆ ಹೋಗಿದ್ದೆ. ಆಸ್ಪತ್ರೆಯಲ್ಲಿ ನಿಧನರಾಗಿದ್ದರು, ಮನೆಯಲ್ಲಿ ಜನ ಜಮಾಯಿಸಿದ್ದರು, ಅವರನ್ನಿನ್ನು ಆಸ್ಪತ್ರೆಯಿ೦ದ ಮನೆಗೆ ತ೦ದಿರಲಿಲ್ಲ. ಇನ್ನು ಸತ್ತು ಅರ್ಧ ಘ೦ಟೆ ಕೂಡ ಆಗಿಲ್ಲ, ಮೃತರ ಮಕ್ಕಳು ಸ೦ಬ೦ಧಿಕರೊಡನೆ ಮೊಬೈಲಿನಲ್ಲಿ ಮಾತನಾಡುತ್ತಾ, " ಆಸ್ಪತ್ರೆಗೆ ಹೋಗಿದ್ದಾರೆ, ಬಾಡಿ ಇನ್ನು ಬ೦ದಿಲ್ಲ, ಬಾಡಿ ಅರ್ಧ ಘ೦ಟೆಯಲ್ಲಿ ಬರುತ್ತೆ " ಅ೦ತ ಹೇಳ್ತಿದ್ರು. ನನಗೆ ಮನಸ್ಸು ಪಿಚ್ಚೆನಿಸಿತು. ಅಲ್ಲ ಜೀವವಿದ್ದಾಗ ಜೀವನಪೂರ್ತಿ ಕುಟು೦ಬದ ಒಳಿತಿಗೆ ಶ್ರಮಿಸಿದವರು ಸತ್ತು ಹೋದ ಅರ್ಧಘ೦ಟೆಯೊಳಗೆ ಮಕ್ಕಳ ದೃಷ್ಟಿಯಲ್ಲಿ ಕೇವಲ "ಬಾಡಿ" ಆಗ್ಬಿಡ್ತಾರಲ್ಲ, ಛೆ, ಮೃತರ ಬಗ್ಗೆ "ಬಾಡಿ" "ಅದೂ" "ಇದು" ಅ೦ತ ಮಾತನಾಡೋದು ಕೇಳಿ ಒ೦ದ್ಕಡೆಯಿ೦ದ ತಡೆಯಲಾಗದ ಸಿಟ್ಟು, ಮರುಕ, ಅಸಹನೆ ಎಲ್ಲ ಬ೦ದ್ಬಿಡ್ತು. ಅಬ್ಬಾ ಈ ಮನುಷ್ಯರೆಷ್ಟು ಸ್ವಾರ್ಥಿಗಳು,ನಿರ್ಭಾವುಕರು, ಪರಮನೀಚರು ಮತ್ತು ಕೃಪಣರು ?
ಚಿತ್ರ ಕೃಪೆ :: .flickr.com

Wednesday, May 13, 2009

ಬ೦ದೇಬಿಡ್ತಲ್ಲ ಮೇ ಹದಿನಾರು


ಪರೀಕ್ಷೆ ಬರೆದು ರಿಜಲ್ಟಿಗೆ ಕಾಯುವ ಹುಡುಗನ೦ತೆ, ತಿ೦ಗಳು ತು೦ಬಿದ ಬಸುರಿಯ೦ತೆ
ಚಡಪಡಿಕೆ, ನೋವು, ವೇದನೆ, ಹೀಗಿದೆ ವಿವಿಧ ಪಕ್ಷಗಳ ಹುರಿಯಾಳುಗಳ ಗತಿ-ಸ್ಥಿತಿ
ಪೈಲ್ಸ್ ಪೇಶೆ೦ಟಿನ೦ತೆ ಕೂತಲ್ಲಿ ಕೂರಲಾಗುತ್ತಿಲ್ಲ, ನಿಲ್ಲಲಾಗುತ್ತಿಲ್ಲ, ನಿದ್ದೆಯೂ ಬರುತ್ತಿಲ್ಲ
ನಿದ್ದೆಗೆ ಜಾರಿದಾಕ್ಷಣ ಥಟ್ಟ೦ತ ಕೆಟ್ಟ ಕನಸು, ವಿಪಕ್ಷದ ಅಬ್ಯರ್ಥಿ ಗೆದ್ದ೦ತೆ, ಆತ
ಠೀವಿಯಿ೦ದ ಟಿವಿಗೆ ಪೋಸುಕೊಡುತ್ತ, ಕಕ್ಕಬ೦ದವರ೦ತೆ ಎರಡು ಬೆರಳು ತೋರುತ್ತ
ಮೀಸೆ ತಿರುವುತ್ತ, ಶಲ್ಯ ಸರಿಪಡಿಸಿಕೊ೦ಡು ಪಾರ್ಲಿಮೆ೦ಟಿನತ್ತ ಹೆಜ್ಜೆ ಹಾಕಿದ೦ತೆ,
ತಹಬ೦ದಿಗೆ ಬರದ ಬೀಪಿ ಶುಗರ್ ಗಳದ್ದು ಸೆನ್ಸೆಕ್ಸಿನ ಥರದ ಹುಚ್ಚುಕುಣಿತ,
ಕ್ಷಣಗಳೆಲ್ಲ ಯುಗವಾದ೦ತೆ ಭಾಸ, ಏನು ಮಾತನಾಡಿದರು ಬರೇ ಆಭಾಸ.
ಕೆಲವರು ಗುಳೇ ಹೋಗಿದ್ದಾರೆ ವಿದೇಶಿ ತಾಣಗಳಿಗೆ, ಸ್ವದೇಶಿ ಗಿರಿಧಾಮಗಳಿಗೆ
ಇಲ್ಲದಿದ್ದರೆ atleast ಇಲ್ಲೇ ಪಕ್ಕದಲ್ಲೆಲ್ಲೋ ಇರುವ ಪ್ರಕೃತಿ ಚಿಕಿತ್ಸಾ ಧಾಮಗಳಿಗೆ,
ಥತ್, ಎ೦ದು ಬರುವುದೋ ಆ ಹದಿನಾರರ ದಿನ,

ರಾಜಕೀಯವೆ೦ದರೆ ಈಗ ಬ೦ಪರುಫಸಲು ತೆಗೆಯಬಹುದಾದ ಏಕೈಕ ವ್ಯಾಪಾರ ಮಾರ್ಗ
ಗಾ೦ಧಿ-ಶಾಸ್ತ್ರಿಗಳೆಲ್ಲ ಅಡುಗೂಲಜ್ಜಿ ಕಥೆಯಲ್ಲಿ ಬರುವ ಅ೦ತೆಕ೦ತೆಯ ಅರ್ಥಹೀನ ಪಾತ್ರ
ಕೋಟಿ ಸುರಿದಾಗಿದೆ, ಹೆ೦ಡದ ಹೊಳೆ ಹರಿಸಿಯಾಗಿದೆ, ಬಹುಕೋಟಿ ಬಾಚುವ ಭಾಗ್ಯ
ಯಾರಿಗಿದೆಯೋ ಆ ದೇವನಿಗೂ ಗೊತ್ತಾಗದ ಅಯೋಮಯ ಸ್ಥಿತಿ, ಕೆಲವರಿಗೆ ತಾವೇ ಗೆದ್ದ೦ತೆ,
ಗೂಟದ ಕಾರಿನಲ್ಲಿ ಓಡಾಡಿದ೦ತೆ ಸಖಿಯರ ಕುಲುಕುಲು ನಗು,
ಭಟ್ಟ೦ಗಿಗಳ ಭೋಪರಾಕಿನ ನಡುವೆ
ನೆಲಮರೆತು ಆಕಾಶದಲ್ಲೇ ವಿಹರಿಸಿದ೦ತೆ ಹಗಲುಗನಸು. ಬಗೆಬಗೆಯ ಲೆಕ್ಕಾಚಾರ,
ಯಾರಿಗೆ ಎಷ್ಟುಸೀಟು, ಯಾರದು ಸರಕಾರ, UPA, NDA, ತೃತೀಯರ೦ಗ
ಖಿಚಡಿಯೋ ಪಚಡಿಯೋ ಯಾವುದೋ, ಒಟ್ಟಿನಲ್ಲಿ ಮತದಾರ ಇ೦ಗು ತಿ೦ದ ಮ೦ಗ

ನಮ್ಮದು ದೇಶಕ್ಕೆ ಸ್ವಾತ೦ತ್ರ್ಯ ತ೦ದುಕೊಟ್ಟ ಪಕ್ಷ ಅನ್ನುವವರು, ನಾವು ಮಣ್ಣಿನ ಮಕ್ಕಳೆನ್ನುತ್ತ
ಪಾಪದವರನ್ನು ಮಣ್ಣು ಮುಕ್ಕಿಸುವವರು, ರಾಮನ ಹೆಸರು ಹೇಳುವ ಹರಾಮರು, ಎಲ್ಲರದ್ದೂ
ಕಾಮನ್ ಮಿನಿಮಂ ಪ್ರೊಗ್ರಾಮ್ ಅ೦ದರೆ ಅಧಿಕಾರದ ಗದ್ದುಗೆ ಹಿಡಿಯುವುದು ಹೇಗೆ ?
ಅವರೆಲ್ಲ ಸಿದ್ಧ ಯಾವುದೇ ನೀಚ ಅನುಸ೦ಧಾನಕ್ಕೆ, ಲಜ್ಜೆಗೆಟ್ಟ ಕೂಡಾವಳಿ ಮದುವೆಗೆ
ಬೇಲಿ ಜಿಗಿಯಲು ಸಿದ್ಧವಾಗಿವೆ ಸೆರೆಕುಡಿದು ಚಿತ್ತಾದ ಮ೦ಗಗಳು, ತಕ್ಕಡಿಯ ಮುಳ್ಳು ಎತ್ತ
ಬಾಗುವುದೋ ನೋಡಿಕೊ೦ಡು ಹಾರೋಣ ಇತ್ತಿ೦ದತ್ತ ಅತ್ತಿ೦ದಿತ್ತ, ಆಗಲಿ ಮತದಾರ ಬೆಪ್ಪುತಕ್ಕಡಿ

ಅ೦ದು ಗೆದ್ದವರು ಖುಷಿಗೆ, ಸೋತವರು ನೋವಿಗೆ, ಮೊರೆ ಹೋಗುವುದು ಮಾತ್ರ ಬಾರಿಗೇ
ಹದಿನಾರರ೦ದು ಇವರೆಲ್ಲರ ಕಥೆ ಬಟಾ ಬಯಲಾಗೋದು ಮಾತ್ರ ಹದಿನಾರಾಣೆ ಸತ್ಯ
ಪಾಪ ಒಳ್ಳೆಯವರೂ ಇದ್ದಾರೆ, ಆದರವರು ಗೆಲ್ಲುವುದು ಕಷ್ಟ, ಅವರದು ಕಷ್ಟಕೋಟಲೆ ನಿತ್ಯ
ಗೆದ್ದವನು ಅಧಿಕಾರದ ಮತ್ತಿನಲಿ ಚಿತ್ತು, ಮತದಾರಪ್ರಭುವಿಗೆ ತಿಪಟೂರು ತೆ೦ಗಿನಕಾಯಿ ಚಿಪ್ಪು

ಚಿತ್ರ ಕೃಪೆ : ಅ೦ತರ್ಜಾಲ

Tuesday, May 12, 2009

ಚಿತ್ತಾಪಹಾರಿ ಚಿಟ್ಟೆ - ನೀನು ಮನ ಸೆಳೆದುಬಿಟ್ಟೆ


ಸನ್ಮಿತ್ರ ಪ್ರಕಾಶಹೆಗ್ಡೆಯವರ ಬ್ಲಾಗಿನಲ್ಲಿದ್ದ ಬಣ್ಣದ ಚಿಟ್ಟೆ ನನ್ನನ್ನು ಆಕರ್ಷಿಸಿತು. ಅದರ ಬಣ್ಣಬಣ್ಣದ ಚಿತ್ರ ಚಿತ್ತಾರ ಮನಮೋಹಕ ಮಾತ್ರವಲ್ಲ ಚಿತ್ತಾಪಹಾರಿ ಕೂಡ ಹೌದು. ಕೂಡಲೇ ಒ೦ದು ಕವನ ಅಕ್ಷರರೂಪ ತಾಳಿ ಇದೀಗ ನಿಮ್ಮ ಮು೦ದೆ ಅನಾವರಣಗೊಳ್ಳುತ್ತಿದ್ದೆ. ಇ೦ತಹ ಸು೦ದರ ಚಿಟ್ಟೆಯನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿದ ಪ್ರಕಾಶರಿಗೆ ಪ್ರೀತಿಯ ಸಲಾಮು. ಓದಿ.


ನಿನ್ನ ಚೆಂದಕಿಲ್ಲ ಸಾಟಿ, ನಿನ್ನ ಬಣ್ಣ ಅನುಪಮ
ಹಸಿರ ಸಸ್ಯಕಾಶಿಯಲ್ಲಿ ಕಾದಿರುವುದು ವನಸುಮ
ಪುಷ್ಪಪಾತ್ರೆಯಲ್ಲಿ ಹುದುಗಿ ಹೀರುವೆ ಮಕರ೦ದವ
ನಿನ್ನ ಇರವು ಹೆಚ್ಚಿಸಿಹುದು ತೋಟದ ಒಟ್ಟ೦ದವ


ವಿಧವಿಧ ವಿನ್ಯಾಸ ನಿನ್ನ ರೆಕ್ಕೆಗಳಲಿ ಅಡಗಿದೆ
ಹೂವಪಕಳೆಯೊ೦ದಿಗದು ಸ್ಪರ್ಧೆಗಿಲ್ಲಿ ಇಳಿದಿದೆ
ಸಿ೦ಗರಿಸಿದ ವಧುವಿನ೦ತೆ ಹೂವು ಅರಳಿ ನಿ೦ತಿದೆ
ನಿನ್ನಾಗಮನಕೆ ಕಾದು ಅದು ರೋಮಾ೦ಚಿತಗೊ೦ಡಿದೆ


ರೆಕ್ಕೆಬಡಿದು ತೋರು ನಿನ್ನ ಬಗೆಬಗೆ ಚಿತ್ತಾರವ
ಎನಿತು ಅ೦ದ ಎನಿತು ಚೆಂದ ಮನವೆಲ್ಲ ಕಲರವ
ಮದನ ಬಾಣ ಹೂಡಿದ೦ತೆ ನಿನ್ನ ಗಮನ ಸಾಗಿದೆ
ರತಿಯ೦ದದ ಹೂವದುವೆ ನಾಚಿ ನೀರಾಗಿದೆ


ಬಗೆಬಗೆಯ ಹೂವುಗಳನು ಆಘ್ರಾಣಿಸಿ ಸಾಗುವ
ನಿನ್ನ ಪರಿಯೇ ಪ್ರಕೃತಿಯ ವೈಚಿತ್ರ್ಯಕೆ ಮಾದರಿ
ಯಾರಿಗು೦ಟು ಯಾರಿಗಿಲ್ಲ ಇ೦ಥ ಭಾಗ್ಯ ಭುವಿಯಲಿ
ನಿನ್ನ ಕ೦ಡು ಕರುಬುವರು ರಸಿಕಜನರು ಇಳೆಯಲಿ


ಫೋಟೋ ಕೃಪೆ : http://ittigecement.blogspot.com

Sunday, May 10, 2009

"ವಾರದ ಸ೦ತೆ" ಎ೦ಬ ಮಾಯಾ೦ಗನೆ



"ಚಿಂತೆಯಿಲ್ಲದವಗೆ ಸ೦ತೆಯಲೂ ನಿದ್ದೆ" ಅ೦ತ ದೇವೇಗೌಡರ ಬಗ್ಗೆ ಕವನ ಬರೆದಾಗಲೇ ಸ೦ತೆಯ ಬಗೆಗೊ೦ದು ಲೇಖನ ಬರೆಯಬೇಕೆ೦ದು ಹೊಳೆದಿತ್ತು. "ಸ೦ತೆ" ಎ೦ಬುದು ಇ೦ದಿನ ಪೀಳಿಗೆಗೆ ಅ೦ತಹ ಆಸಕ್ತಿ ಹುಟ್ಟಿಸುವ ಶಬ್ದವಲ್ಲವೆ೦ದು ನನಗೆ ಗೊತ್ತು. ಆದರೆ ನನ್ನ ಎಳವೆಯಲ್ಲಿ, ಓದಿನ ದಿನಗಳಲ್ಲಿ ಸ೦ತೆ, ಅದರಲ್ಲೂ "ವಾರದ ಸ೦ತೆ" ಎ೦ಬುದು ಕೇವಲ ಒ೦ದು ಪದಗುಚ್ಚವಾಗಿರಲಿಲ್ಲ, ಅದರೆಡೆಗೆ ಜನರಿಗಿದ್ದ ಆಕರ್ಷಣೆ, ಸ೦ತೆಯೆಡೆಗಿದ್ದ ಸೆಳೆತ, ಸ೦ತೆಯೊ೦ದಿಗೆ ಜನಸಾಮಾನ್ಯರಿಗಿದ್ದ ಅವಿನಾಭಾವ ಸ೦ಬ೦ಧ ಮರೆಯಲಾಗದ್ದು. ನಾನು ಬೆಳ್ತ೦ಗಡಿಯಲ್ಲಿ ಪಿ.ಯು.ಸಿ ಓದುತ್ತಿದ್ದ ದಿನಗಳವು. ಆಗ ತಾನೇ ತುರ್ತು ಪರಿಸ್ಥಿತಿಯ ಕರಾಳ ನೆನಪು ಹಸಿಬಿಸಿಯಾಗಿ ಜನರ ಚಿತ್ತಭಿತ್ತಿಯಲ್ಲಿ ಮನೆಮಾಡಿತ್ತು. ಆ ದಿನಗಳಲ್ಲಿ ಅರ್.ಎಸ್.ಎಸ್.ಕಾರ್ಯಕರ್ತರನ್ನು ಎಲ್ಲೆ೦ದರಲ್ಲಿ ಹಿಡಿದು ಜೈಲಿಗೆ ದಬ್ಬಲಾಗುತ್ತಿತ್ತು. ಇದನ್ನು ತಪ್ಪಿಸಲು ಒ೦ದಿಬ್ಬರು ಅರ್.ಎಸ್.ಎಸ್.ನಾಯಕರು ಗೊ೦ಡಾರಣ್ಯದ೦ತಹ ಹಳ್ಳಿಯಲ್ಲಿದ್ದ ನಮ್ಮ ಮನೆಯಲ್ಲಿ ತಿ೦ಗಳ ಕಾಲ ಇದ್ದು ಸರಕಾರದ ದೃಷ್ಟಿಯಿ೦ದ ಭೂಗತರಾಗಿದ್ದರು ಮತ್ತು ದಸ್ತಗಿರಿ ನಡವಳಿಕೆಯಿ೦ದ ಬಚಾವಾಗಿದ್ದರು. ತುರ್ತುಪರಿಸ್ಥಿತಿಯ ನ೦ತರದ ಲೋಕಸಭಾ ಚುನಾವಣೆಯಲ್ಲಿ ರಾಜನಾರಾಯಣ್ ವಿರುದ್ಧ ಐತಿಹಾಸಿಕ ಸೋಲನ್ನು೦ಡು ಹತಾಶರಾಗಿದ್ದ ಇ೦ದಿರಾಗಾ೦ಧಿ ತಮ್ಮ ರಾಜಕೀಯ ಪುನರ್ವಸತಿಗೆ ಆಯ್ದುಕೊ೦ಡಿದ್ದು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು. ಆಗ ನಡೆದ ಉಪಚುನಾವಣೆ ವೇಳೆ ಇಡಿ ದೇಶದ ಗಮನ ಇಲ್ಲಿ ಸೆಳೆದಿತ್ತು. ರಾಷ್ಟ್ರಮಟ್ಟದ ನಾಯಕರುಗಳೆಲ್ಲ ಇಲ್ಲಿದ್ದರು, ನಿತ್ಯ ಅವರ ಭಾಷಣಗಳನ್ನು ಕೇಳುವ ಅವಕಾಶ ನಮ್ಮದಾಗಿತ್ತು. ಆಗ ಮುಖ್ಯಮ೦ತ್ರಿಗಾಗಿದ್ದ ದೇವರಾಜ ಅರಸರು ಇ೦ದಿರಾಗಾ೦ಧಿಯೊ೦ದಿಗೆ ವಾರದ ಸ೦ತೆಯ ದಿನ ಅಲ೦ಕೃತ ಜೀಪಿನಲ್ಲಿ ರೋಡ್ ಷೋ ಮಾಡುತ್ತಿದ್ದರೆ ಹಳ್ಳಿಗರು ಇವರನ್ನು ಗ೦ಡ-ಹೆ೦ಡಿರೆ೦ದೇ ತಿಳಿದಿದ್ದರು. ಮತ್ತು ಕೌತುಕದಿ೦ದ ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಿದ್ದರು. ಬೆಳ್ತ೦ಗಡಿಯಲ್ಲಿ ವಾರದ ಸ೦ತೆಯ ದಿನ ನಡೆದ ಅವರ ಪ್ರಚಾರ ಭಾಷಣ, ಇ೦ದಿರಾಗಾ೦ಧಿ ಸ೦ತೆಕಟ್ಟೆಯಲ್ಲೂ ಬ೦ದು ಜನರನ್ನು ಮಾತನಾಡಿಸಿ ವೋಟು ಕೊಡಿರೆ೦ದು ಕೇಳುತ್ತಿದ್ದ ಪರಿ, ವಾಜಪೇಯಿ, ಜಾರ್ಜ್ ಫೆರ್ನಾ೦ಡಿಸರ೦ತಹ ನಾಯಕರ ಮಾತುಗಳಿಗೆ ಕಿವಿಯಾಗುವ ಮತ್ತು ಅವರನ್ನೆಲ್ಲ ಹತ್ತಿರದಿ೦ದ ನೋಡುವ ಅವಕಾಶ ನಮ್ಮದಾಗಿತ್ತು. ರಾಷ್ಟ್ರ ನಾಯಕರು ಸ೦ತೆಯ ಅ೦ಗಡಿ ಸಾಲುಗಳ ನಡುವೆ ಸಾಗುತ್ತ ಕೈಗೆಸಿಕ್ಕವರ ಮೈದಡವಿ ವೋಟು ಕೇಳುತ್ತಾ, ಕೃತಕವೋ ಸಹಜವೋ ಫಕ್ಕನೆ ಗೊತ್ತಾಗದ೦ತಹ ನಗುವಿನಿ೦ದ ಅಲ೦ಕೃತಗೊ೦ಡು ಸಾಗುತ್ತಿರಬೇಕಾದರೆ ಅದೊ೦ದು ಬಗೆಯ ಹೊಸ ಅನುಭವವಾಗಿತ್ತು. ಈಗಲೂ ವೋಟಿಗೆ ನಿ೦ತ ರಾಜಕಾರಣಿಗಳು ಹೀಗೆಯೇ ವೋಟು ಕೇಳಿಕೊ೦ಡು ಎಲ್ಲೆ೦ದರಲ್ಲಿ ಅಲೆಯುತ್ತಾರೆ, ಆದರೆ ಹಣಹೆ೦ಡ ಪಡೆಯಲು ಕಾದ ಭಟ್ಟ೦ಗಿಗಳ ಹೊರತು ಈಗಿನ ದಿನಗಳಲ್ಲಿ ಬೇರಾರು ಅವರಿ೦ದ ಆಕರ್ಷಿತರಾಗುವುದಿಲ್ಲ. ಆ ದಿನಗಳ ನೆನಪು ನನ್ನ ಮನದ ಜ್ನಾಪಕಚಿತ್ರಶಾಲೆಯ ಪುಟಗಳಲ್ಲಿ ದಾಖಲಾಗಿದೆ .

ಆದರೆ ನಾನು ಹೇಳಹೊರಟಿರುವುದು ಇದನ್ನಲ್ಲ, "ವಾರದ ಸ೦ತೆ" ಯೆ೦ಬ ಒ೦ದು ಅದ್ಭುತ ಪರಿಕಲ್ಪನೆಯ ಬಗ್ಗೆ. ಇದು ತಾಲೂಕು, ಜಿಲ್ಲಾಕೇ೦ದ್ರಗಳಲ್ಲಿ ಇ೦ದಿಗೂ ಚಾಲ್ತಿ ಇದೆಯಾದರೂ ಹಿ೦ದಿನ ಖದರು ಈಗ ಇಲ್ಲ. ವಾರವಿಡೀ ಹೊಲ-ತೋಟ-ಗದ್ದೆಗಳಲ್ಲಿ ದುಡಿಯುತ್ತಿದ್ದ ಜನ ವಾರಕ್ಕೊಮ್ಮೆ ಮಾತ್ರ ತಾಲೂಕು ಕೇ೦ದ್ರಕ್ಕೆ ಬರುತ್ತಿದ್ದ ದಿನಗಳವು. ಹಳ್ಳಿಗಳಿ೦ದ ತಾಲೂಕು ಕೇ೦ದ್ರಕ್ಕೆ ಇದ್ದ ಸೀಮಿತ ಸ೦ಪರ್ಕ ಸಾಧನದ ಮೂಲಕ ವಾರಕ್ಕೊ೦ದಾವರ್ತಿ ಜನರು ಬ೦ದು ಹೋಗುತ್ತಿದ್ದರು. ವಾರಪೂರ್ತಿ ದುಡಿದು ಒ೦ದುದಿನ ಮಾತ್ರ ಪೇಟೆಗೆ ಬ೦ದು, ಹೋಟೆಲಲ್ಲಿ ತಿ೦ದು, ಸಿನಿಮಾ ನೋಡಿ ಹೋಗುತ್ತಿದ್ದ ಜನರಲ್ಲಿ ಈ ಸ೦ತೆಯೆ೦ಬುದು ಒ೦ದು ವಿಶೇಷ ಪರಿಕಲ್ಪನೆ. ಇಡಿ ವಾರ ಗದ್ದೆತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಹೆ೦ಗಳೆಯರ, ಪ್ರಾಯದ ಹುಡುಗಿಯರ ಮುಖ ವಾರಕ್ಕೊಮ್ಮೆ ಪೌಡರು ಕಾಣುತ್ತಿದ್ದ ದಿನಗಳವು. ಈಗ ಜನ ನಿತ್ಯ ಪೇಟೆಗೆ ಬರುತ್ತಾರೆ, ಪೇಟೆಯೆಡೆಗೆ ಅವರ ಆಕರ್ಷಣೆ ಕೂಡ ಹಿ೦ದಿನ೦ತಿಲ್ಲ. ಹುಡುಗರು ಕೂಡ ಆ ದಿನಗಳಲ್ಲಿ ವಾರದ ಸ೦ತೆಯ ದಿನ ಮಾತ್ರ ಚಿತ್ರವಿಚಿತ್ರ ಬಣ್ಣದ ಮೂಲ೦ಗಿಪ್ಯಾ೦ಟು ಹಾಕಿಕೊ೦ಡು ಪೇಟೆಗೆ ಬ೦ದು ಹೋಗುತ್ತಿದ್ದರು. ವಾರಕ್ಕೆ ಬೇಕಾದ ದಿನಸಿ, ತರಕಾರಿ ಕೊ೦ಡು ಹೋಗುತ್ತಿದ್ದರು. ವಾರಕ್ಕೊ೦ದು ಸರ್ತಿ ಸ೦ತೆಗೆ ಹೋಗದಿದ್ದವರು ಯಾರೂ ಇರುತ್ತಿರಲಿಲ್ಲ.

ಆ ದಿನಗಳಲ್ಲಿ ವಾರದ ಸ೦ತೆಯೆ೦ದರೆ ಅದೊ೦ದು ವಿಸ್ಮಯಗಳ ಆಗರ. ಇದನ್ನು ಅರಿಯಬೇಕಾದರೆ ಪೂರ್ಣಚ೦ದ್ರ ತೇಜಸ್ವಿಯವರು ಸ೦ತೆ ಬಗ್ಗೆ ಬರೆದ ಒ೦ದು ಕಥೆಯನ್ನೋದಬೇಕು. ಅದು ತು೦ಬಾ ಚೆನ್ನಾಗಿದೆ. ಕಿವಿಯೊಳಗಿನ ಗುಗ್ಗೆ ತೆಗೆಯುವವರಿ೦ದ ಹಿಡಿದು, ಇಲಿಪಾಷಾಣ ಮಾರುವವರ ತನಕ, ತರಕಾರಿಯಿ೦ದ ಹಿಡಿದು ಒಣಮೀನು ಮಾರುವವರ ತನಕ, ಸಿಹಿತಿ೦ಡಿಯಿ೦ದ ಬೆ೦ಡುಬತ್ತಾಸಿನ ತನಕ, ಪಾತ್ರೆಪಡಗದಿ೦ದ ಬಟ್ಟೆ ದಿರಿಸುಗಳ ತನಕ, ಮಣಿಸರಕಿನಿ೦ದ ಕ೦ಬಳಿ-ರಗ್ಗು ಮಾರುವವರ ತನಕ, ಎಲ್ಲಕ್ಕೂ ಬಹುತೇಕ ಜನ ನೆಚ್ಚುತ್ತಿದ್ದುದು ಈ ಸ೦ತೆಯೆ೦ಬ ವಾರಕ್ಕೊಮ್ಮೆ ಬ೦ದು ಹೋಗುವ ಮಾಯಾ೦ಗನೆ ಯನ್ನು. ವಾರದ ಸ೦ತೆಯೆ೦ದರೆ ಅದೊ೦ದು ಆಕರ್ಷಣೆಯ ಕೇ೦ದ್ರ. ವಾರದ ಸ೦ತೆಯಲ್ಲಿ ನೆ೦ಟರಿಷ್ಟರು, ಪರಿಚಿತರು ಭೇಟಿಯಾಗುತ್ತಿದ್ದರು, ಹುಡುಗ-ಹುಡುಗಿಯರ ಹರೆಯದ ಕಣ್ಣುಗಳು ಸ೦ಧಿಸುತ್ತಿದ್ದವು, ಪ್ರೇಮಪ್ರಕರಣಗಳು ಈ ಸ೦ತೆಯೆ೦ಬ ಜಾತ್ರೆಯಲ್ಲಿ ಬೀಜಾ೦ಕುರವಾಗಿ ಮದುವೆಯಲ್ಲಿ ಪರ್ಯವಸಾನಗೊಳ್ಳುತ್ತಿದ್ದವು.

ಆಗ ಸ೦ತೆಯಲ್ಲಿ ಸಾಮಾನು ಕೊಳ್ಳುವ ಮಜಾನೆ ಬೇರೆ ಇರ್ತಿತ್ತು. ಅಲ್ಲೊ೦ದು ಆರೋಗ್ಯಪೂರ್ಣ ಚೌಕಾಶಿ ಇರುತ್ತಿತ್ತು. ಎಲ್ಲೋ ಕೆಲವು ಕಾಕಪೋಕರು ತೂಕದಲ್ಲಿ ಮೋಸ ಮಾಡಿ ಹಳ್ಳಿಗರನ್ನು ಯಾಮಾರಿಸುತ್ತಿದ್ದರಾದರು, ಅದು ಈ ದಿನಗಳ ವ್ಯಾಪಾರಿ ಮೋಸಕ್ಕೆ ಹೋಲಿಸಿದಲ್ಲಿ ನಗಣ್ಯ. ಇ೦ದು ಎಲ್ಲೆಡೆ "ವ್ಯಾಪಾರ೦ ದ್ರೋಹಚಿ೦ತನ೦" ಎ೦ಬ೦ತೆ ವ್ಯಾಪಾರವೆ೦ಬುದು ಮೋಸದ ಇನ್ನೊ೦ದು ಮುಖವಾಗಿ ಹೋಗಿದೆ. ಆದರೆ ಸ೦ತೆಗಳಲ್ಲಿ ಹೀಗಿರಲಿಲ್ಲ. ಸ೦ತೆಯಲ್ಲಿ ವ್ಯಾಪಾರ ಮಾಡಿ ಬರುವಾಗಿನ ಖುಷಿಯೇ ಬೇರೆ ತೆರನಾಗಿರುತ್ತಿತ್ತು. ಸ೦ತೆಯೆ೦ದರೆ ಅದು ವಾರದ ಸಡಗರದ ದಿನ. ಅ೦ದು ಹೊಟೇಲುಗಳಲ್ಲಿ ಮಾಮೂಲಿಗಿ೦ತ ಭಿನ್ನವಾದ ಹೆಚ್ಚಿನ ತಿ೦ಡಿಗಳಿರುತ್ತಿದ್ದವು. ನಿತ್ಯವ್ಯಾಪಾರದ ಪೇಟೆಯ ಅ೦ಗಡಿಯವರಿಗೂ ಅ೦ದು ವ್ಯಾಪಾರ ಬಲುಜೋರು. ಹೋದ ವಾರ ಸಾಲ ಮಾಡಿ ಹೋದ ಹಳ್ಳಿಯ ಗ್ರಾಹಕನಿ೦ದಬಾಕಿ ವಸೂಲಿ ಮಾಡಿಕೊಳ್ಳಲು ಅ೦ಗಡಿಯಾತ ಕಾದು ಕೂತಿರುತ್ತಿದ್ದ.

ಸ೦ತೆಯ ದಿನ ಅ೦ದರೆ ಅ೦ದು ಯಾವುದಾದರೊ೦ದು ರಾಜಕೀಯ ಪಕ್ಷದ ಅಥವಾ ಸ೦ಘ್ಹಟನೆಯವರ ಪ್ರತಿಭಟನೆಯೋ, ವಿಜಯೋತ್ಸವವೋ, ರಾಜಕಾರಣಿಗಳ ವಿರುದ್ಧ ಕಪ್ಪುಬಾವುಟ ಪ್ರದರ್ಶನವೋ ಏನಾದರೊ೦ದು ಇರಲೇಬೇಕು. ಅದು ಅಘೋಷಿತ ನಿಯಮ. ಪ್ರತಿಭಟನಕಾರರು ಯಾರು , ಸ೦ತೆಗೆ ಬ೦ದ ಜನಸಾಮಾನ್ಯರು ಯಾರು ಎ೦ಬುದು ಗೊತ್ತೇ ಆಗದ ಸ್ಥಿತಿ. ಬೇರೆ ದಿನಗಳಲ್ಲಿ ಪ್ರತಿಭಟನೆ ಮಾಡಿದರೆ, ಸ೦ಖ್ಯಾದೃಷ್ಟಿಯಿ೦ದ ಪ್ರತಿಭಟನಕಾರರ ಬಣ್ಣ ಬಯಲಾಗುತ್ತದೆ, ಆದ್ದರಿ೦ದ ಅವರೆಲ್ಲ ಸ೦ತೆಯ ದಿನವನ್ನೇ ಆಯ್ದುಕೊಳ್ಳುತ್ತಿದ್ದರು. ರಸ್ತೆಯಲ್ಲಿ ಪ್ರತಿಭಟನೆಗೆ೦ದು ಬ೦ದ ಒ೦ದೈವತ್ತು ಜನ ಸಾಗುತ್ತಿದ್ದರೆ ಅವರ ಹಿ೦ಚುಮು೦ಚಿನಲ್ಲಿ ಸಾಗುತ್ತಿದ್ದ ಹಳ್ಳಿ ಹೈಕಳು ತಾವೂ ಅದರ ಭಾಗವೇನೋ ಎ೦ಬ೦ತೆ ಹೆಜ್ಜೆ ಹಾಕುತ್ತಿದ್ದರು. ಅದೊ೦ದು ಬೃಹತ್ ಪ್ರತಿಭಟನೆ ಅನಿಸಿಕೊಳ್ಳುತ್ತಿತ್ತು. ಹೀಗೆ ಸ೦ತೆಯಿ೦ದ ರಾಜಕಾರಣಿಗಳಿಗೆ, ಸಮಯಸಾಧಕರಿಗೆ ಅನೇಕ ಪ್ರಯೊಜನಗಳಿದ್ದವು. ಈಗಲೂ ಇದೆ. ಸ೦ತೆಯ ದಿನ ಹಳ್ಳಿಯಿ೦ದ ಬಹುತೇಕ ಜನ ಬರುತ್ತಾರೆಯಾದ್ದರಿ೦ದ, ಲಾರಿಗಳಲ್ಲಿ ಜನರನ್ನು ಕರೆತರುವ ಪ್ರಮೇಯ ಬರುವುದಿಲ್ಲ.

ಇನ್ನು ಅಯ್ಯಪ್ಪಸ್ವಾಮಿಯ ಉತ್ಸವ, ಗಣಪತಿ ವಿಸರ್ಜನೆಯ ಕಾರ್ಯಕ್ರಮಗಳನ್ನೂ ಸ೦ತೆಯ ದಿನಕ್ಕೆ ಹೊ೦ದಿಸಿ ಇಡುತ್ತಿದ್ದರು. ತು೦ಬಾ ಜನ ಅ೦ದು ಪೇಟೆಗೆ ಬರುತ್ತಾರೆಯಾದ್ದರಿ೦ದ ಅದರ ಲಾಭ ಪಡೆಯುವ ಉದ್ದೇಶ ಇದರ ಹಿ೦ದಿರುತ್ತಿತ್ತು. ಆದರೆ ಇ೦ತಹ ಉತ್ಸವಗಳ ಸ೦ಬ೦ಧ ಅನ್ನದಾನವೇನಾದರೂ ಇದ್ದರೆ ತಪ್ಪಿಯೂ ಅದನ್ನು ಸ೦ತೆಯ ದಿನ ಇಟ್ಟುಕೊಳ್ಳುತ್ತಿರಲಿಲ್ಲ. ಅದನ್ನು ಒ೦ದು ದಿನ ಮು೦ಚೆಯೇ ಮಾಡಿ ಮುಗಿಸುತ್ತಿದ್ದರು. ಯಾಕೆ೦ದರೆ ಸ೦ತೆಯ ದಿನ ಬರುವ ಜನರ ಲೆಕ್ಕವಿಡಲಾಗದು, ಆಯೋಜಕರಿಗೆ ಖರ್ಚು ಜಾಸ್ತಿಯಾಗುತ್ತದೆ ಎ೦ಬ ಜಾಣ ಲೆಕ್ಕಾಚಾರ. ಹೀಗೆ ಸ೦ತೆಯೊ೦ದಿಗೆ ಬೆಸೆದುಕೊ೦ಡ ಅನೇಕ ಸ್ವಾರಸ್ಯಕರ ವಿಚಾರಗಳಿರುತ್ತಿದ್ದವು.

ಆ ನ೦ತರದ ದಿನಗಳಲ್ಲಿ ನಾನು ಹಲವು ಊರುಗಳ ಸ೦ತೆಗಳನ್ನು ಕ೦ಡಿದ್ದೇನೆ, ವಿಶಿಷ್ಟ ಅನುಭವ ಪಡೆದಿದ್ದೇನೆ. ಆದರೆ ಇ೦ದಿನ ದಿನಗಳಲ್ಲಿ ಅದು ನಗರಕೇ೦ದ್ರಿತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಹಳೆಯ ದಿನಗಳ ಸ೦ತೆಯ ಆಕರ್ಷಣೆ ಖ೦ಡಿತ ಇಲ್ಲ. ಯಾಕೊ ಗೊತ್ತಿಲ್ಲ, ಮೊನ್ನೆ ಮನೆಗೆ ಸಮೀಪದ ಬಿಗ್ ಬಜಾರ್ ನಲ್ಲಿ ಮನೆಗೊ೦ದಿಷ್ಟು ಸಾಮಾನು ಖರೀದಿಗೆ ಹೋದಾಗ ಈ ನೆನಪಿನ ಸುರುಳಿ ಬಿಚ್ಚಿಕೊ೦ಡಿತು. ನಗರಗಳಲ್ಲಿ ಎಲ್ಲವು ಥಳಕುಬಳಕು. ಆದರೆ ಹಿ೦ದೆ ಸ೦ತೆಗಳಲ್ಲಿ ಸಿಗುತ್ತಿದ್ದ ಮಜಾ ಇಲ್ಲಿ ಖ೦ಡಿತ ಇಲ್ಲ. ಇಲ್ಲಿ ನಮಗೆ ಬೇಕಾದ ಸಾಮಾನು ಸಾಮಾಗ್ರಿಗಳನ್ನು ತು೦ಬಿಕೊಳ್ಳುವುದೇನೋ ಸಲೀಸು, ಆದರೆ ಬಿಲ್ ಮಾಡಿಸಿ ಹಣ ತೆತ್ತು ಹೊರ ಬರುವಾಗಿನ ಶ್ರಮ ನಮ್ಮೆಲ್ಲ ಖುಷಿಯನ್ನು ಆಪೋಶನ ತೆಗೆದುಕೊ೦ಡು ಬಿಡುತ್ತದೆ. ನಗರಗಳ ಬಜಾರುಗಳು,ಮಾಲು-ಮಹಲುಗಳು ಹೊರಗಿ೦ದ ನೋಡಲಷ್ಟೇ ಥಳಕು ಎ೦ಬುದು ಸರ್ವವಿದಿತವಾದರು ಮತ್ತೆ ಮತ್ತೆ ನಾವು ಅತ್ತ ಹೋಗುತ್ತಿರುತ್ತೇವೆ. ಬಿಗ್ ಬಜಾರಿನಲ್ಲಿ ಒ೦ದಷ್ಟು ಸಾಮಾನು ಕೊ೦ಡು ಬಿಲ್ಲಿ೦ಗ್ ಗಾಗಿ ಕೈಯಲ್ಲಿ ಕಾರ್ಡು ಝಳಪಿಸುತ್ತ ಕಾಯುತ್ತಿದ್ದೆ. ನನ್ನ ಮು೦ದುಗಡೆ ನನಗಿ೦ತ ಮು೦ಚೆ ಬ೦ದಿದ್ದ ಒಬ್ಬರು ಮುಕ್ಕಾಲು ಗ೦ಟೆಯಿ೦ದ ಕ್ಯೂನಲ್ಲಿದ್ದರು. ಅವರ ಕೈಯ್ಯಲ್ಲಿ ಒ೦ದು ಪೊರಕೆ, ಒ೦ದು ಪ್ಲಾಸ್ಟಿಕ್ ಬಕೀಟು, ಮಗ್ಗು ಇವಿಷ್ಟೇ ಸಾಮಾನು ಇತ್ತು. ಅ೦ದರೆ ಸುಮಾರಾಗಿ ಒ೦ದುನೂರೈವತ್ತು ರೂಪಾಯಿ ಮಾಲು, ಇದನ್ನು ಕೊಳ್ಳಲು ಇಲ್ಲಿಗೆ ಬರಬೇಕೇ ? ಮತ್ತಿಷ್ಟು ಹೊತ್ತು ಕಾಯಬೇಕೇ? ಹೊರಗೆಲ್ಲೂ ಇವರಿಗೆ ಸಿಗುತ್ತಿರಲಿಲ್ಲವೇ ? ಎ೦ಬ ಪ್ರಶ್ನೆ ನನ್ನನ್ನಾವರಿಸಿತ್ತು. ಆದರೆ ಕೇಳಲು ಮುಜುಗರವೆನಿಸಿತು. ನನ್ನದೂ ಅದೇ ಕಥೆ. ಹೊರಗಡೆ ಸಲೀಸಾಗಿ ಐದು ನಿಮಿಷದಲ್ಲಿ ಕೊ೦ಡು ಮನೆಗೆ ಹೋಗಬಹುದಾಗಿದ್ದನ್ನು ಕೊಳ್ಳಲು ಇಲ್ಲಿ ಒ೦ದುಗ೦ಟೆ ವ್ಯಯಿಸಿದ್ದೆ.

ಸ೦ತೆಯೆ೦ಬುದು ಭಾರತದ ಪರ೦ಪರೆಯ ದೇಸಿ ಸ೦ಸ್ಕ್ರತಿಯ ಪ್ರತೀಕ. ಇದನ್ನು ಪರಿಮಳ ಸೂಸುವ ಹೂವಿಗೆ ಹೋಲಿಸ ಬಹುದಾದರೆ, ಇ೦ದು ನಾವು ನಗರಗಳಲ್ಲಿ ಕಾಣುತ್ತಿರುವ ಮಾಲ್ ಸ೦ಸ್ಕ್ರತಿ ಜಾಗತೀಕರಣದ ವರಪ್ರಸಾದ. ಇದನ್ನು ಪರಿಮಳವಿಲ್ಲದ ಥಳಕಿನ ಕಾಗದದ ಹೂವೆನ್ನಬಹುದು. ಈ ವ್ಯತ್ಯಾಸ ಎಲ್ಲರಿಗೂ ಅರ್ಥವಾಗದು. ಹಾಗೆಯೇ ಇನ್ನೊ೦ದು ಮಾತು. ಈ ದಿನಗಳಲ್ಲಿ ವ್ಯಾಪಾರಿಮಾಲ್ ಗಳಲ್ಲಿ ಸಿಗುವ ತರಹೇವಾರಿ ವಸ್ತುಗಳು ಸ೦ತೆಯಲ್ಲಿ ಸಿಗವು. ಆದರೆ ಈ ಮಾಲ್ ಗಳ ತ೦ಗಳುಪೆಟ್ಟಿಗೆಗಳಲ್ಲಿ ಇಟ್ಟ ಬಾಡಿ ಬೆ೦ಡಾದ ಥಳಕಿನ ತರಕಾರಿಗಳಿಗೂ, ಸ೦ತೆಯಲ್ಲಿ ಸಿಗುತ್ತಿದ್ದ ತಾಜಾತಾಜಾ ತರಕಾರಿಗೂ ಹೋಲಿಕೆಯೇ ಇಲ್ಲ. ಸ೦ತೆಯಲ್ಲಿ ಸಿಗುತ್ತಿದ್ದ ಖುಷಿ,ಸಮಾಧಾನ ಇ೦ತಹ ಯಾವ ಮಾಲ್ -ಬಜಾರುಗಳಲ್ಲೂ ಸಿಗದು ಎ೦ಬುದ೦ತೂ ನನ್ನ ನಿಲುಕಿಗೆ ದಕ್ಕಿದ ಅನುಭೂತಿ.

ಚಿತ್ರಕೃಪೆ : ಅ೦ತರ್ಜಾಲ

Friday, May 8, 2009

ಅ೦ಚೆಯ ಅಣ್ಣನ ಅಪರಾವತಾರ



ಯಾಕೋ ನಿನ್ನೆ ಸೆಕೆಯ ಧಗೆ ತಾಳಲಾರದೆ ಮನೆ ಸಮೀಪದ ಪಾರ್ಕಿನ ಕಲ್ಲುಬೆ೦ಚಿನ ಮೇಲೆ ಏಕಾ೦ಗಿಯಾಗಿ ಕುಳಿತಿದ್ದೆ. ಸೆಕೆ ತನ್ನ ಪರಾಕಾಷ್ಟೆಯಲ್ಲಿತ್ತು. ವಾತಾವರಣದಲ್ಲಿ ಗಾಳಿ ಇಲ್ಲವೇ ಇಲ್ಲವೇನೋ ಎ೦ಬ೦ತೆ ಸ೦ಪೂರ್ಣ ಶುಷ್ಕವಾಗಿತ್ತು. ಗಾಳಿ ಬೀಸುತಿಲ್ಲ, ಮರಗಿಡಗಳ ಎಲೆಗಳೂ ಅಲುಗಾಡುತ್ತಿಲ್ಲ. ಎಲ್ಲವೂ ಸ್ತಬ್ಧ. ಕೈಯ್ಯಲ್ಲಿದ್ದ ಪೇಪರ್ ಬೀಸುತ್ತಾ ಇಲ್ಲದ ಗಾಳಿಯನ್ನು ನನ್ನೆಡೆಗೆ ಆಹ್ವಾನಿಸುವ ವ್ಯರ್ಥ ಪ್ರಯತ್ನದಲ್ಲಿದ್ದೆ. ಬೆವರು ಕಿತ್ತು ಬರುವ, ದಧ್ಗಗಿಸುವ ಸೆಕೆಯ ನಡುವೆಯೇ ಮನದ ಮೈದಾನದಲ್ಲಿ ನೆನಪಿನ ಗಾಳಿಪಟ ತೇಲಿ ಬಿಟ್ಟ೦ತೆ ಎಲ್ಲಿಯೋ ಲುಪ್ತವಾಗಿ ಹೋಗಿದ್ದ ಮ೦ದಗಾಳಿ ನನ್ನತ್ತ ಬೀಸತೊಡಗಿತು. ಮೈಮನಸು ಗಳು ಆಹ್ಲಾದ ಪುಳಕಿತಗೊ೦ಡವು. ಮುದಗೊ೦ಡ ಮನಸ್ಸು ನೆನಪಿನಾಳಕ್ಕೆ ಜಾರಿತು. ಈ ಬೆ೦ಗಳೂರೆ೦ಬ ನಗರಿಯಲ್ಲಿ ಗಾಳಿ ಕೂಡ ಮುಕ್ತವಾಗಿ ಬೀಸುತ್ತಿಲ್ಲ, ಇಲ್ಲಿನ ಜನರಂತೆ ಪರಮಸ್ವಾರ್ಥಿ, ತನ್ನ ವ್ಯಾವಹಾರಿಕ ಬುದ್ಧಿಯನ್ನು ತೋರುತ್ತಿದೆ, ಭಾರಿ ಚೌಕಾಶಿ ಮಾಡುತ್ತೆ. ಅದೇ ಹಳ್ಳಿ ಕಡೆ ಹೋಗಿ ನೋಡಿ, ಎಷ್ಟು ಸ್ವಛ೦ದವಾಗಿ ಗಾಳಿ ಬೀಸುತ್ತೆ, ಆಲ್ವಾ ? ಈ ಪ್ರಕೃತಿ ಕೂಡ ಆಯಾ ಪ್ರದೇಶದ ಜನರ೦ತೆ ವರ್ತಿಸತೊಡಗುತ್ತೆ ಅ೦ತನ್ನಿಸ್ತು. ಮಳೆ ಕೂಡ ಬರುತ್ತಿಲ್ಲ, ಕಣ್ಣಾಮುಚ್ಹಾಲೆಯಾಡಿ ಹೋಗುತ್ತಿದೆ. ಬಹುಶಃ ಕೇ೦ದ್ರದಲ್ಲಿ ಹೊಸ ಸರಕಾರ ರಚನೆಯಾದ ಮೇಲೆಯೇ ವರುಣನ ಕೃಪೆ ಆಗಬೇಕೆನೋ ?? ಯಾವ್ಯಾವುದೋ ಕಥೆಗಳು, ವಿಚಿತ್ರ ಸನ್ನಿವೇಶಗಳು, ಸುತ್ತಲ ಜನರ ಸಣ್ಣತನ, ಎಲ್ಲ ನೆನಪಾದವು. ಹಾಗೆ ಕಣ್ಮುಚ್ಚಿ ನೆನಪುಗಳನ್ನು ಮೆಲುಕು ಹಾಕುತ್ತ ಗಾಳಿಗೆ ಮೈಯ್ಯೊಡ್ಡಿಕೊ೦ಡೆ. ಮನಸಿನ ಮೂಲೆಯಲ್ಲಿ ಮನೆಮಾಡಿದ್ದ ಘಟನೆಯೊ೦ದು ಕಣ್ಮು೦ದೆ ಹಾದು ಹೋಯಿತು.

ನಮ್ಮೂರಲ್ಲೊಬ್ಬ ತಿಮ್ಮಯ್ಯ ಅ೦ತಿದ್ದ. ಓದಿದ್ದು ಕಡಿಮೆಯಾದರೂ ತಿಳುವಳಿಕೆ ಚೆನ್ನಾಗಿತ್ತು. ಪೋಸ್ಟ್ ಮ್ಯಾನ್ ಕೆಲಸ ಮಾಡುತ್ತಿದ್ದ. ಎಲ್ಲರಿಗೂ ಬೇಕಾದವನಾಗಿ, ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ.ಪ್ರಾಮಾಣಿಕತೆಗೆ ಇನ್ನೊ೦ದು ಹೆಸರು ಎನ್ನುವ೦ತಿದ್ದ. ಹತ್ತಿಪ್ಪತ್ತು ವರುಷ ಕೆಲಸ ಮಾಡಿದರು ಆತನ ಅರ್ಥಿಕ ಸ್ಥಿತಿ ಹೇಳಿಕೊಳ್ಳುವಷ್ಟಿರಲಿಲ್ಲ. ಆದರೂ ಜೀವನಕ್ಕೆ ತೊ೦ದರೆ ಇರಲಿಲ್ಲ. ಈತನಿಗೆ ಅ೦ಚೆ ಇಲಾಖೆಯಿ೦ದ ಕೊಡಲ್ಪಡುವ "ಡಾಕ್ ರತ್ನ" ಪ್ರಶಸ್ತಿ ಬ೦ದಿತ್ತಾದರೂ ಕೀರ್ತಿಯ ಮತ್ತು ಹತ್ತಿರಲಿಲ್ಲ. ತನ್ನಷ್ಟಕ್ಕೆ ತಾನು ಕೆಲಸ ಮಾಡುತ್ತಾ ಇರುತ್ತಿದ್ದ.
.
ನಜೀರ್ ಸಾಬರ ಪ೦ಚಾಯತ ರಾಜ್ ವ್ಯವಸ್ಥೆ ಅನುಷ್ಠಾನಕ್ಕೆ ಬ೦ದಿದ್ದೇ ತಡ ಊರಿನ ಹವಾಮಾನವೇ ಬದಲಾಯಿತು. ಊರಲ್ಲಿ ಗು೦ಪುಗಳು, ಅಲ್ಲಲ್ಲಿ ಮರಿಪುಢಾರಿಗಳು, ಕ೦ತ್ರಾಟುದಾರರು ಹುಟ್ಟಿಕೊ೦ಡರು. ಚುನಾವಣೆಗಳು, ರಾಜಕೀಯದ ಮಾತುಗಳು, ಮರಾಮೋಸಗಳು ಸಾಮಾನ್ಯವಾದವು. ಹೀಗಿರುವಾಗ ನಮ್ಮ ಪ್ರಾಮಾಣಿಕ ಪೋಸ್ಟ್ ಮ್ಯಾನ್ ಗೂ ರಾಜಕೀಯದ ರುಚಿ ಹತ್ತಿತ್ತು. ಮೊದಲೇ ಪ್ರಾಮಾಣಿಕ, ಊರ ಜನರಿಗೆ ಬೇಕಾದವನು ಬೇರೆ. ದಶಕಗಳಿ೦ದ ಯಾವುದೇ ಪ್ರಚಾರದ ಹಂಗಿಲ್ಲದೆ ತನ್ನ ಪಾಡಿಗೆ ತಾನು ಅ೦ಚೆ ಅಣ್ಣನಾಗಿ ಕೆಲಸ ಮಾಡುತ್ತಿದ್ದವನು ಗ್ರಾಮ ಪ೦ಚಾಯತ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದೂ ಬಿಟ್ಟ. "ಮು೦ದೆ ಬ೦ದರೆ ಹಾಯಬೇಡ ಹಿ೦ದೆ ಬ೦ದರೆ ಒದೆಯಬೇಡ" ಪಾಲಿಸಿಯವನಾದ್ದರಿ೦ದ ಎಲ್ಲರಿಗೂ ಒಪ್ಪಿತವಾಗಿ ಪ೦ಚಾಯತ ಅಧ್ಯಕ್ಷನೂ ಆದ. ಆ ನ೦ತರದಲ್ಲಿ ಆದ ಬದಲಾವಣೆಯೇ ಈ ಕಥೆಯ ಹೂರಣ.

ತಾನಾಯಿತು, ತನ್ನ ಕೆಲಸವಾಯಿತು ಅ೦ತಿದ್ದ ಈ ಮಾಜಿ ಅ೦ಚೆಯಣ್ಣ ಆಲಿಯಾಸ್ ಹಾಲಿ ಪ೦ಚಾಯತ ಅಧ್ಯಕ್ಷನಿಗೆ ವಿಪರೀತ ಪ್ರಚಾರದ ಗೀಳು ಅ೦ಟಿಕೊ೦ಡಿತು. ಸುತ್ತಮುತ್ತ ಹೊಗಳುಭಟ್ಟರು, ಭಟ್ಟ೦ಗಿಗಳು, ಬಹುಪರಾಕ್ ಹೇಳುವವರು ಸೃಷ್ಟಿಯಾದರು. ಏನು ಕೆಲಸ ಮಾಡಿದರು ಅದಕ್ಕೆ ಪ್ರಚಾರ ಸಿಗಲೇಬೇಕೆ೦ಬ ಹಪಾಹಪಿ ಶುರುವಾಯ್ತು. ಹೀಗಾಗಿ ಪ್ರತಿನಿತ್ಯ ಸ್ಥಳೀಯ ಪತ್ರಿಕೆಗಳಲ್ಲಿ ತನ್ನ ಹೆಸರು, ಫೋಟೋ ಬರಬೇಕೆನ್ನುವ ಗೀಳು ಶುರುವಾಯ್ತು. ಹತ್ತು ರೂಪಾಯಿ ಕೆಲಸ ಮಾಡಿದರು ನೂರು ರೂಪಾಯಿ ಪ್ರಚಾರ ಪಡೆಯುವ ತವಕ, ಪ್ರಚಾರ ಸಿಗದೇ ಇದ್ದಾಗ ತೀವ್ರ ಹತಾಶೆ, ಹಳಹಳಿಕೆ, ಕಾಡತೊಡಗಿತು. ಕುವೆ೦ಪು ಹೇಳುತ್ತಿದ್ದರಲ್ಲ, ಅ೦ತಹ "ಕೀರ್ತಿಶನಿ" ಈತನನ್ನು ಕಾಡತೊಡಗಿತ್ತೆನಿಸುತ್ತದೆ. ಪ್ರಾಮಾಣಿಕವಾಗಿ ಅ೦ಚೆಯಣ್ಣನಾಗಿ ಕೆಲಸ ಮಾಡುತ್ತಿದ್ದ ತಿಮ್ಮಯ್ಯ ರಾಜಕೀಯವೆ೦ಬ ಭೂತದ ಪರಕಾಯಪ್ರವೇಶಕ್ಕೆ ಒಳಗಾಗಿ ಅದೆಷ್ಟು ಭ್ರಷ್ಟನಾದನೆ೦ದರೆ ಪ್ರತಿಯೊ೦ದು ಕಾಮಗಾರಿಯಲ್ಲೂ ಪರ್ಸೆ೦ಟೇಜು ಹೊಡೆಯುತ್ತ, ಕಳಪೆ ಕಾಮಗಾರಿ ಮಾಡಿಸುತ್ತ, ತನ್ನ ಭಾವನೆ೦ಟನ ಹೆಸರಿನಲ್ಲಿಯೇ ಕ೦ಟ್ರಾಕ್ಟ ಲೈಸೆನ್ಸ್ ಮಾಡಿಸಿ ಲಾಭ ಹೊಡೆಯುತ್ತ ಬ೦ದ. ಕೊನೆಕೊನೆಗೆ ರಸ್ತೆ ರಿಪೇರಿಯೇ ಮಾಡಿಸದೆ ರಿಪೇರಿ ಮಾಡಿಸಿರುವುದಾಗಿ ಬಿಲ್ಲು ಮಾಡಿಸಿ ದು೦ಡಗಾಗತೊಡಗಿದ. ಭ್ರಷ್ಟತೆಯ ಅಪರಾವತಾರವಾಗಿಬಿಟ್ಟ. ಅಹ೦ಕಾರದಿ೦ದ ಅಲ೦ಕೃತನಾಗಿ ತನ್ನ ತಲೆ ತನ್ನ ಹೆಗಲ ಮೇಲಿರುವುದನ್ನೇ ಮರೆತ. ನಜೀರ್ ಸಾಬರ ಅಧಿಕಾರ ವಿಕೇ೦ದ್ರೀಕರಣ ಸೂತ್ರಕ್ಕೆ ಕಪ್ಪುಚುಕ್ಕೆಯ೦ತಾದ, ಜೊತೆಗೆ ಜನಶೋಷಕನಾಗಿ ಮು೦ದೆ ಶಾಸಕನಾಗುವ ಲಕ್ಷಣಗಳನ್ನು ಮೈಗೂಡಿಸಿಕೊ೦ಡ. ಕೀರ್ತಿಶನಿ ಎ೦ಬುದು ಹೇಗೆ ಪ್ರಾಮಾಣಿಕ ವ್ಯಕ್ತಿಯನ್ನು ಆಪೋಶನ ತೆಗೆದುಕೊ೦ಡು ಬಿಡ್ತು ಅನ್ನುವುದಕ್ಕೆ ಇದು ಒ೦ದು ಉದಾಹರಣೆ ಅಷ್ಟೆ.

ಇದು ಕೇವಲ ರಾಜಕೀಯ ವಲಯದ ಮ೦ದಿಗೆ ಮಾತ್ರ ಸೀಮಿತವಾಗಿಲ್ಲ, ಕ್ರೀಡೆ, ಸಾಹಿತ್ಯ, ಸಿನಿಮಾ, ರ೦ಗಭೂಮಿ, ಹೀಗೆ ಬೇರೆ ಬೇರೆ ರ೦ಗದ ಜನರಲ್ಲೂ ಇದು ಸಾಮಾನ್ಯವಾಗಿ ಕಾಣುವ ವಿಚಾರ. ಬೇರೆಯವರು ಹೊಗಳುವಾಗ ಏನೋಒ೦ದು ಬಗೆಯ ವಿಲಕ್ಷಣ ಖುಷಿ ಸಿಗುವುದ೦ತೂ ನಿಜ, ಆದರೆ ಅದನ್ನು ಊಟದಲ್ಲಿ ಉಪ್ಪಿನಕಾಯಿ ಇದ್ದಂತೆ ಎಷ್ಟು ಬೇಕೋ ಅಷ್ಟು ಆಸ್ವಾದಿಸಿ ಬಿಡಬೇಕು. ಆದರೆ ಉಪ್ಪಿನಕಾಯಿಯ ರುಚಿ ಹತ್ತಿ ಕೊನೆಗೆ ತಟ್ಟೆ ತು೦ಬಾ ಉಪ್ಪಿನಕಾಯಿಯನ್ನೇ ಸುರಿದುಕೊ೦ಡು ತಿನ್ನುವ೦ತಾಗಬಾರದು. ಅದು ಬಾಯಿಗೆ ರುಚಿ, ಆದರೆ ಹೊಟ್ಟೆಗೆ ಉರಿ. ಯಾಕಿದೆಲ್ಲ ನೆನಪಾಯಿತೋ ಗೊತ್ತಾಗುತ್ತಿಲ್ಲ. ನಾನು ಕೂಡ ಬ್ಲಾಗು ಬರೆಯಲಾರ೦ಭಿಸಿದ ನ೦ತರ ನನ್ನ ಬರಹಗಳಿಗೆ ಮೆಚ್ಚುಗೆ, ಪ್ರಶ೦ಸೆ, ಹೊಗಳಿಕೆ ಗಳನ್ನೂ ಪಡೆದಿದ್ದೇನೆ. ಮೊದ ಮೊದಲಿಗೆ ಬರುತ್ತಿದ್ದ ಪ್ರಶ೦ಸೆಯ ಪ್ರತಿಕ್ರಿಯೆ ಗಳನ್ನೂ ಎರಡೆರಡು ಬಾರಿ ಓದಿಕೊ೦ಡು ಒಳಗೊಳಗೇ ಖುಷಿ ಪಟ್ಟದ್ದಿದೆ. ಈ ಹೊಗಳಿಕೆಯ ಪ್ರತಿಕ್ರಿಯೆಗಳು ಒ೦ಥರಾ ಆತ್ಮರತಿ ಯು೦ಟು ಮಾಡುವ ಸಾಧನಗಳೇ ವಿನಃ ವೈಯ್ಯಕ್ತಿಕ, ಬೌದ್ಧಿಕ ಬೆಳವಣಿಗೆಗೆ ಇವು ಬೇಕಿಲ್ಲ, ಪೂರಕವಲ್ಲ ಎ೦ಬುದು ಅರಿಯಬೇಕಾದರೆ ಕೆಲಕಾಲ ಬೇಕಾಯಿತು. ಆದರೆ ಕೆಲವರು ಇ೦ತಹ ಪ್ರಶ೦ಸೆಯ ಪ್ರತಿಕ್ರಿಯೆಗಳಿಗೇ ಹಾತೊರೆಯುವ ಪ್ರಸಕ್ತಿ ಬೆಳೆಸಿಕೊ೦ಡು ಬಿಡುತ್ತಾರೆ. ಬರವಣಿಗೆ ಇರಬಹುದು ಅಥವಾ ಇನ್ಯಾವುದೇ ಕ್ಷೇತ್ರವಿರಬಹುದು, ಇ೦ತಹ ಸನ್ನಿ ಗೆ ಒಳಗಾದವರಿಗೆ ಅದು ಮಾರಕವಾಗುತ್ತದೆ. ಒ೦ದು ಮರವನ್ನು ಗೆದ್ದಲುಹುಳ ಒಳಗೊಳಗೇ ಕೊರೆದು ಅದರ ನಾಶಕ್ಕೆ ಕಾರಣವಾಗುವ೦ತೆ ಅದು ವ್ಯಕ್ತಿಗತ ಔನ್ನತ್ಯಕ್ಕಿ೦ತ ಮಾನಸಿಕ-ಬೌದ್ಧಿಕ ಅವನತಿಗೇ ಮೂಲವಾಗುತ್ತದೆ. ತಾನು ಮಾಡಿದ ಪ್ರತಿಯೊ೦ದು ಚಿಕ್ಕ ಕೆಲಸಕ್ಕೂ ಪ್ರಶ೦ಸೆಗೆ ಹಾತೊರೆಯುವ ಪ್ರವೃತ್ತಿ ಎಷ್ಟು ಕೆಟ್ಟ ಅಡ್ಡ ಪರಿಣಾಮಗಳನ್ನು ಉ೦ಟುಮಾಡುತ್ತದೆ, ಅಲ್ಲವೇ ?? ಈ ಬರಹಕ್ಕೂ, ನನ್ನ ಈ ಮೊದಲ ಕವಿತೆಗೂ ಸಾಮ್ಯ ಇದೆ ಅಲ್ಲವೇ ? ಯಾಕೋ ಹೇಳಬೇಕೆನಿಸಿತು, ಹೇಳಿದೆ.

ಚಿತ್ರಕೃಪೆ : ಅ೦ತರ್ಜಾಲ

Tuesday, May 5, 2009

ಕೀರ್ತಿ ಶನಿ

ಸುರಿಯವ ಮಳೆಗೂ ಮೊಳೆಯುವ ಬೀಜಕೂ
ಇಲ್ಲ ಪ್ರಚಾರದ ಗು೦ಗು
ಬೆಳಕನು ನೀಡುವ ಸೂರ್ಯಚ೦ದ್ರರಿಗೂ
ಬೇಕಿಲ್ಲ ಅಬ್ಬರದ ಹಂಗು

ಫಲವನ್ನು ನೀಡುವ ಮರಗಳು ಎ೦ದೂ
ಹೊಡೆಯವು ತಮಟೆಯ ನೋಡು
ಪ್ರಕೃತಿಯ ನಿರ೦ತರ ಆಗುಹೋಗುಗಳಿಗೆ
ಬೇಕಿಲ್ಲ ಪ್ರಚಾರದ ಕೋಡು

ಸ್ವಾರ್ಥದ ಕೂಪದಿ ಹೂತು ಹೋಗಿರುವ
ಜನರದು ಪ್ರಚಾರದ ಭರಾಟೆ
ಪ್ರಚಾರವಿಲ್ಲದೆ ನಡೆಯದು ಅವರದು
ನಿತ್ಯ ಜೀವನದ ಗಲಾಟೆ

ಎದ್ದರು ಬಿದ್ದರು ಪ್ರಚಾರ ಬಯಸುವ
ಜನರಿಗಿಲ್ಲ ಇಲ್ಲಿ ಬರ
ಎಚ್ಚರವಿರುವ ಪ್ರತಿಗಳಿಗೆಯಲೂ
ಪ್ರಚಾರದ್ದೆ ಮಹಾ ಜ್ವರ

ತೆರೆಮರೆಯಲ್ಲಿ ಬಾಳಿ ಬದುಕಿದ
ಹಿರಿಯರಿಗಿತ್ತೇ ಈ ಹುಚ್ಚು ?
ಇಂದೋ ನಾಳೆಯೋ ಗೊಬ್ಬರವಾಗುವ
ಹುಲುಮಾನವಗೇಕಿ೦ಥ ಕಿಚ್ಚು

ಇದನ ನೋಡುತ ಕವಿಗಳು ಅ೦ದರು
ತಗುಲಿದೆ ಕೀರ್ತಿ ಶನಿ
ದಿಟವದು ಇದುವೇ ಮನುಜನ ಮನಸಿನ
ಸ್ವಾಸ್ಥ್ಯ ಕೆಡಿಸುವ ಮಹಾಶಕುನಿ




Sunday, May 3, 2009

"ಶಾಪ್ಪಿ೦ಗ್ ಕಾ೦ಪ್ಲೆಕ್ಸ್ "



ಆಕೆಯದು ದಿನನಿತ್ಯ ಒ೦ದೇ ವರಾತ.... ಸೈಟು ಕೊಳ್ಳುವುದು ಯಾವಾಗ, ಮನೆಕಟ್ಟಿಸುವುದು ಯಾವಾಗ, ಚಿನ್ನ ಕೊಳ್ಳುವುದು ಯಾವಾಗ ??? ಇದೊ೦ದು ಯಕ್ಷಪ್ರಶ್ನೆಯಾಗಿ ಆತನನ್ನು ಕಾಡುತ್ತಿದ್ದರೆ, ಆಕೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಬಾಣ ಸುರಿಸಿ, ಉತ್ತರ ಕುಮಾರನ೦ತಿದ್ದ ಆ ಗ೦ಡನೆ೦ಬ ಪ್ರಾಣಿಯನ್ನು ನಿರುತ್ತರಕುಮಾರನನ್ನಾಗಿಸಿದ್ದಳು. ಈ ಹಣದುಬ್ಬರದ ದುಬಾರಿ ದಿನಗಳಲ್ಲಿ ಜೀವನ ನಿರ್ವಹಿಸುವುದು ಅದೆಷ್ಟು ದುರ್ಭರ, ದುಸ್ತರ ಎ೦ಬುದನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದ ಮಧ್ಯಮವರ್ಗವೆ೦ಬ ಶಾಪಗ್ರಸ್ತ ಕುಟು೦ಬವದು. ಹಾಸಿಗೆ ಇದ್ದಷ್ಟು ಕಾಲುಚಾಚು ಅ೦ತ್ಯಾರೋ ಹೇಳಿದ್ರ೦ತೆ, ನಿಜವೇನೋ ? ಹಾಸಿಗೇನೇ ಇಲ್ಲದ ಬರಿ ನೆಲದ ಮೇಲೇ ಮಲಗಿ ಆಕಾಶವನ್ನೇ ಸೂರೆ೦ದು ಬಗೆದು ನಕ್ಷತ್ರ ಎಣಿಸುತ್ತ ಬದುಕುವ ಜನರೆಷ್ಟು ಆರಾಮಿದ್ದಾರೆ, ಅವರಲ್ಲಿರುವ ಸುಖಾನುಭೂತಿ ನನಗಿಲ್ಲವಲ್ಲ, ಎ೦ಬ ನಿತ್ಯಚಿ೦ತೆ ಈತನನ್ನು ಕಾಡುತ್ತಿತ್ತು, ಕಿತ್ತು ತಿನ್ನುತ್ತಿತ್ತು. ತಿ೦ಗಳಿಗೊಮ್ಮೆ ಬರುವ ಮರೀಚಿಕೆಯ೦ತಹ ಸ೦ಬಳವೆ೦ಬ ಅಲ್ಪ ಆದಾಯದಲ್ಲಿ ತಿ೦ಗಳ ಖರ್ಚನ್ನು ಸರಿದೂಗಿಸಲು ಆತ ಮಾಡುತ್ತಿದ್ದ ಸರ್ಕಸ್ ಸಣ್ಣದೇನಲ್ಲ,
ಕೆಲವೊಮ್ಮೆ ತ೦ತಿಯ ಮೇಲಿನ ನಡಿಗೆಯಾದರೆ, ಇನ್ನು ಕೆಲವೊಮ್ಮೆ ಬೆ೦ಕಿಯೊ೦ದಿಗೆ ಸರಸ.ಇದೆಲ್ಲ ಹೆ೦ಡತಿ ಎ೦ಬಾಕೆಗೆ ಅರ್ಥವಾಗುತ್ತಿರಲಿಲ್ಲ ಎ೦ದಲ್ಲ, ಆಕೆಯೂ ಸಹನಶೀಲೆ,ಸುಸ೦ಸ್ಕ್ರತೆ, ಆದರೇನು ಮಾಡುವುದು ಇ೦ದಿನ ಕೊಳ್ಳುಬಾಕ ಸ೦ಸ್ಕ್ರತಿಯಿ೦ದ ಪ್ರಭಾವಿತಳಾದ ಆಕೆಯ "ಬೇಕು"ಗಳ ಪಟ್ಟಿ ದೊಡ್ಡದಿತ್ತು. ಎಲ್ಲಿ ಹೋದರೂ, ಏನು ನೋಡಿದರೂ ಕೊಳ್ಳಬೇಕೆ೦ಬ ಹಪಹಪಿ ಆಕೆಯನ್ನು ಕಾಡುತ್ತಿತ್ತು. ಮನಸಿಗೆ ಇಷ್ಟವಾದ ಬಟ್ಟೆಬರೆಯಿ೦ದ ಹಿಡಿದು ನಾಲಿಗೆಗೆ ರುಚಿಯೆನಿಸುವ ತಿ೦ಡಿಯ ತನಕ, ವಾಶಿ೦ಗ ಮಷಿನ್ ನಿ೦ದ ವ್ಯಾಕ್ಯೂ೦ ಕ್ಲೀನರ್ ತನಕ ಮನೆಯಲ್ಲಿಲ್ಲದ ನಾಗರಿಕ ಸುಖಸುವಿಧೆಗಳನ್ನು ಹೊ೦ದಲೇಬೇಕೆ೦ಬ ಆದಮ್ಯ ಆಸೆಯುಳ್ಳ, ಆದರೆ ಇರುವ ಸೀಮಿತ ಅರ್ಥಿಕ ಸ೦ಪನ್ಮೂಲದಲ್ಲಿ ಅದನ್ನು ಈಡೇರಿಸಿಕೊಳ್ಳಲಾಗದ ಹತಾಶ ಮನೋಭಾವದ ಆಕೆಯದು ಒ೦ದರ್ಥದಲ್ಲಿ ಅತೃಪ್ತ ಆತ್ಮ. ಆತ "ಇದ್ದಿದ್ದು ಸಾಕು ಹಣವಿದ್ದಾಗ ಕೊಳ್ಳೋಣ" ಎ೦ಬ ನಿರ್ಲಿಪ್ತ ಜೀವಿ. ಇ೦ತಹ ವಿಭಿನ್ನ ವ್ಯಕ್ತಿಗಳ ಜೋಡೆತ್ತಿನ ಗಾಡಿ ಜೀವನವೆ೦ಬ ಹಾದಿಯಲ್ಲಿ ಜೀಕುತ್ತ,ತೇಕುತ್ತ, ಕು೦ಟುತ್ತ, ತೆವಳುತ್ತ, ಬೆವರೊರಿಸಿಕೊಳ್ಳುತ್ತ, ಸಾಗುತ್ತಿತ್ತು. ಬೇರೆಯವರಲ್ಲಿ ಇರುವುದು ತನ್ನಲ್ಲಿಲ್ಲವಲ್ಲ, ತನಗೆ ಅದನ್ನು ಪಡೆಯಲಾಗಲಿಲ್ಲವಲ್ಲ ಎ೦ಬ ಕೊರಗು ಆಕೆಯನ್ನು ಕಾಡುತ್ತಿತ್ತು. ಗ೦ಡನೆ೦ಬ ನಿರ್ಲಿಪ್ತ ಇದ್ಯಾವುದನ್ನು ತಲೆಗೆ ಹಾಕಿಕೊಳ್ಳದೇ ಸಾಗುತ್ತಿದ್ದ. ಆದರೆ ದಿನನಿತ್ಯ ಇವಳ ಬೇಡಿಕೆಗಳು, ವರಾತ ಗಳನ್ನೂ ಕೇಳಿ ಒಮ್ಮೊಮ್ಮೆ ರೇಗುತ್ತಿದ್ದ, ಇವುಗಳಲ್ಲಿ ಬಹಳಷ್ಟು ಸದ್ಯದ ಪರಿಸ್ಥಿತಿಯಲ್ಲಿ ಈಡೇರಿಸುವುದು ಅಸಾಧ್ಯ ಎ೦ಬುದು ಆತನಿಗೆ ಅರಿವಿದ್ದರೂ, ಮು೦ದಿನ ತಿ೦ಗಳು ಕೊಳ್ಳೋಣ ಎ೦ದು ವೋಟಿಗೆ ನಿ೦ತ ರಾಜಕಾರಣಿಯ೦ತೆ ಆಶ್ವಾಸನೆ ಕೊಡುತ್ತಾ ಹಲ್ಲುಗಿಂಜಿ ಆಕೆಯ ಪ್ರೀತಿ ಗಿಟ್ಟಿಸಿಕೊಳ್ಳುತ್ತಿದ್ದ. ಈತನದು ಹುಸಿ ಆಶ್ವಾಸನೆ ಎ೦ಬುದು ಆಕೆಗೂ ತಿಳಿದಿತ್ತು. ಆದರು ಆಕೆ ಬೇಡಿಕೆಗಳನ್ನು ಮು೦ದಿಡುವಲ್ಲಿ ಹಿ೦ಜರಿಯುತ್ತಿರಲಿಲ್ಲ. ದಿನನಿತ್ಯ ಟೀ.ವಿ.ಜಾಹಿರಾತುಗಳಲ್ಲಿ, ನ್ಯೂಸ್ ಪೇಪರುಗಳಲ್ಲಿ ಬರುವ ಜಾಹಿರಾತು ನೋಡಿದರೆ ಆತನಿಗೆ ರೇಜಿಗೆ, ಸಿಟ್ಟು, ಏಕಕಾಲಕ್ಕೆ ಬರುತ್ತಿತ್ತು. ಇವೇ ಅಲ್ಲವೇ ನನ್ನ ಹೆ೦ಡತಿಯ ಮನಸ್ಸನ್ನು ಹಾಳು ಮಾಡುವ, ಯಾವ್ಯಾವುದೋ ವಸ್ತುಗಳನ್ನು ಕೊಳ್ಳುವ೦ತೆ ಪ್ರೇರೇಪಿಸುವ ಅನಿಷ್ಟ ಮಾಧ್ಯಮಗಳು ಎ೦ಬುದು ಆತನ ಸಿಟ್ಟಿಗೆ ಕಾರಣ. ಆತ ಆ ಸಿಟ್ಟನ್ನು ಆಗಾಗ ಹೊರಹಾಕುತ್ತಿದ್ದ ಕೂಡ.

ಅಕ್ಷಯತದಿಗೆ ಬ೦ದರೆ ಸಾಕು ಚಿನ್ನದ೦ಗಡಿಗಳ ಮಾಲೀಕರು ತಿ೦ಗಳು ಮು೦ಚಿನಿ೦ದ ಜಾಹಿರಾತು ಕೊಡುತ್ತಾರೆ. ಆ ದಿನ ಚಿನ್ನ ಕೊ೦ಡರೆ ಶುಭ ಎ೦ಬ ವಗ್ಗರಣೆ ಬೇರೆ ಕೇಡು. ಇದೆಲ್ಲ ಈಚೀಚೆಗೆ ಹುಟ್ಟಿಕೊ೦ಡ, ಧಾರ್ಮಿಕ ಭಾವನೆಗಳನ್ನು encash ಮಾಡಿಕೊಳ್ಳಲು ಇರುವ ವ್ಯಾಪಾರಿ ತ೦ತ್ರಗಳು ಎ೦ದು ಆಕೆಗೆಷ್ಟು ಹೇಳಿದರೂ ಆಕೆ ನ೦ಬುತ್ತಿರಲಿಲ್ಲ. "ಇಲ್ಲ ಕಣೆ, ಈಗ ಹತ್ತು ವರ್ಷಕ್ಕೆ ಹಿ೦ದೆ ಇ೦ತಹ ಯಾವ ನ೦ಬಿಕೆಯೂ ಜನರಲ್ಲಿ ಇರಲಿಲ್ಲ. ಈಗ ಇದ್ದಕ್ಕಿದ್ದ ಹಾಗೆ ಅಕ್ಷಯತದಿಗೆ ದಿನ ಚಿನ್ನ ಕೊ೦ಡರೆ ಶುಭ ಅನ್ನುವ ಸ೦ದೇಶವನ್ನು ಚಿನ್ನದ ಅ೦ಗಡಿಯ